ಮಹಾತ್ಮ ಜ್ಯೋತಿಬಾ ಫುಲೆ (೧೮೨೭ - ೧೮೯೦) ಅವರು ಆಧುನಿಕ ಮಹಾರಾಷ್ಟ್ರದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು.
ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಇವರು ಜನಸಾಮಾನ್ಯರು ಡಾಂಭಿಕ ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ, ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಅಪೇಕ್ಷೆ ಪಟ್ಟವರು.ಮಹಾತ್ಮ ಜ್ಯೋತಿಬಾ ಫುಲೆ ಅವರ ಬಗ್ಗೆ ಕನ್ನಡದಲ್ಲಿರುವ ಬಹುತೇಕ ಕೃತಿಗಳಲ್ಲಿ "ಜ್ಯೋತಿಬಾ ಫುಲೆ" ಎಂಬ ಹೆಸರೆ ಬಳಕೆಯಲ್ಲಿದೆ. ಆದರೆ ಆಂಗ್ಲ ಮತ್ತು ಮರಾಠಿ ಭಾಷೆಗಳಲ್ಲಿ ಅವರ ಹೆಸರು 'ಜ್ಯೋತಿರಾವ್ ಫುಲೆ' ಎಂದಿದೆ.
ಇತರ ಹೆಸರುಗಳು | Mahatma Phule. Jyotiba Phule / Jyotirao Phule |
---|---|
ಜನನ | Katgun, Satara, British India (present-day ಮಹಾರಾಷ್ಟ್ರ, India) | ೧೧ ಏಪ್ರಿಲ್ ೧೮೨೭
ಮರಣ | 28 November 1890 Pune, British India (present-day Maharashtra,India) | (aged 63)
ಕಾಲಮಾನ | 19th century philosophy |
ಧರ್ಮ | Satyashodhak Samaj, Deist, Humanism |
ಮುಖ್ಯ ಹವ್ಯಾಸಗಳು | Ethics, religion, humanism |
ಪ್ರಭಾವಕ್ಕೋಳಗಾಗು
| |
ಪ್ರಭಾವ ಬೀರು
|
ಮಹಾರಾಷ್ಟ್ರದ ಕೊಲ್ಲಾಪುರದ ಹತ್ತಿರ "ಜ್ಯೋತಿಬಾ" ಹೆಸರಿನ ಒಂದು ದೇವಿ ಗುಡಿ ಗುಡ್ಡದ ಮೇಲಿದೆ. ಅದನ್ನು 'ಜ್ಯೋತಿಬಾ ಗುಡ್ಡ' ಎಂದು ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಅನೇಕರು ಈ ದೇವಿಯನ್ನು ಕುಲದೇವತೆಯೆಂದು ನಂಬಿದ್ದಾರೆ. ಈ ಗುಡ್ಡದ ಮೇಲೆ (ಮಹಾರಾಷ್ಟ್ರದ ಪಂಚಾಂಗ ರೀತ್ಯಾ) ಚೈತ್ರ ಶುಕ್ಲ ಪೂರ್ಣಿಮೆಯಂದು ಜಾತ್ರೆಯಾಗುತ್ತದೆ. ಆ ದೇವಿಯ ಹೆಸರನ್ನೇ ಸ್ಮರಿಸಿ ಇವರನ್ನು "ಜ್ಯೋತಿಬಾ" ಎಂದು ಕರೆಯಲಾಗಿದೆ. "ಫುಲೆ" ಎಂದರೆ ಸಮುದಾಯದ ಹೆಸರು (ಹೂ ಮಾರುವ ಹೂವಾಡಿಗ). ಜ್ಯೋತಿಬಾ ಫುಲೆಯವರನ್ನು 'ಜ್ಯೋತಿರಾವ್ ಫುಲೆ' ಎಂದು ಕರೆಯುವುದು ವಾಡಿಕೆ. ಆದರೆ 'ರಾವ್', 'ರಾಜ' ಅಥವಾ 'ರಾಯ' ಶಬ್ಞ ಸಮಾನಾರ್ಥವಾಗಿದ್ದರೂ 'ಜ್ಯೋತಿರಾವ್' ಗಿಂತ ' ಜ್ಯೋತಿಬಾ ಫುಲೆ' ಹೆಸರು ಬಲು ಸುಂದರವಾಗಿದೆ. ಮರಾಠಿ ಭಾಷೆಯಲ್ಲಿ 'ಬಾ' ಪ್ರೀತ್ಯಾದಾರ ಸೂಚಕ ಪ್ರತ್ಯಯ.
