ಅಡೋಲ್ಫ್ ಹಿಟ್ಲರ್

ಅಡಾಲ್ಫ್ ಹಿಟ್ಲರ್ , (೨೦ ಏಪ್ರಿಲ್ ೧೮೮೯ - ೩೦ ಏಪ್ರಿಲ್ ೧೯೪೫) ಆಸ್ಟ್ರಿಯಾದಲ್ಲಿ ಜನಿಸಿದ ಜರ್ಮನ್ ರಾಜಕಾರಣಿ ಹಾಗೂ ನಾಜಿ ಪಕ್ಷವೆಂದೇ ಖ್ಯಾತವಾದ ನ್ಯಾಶನಲ್ ಸೋಶಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿಯ (ಸಂಕ್ಷಿಪ್ತ ರೂಪ NSDAP) ನೇತಾರನಾಗಿದ್ದವನು.

ಈತನು ೧೯೩೩ರಿಂದ ೧೯೪೫ರ ವರೆಗೆ ಜರ್ಮನಿಯನ್ನು ಆಳಿದನು. ೧೯೩೩ರಿಂದ ೧೯೪೫ರವರೆಗೆ ಚಾನ್ಸೆಲರ್ ಆಗಿ ಹಾಗೂ ೧೯೩೪ರಿಂದ ೧೯೪೫ರವರೆಗೆ ರಾಷ್ಟ್ರದ ಮುಖ್ಯಸ್ಥನಾಗಿ ಆಡಳಿತ ನಡೆಸಿದನು. ಮೊದಲನೇ ವಿಶ್ವಯುದ್ಧದ ಅನುಭವದಲ್ಲಿ ಪಳಗಿದ್ದ ಹಿಟ್ಲರನು ೧೯೧೯ರಲ್ಲಿ ನಾಝಿ ಪಕ್ಷವನ್ನು ಸೇರಿಕೊಂಡನು ಮತ್ತು ೧೯೨೧ರಲ್ಲಿ NSDAPಯ ಅಧ್ಯಕ್ಷನಾದನು.೧೯೨೩ರಲ್ಲಿ ಗುರಿತಲುಪಲು ವಿಫಲನಾಗಿ ಬವೇರಿಯಾದಲ್ಲಿ ಬಂಧನಕ್ಕೊಳಗಾದ ಅನಂತರದ ದಿನಗಳಲ್ಲಿ ಆತನು, ಜರ್ಮನ್ ರಾಷ್ಟ್ರೀಯವಾದ, ಸೆಮಿಟಿಸಮ್ ವಿರೋಧಿ ನಿಲುವು, ಹಾಗೂ ಕಮ್ಯುನಿಸಮ್ ವಿರೋಧೀ ನಿಲುವುಗಳನ್ನು ರಮಣೀಯವಾಗಿ ನಿರೂಪಿಸುತ್ತ, ತನ್ನ ಮಾತುಗಾರಿಕೆ ಹಾಗೂ ಪ್ರಚಾರ ಕಾರ್ಯಗಳಿಂದ ಜನಬೆಂಬಲ ಗಳಿಸಿಕೊಂಡನು.ಆತನು ೧೯೩೩ರಲ್ಲಿ ಚಾನ್ಸೆಲರ್ ಆಗಿ ನೇಮಕೊಂಡು, ಅತ್ಯಲ್ಪಾವಧಿಯಲ್ಲಿಯೇ ರಾಷ್ಟ್ರೀಯ ಸಮಾಜವಾದದ ಸಂಪೂರ್ಣಾಧಿಕಾರ ಹಾಗೂ ನಿರಂಕುಶ ಪ್ರಭುತ್ವ ಗಳ ಬಲದಿಂದ ಏಕಪಕ್ಷೀಯ ಸರ್ವಾಧಿಕಾರವನ್ನು ಸ್ಥಾಪಿಸಿದನು. ಹಿಟ್ಲರನು ಆರ್ಯಜನಾಂಗೀಯರಿಗಾಗಿ ಲೇಬನ್ಸ್ರಾವ್ಮ್ (``ಬದುಕುವ ಅವಕಾಶ") ಕಿತ್ತುಕೊಳ್ಳುವ ಘೋಷಿತ ಉದ್ದೇಶದ ವಿದೇಶೀನೀತಿಯನ್ನು ಬೆನ್ನತ್ತಿದನು ಮತ್ತು ರಾಷ್ಟ್ರದ ಸಂಪನ್ಮೂಲಗಳನ್ನು ಈ ಉದ್ದೇಶದತ್ತ ತಿರುಗಿಸಿಕೊಂಡನು. ಹಿಟ್ಲರನು ಜರ್ಮನಿಯನ್ನು ಯುದ್ಧಸನ್ನದ್ಧಗೊಳಿಸಿದನು, ಮತ್ತು ೧೯೩೯ರಲ್ಲಿ ಜರ್ಮನ್ ಸೇನೆಯು (ವೆಹ್ರ್‌ಮ್ಯಾಚ್) ಪೋಲ್ಯಾಂಡ್ ಮೇಲೆ ಆಕ್ರಮಣ ಮಾಡುವ ಮೂಲಕ ಯುನೈಟೆಡ್ ಕಿಂಗ್ ಡಮ್ ಹಾಗೂ ಫ್ರಾನ್ಸ್ಗಳು ನಾಝಿ ಜರ್ಮನಿಯ (ಥರ್ಡ್ ರೀಚ್) ವಿರುದ್ಧ ಯುದ್ಧ ಘೋಷಿಸುವಂತಾಗಿ, ಈ ಘಟನೆಯು ಯುರೋಪಿನಲ್ಲಿ ಎರಡನೆ ಮಹಾಯುದ್ಧಕ್ಕೆ ದಾರಿ ಮಾಡಿಕೊಟ್ಟಿತು. ಮೂರು ವರ್ಷಗಳೊಳಗಾಗಿ ಜರ್ಮನಿ ಮತ್ತು ಆಕ್ಸಿಸ್ ಶಕ್ತಿಗಳು (ಮಿಲಿಟರಿ ಒಪ್ಪಂದ ಮಾಡಿಕೊಂಡಿದ್ದ ರಾಷ್ಟ್ರಗಳು) ಯುರೋಪಿನ ಬಹುಭಾಗವನ್ನು, ಉತ್ತರ ಆಫ್ರಿಕಾದ ಬಹುಭಾಗವನ್ನು ಹಾಗೂ ಪೂರ್ವ ಮತ್ತು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಸಮುದ್ರವನ್ನು ಆಕ್ರಮಿಸಿದವು.೧೯೪೨ರ ಅನಂತರದ ದಿನಗಳಲ್ಲಿ ಮಿತ್ರ ರಾಷ್ಟ್ರಗಳು ಮೇಲುಗೈ ಸಾಧಿಸತೊಡಗಿದ್ದವು ಮತ್ತು ೧೯೪೫ರಲ್ಲಿ ಮಿತ್ರ ರಾಷ್ಟ್ರಗಳ ಸೇನೆಗಳು ಜರ್ಮನಿಯನ್ನು ಎಲ್ಲ ದಿಕ್ಕುಗಳಿಂದಲೂ ಮುತ್ತಿಗೆ ಹಾಕಿದವು. ಆತನ ಸೇನೆಯು ಯುದ್ಧ ಸಂದರ್ಭದಲ್ಲಿ ಸುಮಾರು 1.7 ಕೋಟಿ ನಾಗರಿಕರನ್ನು, ಅವರಲ್ಲಿ ಅಂದಾಜಿನ ಪ್ರಕಾರ ಆರು ಮಿಲಿಯನ್ ಯಹೂದಿಗಳನ್ನು, ಹಾಲೋಕ್ಯಾಸ್ಟ್ ಎಂದು ಕುಖ್ಯಾತವಾದ ಯೋಜಿತ ನರಮೇಧದ ಮೂಲಕ ವ್ಯವಸ್ಥಿತವಾಗಿ ಕೊಲ್ಲುವುದು ಮತ್ತಿತರ ಹಲವು ಬಗೆಯ ದೌರ್ಜನ್ಯಗಳನ್ನು ಎಸಗಿತ್ತು. ೧೯೪೫ರಲ್ಲಿ, ಯುದ್ಧದ ಕೊನೆಯ ದಿನಗಳಲ್ಲಿ ಹಿಟ್ಲರನು ತನ್ನ ದೀರ್ಘಕಾಲದ ಪ್ರೇಯಸಿ ಎವಾ ಬ್ರೌನ್ ಳನ್ನು ವಿವಾಹವಾದನು.ಅನಂತರ ಎರಡು ದಿನಗಳೊಳಗಾಗಿ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡರು.

ಅಡೋಲ್ಫ್ ಹಿಟ್ಲರ್
ಅಡೋಲ್ಫ್ ಹಿಟ್ಲರ್

೧೯೩೪ ಭಾವಚಿತ್ರ


ಜರ್ಮನಿಯ ಫ್ಯೂರರ್
ಅಧಿಕಾರದ ಅವಧಿ
೨ ಆಗಸ್ಟ್ ೧೯೩೪ – ೩೦ ಏಪ್ರಿಲ್ ೧೯೪೫
ಪೂರ್ವಾಧಿಕಾರಿ ಪಾಲ್ ವಾನ್ ಹಿಂಡೆನ್ಬರ್ಗ್
(ಅಧ್ಯಕ್ಷರಾಗಿ)
ಉತ್ತರಾಧಿಕಾರಿ ಕಾರ್ಲ್ ಡೋನಿಟ್ಜ್
(ಅಧ್ಯಕ್ಷರಾಗಿ)

ರೀಚ್ಸ್ಕಾಂಜ್ಲರ್ (ಚಾನ್ಸೆಲರ್)
ಅಧಿಕಾರದ ಅವಧಿ
೩೦ ಜನವರಿ ೧೯೩೩ – ೩೦ ಏಪ್ರಿಲ್ ೧೯೪೫
ಪೂರ್ವಾಧಿಕಾರಿ ಕರ್ಟ್ ವಾನ್ ಷ್ಲೀಚರ್
ಉತ್ತರಾಧಿಕಾರಿ ಜೋಸೆಫ್ ಗೋಬೆಲ್ಸ್

ಜನನ ೨೦ ಏಪ್ರಿಲ್ ೧೮೮೯
ಬ್ರೌನೌ ಆಮ್ ಇನ್, ಆಸ್ಟ್ರಿಯಾ- ಹಂಗೇರಿ
ಮರಣ 30 April 1945(1945-04-30) (aged 56)
ಬರ್ಲಿನ್, ಜರ್ಮನಿ
ರಾಜಕೀಯ ಪಕ್ಷ ರಾಷ್ಟ್ರೀಯ ಸಮಾಜವಾದಿ ಜರ್ಮನ್ ವರ್ಕರ್ಸ್ ಪಾರ್ಟಿ (NSDAP)
ಜೀವನಸಂಗಾತಿ ಇವಾ ಬ್ರೌನ್
(೨೯ ಏಪ್ರಿಲ್ ೧೯೪೫ ರಂದು ವಿವಾಹವಾದರು)
ಹಸ್ತಾಕ್ಷರ ಅಡೋಲ್ಫ್ ಹಿಟ್ಲರ್

ಆರಂಭದ ದಿನಗಳು

ಪೂರ್ವಜರು

ಹಿಟ್ಲರನ ತಂದೆ ಅಲೋಯಿಸ್ ಹಿಟ್ಲರ್ ಅನೈತಿಕ ಸಂಬಂಧದಿಂದ ಜನಿಸಿದ್ದ ಶಿಶುವಾಗಿದ್ದು, ತಮ್ಮ ೩೯ನೇ ವಯಸ್ಸಿನವರೆಗೆ ಶಿಕ್ಲ್ ಗ್ರುಬರ್ ಎಂಬ ತಾಯಿಯ ಅಡ್ಡ ಹೆಸರನ್ನೇ ಹೊಂದಿದ್ದರು. ಅಲೋಯಿಸ್‌ರ ಜನನ ಪ್ರಮಾಣಪತ್ರದಲ್ಲಿ ಪಿತೃತ್ವವನ್ನು ನಮೂದಿಸದೆ ಇದ್ದುದು ಬಹಳಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿತ್ತು.ಹಿಟ್ಲರನ ಸೋದರಳಿಯ ವಿಲಿಯಮ್ ಪ್ಯಾಟ್ರಿಕ್ ಹಿಟ್ಲರ್ ನಿಂದ ಹಿಟ್ಲರನ ವಂಶವೃಕ್ಷದ ವಿವಾದಾತ್ಮಕ ಮಾಹಿತಿಯನ್ನು ರಟ್ಟುಮಾಡುವುದಾಗಿ ಬೆದರಿಸಿದ್ದ ಬ್ಲ್ಯಾಕ್ ಮೇಲ್ ಪತ್ರವನ್ನು ಪಡೆದನಂತರ ನಾಝಿ ಪಕ್ಷದ ವಕೀಲ ಹಾನ್ಸ್ ಫ್ರಾಂಕ್ ಅದರ ಕುರಿತು ಸಂಶೋಧನೆ ನಡೆಸಿದರು ಮತ್ತು ಶಿಕ್ಲ್ ಗ್ರುಬರ್‌ರವರು ಗ್ರಾಜ್ ನಲ್ಲಿ ಯಹೂದಿ ಮನೆತನವೊಂದರಲ್ಲಿ ಕೆಲಸದಾಳಾಗಿದ್ದು, ಆ ಮನೆಯ ಹತ್ತೊಂಭತ್ತು ವರ್ಷದ ಮಗ ಲಿಯೋಪೋಲ್ಡ್ ಫ್ರಾಂಕನ್ ಬರ್ಗರ್‌ನಿಂದ ಅಲೋಯಿಸ್‌ನನ್ನು ಪಡೆದಳು ಎಂಬ ಸಂಗತಿಯನ್ನು ಆ ಪತ್ರಗಳು ಬಯಲು ಮಾಡಿದ್ದವೆಂದು ತಮ್ಮ ನೆನಪುಗಳಲ್ಲಿ ದಾಖಲಿಸಿದ್ದಾರೆ. ಫ್ರಾಂಕ್ ಅವರ ಹೇಳಿಕೆಯನ್ನು ಬೆಂಬಲಿಸುವ ಯಾವ ಸಾಕ್ಷಿಗಳೂ ಈವರೆಗೆ ದೊರೆತಿಲ್ಲ ಮತ್ತು ಸ್ವತಃ ಫ್ರಾಂಕರೇ ಹಿಟ್ಲರನು ಸಂಪೂರ್ಣ ಆರ್ಯರಕ್ತದವನೆಂಬುದು ಸುಸ್ಪಷ್ಟವೆಂದು ಹೇಳಿದ್ದರು. ಫ್ರಾಂಕ್‌ರ ಹೇಳಿಕೆಗಳು ೧೯೫೦ರ ಅವಧಿಯಲ್ಲಿ ವ್ಯಾಪಕ ನಂಬಿಕೆ ಗಳಿಸಿತ್ತು. ಆದರೆ, ೧೯೯೦ರ ವೇಳೆಗೆ ಇತಿಹಾಸಕಾರರು ಈ ಕುರಿತು ವ್ಯಾಪಕವಾಗಿ ಸಂಶಯ ವ್ಯಕ್ತಪಡಿಸಿದರು. ಇಯಾನ್ ಕೆರ್ಶಾರವರ ಫ್ರಾಂಕೆನ್ ಬರ್ಗರ್‌ರವರ ಕಥೆಗಳನ್ನು ನಿರಾಕರಿಸಿದರು ಮತ್ತು ಅದು ಹಿಟ್ಲರನ ಶತ್ರುಗಳಿಂದ ಹೆಣೆಯಲ್ಪಟ್ಟುದೆಂದು ವಾದಿಸುತ್ತ, ೧೫ನೇ ಶತಮಾನದ ವೇಳೆಗಾಗಲೇ ಗ್ರಾಝ್‌ನಿಂದ ಎಲ್ಲ ಯಹೂದ್ಯರನ್ನು ಉಚ್ಚಾಟಿಸಲಾಗಿತ್ತೆಂದೂ, ಅವರಿಗೆ ಅಲೋಯಿಸ್‌ನ ಜನನದ ನಂತರವೂ ಅಲ್ಲಿಗೆ ಹಿಂದಿರುಗಲು ಅವಕಾಶ ಕೊಡಲಾಗಿರಲಿಲ್ಲವೆಂಬುದನ್ನೂ ಎತ್ತಿತೋರಿಸಿದರು. ಹೆಚ್ಚಿನ ವಿವರಕ್ಕಾಗಿ ನೋಡಿ, ಲಿಯೋಪೋಲ್ಡ್ ಫ್ರಾಂಕೆನ್ ಬರ್ಗರ್) ೧೮೭೬ರಲ್ಲಿ ಅಲೋಯಿಸ್ ತನ್ನ ಮಲತಂದೆ ಜೊಹಾನ್ ಜಾರ್ಜ್ ಹೀಡ್ಲರ್ರ ಅಡ್ಡಹೆಸರನ್ನು ಇರಿಸಿಕೊಂಡರು. ಇದನ್ನು ಹೀಡ್ಲರ್ (Hiedler ), ಹ್ಯುಟ್ಲರ್ (Huttler ), ಹ್ಯುಯೆಟ್ಲರ್ (Huettler ) ಹಾಗೂ ಹಿಟ್ಲರ್ (Hitler ) ಎಂದೂ ಉಚ್ಚರಿಸಲಾಗುತ್ತದೆ. ಬಹುಶಃ ಗುಮಾಸ್ತನೊಬ್ಬನಿಂದ ಹಿಟ್ಲರ್ ಎಂಬ ಹೆಸರೇ ರೂಢಿಗತವಾಗಿರಬಹುದು. ಈ ಹೆಸರಿನ ಮೂಲ “ಗುಡಿಸಿಲಲ್ಲಿ ವಾಸಿಸುವವನು’ ( ಜರ್ಮನಿಯ ಹ್ಯೂಟ್‌ ನಲ್ಲಿ) ಎಂದಿರಬಹುದು ಅಥವಾ “ಕಾಯುವವನು" (ಶೆಫರ್ಡ್- ಜರ್ಮನಿಯ ಹ್ಯೂಟೆನ್ , ಇಂಗ್ಲೀಷಿನಲ್ಲಿ ಹೀಡ್ ), ಅಥವಾ ಅದು ಗುಲಾಮ ಸೂಚಕ ಪದ ಹಿಡ್ಲರ್ ಮತ್ತು ಹಿಡ್ಲರ್ಚೆಕ್ ಆಗಿರಬಹುದು.(ಮೊದಲೆರಡು ವಾದಗಳಿಗೆ ಸಂಬಂಧಿಸಿದಂತೆ, ಕೆಲವು ಜರ್ಮನ್ ಪ್ರಾಂತ ಭಾಷೆಗಳಲ್ಲಿ u ಹಾಗೂ i ಉಚ್ಚಾರಣೆಗಳ ನಡುವೆ ಅತ್ಯಲ್ಪ ಅಥವಾ ಯಾವುದೇ ವ್ಯತ್ಯಾಸ ತೋರಿಬರುವುದಿಲ್ಲ.)

ಬಾಲ್ಯ

ಅಡಾಲ್ಫ್ ಹಿಟ್ಲರ್ ಜನಿಸಿದ್ದು ಆಸ್ಟ್ರಿಯಾ-ಹಂಗೆರಿಯ ಗಸ್ತೋಫ್ ಝುಮ್ ಪೋಮ್ಮರ್‌ನ ಛತ್ರ ಬ್ರೌನೌ ಆಮ್ ಇನ್‌ನಲ್ಲಿ, ಅಲೋಯಿಸ್ ಹಾಗೂ ಕ್ಲಾರಾ ಹಿಟ್ಲರರ ಆರು ಮಕ್ಕಳಲ್ಲಿ ನಾಲ್ಕನೆಯವನಾಗಿ.

ಅಡೋಲ್ಫ್ ಹಿಟ್ಲರ್ 
ಶಿಶುವಾಗಿದ್ದಾಗ ಅಡಾಲ್ಫ್ ಹಿಟ್ಲರ್

ಮೂರನೇ ವಯಸ್ಸಿನವನಿರುವಾಗ ಆತನ ಕುಟುಂಬವು ಜರ್ಮನಿಯ ಪಸ್ಸೌ ನ ಕಪುಝಿನರ್ಸ್ಟ್ರಾಸೆಸ್ ೫ಕ್ಕೆ ವರ್ಗಾವಣೆಗೊಂಡಿತು. ಇಲ್ಲಿ ಬಾಲಕ ಹಿಟ್ಲರನು ಆಸ್ಟ್ರಿಯಾ ಭಾಷೆಗಿಂತ ಹೆಚ್ಚಾಗಿ, ಜೀವಮಾನ ಪರ್ಯಂತ ಬಳಸಿದ ಕೆಳ ಬವೇರಿಯಾದ ಪ್ರಾಂತೀಯ ಭಾಷಾ ಶೈಲಿಯನ್ನು ರೂಢಿಸಿಕೊಂಡನು. ೧೮೯೪ರಲ್ಲಿ ಅವನ ಕುಟುಂಬವು ಲಿಂಝ್ ಬಳಿಯ ಲಿಯೋಂಡಿಂಗ್‌ಗೆ ಬಂದಿತು. ಮುಂದೆ ೧೮೯೫ರ ಜೂನ್ ತಿಂಗಳಲ್ಲಿ ಅಲೋಯಿಸ್ ಲ್ಯಾಂಬಶ್ ಸಮೀಪದ ಹ್ಯಾಫೆಲ್ಡ್‌ನಲ್ಲಿ ಒಂದು ಚಿಕ್ಕ ಭೂಮಿಯನ್ನು ಕೊಂಡು, ಕೃಷಿ ಹಾಗೂ ಜೇನು ಸಾಕಣೆಗೆ ಪ್ರಯತ್ನಿಸಿದನು. ಈ ಅವಧಿಯಲ್ಲಿ ಬಾಲಕ ಹಿಟ್ಲರ್, ಫಿಸ್ಚ್ಲ್ ಹ್ಯಾಮ್‌ನ ಶಾಲೆಗೆ ಹೋಗುತ್ತಿದ್ದನು. ಆ ದಿನಗಳಲ್ಲಿ ಅವನು ಅತ್ಯಂತ ಸಂತುಷ್ಟನಾದ, ಮುಕ್ತನಾದ, ಮನದಣಿಯೆ ‘ಕೌಬಾಯ್ಸ್ ಅಂಡ್ ಇಂಡಿಯನ್ಸ್" ಆಟವಾಡಿಕೊಂಡಿದ್ದ ಹುಡುಗನಾಗಿದ್ದನು. ಆತನೇ ಹೇಳಿಕೊಂಡಿರುವಂತೆ, ತನ್ನ ತಂದೆಯ ವಸ್ತುಗಳ ಮಧ್ಯದಲ್ಲಿದ್ದ ಫ್ರಾಂಕೋ-ಪ್ರೂಶಿಯನ್ ಯುದ್ಧದ ಚಿತ್ರಗಳಿಂದ ಕೂಡಿದ ಪುಸ್ತಕವನ್ನು ನೋಡಿದ ಅನಂತರದಿಂದ ಯುದ್ಧದೆಡೆಗೆ ಆಕರ್ಷಿತನಾದನು. ಈ ಬಗ್ಗೆ ಹಿಟ್ಲರನು ತನ್ನ ‘ಮೈನ್ ಕಾಂಫ್’ ಪುಸ್ತಕದಲ್ಲಿ ಬರೆದುಕೊಂಡಿರುವುದು ಹೀಗೆ: “ಅತಿ ಮಹತ್ವದ ಐತಿಹಾಸಿಕ ಸಂಘರ್ಷವು ನನಗೆ ಅತ್ಯುನ್ನತ ಆಧ್ಯಾತ್ಮಿಕ ಅನುಭೂತಿಯನ್ನೊದಗಿಸಿಕೊಟ್ಟು ಬಹಳ ಸಮಯವಾಗಿರಲಿಲ್ಲ.ಅಂದಿನಿಂದ ಮುಂದೆ ನಾನು ಯುದ್ಧಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿದ ವಿಷಯದ ಬಗ್ಗೆ ಅತೀ ಕಾಳಜಿಯ ಜೊತೆಗೆ ಹೆಚ್ಚೆಚ್ಚು ಆಸಕ್ತನಾಗುತ್ತ ನಡೆದೆ."

ಹ್ಯಾಫೆಲ್ಡ‌ನಲ್ಲಿ ಅವನ ತಂದೆಯ ಪ್ರಯತ್ನಗಳು ವಿಫಲಗೊಂಡವು ಮತ್ತು ಅವನ ಕುಟುಂಬವು ೧೮೯೭ರಲ್ಲಿ ಲ್ಯಾಂಬಶ್‌ಗೆ ನಡೆಯಿತು. ಅಲ್ಲಿ ಹಿಟ್ಲರನು ೧೧ನೇ ಶತಮಾನದಲ್ಲಿ ಬೆನೆಡಿಕ್ಟೈನ್ ಕ್ಲೋಯ್‌ಸ್ಟರ್‌ನಲ್ಲಿದ್ದ ಕ್ಯಾಥೊಲಿಕ್ ಶಾಲೆಗೆ ಹೋಗತೊಡಗಿದನು. ಈ ಕಟ್ಟಡದ ಗೋಡೆಗಳ ಮೇಲೆ ಬಹಳ ಕಡೆಗಳಲ್ಲಿ ಸ್ವಸ್ತಿಕ್ ಚಿಹ್ನೆಗಳು ಕೆತ್ತಲ್ಪಟ್ಟಿದ್ದವು. ೧೮೯೮ರಲ್ಲಿ ಈ ಕುಟುಂಬವು ಲಿಯೋಂಡಿಂಗ್‌ನಲ್ಲಿ ಶಾಶ್ವತವಾಗಿ ನೆಲೆಯೂರಿತು. ೧೮೯೮ರಲ್ಲಿ ಈ ಕುಟುಂಬವು ಶಾಶ್ವತವಾಗಿ ಲಿಯೊಂಡಿಂಗ್. ಆತನ ಕಿರಿಯ ಸಹೋದರ ಎಡ್ಮಂಡ್, ಫೆಬ್ರವರಿ 2,1900ರಲ್ಲಿ ದಡಾರದಿಂದಾಗಿ ಮೃತನಾದನು. ಇದು ಹಿಟ್ಲರನ ಮೇಲೆ ಪರಿಣಾಮ ಬೀರಿ ಆತನಲ್ಲಿ ಕೆಲವು ಶಾಶ್ವತ ಬದಲಾವಣೆಗಳಿಗೆ ನಾಂದಿಯಾಯಿತು. ಹೊರಗೆ ಆಡಿಕೊಂಡಿರುತ್ತಿದ್ದ, ಶಾಲೆಯ ಕಲಿಕೆಯು ಸುಲಭವಾಗಿದ್ದ, ಆತ್ಮವಿಶ್ವಾಸದಿಂದಿದ್ದ ಹುಡುಗನು, ಕ್ರಮೇಣ ವಿಷಣ್ಣನಾದ, ಏಕಾಂಗಿಯಾದ, ಸದಾ ತಂದೆ ಹಾಗೂ ಅಧ್ಯಾಪಕರೊಂದಿಗೆ ಜಗಳಾಡುವ ಮುಖಗಂಟಿಕ್ಕಿದ ಹುಡುಗನಾಗಿ ಬದಲಾದನು. ಹಿಟ್ಲರನು ತನ್ನ ತಾಯಿಯೊಂದಿಗೆ ಹೆಚ್ಚು ಸಲಿಗೆಯಿಂದಿದ್ದನು. ಆದರೆ ಸಾಂಪ್ರದಾಯಿಕ ಮನೋಭಾವದ, ದರ್ಪ ಬುದ್ಧಿಯ ತಂದೆಯೊಂದಿಗೆ ಆತನ ಸಂಬಂಧವು ಬಿಗಡಾಯಿಸುತ್ತಿತ್ತು. ಅದರಲ್ಲೂ ಅಲೋಯಿಸ್ ನಿವೃತ್ತನಾಗಿ, ಕೃಷಿಯಲ್ಲಿನ ಆತನ ಪ್ರಯತ್ನಗಳು ವಿಫಲಗೊಂಡ ನಂತರವಂತೂ ಹಿಟ್ಲರ್‌ನನ್ನು ಪ್ರತಿಯೊಂದಕ್ಕೂ ಹೊಡೆದು ದಂಡಿಸುತ್ತಿದ್ದನು. ಅಲೋಯಿಸ್, ಹಿಟ್ಲರನು ಆಸ್ಟ್ರಿಯನ್ ಔಪಚಾರಿಕ ರಿವಾಜಿನಂತೆ, ತನ್ನ ಹೆಜ್ಜೆಯನ್ನು ಅನುಸರಿಸಬೇಕೆಂದು ಬಯಸುತ್ತಿದ್ದುದು ಅವರ ನಡುವಿನ ಸಂಘರ್ಷಕ್ಕೆ ಅತಿದೊಡ್ಡ ಕಾರಣವಾಗಿ ಪರಿಣಮಿಸಿತು. ಮಗನು ಕ್ಲಾಸಿಕಲ್ ಹೈಸ್ಕೂಲಿನಲ್ಲಿ ಅಧ್ಯಯನ ನಡೆಸಿ ಕಲಾವಿದನಾಗಲು ಬಯಸಿದರೆ, ಅವನ ತಂದೆಯು ಅದಕ್ಕೆ ಅನುವು ಮಾಡಿಕೊಡದೆ ಆತನನ್ನು ೧೯೦೦ರ ಸೆಪ್ಟೆಂಬರ್ ತಿಂಗಳಿನಲ್ಲಿ ಲಿಂಝ್ ನಗರದ ಟೆಕ್ನಿಕಲ್ ಹೈಸ್ಕೂಲಿಗೆ ಕಳುಹಿಸಿದನು. ಹಿಟ್ಲರನು ಇದರ ವಿರುದ್ಧ ತಿರುಗಿಬಿದ್ದನು. ತನ್ನ ಮೈನ್ ಕಾಂಫ್ ಪುಸ್ತಕದಲ್ಲಿ ಅವನು, “ನಾನು ಟೆಕ್ನಿಕಲ್ ಸ್ಕೂಲಿನಲ್ಲಿ ಸ್ವಲ್ಪ ಪ್ರಗತಿ ತೋರಿಸಿದರೂ ಸಾಕು, ತಂದೆಯು ತಾನು ಕಂಡ ಕನಸಿನಲ್ಲೇ ನನ್ನನ್ನು ಶರಣಾಗತನಾಗುವಂತೆ ಹಾಗೆ ಮಾಡುತ್ತಿದ್ದ" ಎಂದು ತನ್ನ ಮೊದಲ ವರ್ಷದಲ್ಲಿ ಅನುತ್ತೀರ್ಣನಾಗಿದ್ದುದರ ಬಗ್ಗೆ ಹೇಳಿಕೊಂಡಿದ್ದಾನೆ. ಆದರೆ ಅಲೋಯಿಸ್ ಯಾವತ್ತೂ ಹಿಟ್ಲರನಲ್ಲಿ ಕರುಣೆ ತೋರಲೇ ಇಲ್ಲ. ಇದರಿಂದ ಆತನು ಮತ್ತಷ್ಟು ಕಹಿಯನ್ನು ಬೆಳೆಸಿಕೊಳ್ಳುತ್ತಾ ಬಂಡುಕೋರನಾಗುತ್ತ ಬೆಳೆದನು.

