ಚಂದ್ರಶೇಖರ ವೆಂಕಟರಾಮನ್: ಭಾರತದ ಭೌತಶಾಸ್ತ್ರಜ್ಞ

ಸರ್ ಸಿ.ವಿ.ರಾಮನ್ (Sir C.V.Raman) ಎಂದು ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ, ಚಂದ್ರಶೇಖರ ವೆಂಕಟರಾಮನ್ ರವರು ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ.

ಅಷ್ಟೇ ಏಕೆ, ಏಷ್ಯದಲ್ಲೇ ಮೊತ್ತಮೊದಲ ಬಾರಿಗೆ ನೊಬೆಲ್ ಪಾರಿತೋಷಿಕ ಪಡೆದ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.

ಸರ್ ಚಂದ್ರಶೇಖರ ವೆಂಕಟರಾಮನ್
ಚಂದ್ರಶೇಖರ ವೆಂಕಟರಾಮನ್: ಬಾಲ್ಯ, ವಿದ್ಯಾಭ್ಯಾಸ, ವೃತ್ತಿ, ಮದುವೆ, ರಾಮನ್ ಪರಿಣಾಮ
ಸ್ಥಳೀಯ ಹೆಸರು'ರಾಮನ್
ಜನನ೭ ನವೆಂಬರ್ ೧೮೮೮
ತಿರುವನ್ಕೊಯಿಲ್, ಟ್ರಿಚಿನೋಪೋಲಿ, ಮಡ್ರಾಸ್ ಪ್ರಾವಿನ್ಸ್, ಬ್ರಿಟಿಷ್ ಭಾರತ
ಮರಣ೨೧ ನವೆಂಬರ್ ೧೯೭೦
ಬೆಂಗಳೂರು, ಕರ್ನಾಟಕ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಭೌತಶಾಸ್ತ್ರ
ಸಂಸ್ಥೆಗಳುಭಾರತೀಯ ಫೈನಾನ್ಸ್ ವಿಭಾಗ
ಕಲ್ಕತ್ತಾ ವಿಶ್ವವಿದ್ಯಾಲಯ
ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
ಸೆಂಟ್ರಲ್ ಕಾಲೇಜು , ಬೆಂಗಳೂರು ವಿಶ್ವವಿದ್ಯಾಲಯ
ರಮನ್ ರಿಸರ್ಚ್ ಇನ್ಸ್ಟಿಟ್ಯೂಟ್
ಅಭ್ಯಸಿಸಿದ ವಿದ್ಯಾಪೀಠಮದ್ರಾಸ್ ವಿಶ್ವವಿದ್ಯಾಲಯ
ಡಾಕ್ಟರೇಟ್ ವಿದ್ಯಾರ್ಥಿಗಳುಜಿ.ಎನ್.ರಾಮಚಂದ್ರನ್
ವಿಕ್ರಂ ಅಂಬಾಲಾಲ್ ಸಾರಾಭಾಯ್
ಪ್ರಸಿದ್ಧಿಗೆ ಕಾರಣರಾಮನ್ ಪರಿಣಾಮ
ಗಮನಾರ್ಹ ಪ್ರಶಸ್ತಿಗಳುನೈಟ್ ಬ್ಯಾಚುಲರ್ (೧೯೨೯)
ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (೧೯೩೦)
ಭಾರತ ರತ್ನ (೧೯೫೪)
ಲೆನಿನ್ ಶಾಂತಿ ಪ್ರಶಸ್ತಿ(೧೯೫೭)
ಸಂಗಾತಿಲೋಕಸುಂದರಿ ಅಮ್ಮಾಳ್ (೧೯೦೭–೧೯೭೦)
ಮಕ್ಕಳುಚಂದ್ರಶೇಖರ್ ಮತ್ತು ರಾಧಾಕೃಷ್ಣನ್,
ಹಸ್ತಾಕ್ಷರ
ಚಿತ್ರ:File:Chandrashekhara Venkata Raman, signature.svg
ಜಾಲತಾಣ
www.nobelprize.org/nobel_prizes/physics/laureates/1930/raman-bio.html/

ಬಾಲ್ಯ, ವಿದ್ಯಾಭ್ಯಾಸ, ವೃತ್ತಿ

ಚಂದ್ರಶೇಖರ ವೆಂಕಟಾರಾಮನ್, ನವೆಂಬರ್ ೭, ೧೮೮೮ ರಲ್ಲಿ ತಮಿಳುನಾಡುನ ತಿರುಚಿನಾಪಳ್ಳಿ ಜಿಲ್ಲೆಯ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು. ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯವರ ಹೆಸರು, ಪಾರ್ವತಿ ಅಮ್ಮಾಳ್. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಇವರ ಎಳೆತನದ ವಿದ್ಯಾಭ್ಯಾಸ ವಿಶಾಖಪಟ್ಟಣದಲ್ಲಿ ಆಯಿತು. ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು.

