ಭಾರತದ ಕರ್ನಾಟಕ ರಾಜ್ಯದ ಪ್ರಸ್ತುತ ಬಾಗಲಕೋಟೆ ಜಿಲ್ಲೆಯಲ್ಲಿನ ಮಲಪ್ರಭಾ ನದಿ ತೀರದಲ್ಲಿ, ೫ ರಿಂದ ೮ನೇ ಶತಮಾನಗಳಲ್ಲಿ ಅಸ್ತಿತ್ವದಲ್ಲಿದ್ದ ಚಾಲುಕ್ಯರ ಆಡಳಿತಾವಧಿಯಲ್ಲಿ ಬದಾಮಿ ಚಾಲುಕ್ಯರ ವಾಸ್ತುಶಿಲ್ಪ ಎಂಬ ದೇಗುಲ ಕಟ್ಟಡ ವಿನ್ಯಾಸ ವಿಕಸನಗೊಂಡಿತು.
ಈ ವಾಸ್ತು ಪ್ರಕಾರವನ್ನು ವೆಸರ ಶೈಲಿ ಮತ್ತು ಚಾಲುಕ್ಯ ಶೈಲಿ ಎಂದಾಗಿಯೂ ಕರೆಯಲಾಗುತ್ತದೆ. ಅದಾಗ್ಯೂ ಈ ಪದವು ೧೧ ಮತ್ತು ೧೨ ನೇ ಶತಮಾನಗಳ ನಂತರದ ಪಾಶ್ಚಾತ್ಯ ಚಾಲುಕ್ಯ ವಾಸ್ತುಶಿಲ್ಪವನ್ನೂ ಒಳಗೊಂಡಿದೆ. ಜಾರ್ಜ್ ಮಿಚೆಲ್ ಮತ್ತು ಇತರರು ಬಳಸಿದ ಆರಂಭಿಕ ಚಾಲುಕ್ಯ ವಾಸ್ತುಶಿಲ್ಪವು ಬಾದಾಮಿ ಚಾಲುಕ್ಯಕ್ಕೆ ಸಮನಾಗಿದೆ. ಬಾದಾಮಿಯ ಚಾಲುಕ್ಯರು ಬನವಾಸಿಯ ಕದಂಬರ ಸಾಮಂತರಾಗಿದ್ದಾಗ ಬಾದಾಮಿ ಚಾಲುಕ್ಯರ ದೇವಾಲಯಗಳು ಕ್ರಿ.ಶ. ೪೫೦ ರ ಐಹೊಳೆಯಲ್ಲಿವೆ . ಇತಿಹಾಸಕಾರ ಕೆ.ವಿ. ಸೌಂದರ್ ರಾಜನ್ ಅವರ ಪ್ರಕಾರ, ಬಾದಾಮಿ ಚಾಲುಕ್ಯರು ದೇವಾಲಯ ನಿರ್ಮಾಣಕ್ಕೆ ನೀಡಿದ ಕೊಡುಗೆಯು ಯುದ್ಧದಲ್ಲಿನ ಅವರ ಶೌರ್ಯ ಮತ್ತು ಸಾಧನೆಗಳಿಗೆ ಸಮನಾಗಿದೆ.
ಸುಮಾರು ಕ್ರಿ.ಶ. ೪೫೦ ರಲ್ಲಿ ಐಹೊಳೆ ಎಂಬಲ್ಲಿ ಚಾಲುಕ್ಯ ಶೈಲಿಯ ಉಗಮವಾಯಿತು ಮತ್ತು ಕರ್ನಾಟಕದ ಬದಾಮಿ ಮತ್ತು ಪಟ್ಟದಕಲ್ಲು ಎಂಬಲ್ಲಿ ಪರಿಪೂರ್ಣವಾಯಿತು. ಕೆಲವು ಅಜ್ಞಾತ ವಾಸ್ತುಶಿಲ್ಪಿಗಳು ಮತ್ತು ಕಲಾವಿದರು, ನಾಗರ ಮತ್ತು ದ್ರಾವಿಡ ಶೈಲಿಗಳ ವಿಭಿನ್ನ ಶೈಲಿಗಳ ಸಂಯೋಜನೆಯ ಮೂಲಕ ಚಾಲುಕ್ಯ ಶೈಲಿಯ ಮೇಲೆ ವಿವಿಧ ಪ್ರಯೋಗಗಳನ್ನೂ ಮಾಡಿದರು.
ಇವರ ವಾಸ್ತುಶಿಲ್ಪ ಶೈಲಿಯಲ್ಲಿ ಎರಡು ಬಗೆಯ ಸ್ಮಾರಕಗಳಿವೆ, ಒಂದು: ಬಂಡೆಗಳನ್ನು ಕತ್ತರಿಸಿದ ಪ್ರಾಂಗಣಗಳು ಅಥವಾ "ಗುಹಾಂತರ ದೇವಾಲಯಗಳು", ಮತ್ತು ಇನ್ನೊಂದು ಭೂಮಿಯ ಮೇಲೆ ನಿರ್ಮಿಸಲಾದ "ರಚನಾತ್ಮಕ" ದೇವಾಲಯಗಳು, .