ಯುವ ಹಿಟ್ಲರನಿಗೆ ಜರ್ಮನ್ ರಾಷ್ಟ್ರೀಯತಾವಾದವು ಬಹುಬೇಗನೆ ಒಂದು ಗೀಳಾಗಿ ಹಿಡಿದುಕೊಂಡಿತು ಮತ್ತು ಅದು, ಆಸ್ಟ್ರಿಯಾದ ಸರ್ಕಾರಕ್ಕೆ ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದ ತನ್ನ ತಂದೆಯ ವಿರುದ್ಧ ಬಂಡೇಳುವ ಮಾರ್ಗವಾಗಿ ಅವನಿಗೆ ಕಂಡುಬಂತು. ಜರ್ಮನಿ- ಆಸ್ಟ್ರಿಯಾ ಗಡಿಯಲ್ಲಿ ವಾಸಿಸಿದ್ದ ಬಹುತೇಕ ಜನರು ತಮ್ಮನ್ನು ಜರ್ಮನ್-ಆಸ್ಟ್ರಿಯನ್ನರೆಂದೇ ಭಾವಿಸಿಕೊಂಡಿದ್ದರು. ಆದರೆ ಹಿಟ್ಲರ್‌ನು ಜರ್ಮನಿಗೆ ಮಾತ್ರ ತನ್ನ ನಿಷ್ಠೆಯನ್ನು ತೋರಿಸುತ್ತಿದ್ದನು. ಆಸ್ಟ್ರಿಯನ್ ಏಕಾಧಿಪತ್ಯದ ವಿರುದ್ಧ ಹಾಗೂ ತನ್ನ ತಂದೆಯು ಅದಕ್ಕೆ ತೋರುತ್ತಿದ್ದ ನಿರಂತರ ನಿಷ್ಠೆಗೆ ಪ್ರತಿಯಾಗಿ ಹಿಟ್ಲರ್ ಮತ್ತವನ ಯುವ ಸ್ನೇಹಿತರು ಜರ್ಮನ್ ಸ್ವಾಗತ ಸೂಚಕ ಪದವಾದ ‘ಹೈಲ್’ನ್ನು ಬಳಸುತ್ತಿದ್ದರು ಮತ್ತು (ಆಸ್ಟ್ರಿಯನ್ ಸಮ್ರಾಜ್ಯದ ರಾಷ್ಟ್ರಗೀತೆ)ಗೆ ಬದಲಾಗಿ ಜರ್ಮನ್ ರಾಷ್ಟ್ರಗೀತೆಯಾದ ಡೌಶ್‌ಲ್ಯಾಂಡ್ ಯುಬರ್ ಅಲ್ಲೆಸ್‌ನ್ನು ಹಾಡುತ್ತಿದ್ದರು. ಜನವರಿ 3, 1903ರಲ್ಲಿ ಅಲೋಯಿಸ್ ಅನಿರೀಕ್ಷಿತವಾಗಿ ಮರಣಿಸಿದ ನಂತರ ಟೆಕ್ನಿಕಲ್ ಶಾಲೆಯಲ್ಲಿ ಹಿಟ್ಲರನ ನಡವಳಿಕೆ ಮತ್ತೂ ಅಸಹನೀಯವಾಗುತ್ತ ಸಾಗಿ, ಆತನಿಗೆ ಶಾಲೆ ತೊರೆಯುವಂತೆ ತಾಕೀತು ಮಾಡಲಾಯಿತು. ಅಲ್ಲಿಂದ ಹೊರನಡೆದ ಹಿಟ್ಲರ್, ೧೯೦೪ರಲ್ಲಿ ಸ್ಟೇರ್‌ನ (ರಿಯಲ್‌ಸ್ಕೂಲ್‌)ಗೆ ಸೇರಿಕೊಂಡನು. ಆದರೆ, ತನ್ನ ಎರಡನೇ ವರ್ಷವನ್ನು ಪೂರೈಸಿದ ನಂತರ, ಹಿಟ್ಲರ್ ಮತ್ತು ಆತನ ಸ್ನೇಹಿತರು ರಾತ್ರಿಯ ವೇಳೆ ಕುಡಿತದ ಸಂತೋಷಕೂಟವನ್ನು ಆಚರಿಸಲು ತೆರಳಿದರು, ಮತ್ತು ಈ ಸಂದರ್ಭದಲ್ಲಿ ಉನ್ಮತ್ತನಾಗಿದ್ದ ಹಿಟ್ಲರ್, ತನ್ನ ಶಾಲೆಯ ಪ್ರಮಾಣಪತ್ರವನ್ನು ನಾಲ್ಕು ಚೂರುಗಳಾಗಿ ಹರಿದು, ಅದನ್ನು ಶೌಚ ಕಾಗದವಾಗಿ ಬಳಸಿದನು. ಅದನ್ನು ಕಂಡ ವ್ಯಕ್ತಿಯೊಬ್ಬರು ಕೆಸರಾದ ಪ್ರಮಾಣಪತ್ರವನ್ನು ಶಾಲಾ ನಿರ್ದೇಶಕರಿಗೊಪ್ಪಿಸಿದರು. ಅವರು ".... ಆತನಿಗೆ ಎಂತಹ ಅವಮಾನಕರ ಶಿಕ್ಷೆ ನೀಡಿದರೆಂದರೆ, ಆ ಹುಡುಗನು ಪತರಗುಟ್ಟುವ ಲೋಳೆಮೀನಿನಂತಾಗಿ ಹೋದನು. ಬಹುಶಃ ಅದು ಆತನ ಜೀವನದ ಅತ್ಯಂತ ನೋವಿನ, ಅವಮಾನದ ಸಂಗತಿಯಾಗಿದ್ದಿರಬಹುದು." ಆ ಶಾಲೆಯಿಂದ ಹೊರಹಾಕಲ್ಪಟ್ಟ ಹಿಟ್ಲರ್, ಅಂದಿನಿಂದ ಮುಂದೆ ಯಾವತ್ತೂ ಶಾಲೆಯತ್ತ ತಿರುಗಿ ನೋಡಲೇ ಇಲ್ಲ. ಹಿಟ್ಲರನು ೨೨ ಮೇ, ೧೯೦೪ರಂದು ಲಿಂಝ್ ಕ್ಯಥೆಡ್ರಲ್ಲಿನಲ್ಲಿ ಸಂಪ್ರದಾಯಿಕ ವಿಟ್‌ಸಂಡೇ ಒಳಗಾದನು.ಆತನ ದಿವಂಗತ ತಂದೆಯ ಸ್ನೇಹಿತ ಎಮಾನ್ಯುಯೆಲ್ ಲುಗರ್ಟ್ ಇದಕ್ಕೆ ಪ್ರಾಯೋಜನೆ ನೀಡಿದ್ದನು.

ವಿಯೆನ್ನಾ ಮತ್ತು ಮ್ಯೂನಿಚ್‌ನಲ್ಲಿ ಯೌವನದ ಆರಂಭದ ದಿನಗಳು

೧೯೦೫ರ ನಂತರದ ದಿನಗಳಲ್ಲಿ ಹಿಟ್ಲರನು ಅನಾಥ ಭತ್ಯೆ ಹಾಗೂ ತನ್ನ ತಾಯಿಯ ಬೆಂಬಲದಿಂದ ವಿಯೆನ್ನಾದಲ್ಲಿ ಸ್ವಚ್ಛಂದ ಜೀವನ ನಡೆಸಿದನು. ಚಿತ್ರಕಲೆಗೆ ಸಮರ್ಥನಲ್ಲವೆಂಬ ಕಾರಣವೊಡ್ಡಿ ವಿಯೆನ್ನಾದ ಲಲಿತ ಕಲಾ ಅಕಾಡೆಮಿಯಿಂದ ಎರಡು ಬಾರಿ (೧೯೦೭-೧೯೦೮) ತಿರಸ್ಕೃತಗೊಂಡನು, ಮತ್ತು ತದ್ವಿರುದ್ಧವಾಗಿ ಆತನ ಸಾಮರ್ಥ್ಯವು ವಾಸ್ತುಶಿಲ್ಪದ ಕ್ಷೇತ್ರದಲ್ಲಿದೆಯೆಂದು ಹೇಳಲಾಯ್ತು. ಆತನ ಆತ್ಮಚರಿತ್ರೆಯುಲ್ಲಿ ಈ ವಿಷಯದ ಬಗ್ಗೆ ಆತನಿಗಿದ್ದ ಆಕರ್ಷಣೆಯು ಬಿಂಬಿತವಾಗಿದೆ. ಹಿಟ್ಲರ್ ಹೇಳಿಕೊಂಡಿರುವಂತೆ ರಷ್ಯಾದಲ್ಲಿ ವಿನಾಶಕಾರೀ ದಂಗೆ ನಡೆಸಿದ್ದ ಸಂಪ್ರದಾಯವಾದಿ ಯಹೂದಿಗಳಿಂದೊಡಗೂಡಿದ ಅತಿ ದೊಡ್ಡ ಯಹೂದಿ ಸಮುದಾಯ ವಾಸಿಸುತ್ತಿದ್ದ ವಿಯೆನ್ನಾ ದಲ್ಲಿ ಆತನು ಮೊದಲು ಸೆಮೆಟಿಕ್ ವಿರೋಧಿಯಾದುದು.ಹಿಟ್ಲರನ ಬಾಲ್ಯದ ಗೆಳೆಯ ಅಗಸ್ಟ್ ಕುಬಿಝೆಕ್ ಪ್ರಕಾರ, ಆತನು ಲಿಂಝ್, ಆಸ್ಟ್ರಿಯಾ ತೊರೆಯುವ ಮುನ್ನವೇ ಧೃಢವಾದ ಸೆಮೆಟಿಕ್ ವಿರೋಧಿಯಾಗಿದ್ದನು. ಆ ಸಮಯದಲ್ಲಿ ವಿಯೆನ್ನಾ ಸಾಂಪ್ರದಾಯಿಕ ಧಾರ್ಮಿಕ ಪೂರ್ವಾಗ್ರಹಗಳುಳ್ಳ ಹಾಗೂ ೧೯ನೇ ಶತಮಾನದ ವರ್ಣ ಭೇದದ ಕಾದ ಬಾಣಲೆಯಂತಿತ್ತು. ಬಹುಶಃ ಹಿಟ್ಲರ್, ಸೆಮೈಟ್ ವಿರೋಧಿ ಚಿಂತಕ ಲ್ಯಾನ್ಜ್ ವೊನ್ ಲೀಬೆನ್ಫೆಲ್ಸ್‌ನ ಬರಹಗಳು ಹಾಗೂ ರಾಜಕಾರಣಿಗಳಾದ ವಿಯೆನ್ನಾದ ಮೇಯರ್, ಕ್ರಿಶ್ಚಿಯನ್ ಸೋಶಿಯಲ್ ಪಾರ್ಟಿಯ ಸಂಸ್ಥಾಪಕ ಕಾರ್ಲ್ ಲ್ಯೂಗರ್, ಸಂಯೋಜಕ ರಿಚರ್ಡ್ ವ್ಯಾಂಗರ್, ಮತ್ತು ಪ್ಯಾನ್ ಜರ್ಮನಿಕ್‌ ಅವೇ ಫ್ರಂ ರೋಮ್! ಚಳವಳಿಯ ನೇತಾರ ಜಾರ್ಜ್ ರಿಟ್ಟರ್ ವೊನ್ ಶೋನೆರೆರ್ ಮೊದಲಾದವರ ವಾದ-ಪ್ರತಿವಾದ ಚರ್ಚೆಗಳಿಂದ ಪ್ರಭಾವಿತನಾಗಿದ್ದಿರಬೇಕು.ಸೆಮಿಟಿಸ್ಮ್ ವಿರೋಧಿ ನಿಲುವನ್ನು ಧಾರ್ಮಿಕ ನೆಲೆಯಲ್ಲಿ ವಿರೋಧಿಸುವುದರಿಂದ ಅದನ್ನು ವರ್ಣೀಯ ನೆಲೆಯಲ್ಲಿ ಬೆಂಬಲಿಸುವ ತನ್ನ ಬದಲಾವಣೆಯು ಒಬ್ಬ ಸಂಪ್ರದಾಯವಾದೀ ಯಹೂದಿಯನ್ನು ನೋಡಿದುದರಿಂದ ಉಂಟಾಯ್ತೆಂದು ಹಿಟ್ಲರ್ ‘ಮೈನ್ ಕಾಂಫ್ ’ನಲ್ಲಿ ಹೇಳಿಕೊಂಡಿರುವನು.

I ನೇ ಮಹಾಯುದ್ಧ

ಹಿಟ್ಲರನು ಫ್ರಾನ್ಸ್ ಮತ್ತು ಬೆಲ್ಜಿಯಮ್ ಗಳಲ್ಲಿ (ತನ್ನ ಮೊದಲನೆ ಕಮ್ಯಾಂಡರನ ಕಾರಣದಿಂದಾಗಿ ರೆಜಿಮೆಂಟ್ ಲಿಸ್ಟ್ ಎಂದು ಕರೆಯಲ್ಪಡುತ್ತಿದ್ದ) ೧೬ನೇ ಬವೇರಿಯನ್ ರಿಸರ್ವ್ ರೆಜಿಮೆಂಟಿನಲ್ಲಿ ಸೇವೆ ಸಲ್ಲಿಸಿದನು ಮತ್ತು ಯುದ್ಧಾಂತ್ಯದ ವೇಳೆಗೆ ಜೆಫ್ರೀಟರ್ - ಆ ಕಾಲದ ಬ್ರಿಟನ್ನಿನ ಲ್ಯಾನ್ಸ್ ಕಾರ್ಪೊರೆಲ್ಗೆ ಹಾಗೂ ಅಮೆರಿಕಾ ಸೇನೆಯ ಖಾಸಗಿ ಪ್ರಥಮ ದರ್ಜೆಗೆ ಸಮನಾದ) ಆಗಿದ್ದನು. ಅವನು ಪಶ್ಚಿಮ ಫ್ರಂಟ್ ನಲ್ಲಿ ಅತ್ಯಂತ ಅಪಾಯಕಾರಿ ಕೆಲಸವಾಗಿದ್ದ ರನ್ನರ್ ಆಗಿದ್ದನು ಮತ್ತು ಬಹಳ ಬಾರಿ ಶತ್ರುಗಳ ಗುಂಡೇಟಿಗೆ ಎದುರಾಗಿದ್ದನು. ಅವನು ಪಶ್ಚಿಮ ಫ್ರಂಟ್ ನಲ್ಲಿ ವೈಪ್ರೆಸ್ ಪ್ರಥಮ ಯುದ್ಧ, ಸೋಮ್ಮ್ ಸಮರ, ಅರ್ರಾಸ್ ಯುದ್ಧ, ಮತ್ತು ಪಾಶ್ಶಂಡೇಲ್ ಯುದ್ಧ (Battle of Passchendaele) ಮೊದಲಾದ ಹಲವಾರು ಪ್ರಮುಖ ಯುದ್ಧಗಳಲ್ಲಿ ಭಾಗವಹಿಸಿದನು. ಜರ್ಮನಿಯಲ್ಲಿ ಕಿಂಡರ್ಮೋರ್ಡ್ ಬೈ ವೈಪೆರ್ನ್ (Kindermord bei Ypern - ಮುಗ್ಧರ ಹತ್ಯಾಕಾಂಡ) ಎಂದು ಕುಖ್ಯಾತವಾಗಿದ್ದ ವೈಪ್ರೆಸ್ ಕದನವು (ಅಕ್ಟೋಬರ್ ೧೯೧೪) ಕೇವಲ ೨೦ ದಿನಗಳಲ್ಲಿ ಒಂಭತ್ತು ಇನ್ಫ್ಯಾಂಟ್ರಿ ವಿಭಾಗಗಳಲ್ಲಿದ್ದ ಸರಿಸುಮಾರು ೪೦,೦೦೦ ಜನರ ಮಾರಣಹೋಮವನ್ನು ಕಂಡಿತು. ಸ್ವತಃ ಹಿಟ್ಲರನ ಕಂಪೆನಿಯಲ್ಲೇ ೨೫೦ರಷ್ಟಿದ್ದ ಸಂಖ್ಯೆಯು ಡಿಸೆಂಬರ್ ವೇಳೆಗೆ ೪೨ಕ್ಕಿಳಿದಿತ್ತು.ಜೀವನಚರಿತ್ರಕಾರ ಜಾನ್ ಕೀಗನ್, ಈ ಅನುಭವವು ಹಿಟ್ಲರನು ದೂರ ಉಳಿಯುವಂತೆ ಮತ್ತು ಯುದ್ಧದ ಉಳಿದ ದಿನಗಳಲ್ಲಿ ಹಿಂಜರಿಯುವಂತೆ ಮಾಡಿತು ಎಂದು ಹೇಳಿದ್ದಾರೆ. ಹಿಟ್ಲರನು ಎರಡು ಬಾರಿ ಶೌರ್ಯ ಪುರಸ್ಕಾರವನ್ನು ಪಡೆದಿದ್ದನು. ಆತನು ೧೯೧೪ರಲ್ಲಿ ಜೆಫ್ರೀಟರ್ ಗಳಿಗೆ ಬಹಳ ಅಪರೂಪವಾಗಿ ಕೊಡಮಾಡುವ ಎರಡನೇ ದರ್ಜೆಯ ಐರನ್ ಕ್ರಾಸ್ ಹಾಗೂ ೧೯೧೮ರಲ್ಲಿ ಪ್ರಥಮ ದರ್ಜೆಯ ಐರನ್ ಕ್ರಾಸ್ ಗೌರವಗಳನ್ನು ಪಡೆದಿದ್ದನು. ಆದರೂ ರೆಜಿಮೆಂಟಿನ ಸಿಬ್ಬಂದಿಗೆ, ಹಿಟ್ಲರನಲ್ಲಿ ನಾಯಕತ್ವ ಕೌಶಲ್ಯದ ಕೊರತೆಯಿದೆ ಎಂದ್ದು ಅನಿಸಿದ್ದರಿಂದ ಆತನಿಗೆ ಎಂದೂ ಅನ್ಟರ್ ಆಫಿಜೀರ್ (unteroffizier - ಬ್ರಿಟಿಷ್ ಕಾರ್ಪೊರಲ್ ಗೆ ಸಮ) ಹುದ್ದೆಗೆ ಬಡ್ತಿ ದೊರೆಯಲೇ ಇಲ್ಲ. ಆದರೆ, ಚರಿತ್ರಕಾರರು ಆತನು ಜರ್ಮನ್ ಪ್ರಜೆಯಲ್ಲದಿದ್ದ ಕಾರಣ ಹಿಟ್ಲರನಿಗೆ ಬಡ್ತಿ ದೊರೆಯಲಿಲ್ಲವೆಂದು ಅಭಿಪ್ರಾಯಪಡುತ್ತಾರೆ. ಸೇನಾ ತುಕಡಿಯ ಮುಖ್ಯ ಬಿಡದಿಗಳಲ್ಲಿ ಆತನ ಕೆಲಸಗಳು, ಬಹಳ ಬಾರಿ ಅಪಾಯಕಾರಿಯಾಗಿದ್ದೂ ಸಹ, ಆತನ ಚಿತ್ರಕಲೆಗೆ ಸಮಯವೊದಗಿಸಿಕೊಡುತ್ತಿತ್ತು. ಅವನು ಸೇನಾ ಪತ್ರಿಕೆಗೆ ವ್ಯಂಗ್ಯಚಿತ್ರಗಳನ್ನು ಹಾಗೂ ನಿರ್ದೇಶಕ ಚಿತ್ರಗಳನ್ನು ರಚಿಸುತ್ತಿದ್ದನು. ೧೯೧೬ರಲ್ಲಿ ಸೋಮ್ ಸಮರದಲ್ಲಿ ಪಾಲ್ಗೊಂಡಿದ್ದಾಗ ಆತನಿಗೆ ತೊಡೆಸಂದಿಯಲ್ಲಿ ಅಥವಾ ಎಡತೊಡೆಯ ಬಳಿ ತೀವ್ರವಾದ ಗಾಯವುಂಟಾಯಿತು. ಆದರೆ ಅವನು ಮಾರ್ಚ್ ೧೯೧೭ರ ವೇಳೆಗೆ ಮತ್ತೆ ಸೇನೆಯ ಮುಂಭಾಗಕ್ಕೆ ಮರಳಿದನು. ಅದೇ ವರ್ಷ, ಮುಂದಿನ ದಿನಗಳಲ್ಲಿ ಆತನಿಗೆ ಗಾಯಾಳು ಪದಕ (Wound Badge) ನೀಡಲಾಯಿತು.ಹಿಟ್ಲರನ ಸೇನಾ ಅನುಭವದ ಕುರಿತು ಸೆಬಾಸ್ಟಿಯನ್ ಹಫ್ನರ್, ಆತನಿಗೆ ಮಿಲಿಟರಿಯ ಬಗ್ಗೆ ಒಂದಷ್ಟು ತಿಳುವಳಿಕೆಯಿತ್ತೆಂದು ಅಭಿಪ್ರಾಯಪಡುತ್ತಾರೆ ೧೫ ಅಕ್ಟೋಬರ್ ೧೯೧೮ರಂದು ಹಿಟ್ಲರ್ ವಿಷಾನಿಲದ (mustard gas) ದಾಳಿಗೆ ಸಿಕ್ಕು, ತಾತ್ಕಾಲಿಕ ಕುರುಡುತನಕ್ಕೊಳಗಾಗಿ ಫೀಲ್ಡ್ ಹಾಸ್ಪಿಟಲ್ ಗೆ ಸೇರ್ಪಡೆಗೊಂಡನು. ಆಂಗ್ಲ ಮನಶ್ಶಾಸ್ತ್ರಜ್ಞ ಡೇವಿಡ್ ಲೂಯಿಸ್ ಮತ್ತು ಬರ್ನಾರ್ಡ್ ಹೋರ್ಸ್ಟ್‌ಮನ್ ಅವರು ಈ ಕುರುಡುತನವು ನರದೌರ್ಬಲ್ಯ (ಆ ದಿನಗಳಲ್ಲಿ ಚಿತ್ತೋದ್ರೇಕವೆಂದು ಹೆಸರಾಗಿತ್ತು)ದ ಪರಿಣಾಮವಾಗಿದ್ದಿರಬಹುದೆಂದು ಅಭಿಪ್ರಾಯಪಡುತ್ತಾರೆ. ಹಿಟ್ಲರನು, ಈ ಅನುಭವದ ಕಾಲದಲ್ಲಿಯೇ ತನಗೆ ತನ್ನ ಜೀವನೋದ್ದೇಶ “ಜರ್ಮನಿಯನ್ನು ಉಳಿಸುವುದು" ಎಂಬುದು ಮನದಟ್ಟಾಯಿತೆಂದು ಹೇಳಿಕೊಂಡಿದ್ದಾನೆ. ಕೆಲವು ಪಂಡಿತರು, ಗಮನೀಯವಾಗಿ ಲೂಸಿ ಡವಿಡೋವಿಝ್ (Lucy Dawidowicz), ಈ ಸಮಯದಲ್ಲಿ ಹಿಟ್ಲರನ ತಲೆಯಲ್ಲಿ ಸಂಪೂರ್ಣವಾಗಿ, ಹೇಗೆ ಅದನ್ನು ಸಾಧಿಸಬಹುದೆಂಬ ಯೋಚನೆ ಸ್ಪಷ್ಟಗೊಳ್ಳದಿದ್ದರೂ ಯುರೋಪಿನ ಯಹೂದಿಗಳನ್ನು ಓಡಿಸುವ ವಿಚಾರವೇ ತುಂಬಿಕೊಂಡಿತ್ತೆಂದು ವಾದಿಸುತ್ತಾರೆ. ಬಹುತೇಕ ಇತಿಹಾಸಕಾರರು, ಈ ನಿರ್ಧಾರವು ೧೯೪೧ರಲ್ಲಿ ರೂಪುಗೊಂಡಿತೆಂದು ಯೋಚಿಸಿದರೆ, ಮತ್ತೆ ಕೆಲವರು ಅದು ೧೯೪೨ರಲ್ಲಿ ರೂಪತಳೆಯಿತೆಂದು ಅಭಿಪ್ರಾಯಪಡುತ್ತಾರೆ. ಮೈನ್ ಕಾಂಫ್‌ ನ ಎರಡು ಅಧ್ಯಾಯಗಳು ವಿಷಾನಿಲದ ಉಪಯೋಗವನ್ನು ಉಲ್ಲೇಖಿಸುತ್ತವೆ:

At the beginning of the Great War, or even during the War, if twelve or fifteen thousand of these Jews who were corrupting the nation had been forced to submit to poison-gas . . . then the millions of sacrifices made at the front would not have been in vain.
These tactics are based on an accurate estimation of human weakness and must lead to success, with almost mathematical certainty, unless the other side also learns how to fight poison gas with poison gas. The weaker natures must be told that here it is a case of to be or not to be.