  • ೧೯೦೦: ತಮ್ಮ ೧೨ ನೆ ವಯಸ್ಸಿನಲ್ಲೇ ಮೆಟ್ರಿಕ್ಯುಲೆಶನ್ ಮುಗಿಸಿದರು.
  • ೧೯೦೪: ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಪದವಿ
  • ೧೯೦೭: ಭೌತವಿಜ್ಞಾನದಲ್ಲಿ ಎಂ. ಎ. ಪದವಿ
  • ೧೯೦೭ರಲ್ಲಿ ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಲ್ಕತ್ತೆಯಲ್ಲಿ, ಭಾರತ ಸರ್ಕಾರದ ವಿತ್ತ ವಿಭಾಗದಲ್ಲಿ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆಗಿ ವೃತ್ತಿ-ಜೀವನ ಆರಂಭಿಸಿದರು. ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು. ಇವರನ್ನು ಸರ್ಕಾರಿ ಕೆಲಸದ ನಿಮಿತ್ತ ಬರ್ಮದ ರಂಗೂನಿಗೆ ಕಳುಹಿಸಿಕೊಡಲಾಯಿತು. ನಾಗಪುರದಲ್ಲೂ ಕೆಲಕಾಲ ಸೇವೆ ಸಲ್ಲಿಸಿದರು. ಆದರೆ ಇವರ ಒಲವೆಲ್ಲ ವಿಜ್ಞಾನದ ಕಡೆಗೇ ಇದ್ದುದರಿಂದ ಕಲ್ಕತ್ತದಲ್ಲಿನ ದಿ ಇಂಡಿಯನ್ ಅಸೋಸಿಯೇಷನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್ ಎಂಬ ಖಾಸಗಿ ವಿಜ್ಞಾನ ಸಂಶೋಧನೆ ಮಂದಿರದಲ್ಲಿ ಸಂಶೋಧನೆಯಲ್ಲಿ ತೊಡಗಿದರು. ಇಲ್ಲಿದ್ದಾಗ ಮೇಲ್ಮೈಕರ್ಷಣ (ಸರ್ಫೇಸ್ ಟೆನ್ಷನ್) ಮತ್ತು ಬೆಳಕಿನ ಸಂಚರಣೆಯನ್ನು (ಪ್ರಾಪಗೇಷನ್ ಆಫ್ ಲೈಟ್) ಕುರಿತಂತೆ ಕೆಲಸ ಮಾಡಿದರು. ಉದ್ಯೋಗ ನಿಮಿತ್ತ ಕಲ್ಕತ್ತದಿಂದ ಹೊರಗಿನ ಊರುಗಳಿಗೆ ಹೋಗಿದ್ದ ರಾಮನ್ ಅವರು 1911ರಲ್ಲಿ ಪುನಃ ಕಲ್ಕತ್ತೆಗೆ ಮರಳಿದರು.
  • ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿ ಅಶುತೋಷ ಮುಖರ್ಜಿಯವರ ಆಮಂತ್ರಣದ ಮೇರೆಗೆ 1917ರಲ್ಲಿ ಇವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಆ ವಿಶ್ವವಿದ್ಯಾಲಯದ ಪಲಿತ್ ಭೌತವಿಜ್ಞಾನ ಪೀಠದ ಪ್ರಾಧ್ಯಾಪಕರಾಗಿ ಸೇರಿದರು. ಇದಕ್ಕೆ ಇವರ ಧರ್ಮಪತ್ನಿ ಲೋಕಸುಂದರಿ ರಾಮನ್ ಅವರ ಪ್ರೋತ್ಸಾಹವೂ ದೊರಕಿತ್ತು. ಸದಾ ಕುತೂಹಲಿ, ಪ್ರಯೋಗಪಟು ಮತ್ತು ಚಿಂತನಶೀಲರಾಗಿದ್ದ ರಾಮನ್ 1917ರಿಂದ ಮುಂದೆ ಮೂಲಭೂತ ಸಂಶೋಧನೆಗಳನ್ನು ಮಾಡಲು ಉದ್ಯುಕ್ತರಾದರು. ಬೆಳಕಿನ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುವುದು ಇವರ ಆಗಿನ ಆಸಕ್ತ ಕ್ಷೇತ್ರ.
  • ೧೯೨೧ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯ ಇವರಿಗೆ ಡಾಕ್ಟೊರೇಟ್ ಪದವಿ ನೀಡಿ ಗೌರವಿಸಿತು.
  • ೧೯೨೪ರಲ್ಲಿ 'ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿ'ಗೆ ರಾಮನ್ ಆಯ್ಕೆಯಾದರು
  • ಮಾರ್ಚ್ ೧೬ ೧೯೨೮ರಲ್ಲಿ ತಮ್ಮ ಶೋಧನೆ, 'ರಾಮನ್ ಎಫೆಕ್ಟ್'ನ್ನು 'ಬೆಂಗಳೂರಿ'ನಲ್ಲಿ ಬಹಿರಂಗ ಪಡಿಸಿದ ರಾಮನ್, ೧೯೩೦ರಲ್ಲಿ ಅದಕ್ಕಾಗಿ 'ನೋಬೆಲ್ ಪ್ರಶಸ್ತಿ'ಗಳಿಸಿದರು.