ಬದಾಮಿ ಗುಹಾಂತರ ದೇವಾಲಯಗಳಲ್ಲಿ ಮೂರು ಬಂಡೆಗಳಲ್ಲಿ ಕೊರೆದಿರುವ ಪ್ರಾಂಗಣಗಳಿದ್ದು, ಇವುಗಳಲ್ಲಿ ಮೂರು ಮೂಲಭೂತ ಲಕ್ಷಣಗಳಿವೆ: ಅವುಗಳೆಂದರೆ, ಅಡ್ಡ ಕಂಬಗಳ ಜಗುಲಿ, ಬಂಡೆಯ ಆಳದವರೆಗೆ ಕೊರೆದು ರೂಪಿಸಲಾದ ಗರ್ಭಗುಡಿ.
ಬಂಡೆಯನ್ನು ಕೊರೆದು ದೇವಸ್ಥಾನಗಳನ್ನು ನಿರ್ಮಿಸುವ ಕಾರ್ಯವನ್ನು ಮೊದಲು ಐಹೊಳೆಯಲ್ಲಿ ಕೈಗೊಳ್ಳಲಾಯಿತು. ಅಲ್ಲಿ ಮೂರು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು. ಈ ಮೂರು ದೇವಾಲಯಗಳೂ ವೈದಿಕ, ಬೌದ್ಧ ಮತ್ತು ಜೈನ ಶೈಲಿಗಳಲ್ಲಿ ನಿರ್ಮಾಣಗೊಂಡಿವೆ. ನಂತರದಲ್ಲಿ ಅವರು ತಮ್ಮ ಶೈಲಿಯನ್ನು ಪರಿಷ್ಕರಿಕೊಂಡು, ಬಾದಾಮಿಯಲ್ಲಿ ನಾಲ್ಕು ಅದ್ಭುತವಾದ ಗುಹಾಂತಹ ದೇವಾಲಯಗಳನ್ನು ನಿರ್ಮಿಸಿದರು. ಈ ಗುಹಾಂತರ ದೇವಾಲಯಗಳಲ್ಲಿನ ಪ್ರತಿ ಸ್ತಂಭದ ಮೇಲೆ ವಿಭಿನ್ನ ಗಣಗಳು ವಿವಿಧ ಮನೋರಂಜನಾ ಭಂಗಿಗಳಲ್ಲಿ ಓಡಾಡುತ್ತಿರುವುದು ಗಮನಾರ್ಹವಾಗಿದೆ.
ಗುಹಾಂತರ ದೇವಾಲಯಗಳ ಹೊರಭಾಗದಲ್ಲಿನ ಜಗುಲಿಗಳು ಸಮತಟ್ಟಾಗಿವೆಯಾದರೂ, ಒಳಾಂಗಣದಲ್ಲಿರುವ ಸಭಾಂಗಣವು ಶ್ರೀಮಂತ ಮತ್ತು ಸಮೃದ್ಧ ಶಿಲ್ಪಕಲೆಯ ಸಂಕೇತಗಳನ್ನು ಒಳಗೊಂಡಿವೆ. ಅವರು ದೈತ್ಯರಂತೆ ಬಂಡೆಗಳನ್ನು ಕೊರೆಯುತ್ತಾರೆ ಆದರೆ ನುರಿತ ಅಕ್ಕಸಾಲಿಗರಂತೆ ಕಲಾ ಮೆರಗು ನೀಡುತ್ತಾರೆ ಎಂದು ಕಲಾ ವಿಮರ್ಶಕರಾದ ಡಾ.ಎಂ.ಶೇಷಾದ್ರಿ ಅವರು ಚಾಲುಕ್ಯ ಕಲೆಯ ಬಗ್ಗೆ ಉಲ್ಲೇಖಿಸಿದ್ದಾರೆ. ವಿಮರ್ಶಕ ಜಿಮ್ಮರ್ ಕೂಡ, ಚಾಲುಕ್ಯರ ಗುಹಾಂತರ ದೇವಾಲಯಗಳು ಸಮತೋಲಿತ ಬಹುಮುಖ ಮತ್ತು ಸಂಯಮ ಸಂಲಗ್ನಲವಾಗಿದೆ ಎಂದು ನಮೂದಿಸಿದ್ದಾರೆ.
ಅತ್ಯುತ್ತಮ ರಚನಾತ್ಮಕ ದೇವಾಲಯಗಳು ಪಟ್ಟದಕಲ್ಲಿನಲ್ಲಿ ಕಂಡುಬರುತ್ತವೆ. ಪಟ್ಟದಕಲ್ಲಿನ ಹತ್ತು ದೇವಾಲಯಗಳಲ್ಲಿ ಆರು ದೇವಾಲಯಗಳು ದ್ರಾವಿಡ ಶೈಲಿಯಲ್ಲಿ ಮತ್ತು ನಾಲ್ಕು ರೇಖಾನಗರ ಶೈಲಿಯಲ್ಲಿವೆ. ವಿರೂಪಾಕ್ಷ ದೇವಾಲಯವು ಹಲವಾರು ವಿಧಗಳಲ್ಲಿ ಕೆಲವು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕಾಂಚೀಪುರದ ಕೈಲಾಸನಾಥ ದೇವಾಲಯವನ್ನು ಹೋಲುತ್ತದೆ.