ಬಹಳ ದೀರ್ಘಕಾಲದಿಂದಲೂ ಹಿಟ್ಲರ್ ಜರ್ಮನಿಯ ಆರಾಧಕನಾಗಿದ್ದನು, ಮತ್ತು ೧೯೩೨ರವರೆಗೆ ತನಗೆ ಜರ್ಮನಿಯ ಪೌರತ್ವ ದೊರೆತಿಲ್ಲದಿದ್ದರೂ ಸಹ ಯುದ್ಧ ಕಾಲದಲ್ಲಿ ಅವನು ಭಾವೋದ್ದೀಪ್ತ ರಾಷ್ಟ್ರಭಕ್ತನಾದನು. ಹಿಟ್ಲರನು ಯುದ್ಧವು ‘ಎಲ್ಲ ಅನುಭವಗಳಿಗಿಂತಲೂ ಮಹೋನ್ನತವಾದುದು’ ಎಂದು ಕಂಡುಕೊಂಡನು ಮತ್ತು ಮುಂದಿನ ದಿನಗಳಲ್ಲಿ ತನ್ನ ಶೌರ್ಯ ಪ್ರದರ್ಶನಕ್ಕಾಗಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರನಾದನು. ಅವನಿಗೆ, ನವೆಂಬರ್ ೧೯೧೮ರಲ್ಲಿ ಜರ್ಮನ್ ಸೇನೆಯು ಶತ್ರು ಪಾಳಯವನ್ನು ಹಿಡಿದಿರಿಸಿಕೊಂಡಿರುವಾಗಲೇ ಒಪ್ಪಂದಕ್ಕೆ ಮುಂದಾಗಿದ್ದು ಭಾರೀ ಆಘಾತವನ್ನೊಡ್ಡಿತು. ಇನ್ನಿತರ ಜರ್ಮನ್ ರಾಷ್ಟ್ರೀಯವಾದಿಗಳಂತೆ ಹಿಟ್ಲರ್ ಕೂಡ, “ರಣಾಂಗಣದಲ್ಲಿ ಅಜೇಯವಾದ" ಸೇನೆಯು ನಾಗರಿಕ ಮುಖಂಡರು ಹಾಗೂ ಮಾರ್ಕ್ಸ್‌ವಾದಿಗಳಿಂದ ಮನೆಯ ಮುಂಬಾಗಿಲಲ್ಲಿ “ಬೆನ್ನಿಗೆ ಗುದ್ದಿಸಿಕೊಂಡ" Dolchstoßlegende (``dagger- stab ದಂತಕಥೆ")ನಲ್ಲಿ ನಂಬಿಕೆಯಿರಿಸಿದ್ದನು. ಈ ರಾಜಕಾರಣಿಗಳು ಮುಂದೆ ನವೆಂಬರ್ ಅಪರಾಧಿ ಗಳೆಂದು ಪರಿಗಣಿಸಲ್ಪಟ್ಟರು. ವರ್ಸೈಲ್ಸ್ ಒಪ್ಪಂದವು ಜರ್ಮನಿಯ ಹಲವು ಪ್ರಾಂತ್ಯಗಳನ್ನು ಕಸಿದುಕೊಂಡಿತು, ರಿನೆಲ್ಯಾಂಡ್‌ಗೆ ಅರ್ಧಚಂದ್ರ ಪ್ರಯೋಗವಾಯಿತು ಹಾಗೂ ಆರ್ಥಿಕ ನಷ್ಟವನ್ನೊಡ್ಡುವ ಮಂಜೂರಾತಿಗಳನ್ನು ಜಾರಿಗೆ ತಂದಿತು. ಈ ಒಪ್ಪಂದವು, ಸೌಮ್ಯವಾದಿ ಜರ್ಮನರು ಕೂಡ ಅತ್ಯಾಚಾರಿಗಳೆಂದು ಗಣಿಸುವ ಪೋಲೆಂಡಿನ ಪುನರ್ನಿರ್ಮಾಣಕ್ಕೆ ನಾಂದಿಹಾಡಿತು. ಈ ಒಪ್ಪಂದವು ಯುದ್ಧದ ಎಲ್ಲ ಭೀಕರತೆಗಳಿಗೆ ಜರ್ಮನಿಯನ್ನೆ ಹೊಣೆಯಾಗಿಸಿತು. ಆದರೆ ಇಂದಿನ ದಿನಗಳ ಪ್ರಮುಖ ಇತಿಹಾಸಕಾರರಾದ ಜಾನ್ ಕೀಗನ್‌ರಂತಹವರು: ಬಹುತೇಕ ಯುರೋಪಿಯನ್ ರಾಷ್ಟ್ರಗಳು ಮೊದಲನೆ ಮಹಾಯುದ್ಧದ ಧಾವಂತದಲ್ಲಿ ಅತಿಯೆನಿಸುವಷ್ಟು ಪ್ರಮಾಣದಲ್ಲಿ ಸೈನ್ಯೀಕರಣಗೊಂಡವು ಮತ್ತು ಹೋರಾಡಲು ಬಹಳ ಉತ್ಸುಕವ್ಗಾದ್ದವು ಎನ್ನುತ್ತ, ಕಡೆಯ ಪಕ್ಷ ವಿಜಯೀನ್ಯಾಯದ ಒಂದು ಭಾಗವಾಗಿ ಇದನ್ನು ಪರಿಗಣಿಸುತ್ತಾರೆ. ಜರ್ಮನಿಯ ದೋಷವನ್ನು, ಯುದ್ಧದಿಂದೊದಗಿದ ನಷ್ಟಭರ್ತಿ ವಸೂಲಿಮಾಡಲು ಮೂಲಕಾರಣವಾಗಿ ಬಿಂಬಿಸಲಾಯ್ತು. (ಈ ಮೊತ್ತವು ಡವೆಸ್ ಯೋಜನೆ, ಯಂಗ್ ಯೋಜನೆ ಹಾಗೂ ಹೂವರ್ ಸಾಲಪಾವತಿ ಮುಂದೂಡಿಕೆ ನಿಯಮಗಳಡಿ ಮತ್ತೆ ಮತ್ತೆ ಪರಿಷ್ಕೃತಗೊಂಡಿತು). ಆದರೆ ಜರ್ಮನಿಯು ಈ ಒಪ್ಪಂದವನ್ನು, ಅದರಲ್ಲಿಯೂ ಯುದ್ಧವು ಹತ್ಯಾಕಾಂಡವಾಗಿ ತಿರುವು ಪಡೆದಿದ್ದು ತನ್ನ ಕಾರಣದಿಂದಲೇ ಎಂಬ ಹೇಳಿಕೆಯನ್ನೊಳಗೊಂಡಿದ್ದ ೨೩೧ನೇ ನಿಯಮವನ್ನು ಸಹಿಸದಾಯಿತು. ಉದಾಹರಣೆಗೆ, ಜರ್ಮನ್ ಸೇನೆಗೆ ಕೇವಲ ೬ ಯುದ್ಧ ನೌಕೆಗಳನ್ನಿರಿಸಿಕೊಳ್ಳಲು ಅವಕಾಶ ನೀಡಲಾಯ್ತು. ಸಬ್ಮೆರೀನುಗಳಿಗಾಗಲೀ ವಾಯುಪಡೆಗಾಗಲೀ ಅವಕಾಶ ನಿರಾಕರಿಸಲಾಯ್ತು. ಒಂದು ಲಕ್ಷ ಸೈನಿಕರಿಗೆ ಆಯುಧಗಳನ್ನು, ಶಸ್ತ್ರಾಸ್ತ್ರಗಳನ್ನು ನಿರಾಕರಿಸುವ ಮೂಲಕ ಜರ್ಮನ್ ಸೇನೆಯನ್ನು ಬಹುತೇಕ ನಿಷ್ಕ್ರಿಯಗೊಳಿಸಲಾಯ್ತು. ಹಿಟ್ಲರ್ ಮತ್ತವನ ನಾಝಿ ಪಕ್ಷವು ಅಧಿಕಾರದ ಗದ್ದುಗೆಯೇರುವಲ್ಲಿ ವರ್ಸೈಲ್ಸ್ ಒಪ್ಪಂದದ ಈ ಎಲ್ಲ ಅಂಶಗಳು ಮುಖ್ಯ ಕಾರಣವಾದವು.ಹಿಟ್ಲರ್ ಮತ್ತವನ ಪಕ್ಷವು “ನವೆಂಬರ್ ಕ್ರಿಮಿನಲ್"ಗಳಿಂದ ಸಹಿಹಾಕಲ್ಪಟ್ಟ ಒಪ್ಪಂದವನ್ನು ಮುಂದಿಟ್ಟುಕೊಂಡು, ಇಂತಹ ಘಟನೆಯು ಮತ್ತೆ ಮರುಕಳಿಸದಂತೆ ಜರ್ಮನಿಯನ್ನು ಕಟ್ಟುವ ಭರವಸೆಯನ್ನು ನೀಡತೊಡಗಿತು. ಈ ನಿಟ್ಟಿನಲ್ಲಿ ಹಿಟ್ಲರನು, ಪ್ಯಾರಿಸ್ ಶಾಂತಿ ಸಮ್ಮೇಳನದಲ್ಲಿ ಆಯ್ಕೆಯ ಅವಕಾಶಗಳು ಅತಿ ಕಡಿಮೆಯಿದ್ದು, ಒಪ್ಪಂದಕ್ಕೆ ಸಹಿಹಾಕಿದ್ದ ಈ ‘ನವೆಂಬರ್ ಕ್ರಿಮಿನಲ್’ಗಳನ್ನು ಬಲಿಪಶುಗಳಂತೆ ಬಳಸಿಕೊಂಡನು

ರಾಜಕಾರಣಕ್ಕೆ ಪ್ರವೇಶ

ಅಡೋಲ್ಫ್ ಹಿಟ್ಲರ್ 
ಅಡಾಲ್ಫ್ ಹಿಟ್ಲರನ ಜರ್ಮನ್ ವರ್ಕರ್ಸ್ ಪಾರ್ಟಿಯ(DAP) ಖೋಟಾ ಸದಸ್ಯತ್ವ ಕಾರ್ಡ್‌ನ ಪ್ರತಿ. ಆತನ ಮೂಲ ಸದಸ್ಯತ್ವ ಸಂಖ್ಯೆ 555 ಆಗಿದ್ದಿತು(ಹಿಟ್ಲರ್ ಪಕ್ಷದ 55ನೇ ಸದಸ್ಯನಾಗಿದ್ದು ಪಕ್ಷದಲ್ಲಿ ಹೆಚ್ಚು ಸದಸ್ಯರಿದ್ದಾರೆಂದು ತೋರ್ಪಡಿಸಲು ಆ ಸಂಖ್ಯೆಗೆ 500ನ್ನು ಸೇರಿಸಲಾಗಿತ್ತು). ನಂತರ ಹಿಟ್ಲರ್ ಪಕ್ಷದ ಸ್ಥಾಪಕ ಸದಸ್ಯರಲ್ಲೊಬ್ಬನೆಂದು ಸಾಬೀತುಪಡಿಸಲೆಂದು ಈ ಸಂಖ್ಯೆಯನ್ನು ಕಡಿಮೆಮಾಡಲಾಯಿತು.(64) ಹಿಟ್ಲರ್ ತನ್ನದೇ ಪಕ್ಷವನ್ನು ರಚಿಸಬೇಕೆಂದಿದ್ದ್ನು ಆದರೆ ಆತನ ರೀಶ್ವೆಹ್ರ್‌ನ ಮೇಲಧಿಕಾರಿಗಳು ಪಕ್ಷವೊಂದರ ಗೂಢಚಾರಿಕೆ ಮಾಡಲು ಆದೇಶಿಸಿದರು.

ಎರಡನೇ ಮಹಾಯುದ್ಧದ ನಂತರ ಹಿಟ್ಲರ್ ಸೈನ್ಯದಲ್ಲಿಯೇ ಉಳಿದುಕೊಂಡು ಮ್ಯುನಿಕ್ ಗೆ ಹಿಂತಿರುಗಿದ. ಅಲ್ಲಿ ಭವಿಷ್ಯದ ದಿನಗಳ ತನ್ನ ಹೇಳಿಕೆಗಳಿಗೆ ವಿರುದ್ಧವಾಗಿ ಆಗ ಕೊಲೆಗೀಡಾಗಿದ್ದ ಬವೇರಿಯದ ಪ್ರಧಾನಮಂತ್ರಿ ಕರ್ಟ್ ಈಸ್ನರ್ (Kurt Eisner)ನ ಶವಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿದ. ಬವೇರಿಯನ್ ಸೋವಿಯತ್ ರಿಪಬ್ಲಿಕ್ ನ ಸೋಲಿನ ನಂತರ ಬವೇರಿಯಾದ ರೀಚ್ ಸ್ವೆರ್ (Reichswehr) ಗುಂಪಿನ ಶಿಕ್ಷಣ ಮತ್ತು ಪ್ರಚಾರ ವಿಭಾಗ (Education and Propaganda Department - Dept Ib/P) ವು ನಡೆಸುತ್ತಿದ್ದ ’ರಾಷ್ಟ್ರೀಯ ಆಲೋಚನೆ’ ಕಾರ್ಯಕ್ರಮಗಳಲ್ಲಿ ಹೆಡ್ ಕ್ವಾರ್ಟರ್ ೪ರ ಕ್ಯಾಪ್ಟನ್ ಕಾರ್ಲ್ ಮೇರ್ (Karl Mayr)ನ ಬಳಿ ತರಬೇತುಗೊಂಡನು.ಇವರಿಗೆ ಸಿಕ್ಕ ಬಲಿಪಶುಗಳೆಂದರೆ ’ಅಂತರ್ರಾಷ್ಟ್ರೀಯ ಯಹೂದಿಗಳು’, ಕಮ್ಯುನಿಸ್ಟರು ಮತ್ತು ಪಕ್ಷದುದ್ದಗಲಕ್ಕೂ ಕಾಣಸಿಗುತ್ತಿದ್ದ ಅದರಲ್ಲೂ ವಿಶೇಷವಾಗಿ ವೀಮರ್ ಒಕ್ಕೂಟ(Weimar Coalition)ದ ಪಕ್ಷಗಳ ವಿವಿಧ ರಾಜಕಾರಣಿಗಳು. ೧೯೧೯ರ ಜುಲೈಯಲ್ಲಿ ಹಿಟ್ಲರನನ್ನು ಜರ್ಮನ್ ವರ್ಕರ್ಸ್ ಪಾರ್ಟಿ(German Workers' Party (DAP)) ಎಂಬ ಪುಟ್ಟ ಪಕ್ಷದ ಒಳನುಗ್ಗಲು ಮತ್ತು ಇತರ ಸೈನಿಕರನ್ನು ಪ್ರಭಾವಿತಗೊಳಿಸುವ ಸಲುವಾಗಿ ರೀಚ್ ಸ್ವೆರ್ (Reichswehr) ನ ಗುಪ್ತಚರ ಕಮ್ಯಾಂಡೊ (Aufklärungskommando )ವಿಭಾಗದ ಪೊಲೀಸ್ ಬೇಹುಗಾರ(Verbindungsmann) ನನ್ನಾಗಿ ನಿಯಮಿಸಲಾಯಿತು.ಈ ಪಕ್ಷದ ಪರಿವೀಕ್ಷಣೆ ಮಾಡುತ್ತಿದ್ದಾಗ ಹಿಟ್ಲರನಿಗೆ ಪಕ್ಷದ ಸಂಸ್ಥಾಪಕ ಆಂಟನ್ ಡ್ರೆಕ್ಸ್ಲರ್(Anton Drexler)ನ ಯಹೂದಿಗಳನ್ನು ಹೊರತುಪಡಿಸಿದ ಸಮಾಜವಾದ ಮತ್ತು ಸಮಾಜದ ಎಲ್ಲ ಸದಸ್ಯರ ಪರಸ್ಪರ ಐಕ್ಯಮತ ಮತ್ತು ಒಂದು ಬಲಶಾಲಿಯಾದ ಸಕ್ರಿಯ ಸರ್ಕಾರವನ್ನು ಬೆಂಬಲಿಸುವ ಅಂಶಗಳಾಗಿದ್ದ ಯಹೂದೀ ದ್ವೇಷ,ರಾಷ್ಟ್ರೀಯತಾವಾದ, ಬಂಡವಾಳಶಾಹೀ ವಿರೋಧಮತ್ತು ಮಾರ್ಕ್ಸ್ ವಾದ ವಿರೋಧೀ ಆಲೋಚನೆಗಳು ಬಹಳವಾಗಿ ಹಿಡಿಸಿದವು.ಹಿಟ್ಲರನ ವಾಕ್ಚಾತುರ್ಯವನ್ನು ಬಹುವಾಗಿ ಮೆಚ್ಚಿಕೊಂಡ ಡ್ರೆಕ್ಸ್ಲರ್ ಆತನನ್ನು ಪಕ್ಷ ಸೇರಲು ಆಹ್ವಾನಿಸಿದ.೧೯೧೯ರ ಸೆಪ್ಟೆಂಬರ್ ೧೨ ರಂದು ಹಿಟ್ಲರ್ DAPಯ ೫೫ನೇ ಸದಸ್ಯನಾಗಿ ಸೇರ್ಪಡೆಗೊಂಡ. ಆತನನ್ನು ಕಾರ್ಯನಿರ್ವಾಹಕ ಸಮಿತಿಯ ಏಳನೇ ಸದಸ್ಯನನ್ನಾಗಿ ಕೂಡ ಆಯ್ಕೆಮಾಡಲಾಯಿತು. ಹಲವಾರು ವರ್ಷಗಳ ನಂತರ ಆತ ತಾನು ಪಾರ್ಟಿಯ ಮೊದಲ ಏಳು ಸದಸ್ಯರಲ್ಲೊಬ್ಬನೆಂದು ಹೇಳಿಕೆ ನೀಡಿದನಾದರೂ ಇದು ಸುಳ್ಳೆಂದು ಸಾಬೀತಾಗಿದೆ. ಇಲ್ಲಿ ಹಿಟ್ಲರನು ಪಕ್ಷದ ಸಂಸ್ಥಾಪಕರಲ್ಲೊಬ್ಬನೂ ರಹಸ್ಯ ಥುಲ್ ಸಮಾಜ(Thule society)ದ ಸದಸ್ಯನೂ ಆದ ಡೀಟ್ರಿಚ್ ಎಖಾರ್ಟ್(Deitrich Eckhart)ನನ್ನು ಭೇಟಿಯಾದನು. ಎಖಾರ್ಟ್ ಹಿಟ್ಲರನ ವಿಶ್ವಸನೀಯ ಸಲಹೆಗಾರನಾಗಿ ಆತನ ಜತೆ ವಿಚಾರವಿನಿಮಯ ಮಾಡುವುದು, ಹೇಗೆ ಮಾತನಾಡಬೇಕು, ಹೇಗೆ ಬಟ್ಟೆತೊಡಬೇಕು ಎಂದು ತಿಳಿಸಿಕೊಡುವುದು, ವಿವಿಧ ಸ್ತರಗಳ ಜನರನ್ನು ಪರಿಚಯಿಸುವುದು ಮುಂತಾದ ಮಾರ್ಗದರ್ಶಕ ಕೆಲಸ ಮಾಡಿದನು.ತನ್ನ ’ಮೈನ್ ಕೆಂಫ್’(Mein Kempf) ನ ಎರಡನೇ ಸಂಪುಟದಲ್ಲಿ ಹಿಟ್ಲರ್ ಎಖಾರ್ಟನಿಗೆ ಧನ್ಯವಾದ ಅರ್ಪಿಸಿದನು.ಪಕ್ಷದ ವರ್ಚಸ್ಸು ಹೆಚ್ಚಿಸುವ ಸಲುವಾಗಿ ಅದರ ಹೆಸರನ್ನು ನ್ಯಾಶನಲ್ ಸೋಶಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ ಅಥವಾ Nationalsozialistische Deutsche(NSDAP) ಎಂದು ಬದಲಾಯಿಸಲಾಯಿತು. ೧೯೨೦ರ ಮಾರ್ಚಿನಲ್ಲಿ ಹಿಟ್ಲರನು ಸೈನ್ಯದಿಂದ ಬಿಡುಗಡೆಹೊಂದಿದ ನಂತರ ಪಕ್ಷದ ನಾಯಕರ ಪ್ರೋತ್ಸಾಹದಿಂದ ಪಕ್ಷದ ಚಟುವಟಿಕೆಗಳಲ್ಲಿ ಸಂಫೂರ್ಣವಾಗಿ ಸಕ್ರಿಯನಾಗಿ ಭಾಗವಹಿಸತೊಡಗಿದನು.೧೯೨೧ರ ವೇಳೆಗೆ ಹಿಟ್ಲರ್ ಬೃಹತ್ ಜನಸಮೂಹದೆದುರು ಬಹಳ ಪರಿಣಾಮಕಾರಿಯಾಗಿ ಮಾತನಾಡುವಂತಾದನು.ಫೆಬ್ರುವರಿಯಲ್ಲಿ ಮ್ಯೂನಿಕ್ ನಲ್ಲಿ ಆರುಸಾವಿರ ಜನಸಂಖ್ಯೆಯ ಜನಸಮೂಹದೆದುರು ಹಿಟ್ಲರ್ ಭಾಷಣಮಾಡಿದನು.ಸಭೆಗಳಿಗೆ ಹಚ್ಚು ಪ್ರಚಾರ ನೀಡಲು ಎರಡು ಟ್ರಕ್ಕುಗಳ ತುಂಬಾ ಪಕ್ಷದ ಪ್ರಚಾರಕರನ್ನು ಸ್ವಸ್ತಿಕಗಳೊಡನೆ ಎಲ್ಲೆಡೆ ತಿರುಗಾಡಿ ಗದ್ದಲವೆಬ್ಬಿಸುತ್ತಾ ಕರಪತ್ರಗಳನ್ನು ಹಂಚುವಂತೆ ನಿಯಮಿಸಿದನು. ಈ ರೀತಿಯ ಪ್ರಚಾರತಂತ್ರವನ್ನು ಪ್ರಥಮಬಾರಿಗೆ ಬಳಸಲಾಯಿತು. ಪಕ್ಷದ ಹೊರಗೆ ಹಿಟ್ಲರ್ ವರ್ಸೇಲ್ಸ್ ಒಪ್ಪಂದದ ವಿರುದ್ಧ ಹಾಗೂ ಚಕ್ರಾಧಿಪತ್ಯದ ಬೆಂಬಲಿಗರು, ರಾಷ್ಟ್ರೀಯತಾವಾದಿಗಳು ಮತ್ತು ಇತರ ಅಂತರ್ರಾಷ್ಟ್ರೀಯತಾವಾದದ ವಿರೋಧಿಗಳನ್ನೊಳಗೊಂಡ ವಿರೋಧಪಕ್ಷದ ರಾಜಕಾರಣಿಗಳ, ಅದರಲ್ಲೂ ವಿಶೇಷವಾಗಿ ಮಾರ್ಕ್ಸ್ ವಾದಿಗಳು ಮತ್ತು ಯಹೂದಿಗಳ ವಿರುದ್ಧದ ತಲೆಹೋಕ, ವಿವಾದಾತ್ಮಕ ಭಾಷಣಗಳಿಂದಾಗಿ ಕುಖ್ಯಾತನಾದನು. NSDAP ಯ ಕೇಂದ್ರವಾಗಿದ್ದ ಮ್ಯೂನಿಕ್, ಮಾರ್ಕ್ಸ್ ವಾದವನ್ನು ಮಟ್ಟಹಾಕಲು ಮತ್ತು ವೀಮರ್ ಗಣರಾಜ್ಯವನ್ನು ಹಾಳುಗೆಡಹಲು ಹೊಂಚುಹಾಕುತ್ತಿದ್ದ ಸೈನ್ಯಾಧಿಕಾರಿಗಳಿಂದ ತುಂಬಿಹೋಗಿತ್ತು. ಹಿಟ್ಲರ್ ಮತ್ತು ಆತನ ಏರುಗತಿಯ ಬೆಳವಣಿಗೆಯನ್ನು ನಿಧಾನವಾಗಿ ಗಮನಿಸತೊಡಗಿದ ಅವರಿಗೆ ಆತ ತಮ್ಮ ಗುರಿಸಾಧನೆಗೆ ತಕ್ಕ ವ್ಯಕ್ತಿಯಾಗಿ ಕಂಡುಬಂದ.೧೯೨೧ರ ಬೇಸಿಗೆಯಲ್ಲಿ ಹಿಟ್ಲರ್ ರಾಷ್ಟ್ರೀಯತಾವಾದಿಗಳ ಗುಂಪುಗಳನ್ನು ಭೇಟಿಮಾಡಲೆಂದು ಬರ್ಲಿನ್ ಗೆ ತೆರಳಿದ್ದಾಗ ಆತನ ಗೈರುಹಾಜರಿಯಲ್ಲಿ DAPಯ ಮ್ಯೂನಿಕ್ ಮುಖಂಡತ್ವದ ವಿಷಯವಾಗಿ ದಂಗೆಯಾಯಿತು. ಪಕ್ಷವನ್ನು ನಡೆಸುತ್ತಿದ್ದ ಕಾರ್ಯನಿರ್ವಾಹಕ ಸಮಿತಿಯ ಮೂಲ ಸದಸ್ಯರಿಗೆ ಹಿಟ್ಲರ್ ಒಬ್ಬ ಉದ್ಧಟತನವುಳ್ಳ ವ್ಯಕ್ತಿ ಎಂಬ ಅಭಿಪ್ರಾಯವಿದ್ದಿತು.ಅವರೆಲ್ಲರೂ ಸೇರಿಕೊಂಡು ಆಗ್ಸ್ ಬರ್ಗ್(Augsburg)ನ ಸಮಾಜವಾದೀ ಗುಂಪೊಂದರ ಜತೆ ಮೈತ್ರಿ ಮಾಡಿಕೊಂಡರು.ಕೂಡಲೇ ಮ್ಯೂನಿಕ್ ಗೆ ಮರಳಿದ ಹಿಟ್ಲರ್ ೧೧ ಜುಲೈ ೧೯೨೧ರಂದು ಅವರನ್ನು ಎದುರಿಸಿನಿಂತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ.ಹಿಟ್ಲರನನ್ನು ಕಳೆದುಕೊಳ್ಳುವುದರಿಂದ ಪಕ್ಷವೇ ಕೊನೆಯುಸಿರೆಳೆಯುವುದೆಂದು ಅವರು ಮನಗಂಡ ಕೂಡಲೇ ಹಿಟ್ಲರ್ ಸಮಯಸಾಧಿಸಿ ತಾನು ಪಕ್ಷಕ್ಕೆ ಮರಳುವದಾದರೆ ತನಗೆ ಪಕ್ಷದ ಮುಖ್ಯಸ್ಥ ಡ್ರೆಕ್ಸ್ಲರನ ಸ್ಥಾನ ದೊರಕಬೇಕು ಹಾಗೂ ಮಿತಿಯಿಲ್ಲದ ಅಧಿಕಾರ ದೊರೆಯಬೇಕೆಂದು ಘೋಷಿಸಿದ. ಕುಪಿತರಾದ (ಡ್ರೆಕ್ಸ್ಲರನನ್ನೊಳಗೊಂಡ) ಸಮಿತಿ ಸದಸ್ಯರು ಮೊದಲು ಇದನ್ನು ವಿರೋಧಿಸಿದರು.ಇದೇ ವೇಳೆಗೆ ಕಾಣಿಸಿಕೊಂಡ ’ಅಡಾಲ್ಫ್ ಹಿಟ್ಲರ್: ಆತನೊಬ್ಬ ದ್ರೋಹಿಯೇ?’(Adolf Hitler: Is he a traitor?) ಎಂಬ ಶೀರ್ಷಿಕೆಯುಳ್ಳ ಕರಪತ್ರದಲ್ಲಿ ಹಿಟ್ಲರನ ಅಧಿಕಾರದಾಹ ಮತ್ತು ಆತನ ಸುತ್ತಲಿದ್ದ ಹಿಂಸಾತ್ಮಕ ಪ್ರವೃತ್ತಿಯ ಜನರನ್ನು ಖಂಡಿಸಿ ಬರೆಯಲಾಗಿತ್ತು.ಹಿಟ್ಲರ್ ಈ ಪ್ರಕಟಣೆಗೆ ಉತ್ತರವಾಗಿ ಇದನ್ನು ಪ್ರಕಟಿಸಿದ ಮ್ಯೂನಿಕ್ ನ ನಿಯತಕಾಲಿಕದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ನಂತರದಲ್ಲಿ ಗೆದ್ದು ಫೈಸಲಿನಂತೆ ಸಣ್ಣ ಮೊತ್ತವೊಂದನ್ನು ಪಡೆದ. NSDAPಯ ಸಮಿತಿ ಸದಸ್ಯರು ಕಾಲಾನುಕ್ರಮದಲ್ಲಿ ತಮ್ಮ ವಿರೋಧವನ್ನು ಹಿಂತೆಗೆದುಕೊಂಡ ನಂತರ ಹಿಟ್ಲರನ ಬೇಡಿಕೆಗಳ ಪೂರೈಕೆಯ ಬಗ್ಗೆ ನಿರ್ಧರಿಸಲು ಪಕ್ಷದ ಸದಸ್ಯರ ಮತ ಕೇಳಲಾಯಿತು.ಹಿಟ್ಲರನ ಪರ ೫೪೩ ಮತಗಳು ದೊರಕಿದರೆ ಒಂದು ಮತ ಮಾತ್ರ ಆತನ ವಿರುದ್ಧವಾಗಿತ್ತು.೨೯ ಜುಲೈ ೧೯೨೧ರಂದು ನಡೆದ ಪಕ್ಷದ ಸಭೆಯಲ್ಲಿ ಹಿಟ್ಲರನನ್ನು ನ್ಯಾಶನಲ್ ಸೋಶಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿಯ ನಾಯಕ ’ಫ್ಯೂರೆರ್”(Führer)ಆಗಿ ಪರಿಚಯಿಸುವುದರೊಂದಿಗೆ ಸಾರ್ವಜನಿಕವಾಗಿ ಈ ನಾಮಧೇಯವನ್ನು ಮೊದಲ ಬಾರಿಗೆ ಬಳಸಲಾಯಿತು. ಹಿಟ್ಲರನ ಯಹೂದಿಗಳ, ಸಾಮಾಜಿಕ ಪ್ರಜಾಪ್ರಭುತ್ವವಾದಿಗಳು, ಉದಾರಮತವಾದಿಗಳು, ಪ್ರತಿಗಾಮಿ ರಾಜಪ್ರಭುತ್ವವಾದಿಗಳು, ಬಂಡವಾಳಶಾಹಿಮತ್ತು ಕಮ್ಯುನಿಸ್ಟರ ವಿರುದ್ಧದ ಬಿಯರ್ ಹಾಲ್ ಭಾಷಣಗಳು ಬೆಂಬಲಿಗರನ್ನು ಆಕರ್ಷಿಸತೊಡಗಿದವು.ಈತನ ಮೊದಲ ಬೆಂಬಲಿಗರೆಂದರೆ ರುಡಾಲ್ಫ್ ಹೆಸ್(Rudolf Hess), ಮಾಜೀ ಏರ್ಫೋರ್ಸ್ ಪೈಲಟ್ ಹರ್ಮನ್ ಗೋರಿಂಗ್(Hermann Göring), ಮತ್ತು ಮುಂದೆ ನಾಜಿಗಳ ರಾಜಕೀಯ ವಿರೋಧಿಗಳನ್ನು ಶಿಕ್ಷಿಸಿ ಪಕ್ಷದ ಸಭೆಗಳ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ಪ್ಯಾರಾಮಿಲಿಟರಿ ಅಂಗವಾದ the SA (Sturmabteilung , ಅಥವಾ "Storm Division" )ಯ ಮುಖ್ಯಸ್ಥನಾಗಿ ನೇಮಿಸಲ್ಪಟ್ಟ ಸೈನ್ಯದ ಕ್ಯಾಪ್ಟನ್ ಅರ್ನ್ಸ್ಟ್ ರಾಮ್(Ernst Röhm).ಇದಲ್ಲದೆ ಹಿಟ್ಲರನು ಸ್ವತಂತ್ರ ತದ್ರೂಪೀ ಗುಂಪುಗಳನ್ನು ಕೂಡ ಹುಟ್ಟುಹಾಕಿದನು. ಉದಾಹರಣೆಗೆ, ನ್ಯೂರೆಂಬರ್ಗ್(Nuremberg) ನಲ್ಲಿದ್ದ ಜೂಲಿಯಸ್ ಸ್ಟ್ರೀಶರ್(Julius Streicher)ನ (ಮುಂದೆ ಫ್ರಾಂಕೋನಿಯಾ(Franconia)ದ ಪ್ರಾಂತೀಯ ನಾಯಕ(Gauleiter) )ಮುಂದಾಳತ್ವದ ಡ್ಯೂಶ್ ವರ್ಗೆಮೀನ್ ಶ್ಯಾಫ್ಟ್ (Deutsche Werkgemeinschaft) ಗುಂಪು. ಇದೇ ವೇಳೆಗೆ ಹಿಟ್ಲರ್ ಸ್ಥಳೀಯ ವಹಿವಾಟುದಾರರನ್ನು ಆಕರ್ಷಿಸಿದ ಮಾತ್ರವಲ್ಲದೆ ಮ್ಯೂನಿಕ್ ನ ಪ್ರಭಾವೀ ವಲಯದಲ್ಲಿ ಸೇರ್ಪಡೆಗೊಂಡು ಯುದ್ಧಕಾಲದ ಜನರಲ್ ಎರಿಕ್ ಲ್ಯೂಡೆನ್ ಡಾರ್ಫ್(Erich Ludendorff)ನೊಡನೆ ಬೆರೆಯತೊಡಗಿದ.