ಮದುವೆ

ಡಾ. ರಾಮನ್, ೬, ಮೇ, ೧೯೦೭ ರಲ್ಲಿ ಲೋಕಸುಂದರಿ ಅಮ್ಮಾಳ್ ಎಂಬ ಹುಡುಗಿಯೊಂದಿಗೆ ವಿವಾಹವಾದರು (೧೮೯೨–೧೯೮೦). 'ರಾಮನ್', 'ಲೋಕಸುಂದರಿ ಅಮ್ಮಾಳ್' ದಂಪತಿಗಳಿಗೆ ಚಂದ್ರಶೇಖರ್, ಮತ್ತು ರಾಧಾಕೃಷ್ಣನ್, ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.

ರಾಮನ್ ಪರಿಣಾಮ

ಈ ತತ್ತ್ವವು ವಿಜ್ಞಾನಕ್ಕೆ ಸರ್ ಸಿ.ವಿ. ರಾಮನ್ ರ ಒಂದು ದೊಡ್ಡ ಕೊಡುಗೆಯಾಗಿದೆ. ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬ ಅಲೆದಾಡುತ್ತಿದ್ದರು. ಆಕಾಶದ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತು. ಹಾಗೇ ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪುಬೆಳಕು ದಿಗಂತದ ಸಮೀಪ ಸೂರ್ಯ ಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು, ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ” ಎಂದು ಕರೆಯಲಾಗುತ್ತದೆ. ಇದು ಅನ್ವಯಿಕ ಉಪಯುಕ್ತತೆಯುಳ್ಳ ತತ್ವ.

ವಿವರಣೆ: ಯಾವುದೇ ಒಂದು ಬಣ್ಣದ ಉದಾಹರಣೆಗೆ ಕೆಂಪು, ನೀಲಿ, ಹಳದಿ ಇತ್ಯಾದಿ ಬೆಳಕಿನ ಕಿರಣದಂಡವನ್ನು ಅಶ್ರಕದ ಮೂಲಕ ಹಾಯಿಸಿ ಬಿಳಿತೆರೆಯ ಮೇಲೆ ಬೀಳಿಸಿದರೆ ಅದರ ರೋಹಿತ ದೊರೆಯುವುದು. ಇದರಲ್ಲಿ ಕೆಲವು ಉಜ್ವಲ ರೇಖೆಗಳು ಎದ್ದುಕಾಣುವುವು. ಇವೆಲ್ಲವೂ ಮೂಲ ಬೆಳಕಿನ ಬಣ್ಣದವೇ ಆಗಿ ತೋರಿದರೂ ಛಾಯೆಗಳಲ್ಲಿ ಸಂಯುಕ್ತವಾಗಿರುತ್ತದೆ ಮತ್ತು ಅಶ್ರಕ ಅದನ್ನು ವಿಭಜಿಸಿದೆ ಎಂದು ತಿಳಿಯುವುದು. ಆ ಒಂದೊಂದು ಘಟಕದ (ಅಂದರೆ ಛಾಯೆಯ) ಅಲೆಯ ಉದ್ದ ಬೇರೆ ಬೇರೆ ಇರುವುದರಿಂದ ಅದು ರೋಹಿತದಲ್ಲಿ ತನಗೇ ವಿಶಿಷ್ಟವಾದ ಸ್ಥಾನವನ್ನು ಪಡೆಯುತ್ತದೆ. ಈಗ ಅದೇ ಬೆಳಕನ್ನು ಮೊದಲು ಪಾರದರ್ಶಕ ಪದಾರ್ಥದ ಮೂಲಕವೂ ಮತ್ತೆ ಅಶ್ರಕದ ಮೂಲಕವೂ ಹರಿಸಿ ಅದರ ರೋಹಿತವನ್ನು ಪಡೆದರೆ ಇದರಲ್ಲಿ ಮೊದಲಿದ್ದ ಗೆರೆಗಳ ಜೊತೆಗೆ ಕೆಲವು ಹೊಸ ಗೆರೆಗಳು ಕಂಡುಬರುವುವು. ಆದ್ದರಿಂದ ಮೂಲ ಬೆಳಕಿನಲ್ಲಿ ಇದ್ದ ವಿವಿಧ ಅಲೆಯುದ್ದದ ರಶ್ಮಿಗಳ ಜೊತೆಗೆ ಹೊಸ ಅಲೆಯುದ್ದವೂ ಸೇರಿಕೊಂಡಿವೆ ಎಂದು ತೀರ್ಮಾನಿಸಬೇಕಾಗುವುದು. ಬೆಳಕಿನ ಹಾದಿಯಲ್ಲಿ ಪಾರದರ್ಶಕ ಪದಾರ್ಥ ಅಡ್ಡಬರುವುದರಿಂದ ಈ ಪರಿಣಾಮ ಕಂಡುಬರುತ್ತದೆ. ಇದೇ ರಾಮನ್ ಪರಿಣಾಮ. ಇದರ ಅಧ್ಯಯನದಿಂದ ಪಾರದರ್ಶಕ ಪದಾರ್ಥದ ಅಣುರಚನೆಯ ಬಗ್ಗೆ ಮಾಹಿತಿ ಪಡೆಯಬಹುದು. ಭೌತವಿಜ್ಞಾನ ಸಂಶೋಧನೆಗಳಲ್ಲಿ ರಾಮನ್ ಪರಿಣಾಮಕ್ಕೆ ಮಹತ್ತ್ವದ ಸ್ಥಾನವಿದೆ. ಇದರ ಆವಿಷ್ಕಾರ ಕಲ್ಕತ್ತದಲ್ಲಾದರೂ ರಾಮನ್ ಇದನ್ನು ಪ್ರಕಟಿಸಿದ್ದು ಬೆಂಗಳೂರಿನಲ್ಲಿ (28-2-1928).

೧೯೩೦ರ ನಂತರ

ಚಂದ್ರಶೇಖರ ವೆಂಕಟರಾಮನ್: ಬಾಲ್ಯ, ವಿದ್ಯಾಭ್ಯಾಸ, ವೃತ್ತಿ, ಮದುವೆ, ರಾಮನ್ ಪರಿಣಾಮ 
ರಾಮನ್ ಪುತ್ಥಳಿ (ಬಿರ್ಲಾ ಇಂಡಸ್ಟ್ರಿಯಲ್ & ಟೆಚೊಲೊಜಿಕಲ್ ಮ್ಯೂಸಿಯಂ)

