ಅನ್ನದಾನಯ್ಯ ಪುರಾಣಿಕ

ಅನ್ನದಾನಯ್ಯ ಪುರಾಣಿಕರವರು(ಜನನ:೧೯೨೮) ಕನ್ನಡದ ಹಿರಿಯ ಸಾಹಿತಿಗಳಲ್ಲೊಬ್ಬರು ಮತ್ತು ಆಧುನಿಕ ವಚನಕಾರರಲ್ಲೊಬ್ಬರು.

ಇವರು ಮದ್ದೂರಿನಲ್ಲಿ ನೆಡೆದ ಪ್ರಪ್ರಥಮ ಅಖಿಲ ಕರ್ನಾಟಕ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಕನ್ನಡ, ಕರ್ನಾಟಕದ ನಾಡು-ನುಡಿಗಾಗಿ ಸುಮಾರು ಆರು ದಶಕಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯಹೋರಾಟ, ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಅನ್ನದಾನಯ್ಯ ಪುರಾಣಿಕರ ನಾಯಕತ್ವವನ್ನು ಪ್ರತ್ಯಕ್ಷವಾಗಿ ನೋಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ ಮೊದಲಾದ ಗಣ್ಯರು ಪ್ರಮಾಣ ಪತ್ರ ನೀಡಿದ್ದಾರೆ. ಕರ್ನಾಟಕ ಸರ್ಕಾರವು ಅನ್ನದಾನಯ್ಯ ಪುರಾಣಿಕರಿಗೆ ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಿದೆ. ವರ್ಷ 2006, ಸುವರ್ಣ ಕರ್ನಾಟಕ ವರ್ಷಾಚರಣೆಯ ಅಂಗವಾಗಿ, ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಹಿರಿಯ ನಾಯಕರಲ್ಲಿ ಒಬ್ಬರೆಂದು, ಇವರನ್ನು ಗೌರವಿಸಿ, ಕರ್ನಾಟಕ ರಾಜ್ಯ ಸರ್ಕಾರವು "ಏಕೀಕರಣ ಪ್ರಶಸ್ತಿ" ನೀಡಿದೆ. ಕರ್ನಾಟಕ ರಾಜ್ಯ ಹೈಕೋರ್ಟಿನ ಹಿರಿಯ ನ್ಯಾಯವಾದಿಯಾಗಿ, ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾನವತಾವಾದಿ, ಗಾಂಧಿವಾದಿ, ಅನ್ನದಾನಯ್ಯ ಪುರಾಣಿಕರವರನ್ನು, ಕರ್ನಾಟಕ ರಾಜ್ಯಾದ್ಯಂತ ಜನರು, ಗೌರವ-ಅಭಿಮಾನದಿಂದ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರೆಂದು ಕರೆಯುತ್ತಾರೆ.( ಧಾರವಾಡದ ಮುರುಘಾಮಠದಲ್ಲಿ ಲಿಂಗೈಕ್ಯ ಮೃತ್ಯುಂಜಯ ಸ್ವಾಮಿಗಳು , ಸಾರ್ವಜನಿಕವಾಗಿ ಪ್ರಪ್ರಥಮವಾಗಿ "ಸಾಹಿತ್ಯರತ್ನ"ನೆಂದು ಗೌರವಿಸಿದರು. ಬೀದರ್ ಜಿಲ್ಲೆಯ ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಅನ್ನದಾನಯ್ಯನವರಿಗೆ ಪಟ್ಟದೇವರು ಪ್ರಶಸ್ತಿ , ಸಿದ್ದಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮಿಗಳವರ ೯೮ನೆ ಹುಟ್ಟುಹಬ್ಬದಂದು ಅನ್ನದಾನಯ್ಯನವರಿಗೆ "ಶರಣ ತಪಸ್ವಿ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಆಧುನಿಕ ವಚನ ರಚನಾ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಪರಿಗಣಿಸಿ ೨೦೦೬ನೆಯ ಸಾಲಿನ ರಮಣಶ್ರೀ ಶರಣ ಪ್ರಶಸ್ತಿಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗು ರಮಣಶ್ರೀ ಪ್ರತಿಷ್ಠಾನಗಳು ಜೊತೆಯಾಗಿ ಅನ್ನದಾನಯ್ಯ ಪುರಾಣಿಕರಿಗೆ ನೀಡಿವೆ.