ಇದು ಸಂಪೂರ್ಣ ಒಳಗೊಂಡ ದೇವಸ್ಥಾನವಾಗಿದ್ದು, ಈ ದೇವಸ್ಥಾನದಲ್ಲಿ ಮಧ್ಯದ ರಚನೆಯಿದೆ, ಮುಂಭಾಗದಲ್ಲಿ ನಂದಿ ಮಂಟಪವಿದೆ ಮತ್ತು ಪ್ರಮುಖ ದ್ವಾರದ ಮೂಲಕ ಪ್ರವೇಶಿಸುವ ಗೋಡೆಯ ಆವರಣವಿದೆ. ಮುಖ್ಯ ಗರ್ಭಗುಡಿಯಲ್ಲಿ ಪ್ರದಕ್ಷಿಣಪಥ ಮತ್ತು ಮಂಟಪವಿದೆ . ಮಂಟಪವು ಕಂಬಗಳಿಂದ ಕೂಡಿದ್ದು ರಂಧ್ರಗಳಂತಹ ಕಿಟಕಿಗಳನ್ನು ಹೊಂದಿದೆ (ಛೇದಿಸಲಾದ ಕಿಟಕಿ ಪರದೆ). ಹೊರ ಗೋಡೆಯ ಮೇಲ್ಮೈಯನ್ನು ಸಮನಾದ ಚೌಕಟ್ಟುಗಲಿಂದ ಸಿಂಗರಿಸಿ, ಕೆತ್ತನೆಗಳು ಅಥವಾ ರಂಧ್ರಗಳಂತಹ ಕಿಟಕಿಗಳಿಂದ ತುಂಬಿದ ಉತ್ತಮ ಅಲಂಕಾರಿಕ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ನಿರಂತರ ಹರಿಯುವ ನೀರಿನಂತೆ ಇಲ್ಲಿನ ವಾಸ್ತುಶಿಲ್ಪವು ನಿರಂತರವಾಗಿ ಹರಿಯುತ್ತಿರುತ್ತದೆ ಎಂದು ಕಲಾ ವಿಮರ್ಶಕ ಪರ್ಸಿ ಬ್ರೌನ್ ಉಲ್ಲೇಖಿಸಿದ್ದಾರೆ. ಇದನ್ನು ನಿರ್ಮಿಸಿದ ಜೀವಗಳು, ಇನ್ನೂ ಇಲ್ಲಿ ಜೀವ ಚೈತನ್ಯದೊಂದಿಗೆ ನೆಲೆಸಿವೆ ಎಂಬಂತೆ ಗೋಚರಿಸುವ ಸ್ಮಾರಕಗಳಲ್ಲಿ ವಿರೂಪಾಕ್ಷ ದೇವಸ್ಥಾನವೂ ಒಂದು ಎನ್ನಲಾಗುತ್ತದೆ.
ಹಲವು ಶತಮಾನಗಳ ನಂತರ, ಬಾದಾಮಿ ಚಾಲುಕ್ಯರ ಪ್ರಶಾಂತ ಕಲೆಯು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದಲ್ಲಿ ಪುನಃ ಸ್ತಂಭಗಳ ರೂಪದಲ್ಲಿ ಕಾಣಿಸಿಕೊಂಡಿತು. ಇವರು ನಿರ್ಮಿಸಿದ ಗುಹೆಗಳಲ್ಲಿ ನುಣುಪಾಗಿ ಕೆತ್ತಿದ ಹರಿಹರ, ತ್ರಿವಿಕ್ರಮ, ಮಹಿಷ ಮರ್ದಿನಿ, ತಾಂಡವಮೂರ್ತಿ, ಪರವಸುದೇವ, ನಟರಾಜ, ವರಾಹ, ಗೊಮ್ಮಟೇಶ್ವರ ಮತ್ತು ಇನ್ನಿತರ ಶಿಲ್ಪಗಳೂ ಸೇರಿವೆ. ಸಾಕಷ್ಟು ಪ್ರಾಣಿ ಮತ್ತು ಎಲೆಗಳ ಗೊಂಚಲಿನ ಲಕ್ಷಣಗಳನ್ನು ಸಹ ಸೇರಿಸಲಾಗಿದೆ.
ಅವರ ಕಾಲದ ಕೆಲವು ಪ್ರಮುಖ ಶಿಲ್ಪಿಗಳು ಗುಂಡನ್ ಅನಿವಾರಿತಾಚಾರಿ, ರೇವಡಿ ಓವಜ್ಜ ಮತ್ತು ನರಸೊಬ್ಬ.
ಪಟ್ಟದಕಲ್ಲು
ಗೇರುಸೊಪ್ಪ
ಸಂಡೂರು
ಆಲಂಪುರ್, ಆಂಧ್ರಪ್ರದೇಶ
This article uses material from the Wikipedia ಕನ್ನಡ article ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.