ಅಡೋಲ್ಫ್ ಹಿಟ್ಲರ್ 
ಹಿಟ್ಲರನ ರೇಖಾಚಿತ್ರ, 1923

ಬಿಯರ್ ಹಾಲ್ ವಿಪ್ಲವ (Beer Hall Putsch)

ಈ ರೀತಿಯ ಬೆಂಬಲದಿಂದ ಹುರುಪುಗೊಂಡ ಹಿಟ್ಲರ್ ಲ್ಯೂಡೆನ್ ಡಾರ್ಫನನ್ನು ರಾಜಕೀಯ ವಿಪ್ಲವದ ಹವಣಿಕೆಯ ಮುಖವನ್ನಾಗಿ ಬಳಸಲು ನಿರ್ಧರಿಸಿದ. ಈ ರಾಜಕೀಯ ವಿಪ್ಲವವನ್ನು ಮುಂದಿನ ದಿನಗಳಲ್ಲಿ ಬಿಯರ್ ಹಾಲ್ ವಿಪ್ಲವ(Beer Hall Putsch) ಅಥವಾ ಹಿಟ್ಲರ್ ವಿಪ್ಲವ(Hitler Putsch) ಅಥವಾ ಮ್ಯೂನಿಕ್ ವಿಪ್ಲವ (Munich Putsch) ವೆಂಬ ಹೆಸರುಗಳಿಂದ ಕರೆಯಲಾಯಿತು. ನಾಜೀ ಪಕ್ಷವು ಇಟಲಿಯ ಫ್ಯಾಸಿಸ್ಟರ ನಕಲು ಮಾಡುತ್ತಿದ್ದುದು ಹೊರನೋಟಕ್ಕೆ ಗೋಚರವಾಗುತ್ತಿದ್ದುದು ಮಾತ್ರವಲ್ಲದೆ ಅವರ ಅನೇಕ ಕಾರ್ಯನೀತಿಗಳನ್ನೂ ಸೇರ್ಪಡಿಸಿಕೊಂಡಿದ್ದಿತ್ತು. ೧೯೨೩ರಲ್ಲಿ ಹಿಟ್ಲರನು ಬೆನಿಟೊ ಮುಸ್ಸೊಲಿನಿಯ ’ಮಾರ್ಚ್ ಆನ್ ರೋಮ್’ನಂತೆಯೇ ತನ್ನ ’ಬರ್ಲಿನ್ ಅಭಿಯಾನ’ವನ್ನು ನಡೆಸಲು ಅಪೇಕ್ಷಿಸಿದನು. ಬವೇರಿಯದ ಹಾಲೀ ಪ್ರಭುತ್ವ ಹೊಂದಿದ್ದ ಗುಸ್ತಾವ್ ವಾನ್ ಕಾಹ್ರ್, ರೀಚ್ ಸ್ವೆಹ್ರ್ ನ ಮುಂಚೂಣಿಯಲ್ಲಿದ್ದ ಅನೇಕರು ಮತ್ತು ಪೊಲೀಸರ ರಹಸ್ಯ ಬೆಂಬಲವನ್ನು ಹಿಟ್ಲರ್ ಮತ್ತು ಲ್ಯೂಡೆನ್ ಡಾರ್ಫ್ ದೊರಕಿಸಿಕೊಂಡರು. ರಾಜಕೀಯ ಭಿತ್ತಿಪತ್ರಗಳಿಂದ ತಿಳಿದುಬರುವ ಪ್ರಕಾರ ಹಿಟ್ಲರ್ ಮತ್ತು ಬವೇರಿಯನ್ ಪೊಲೀಸ್ ಮತ್ತು ಸೈನ್ಯಗಳ ನಾಯಕರು ಸೇರಿಕೊಂಡು ಹೊಸ ಸರ್ಕಾರ ರಚನೆಯ ಯೋಜನೆಯನ್ನು ಹಾಕಿದರು. ೧೯೨೩ರ ನವೆಂಬರ್ ೮ರಂದು ಹಿಟ್ಲರ್ ಮತ್ತು SA ಬರ್ಗೆರ್ ಬ್ರಾಕೆಲರ್ (Bürgerbräukeller) ಎಂಬ ಬೀರ್ ಹಾಲಿನಲ್ಲಿ ಕಾಹ್ರ್ ನ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯೊಂದಕ್ಕೆ ಮುತ್ತಿಗೆಹಾಕಿದನು. ಅಲ್ಲಿ ಹಿಟ್ಲರ್ ತಾನು ಲ್ಯೂಡೆನ್ ಡಾರ್ಫನ ಜತೆಸೇರಿ ಹೊಸ ಸರ್ಕಾರವೊಂದನ್ನು ರಚಿಸಿರುವುದಾಗಿಯೂ ಬರ್ಲಿನ್ ಸರ್ಕಾರವನ್ನು ಉರುಳಿಸಲು ಕಾಹ್ರ್ ಮತ್ತು ಸ್ಥಳೀಯ ಸೇನಾಡಳಿತದ ಬೆಂಬಲ ಬೇಕೇಬೇಕೆಂದೂ ಶಸ್ತ್ರಬಲದ ಮೂಲಕ ಬೆದರಿಕೆಯೊಡ್ಡಿದ. ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ಕಾಹ್ರ್ ಅವಕಾಶ ದೊರಕಿದೊಡನೆ ಹಿಟ್ಲರನ ವಿರೋಧಪಕ್ಷ ಸೇರಲೆಂದು ಪಲಾಯನ ಮಾಡಿದನು. ಮಾರನೇ ದಿನ ಹಿಟ್ಲರ್ ಮತ್ತು ಆತನ ಬೆಂಬಲಿಗರು ಬವೇರಿಯನ್ ಸರ್ಕಾರವನ್ನು ಉರುಳಿಸಿ ತಮ್ಮ ’ಬರ್ಲಿನ್ ದಂಡಯಾತ್ರೆ’ (March on Berlin)ಯನ್ನು ಪ್ರಾರಂಭಿಸುವ ಸಲುವಾಗಿ ಬಿಯರ್ ಹಾಲಿನಿಂದ ಬವೇರಿಯನ್ ಯುದ್ಧ ಮಂತ್ರಾಲಯದ ಕಡೆ ಮೆರವಣಿಗೆ ಹೊರಟಾಗ ಪೊಲೀಸರು ಅವರನ್ನು ಚದುರಿಸಿದರು. ಹದಿನಾರು ಜನ NSADP ಸದಸ್ಯರು ಸಾವಿಗೀಡಾದರು. ಅರ್ನ್ಸ್ಟ್ ಹಾನ್ಫ್ ಸ್ಟೇಂಗಲ್(Ernst Hanfstaengl) ನ ಮನೆಗೆ ಪಲಾಯನ ಮಾಡಿದ ಹಿಟ್ಲರ್ ಆತ್ಮಹತ್ಯೆಯ ಯೋಚನೆಯನ್ನೂ ಮಾಡಿದ. ದೇಶದ್ರೋಹದ ಆಪಾದನೆಯ ಮೇರೆಗೆ ಆತ ಕೆಲದಿನಗಳಲ್ಲೇ ಸೆರೆಗೆ ದೂಡಲ್ಪಟ್ಟ. ಆಲ್ಫ್ರೆಡ್ ರೊಸೆನ್ಬರ್ಗ್(Alfred Rosenberg) ಪಕ್ಷದ ತಾತ್ಕಾಲಿಕ ನಾಯಕತ್ವ ವಹಿಸಿಕೊಂಡ. ಹಿಟ್ಲರನ ನ್ಯಾಯವಿಚಾರಣೆಯ ಸಮಯದಲ್ಲಿ ಆತನಿಗೆ ಮಾತನಾಡಲು ಯಥೇಚ್ಚ ಸಮಯಾವಕಾಶ ನೀಡಲಾದುದರಿಂದ ಮತ್ತು ಆತನ ಸಮರ್ಥನಾ ಭಾಷಣ Archived 2010-04-12 ವೇಬ್ಯಾಕ್ ಮೆಷಿನ್ ನಲ್ಲಿ. ದಲ್ಲಿ ವ್ಯಕ್ತವಾದ ರಾಷ್ಟ್ರೀಯತೆಯ ಭಾವನೆಗಳಿಂದಾಗಿ ಆತನ ಜನಪ್ರಿಯತೆ ಹೆಚ್ಚಾಯಿತು.ಮ್ಯೂನಿಕ್ ನ ವ್ಯಕ್ತಿತ್ವವೊಂದು ರಾಷ್ಟ್ರೀಯ ಜನಮನ್ನಣೆ ಪಡೆಯಲಾರಂಭಿಸಿತು. ೧೯೨೪ರ ಏಪ್ರಿಲ್ ೧ರಂದು ಹಿಟ್ಲರನಿಗೆ ಲ್ಯಾಂಡ್ಸ್ ಬರ್ಗ್ ಕಾರಾಗೃಹದಲ್ಲಿ ಐದು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ಕಾರಾಗೃಹದ ಕಾವಲುಗಾರರಿಂದ ಹಿಟ್ಲರನಿಗೆ ವಿಶೇಷ ಸತ್ಕಾರ ದೊರಕುತ್ತಿದ್ದುದೇ ಅಲ್ಲದೆ ಅಭಿಮಾನಿಗಳ ಪತ್ರಗಳೂ ಬರುತ್ತಿದ್ದವು. ಹಿಟ್ಲರನ ಮುಂಚಿತ ಬಿಡುಗಡೆಯ ಬಗ್ಗೆ ಸರ್ಕಾರೀ ವಕೀಲನ ವಿರೋಧವನ್ನು ನಿರಾಕರಿಸಿದ ಬವೇರಿಯನ್ ಸುಪ್ರೀಮ್ ಕೋರ್ಟಿನ ಡಿಸೆಂಬರ್ ೧೯ರ ಆದೇಶಾನುಸಾರವಾಗಿ ೧೯೨೪ರ ಡಿಸೆಂಬರ್ ೨೦ರಂದು ಹಿಟ್ಲರನ ಅಪರಾಧವನ್ನು ಮನ್ನಿಸಿ ಆತನನ್ನು ಬಿಡುಗಡೆ ಮಾಡಲಾಯಿತು. ವಿಚಾರಣಾ ಅವಧಿಯ ಸೆರೆವಾಸವನ್ನೂ ಒಳಗೊಂಡಂತೆ ತನ್ನ ಶಿಕ್ಷೆಯ ಹೆಚ್ಚೂಕಡಿಮೆ ಒಂದು ವರುಷ ಅವಧಿಯನ್ನು ಮಾತ್ರ ಆತ ಪೂರಯಿಸಿದ. ೧೯೨೫ರ ಜೂನ್ ೨೮ರಂದು ಹಿಟ್ಲರ್ ಉಫಿಂಗ್ (Uffing)ನಿಂದ ನ್ಯೂಯಾರ್ಕ್ ನಗರದ ’ದ ನೇಶನ್’ ಪತ್ರಿಕೆಯ ಸಂಪಾದಕನಿಗೆ ಬರೆದ ಪತ್ರವೊಂದರಲ್ಲಿ ಆತ ತಾನು ’ಸ್ಯಾಂಡ್ ಬರ್ಗ್ ಎ.ಎಸ್.’(sic)ನ ಕಾರಾಗೃಹದಲ್ಲಿ ಎಷ್ಟುಕಾಲವಿದ್ದೆ ಹಾಗೂ ತನಗೆ ದೊರಕಬೇಕಾಗಿದ್ದ ಸೌಲಭ್ಯಗಳನ್ನೆಲ್ಲ ಹೇಗೆ ಹಿಂತೆಗೆದುಕೊಳ್ಳಲಾಯಿತೆಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದ.

ಮೈನ್ ಕ್ಯಾಂಫ್

ಅಡೋಲ್ಫ್ ಹಿಟ್ಲರ್ 
ಮೈನ್ ಕ್ಯಾಂಫ್

ಆತ ಲ್ಯಾಂಡ್ಸ್ ಬರ್ಗಿನಲ್ಲಿದ್ದಾಗ ಮೈನ್ ಕ್ಯಾಂಫ್ (ನನ್ನ ಹೋರಾಟ )ದ ಮೊದಲ ಭಾಗವನ್ನು ತನ್ನ ಅನುಯಾಯಿ ರುಡಾಲ್ಫ್ ಹೆಸ್ ನ ಕೈಯಿಂದ ಉಕ್ತಲೇಖನದ ಮೂಲಕ ಬರೆಸಿದ. ಈ ಪುಸ್ತಕದ ಮೂಲ ಹೆಸರು ’Four and a Half Years of Struggle against Lies, Stupidity, and Cowardice' ಎಂಬುದಾಗಿತ್ತು. T ಥುಲ್ ಸೊಸೈಟಿಯ ಸದಸ್ಯನಾದ ಡೀಟ್ರಿಚ್ ಎಖಾರ್ಟನಿಗೆ ಅರ್ಪಿಸಲಾಗಿದ್ದ ಈ ಪುಸ್ತಕವು ಹಿಟ್ಲರನ ಆತ್ಮಕಥೆಯೂ ಆತನ ಸಿದ್ಧಾಂತಗಳ ಸ್ಪಷ್ಟೀಕರಣವೂ ಆಗಿದ್ದಿತು. ೧೯೨೫ ಮತ್ತು ೧೯೨೬ರಲ್ಲಿ ಎರಡು ಸಂಪುಟಗಳಂತೆ ಪ್ರಕಟವಾದ ಈ ಪುಸ್ತಕದ ೨೪೦,೦೦೦ ಪ್ರತಿಗಳು ೧೯೨೫ ಮತ್ತು ೧೯೩೪ರ ಕಾಲಾವಧಿಯಲ್ಲಿ ಮಾರಾಟವಾದವು. ಯುದ್ಧ ಕೊನೆಗೊಳ್ಳುವ ವೇಳೆಗೆ ಸುಮಾರು ೧೦ ಮಿಲಿಯನ್ ಪ್ರತಿಗಳು ಮಾರಾಟವಾಗಿದ್ದವು ಮತ್ತು ಹಂಚಲ್ಪಟ್ಟಿದ್ದವು (ನವವಿವಾಹಿತರು ಮತ್ತು ಸೈನಿಕರಿಗೆ ಉಚಿತ ಪ್ರತಿಗಳು ದೊರಕುತ್ತಿದ್ದವು). ಪುಸ್ತಕದ ಹಕ್ಕುಸ್ವಾಮ್ಯತೆಯ ಮೇಲಿನ ತೆರಿಗೆಗಳನ್ನು ವರ್ಷಾನುಗಟ್ಟಲೆ ತೆರದಿದ್ದ ಹಿಟ್ಲರ್ ಚಾನ್ಸಲರ್ ಆಗುವ ವೇಳೆಗೆ ಆತನ ತೆರಿಗೆಸಾಲದ ಮೊತ್ತ ೪೦೫,೫೦೦ ರೀಚ್ ಮಾರ್ಕ್ಸ್ (ಇಂದಿನ ೬ ಮಿಲಿಯನ್ ಯೂರೋಗಳು) ತಲುಪಿತ್ತು (ಚಾನ್ಸಲರ್ ಆದನಂತರ ಈ ತೆರಿಗೆಸಾಲವನ್ನು ಮನ್ನಾಮಾಡಲಾಯಿತು. ಮೈನ್ ಕ್ಯಾಂಫ್ ನ ಯುರೋಪಿನ ಕಾಪಿರೈಟ್ ೨೦೧೫ರ ಜನವರಿ ೩೧ರ ತನಕ ಫ್ರೀ ಸ್ಟೇಟ್ ಆಫ್ ಬವೇರಿಯಾದ ಬಳಿಯಿರುತ್ತದೆ. ಜರ್ಮನಿಯಲ್ಲಿ ಈ ಪುಸ್ತಕದ ವ್ಯಾಖ್ಯಾನಭರಿತ ಪ್ರತಿಗಳನ್ನು ಅಧ್ಯಯನಕ್ಕಾಗಿ ಮಾತ್ರ ದೊರಕಿಸಲಾಗುತ್ತದೆ. ಸನ್ನಿವೇಶ ಮಾತ್ರ ಇನ್ನೂ ಅಸ್ಪಷ್ಟವಾಗಿದೆ. ಇತಿಹಾಸಜ್ಞ ವರ್ನರ್ ಮೇಸರ್ ’ಬಿಲ್ಡ್ ಆಮ್ ಸೊಂಟಾಗ್’(Bild am Sonntag)ಗೆ ನೀಡಿದ ಸಂದರ್ಶನದ ಪ್ರಕಾರ ಹಿಟ್ಲರನ ಅಳಿಯನ ಮಗನಾದ ಲಿಯೋ ರೌಬಲ್ ಬವೇರಿಯದ ವಿರುದ್ಧ ಪುಸ್ತಕದ ಕಾಪಿರೈಟಿಗಾಗಿ ಕೇಸು ಹಾಕಿದರೆ ಆತ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಎಂದು ಪ್ರತಿಪಾದಿಸಿದ. ಆದರೆ ರೌಬಲ್ ಮಿಲಿಯಗಟ್ಟಲೆ ಯುರೋಗಳಷ್ಟು ಬೆಲೆಬಾಳುವ ಈ ಪುಸ್ತಕದ ಕಾಪಿರೈಟಿನ ಒಂದು ಭಾಗವೂ ತನಗೆ ಬೇಕಿಲ್ಲವೆಂದು ಹೇಳಿಕೆ ನೀಡಿದ್ದಾನೆ. ಈ ರೀತಿಯ ಸಂದಿಗ್ದ ಸನ್ನಿವೇಶದಿಂದಾಗಿ ಪೋಲಂಡ್ ಮತ್ತು ಸ್ವೀಡನ್ ದೇಶಗಳಲ್ಲಿ ಈ ಸ್ವಾಮ್ಯಕ್ಕಾಗಿ ಅನೇಕ ನ್ಯಾಯಾಂಗ ವಿಚಾರಣೆಗಳು ನಡೆದಿವೆ. ಇದಲ್ಲದೆ ಮೈನ್ ಕ್ಯಾಂಫ್ ಅನ್ನು ಯು.ಎಸ್. ಮತ್ತು ಟರ್ಕಿ ಹಾಗೂ ಇಸ್ರೇಲ್ ನ ವಿವಿಧ ರಾಜಕೀಯ ಆಸ್ಥೆಗಳುಳ್ಳ ಪ್ರಕಾಶಕರು ಪ್ರಕಟಿಸುತ್ತಿದ್ದಾರೆ.