ಅನ್ನದಾನಯ್ಯ ಪುರಾಣಿಕ
ಅನ್ನದಾನಯ್ಯ ಪುರಾಣಿಕ
Born
ಮಾರ್ಚ್ ೮, ೧೯೨೮

ಅಕ್ಟೋಬರ್ ೨೦, ೨೦೧೫
ದ್ಯಾಂಪುರ, ಕೊಪ್ಪಳ
Died೨೦೧೫
Citizenshipಭಾರತೀಯ
Occupation(s)ರಾಜ್ಯ ಹೈಕೋರ್ಟಿನ ಹಿರಿಯ ನ್ಯಾಯವಾದಿ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ
Organization(s)ಅಖಿಲ ಭಾರತ ಬಸವ ಸಮಿತಿ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು, ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ಕಾರ್ಯಕಾರಿ ಸಮಿತಿ
Known forಕರ್ನಾಟಕ ಏಕೀಕರಣ ಚಳುವಳಿ
Parents

ಬಾಲ್ಯ ಮತ್ತು ಶಿಕ್ಷಣ

ಮಾರ್ಚ್ ೮, ೧೯೨೮ರಲ್ಲಿ, ಇಂದಿನ ಕೊಪ್ಪಳ ಜಿಲ್ಲೆಯಲ್ಲಿರುವ ದ್ಯಾಂಪುರವೆಂಬ ಗ್ರಾಮದಲ್ಲಿ ಇವರು ಜನಸಿದರು. ಇವರ ತಂದೆ ಕವಿರತ್ನ ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಮತ್ತು ತಾಯಿ ದಾನಮ್ಮ. ಸಿದ್ದಯ್ಯ ಪುರಾಣಿಕ ಮತ್ತು ಬಸವರಾಜ ಪುರಾಣಿಕ ಇವರ ಸಹೋದರರಾಗಿದ್ದಾರೆ. ಶಾಲಾ ಶಿಕ್ಷಣವನ್ನು ಕುಕನೂರು ಮತ್ತು ಕೊಪ್ಪಳದಲ್ಲಿ ಮತ್ತು ಬಿ.ಕಾಂ ಪದವಿಯನ್ನು ಧಾರವಾಡದಲ್ಲಿ ಮತ್ತು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿಯನ್ನು ಪಡೆದಿದ್ದಾರೆ.