೧೯೩೩ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ರಾಮನ್ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡರು. ಮರುವರ್ಷ ಇಂಡಿಯನ್ ಅಕೆಡಮಿ ಆಫ್ ಸೈನ್ಸಸ್‌ನ್ನು ಖಾಸಗಿಯಾಗಿ ತಮ್ಮ ಸಂಚಾಲಕತ್ವದಲ್ಲಿ ಸ್ಥಾಪಿಸಿದರು. ಇದರ ಉದ್ದೇಶಗಳಿಷ್ಟು: ಪ್ರಥಮದರ್ಜೆಯ ಸಂಶೋಧನೆ ಪ್ರಬಂಧಗಳನ್ನು ಪ್ರಕಟಿಸುವುದು. ವಿಜ್ಞಾನಸಂಬಂಧ ಸಮಸ್ಯೆಗಳ ಚರ್ಚೆಗೆ ಹೊಸ ವೇದಿಕೆ ಒದಗಿಸುವುದು. ಭಾರತದ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನೆಗಳನ್ನು ಸಂಘಟಿಸುವುದು. ಈ ಉದ್ದೇಶ ಸಿದ್ಧಿಗಾಗಿ ಸಂಶೋಧನ ಮಾಸಿಕವೊಂದನ್ನು (ಪ್ರೊಸೀಡಿಂಗ್ಸ್ ಆಫ್ ದಿ ಇಂಡಿಯನ್ ಅಕೆಡೆಮಿ) ಸಹ ರಾಮನ್ ಪ್ರಾರಂಭಿಸಿದರು. ತಮ್ಮ ನೆಚ್ಚಿನ ವಿಜ್ಞಾನ ಮಂದಿರವನ್ನು ಇವರು ಬೆಂಗಳೂರಿನ ಹೆಬ್ಬಾಳ ಎಂಬಲ್ಲಿ ಕಟ್ಟಿಸಿದರು (1948). 1939ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಿನ ನಿರ್ದೇಶಕತ್ವವನ್ನು ಬಿಟ್ಟು ಕೊಟ್ಟು ಕೇವಲ ಭೌತವಿಜ್ಞಾನ ವಿಭಾಗದ ಮುಖ್ಯರಾಗಿ ಉಳಿದರು. 1948ರಲ್ಲಿ ಈ ಹೊಣೆಗಾರಿಕೆಯನ್ನೂ ಕಳಚಿಕೊಂಡು ಸ್ವಂತ ಮಂದಿರದ ಪೂರ್ಣಕಾಲದ ಸಂಶೋಧಕ ಮತ್ತು ನೇತಾರರಾದರು. ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಎಂದೇ ಪ್ರಸಿದ್ಧವಾಗಿರುವ ಈ ಮಂದಿರದ ಜೀವನಾಡಿ ಏನಿರಬೇಕು ಎಂಬುದನ್ನು ಸ್ವತಃ ಅವರೇ ಹೀಗೆಂದು ಬರೆದಿದ್ದಾರೆ. ಅದರ ಕನ್ನಡ ಭಾವಾನುವಾದ ಹೀಗಿದೆ : "ನಮ್ಮ ಪ್ರಾಚೀನ ರಾಷ್ಟ್ರಕ್ಕೆ ತಕ್ಕುದಾದಂಥ ವಿಜ್ಞಾನ ಸಂಶೋಧನೆ ಕೇಂದ್ರವನ್ನು ಅಸ್ತಿತ್ವಕ್ಕೆ ತರಬೇಕೆಂಬುದು ನನ್ನ ತೀವ್ರ ಅಭಿಲಾಷೆ. ಈ ಕೇಂದ್ರದಲ್ಲಿ ನಮ್ಮ ದೇಶದ ತೀಕ್ಷ್ಣಮತಿಗಳು ವಿಶ್ವರಹಸ್ಯಗಳನ್ನು ಶೋಧಿಸಬೇಕು; ಮತ್ತು ಹಾಗೆ ಮಾಡುವುದರ ಮೂಲಕ ವಿಶ್ವಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಅತೀತ ಶಕ್ತಿಯನ್ನು ಗ್ರಹಿಸಲು ನಿಮಗೆ ನೆರವಾಗಬೇಕು. ಆತನ ದಿವ್ಯಕೃಪೆಯಿಂದ ನಮ್ಮ ದೇಶಪ್ರೇಮಿಗಳೆಲ್ಲರೂ ಈ ಕಾರಣವನ್ನು ಪೋಷಿಸುವ ವಿಧಾನವನ್ನು ಕಂಡಾಗ ಮಾತ್ರ ಈ ಗುರಿ ಸಿದ್ಧಿಸಿತು.'' ಅಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಿದರು. ಭಾವಿ ಸಂಶೋಧಕರಿಗೆ ಬಿಟ್ಟುಹೋಗಿರುವ ಈ ಸಂಸ್ಥೆ ವಿಶೇಷವಾಗಿ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನಾ ಸಂಸ್ಥೆಯಾಗಿದೆ.