ಪಕ್ಷದ ಪುನರ್ರಚನೆ

ಹಿಟ್ಲರನ ಬಿಡುಗಡೆಯ ಸಮಯದಲ್ಲಿ ಜರ್ಮನಿಯ ರಾಜಕೀಯ ಸನ್ನಿವೇಶವು ತಣ್ಣಗಾಗತೊಡಗಿದ್ದು ಮತ್ತು ಆರ್ಥಿಕ ಏಳಿಗೆ ಕಾಣತೊಡಗಿದ್ದು ಆತನ ಅಭಿಯಾನಕ್ಕೆ ಪ್ರತಿಕೂಲ ಪರಿಸ್ಥಿತಿಯನ್ನು ನಿರ್ಮಿಸಿದವು. ’ಹಿಟ್ಲರ್ ಪುಶ್ ’ನಿಂದಾಗಿ ಸ್ವಲ್ಪ ಮಟ್ಟಿಗಿನ ಜನಪ್ರಿಯತೆ ದೊರಕಿದ್ದರೂ ಕೂಡ ಆತನ ಪಕ್ಷದ ಕೇಂದ್ರಸ್ಥಾನ ಇನ್ನೂ ಮ್ಯೂನಿಕ್‍ನಲ್ಲಿಯೇ ಇದ್ದಿತು. NSDAP ಮತ್ತು ಅದರ ಅಂಗಗಳನ್ನು ವಿಪ್ಲವದ ವಿಫಲತೆಯ ನಂತರ ಬಹಿಷ್ಕರಿಸಲಾಯಿತು. ತನ್ನ ಪಕ್ಷವು ಇನ್ನುಮುಂದೆ ರಾಜಕೀಯ ಅಧಿಕಾರ ಗಳಿಸಲು ಕಾನೂನುಬದ್ಧ ಮಾರ್ಗಗಳನ್ನು ಮಾತ್ರ ಅನುಸರಿಸುವುದೆಂದು ಬವೇರಿಯದ ಪ್ರಧಾನಮಂತ್ರಿ ಹೀನ್ರಿಕ್ ಹೆಲ್ಡನಿಗೆ ಭರವಸೆ ನೀಡಿದ ಹಿಟ್ಲರ್ ತನ್ನ ಪಕ್ಷದ ಮೇಲಿನ ನಿಷೇಧಾಜ್ಞೆಯನ್ನು ತೆಗೆಸಿಹಾಕಿಸಿದನು. NSDAPಯ ಮೇಲಿನ ನಿಷೇಧಾಜ್ಞೆಯನ್ನು ೧೯೨೫ರ ಫೆಬ್ರುವರಿ ೧೬ರಂದು ರದ್ದುಮಾಡಲಾಯಿತಾದರೂ, ಒಂದು ಪ್ರಚೋದಕ ಭಾಷಣ ಮಾಡಿದ ಕಾರಣದಿಂದಾಗಿ ಹಿಟ್ಲರನ ಮೇಲೆ ಸಾರ್ವಜನಿಕ ಭಾಷಣ ಮಾಡುವಂತಿಲ್ಲವೆಂದು ನಿಷೇಧ ಹಾಕಲಾಯಿತು. ಸಾರ್ವಜನಿಕ ಭಾಷಣಗಳನ್ನು ಮಾಡಲು ಸಾಧ್ಯವಿಲ್ಲದ ಕಾರಣ ಹಿಟ್ಲರ್ ಉತ್ತರ ಜರ್ಮನಿಯಲ್ಲಿ ಪಕ್ಷವನ್ನು ಸಂಸ್ಥಾಪಿಸುವ ಜವಾಬ್ದಾರಿಯನ್ನು ೧೯೨೪ರಲ್ಲಿ ರೀಚ್‍ಸ್ಟ್ಯಾಗ್‍ಗೆ ಆಯ್ಕೆಯಾಗಿದ್ದ ಪ್ರಮುಖರಲ್ಲೊಬ್ಬನಾದ (Reichsorganisationsleiter ) ಗ್ರೆಗರ್ ಸ್ಟ್ರ್ಯಾಸರ್‍ನಿಗೆ ವಹಿಸಿದನು. ತನ್ನ ತಮ್ಮಂದಿರಾದ ಓಟ್ಟೊ ಮತ್ತು ಜೋಸೆಫ್ ಗೀಬೆಲ್ಸ್ ಜತೆಸೇರಿದ ಸ್ಟ್ರಾಸರ್, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ತೊಡಗುವುದರೊಂದಿಗೆ ಪಕ್ಷದ ಸಮಾಜವಾದೀ ಅಂಶವನ್ನು ಪ್ರಚುರಪಡಿಸತೊಡಗಿದನು. Arbeitsgemeinschaft der Gauleiter Nord-West ಎಂದು ಹೆಸರುಪಡೆದ ಈ ಕಾರ್ಯಾಂಗವು ಹಿಟ್ಲರನ ಅಧಿಕಾರಕ್ಕೆ ಸವಾಲು ಒಡ್ಡುವ ಒಳವಿರೋಧೀ ಪಕ್ಷವಾಗಿ ಬೆಳೆಯಿತಾದರೂ ೧೯೨೬ರಲ್ಲಿ ನಡೆದ ಬ್ಯಾಂಬರ್ಗ್ ಅಧಿವೇಶನದಲ್ಲಿ ಸೋಲನ್ನನುಭವಿಸಿತು ಹಾಗೂ ಗೀಬೆಲ್ಸ್ ಹಿಟ್ಲರನ ಅನುಯಾಯಿಯಾಗುವಂತಾಯಿತು. ಈ ಮುಖಾಮುಖಿಯ ನಂತರ ಹಿಟ್ಲರ್ ಪಕ್ಷವನ್ನು ಹೆಚ್ಚು ಕೇಂದ್ರೀಕೃತಗೊಳಿಸಿದುದೇ ಅಲ್ಲದೆ ’ಮುಖಂಡತ್ವ ನಿಯಮ’(Führerprinzip )ವನ್ನು ಪಕ್ಷವ್ಯವಸ್ಥೆಯ ಮೂಲಭೂತ ನಿಯಮವನ್ನಾಗಿ ಜಾರಿಗೆ ತಂದನು. ಪಕ್ಷದ ಅಂ ನಾಯಕರುಗಳ ಆಯ್ಕೆ ವರಿಷ್ಠಾಧಿಕಾರಿಗಳಿಂದ ನಡೆಯುತ್ತಿತ್ತೇ ಹೊರತು ಪಕ್ಷದ ಸದಸ್ಯರಿಂದಲ್ಲ. ಮೇಲಧಿಕಾರಿಗಳು ಆಯ್ಕೆಯಾದ ಕೆಳಹುದ್ದೆಯ ಅಧಿಕಾರಿಗಳ ಹೊಣೆಗಾರಿಕೆ ಹೊತ್ತುಕೊಳ್ಳುವದು ಮಾತ್ರವಲ್ಲದೆ ಅವರಿಂದ ಪ್ರಶ್ನಾತೀತ ನಿಷ್ಟೆಯನ್ನು ಅಪೇಕ್ಷಿಸುತ್ತಿದ್ದರು. ಪ್ರಜಾಪ್ರಭುತ್ವದ ಬಗ್ಗೆ ಉಪೇಕ್ಷೆ ಹೊಂದಿದ್ದ ಹಿಟ್ಲರನ ಧೋರಣೆಗೆ ತಕ್ಕಂತೆ ಪಕ್ಷದ ಸಂಪೂರ್ಣ ನಿಯಂತ್ರಣ ಮತ್ತು ಅಧಿಕಾರ ಮೇಲ್ಮಟ್ಟದಿಂದ ಆರಂಭವಾಗಿ ಕೆಳಕ್ಕೆ ಇಳಿಯುತ್ತಿತ್ತು. ಹಿಟ್ಲರನ ಪ್ರಮುಖ ಆಕರ್ಷಣೆಯೆಂದರೆ ಜರ್ಮನ್ ಚಕ್ರಾಧಿಪತ್ಯದ ಸೋಲಿನ ನಂತರ ಅದರ ಮೇಲೆ ಪಾಶ್ಚಾತ್ಯ ಮಿತ್ರ ಒಕ್ಕೂಟವು ಹೇರಿದ ವರ್ಸೇಲ್ಸ್ ಒಪ್ಪಂದದಿಂದ ಅವಮಾನಿತರಾಗಿದ್ದ ಜರ್ಮನರ ರಾಷ್ಟ್ರೀಯ ಅಭಿಮಾನವನ್ನು ಬಡಿದೆಬ್ಬಿಸಬಲ್ಲ ಸಾಮರ್ಥ್ಯ. ಆರ್ಥಿಕವಾಗಿ ಸಬಲವಾಗಿದ್ದ ಯುರೋಪಿನ ಅನೇಕ ವಸಾಹತುಗಳನ್ನು ಕಳೆದುಕೊಂಡ ಜರ್ಮನಿ ಯುದ್ಧಕ್ಕೆ ತಾನು ಮಾತ್ರ ಕಾರಣಕರ್ತನೆಂದು ತಪ್ಪೊಪ್ಪಿಗೆ ನೀಡಬೇಕಾಗಿ ಬಂದಿತು ಮಾತ್ರವಲ್ಲದೆ ಸುಮಾರು ೧೩೨ಬಿಲಿಯನ್ ಮಾರ್ಕ್ಸ್ ಅನ್ನು ಪರಿಹಾರಧನವಾಗಿ ತೆರಬೇಕಾಯಿತು. ಹೆಚ್ಚಿನ ಜರ್ಮನರು ಈ ಒಪ್ಪಂದದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರೂ ಈ ಅವಮಾನಗಳಿಗೆ ”ಅಂತರ್ರಾಷ್ಟ್ರೀಯ ಯಹೂದಿ ಸಮುದಾಯ’ವೇ ಕಾರಣವೆಂದು ನಾಜಿಗಳು ಹೊರಿಸಲೆತ್ನಿಸಿದ ಆರೋಪಗಳು ಮತದಾರರನ್ನು ಒಲಿಸುವುದರಲ್ಲಿ ಅಷ್ಟೇನೂ ಫಲಕಾರಿಯಾಗಲಿಲ್ಲ. ಇದರಿಂದ ಕೂಡಲೇ ಪಾಠ ಕಲಿತುಕೊಂಡ ಪಕ್ಷವು ಯಹೂದೀ ವಿರೋಧದ ಜತೆಗೆ ’ವೀಮರ್ ವ್ಯವಸ್ಥೆ’ಯ ಲೋಪ ದೋಷಗಳನ್ನೆತ್ತಿ ತೋರಿಸಿ ವಿರೋಧಿಸುವ ಹೊಸದಾದ ಸೂಕ್ಷ್ಮ ಪ್ರಚಾರನೀತಿಯನ್ನು ಜಾರಿಗೆ ತಂದಿತು. ಇತರ ಪಕ್ಷಗಳೂ ಇದರ ಪರವಹಿಸಿದವು. ರಾಜಕೀಯ ವಿಪ್ಲವದ ಮೂಲಕ ಗಣತಂತ್ರವನ್ನು ಉರುಳಿಸುವುದರಲ್ಲಿ ಅಸಫಲನಾದ ಹಿಟ್ಲರನು ಅಧಿಕಾರ ಗಳಿಕೆಗಾಗಿ ಕಾನೂನುಬದ್ಧ ತಂತ್ರಗಾರಿಕೆಯನ್ನು ಬಳಸತೊಡಗಿದನು; ಅಂದರೆ ಕಾನೂನುಬದ್ಧವಾಗಿ ಅಧಿಕಾರ ದೊರೆಯುವತನಕ ವೀಮರ್ ಗಣತಂತ್ರದ ನಿಯಮಗಳನ್ನು ಪಾಲಿಸುವುದು. ನಂತರ ವೀಮರ್ ಗಣತಂತ್ರದ ಸಂಸ್ಥೆಗಳನ್ನೇ ಬಳಸಿಕೊಂಡು ಅದನ್ನು ಕೆಡವುವುದು ಮತ್ತು ತನ್ನನ್ನು ಸರ್ವಾಧಿಕಾರಿಯನ್ನಾಗಿ ಪ್ರತಿಷ್ಠಾಪಿಸಿಕೊಳ್ಳುವದು. ಪಕ್ಷದ ಕೆಲ ಸದಸ್ಯರು, ಅದರಲ್ಲಿಯೂ SAಯ ಪ್ಯಾರಾಮಿಲಿಟರಿ ವಿಭಾಗದವರು, ಈ ನೀತಿಯನ್ನು ವಿರೋಧಿಸಿದರು. ರಾಹ್ಮ್ ಮತ್ತಿತರರು ಹಿಟ್ಲರನನ್ನು ’ಕಾನೂನುಬದ್ಧ ಅಡಾಲ್ಫ್’(Adolphe Legalité) ಎಂದು ಗೇಲಿಮಾಡಿದರು.

ಅಧಿಕಾರಪ್ರಾಪ್ತಿಯೆಡೆಗೆ..

'ನಾಝೀ ಪಕ್ಷದ ಚುನಾವಣಾ ಫಲಿತಾಂಶಗಳು
'
ದಿನಾಂಕ ಮತಗಳು ಶೇಕಡಾವಾರು ರೀಚ್‍ಸ್ಟ್ಯಾಗ್‍ನಲ್ಲಿ ಸ್ಥಾನಗಳು ಹಿನ್ನೆಲೆ
ಮೇ 1924 1,918,300 6.5 32 ಹಿಟ್ಲರ್ ಸೆರೆವಾಸದಲ್ಲಿ
ಡಿಸೆಂಬರ್ 1924 907,300 3.0 14 ಹಿಟ್ಲರ್ ಬಿಡುಗಡೆ
ಮೇ 1928 810,100 2.6 12  
ಸೆಪ್ಟೆಂಬರ್ 1930 6,409,600 18.3 107 ಆರ್ಥಿಕ ಬಿಕ್ಕಟ್ಟಿನ ನಂತರ
ಜುಲೈ 1932 13,745,800 37.4 230 ಹಿಟ್ಲರ್ ಅಧ್ಯಕ್ಷೀಯ ಸ್ಥಾನಕ್ಕೆ ಉಮೇದುವಾರನಾದ ನಂತರ
ನವೆಂಬರ್ 1932 11,737,000 33.1 196  
ಮಾರ್ಚ್ 1933 17,277,000 43.9 288 ಹಿಟ್ಲರ್ ಜರ್ಮನಿಯ ಚಾನ್ಸೆಲರ್ ಆದ ಅವಧಿಯಲ್ಲಿ

ಬ್ರೂನಿಂಗ್ ಆಡಳಿತ

ಅಡೋಲ್ಫ್ ಹಿಟ್ಲರ್ 
ಡಿಸೆಂಬರಿನ ಒಂದು NSDAP ಸಭೆಯಲ್ಲಿ, ನಡುವಿನಲ್ಲಿ ಹಿಟ್ಲರ್

೧೯೩೦ರಲ್ಲಿ ಜರ್ಮನಿಯಲ್ಲುಂಟಾದ ಮಹಾನ್ ಮುಗ್ಗಟ್ಟು (Great Depression) ಹಿಟ್ಲರನ ರಾಜಕೀಯ ಜೀವನಕ್ಕೆ ಪ್ರಮುಖ ತಿರುವು ನೀಡಿತು. ವೀಮರ್ ರಿಪಬ್ಲಿಕ್ ಎಂದೂ ಗಟ್ಟಿಯಾಗಿ ಬೇರೂರುವುದು ಸಾಧ್ಯವಾಗಲಿಲ್ಲ ಮತ್ತು ಅದು ಸದಾಕಾಲವೂ ಸಂಪ್ರದಾಯವಾದಿ (ರಾಜಪ್ರಭುತ್ವವಾದಿಗಳೂ ಸೇರಿದಂತೆ)ಗಳ, ಕಮ್ಯುನಿಸ್ಟರ ಹಾಗೂ ನಾಝಿಗಳ ವಿರೋಧವನ್ನು ಎದುರಿಸಬೇಕಾಗಿ ಬರುತ್ತಿತ್ತು. ಪ್ರಜಾಪ್ರಭುತ್ವದ ಸಂಸದೀಯ ಗಣರಾಜ್ಯಕ್ಕೆ ನಿಷ್ಠವಾಗಿದ್ದ ಈ ಪಕ್ಷವು ಈ ಅಡಚನೆಗಳಿಗೆ ಪ್ರತಿತಂತ್ರವನ್ನು ಹೂಡಲಾರದೆ ಹೋದವು ಮತ್ತು ಅದರಿಂದಾಗಿ ಈ ಮಹಾ ಮೈತ್ರಿಕೂಟವು (Grand Coalition) ಮುರಿದುಬಿದ್ದು, ಅಲ್ಪ ಸಂಖ್ಯಾಕ ಮಂತ್ರಿಮಂಡಳವು ನಿಯೋಜನೆಗೊಂಡಿತು. ರೋಮನ್ ಕ್ಯಥೊಲಿಕ್ ಸೆಂಟರ್ ಪಾರ್ಟಿಯ ಹೊಸ ಚಾನ್ಸೆಲರ್ ಹೆನ್ರಿ ಬ್ರೂನಿಂಗ್ (Heinrich Brüning), ಅಧ್ಯಕ್ಷರ ತುರ್ತು ಶಾಸನಗಳ ಮೂಲಕ ತನ್ನ ತೀರ್ಮಾನಗಳನ್ನು ಲಾಗೂ ಮಾಡಬೇಕಾಗಿ ಬಂತು. ಬಹುಪಾಲು ಸಂಖ್ಯೆಯ ಪಕ್ಷಗಳಿಂದ ಸಹಿಸಲ್ಪಟ್ತ ಈ ಶಾಸನಗಳ ಮೂಲಕ ಆಡಳಿತ ನಡೆಸುವ ವೈಖರಿಯು ಸಂಸತ್ತಿನ ನಿಷ್ಕ್ರಿಯತೆಯಸರಣಿಗೆ ಮಾಪಕವಾಯಿತು ಹಾಗೂ ಸರ್ಕಾರದ ಅಧಿಕಾರೀ ಧೋರಣೆಗೆ ದಾರಿಹಾಕಿಕೊಟ್ಟಿತು. ಬ್ರೂನಿಂಗ್ ಶಾಸನಗಳ ವಿರುದ್ಧ ರೀಕ್‌ಸ್ಟ್ಯಾಗ್ (Reichstag)  '​ ಎಬ್ಬಿಸಿದ ಆರಂಭಿಕ ವಿರೋಧವು ಸೆಪ್ಟೆಂಬರ್ ೧೯೩೦ರಲ್ಲಿ ಅಕಾಲಿಕ ಚುನಾವಣೆಗೆ ನಾಂದಿಯಾಯಿತು. ರಿಪಬ್ಲಿಕನ್ ಪಕ್ಷಗಳು ತಮ್ಮ ಬಹುಮತವನ್ನು ಸಾಬೀತುಪಡಿಸಿ, ತಮ್ಮ ಮೈತ್ರಿಕೂಟವನ್ನು ಉಳಿಸುಕೊಳ್ಳುವಲ್ಲಿ ವಿಫಲವಾದವು. ಈ ಸಂದರ್ಭದಲ್ಲಿ ನಾಝಿಗಳು ಇದ್ದಕ್ಕಿದ್ದಂತೆ ಎದ್ದುನಿಂತು, ೧೦೭ ಸ್ಥಾನಗಳನ್ನು ಪಡೆಯುವ ಮೂಲಕ ಶೇ.೧೮.೩ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿತು. ಈ ಪ್ರಕ್ರಿಯೆಯಿಂದಾಗಿ ಅದು ಒಂಭತ್ತನೆಯ- ಅತಿಚಿಕ್ಕ ಪಕ್ಷದಿಂದ ೨ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ೧೯೩೦ರ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ಹಿಟ್ಲರನು ಇಬ್ಬರು ಕಿರಿಯ ರೀಶ್ವಹ್ರ್ (Reichswehr) ಅಧಿಕಾರಿಗಳು ನಾಝಿ ಪಕ್ಷದ ಸದಸ್ಯತ್ವ ಪಡೆದುದಕ್ಕಾಗಿ ಲೀಪ್ಝಿಗ್ (Leipzig)ನಲ್ಲಿ ವಿಚಾರಣೆಗೊಳಪಟ್ಟುದಕ್ಕೆ ಸಾಕ್ಷಿಯಾದನು.ಅಂದಿನ ದಿನಗಳಲ್ಲಿ ರೀಶ್ವಹ್ರ್ (Reichswehr) ಜನರು ನಾಝಿ ಪಕ್ಷ ಸೇರುವುದನ್ನು ನಿಷೇಧಿಸಲಾಗಿತ್ತು. ಲೆಫ್ಟಿನೆಂಟ್ ರಿಚರ್ಡ್ ಮತ್ತು ಹನ್ಸ್ ಲುಡಿನ್ ಎಂಬ ಈ ಇಬ್ಬರು ಅಧಿಕಾರಿಗಳು ಮುಕ್ತವಾಗಿಯೇ ನಾಝಿ ಪಕ್ಷದ ಸದಸ್ಯತ್ವವನ್ನು ಒಪ್ಪಿಕೊಂಡರು ಮತ್ತು ತಮ್ಮನ್ನು ಸಮರ್ಥಿಸಿಕೊಳ್ಳಲು, ರೀಶ್ವಹ್ರ್‌ನಲ್ಲಿ (Reichswehr) ಸೇವೆ ಸಲ್ಲಿಸುತ್ತಿರುವ ಯಾವ ವ್ಯಕ್ತಿಗೂ ನಾಝಿಪಕ್ಷ ಸೇರದಂತೆ ನಿಷೇಧ ವಿಧಿಸಕೂಡದೆಂದು ವಾದಿಸಿದರು. ಫಿರ್ಯಾದಿಯು ನಾಝಿಪಕ್ಷವು ಅಪಾಯಕರ ಕ್ರಾಂತಿಕಾರಿ ಬಲವೆಂದು ವಾದಿಸಿದಾಗ ಪ್ರತಿವಾದಿಯ ಪರ ವಾದಿಸುತ್ತಿದ್ದ ಹಾನ್ಸ್ ಫ್ರಾಂಕ್ ನಾಝಿಪಕ್ಷವು ಕಾನೂನುಬದ್ಧತೆ ಹೊಂದಿರುವ ಪಕ್ಷವೆಂದು ಸಾಬೀತುಪಡಿಸಲು ಹಿಟ್ಲರನನ್ನು ಕಟಕಟೆಗೆ ತಂದು ನಿಲ್ಲಿಸಿದ್ದನು. ತನ್ನ ಹೇಳಿಕೆಯಲ್ಲಿ ಹಿಟ್ಲರನು ತನ್ನ ಪಕ್ಷವು ನ್ಯಾಯಸಮ್ಮತ ಮಾರ್ಗದಿಂದಲೇ ಅಧಿಕಾರಕ್ಕೆ ಬರಲಿಚ್ಚಿಸುವುದಾಗಿಯೂ ಅದರ ‘ರಾಷ್ಟ್ರೀಯ ಕ್ರಾಂತಿ’ಯನ್ನು ಕೇವಲ ‘ರಾಜಕೀಯ’ವಾಗಿ ಅರ್ಥೈಸಿಕೊಳ್ಳಬೇಕೆಂದೂ ಮತ್ತು ತನ್ನ ಪಕ್ಷವು ರೀಶ್ವಹ್ರ್‌ (Reichswehr) ಗೆ ಶತ್ರುತ್ವ ತೋರದೆ ಮಿತ್ರನಾಗಿದೆಯೆಂದೂ ನುಡಿದನು. ೨೫ ಸೆಪ್ಟೆಂಬರ್ ೧೯೩೦ರ ಹಿಟ್ಲರನ ಈ ಹೇಳಿಕೆಯು ಅಧಿಕಾರಿವಲಯದಲ್ಲಿಯೇ ಆತನಿಗೆ ಹಲವಾರು ಅಭಿಮಾನಿಗಳನ್ನು ದೊರಕಿಸಿಕೊಟ್ಟಿತು. ಬ್ರೂನಿಂಗ್‌ರ ಆಯವ್ಯಯ ಸಮುಚ್ಚಯ ನಿಧಿ ಕಾಯ್ದೆ ಹಾಗೂ ವಿತ್ತ ನೀತಿಗಳ ಕಾಠಿಣ್ಯದಿಂದಾಗಿ ಕೊಂಚ ಮಟ್ಟಿಗೆ ಆರ್ಥಿಕ ಪ್ರಗತಿಯನ್ನು ಸಾಧಿಸಿದರೂ ಜನಪ್ರಿಯತೆ ಗಳಿಸುವಲ್ಲಿ ಸಂಪೂರ್ಣ ವಿಫಲಗೊಂಡಿತು. ಈ ಸನ್ನಿವೇಶಗಳಡಿಯಲ್ಲಿ ಹಿಟ್ಲರ್, ೧೯೨೦ರ ಹಣದುಬ್ಬರ ಹಾಗೂ ಮುಗ್ಗಟ್ಟಿನ ಕಾಲದ ನಿರುದ್ಯೋಗಗಳಿಂದ ದೊಡ್ಡ ಹೊಡೆತ ತಿಂದ ಜರ್ಮನಿಯ ರೈತರು, ಯುದ್ಧಾನುಭವಿಗಳು ಹಾಗೂ ಮಧ್ಯಮವರ್ಗೀಯರಲ್ಲಿ ಮೊರೆಹೋದನು. ಸೆಪ್ಟೆಂಬರ್ ೧೯೩೧ರಲ್ಲಿ ಹಿಟ್ಲರನ ಸೋದರ ಸೊಸೆ ಗೆಲಿ ರೌಬಲ್ ಆತನ ಮ್ಯೂನಿಕ್ ಅಪಾರ್ಟ್ಮೆಂಟಿನ (ಆತನ ಮಲಸಹೋದರಿ ಏಂಜೆಲಾ ಮತ್ತವಳ ಮಗಳು ಗೆಲಿ, ೧೯೨೯ರಿಂದಲೂ ಆತನೊಡನೆ ಮ್ಯೂನಿಕ್ನಲ್ಲಿ ವಾಸಿಸುತ್ತಿದ್ದರು). ಮಲಗುವ ಕೋಣೆಯಲ್ಲಿ ಸತ್ತುಬಿದ್ದಳು. ಅದೊಂದು ಆತ್ಮಹತ್ಯೆಯಂತೆ ತೋರುತ್ತಿತ್ತು. ಗೆಲಿಯು ಹಿಟ್ಲರನೊಡನೆ ಒಂದು ಬಗೆಯಲ್ಲಿ ಪ್ರಣಯ ಸಂಬಂಧವನ್ನು ಹೊಂದಿದ್ದಳೆಂದು ನಂಬಲಾಗಿದೆ. ಆತನಿಗಿಂತ ಸುಮಾರು ೧೯ ವರ್ಷ ಕಿರಿಯಳಾಗಿದ್ದ ಆಕೆಯು ಆತ್ಮಹತ್ಯೆ ಮಾಡಿಕೊಳ್ಳಲು ಅವನ ಬಂದೂಕನ್ನೇ ಬಳಸಿದ್ದಳು. ತನ್ನ ಸೊಸೆಯ ಸಾವು ಹಿಟ್ಲರ್ ಪಾಲಿಗೆ ಕೊನೆಯಿರದ ನೋವಾಗಿ ಪರಿಣಮಿಸಿತೆಂದು ಹೇಳಲಾಗುತ್ತದೆ. ೧೯೩೨ರಲ್ಲಿ ವೃದ್ಧ ಅಧ್ಯಕ್ಷ ಪೌಲ್ ವೊನ್ ಹಿನ್‌ಡೆನ್‌ಬರ್ಗ್‌ನ ವಿರುದ್ಧ ಹಿಟ್ಲರನು ಚುನಾವಣೆ ಅಧ್ಯಕ್ಷೀಯ ಚುನಾವಣೆಗಳನ್ನೆದುರಿಸಲು ಯೋಚಿಸಿದನು. ಮೊದಲಬಾರಿಗೆ ಡಸ್ಸೆಲ್ಡೋರ್ಫ್ (Dusseldorf) ನಲ್ಲಿ ಇಂಡಸ್ಟ್ರಿ ಕ್ಲಬ್ನಲ್ಲಿ ನೀಡಲಾದ ಆತನ ೨೭ ಜನವರಿ ೧೯೩೨ರ ಭಾಷಣವು ಅವನಿಗೆ ಜರ್ಮನಿಯ ಅತ್ಯಂತ ಪ್ರಭಾವಶಾಲಿ ಉದ್ಯಮಗಳ ವ್ಯಾಪಕ ಬೆಂಬಲವನ್ನು ಗಳಿಸಿಕೊಟ್ಟಿತು. ಹಿಟ್ಲರ್ ೧೯೧೩ರಲ್ಲಿಯೇ ಆಸ್ಟ್ರಿಯಾವನ್ನು ತೊರೆದಿದ್ದರೂ ಆತನಿಗೆ ಅದುವರೆಗೆ ಜರ್ಮನ್ ಪೌರತ್ವ ದೊರಕಿರಲಿಲ್ಲ, ಮತ್ತು ಈ ಕಾರಣದಿಂದಲೇ ಆತನಿಗೆ ಸಾರ್ವಜನಿಕವಾಗಿ ಸ್ಪರ್ಧಿಸಲು ತಡೆಯುಂಟಾಗಿತ್ತು. ಫೆಬ್ರವರಿ ತಿಂಗಳಲ್ಲಿ ನಾಝಿಪಕ್ಷವು ಪಾಲುದಾರನಾಗಿದ್ದ ಬ್ರುನ್ಸ್ವಿಕ್ (Brunswick) ರಾಜ್ಯ ಸರ್ಕಾರವು ಹಿಟ್ಲರನನ್ನು ಸಣ್ಣ ಪ್ರಮಾಣದ ಆಡಳಿತಾತ್ಮಕ ಹುದ್ದೆಗೆ ನೇಮಿಸಿತು ಮತ್ತು ೨೫ ಫೆಬ್ರವರಿ ೧೯೩೨ರಂದು ಇನ್ನು ಮುಂದೆ ಆತನು ಬ್ರುನ್ಸ್ವಿಕ್ನ ಪ್ರಜೆಯಾಗಿರುವನೆಂದು ಘೋಷಿಸಿತು. ಅಂದಿನ ದಿನಗಳಲ್ಲಿ ರಾಜ್ಯಸರ್ಕಾರಗಳು ಪೌರತ್ವವನ್ನು ದೃಢಪಡಿಸುವ ಪರಿಪಾಠವಿತ್ತು. ಇದರಿಂದ ಹಿಟ್ಲರ್ ತಾನೇತಾನಾಗಿ ಜರ್ಮನಿಯ ಪ್ರಜೆಯೆಂದು ಪರಿಗಣಿಸಲ್ಪಟ್ಟನು ಮತ್ತು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಪಡೆದನು. ಜರ್ಮನಿಯ ಈ ಹೊಸ ಪ್ರಜೆಯು ರಾಷ್ಟ್ರೀಯವಾದಿಗಳು, ರಾಜಸತ್ತಾವಾದಿಗಳು, ಕ್ಯಾಥೊಲಿಕ್, ರಿಪಬ್ಲಿಕನ್, ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಕ್ಷಗಳನ್ನು ಕೂಡ ಒಳಗೊಂಡಿದ್ದ ವ್ಯಾಪಕ ಸಮೂಹದ ಬೆಂಬಲ ಹೊಂದಿದ್ದ ಹಿನ್‌ಡೆನ್‌ಬರ್ಗ್ ವಿರುದ್ಧ ಸೆಣೆಸಿದನು. ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮತ್ತೊಬ್ಬ ಅಭ್ಯರ್ಥಿ ಕಮ್ಯುನಿಸ್ಟನಾಗಿದ್ದು, ಅಸಂಬದ್ಧ ಬಲಪಂಥೀಯ ಪಕ್ಷದ ಸದಸ್ಯನಾಗಿದ್ದನು. ಹಿಟ್ಲರನ ಪ್ರಚಾರವು Hitler über Deutschland (ಜರ್ಮನಿಯ ಮೇಲೆ ಹಿಟ್ಲರ್) ಎಂಬುದಾಗಿತ್ತು. ಇದು ದ್ವಂದ್ವಾರ್ಥವನ್ನು ಹೊಂದಿದ್ದು, ಆತನ ಸರ್ವಾಧಿಕಾರದ ಮಹತ್ವಾಕಾಂಕ್ಷೆಯ ಸೂಚನೆಯ ಹೊರತಾಗಿ ಆತನು ಆಕಾಶಯಾನದ ಮೂಲಕ ಪ್ರಚಾರ ಕೈಗೊಂದುದನ್ನು ಕೂಡ ಸೂಚಿಸುತ್ತಿತ್ತು. ಹಿಟ್ಲರನು ಎರಡೂ ಸುತ್ತುಗಳಲ್ಲಿ ದ್ವಿತೀಯಸ್ಥಾನದಲ್ಲಿದ್ದನು. ಏಪ್ರಿಲ್ ವೇಳೆಗೆ ಸುಮಾರು ೩೫%ಗೂ ಅಧಿಕ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿ ಉಳಿದನು. ಹಿಟ್ಲರನು ಹಿನ್‌ಡೆನ್‌ಬರ್ಗ್ ಎದುರು ಸೋಲನುಭವಿಸಿದರೂ ಈ ಚುನಾವಣೆಯು ಜರ್ಮನ್ ರಾಜಕಾರಣದಲ್ಲಿ ನೈಜ ಪರ್ಯಾಯವಾಗಿ ಆತನನ್ನು ಪ್ರತಿಷ್ಠಾಪಿಸಿತು.