ಸಾಹಿತ್ಯ

ಅನ್ನದಾನಯ್ಯ ಪುರಾಣಿಕರು ವಚನ ಸಾಹಿತ್ಯ, ಸಂಶೋಧನೆ, ನ್ಯಾಯಾಂಗ ಮೊದಲಾದ ಪ್ರಕಾರಗಳಿಗೆ ಸೇರಿದ ಸುಮಾರು ೩೦ ಮೌಲಿಕ ಕೃತಿಗಳನ್ನು, ಹಲವಾರು ಲೇಖನಗಳನ್ನು ಮತ್ತು ಸುಮಾರು ೨೦೦೦ ವಚನಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ ಮತ್ತು ಅನೇಕ ಗ್ರಂಥಗಳ ಸಂಪಾದನೆ ಮಾಡಿದ್ದಾರೆ. ಇವರ ಪ್ರಮುಖ ಕೃತಿಗಳು ಹೀಗಿವೆ: ೧) ಶರಣು ಸ್ವಾಮಿ ೨) ಭಗೀರಥ (ಭಗೀರಥನ ಚರಿತ್ರೆ, ಆತನ ಬಗ್ಗೆ ಸಂಶೋಧನೆ) ೩) ಚೆನ್ನಬಸವ ಸಾಹಿತ್ಯ (ಚೆನ್ನಬಸವಣ್ಣನವರ ಕೃತಿಗಳ ಕುರಿತು ಪ್ರಥಮ ಪ್ರಕಟಣೆ) ೪) ವಚನ ಪ್ರಕಾಶ ೫) ವಚನ ಮಂದಾರ ೬) ವಚನ ದೀಪ್ತಿ ೭) ವಚನ ಸಂಗಮ ೮) ಷಟಸ್ಥಳಬ್ರಹ್ಮಿ ಚೆನ್ನಬಸವಣ್ಣ (ಚೆನ್ನಬಸವಣ್ಣನ ಜೀವನ-ಸಾಧನೆ) ೯) ಕರ್ನಾಟಕ ಸಹಕಾರ ಸಂಘಗಳ ಕಾನೂನು ೧೦)"ಪುರುಷ ಸಿಂಹ" ಸರ್ದಾರ ವಲಭಬಾಯಿ ಪಟೇಲ್ ೧೧)ಭಗತ್ ಸಿಂಗ್ ೧೨)ನೀತಿವಂತ ನ್ಯಾಯವಾದಿ (ಆತ್ಮ ಕಥನ) 13)ನ್ಯಾಯ ದರುಶನ ( ನ್ಯಾಯ ಶಾಸ್ತ್ರದ ಸಾಮಾನ್ಯ ಪರಿಚಯ) 14)ವಚನ ಸೌರಭ 15)ಷಟ್ ಸ್ಥಲ ಧರ್ಮಸಾರ ಕನ್ನಡ ನಿಘಂಟು ಸಂಪಾದಕ ಮಂಡಳಿಯ ಸದಸ್ಯರಾಗಿ (೧೯೬೦-೬೩), ಕನ್ನಡ ನುಡಿ ಮಾಸ ಪತ್ರಿಕೆ ಮತ್ತು ನ್ಯಾಯ ದರ್ಶನ ಪತ್ರಿಕೆಗಳ ಸಂಪಾದಕರಾಗಿ ಇವರು ಕೆಲಸ ಮಾಡಿದ್ದಾರೆ. ಸಹಜೀವನ ಪ್ರಕಾಶನ, ಶ್ರೀ ಸಿದ್ಧಲಿಂಗ ಪ್ರಕಾಶನವೆಂಬ ಎರಡು ಪ್ರಕಾಶನ ಸಂಸ್ಥೆಯ ಪ್ರಕಾಶಕರಾಗಿ, ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಹಲವಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪ್ರಥಮ ಕನ್ನಡ ನಿಘಂಟು ಪ್ರಕಟಣೆ ( ಕನ್ನಡ ನಿಘಂಟು ಸಂಪಾದಕ ಮಂಡಳಿಯ ಸದಸ್ಯರಾಗಿ) , ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ರಣಾಲಯ, ಭಾತಂಬ್ರಾ ಮೊದಲಾದ ಕಡೆ ಪ್ರಾರಂಭವಾದ ಗಡಿ ನಾಡ ಕನ್ನಡ ಸಾಹಿತ್ಯ ಸಮ್ಮೇಳನಗಳ ಪರಂಪರೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಶಾಶ್ವತವಾಗಿ ವಾರ್ಷಿಕ ಅನುದಾನ, ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಾಲಯ ಹೀಗೆ ಹಲವಾರು ಕೆಲಸಗಳನ್ನು ಇವರು ಪರಿಷತ್ತಿನ ಕಾರ್ಯದರ್ಶಿಯಾಗಿ(೧೯೬೦-೬೩) ಮತ್ತು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ(೧೯೬೪-೬೮) ಮಾಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತಷ್ಟು ಉತ್ತಮ ಪಡಿಸಿದರು. ಕರ್ನಾಟಕ ಭಾಷಾ ಆಯೋಗದ ಸದಸ್ಯರಾಗಿ (೧೯೬೬-೬೯) ಮತ್ತು ಕರ್ನಾಟಕ ಗೆಝೆಟಿಯರ್ ಸಂಪಾದಕ ಮಂಡಳಿಯ ಸದಸ್ಯರಾಗಿ ( ೧೯೭೧-೧೯೯೩) ಕೆಲಸ ಮಾಡಿದ್ದಾರೆ. ಕರ್ನಾಟಕದ ಜಿಲ್ಲೆಗಳ ಗೆಝೆಟಿಯರ್ ಗಳ ಸಂಪಾದನೆ ಮತ್ತು ಪ್ರಕಟಣೆ ( ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ) ಇವರ ಮುಖ್ಯವಾದ ಕಾರ್ಯಗಳಲ್ಲೊಂದಾಗಿದೆ.