ಸೃಷ್ಟಿಯ ಸಕಲ ವಿದ್ಯಮಾನಗಳೂ ರಾಮನ್ ಅವರ ಆಸಕ್ತಿಯನ್ನು ಕೆರಳಿಸಿದ್ದುವು, ಎಂದೇ ಇವರ ಮಂದಿರದ ವಸ್ತುಸಂಗ್ರಹಾಲಯ ಮತ್ತು ಪುಸ್ತಕ ಭಂಡಾರಗಳು ವಿಶಾಲವ್ಯಾಪ್ತಿಯುಳ್ಳವಾಗಿವೆ. ಮೂಲತಃ ಇವರು ಭೌತವಿಜ್ಞಾನಿ ಆಗಿದ್ದರೂ ಇವರ ಕುತೂಹಲ ಸಕಲ ಶಾಸ್ತ್ರಗಳನ್ನೂ ಒಳಗೊಂಡಿತ್ತು. ವಿಜ್ಞಾನದಿಂದ ಒದಗುವ ಲಾಭ ಗ್ರಾಮೀಣ ಜನರಿಗೂ ದೊರಕಬೇಕು ಎಂಬುದು ರಾಮನ್ ಅವರ ಅಪೇಕ್ಷೆಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಫಿಸಿಕ್ಸ್ ಫಾರ್ ದಿ ಕಂಟ್ರಿಸೈಡ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಮೂರು ಪ್ರಸಾರ ಭಾಷಣಗಳನ್ನು ರಾಮನ್ ನೀಡಿದರು. ಪ್ರಕೃತಿಯಲ್ಲಿನ ಬಣ್ಣಗಳು, ಖನಿಜಗಳ ವರ್ಣವೈಭವ, ವಜ್ರಗಳನ್ನು ಕುರಿತ ಶೋಧನೆ, ಖಗೋಳವಿಜ್ಞಾನ-ಹೀಗೆ ಹಲವಾರು ಕ್ಷೇತ್ರಗಳಲ್ಲಿ ಇವರ ಒಲವು ಇತ್ತು. ಇವರು ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರತಿಷ್ಠಿತ ಸಂಶೋಧನ ಪತ್ರಿಕೆಗಳಿಗೆ (ಜರ್ನಲ್ಸ್) ತನಿಯಾಗಿಯೂ ಇತರರೊಡಗೂಡಿಯೂ 350ಕ್ಕೂ ಹೆಚ್ಚಿನ ಸಂಶೋಧನ ಪ್ರಬಂಧಗಳನ್ನು ಬರೆದರು. ರಾಮನ್ ಅವರ ವಿದ್ಯಾಭ್ಯಾಸ, ಸಂಶೋಧನೆ, ಸಿದ್ಧಿ ಎಲ್ಲವೂ ನಡೆದದ್ದು ಭಾರತದ ಒಳಗೇ. ಅಂತಾರಾಷ್ಟ್ರೀಯ ಖ್ಯಾತಿ ಬಂದ ಬಳಿಕ ಮಾತ್ರವೇ ಇವರು ವಿದೇಶ ಪ್ರವಾಸ ಕೈಗೊಂಡರು.

ನಿವೃತ್ತಿಯ ನಂತರ

ರಾಮನ್ ನಿವೃತ್ತಿಗೊಂಡ ಬಳಿಕ ಇವರ ಸಂಶೋಧನಾ ಕೆಲಸಗಳಿಗಾಗಿ ಸರ್ಕಾರ ಧನಸಹಾಯ ನೀಡುವುದಕ್ಕೆ ಮುಂದಾಯಿತು. ಆದರೆ ಇವರು ತಮ್ಮ ವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಅಡ್ಡಿಯಾಗುವುದೆಂದು ಭಾವಿಸಿ ಆ ಸಹಾಯಧನವನ್ನು ತಿರಸ್ಕರಿಸಿದರು. ಮುಂದೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೂ ಇವರ ಹೆಸರನ್ನು ಸೂಚಿಸಲಾಗಿದ್ದು ಅದಕ್ಕೂ ಇವರು ತಮ್ಮ ವಿರೋಧ ವ್ಯಕ್ತಪಡಿಸಿದರು.