ಪೇಪನ್ ಹಾಗೂ ಶ್ಲೀಚೆರ್ (Schleicher) ಶಾಸನಸಭೆಗಳು

ರಾಜಸತ್ತೆಯ ಆರಾಧಕರ (Camarilla)ರ ಪ್ರಭಾವಕ್ಕೊಳಗಾದ ಹಿನ್‌ಡೆನ್‌ಬರ್ಗ್, ಬ್ರೂನಿಂಗ್‌ರಿಂದ ಹೆಚ್ಚುಹೆಚ್ಚು ದೂರಾಗತೊಡಗಿದರು ಮತ್ತು ತಮ್ಮ ಚಾನ್ಸೆಲರನ್ನು, ದಬ್ಬಾಳಿಕೆ ಮನೋಭಾವದ ಬಲಪಂಥೀಯ ದಿಕ್ಕಿನಲ್ಲಿ ನಡೆಸುವಂತೆ ಒತ್ತಡ ಹೇರತೊಡಗಿದರು. ಇದು ೧೯೩೨ರಲ್ಲಿ, ಬ್ರೂನಿಂಗ್ ಮಂತ್ರಿಮಂಡಲದ ರಾಜೀನಾಮೆಯೊಂದಿಗೆ ಪರ್ಯವಸಾನಗೊಂಡಿತು. ಹಿನ್‌ಡೆನ್‌ಬರ್ಗ್, ಸಂಭಾವಿತನಾಗಿದ್ದ ಫ್ರಾನ್ಜ್ ವೊನ್ ಪೇಪನ್‌ರನ್ನು ಬರೋನ್ಸ್‌ ಮಂತ್ರಿಮಂಡಲವನ್ನು ಮುನ್ನಡೆಸುವ ಚಾನ್ಸೆಲರ್‌ ಆಗಿ ನೇಮಿಸಿದರು. ಪೇಪನ್ ಅಧಿಕಾರಯುಕ್ತ ಆಡಳಿತದ ಮೇಲೆ ಬಾಗಿದ್ದರು ಮತ್ತು, ರೀಚ್‌ಸ್ಟ್ಯಾಗ್‌‌ ನಲ್ಲಿ ಸಂಪ್ರದಾಯವಾದಿ ಜರ್ಮನ್ ನ್ಯಾಶನಲ್ ಪೀಪಲ್ಸ್ ಪಾರ್ಟಿ (DNVP)ಯು ಅವರ ಆಡಳಿತಕ್ಕೆ ಬೆಂಬಲ ಸೂಚಿಸಿದ ತತ್‌ಕ್ಷಣವೇ ಜುಲೈ ತಿಂಗಳಿನಲ್ಲಿ ಹೊಸ ಚುನಾವಣೆಗಳನ್ನು ಘೋಷಿಸಿದರು. ಈ ಚುನಾವಣೆಗಳಲ್ಲಿ ನಾಝಿಗಳು ೨೩೦ ಸ್ಥಾನಗಳನ್ನು ಪಡೆಯುವುದರೊಂದಿಗೆ ತಮ್ಮ ಮಹತ್ತರವಾದ ವಿಜಯವನ್ನು ಸಾಧಿಸಿದರು, ಮತ್ತು ರೀಚ್‌ಸ್ಟ್ಯಾಗ್‌ ನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು. ನಾಝಿಗಳ ಬೆಂಬಲವಿಲ್ಲದೆ ಸುಭದ್ರ ಸರ್ಕಾರದ ರಚೆನೆ ಸಾಧ್ಯವಿಲ್ಲವೆಂದರಿತ ಪೇಪನ್, ಹಿಟ್ಲರನಿಗೆ ವೈಸ್‌ ಚಾನ್ಸೆಲರ್ ಆಗಿ ಅಧಿಕಾರ ಸ್ವೀಕರಿಸುವಂತೆ ಮತ್ತು ಸಂಸತ್ತಿನ ಅಧಾರದ ಮೇಲೆ ಹೊಸ ಸರ್ಕಾರವನ್ನು ಪ್ರವೇಶಿಸುವಂತೆ ಒತ್ತಾಯಪಡಿಸಿದರುಆದರೆ ಹಿಟ್ಲರ್, ಚಾನ್ಸೆಲರ್‌ಗಿರಿಗಿಂತ ಕಡಿಮೆಯದೇನನ್ನೂ ಯಾವ ಕಾರಣಕ್ಕೂ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಅವನು ಪೇಪನ್ನರ ಹಿಂದಿನ ಪಕ್ಷವಾಗಿದ್ದ ಸೆಂಟರ್ ಪಾರ್ಟಿಯೊಂದಿಗೆ ಸಮಾನಾಂತರ ಒಪ್ಪಂದವನ್ನು ಪ್ರೋತ್ಸಾಹಿಸುವ ಮೂಲಕ ಪೇಪನ್ನರ ಮೇಲೆ ಮತ್ತಷ್ಟು ಒತ್ತಡ ಉಂಟಾಗುವಂತೆ ಮಾಡಿದನು. ಇದು ಸ್ವಮತಭ್ರಷ್ಟರಾಗಿದ್ದ ಪೇಪನ್ನರನ್ನು ಮತ್ತಷ್ಟು ಕೆಳಗಿಳಿಸುವ ಮಟ್ಟಿಗೆ ಮುಂದಾಯಿತು. ಎರಡೂ ಒಪ್ಪಂದಗಳಲ್ಲಿ ಹಿಟ್ಲರನು, ಬಲಿಷ್ಟ ಪಕ್ಷದ ನೇತಾರನಾಗಿರುವ ತಾನೇ ಚಾನ್ಸೆಲರನಾಗಬೇಕೆಂದು ಕರಾರು ಹಾಕಿದನು. ಆದರೆ ಹಿನ್‌ಡೆನ್‌ಬರ್ಗ್ ಒಬ್ಬ “ಬೊಹೆಮಿಯನ್ ಲ್ಯಾನ್ಸ್ ಕಾರ್ಪೊರಲ್" (Bohemian Lance Corporal)ನನ್ನು ಚಾನ್ಸೆಲರ್‌ಗಿರಿಗೆ ನೇಮಿಸಲು ನಿರಾಕರಿಸಿಬಿಟ್ಟರು. ಪೇಪನ್ ಸರ್ಕಾರದಲ್ಲಿ ಅವಿಶ್ವಾಸ ಮತ ಚಲಾವಣೆಯಾದ ನಂತರ ೮೪% ಪ್ರತಿನಿಧಿಗಳ ಬೆಂಬಲ ಪಡೆದು, ಹೊಸ ರೀಚ್‌ಸ್ಟ್ಯಾಗ್ ಸರ್ಕಾರದ ವಿಸರ್ಜನೆಯಾಯಿತು ಮತ್ತು ನವೆಂಬರ್ ತಿಂಗಳಿನಲ್ಲಿ ಹೊಸ ಚುನಾವಣೆಗಳನ್ನು ಘೋಷಿಸಲಾಯಿತು. ಈ ಬಾರಿ ನಾಝಿಗಳು ಕೆಲವು ಸ್ಥಾನಗಳನ್ನು ಕಳೆದುಕೊಂಡರಾದರೂ ೩೩.೧% ಮತಗಳೊಂದಿಗೆ, ರೀಚ್‌ಸ್ಟ್ಯಾಗ್‌ನಲ್ಲಿ ದೊಡ್ಡ ಪಕ್ಷವಾಗಿಯೇ ಉಳಿದರು. ಪೇಪನ್ ಬಹುಮತ ಸಾಬೀತುಪಡಿಸುವಲ್ಲಿ ವಿಫಲಗೊಂಡ ಅನಂತರ, ಹೊಸ ಚುನಾವಣೆಗಳ ಕಾಲಾವಧಿಯನ್ನು ಅನಿರ್ದಿಷ್ಟವಾಗಿ ಮುಂದೂಡುವುದರೊಂದಿಗೆ ಮತ್ತೊಮ್ಮೆ ಸಂಸತ್ತನ್ನು ವಿಸರ್ಜಿಸಲು ಮುಂದಾದರು. ಹಿನ್‌ಡೆನ್‌ಬರ್ಗ್ ಇದಕ್ಕೆ ಮೊದಲು ಸಮ್ಮತಿ ನೀಡಿದ್ದರು. ಆದರೆ ಜನರಲ್ ಕುರ್ಟ್ ವೊನ್ ಶ್ಲೀಚೆರ್ (Kurt von Scheicher) ಹಾಗೂ ಸೇನೆಯು ತಮ್ಮ ಬೆಂಬಲವನ್ನು ವಾಪಸು ತೆಗೆದುಕೊಂಡವು. ಆಗ ಹಿನ್‌ಡೆನ್‌ಬರ್ಗ್ ಪೇಪನ್ನರನ್ನೇ ಸ್ಥಾನದಿಂದ ವಜಾಗೊಳಿಸಿ, ಸಮಾಜವಾದಿಗಳು, ವ್ಯಾಪಾರ ಒಕ್ಕೂಟಗಳು ಹಾಗೂ ಜಾರ್ಜ್ ಸ್ಟ್ರೇಸ್ಸರನ ಕೆಳಗೆ ನಾಝಿ ಪಕ್ಷದಿಂದ ಬಂದ ಜನಗಳೊಡನೆ ಒಪ್ಪಂದ ಮಾಡಿಕೊಂಡು ಬಹುಮತದ ಸುಭದ್ರ ಸರ್ಕಾರ ನೀಡುವುದಾಗಿ ಭರವಸೆಯಿತ್ತ ಶ್ಲೀಚೆರ್‌ನನ್ನೇ ಚಾನ್ಸೆಲರ್ ಆಗಿ ನೇಮಿಸಿದರು. ಆದರೆ ಜನವರಿ ೧೯೩೩ರಲ್ಲಿ, ಶ್ಲೀಚೆರ್ ಆ ಎಲ್ಲ ಪ್ರಯತ್ನಗಳಲ್ಲಿ ತನ್ನ ವೈಫಲ್ಯವನ್ನು ಒಪ್ಪಿಕೊಂಡನು ಮತ್ತು ತಾನು ಆ ಹಿಂದೆ ವಿರೋಧಿಸಿದ್ದ, ಚುನಾವಣೆಗಳ ಅನಿರ್ದಿಷ್ಟ ಕಾಲಾವಧಿ ಮುಂದೂಡಿಕೆಯೊಂದಿಗೆ ತುರ್ತು ಅಧಿಕಾರಗಳನ್ನು ಹಿನ್‌ಡೆನ್‌ಬರ್ಗ್ ಅವರಲ್ಲಿ ಕೇಳಿಕೊಂಡನು. ಇದಕ್ಕೆ ಪ್ರತಿಕ್ರಿಯೆಯಾಗಿ ಅಧ್ಯಕ್ಷರು ಆತನನ್ನೂ ಸ್ಥಾನದಿಂದ ವಜಾಗೊಳಿಸಿದರು.

ಚಾನ್ಸೆಲರನಾಗಿ ನೇಮಕ

ಇದೇ ಸಂದರ್ಭದಲ್ಲಿ ಪೇಪನ್, ಮಾಧ್ಯಮ ಬಾದಷಹ ಮತ್ತು DNVP ಅಧ್ಯಕ್ಷನಾಗಿದ್ದ ರಾಜಸತ್ತೆಯ ಆರಾಧಕ ಆಲ್ಫ್ರೆಡ್ ಹ್ಯುಗೆನ್‌ಬರ್ಗ್ (Alfred Hugenberg) ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಜನರಲ್‌ನ ಪತನಕ್ಕೆ ಸಂಚುಹೂಡುವ ಮೂಲಕ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿದ್ದನು. ಈ ಸಂಚಿನಲ್ಲಿ ಜಾಲ್ಮರ್ ಶಚ್ತ್ (Hjalmar Schacht), ಫ್ರಿಟ್ಜ್ ಥೈಸ್ಸೆನ್ (Fritz Thyssen), ಹಾಗೂ ಜರ್ಮನಿಯ ಇನ್ನಿತರ ಪ್ರಮುಖ ವ್ಯವಹಾರಸ್ಥರು ಭಾಗಿಯಾಗಿದ್ದರು. ಅದ್ದೂರಿಯ ಚುನಾವಣಾ ಪ್ರಚಾರದಲ್ಲಿ ವಿಪರೀತವಾಗಿ ಹಣ ವ್ಯಯಿಸಿ ದಿವಾಳಿಯ ಅಂಚಿನಲ್ಲಿ ನಿಂತಿದ್ದ ನಾಝಿ ಪಕ್ಷಕ್ಕೆ ಅವರೆಲ್ಲರು ಆರ್ಥಿಕ ಬೆಂಬಲ ನೀಡಿದ್ದರು.ಈ ವ್ಯವಹಾರಸ್ಥರು ಹಿನ್‌ಡೆನ್‌ಬರ್ಗ್‌ ಅವರಿಗೆ ಪತ್ರಗಳನ್ನು ಬರೆದು, ಹಿಟ್ಲರನನ್ನು “ಸಂಸದೀಯ ಪಕ್ಷಗಳಿಂದ ಮುಕ್ತವಾಗಿ" ಸರ್ಕಾರದ ನೇತಾರನನ್ನಾಗಿ ನೇಮಿಸಬೇಕೆಂದೂ, ಇದು “ಲಕ್ಷಾಂತರ ಜನರನ್ನು ಹೆಚ್ಚು ಸಂತೋಷಪಡಿಸುವುದೆಂದೂ" ಒತ್ತಡ ಹೇರತೊಡಗಿದರು.

ಅಡೋಲ್ಫ್ ಹಿಟ್ಲರ್ 
ಆಡಾಲ್ಫ್ ಹಿಟ್ಲರ್ ಚಾನ್ಸೆಲರ್ ಆಗಿ ಆಯ್ಕೆಯಾದ ಮೊದಲ ದಿನ, ರೀಚ್‌ನ ಚಾನ್ಸೆಲರಿಯ ಕಿಟಕಿಯೊಂದರ ಮೂಲಕ ಬೆಂಬಲಿಗರಿಂದ ಕರತಾಡನ ಸ್ವೀಕಾರ(30 ಜನವರಿ 1933)

ಕೊನೆಗೂ ಅಧ್ಯಕ್ಷರು ಅರೆಮನಸ್ಸಿನಿಂದ NSDAP ಮತ್ತು DNVP ಗಳ ಸಮ್ಮಿಶ್ರ ಸರ್ಕಾರದ ಚಾನ್ಸೆಲರ್ ಆಗಿ ಹಿಟ್ಲರನನ್ನು ನೇಮಿಸಲು ಒಪ್ಪಿಕೊಂಡರು. ಆದರೂ ಸಂಪ್ರದಾಯವಾದಿ ಕ್ಯಾಬಿನೆಟ್ ಸಚಿವರ ಪೂರ್ವಸಿದ್ಧತೆಯಿಂದಾಗಿ, ಗಮನೀಯವಾಗಿ ಪೇಪನ್ನರನ್ನು ವೈಸ್ ಚಾನ್ಸೆಲರ್ ಆಗಿಯೂ ಹ್ಯುಗೆನ್‌ಬರ್ಗ್‌ರನ್ನು ಅರ್ಥಸಚಿವರನ್ನಾಗಿಯೂ ಮಾಡುವ ಮೂಲಕ ನಾಝಿಗಳನ್ನು ಕೆಳದಬ್ಬಲಾಯ್ತು. ಹಿಟ್ಲರನ ಹೊರತಾಗಿ ಮಂತ್ರಿಮಂಡಲದಲ್ಲಿ ಸ್ಥಾನ ಪಡೆದ ಮತ್ತೋರ್ವ ಏಕೈಕ ನಾಝಿಯೆಂದರೆ, ವಿಲ್ಹೆಮ್ ಫ್ರಿಕ್ (Wilhem Frick). ಆತನಿಗೆ ಹೆಚ್ಚೂಕಡಿಮೆ ಅಧಿಕಾರಹೀನವಾದ ಆಂತರಿಕ ಸಚಿವಾಲಯದ ಖಾತೆ ನೀಡಲಾಗಿತ್ತು. (ಜರ್ಮನಿಯ ಅಂದಿನ ದಿನಗಳಲ್ಲಿ ಆಂತರಿಕ ಖಾತೆ ಸಚಿವರು ಹೊಂದಿರುತ್ತಿದ್ದ ಬಹುತೇಕ ಅಧಿಕಾರಗಳನ್ನು, ಇತರ ದೇಶಗಳಲ್ಲಿ ರಾಜ್ಯಗಳ ಆಂತರಿಕೆ ಖಾತೆ ಸಚಿವರು ಹೊಂದಿರುತ್ತಿದ್ದರು). ನಾಝಿಗಳಿಗೆ ಪರಿಹಾರವೆಂಬಂತೆ, ಗೋರಿಂಗ್‌ (Göring)ರನ್ನು ಖಾತೆರಹಿತ ಸಚಿವರನ್ನಾಗಿ ನೇಮಿಸಲಾಯಿತು. ಪೇಪನ್, ಹಿಟ್ಲರನನ್ನು ಹೆಸರಿಗೆ ಮಾತ್ರ ಮುಖ್ಯಸ್ಥನಂತೆ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದನು ಮತ್ತು ಈ ಕಾರಣದಿಂದಲೇ ನಾಝಿಗಳಿಗೆ ಸಾಂಕೇತಿಕ ಸ್ಥಾನಗಳನ್ನು ನೀಡಲಾಗಿತ್ತು. ೧೯೩೩ರ ಜನವರಿ ೩೦ರಂದು ಬೆಳಗ್ಗೆ ಹಿನ್‌ಡೆನ್‌ಬರ್ಗ್‌ ಅವರ ಕಛೇರಿಯಲ್ಲಿ ಅಡಾಲ್ಫ್ ಹಿಟ್ಲರನು ನಂತರದ ದಿನಗಳಲ್ಲಿ ಹೇಳಲಾಗಿರುವಂತೆ, ಸಂಕ್ಷಿಪ್ತ ಹಾಗೂ ಸರಳ ಸಮಾರಂಭದಲ್ಲಿ ಚಾನ್ಸೆಲರ್ ಆಗಿ ಪ್ರಮಾಣವಚನ ಸ್ವೀಕರಿಸಿದನು. ಅವನು ಚಾನ್ಸೆಲರ್ ಆಗಿ ತನ್ನ ಮೊದಲ ಭಾಷಣವನ್ನು ಫೆಬ್ರವರಿ ೧೦ರಂದು ನೀಡಿದನು. ನಾಝಿಗಳ ಅಧಿಕಾರವನ್ನು ಮಟ್ಟುಗೋಲು ಹಾಕಿಕೊಂಡ ಈ ಪ್ರಕರಣವು ಕಾಲಕ್ರಮೇಣ ಮ್ಯಾಚ್‌ಟರ್‌ಗ್ರೀಫಂಗ್ (Machtergreifung ) ಹೆಸರಾಯಿತು.

ಹೊತ್ತುರಿದ ರೀಚ್‌ಸ್ಟ್ಯಾಗ್‌ ಮತ್ತು ಮಾರ್ಚ್ ಚುನಾವಣೆಗಳು

ಚಾನ್ಸೆಲರ್ ಆಗಿ ಅಧಿಕಾರ ಸ್ವೀಕರಿಸಿದ ಹಿಟ್ಲರ್, ಸಂಸತ್ತಿನಲ್ಲಿ ಬಹುಮತ ಪಡೆಯಲು ವಿರೋಧಿಗಳು ನಡೆಸಿದ ಎಲ್ಲ ಯತ್ನಗಳನ್ನೂ ಹತ್ತಿಕ್ಕಿದನು. ಯಾವ ಏಕೈಕ ಪಕ್ಷವೂ ಬಹುಮತದ ಪಕ್ಷವಾಗಿ ಹೊರಹೊಮ್ಮದ ಕಾರಣ, ಹಿಟ್ಲರನು ಪುನಃ ರೀಚ್‌ಸ್ಟ್ಯಾಗ್‌ ಅನ್ನು ವಿಲೀನಗೊಳಿಸುವಂತೆ ಬೆನ್ನುಬಿದ್ದನು. ಚುನಾವಣೆಗಳು ಮಾರ್ಚ್ ತಿಂಗಳ ಆರಂಭದ ದಿನಗಳಿಗೆ ನಿಗದಿಯಾದವು. ಆದರೆ ಫೆಬ್ರವರಿ ೨೭ರಂದು ‘ರೀಚ್‌ಸ್ಟ್ಯಾಗ್’ ಕಟ್ಟಡಕ್ಕೆ ಬೆಂಕಿ ಬಿದ್ದಿತು. ಆ ಕಟ್ಟಡದಲ್ಲಿ ಡಚ್ ಇಂಡಿಪೆಂಡೆಂಟ್ ಕಮ್ಯುನಿಸ್ಟನೊಬ್ಬನು ಕಂಡುಬಂದ ಕಾರಣದಿಂದ, ಬೆಂಕಿಯ ಕಾರಣವನ್ನು ಕಮ್ಯುನಿಸ್ಟ್ ನೆಲೆಯಿಂದ ಆಪಾದಿಸಲಾಯಿತು. ಫೆಬ್ರವರಿ ೨೮ರ ರೀಚ್‌ಸ್ಟ್ಯಾಗ್ ಬೆಂಕಿ ತೀರ್ಪಿನ (Reichstag Fire Decree) ಮೂಲಕ ಪ್ರತಿಕ್ರಿಯಿಸಿದ ಸರ್ಕಾರವು, ಹೇಬಿಯಸ್ ಕಾರ್ಪಸ್‌ ನಂತಹ ಮೂಲಭೂತ ಹಕ್ಕುಗಳನ್ನು ವಜಾಮಾಡಿತು. ಈ ಶಾಸನದಡಿಯಲ್ಲಿ ಜರ್ಮನ್ ಕಮ್ಯುನಿಸ್ಟ್ ಪಕ್ಷ ಹಾಗೂ ಇತರ ಪಕ್ಷಗಳು ತುಳಿಯಲ್ಪಟ್ಟವು. ಅಷ್ಟೇ ಅಲ್ಲದೆ, ಕಮ್ಯುನಿಸ್ಟ್ ಕಾರ್ಯಕರ್ತರು ಮತ್ತು ಪ್ರತಿನಿಧಿಗಳನ್ನು ಬಂಧಿಸಿ ಹತ್ಯೆಮಾಡಲಾಯಿತು. ನಾಝಿಗಳು ಸಂಸದೀಯ ಹಿಂಸೆ, ಕಮ್ಯುನಿಸ್ಟ್ ವಿರೋಧಿ ಸಮೂಹ ಸನ್ನಿ, ಮತ್ತು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ನಾಝಿಗಳು ಪ್ರಚಾರ ಕಾರ್ಯವನ್ನು ಮುಂದುವರೆಸಿದರು. ಚುನಾವಣಾ ದಿನವಾದ ಮಾರ್ಚ್ ೬ರಂದು, NSDAPಯು ತನ್ನ ಫಲಿತಾಂಶದಲ್ಲಿ ೪೩.೯% ರಷ್ಟು ಮತಗಳನ್ನು ಪಡೆದು ಹೆಚ್ಚಳ ಸಾಧಿಸಿತು. ಆದರೆ, ನಿಖರ ಬಹುಮತ ಸಾಧಿಸುವಲ್ಲಿ ಸೋತ ಅದರ ವಿಜಯವು ಕಮರಿಹೋಗಿ, DNVPಯೊಂದಿಗೆ ಅನಿವಾರ್ಯದ ಮೈತ್ರಿಯನ್ನು ಮಾಡಿಕೊಳ್ಳಬೇಕಾಗಿ ಬಂತು.

ಅಡೋಲ್ಫ್ ಹಿಟ್ಲರ್ 
ಹಿಟ್ಲರನೆದುರು SA ತುಕಡಿಗಳ ಕವಾಯತು - ನ್ಯೂರೆಂಬರ್ಗ್, ನವೆಂಬರ್ 1935

“ಪಾಟ್ಸ್‌ಡ್ಯಾಮ್ ದಿನ" ಮತ್ತು ಎನೇಬಲಿಂಗ್ ಕಾಯ್ದೆ("Day of Potsdam" and the Enabling Act)

ಮಾರ್ಚ್ ೨೧ರಂದು ಹೊಸ ರೀಚ್‌ಸ್ಟ್ಯಾಗ್ ಸ್ಥಾಪನೆಗೊಂಡಿತು ಮತ್ತು ಅದರ ಉದ್ಘಾಟನಾ ಸಮಾರಂಭವನ್ನು ಪಾಟ್ಸ್‌ಡ್ಯಾಮ್‌ನ ಗ್ಯಾರ್ರಿಸನ್ ಚರ್ಚಿನಲ್ಲಿ ಏರ್ಪಡಿಸಲಾಗಿತ್ತು. ಈ ಪಾಟ್ಸ್‌ಡ್ಯಾಮ್ ದಿನವು ಕ್ರಾಂತಿಕಾರಿ ನಾಝಿ ಚಳವಳಿ ಮತ್ತು ’ಪುರಾತನ ಪ್ರೂಶಿಯಾ’ ತನ್ನೆಲ್ಲ ಸಾರ ಸದ್ಗುಣಗಳೊಂದಿಗೆ ರಾಜಿಯಾಗಿ ಒಂದಾದುದಕ್ಕೆ ಸಾಕ್ಷಿಯಾದ ವೇದಿಕೆಯಾಗಿ ಪರಿಣಮಿಸಿತು.ಟೈಲ್ ಕೋಟ್ ಧರಿಸಿ ಬಂದ ಹಿಟ್ಲರ್, ವಿನಯದಿಂದಲೇ ಅಧ್ಯಕ್ಷ ಹಿನ್‌ಡೆನ್‌ವರ್ಗ್‌ರನ್ನು ಗೌರವಿಸಿ ಸ್ವಾಗತಿಸಿದನು. ನಾಝಿಗಳು ತಮ್ಮದೇ ಆದ ಬಹುಮತ ಪಡೆಯಲು ವಿಫಲರಾದುದರಿಂದ, ಹಿಟ್ಲರನ ಸರ್ಕಾರವು ತಾನು ಹೊಸತಾಗಿ ಚುನಾಯಿತಗೊಂಡ ರೀಚ್‌ಸ್ಟ್ಯಾಗ್‌ ಅನ್ನು ನಾಲ್ಕು ವರ್ಷಗಳ ಕಾಲ ಸಾಂವಿಧಾನಕ ಅಧಿಕಾರಗಳನ್ನು ಒದಗಿಸಿಕೊಡುವ ಎನೇಬಲಿಂಗ್ ಕಾಯ್ದೆ (Enabling Act)ಯ ಮೂಲಕ ಎದುರಿಸಿದನು. ಈ ಬಗೆಯ ಮಸೂದೆಗಳ ಕುರಿತು ಪೂರ್ವನಿದರ್ಶನವಿಲ್ಲದಿದ್ದರೂ ಈ ಕಾಯ್ದೆಯು ರಾಜ್ಯಾಂಗದ ವಿಷಯಾಂತರಕ್ಕೆ ಅವಕಾಶ ಮಾಡಿಕೊಟ್ಟುದರಿಂದ ವಿಭಿನ್ನವೆನಿಸಿತ್ತು. ಮಸೂದೆಯು ಅಂಗೀಕಾರಗೊಳ್ಳಲು ⅔ ಬಹುಮತದ ಬೆಂಬಲ ಅಗತ್ಯವಿದ್ದುದರಿಂದ, ಸರ್ಕಾರಕ್ಕೆ ಇನ್ನಿತರ ಪಕ್ಷಗಳ ಬೆಂಬಲವು ಅನಿವಾರ್ಯವಾಯ್ತು. ರೀಚ್‌ಸ್ಟ್ಯಾಗ್ ಮೂರನೇ ಅತಿದೊಡ್ಡ ಪಕ್ಷವಾಗಿದ್ದ ಸೆಂಟರ್‌ಪಾರ್ಟಿಯು ನಿರ್ಣಾಯಕವಾಗಿ ಹೊರಹೊಮ್ಮಿತು. ಅದು ಲುಡ್ವಿಗ್ ಕಾಸ್ (Ludwig Kaas) ಮುಂದಾಳುತ್ವದಲ್ಲಿ ಎನೇಬಲಿಂಗ್ ಕಾಯ್ದೆಗೆ ಮತ ಚಲಾಯಿಸಲು ನಿರ್ಧರಿಸಿತ್ತು. ಅದು, ಚರ್ಚಿನ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಸರ್ಕಾರದ ವಾಗ್ದಾನವನ್ನು ಪಡೆದು ಇಂತಹ ನಿರ್ಣಯ ತಳೆದಿತ್ತು. ಈ ಒಪ್ಪಂದವು ಜರ್ಮನ್ ರಾಜ್ಯ ಹಾಗೂ ಮುಂದುವರಿದ ಅಸ್ತಿತ್ವದ ಸೆಂಟರ್ ಪಾರ್ಟಿಗಳಿಂದ ಸಹಿಹಾಕಲ್ಪಟ್ಟಿತು. ಮಾರ್ಚ್ ೨೩ರಂದು, ವೈಪರೀತ್ಯಕ್ಕೇರಿದ ಪ್ರತಿಭಟನೆಯ ಸನ್ನಿವೇಶಗಳ ನಡುವೆ ರೀಚ್‌ಸ್ಟ್ಯಾಗ್ ಪುನರ್ಸ್ಥಾಪಿತ ಕಟ್ಟಡದಲ್ಲಿ ಸಮಾವೇಶಗೊಂಡಿತು. ಹೊರಗೆ ದೊಡ್ಡ ದೊಡ್ಡ ಗುಂಪುಗಳಲ್ಲಿ ಬಂಡುಕೋರರು ಪ್ರತಿನಿಧಿಗಳ ವಿರುದ್ಧ ಪ್ರತಿಭಟನೆಯನ್ನು ಕೂಗುತ್ತಿದ್ದರೆ, ಒಳಗೆ ಕೆಲವು ಜನರು ಅವರ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಾಸ್, ಸೆಂಟರ್ ಪಾರ್ಟಿಯು “ನೈಜ ಕಾಳಜಿಯಿಂದ" ಮಸೂದೆಯನ್ನು ಬೆಂಬಲಿಸುತ್ತಿರುವುದಾಗಿ ಘೋಷಿಸಿದರೆ, ಸಮಾಜವಾದಿ ಒಟ್ಟೋ ವೆಲ್ಸ್, ಈ ಕಾಯ್ದೆಯನ್ನು ತಮ್ಮ ಭಾಷಣದಲ್ಲಿ ಹೀಗಳೆದರು. ದಿನದ ಕೊನೆಯಲ್ಲಿ, ಸಮಾಜವಾದಿಗಳ ಹೊರತಾಗಿ ಉಳಿದೆಲ್ಲ ಪಕ್ಷಗಳೂ ಮಸೂದೆಯ ಪರವಾಗಿ ಮತ ಚಲಾಯಿಸಿದವು. ಕಮ್ಯುನಿಸ್ಟರು, ಹಾಗೆಯೇ ಕೆಲವು ಸಮಾಜವಾದಿಗಳು ಹಾಜರಾತಿ ನಿಷೇಧಕ್ಕೊಳಗಾದರು.ರೀಚ್‌ಸ್ಟ್ಯಾಗ್ ಬೆಂಕಿ ತೀರ್ಪು (Reichstag Fire Decree) ಹಾಗೂ ಎನೇಬಲಿಂಗ್ ಕಾಯ್ದೆ (Enabling Act)ಗಳು ಹಿಟ್ಲರ್ ಸರ್ಕಾರಕ್ಕೆ ಕಾನೂನುಬದ್ಧ ಸರ್ವಾಧಿಕಾರವನ್ನು ಒದಗಿಸಿಕೊಟ್ಟವು.

