ಸಮಗ್ರ ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು.
೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ ಬಸವಣ್ಣನವರ-ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿನ ಜನರ ಮನೋಭಿವ್ಯಕ್ತಿಗೆ ಸಂಗಾತಿಯಾಯಿತು.ವಚನ ಎಂದರೆ 'ಪ್ರಮಾಣ', 'ಕೊಟ್ಟ ಮಾತು' ಎಂದರ್ಥ.
೧೧ನೇ ಶತಮಾನದಲ್ಲಿ ಉದಯಿಸಿದ ಧರ್ಮ ಪ್ರೇರಿತ ಸಾಹಿತ್ಯವಾದ ವಚನವು, ಕನ್ನಡದ ಪ್ರಾಚೀನ ಸಾಹಿತ್ಯದಡಿಯಲ್ಲಿ ವರ್ಗಾಯಿಸಲ್ಪಟ್ಟಿದೆ. ಸ್ವಂತಿಕೆಯಿಂದ ಮೆರೆವ ವಚನಗಳು ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲಿ ಆತ್ಮವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ ವಿಶ್ವಸಾಹಿತ್ಯದಲ್ಲೂ ಒಂದು ಅವಿಭಾಜ್ಯ ಅಂಗವಾಗಿ ಉಳಿದಿದೆ. ವಚನ ಸಾಹಿತ್ಯವನ್ನು, ವಚನಗುರು ದೇವರ ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ ನವರ ಆದಿಯಾಗಿ ಗುರು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ನೀಡಿದರು.
ವಚನಗುರು ಮಾದಾರ ಚನ್ನಯ್ಯ ರವರು ೧೦ ರಿಂದ ೧೧ನೇ ಶತಮಾನದ ಬಸವ ಪೂರ್ವ ಯುಗ ದಲ್ಲಿಯೇ ಇದ್ದರು ಎಂದು ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಬಿಳಿಗಾವಲು ಗ್ರಾಮದಲ್ಲಿ ಜನಿಸಿದ್ದರು ಎನ್ನಲಾಗಿದೆ. ಇವರು ರಚಿಸಿದ ಹಲವು ವಚನಗಳಲ್ಲಿ ೧೦ ವಚನಗಳು ಮಾತ್ರ ಲಭ್ಯವಾಗಿದೆ. ಮಾದಾರ ಚನ್ನಯ್ಯ ನವರು ವಚನಕಾರರಲ್ಲಿಯೇ ಮೊದಲಿಗರು ಎಂದು ತಿಳಿಯಲು ಜೇಡರ ದಾಸಿಮಯ್ಯ ತಮ್ಮ ವಚನಗಳಲ್ಲಿ ಸ್ಮರಿಸಿರುವುದನ್ನು ಕಾಣಬಹುದಾಗಿದೆ.
ಸಮಾಜದ ಎಲ್ಲಾ ಜಾತಿಯವರೂ ವಚನಗಳನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನವು ಒಂದು ಮುಖ್ಯ ಚಳುವಳಿಯಾಗಿತ್ತು ಮುಖವಾಣಿಯಾಗಿತ್ತೆಂದರೆ ಅದರ ಸಾಮಾಜಿಕ ವ್ಯಾಪಕತೆ ಅಪಾರವಾದುದೆಂಬುದು ಅರಿವಿಗೆ ಬಾರದೆ ಇರದು. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿ ದೇಸಿಯ ಸೊಗಡಿನಿಂದ ಸೊಬಗಿನಿಂದ ಕೂಡಿವೆ. ಹಲವಾರು ಕವಿಗಳು, ಮಠಾಧೀಶರು ಲಿಂಗಾಯತ ಸಿದ್ಧಾಂತವನ್ನು ಅಳವಡಿಸಿ ಸಾಹಿತ್ಯ ರಚಿಸಿದರು , ಇಡೀ ಲಿಂಗಾಯತ ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ಅದು ವಚನ ಸಾಹಿತ್ಯ. ಅದು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನು ನಂಬಿದ ಬಹಳ ದೊಡ್ಡ ಮಾನವೀಯ ಮೌಲ್ಯ. ಕಾಯಕ ಮತ್ತು ದಾಸೋಹಗಳ ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಈ ಚಳವಳಿ ಭಾರತೀಯ ಸಂಸ್ಕೃತಿಯಲ್ಲೇ ಅತಿ ಪ್ರಮುಖವಾದುದು.
ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದ ಅಂಕಿತನಾಮಗಳನ್ನು ಬಳಸಿದ್ದಾರೆ. ದೇವರ ದಾಸಿಮಯ್ಯ 'ರಾಮನಾಥ' ಎಂದು ಬಳಸಿದರೆ, ಅಕ್ಕಮಹಾದೇವಿಯು 'ಚೆನ್ನಮಲ್ಲಿಕಾರ್ಜುನ' ಹಾಗೂ ಬಸವಣ್ಣನವರು 'ಕೂಡಲ ಸಂಗಮದೇವ' ಮತ್ತು ಎಂದು ಬಳಸಿದ್ದಾರೆ. ಮತ್ತಿತರ ಸುಪ್ರಸಿದ್ಧ ವಚನಕಾರರೆಂದರೆ:
ಅಲ್ಲಮ ಪ್ರಭುಗಳ ವಚನದ ಒಂದು ಸಣ್ಣ ತುಣುಕು ಹೀಗಿದೆ:
ಹೊನ್ನು ಮಾಯೆ ಎಂಬರು
ಹೆಣ್ಣು ಮಾಯೆ ಎಂಬರು
ಮಣ್ಣು ಮಾಯೆ ಎಂಬರು
ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣ ಗುಹೇಶ್ವರ ||
ಸಂಕೀರ್ಣ ವ್ಯಕ್ತಿತ್ವವನ್ನು ಪಡೆದು ಬಾಳಿದ ಮಹಾಯೋಗಿಯಾದ ಪ್ರಭುಗಳ ಅನುಭವದ ತೀವ್ರತೆಯು ತಮ್ಮ ಈ ಸಣ್ಣ ವಚನ ಸಾರಿ ಹೇಳುತ್ತದೆ.
ಸಾವನ್ನಕ್ಕ ಸರಸ ಮಾಡಿದರೆ
ಇನ್ನುಕಾಣದುವ ದಿನವಾವುದು?
ಬಾಳುವನ್ನಕ್ಕರ ಭಜಿಸುತ್ತಿದ್ದರೆ
ತಾನಹ ದಿನವಾವುದು?
ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದರೆ
ನಿಜವನೈದುವ್ ದಿನವಾವುದು?
ಕಾರ್ಯಕ್ಕೆ ಬಂದು ಕಾರ್ಯ
ಕೈಸಾರಿದ ಬಳಿಕ ಇನ್ನು
ಮರ್ತ್ಯಲೋಕದ ಹಂಗೇಕೆ?
This article uses material from the Wikipedia ಕನ್ನಡ article ವಚನ ಸಾಹಿತ್ಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.