ಸಂಘ ಸಂಸ್ಥೆಗಳು

ಅನ್ನದಾನಯ್ಯ ಪುರಾಣಿಕರು ಅನೇಕ ಜಾತ್ಯಾತೀತ ಸಂಘ-ಸಂಸ್ಥೆಗಳ ಸ್ಥಾಪನೆ ಮಾಡಿದ್ದಾರೆ. ಬಸವೇಶ್ವರರ 8ನೆ ಶತಮಾನೋತ್ಸವವನ್ನು ರಾಜ್ಯ ಸರ್ಕಾರ ಆಚರಿಸಿದಾಗ ಬಸವ ಕಲ್ಯಾಣದಿಂದ ಹಂಪೆಯವರೆಗೆ ನೆಡೆದ ಪಾದಯಾತ್ರೆಯ ನೇತ್ರತ್ವ ವಹಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಬಸವೇಶ್ವರ ಅಂಚೆ ಚೀಟಿ ಬಿಡುಗಡೆಗಾಗಿ ಬಿ.ಡಿ.ಜತ್ತಿಯವರೊಡನೆ ಕೆಲಸ ಮಾಡಿದ್ದಾರೆ. ಇಂದು ನಾಡಿನ ಪ್ರಮುಖ ಸಂಸ್ಥೆಗಳಲ್ಲಿ ಒಂದಗಿರುವ ಅಖಿಲ ಭಾರತ ಬಸವ ಸಮಿತಿಯಲ್ಲಿ, ಸ್ಥಾಪಕ ಧರ್ಮದರ್ಶಿಯಾಗಿದ್ದಾರೆ ಮತ್ತು ೨೭ ವರ್ಷ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ಧಾರೆ. ಪ್ರಪಥಮವಾಗಿ ರಾಜ್ಯದ ವಿದ್ಯಾರ್ಥಿಗಳನ್ನು ಸಂಘಟಿಸಿ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು ಸ್ಥಾಪಿಸಿ, ವಿದ್ಯಾರ್ಥಿಗಳು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಸಾಹಿತ್ಯ ಸಂವರ್ಧಕ ಟ್ರಸ್ಟ್ ನ ಧರ್ಮದರ್ಶಿಯಾಗಿದ್ದಾರೆ. ಶೇಷಾದ್ರಿಪುರ ಶಿಕ್ಷಣ ದತ್ತಿ, ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ಕಾರ್ಯಕಾರಿ ಸಮಿತಿ, ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ ಸಮಿತಿ ಮತ್ತು ಅಲ್ಲಿ ಸಂಶೋಧನೆ-ಪ್ರಕಟಣೆ-ಶಿಕ್ಷಣ ಸಮಿತಿ , ಜಯನಗರ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ, ಹೀಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸದಸ್ಯರಾಗಿ, ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

ನ್ಯಾಯಾಂಗ

ರಾಜ್ಯ ಹೈಕೋರ್ಟಿನ ಹಿರಿಯ ನ್ಯಾಯವಾದಿಯಾಗಿ ( 1957ರಿಂದ) 10,000ಕ್ಕೂ ಹೆಚ್ಚು ಕೇಸುಗಳನ್ನು ಬಡವರಿಗೆ-ದಲಿತರಿಗೆ-ಅಲ್ಪಸಂಖ್ಯಾತರಿಗಾಗಿ ಉಚಿತವಾಗಿ ನೆಡೆಸಿದ್ದಾರೆ. ರಾಜ್ಯ ಹೈಕೋರ್ಟಿನ ಅಡ್ವೋಕೇಟ್ ಆಗಿ (1969-81) ಸರ್ಕಾರಕ್ಕೆ ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ಉಳಿಸಿ ಕೊಟ್ಟಿದ್ದಾರೆ. ಹಲವಾರು ಬಾರಿ ಹೈಕೋರ್ಟ್ ನ್ಯಾಯಾಧೀಶರಾಗುವ ಅವಕಾಶ ಬಂದಾಗಲೂ ಅದನ್ನು ನಿರಾಕರಿಸಿ ಬಡವರಿಗೆ-ದಲಿತರಿಗೆ-ಅಲ್ಪಸಂಖ್ಯಾತರಿಗೆ ನ್ಯಾಯ ದೊರಕಿಸುವ ಹೋರಾಟವನ್ನು ಮುಂದುವರೆಸಿದವರಾಗಿದ್ದಾರೆ. ಜನಸಾಮಾನ್ಯರಿಗೆ ನ್ಯಾಯಾಂಗ ಮಾಹಿತಿ ತಲಪಲು, ಕನ್ನಡದಲ್ಲಿ ಹಲವಾರು ನ್ಯಾಯಾಂಗ ಪುಸ್ತಕಗಳನ್ನು ಮತ್ತು ಲೇಖನಗಳನ್ನು ಬರೆದಿದ್ದಾರೆ. ಅಖಿಲ ಭಾರತ ನ್ಯಾಯವಾದಿಗಳ ಸಂಘಟಣೆ, ದೆಹಲಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ (1976-78) ಕೆಲಸ ಮಾಡಿದ್ದಾರೆ. ಬೆಂಗಳೂರಿನ ಸರ್ಕಾರಿ ಲಾ ಕಾಲೇಜನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪರೀಕ್ಸಾ ವಿಭಾಗದ ಮುಖ್ಯ ಪರಿವಿಕ್ಷಕರಾಗಿ (1962-69) ಕೆಲಸ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟ

ಮಹಾತ್ಮ ಗಾಂಧಿಯವರ ಕರೆಗೆ ಓಗೊಟ್ಟು, ಸ್ವಾತಂತ್ರ್ಯ ಚಳುವಳಿ ಸೇರಿ, ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ (ಕ್ವಿಟ್ ಇಂಡಿಯಾ ಚಳುವಳಿ) ಸಕ್ರಿಯ ಪಾತ್ರವಹಿಸಿದ್ದರು. ಹೈದರಾಬಾದ್ ವಿಮೋಚನಾ ಕಾರ್ಯಾಚರಣೆ ಭಾರತಕ್ಕೆ ೧೯೪೭ಆಗಸ್ಟ್ ೧೫ರಂದು ಸ್ವಾತಂತ್ರ್ಯ ಬಂದರೆ, ಹೈದರಾಬಾದಿನ ನಿಜಾಂ ಮಾತ್ರ ಬಹುಸಂಖ್ಯಾತ ಜನರ ಅಭಿಪ್ರಾಯದಂತೆ, ಹೈದರಾಬಾದ್ ಪ್ರಾಂತ್ಯವನ್ನು ಭಾರತದೊಡನೆ ವಿಲೀನಗೊಳಿಸಲು ಒಪ್ಪಲಿಲ್ಲ. ಹೈದರಾಬಾದ್ ಪ್ರಾಂತ್ಯವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಂ ಘೋಷಿಸಿದಾಗ, ಭಾರತದೊಡನೆ ವಿಲೀನದ ಪರವಾಗಿದ್ದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಜನಸಾಮಾನ್ಯರ ಮೇಲೆ ನಿಜಾಂ ಬೆಂಬಲಿಗರಾದ ರಜಾಕಾರರು ದೌರ್ಜನ್ಯ ನಡೆಸಿ, ಆಸ್ತಿ-ಪಾಸ್ತಿ ದೋಚಿದ್ದರೆಂದು ನಂಬಲಾಗಿದೆ. ಆಗ, ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಬಿ ವ್ಯಾಸಂಗ ಮಾಡುತ್ತಿದ್ದ ಅನ್ನದಾನಯ್ಯ ಪುರಾಣಿಕ, ನಿಜಾಂ ವಿರುದ್ಧ ಪ್ರತಿಭಟಿಸಿ, ಓದು ತೊರೆದು, ಅನ್ನಪೂರ್ಣಯ್ಯ ಸ್ವಾಮಿ, ಮೊದಲಾದವರ ಜೊತೆ ಸೇರಿ ಹೈದರಾಬಾದಿನಲ್ಲಿದ್ದ ಕನ್ನಡಿಗರ ರಕ್ಷಣೆಗಾಗಿ ಕೆಲಸ ಮಾಡಿದ್ದಾರೆ. ಮುಂದೆ ಕರ್ನಾಟಕದಲ್ಲಿ ಮುಂಡರಗಿಯಲ್ಲಿ ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟಕ್ಕಾಗಿ ಶಿಬಿರವನ್ನು ಸ್ಥಾಪಿಸಿದ್ದಾರೆ.ಸರ್ದಾರ ಪಟೇಲ್, ನಿಜಲಿಂಗಪ್ಪ ಮೊದಲಾದವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ನೆಡೆದ ಈ ಹೋರಾಟದ ನೇತ್ರತ್ವ ವಹಿಸಿ ಹೈದರಾಬಾದು ಸಂಸ್ಥಾನದ ಜನರಿಗೆ ಸ್ವಾತಂತ್ರ್ಯ ದೊರೆಯಲು ಪ್ರಮುಖ ಕಾರಣವಾಗಿದ್ದಾರೆ.