ಗೌರವ, ಪ್ರಶಸ್ತಿಗಳು

  • ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ (೧೯೨೪)
  • ಸೈನ್ಸ್ ಸೊಸೈಟಿ ಆಫ್ ರೋಮ್ ಎಂಬ ಸಂಸ್ಥೆಯಿಂದ ಮ್ಯಾಬ್ಯುಟಿ ಪದಕ (೧೯೨೮)
  • ನೈಟ್ ಹುಡ್ ಪ್ರಶಸ್ತಿ (೧೯೨೯)
  • ನೋಬೆಲ್ ಪ್ರಶಸ್ತಿ (೧೯೩೦)
  • ಲಂಡನ್ನಿನ ರಾಯಲ್ ಸೊಸೈಟಿಯಿಂದ ಹ್ಯೂಗ್ಸ್ ಪದಕ (೧೯೩೦)
  • ಮೈಸೂರು ಮಹಾರಾಜರಿಂದ, 'ರಾಜ ಸಭಾ ಭೂಷಣ ಗೌರವ' (೧೯೩೫)
  • ಅಮೆರಿಕ ಸಂಯುಕ್ತ ಸಂಸ್ಥಾನದ ಫ್ರಾಂಕ್ಲಿನ್ ಪದಕ (೧೯೪೧)
  • ಭಾರತ ರತ್ನ ಪ್ರಶಸ್ತಿ (೧೯೫೪)
  • ಲೆನಿನ್ ಶಾಂತಿ ಪ್ರಶಸ್ತಿ (೧೯೫೭)

ಮರಣ

ನವೆಂಬರ್ ೨೧ ೧೯೭೦ ರಲ್ಲಿ, 'ಪ್ರೊ.ರಾಮನ್' ರವರು, ದೇಮಹಳ್ಳಿಯಲ್ಲಿ ನಿಧನರಾದರು.

ಹೆಚ್ಚಿನ ಮಾಹಿತಿ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಚಂದ್ರಶೇಖರ ವೆಂಕಟರಾಮನ್: ಬಾಲ್ಯ, ವಿದ್ಯಾಭ್ಯಾಸ, ವೃತ್ತಿ, ಮದುವೆ, ರಾಮನ್ ಪರಿಣಾಮ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಚಂದ್ರಶೇಖರ ವೆಂಕಟರಾಮನ್ ಬಾಲ್ಯ, ವಿದ್ಯಾಭ್ಯಾಸ, ವೃತ್ತಿಚಂದ್ರಶೇಖರ ವೆಂಕಟರಾಮನ್ ಮದುವೆಚಂದ್ರಶೇಖರ ವೆಂಕಟರಾಮನ್ ರಾಮನ್ ಪರಿಣಾಮಚಂದ್ರಶೇಖರ ವೆಂಕಟರಾಮನ್ ೧೯೩೦ರ ನಂತರಚಂದ್ರಶೇಖರ ವೆಂಕಟರಾಮನ್ ನಿವೃತ್ತಿಯ ನಂತರಚಂದ್ರಶೇಖರ ವೆಂಕಟರಾಮನ್ ಗೌರವ, ಪ್ರಶಸ್ತಿಗಳುಚಂದ್ರಶೇಖರ ವೆಂಕಟರಾಮನ್ ಮರಣಚಂದ್ರಶೇಖರ ವೆಂಕಟರಾಮನ್ ಹೆಚ್ಚಿನ ಮಾಹಿತಿಚಂದ್ರಶೇಖರ ವೆಂಕಟರಾಮನ್ ಉಲ್ಲೇಖಗಳುಚಂದ್ರಶೇಖರ ವೆಂಕಟರಾಮನ್ ಬಾಹ್ಯ ಸಂಪರ್ಕಗಳುಚಂದ್ರಶೇಖರ ವೆಂಕಟರಾಮನ್ನೋಬೆಲ್ ಪ್ರಶಸ್ತಿಭೌತಶಾಸ್ತ್ರಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿರಾಮನ್ ಎಫೆಕ್ಟ್