ಅಳಿದುಳಿದ ತಡೆಗಳ ನಿವಾರಣೆ

At the risk of appearing to talk nonsense I tell you that the Nazi movement will go on for 1,000 years!… Don't forget how people laughed at me 15 years ago when I declared that one day I would govern Germany. They laugh now, just as foolishly, when I declare that I shall remain in power!

—Adolf Hitler to a British correspondent in Berlin, June 1934

ಸಾಂವಿಧಾನಿಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಗಳ ಈ ಸಂಯೋಜನೆಯೊಡನೆ ಹಿಟ್ಲರನ ಸರ್ಕಾರವು ಮುಂದಿನ ದಿನಗಳಲ್ಲಿ ಅಳಿದುಳಿದ ರಾಜಕೀಯ ಎದುರಾಳಿಗಳನ್ನೂ ಮಟ್ಟಹಾಕಿತು. ಜರ್ಮನಿಯ ಕಮ್ಯುನಿಸ್ಟ್ ಪಕ್ಷ ಹಾಗೂ ಸಮಾಜವಾದೀ ಪಕ್ಷ (Social Democratic Party) SDPಗಳು ನಿಷೇಧಿಸಲ್ಪಟ್ಟವು. ಇಷ್ಟೇ ಅಲ್ಲದೆ, ಇನ್ನಿತರ ರಾಜಕೀಯ ಪಕ್ಷಗಳು ತಾವೇ ತಾವಾಗಿ ವಿಲೀನಗೊಳ್ಳುವ ಬಲಾತ್ಕಾರಕ್ಕೊಳಗಾದವು. ಅಂತಿಮವಾಗಿ, ಜುಲೈ ೧೪ರಂದು, ನಾಝಿ ಪಕ್ಷವು ಜರ್ಮನಿಯ ಏಕೈಕ ಕಾನೂನುಬದ್ಧ ಪಕ್ಷವೆಂದು ಘೋಷಿಸಲಾಯ್ತು. ಹಿಟ್ಲರನು SA ಅರೆಮಿಲಿಟರಿಯನ್ನು ಪ್ರಯೋಗಿಸಿ, ಹ್ಯೂಗೆನ್‌ಬರ್ಗ್ (Hugenberg) ರಾಜೀನಾಮೆ ನೀಡುವಂತೆ ಮಾಡಿದನು, ಮತ್ತು ವೈಸ್ ಚಾನ್ಸೆಲರ್ ಆಗಿದ್ದ ಪೇಪನ್‌ರನ್ನು ರಾಜಕೀಯವಾಗಿ ನಿಷ್ಕ್ರಿಯಗೊಳಿಸಲು ಮುಂದಾದನು. SAಯು ರಾಜಕೀಯ ಹಾಗೂ ಸೇನಾ ಅಧಿಕಾರಗಳ ಅಪೇಕ್ಷೆಗಳಿಂದಾಗಿ ಸೇನೆ ಮತ್ತು ರಾಜಕೀಯ ನೇತಾರರಲ್ಲಿ ಕಸಿವಿಸಿ ಉಂಟಾಗತೊಡಗಿತು. Night of the Long Knives ಸಂದರ್ಭದಲ್ಲಿ ಹಿಟ್ಲರನು SAಯ ಮುಂದಾಳ್ತನವನ್ನು ಶುದ್ಧೀಕರಿಸಲು SAಯ ಮುಖಂಡ ಅರ್ನೆಸ್ಟ್ ರೋಮ್ (Ernst Röhm)ರ ಪಿತೂರಿಯ ಆರೋಪಗಳನ್ನು ಬಳಸಿಕೊಂಡನು. ಹಾಗೆಯೇ SAಯೊಂದಿಗೆ ಸಂಬಂಧವಿರಿಸಿಕೊಳ್ಳದ ವಿರೋಧಿಗಳನ್ನು, ಗಮನೀಯವಾಗಿ ಗ್ರೆಗೊರ್ ಸ್ಟ್ರೇಸ್ಸರ್ ಹಾಗೂ ಮಾಜಿ ಚಾನ್ಸೆಲರ್ ಕರ್ಟ್ ಶ್ಲೀಚೆರ್‌ರನ್ನು ಹತ್ಯೆ ಮಾಡಲಾಯಿತು.

ಅಡೋಲ್ಫ್ ಹಿಟ್ಲರ್ 
1934ರಲ್ಲಿ ಹಿಟ್ಲರ್ ಫ್ಯೂರೆರ್ ಅಂಡ್ ರೀಶ್‌ಕಾಂಜ್‌ಲರ್(ರೀಚ್‌ನ ನಾಯಕ ಮತ್ತು ಚಾನ್ಸೆಲರ್) ಎಂಬ ಪಟ್ಟಹೊತ್ತು ಜರ್ಮನಿಯ ಅಧ್ಯಕ್ಷನಾಗಿ ಅಧಿಕಾರಕ್ಕೆ ಬಂದ.

ಅಧ್ಯಕ್ಷ ಪೌಲ್ ವೊನ್ ಹಿನ್‌ಡೆನ್‌ಬರ್ಗ್, ಆಗಸ್ಟ್ ೨, ೧೯೩೪ರಂದು ಮರಣಹೊಂದಿದರು.ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸುವ ಬದಲಾಗಿ, ಹಿಟ್ಲರನ ಮಂತ್ರಿಮಂಡಲವು ಅಧ್ಯಕ್ಷಗಾದಿಯನ್ನೇ ಸುಪ್ತಗೊಳಿಸಿ ಹೊಸ ಕಾನೂನನ್ನು ಮಾನ್ಯ ಮಾಡಿತು. ಮತ್ತು ರಾಷ್ಟ್ರದ ಮುಖ್ಯಸ್ಥನ ಪಾತ್ರ ಹಾಗೂ ಅಧಿಕಾರಗಳನ್ನು ಹಿಟ್ಲರನಿಗೆ ಹಸ್ತಾಂತರಿಸಿ ಆತನನ್ನು ಫ್ಯೂರರ್ ಮತ್ತು ರೀಶ್ಕನ್‌ಜ್ಲರ್ (Führer und Reichskanzler) ಅರ್ಥಾತ್ ಲೀಡರ್ ಮತ್ತು ಚಾನ್ಸೆಲರ್ ಎಂದು ಘೋಷಿಸಿತು.ರಾಷ್ಟ್ರದ ಮುಖ್ಯಸ್ಥನಾಗಿ ಅಧಿಕಾರ ಪಡೆದ ಹಿಟ್ಲರನೀಗ ಸಶಸ್ತ್ರಪಡೆಗಳ ಪರಮಾಧಿಕಾರಿಯಾದನು.ಸೈನಿಕರು ಹಾಗೂ ನಾವಿಕರು ನಿಷ್ಠತೆಯ ಪ್ರತಿಜ್ಞೆ ಸ್ವೀಕರಿಸಬೇಕಾದ ಸಂದರ್ಭದಲ್ಲಿ, ಪಾರಂಪರಿಕವಾದ ರಾಷ್ಟ್ರನಿಷ್ಠೆಯ ಪ್ರತಿಜ್ಞೆಯು ಹಿಟ್ಲರನೆಡೆಗಿನ ವ್ಯಕ್ತಿನಿಷ್ಠೆಯ ಪ್ರತಿಜ್ಞೆಯಾಗಿ ಬದಲಾಯಿಸಲಾಯಿತು. ಆಗಸ್ಟ್ ಮಧ್ಯಭಾಗದ ಜನಾಭಿಪ್ರಾಯ ಸಂಗ್ರಹದಲ್ಲಿ ಈ ಕಾಯ್ದೆಗಳು ಶೇ.೮೪.೬% ಮತದಾರರ ಸಮ್ಮತಿ ಮುದ್ರೆಯನ್ನು ಪಡೆದವು. ಈ ಕ್ರಿಯೆಯು ಸಂವಿಧಾನ ಹಾಗೂ ಎನೇಬಲಿಂಗ್ ಕಾಯ್ದೆಗಳೆರಡನ್ನೂ ತಾಂತ್ರಿಕವಾಗಿ ಉಲ್ಲಂಘಿಸಿತು. ೧೯೩೨ರಲ್ಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು, ಹೊಸ ಚುನಾವಣೆಗಳು ನಡೆಯುವವರೆಗೆ ಚಾನ್ಸೆಲರ್ ಬದಲಾಗಿ ಉಚ್ಚ ನ್ಯಾಯಾಲಯದ ಅಧ್ಯಕ್ಷರನ್ನು ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮಾಡುವ ನಿಯಮ ಜಾರಿಗೊಳಿಸಲಾಯಿತು. ಎನೇಬಲಿಂಗ್ ಕಾಯ್ದೆಯು ನಿರ್ದಿಷ್ಟವಾಗಿ ಹಿಟ್ಲರನು ಅಧ್ಯಕ್ಷಗಿರಿಗೆ ಸಂಬಂಧಿಸಿದಂತೆ ಯಾವುದೇ ಕ್ರಿಯೆಗೆ ಕೈಹಾಕದಂತೆ ನಿರ್ಬಂಧಿಸಿತ್ತು. ಆದರೆ ಯಾರೊಬ್ಬರೂ ಆಕ್ಷೇಪಿಸುವ ಧೈರ್ಯ ತೋರಲಿಲ್ಲ. ೧೯೩೮ರಲ್ಲಿ ಹಿಟ್ಲರನು ತನ್ನ ಯುದ್ಧ ಮಂತ್ರಿ (ಪೂರ್ವದಲ್ಲಿ ರಕ್ಷಣಾ ಮಂತ್ರಿ) ವೆರ್ನರ್ ವೊನ್ ಬ್ಲೋಮ್‌ಬರ್ಗ್ (Werner von Blomberg) ರಾಜೀನಾಮೆ ನೀಡುವಂತೆ ಒತ್ತಾಯಪಡಿಸಿದನು. ಇದಕ್ಕೆ, ಬ್ಲೋಮ್‌ಬರ್ಗನ ಹೆಂಡತಿ ಅಪರಾಧೀ ಹಿನ್ನೆಲೆ ಹೊಂದಿದ್ದಳೆಂಬ ವಿಷಯ ಸಾಬೀತುಗೊಂಡಿದ್ದು ಕಾರಣವಾಗಿತ್ತು. ಬ್ಲೋಮ್‌ಬರ್ಗನನ್ನು ತೆಗೆದುಹಾಕುವ ಮುನ್ನ, ಹಿಟ್ಲರ್ ಮತ್ತವನ ಸಂಚುಕೂಟವು ಫ್ರಿಟಿಶ್‌ನನ್ನು ಆತನು ಸಲಿಂಗಕಾಮಿಯೆಂದು ನಿಂದಿಸಿ ಹೊರಹಾಕಿತು. (ಜಾನ್ ಟೋಲ್ಯಾಂಡ್: ಅಡಾಲ್ಫ್ ಹಿಟ್ಲರ್). ತೆರವುಗೊಂಡ ಯುದ್ಧ ಸಚಿವಾಲಯವನ್ನು ಹಿಟ್ಲರ್, ವಿಲ್‌ಹೆಮ್ ಕೀಟೆಲ್ (Wilhelm Keitel) ಮುಂದಾಳುತ್ವದ ಒಬರ್‌ಕಮ್ಯಾಂಡೊ ಡೆರ್ ವೆರ್‌ಮ್ಯಾಕ್ಟ್- Oberkommando der Wehrmacht (ಸಶಸ್ತ್ರಪಡೆಗಳ ಪರಮಾಧಿಕಾರ ಅಥವಾ OKW)ದಿಂದ ಭರ್ತಿ ಮಾಡಿದನು.ಬಹಳ ಮುಖ್ಯವಾಗಿ ಹಿಟ್ಲರನು, ತಾನು ಸಶಸ್ತ್ರಪಡೆಗಳ ವೈಯಕ್ತಿಕ ಅಧಿಕಾರ ಹೊಂದಿರುವುದಾಗಿ ಘೋಷಿಸಿಕೊಂಡನು. ಅವನು ಬ್ಲೋಮ್‌ಬರ್ಗನ ಮತ್ತೊಂದು ಹಳೆಯ ಹುದ್ದೆಯಾಗಿದ್ದ ಸಶಸ್ತ್ರಪಡೆಗಳ ಮುಖ್ಯಾಧಿಕಾರಿ (Commander-in-chief) ಸ್ಥಾನವನ್ನೂ ತಾನೇ ವಹಿಸಿಕೊಂಡನು. ಹಾಗೆ ನೋಡಿದರೆ ಅವನು ಅಧ್ಯಕ್ಷರ ಅಧಿಕಾರಗಳನ್ನು ಹೊಂದಿದ್ದುದರಿಂದ ಅದಾಗಲೇ ಮುಖ್ಯಾಧಿಕಾರಿಯಾಗಿ ಅಧಿಕಾರ ಹೊಂದಿದ್ದ.ಮರುದಿನದ ವೃತ್ತಪತ್ರಿಕೆಗಳು "ಫ್ಯೂರೆರ್‌ ಕೈಯಲ್ಲಿ ಅಧಿಕಾರಗಳ ಸಧೃಡ ಕೇಂದ್ರೀಕರಣ!" ಎಂದು ಘೋಷಿಸಿದವು.

ತೃತೀಯ ಸಾಮ್ರಾಜ್ಯ (Third Reich)

ರಾಜಕೀಯದ ಪರಮಾಧಿಕಾರವನ್ನು ಗಳಿಸಿಕೊಂಡ ಹಿಟ್ಲರ್, ತಾನು ಜನಸಾಮಾನ್ಯರನ್ನು ಆರ್ಥಿಕ ಮುಗ್ಗಟ್ಟು, ವರ್ಸೈಲ್ ಒಪ್ಪಂದ, ಕಮ್ಯುನಿಸಮ್, “ಜ್ಯೂಡೋ ಬೋಲ್ಶೆವಿಕ್ಸ್" (Judeo-Bolsheviks), ಮತ್ತಿತರ ಅನಪೇಕ್ಷಿತ ಅಲ್ಪಸಂಖ್ಯಾತರಿಂದ ಕಾಪಾಡುವ ರಕ್ಷಕನೆಂದು ಮನದಟ್ಟುಮಾಡುವ ಮೂಲಕ ಅವರ ಬೆಂಬಲವನ್ನು ಪಡೆಯತೊಡಗಿದನು.ನಾಝಿಗಳು ವಿರೋಧಿಗಳನ್ನು ಗ್ಲೀಶ್‌ಚಲ್ಟಂಗ್ -Gleichschaltung ("bringing into line") ಪ್ರಕ್ರಿಯೆಯ ಮೂಲಕ ನಿರ್ಮೂಲನಗೊಳಿಸಿದರು.

ಆರ್ಥಿಕತೆ ಮತ್ತು ಸಂಸ್ಕೃತಿ

ಹಿಟ್ಲರ್, ಸಾಲದೇಣಿಗೆ ಹಾಗೂ ಮಿಲಿಟರಿ ವಿಸ್ತರಣೆಗಳ ಆಧಾರದ ಮೇಲೆ ಜರ್ಮನಿಯು ಹಿಂದೆಂದೂ ಕಂಡಿರದ ರೀತಿಯಲ್ಲಿ ಕೈಗಾರಿಕಾ ಉತ್ಪನ್ನಗಳ ವಿಸ್ತರಣೆ ಹಾಗೂ ನಾಗರಿಕ ಜೀವನಮಟ್ಟ ಸುಧಾರಣೆಗೆ ಕಾರಣನಾದನು. ಹೆಂಗಸರ ಬಗೆಗಿನ ನಾಝಿ ನೀತಿಗಳು ಹೆಂಗಸರಿಗೆ ಮನೆಯಲ್ಲೇ ಉಳಿದು ಮಕ್ಕಳನ್ನು ಹೆರುತ್ತಾ ಮನೆವಾಳ್ತೆ ಮಾಡಿಕೊಂಡಿರುವುದಕ್ಕೆ ಹೆಚ್ಚು ಪ್ರೋತ್ಸಾಹದಾಯಕವಾಗಿದ್ದವು. ಸೆಪ್ಟೆಂಬರ್ ೧೯೩೪ರಲ್ಲಿ ರಾಷ್ಟ್ರೀಯ ಸಮಾಜವಾದಿ ಮಹಿಳೆಯರ ಸಂಸ್ತೆಗೆ ನೀಡಿದ ಭಾಷಣದಲ್ಲಿ ಅಡಾಲ್ಫ್ ಹಿಟ್ಲರ್, ಜರ್ಮನ್ ಮಹಿಳೆಗೆ ಅವಳ “ಗಂಡ, ಕುಟುಂಬ, ಮಕ್ಕಳು ಮತ್ತು ಮನೆಯೇ ಆಕೆಯ ಜಗತ್ತು" ಎಂದು ವಾದಿಸಿದ್ದನು. ಈ ನೀತಿಯನ್ನು, ನಾಲ್ಕು ಅಥವಾ ಹೆಚ್ಚು ಮಕ್ಕಳನ್ನು ಹೆತ್ತ ಜರ್ಮನ್ ಮಹಿಳೆಗೆ ಜರ್ಮನ್ ತಾಯಿ ಎಂಬ ಗೌರವದ ಬಿರುದು ನೀಡುವ ಮೂಲಕ ಜಾರಿಗೊಳಿಸಲಾಯ್ತು. ಶಸ್ತ್ರಾಸ್ತ್ರ ತಯಾರಿಕೆ ಹಾಗೂ ಉದ್ಯೋಗಸ್ಥ ಮಹಿಳೆಯರನ್ನು ಮನೆಗೆ ಕಳುಹಿಸಿ ಪುರುಷರಿಗೆ ಆ ಕೆಲಸವನ್ನು ನೀಡತೊಡಗಿದೆ ಪರಿಣಾಮವಾಗಿ ನಿರುದ್ಯೋಗ ಸಮಸ್ಯೆಯು ಕ್ರಮೇಣ ಕಡಿತಗೊಳ್ಳುತ್ತ ಸಾಗಿತು. ಈ ನಿಟ್ಟಿನಲ್ಲಿ, ಜರ್ಮನ್ ಆರ್ಥಿಕತೆಯು ಬಹುತೇಕ ಸಂಪೂರ್ಣ ಉದ್ಯೋಗವನ್ನು ಸಾಧಿಸಿತು ಹಿಟ್ಲರನ ಪುನರ್ನಿರ್ಮಾಣ ಹಾಗೂ ಪುನಶ್ಶಸ್ತ್ರೀಕರಣಗಳಿಗೆ ಧನಸಹಾಯವು ಬಹುತೇಕ ಜಲ್ಮರ್ ಶಚ್ತ್ (jalmar Schacht)ರ ನಿರ್ವಹಣಾ ಕುಶಲತೆ ಹಾಗೂ ಮೆಫೋ ಬಿಲ್‌ಗಳಿಂದ ಹರಿದುಬಂದು ಜಮಾವಣೆಗೊಂಡ ಹಣದಿಂದ ಒದಗಿಬಂತು.

ಅಡೋಲ್ಫ್ ಹಿಟ್ಲರ್ 
1934 ನ್ಯೂರೆಂಬರ್ಗ್ ಸಮಾವೇಶ

ಹಿಟ್ಲರನು ಬಹಳಷ್ಟು ಅಣೆಕಟ್ಟುಗಳು, ಆಟೋಬನ್‌ಗಳು (autobahns), ರೈಲು ಮಾರ್ಗಗಳು, ಮತ್ತಿತರ ಲೋಕೋಪಯೋಗಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜರ್ಮನಿಯ ಇತಿಹಾಸದಲ್ಲೇ ಅತ್ಯಂತ ವ್ಯಾಪಕವಾದ ಮೂಲಸೌಕರ್ಯಗಳನ್ನು ನಿರ್ಮಿಸಿದನು. ಹಿಟ್ಲರನ ನೀತಿಗಳು ಕೌಟುಂಬಿಕ ಜೀವನಕ್ಕೆ ಹೆಚ್ಚಿನ ಮಹತ್ವ ನೀಡಿದ್ದವು: “ಆಹಾರಸಂಪಾದನೆ"ಯು ಗಂಡಸರ ಜವಾಬ್ದಾರಿಯಾಗಿದ್ದರೆ, ಮನೆಯಲ್ಲೇ ಇದ್ದುಕೊಂಡು ಮಕ್ಕಳನ್ನು ಬೆಳೆಸುವುದು ಮತ್ತು ಮನೆವಾಳ್ತೆ ನಡೆಸುವುದು ಹೆಂಗಸರ ಕೆಲಸವೆಂದು ಪರಿಗಣಿಸಲಾಗಿತ್ತು. ಕೈಗಾರಿಕೆ ಹಾಗೂ ಮೂಲಸೌಕರ್ಯಗಳನ್ನು ಬಲಪಡಿಸುವಿಕೆಯ ಈ ಯೋಜನೆಗಳು ಒಟ್ಟಾರೆ ಜೀವನಮಟ್ಟದ ಮೇಲೆ, ಕೊನೆಯ ಪಕ್ಷ ನಿರುದ್ಯೋಗ ಸಮಸ್ಯೆಯನ್ನರಿಯದಿದ್ದ- ಮುಂದೆ ವೀಮರ್ ಗಣರಾಜ್ಯವಾದ ಪ್ರದೇಶದ ಜನಗಳ ಮೇಲೆ ಪರಿಣಾಮ ಬೀರಿತು. ಎರಡನೆ ಮಹಾಯುದ್ಧಕ್ಕೆ ಸ್ವಲ್ಪ ಕಾಲ ಮುಂಚೆ ವೇತನಗಳಲ್ಲಿ ಕೊಂಚ ಕಡಿತವನ್ನು ಮಾಡಲಾಗಿತ್ತು. ಆದರೆ ಜೀವನ ನಿರ್ವಹಣೆಯ ವೆಚ್ಚ ೨೫%ರಷ್ಟು ಹೆಚ್ಚಾಗಿತ್ತು. ಆದರೆ NSDAPಯ ಪಾರಂಪರಿಕ ಮತದಾರರಾಗಿದ್ದ ಕಾರ್ಮಿಕರು ಹಾಗೂ ರೈತರ ಜೀವನಮಟ್ಟದಲ್ಲಿ ಏರಿಕೆ ಕಂಡಿತ್ತು. ಹಿಟ್ಲರನ ಸರ್ಕಾರವು ವಾಸ್ತುನಿರ್ಮಾಣಗಳಿಗೆ ದೊಡ್ಡ ಪ್ರಮಾಣದ ಕೊಡುಗೆ ನೀಡಿತು. ಆಲ್ಬರ್ಟ್ ಸ್ಪೀರ್ (Albert Speer), ಸಾಮ್ರಾಜ್ಯದ ಖ್ಯಾತ ಹಾಗೂ ಮೊದಲನೆಯ ವಾಸ್ತುಶಿಲ್ಪಿಯೆಂದು ಜನಪ್ರಿಯರಾದರು. ಹಿಟ್ಲರನ ಜರ್ಮನ್ ಸಂಸ್ಕೃತಿಯ ಪುನರ್ವ್ಯಾಖ್ಯಾನವನ್ನು ವಾಸ್ತುಕಲೆಯ ಮೂಲಕ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ಸ್ಪೀರ್, ಎರಡನೆ ಮಹಾಯುದ್ಧದ ಕೊನೆಯ ವರ್ಷಗಳಲ್ಲಿ ಶಸ್ತ್ರಾಸ್ತ್ರ ಸಚಿವರಾಗಿ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸಿದ್ದರು. ೧೯೩೬ರ ಬೇಸಿಗೆ ಒಲಂಪಿಕ್‌ಗೆ ಬರ್ಲಿನ್ ಆತಿಥೇಯ ರಾಷ್ಟ್ರವಾಗಿತ್ತು. ಇದನ್ನು ಉದ್ಘಾಟಿಸಿದ ಹಿಟ್ಲರ್, ಉಳಿದೆಲ್ಲ ಜನಾಂಗಗಳಿಗಿಂತ ಆರ್ಯಜನಾಂಗ ಉನ್ನತವಾದುದೆಂದು ಬಿಂಬಿಸುವಂತೆ ವಿನ್ಯಾಸಗೊಳಿಸಿದ್ದನು. ಆತನ ಈ ಪ್ರಯತ್ನವು ಇದು ಮಿಶ್ರ ಫಲಿತಾಂಶಗಳನ್ನು ನೀಡಿತ್ತು. ಹಿಟ್ಲರನು ಬ್ರಾಡ್‌ಗೇಜ್ ರೈಲು ಸಂಪರ್ಕಜಾಲ (ಬ್ರೀಟ್ಸ್‌ಪರ್ಬನ್ - Breitspurbahn )ಕ್ಕೆ ಯೋಜನೆ ಹಾಕಿಕೊಂಡಿದ್ದನಾದರೂ ಎರಡನೆ ಮಹಾಯುದ್ಧವು ಅದನ್ನು ಆಕ್ರಮಿಸಿಕೊಂಡಿತು. ನಿರ್ಮಾಣಗೊಂಡ ರೈಲುಮಾರ್ಗದ ಗೇಜ್ ಮೂರು ಮೀಟರ್‌ಗಳಷ್ಟಿದ್ದು, ಬ್ರಿಟನ್ನಿನ ಹಳೆಯ ಗ್ರೇಟ್ ವೆಸ್ಟರ್ನ್ ರೇಲ್ವೇಗಿಂತ ಅಗಲವಾಗಿತ್ತು. ಅನಂತರದ ದಿನಗಳಲ್ಲಿ ವೋಲ್ಕ್ಸ್‌ವೇಗನ್ ಬೀಟ್ಲ್ (Volkswagen Beetle) ಎಂದು ಹೆಸರಾದ ಕಾರಿನ ವಿನ್ಯಾಸಕ್ಕೆ ಹಿಟ್ಲರ್ ಕೂಡ ಅಲ್ಪ ಕೊಡುಗೆಯನ್ನು ನೀಡಿದ್ದನು ಮತ್ತು ಫರ್ಡಿನೆಂಡ್ ಪೋರ್ಶೆಯ (Ferdinand Porsche) ವಿನ್ಯಾಸ ಹಾಗೂ ನಿರ್ಮಾಣದ ಪಾರುಪತ್ಯ ವಹಿಸಿಕೊಂಡಿದ್ದನು. ಆದರೆ ಉತ್ಪಾದನೆಯು ಯುದ್ಧದ ಕಾರಣದಿಂದ ಮುಂದೂಡಲ್ಪಟ್ಟಿತು. ಹಿಟ್ಲರ್, ಸ್ಪಾರ್ಟಾವನ್ನು ಪ್ರಥಮ ಸಮಾಜವಾದಿ ರಾಜ್ಯವೆಂದು ಪರಿಗಣಿಸಿದ್ದನು ಹಾಗೂ ಅದರ ಹಿಂದಿನ ದಿನಗಳ ಕುರೂಪಿ ಮಕ್ಕಳ ಸುಂದರಸಂತಾನೋತ್ಪತ್ತಿ ಚಿಕಿತ್ಸೆಯನ್ನು ಶ್ಲಾಘಿಸಿದ್ದನು. ಹಿಟ್ಲರನ ಆರ್ಥಿಕ ನೀತಿಗಳ ಕುರಿತು ಮುಖ್ಯವಾದ ಐತಿಹಾಸಿಕ ಚರ್ಚೆಯು “ಆಧುನಿಕತೆ"ಯ ಸುತ್ತ ಸುತ್ತುತ್ತದೆ. ಡೇವಿಡ್ ಶೋನ್ಬಮ್ (David Schoenbaum) ಮತ್ತು ಹೆನ್ರಿ ಆಶ್ಬೈ ಟರ್ನರ್ (Henry Ashby Turner) ಥರದ ಚರಿತ್ರಕಾರರು, ಹಿಟ್ಲರನ ಸಾಮಾಜಿಕ ಹಾಗೂ ಆರ್ಥಿಕ ನೀತಿಗಳು ಆಧುನಿಕತಾವಿರೋಧಿ ಉದ್ದೇಶಗಳ ಈಡೇರಿಕೆಗಾಗಿ ರೂಪಿಸಲ್ಪಟ್ಟ ಆಧುನಿಕೀಕರಣ ಎಂದು ವಾದಿಸಿದ್ದಾರೆ. ರೈನರ್ ಝಿಟಲ್ಮನ್ (Rainer Zitelmann) ಸುತ್ತ ಕೇಂದ್ರಿತರಾದ ಮತ್ತೊಂದು ಬಣದ ಚರಿತ್ರಕಾರರು, ಹಿಟ್ಲರನು ಜರ್ಮನ್ ಸಮಾಜದಲ್ಲಿ ಕ್ರಾಂತಿಕಾರೀ ಆಧುನಿಕೀಕರಣವನ್ನು ಕುರಿತು ಪೂರ್ವಯೋಜಿತ ಕಾರ್ಯತಂತ್ರಗಳನ್ನು ಹೊಂದಿದ್ದನೆಂದು ತರ್ಕಿಸುತ್ತಾರೆ.