ಕರ್ನಾಟಕ ಏಕೀಕರಣ ಹೋರಾಟ

ಕರ್ನಾಟಕ ಏಕೀಕರಣವಾಗ ಬೇಕೆಂದು ಸ್ವಾತಂತ್ರ್ಸ ಪೂರ್ವದಿಂದಲೂ ಹೋರಾಟ ನೆಡೆದಿತ್ತು. ಹೈದರಾಬಾದು ಕಾಂಗ್ರೆಸ್ ಅಧಿವೇಶನದಲ್ಲಿ, ಕರ್ನಾಟಕ ಏಕೀಕರಣ ಬೇಡಿಕೆಯನ್ನು ವಿರೋಧಿಸಿ ನಿರ್ಣಯವಾದಾಗ, ಕನ್ನಡಿಗರಿಗೆ ಬಹಳ ನಿರಾಸೆಯಾಯಿತು. ಕರ್ನಾಟಕದ ಕಾಂಗ್ರೆಸ್ ಮುಖಂಡರು, ನಿಜಲಿಂಗಪ್ಪನವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಸಭೆ ಸೇರಿ, ಕರ್ನಾಟಕ ಏಕೀಕರಣ ಕುರಿತು ಮಹತ್ವದ ನಿರ್ಣಯ ಕೈಗೊಳ್ಳುವ ಸಂದರ್ಭ ಬಂದಿತ್ತು. ಈ ನಡುವೆ, ರಾಜ್ಯಾದಂತ್ಯ ಸಂಚರಿಸಿ, ವಿದ್ಯಾರ್ಥಿಗಳನ್ನು ಸಂಘಟಿಸಿದ್ದ ಅನ್ನದಾನಯ್ಯ ಪುರಾಣಿಕ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತನ್ನು ಸ್ಥಾಪಿಸಿ, ಅದರ ಪ್ರಥಮ ಅಧಿವೇಶನವನ್ನು ಹೈದರಾಬಾದಿನಲ್ಲಿ ನೆಡೆಸಿದ್ದರು. ರಾಜ್ಯದ ಹಿರಿಯ ರಾಜಕಾರಣಿ ಮಾರ್ಗರೇಟ್ ಆಳ್ವಾರವರು ಈ ಪರಿಷತ್ತಿನಲ್ಲಿ ಸಕ್ರೀಯ ಪಾತ್ರ ವಹಿಸಿದ್ದರು. ಈ ಅಧಿವೇಶನದ ಸರ್ವಾನುಮತದ ನಿರ್ಣಯದಂತೆ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನಕರ್ನಾಟಕ ಏಕೀಕರಣ ಹೋರಾಟದಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿತ್ತು. ಅದರಂತೆ ಕರ್ನಾಟಕ ಏಕೀಕರಣದ ಪರವಾಗಿ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ನೆಡೆದಿತ್ತು. ಕರ್ನಾಟಕ ಏಕೀಕರಣದ ವಿರೋಧಿಗಳು ಕೆಲವು ಈ ಸಂದರ್ಭದಲ್ಲಿ ಹಿಂಸಾಚಾರ ನೆಡೆಸಿದ ಕಾರಣ, ಜನಸಾಮಾನ್ಯರು, ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಪೋಲಿಸರು ವಿದ್ಯಾರ್ಥಿಗಳೇ ಹಿಂಸಾಚಾರ ನೆಡೆಸಿದರೆಂದೂ ಆಪಾದಿಸಿ, ಅನ್ನದಾನಯ್ಯ ಪುರಾಣಿಕ ಮತ್ತು ಕೆಲವು ವಿದ್ಯಾರ್ಥಿ ಪರಿಷತ್ತಿನ ಮುಖಂಡರನ್ನು ಪೋಲಿಸರು ಬಂಧಿಸಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಮತ್ತು ಹುಬ್ಬಳಿಯ ಹಿರಿಯ ರಾಜಕಾರಣಿ-ವಕೀಲರಾದ ಶೆಟ್ಟರ್ರವರು ನ್ಯಾಯಾಲಯದಲ್ಲಿ ವಾದಿಸಿ, ಅನ್ನದಾನಯ್ಯ ಪುರಾಣಿಕರನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದರು. (( ಕರ್ನಾಟಕ ಏಕೀಕರಣದ ಬಗ್ಗೆ ಪುಸ್ತಕ ಬರೆದಿರುವ ಕೆಲವು ಲೇಖಕರು ಪೋಲಿಸರ ಈ ಕ್ರಮವನ್ನು ಸರಿಯಂದು ದಾಖಲಿಸಿ, ಹುಬ್ಬಳ್ಳಿ ಗಲಭೆಗಾಗಿ ವಿದ್ಯಾರ್ಥಿಗಳನ್ನು ದೂಷಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. )) ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ನೆಡೆಸಿದ ಮೆರವಣಿಗೆ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ನೀಡಿದ ಬೆಂಬಲ, ಕರ್ನಾಟಕ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ಕರ್ನಾಟಕದ ಏಕೀಕರಣದ ಪರವಾಗಿ ಕೆಲಸ ಮಾಡಲು ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು ಎಂದು ಎಸ್.ನಿಜಲಿಂಗಪ್ಪ,ಬಿ.ಡಿ.ಜತ್ತಿ ಮೊದಲಾದವರು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಕರ್ನಾಟಕ ಏಕೀಕರಣವಾದ ನಂತರ ಸಮಾಜ, ನ್ಯಾಯಾಂಗ, ಸಮಾಜ ಮತ್ತು ಸಾಹಿತ್ಯ ಸೇವೆಗೆ ಅನ್ನದಾನಯ್ಯ ಪುರಾಣಿಕರು ಹೆಚ್ಚು ಗಮನ ನೀಡಿದ್ದಾರೆ. ಇವರು ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಪತ್ನಿ ನೀಲಾಂಬಿಕೆಯವರು, ಕನ್ನಡ ಪುಸ್ತಕಗಳ ಪ್ರಕಟಣೆಗಾಗಿ ಮೀಸಲಾದ ಶ್ರೀ ಸಿದ್ಧಲಿಂಗ ಪ್ರಕಾಶನ ಸಂಸ್ಥೆ ನೆಡೆಸುತ್ತಿದ್ದಾರೆ. ಮಗಳು ಚಂದ್ರಿಕಾ ಪುರಾಣಿಕ, ಕನ್ನಡದ ಮಹಿಳಾ ಸಾಹಿತಿ, ಆಕಾಶವಾಣಿ-ದೂರದರ್ಶನ ಕಲಾವಿದೆ ಮತ್ತು ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ಮಗ ಉದಯ ಶಂಕರ ಪುರಾಣಿಕ, ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿದ್ದು, ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಕುರಿತು ನೂರಾರು ಲೇಖನಗಳನ್ನು ಬರೆದಿದ್ದಾರೆ ( ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಇತ್ಯಾದಿ) ಮತ್ತು ವಿಶ್ವವಿದ್ಯಾಲಯಗಳು ಇವರು ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತು ಬರೆದಿರುವ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗಿವೆ.