🔥 Trending searches on Wiki ಕನ್ನಡ:

ಪ್ಯಾರಾಸಿಟಮಾಲ್ಅಂತರರಾಷ್ಟ್ರೀಯ ವ್ಯಾಪಾರಮೀನಾಕ್ಷಿ ದೇವಸ್ಥಾನಕನ್ನಡ ಸಾಹಿತ್ಯ ಪರಿಷತ್ತುಭಾರತದ ವಿಶ್ವ ಪರಂಪರೆಯ ತಾಣಗಳುಆಗಮ ಸಂಧಿವಿಜಯನಗರತತ್ಪುರುಷ ಸಮಾಸಸಮುಚ್ಚಯ ಪದಗಳುಬಂಡವಾಳಶಾಹಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಮೇಘಾ ಶೆಟ್ಟಿತಿಗಣೆಜಗನ್ನಾಥ ದೇವಾಲಯಹಾಸನ ಜಿಲ್ಲೆಗದ್ದಕಟ್ಟುಮದಕರಿ ನಾಯಕಎಸ್.ಎಲ್. ಭೈರಪ್ಪಪ್ರಾಥಮಿಕ ಶಿಕ್ಷಣಅಜಂತಾಸಮಾಜ ವಿಜ್ಞಾನಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶಿಲೀಂಧ್ರಗದ್ಯಬಾದಾಮಿ ಶಾಸನಹಿಂದೂ ಧರ್ಮರಕ್ತಪಿಶಾಚಿಶಿವರಾಮ ಕಾರಂತಆಯ್ದಕ್ಕಿ ಲಕ್ಕಮ್ಮಸೆಸ್ (ಮೇಲ್ತೆರಿಗೆ)ಕೆ.ವಿ.ಸುಬ್ಬಣ್ಣಅರ್ಜುನಭಾರತದ ಚುನಾವಣಾ ಆಯೋಗಎಚ್ ಎಸ್ ಶಿವಪ್ರಕಾಶ್ಮುಪ್ಪಿನ ಷಡಕ್ಷರಿರಜಪೂತಅಂತರ್ಜಲವಿಶ್ವ ಪರಿಸರ ದಿನಶಿವರಾಜ್‍ಕುಮಾರ್ (ನಟ)ಕೊಪ್ಪಳಯಾಣಕರ್ನಾಟಕದ ಮುಖ್ಯಮಂತ್ರಿಗಳುಹಾ.ಮಾ.ನಾಯಕಕಿತ್ತೂರು ಚೆನ್ನಮ್ಮಅವಲೋಕನಭಾರತದ ಸಂವಿಧಾನ ರಚನಾ ಸಭೆಬಾರ್ಲಿಎಂ. ಎಂ. ಕಲಬುರ್ಗಿಅಮ್ಮಅವತಾರಯಣ್ ಸಂಧಿಮಾಸರತ್ನತ್ರಯರುಭಗತ್ ಸಿಂಗ್ರವೀಂದ್ರನಾಥ ಠಾಗೋರ್ಹಿಂದೂ ಮಾಸಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಭಾರತದ ಸರ್ವೋಚ್ಛ ನ್ಯಾಯಾಲಯಮಣ್ಣುಗುರುರಾಜ ಕರಜಗಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುವಿಜಯ ಕರ್ನಾಟಕಭಾರತದ ರಾಷ್ಟ್ರಗೀತೆಭಾರತದಲ್ಲಿ ಮೀಸಲಾತಿಅಂತರ್ಜಾಲ ಹುಡುಕಾಟ ಯಂತ್ರಮೂಲಭೂತ ಕರ್ತವ್ಯಗಳುಆಹಾರ ಸರಪಳಿಮನೆಕಂಪ್ಯೂಟರ್ಗೊರೂರು ರಾಮಸ್ವಾಮಿ ಅಯ್ಯಂಗಾರ್ಪ್ರಬಂಧ ರಚನೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಎಚ್ ೧.ಎನ್ ೧. ಜ್ವರಗೋತ್ರ ಮತ್ತು ಪ್ರವರಒಗಟುಹರಕೆಭಾರತದ ಸಂವಿಧಾನಯೂಟ್ಯೂಬ್‌🡆 More