ಏಪ್ರಿಲ್ ೧೧, ೧೮೨೭ ನೇ ಇಸವಿಯಲ್ಲಿ ಮಹಾರಾಷ್ಟ್ರದ 'ಕಟಗುಣ' ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಗೋವಿಂದರಾವ್, ತಾಯಿ ಚಿಮಣಾಬಾಯಿ. ಜ್ಯೋತಿಬಾ ಜನಿಸಿದ ಕೆಲವೇ ತಿಂಗಳಲ್ಲಿ ಇವರ ತಾಯಿ ಚಿಮಣಾಬಾಯಿ ಕೊನೆಯುಸಿರೆಳೆದರು. ಹಾಗಾಗಿ ಜ್ಯೋತಿಬಾ ಅವರ ಲಾಲನೆ ಪಾಲನೆ ಮಾಡಲು ಚಿಮಣಾಬಾಯಿ ಸೋದರಿ ಸಗುಣಾಬಾಯಿ ಮುಂದಾಗಿ, ಇವರನ್ನು ಸಾಕಿ ಸಲಹುತ್ತಾರೆ. ಸಗುಣಾಬಾಯಿ ಚಿಕ್ಕವಯಸ್ಸಿನಿಂದಲೇ ಜ್ಯೋತಿಬಾ ಅವರ ಮನಸ್ಸಿನಲ್ಲಿ ಸಮಾಜಸೇವೆಯ ಬೀಜಾರ್ಪಣ ಮಾಡಿದರು.
ಆ ಕಾಲದಲ್ಲಿ ಮೇಲುಜಾತಿಯವರಿಗೆ ಮಾತ್ರ ಶಿಕ್ಷಣ ಮೀಸಲಾಗಿತ್ತು. ಕೆಲವು ಹಳ್ಳಿಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಪಾಠಶಾಲೆಗಳಿದ್ದುವು. ಆದರೆ ಅಂತಹ ಶಾಲೆಗಳಲ್ಲಿ ವ್ಯಾಪಾರಿಗಳ, ಹಣವಂತರ ಮಕ್ಕಳಿಗೆ ಮಾತ್ರ ಶಿಕ್ಷಣ ಲಭ್ಯವಾಗುತ್ತಿತ್ತು. ಕ್ರೈಸ್ತಪಾದ್ರಿಗಳು ೧೮೨೪ರಿಂದಲೇ ಪುಣೆಯಲ್ಲಿ ಮರಾಠಿಶಾಲೆಯನ್ನು ಶುರು ಮಾಡಿದರು. ನಂತರ ೧೮೩೬ ನೇ ಇಸವಿಯಲ್ಲಿ ಸರ್ಕಾರದ ವತಿಯಿಂದ ಪುಣೆ ಜಿಲ್ಲೆಯಲ್ಲಿ ಹಾಗೂ ಕೆಲವು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭ ಮಾಡಲಾಯಿತು. ಲಾರ್ಡ್ ಬೆಂಟಿಕ್ ನ ಆಳ್ವಿಕೆಯಲ್ಲಿ ಭಾರತೀಯರಿಗೆ ಪಾಶ್ವಾತ್ಯ ಸಾಹಿತ್ಯ ಮತ್ತು ಶಾಸ್ತ್ರಗಳನ್ನೇ ಬೋಧಿಸುವುದು ಸರ್ಕಾರದ ಮೂಲ ಧ್ಯೇಯವಾಗಬೇಕೆಂದು ಸರ್ಕಾರವು ನಿರ್ಧಾರ ಮಾಡಿತು. ೧೮೩೩ ರಲ್ಲಿ ಪುಣೆಯಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಒಂದು ಪ್ರಯೋಗ ನಡೆಯಿತು.
ಜ್ಯೋತಿಬಾರ ತಂದೆ ಗೋವಿಂದರಾವ್ ಮಗನನ್ನು ಶಾಲೆಗೆ ಸೇರಿಸಿದರು. ಆಗ ಅವರಿಗೆ ಏಳು ವರ್ಷ ವಯಸ್ಸಾಗಿತ್ತು. ಆ ಕಾಲದ ಕೆಲವು ಜನರು ಕ್ರೈಸ್ತಪಾದ್ರಿಗಳ ಶಾಲೆಗಳಲ್ಲಿ ಪ್ರವೇಶ ಪಡೆದರೆ ಮಕ್ಕಳು ಧರ್ಮ ಭ್ರಷ್ಟರಾಗುತ್ತಾರೆಂದು ನಂಬಿದ್ದರು. ಹಾಗಾಗಿ ಜ್ಯೋತಿಬಾ ಶಾಲೆಯನ್ನು ಅರ್ಧಕ್ಕೆ ಬಿಡಬೇಕಾಗಿ ಬರುತ್ತದೆ. ಜ್ಯೋತಿಬಾಗೆ ೧೩ ವರ್ಷವಾದಾಗ ಅವರ ತಂದೆ ಗೋವಿಂದರಾವ್ ಮಗನಿಗೆ ಬಾಲ್ಯವಿವಾಹ ಮಾಡಿಸುತ್ತಾರೆ. ಸತಾರಾ ಜಿಲ್ಲೆಯ ನಾಯಗಾಂವ್ ನಿವಾಸಿ ಶ್ರೀ ನೇವಸೆ ಪಾಟೀಲರ ಮಗಳು ಸಾವಿತ್ರಿಬಾಯಿಯೊಂದಿಗೆ ಜ್ಯೋತಿಬಾ ಅವರ ವಿವಾಹ ವಾಗುತ್ತದೆ. ಆಗ ವಧುವಿಗೆ ಎಂಟು ವರ್ಷ. ಮುಂದೆ ಮುಂಶಿಯವರ ಮಾತಿಗೆ ಬದ್ದರಾದ ಗೋವಿಂದರಾವ್ ಮಗ ಶಿಕ್ಷಣ ಮುಂದುವರಿಸಲು ಅನುಮತಿ ನೀಡುತ್ತಾರೆ. ೧೮೪೧ರಲ್ಲಿ ಜ್ಯೋತಿಬಾ ಅವರನ್ನು ಸ್ಕಾಟಿಶ್ ಮಿಶನ್ ಸ್ಕೂಲಿಗೆ ಸೇರಿಸಲಾಗುತ್ತದೆ. ಆಗ ಅವರಿಗೆ ೧೪ ವರ್ಷ. ಇಂಗ್ಲೀಷ್ ಶಿಕ್ಷಣದ ವಿದ್ಯಾಭ್ಯಾಸ ಅವರ ಜೀವನದ ಮಹತ್ವಪೂರ್ಣ ಘಟ್ಟ. ಜ್ಯೋತಿಬಾ ತಮ್ಮ ಪತ್ನಿ ಸಾವಿತ್ರಿಬಾಯಿ ಅವರಿಗೆ ತಾವೇ ಶಿಕ್ಷಣ ಕೊಟ್ಟು ವಿದ್ಯಾವಂತರಾಗಿ ಮಾಡುತ್ತಾರೆ. ಸಾವಿತ್ರಿಬಾಯಿಗೆ ಮನೆಯೇ ಮೊದಲ ಪಾಠಶಾಲೆ ಗಂಡನೆ ಪರಮಗುರು.
ಆ ಕಾಲದಲ್ಲಿ ಜ್ಯೋತಿಬಾ ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಗೆ ಹೋಗಬಹುದಿತ್ತು. ಕ್ರಮೇಣ ತಮ್ಮ ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಹೈಕೋರ್ಟಿನ ಪ್ರಮುಖ ನ್ಯಾಯಾಧೀಶರು ಆಗಬಹುದಿತ್ತು. ಆದರೆ ಅವರು ಸ್ಥಾಯಿಯಾಗಿ ಉಳಿದದ್ದು ಸಮಾಜ ಸುಧಾರಣಾ ಕಾರ್ಯಗಳಲ್ಲಿ.
ಸಾರ್ವಜನಿಕ ಸತ್ಯಧರ್ಮದ ಮೂಲ ತತ್ವಗಳನ್ನೊಳಗೊಂಡ ೩೩ ಸತ್ಯಾಚರಣೆಯ ನಿಯಮಗಳನ್ನು ಜ್ಯೋತಿಬಾ ಫುಲೆ ರೋಪಿಸಿದರು. ಅವುಗಳಲ್ಲಿ ಕೆಲವು ಸೂತ್ರಗಳು ಇಂತಿವೆ.
೧. ದೇವರಚಿತ ಯಾವ ಗ್ರಂಥವೂ ಇಲ್ಲ
ದೇವ ಶರೀರ ಧಾರಣೆ ಮಾಡಿ ಅವತರಿಸುವುದಿಲ್ಲ
ಪುನರ್ಜನ್ಮ, ಕರ್ಮಕಾಂಡ-ಜಪ-ತಪ ಎಲ್ಲವೂ ಅಜ್ಞಾನ ಜನ್ಯವಾದುವುಗಳು
೨. ಸೃಷ್ಟಿಕರ್ತ ನಿರ್ಮಿಸಿದ ಮಾನವರು ಸರಿಸಮಾನರು
ಯಾರಲ್ಲಿಯೂ ಕೊರತೆ ಇರುವಂತೆ ಮಾಡಿಲ್ಲ ಅವು
ಮನುಜರಲ್ಲಿ ಸೂಕ್ಷ್ಮಮತಿ ಮಂದಮತಿಗಳುಂಟು
ಯಾರಿಗೂ ಪೀಳಿಗೆಯಿಂದ ಪೀಳಿಗೆಗೆ ದೊರೆತಿಲ್ಲ ಗಂಟು
೩. ವಿದ್ಯೆಯಿಲ್ಲದೆ ಮತಿ ಹೋಯಿತು, ಮತಿಯಿಲ್ಲದೆ ನೀತಿ ಹೋಯಿತು
ನೀತಿಯಿಲ್ಲದೆ ಗತಿ ಮುಗಿಯಿತು, ಗತಿ ಮುಗಿದ ನಂತರ ವಿತ್ತವಿಲ್ಲ
ವಿತ್ತವಿಲ್ಲದೆ ಶೂದ್ರರು ಚಡಪಡಿಸಿದರು
ಅವಿದ್ಯೆಯಿಂದ ಅನರ್ಥಕ್ಕೆ ಮಿತಿಯಿರದು
This article uses material from the Wikipedia ಕನ್ನಡ article ಜ್ಯೋತಿಬಾ ಫುಲೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.