ಉಲ್ಲೇಖಗಳು

http://archive.deccanherald.com/deccanherald/jun242004/metro2.asp Archived 2016-06-19 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಅನ್ನದಾನಯ್ಯ ಪುರಾಣಿಕ ಬಾಲ್ಯ ಮತ್ತು ಶಿಕ್ಷಣಅನ್ನದಾನಯ್ಯ ಪುರಾಣಿಕ ಸಾಹಿತ್ಯಅನ್ನದಾನಯ್ಯ ಪುರಾಣಿಕ ಸಂಘ ಸಂಸ್ಥೆಗಳುಅನ್ನದಾನಯ್ಯ ಪುರಾಣಿಕ ನ್ಯಾಯಾಂಗಅನ್ನದಾನಯ್ಯ ಪುರಾಣಿಕ ಸ್ವಾತಂತ್ರ್ಯ ಹೋರಾಟಅನ್ನದಾನಯ್ಯ ಪುರಾಣಿಕ ಕರ್ನಾಟಕ ಏಕೀಕರಣ ಹೋರಾಟಅನ್ನದಾನಯ್ಯ ಪುರಾಣಿಕ ಉಲ್ಲೇಖಗಳುಅನ್ನದಾನಯ್ಯ ಪುರಾಣಿಕಎಸ್.ನಿಜಲಿಂಗಪ್ಪಕನ್ನಡಕರ್ನಾಟಕಕರ್ನಾಟಕ ಸರ್ಕಾರಬಿ.ಡಿ.ಜತ್ತಿಸಿದ್ದಗಂಗಾಹೈದರಾಬಾದ್೧೯೨೮೨೦೦೬

🔥 Trending searches on Wiki ಕನ್ನಡ:

ಮದಕರಿ ನಾಯಕನೆಪೋಲಿಯನ್ ಬೋನಪಾರ್ತ್ಮಾಧ್ಯಮಋತುಬಾರ್ಬಿಭಾರತ ರತ್ನಹೂವುಬಹುವ್ರೀಹಿ ಸಮಾಸಕನ್ನಡ ಸಂಧಿಕೇಂದ್ರಾಡಳಿತ ಪ್ರದೇಶಗಳುಸೋನು ಗೌಡಆರ್ಥಿಕ ಬೆಳೆವಣಿಗೆಸವರ್ಣದೀರ್ಘ ಸಂಧಿಕಾನೂನುಭಂಗ ಚಳವಳಿಬ್ಯಾಡ್ಮಿಂಟನ್‌ಕ್ರೈಸ್ತ ಧರ್ಮಪಶ್ಚಿಮ ಘಟ್ಟಗಳುತಂತ್ರಜ್ಞಾನಪರಿಪೂರ್ಣ ಪೈಪೋಟಿಸಹಕಾರಿ ಸಂಘಗಳುಋಗ್ವೇದಸಂಜು ವೆಡ್ಸ್ ಗೀತಾ (ಚಲನಚಿತ್ರ)ಬೆಂಗಳೂರುದ್ವಿರುಕ್ತಿರಾವಣಮಾರ್ಟಿನ್ ಲೂಥರ್ ಕಿಂಗ್ಶಾಸಕಾಂಗಸಾರ್ವಜನಿಕ ಹಣಕಾಸುವಾದಿರಾಜರುಕನ್ನಡ ಸಾಹಿತ್ಯ ಪರಿಷತ್ತುಕುಕ್ಕೆ ಸುಬ್ರಹ್ಮಣ್ಯ ದೇವಾಲಯಮೈಸೂರು ರಾಜ್ಯಕನ್ನಡ ಅಕ್ಷರಮಾಲೆಮಂತ್ರಾಲಯಬುಡಕಟ್ಟುಗಿರೀಶ್ ಕಾರ್ನಾಡ್ಸೋಮೇಶ್ವರ ಶತಕಒಂದನೆಯ ಮಹಾಯುದ್ಧಭಾರತೀಯ ಭೂಸೇನೆವೀರಗಾಸೆಆಂಡಯ್ಯಭಾರತದ ಮುಖ್ಯಮಂತ್ರಿಗಳುಬ್ಯಾಸ್ಕೆಟ್‌ಬಾಲ್‌ಮೂಲಧಾತುಕರ್ನಾಟಕ ಜನಪದ ನೃತ್ಯಶಿಕ್ಷಕಕಪ್ಪೆಚಿಪ್ಪುಭಾರತದ ಉಪ ರಾಷ್ಟ್ರಪತಿಭರತೇಶ ವೈಭವಶ್ರೀ ಸಿದ್ದೇಶ್ವರ ಸ್ವಾಮಿಜಿಗಳುನದಿಬಾಲ್ಯ ವಿವಾಹಸಿದ್ಧಯ್ಯ ಪುರಾಣಿಕಶಿವಕೋಟ್ಯಾಚಾರ್ಯಮೊದಲನೇ ಅಮೋಘವರ್ಷಭಾರತದ ಇತಿಹಾಸಕರ್ನಾಟಕ ವಿಧಾನ ಪರಿಷತ್ವರ್ಗೀಯ ವ್ಯಂಜನಕಾವ್ಯಮೀಮಾಂಸೆವಾರ್ಧಕ ಷಟ್ಪದಿನಾಡ ಗೀತೆಪರಮ ವೀರ ಚಕ್ರಬನವಾಸಿಬೇಸಿಗೆಉತ್ತರ ಕನ್ನಡಕ್ರಿಕೆಟ್ಮಲ್ಲಿಗೆಶ್ಯೆಕ್ಷಣಿಕ ತಂತ್ರಜ್ಞಾನಕುಂದಾಪುರಮರಬಂಡವಾಳಶಾಹಿಆರ್ಯ ಸಮಾಜವ್ಯಾಸರಾಯರುಗಾದೆಹಂಸಲೇಖಭಾರತದ ಸಂವಿಧಾನ ರಚನಾ ಸಭೆಕಂಠೀರವ ನರಸಿಂಹರಾಜ ಒಡೆಯರ್ಅಸ್ಪೃಶ್ಯತೆಗುಣ ಸಂಧಿ🡆 More