ಸಶಸ್ತ್ರೀಕರಣ ಮತ್ತು ಹೊಸ ಒಪ್ಪಂದಗಳು

೧೯೩೩ರ ಫೆಬ್ರುವರಿ ೩ರಂದು ತನ್ನ ಪ್ರಮುಖ ಜನರಲ್ ಮತ್ತು ಅಡ್ಮಿರಲ್‍ಗಳ ಜತೆ ನಡೆಸಿದ ಸಭೆಯೊಂದರಲ್ಲಿ ’ಪೂರ್ವದ ಲೀಬೆನ್‍ಸ್ಟ್ರಾಮ್‍ಗೆ ಮುತ್ತಿಗೆ ಹಾಕುವುದು ಮತ್ತು ಅದನ್ನು ನಿರ್ದಯವಾಗಿ ಜರ್ಮನಿಯದನ್ನಾಗಿ ಮಾಡುವುದನ್ನು’ ತನ್ನ ಪ್ರಮುಖ ವಿದೇಶಾಂಗ ನೀತಿಯನ್ನಾಗಿ ಮಂಡಿಸಿದನು. ೧೯೩೩ರ ಮಾರ್ಚಿನಲ್ಲಿ ಪ್ರಥಮ ಬಾರಿಗೆ ಜರ್ಮನ್ ಕ್ಯಾಬಿನೆಟ್ಟಿನೆದುರಿಗೆ ಅಂದಿನ ವಿದೇಶಾಂಗ ಕಚೇರಿ(Auswärtiges Amt) ಯ ರಾಜ್ಯ ಕಾರ್ಯದರ್ಶಿಯಾದ ರಾಜಕುಮಾರ ಬರ್ನಾರ್ಡ್ ವಾನ್ ಬುಲೋವ್ (ಅದೇ ಹೆಸರಿನ ಜನಪ್ರಿಯ ಚಾನ್ಸೆಲರನ ಅಳಿಯ) ಸಲ್ಲಿಸಿದ ಜರ್ಮನ್ ವಿದೇಶಾಂಗ ನೀತಿಯ ಪ್ರಮುಖ ಹೇಳಿಕೆಗಳನ್ನುಳ್ಳ ಸುತ್ತೋಲೆಯ ಪ್ರಕಾರ ಆಸ್ಟ್ರಿಯಾದೊಡನೆ ಆನ್‍ಶ್ಲುಜ್ , ೧೯೧೪ರ ಸಮಯದ ಸರಹದ್ದುಗಳ ಮರುಸ್ಥಾಪನೆ, ವರ್ಸೇಲ್ಸ್ ಒಪ್ಪಂದದ ಭಾಗ ೫ನ್ನು ರದ್ದುಗೊಳಿಸುವುದು, ಆಫ್ರಿಕಾದ ಜರ್ಮನ್ ವಸಾಹತುಗಳ ಮರುಗಳಿಕೆ ಹಾಗೂ ಪಶ್ಚಿಮ ಯುರೋಪಿನಲ್ಲಿ ಜರ್ಮನ್ ಪ್ರಭಾವವುಳ್ಳ ಕ್ಷೇತ್ರದ ಸಂಸ್ಥಾಪನೆ - ಇವಿಷ್ಟೂ ಭವಿಷ್ಯದ ಗುರಿಗಳೆಂದು ಸಾರಲಾಗಿತ್ತು. ಹಿಟ್ಲರನಿಗೆ ಬುಲೋವ್‍ನ ಸುತ್ತೋಲೆಯ ಗುರಿಗಳು ತೀರಾ ಸಂಕುಚಿತವೆನ್ನಿಸಿದುವು. ೧೯೩೩ ರ ಮಾರ್ಚಿನಲ್ಲಿ ಸ್ವಿಜರ್ಲೆಂಡಿನ ಜಿನೀವಾದಲ್ಲಿ ನಡೆದ ವಿಶ್ವ ನಿಶ್ಶಸ್ತ್ರೀಕರಣ ಅಧಿವೇಶನದಲ್ಲಿ ಫ್ರೆಂಚರ ’ಭದ್ರತೆ’ (sécurité) ಯ ಬೇಡಿಕೆ ಮತ್ತು ಜರ್ಮನರ ’ಶಸ್ತ್ರಾಸ್ತ್ರ ಸಮಾನತೆ’(gleichberechtigung) ಯ ನಡುವಣ ತಾಕಲಾಟವನ್ನು ಬಗೆಹರಿಸಲು ಬ್ರಿಟನ್ನಿನ ಪ್ರಧಾನಮಂತ್ರಿ ರಾಮ್ಸೇ ಮಾಕ್ಡೊನಾಲ್ಡ್ ’ಮ್ಯಾಕ್ಡೊನಾಲ್ಡ್ ಯೋಜನೆ’ ಎಂಬ ಒಪ್ಪಂದವನ್ನು ಮಂಡಿಸಿದರು. ಹಿಟ್ಲರ್ ’ಮ್ಯಾಕ್ಡೊನಾಲ್ಡ್ ಯೋಜನೆ’ ಕಾರ್ಯರೂಪಕ್ಕೆ ಬರಲಾಗದೆಂದು ತಿಳಿದಿದ್ದರೂ ಲಂಡನ್‍ನಿಂದ ವಿಶ್ವಾಸಭಾವನೆ ಪಡೆಯಲು ಹಾಗೂ ಫ್ರೆಂಚರನ್ನು ಮೊಂಡತನವುಳ್ಳವರಂತೆ ಬಿಂಬಿಸುವ ಸಲುವಾಗಿ ಈ ಯೋಜನೆಗೆ ಸಮ್ಮತಿ ನೀಡಿದನು. ೧೯೩೩ರ ಮೇ ತಿಂಗಳಲ್ಲಿ ಹಿಟ್ಲರ್ ಜರ್ಮನ್ ರಾಯಭಾರಿ ಹರ್ಬರ್ಟ್ ವಾನ್ ಡರ್ಕ್ಸನ್‍ ನನ್ನು ಮಾಸ್ಕೋನಲ್ಲಿ ಭೇಟಿಯಾದನು. ಸೋವಿಯೆತ್ ಯೂನಿಯನ್ ಜತೆಗಿನ ಸಂಬಂಧ ಬಹಳ ಹದಗೆಟ್ಟಿದೆಯೆಂದೂ ಇದನ್ನು ಸುಧಾರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಡರ್ಕ್ಸನ್ ಫ್ಯೂರೆರ್‍ಗೆ ಸಲಹೆ ನೀಡಿದನು. ಆದರೆ ಡರ್ಕ್ಸನ್ನನಿಗೆ ಬಹಳ ನಿರಾಶೆಯಾಗುವ ರೀತಿ ಮಾತನಾಡಿದ ಹಿಟ್ಲರ್ ಪೋಲ್ಯಾಂಡಿನ ಜತೆಯಲ್ಲಿ ಸೋವಿಯೆತ್ ವಿರೋಧೀ ಒಪ್ಪಂದವೊಂದನ್ನು ಕುದುರಿಸುವ ಬಗ್ಗೆ ತನ್ನ ಒಲವನ್ನು ವ್ಯಕ್ತಪಡಿಸಿದನು. ಡರ್ಕ್ಸನ್ ಇದರಿಂದ ಜರ್ಮನ್-ಪಾಲಿಶ್ ಗಡಿರೇಖೆಯನ್ನು ಅಂಗೀಕರಿಸಿದಂತಾಗುವುದಿಲ್ಲವೇ ಎಂದು ವಿರೋಧ ವ್ಯಕ್ತಪಡಿಸಿದಾಗ ಕೇವಲ ವರ್ಸೇಲ್ಸ್ ಒಪ್ಪಂದವನ್ನು ಮುರಿಯುವುದು ಮಾತ್ರ ತನ್ನ ಉದ್ದೇಶವಲ್ಲ, ತನ್ನ ಗುರಿ ಇನ್ನೂ ಎತ್ತರವಾದ್ದನ್ನು ಸಾಧಿಸುವುದಾಗಿದೆ ಎಂದು ಹಿಟ್ಲರ್ ತಿಳಿಸಿದನು. ಲಂಡನ್ ವಿಶ್ವ ಆರ್ಥಿಕ ಅಧಿವೇಶನದಲ್ಲಿ ಭಾಗವಹಿಸುವಾಗ ಆಫ್ರಿಕಾ ಮತ್ತು ಪಶ್ಚಿಮ ಯುರೋಪುಗಳಲ್ಲಿ ವಸಾಹತು ವಿಸ್ತರಣೆಯ ಯೋಜನೆ ಮಂಡಿಸಿದ ಜರ್ಮನ್ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಆಲ್ಫ್ರೆಡ್ ಹ್ಯೂಗೆನ್‍ಬರ್ಗನನ್ನು ಹಿಟ್ಲರ್ ೧೯೩೩ರ ಜೂನಿನಲ್ಲಿ ಬಲವಂತವಾಗಿ ವಿರೋಧಿಸಬೇಕಾಗಿ ಬಂದಿದ್ದು ಎಲ್ಲೆಡೆ ಕೋಲಾಹಲಕ್ಕೆ ಕಾರಣವಾಯಿತು. S ೧೯೩೩ರಲ್ಲಿ ಹ್ಯಾಂಬರ್ಗ್‌ನ ಬರ್ಗರ್‍ಮೀಸ್ಟರ್‍ನಲ್ಲಿ ಮಾತನಾಡುತ್ತಿದ್ದ ಹಿಟ್ಲರ್ ಪುನಹ ಯುದ್ಧವೊಂದನ್ನು ಎದುರಿಸಲು ಸುಸಜ್ಜಿತವಾಗುವ ಮುನ್ನ ಜರ್ಮನಿಗೆ ಕೆಲವಾರು ವರುಷಗಳವರೆಗಿನ ಶಾಂತಿಯ ಅಗತ್ಯವಿದೆಯೆಂದೂ, ಅಲ್ಲಿಯತನಕ ಮುಂಜಾಗ್ರತೆಯ ನೀತಿಯನ್ನು ಅನುಸರಿಸುವುದು ಸರಿಯೆಂದೂ ಹೇಳಿಕೆ ನೀಡಿದ. ೧೭ ಮೇ ೧೯೩೩, ೨೧ ಮೇ ೧೯೩೫ ಹಾಗೂ ೭ ಮಾರ್ಚ್ ೧೯೩೬ರ ’ಶಾಂತಿ ಭಾಷಣ’ಗಳಲ್ಲಿ ಹಿಟ್ಲರ್ ತನ್ನ ಶಾಂತಿಯುತವಾದ ಗುರಿಗಳ ಬಗ್ಗೆ ಮಾತನಾಡಿರುವುದು ಮಾತ್ರವಲ್ಲದೆ ಅಂತರ್ರಾಷ್ಟ್ರೀಯ ವ್ಯವಸ್ಥೆಯೊಂದರಲ್ಲಿ ಉಳಿದುಕೊಂಡು ಕೆಲಸ ಮಾಡುವ ಇಂಗಿತವನ್ನು ಕೂಡ ವ್ಯಕ್ತಪಡಿಸಿದ್ದಾನೆ. ವ್ಯಕ್ತಿಗತವಾಗಿ, ಹಿಟ್ಲರನ ಯೋಜನೆಗಳು ಶಾಂತಿಗೆ ವಿರುದ್ಧವಾಗಿದ್ದವು. ೧೯೩೩ರಲ್ಲಿ ನಡೆದ ತನ್ನ ಪ್ರಥಮ ಕ್ಯಾಬಿನೆಟ್ ಸಭೆಯಲ್ಲಿ ಹಿಟ್ಲರ್ ಮಿಲಿಟರಿ ವೆಚ್ಚಕ್ಕೆ ನಿರುದ್ಯೋಗ ಭತ್ಯೆಯ ವೆಚ್ಚಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಲ್ಲದೆ ಮಿಲಿಟರಿ ವೆಚ್ಚ ತೃಪ್ತಿಕರವಾಗಿದ್ದರೆ ಮಾತ್ರ ನಿರುದ್ಯೋಗ ಸಮಸ್ಯೆಯ ಮೇಲೆ ಹಣ ವೆಚ್ಚ ಮಾಡಲಾಗುವುದೆಂದು ಸ್ಪಷ್ಟಪಡಿಸಿದನು. ರೀಶ್‍ಬ್ಯಾಂಕ್‌ ನ ಅದ್ಯಕ್ಷನೂ ಮಾಜೀ ಚಾನ್ಸಲರನೂ ಆಗಿದ್ದ ಡಾ.ಹಾನ್ಸ್ ಲೂಥರ್ ಹೊಸ ಸರ್ಕಾರವು ಶಸ್ತ್ರಸನ್ನದ್ಧವಾಗಲು ಆರ್ಥಿಕ ಸಹಾಯವಾಗಿ ೧೦೦ ಮಿಲಿಯನ್ ರೀಚ್‌ಮಾರ್ಕು ಗಳನ್ನು ಮಾತ್ರ ನೀಡಲಾಗುವದೆಂಬ ಕಟ್ಟುಹಾಕಿದಾಗ ಹಿಟ್ಲರನಿಗೆ ಈ ಮೊತ್ತ ಗೌಣವೆನಿಸಿ ಲೂಥರನನ್ನು ೧೯೩೩ರ ಮಾರ್ಚಿನಲ್ಲಿ ಕೆಲಸದಿಂದ ತೆಗೆದುಹಾಕಿದ. ಆತ ಹೊಸದಾಗಿ ನಿಯಮಿಸಿದ ಅಧ್ಯಕ್ಷ ಜಾಲ್ಮರ್ ಶಾಖ್ಟ್ ಮುಂದಿನ ಐದು ವರುಷಗಳಲ್ಲಿ ಶಸ್ತ್ರಾಸ್ತ್ರ ಕೊಂಡುಕೊಳ್ಳಲು ಸರ್ಕಾರಕ್ಕೆ ೧೨ ಬಿಲಿಯನ್ ರೀಚ್‌ಮಾರ್ಕು ಗಳಷ್ಟು ಬೆಲೆಯುಳ್ಳ ’ಮೀಫೋ ಬಿಲ್’ಗಳನ್ನು ಮುಂಗಡ ನೀಡಿದ. ಹಿಟ್ಲರನ ಮೊದಲ ವರುಷಗಳ ವಿದೇಶಾಂಗ ನೀತಿಯ ಪ್ರಮುಖ ಹೆಜ್ಜೆಯೆಂದರೆ ಬ್ರಿಟನ್ನಿನ ಜತೆಗೆ ಮೈತ್ರಿ. ಇಪ್ಪತ್ತರ ದಶಕದಲ್ಲಿ ಹಿಟ್ಲರನೇ ಬರೆದುಕೊಂಡಂತೆ, ’ಇಂಗ್ಲೆಂಡಿನ ಸಹಾಯದಿಂದ ರಷ್ಯಾದ ವಿನಾಶ’ ಭವಿಷ್ಯದ ರಾಷ್ಟ್ರೀಯ ಸಮಾಜವಾದೀ ವಿದೇಶಾಂಗ ನೀತಿಯ ಹೆಗ್ಗುರಿಯಾಗಿದ್ದಿತು. ೧೯೩೩ರ ಮೇ ತಿಂಗಳಿನಲ್ಲಿ ಆಲ್ಫ್ರೆಡ್ ರಾಸೆನ್‌ಬರ್ಗ್ ನಾಜೀ ಪಕ್ಷದ ವಿದೇಶ ರಾಜಕಾರಣ ಕಚೇರಿ(Aussenpolitisches Amt) ಯ ಮುಖ್ಯಸ್ಥನ ರೂಪದಲ್ಲಿ ಲಂಡನ್‌ಗೆ ಭೇಟಿನೀಡಿ ಬ್ರಿಟನ್ನಿನ ಮೈತ್ರಿ ಪಡೆಯಲೋಸುಗ ವಿಫಲಪ್ರಯತ್ನವೊಂದನ್ನು ಮಾಡಿದನು. ೧೯೩೩ರ ಅಕ್ಟೋಬರ್‌‍ನಲ್ಲಿ ಹಿಟ್ಲರನ ವಿದೇಶ ಮಂತ್ರಿ ಬ್ಯಾರನ್ ಕಾನ್‌ಸ್ಟಾಂಟಿನ್ ವಾನ್ ನ್ಯೂರಾಥ್ ಫ್ರೆಂಚರ ’ಭದ್ರತೆ’(sécurité) ಯ ಬೇಡಿಕೆ ತಮಗೆ ಮೊದಲ ವಿಘ್ನವಾಗಿತ್ತೆಂಬ ಜರ್ಮನ್ ಅನಿಸಿಕೆಯನ್ನು ಪ್ರಪಂಚಕ್ಕೆ ಸಾರಿದ ನಂತರ ಹಿಟ್ಲರ್ ಲೀಗ್ ಆಫ್ ನೇಶನ್ಸ್ ಮತ್ತು ವಿಶ್ವ ನಿಶ್ಶಸ್ತ್ರತಾ ಸಮ್ಮೇಳನದಿಂದ ಜರ್ಮನಿಯನ್ನು ಹಿಂದೆಗೆದುಕೊಂಡನು. ಮೈನ್ ಕ್ಯಾಂಫ್ ಮತ್ತು ಝ್ವೀಟೆಸ್ ಬುಕ್‌ ನಲ್ಲಿ ಪ್ರತಿಪಾದಿಸಲಾದ ಆಂಗ್ಲೋ-ಜರ್ಮನ್ ಮೈತ್ರಿಯ ಅವಶ್ಯಕತೆಯ ಬಗೆಗಿನ ಅಂಶಗಳಿಗೆ ಹೊಂದಿಕೊಂಡಂತೆ ಬ್ರಿಟಿಶ್ ರಾಯಭಾರಿ ಸರ್ ಎರಿಕ್ ಫಿಪ್ಸ್‌ರ ಜತೆಗಿನ ಸಭೆಯೊಂದರಲ್ಲಿ ಹಿಟ್ಲರ್ ಮಂಡಿಸಿದ ಯೋಜನೆಯೊಂದರ ಪ್ರಕಾರ ಬ್ರಿಟನ್ ಜರ್ಮನಿಯ ೩೦೦,೦೦೦ ಸಂಖ್ಯೆಯ ಸೈನ್ಯಕ್ಕೆ ಆಶ್ರಯ ನೀಡಿದರೆ ಜರ್ಮನಿಯು ಬ್ರಿಟಿಶ್ ಚಕ್ರಾಧಿಪತ್ಯವನ್ನು ಬೆಂಬಲಿಸುವುದು. ಇದಕ್ಕೆ ಉತ್ತರವಾಗಿ ಬ್ರಿಟೀಶರು ಜರ್ಮನಿ ತನ್ನ ಸೈನ್ಯದ ಸಂಖ್ಯೆಯನ್ನು ಹೆಚ್ಚಿಸುವುದಾದಲ್ಲಿ ಅದನ್ನು ಪೂರಯಿಸಲು ಹತ್ತು ವರುಷಗಳ ಕಾಲ ಕಾಯಬೇಕಾಗುವದೆಂಬ ಷರತ್ತು ಹಾಕಿದರು. ಇದಕ್ಕಿಂತ ಯಶಸ್ವಿಯಾದ ವಿದೇಶಾಂಗ ನೀತಿಯ ಆರಂಭ ಪೋಲಂಡಿನ ಜತೆಗಿನ ಸಂಬಂಧದಲ್ಲಿ ಜರ್ಮನಿಗೆ ದೊರಕಿತು. ಸೋವಿಯೆತ್ ಯೂನಿಯನ್ ಜತೆಗೆ ಒಳ್ಳೆಯ ಸಂಬಂಧವಿರಿಸಿಕೊಳ್ಳಬೇಕೆಂಬ ಅಭಿಪ್ರಾಯವಿದ್ದ ಮಿಲಿಟರಿ ಮತ್ತು ಆಸ್ವಾರ್ಟೈಜಸ್ ಆಮ್ಟ್‌(Auswärtiges Amt) ನ ವಿರೋಧವನ್ನೂ ಲೆಕ್ಕಿಸದ ಹಿಟ್ಲರ್ ೧೯೩೩ರಲ್ಲಿ ಪೋಲಂಡಿನ ಜತೆ ಗುಪ್ತವಾಗಿ ಮಾತುಕತೆ ನಡೆಸತೊಡಗಿದ್ದರ ಫಲವಾಗಿ ಮುಂದೆ ಜನವರಿ ೧೯೩೪ರ ಜರ್ಮನ್-ಪಾಲಿಶ್ ನಾನ್- ಅಗ್ರೆಶನ್ ಕರಾರು ಜಾರಿಗೆ ಬಂತು. ೧೯೩೪ರಲ್ಲಿ ಬ್ರಿಟಿಶ್ ಲಾರ್ಡ್ ಪ್ರೈವೀ ಸೀಲ್ ಆಗಿದ್ದ ಸರ್ ಆಂಥನಿ ಈಡನ್ ಅವರನ್ನು ಭೇಟಿಮಾಡಿದ ಹಿಟ್ಲರ್ ಜರ್ಮನಿಯ ಬಳಿ ಈಗಾಗಲೆ ವಾಯುದಳವಿದೆಯೆಂಬ ಬಲವಾದ ಸುಳಿವು ನೀಡಿದನು. ಇದು ವರ್ಸೇಲ್ಸ್ ಒಪ್ಪಂದದ ಉಲ್ಲಂಘನೆಯಾಗಿದ್ದಿತು. ೧೯೩೪ರ ಶರದೃತುವಿನಲ್ಲಿ ಹಣದುಬ್ಬರವು ತನ್ನ ಜನಪ್ರಿಯತೆಯನ್ನೇನಾದರೂ ಕಡಿಮೆಮಾಡುವುದೆ ಅಂಬ ಚಿಂತೆ ಹಿಟ್ಲರನನ್ನು ಬಲವಾಗಿ ಕಾಡತೊಡಗಿತ್ತು. ೧೯೩೪ರ ನವೆಂಬರ್ ೫ರಂದು ತನ್ನ ಮಂತ್ರಿಮಂಡಲದೆದುರು ಮಾಡಿದ ರಹಸ್ಯಭಾಷಣವೊಂದರಲ್ಲಿ ಹಿಟ್ಲರ್ "ದುಡಿಯುವ ವರ್ಗಕ್ಕೆ ತಾನು ಬೆಲೆಯೇರಿಕೆ ಆಗಗೊಡುವುದಿಲ್ಲವೆಂದು ಭಾಷೆಯಿತ್ತಿರುವುದಾಗಿ" ಸಾರಿದ. ಆತನ ಪ್ರಕಾರ "ಬೆಲೆಯೇರಿಕೆಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ದುಡಿಯುವ ವರ್ಗ ಭಾಷೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲವೆಂದು ಆತನ ಮೇಲೆ ಆರೋಪ ಹೊರಿಸಬಹುದಾಗಿತ್ತು. ಇದರ ಮುಂದಿನ ಪರಿಣಾಮವಾಗಿ ಜನರಲ್ಲಿ ಕ್ರಾಂತಿಯ ಭಾವನೆಗಳು ಕೂಡ ಮೂಡಬಹುದಾಗಿತ್ತು." ೧೯೧೯ರಿಂದಲೇ ರಹಸ್ಯವಾಗಿ ಜರ್ಮನಿಯ ಸಶಸ್ತ್ರೀಕರಣ ನಡೆಯುತ್ತಿದ್ದರೂ ೧೯೩೫ರ ಮಾರ್ಚಿನಲ್ಲಿ ಹಿಟ್ಲರ್ ವರ್ಸೇಲ್ಸ್ ಒಪ್ಪಂದದ ಭಾಗ-೫ನ್ನು ನಿರಾಕರಿಸುತ್ತ ಜರ್ಮನ್ ಸೈನ್ಯವು ತನ್ನ ಸಂಖ್ಯಾಬಲವನ್ನು ೬೦೦,೦೦೦ಕ್ಕೆ ಹೆಚ್ಚಿಸುವುದಾಗಿಯೂ(ವರ್ಸೇಲ್ಸ್ ಒಪ್ಪಂದದಲ್ಲಿ ನಿಗದಿಪಡಿಸಿದ್ದಕ್ಕಿಂತ ಆರು ಪಟ್ಟು ಹೆಚ್ಚಿಗೆ) ವಾಯುದಳ(Luftwaffe) ದ ಸಂಸ್ಥಾಪನೆ ಮತ್ತು ನೌಕಾದಳ(Kriegsmarine) ದ ವಿಸ್ತರಣೆ ಮಾಡುವುದಾಗಿಯೂ ಬಹಿರಂಗವಾಗಿ ಹೇಳಿಕೆ ನೀಡಿದ. ಬ್ರಿಟನ್, ಫ್ರಾನ್ಸ್, ಇಟಲಿ ಮತ್ತು ಲೀಗ್ ಆಫ್ ನೇಶನ್ಸ್ ಕೂಡಲೇ ಈ ಹೆಜ್ಜೆಗಳನ್ನು ಖಂಡಿಸಿದವು. ಆದರೆ ಹಿಟ್ಲರ್ ಜರ್ಮನಿ ಶಾಂತಿಯನ್ನೇ ಬಯಸುತ್ತದೆ ಎಂದು ಭರವಸೆ ನೀಡಿದ ಮೇಲೆ ಯಾವ ರಾಷ್ಟ್ರವೂ ಈ ಬೆಳವಣಿಗೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಿಲ್ಲವಾದ್ದರಿಂದ ಜರ್ಮನ್ ಸಶಸ್ತ್ರೀಕರಣ ಮುಂದುವರೆಯಿತು. ೧೯೩೫ರ ಮಾರ್ಚಿನಲ್ಲಿ ಬ್ರಿಟಿಶ್ ವಿದೇಶಾಂಗ ಕಾರ್ಯದರ್ಶಿ ಸರ್ ಜಾನ್ ಸೈಮನ್ ಮತ್ತು ಈಡೆನ್‌ರೊಂದಿಗೆ ನಡೆಸಿದ ಹಲವು ಸುತ್ತುಗಳ ಸಮಾಲೋಚನೆಯ ವೇಳೆಗೆ ಹಿಟ್ಲರ್ ಲೋಕಾರ್ನೋ ಒಪ್ಪಂದಕ್ಕೆ ಸರಿಸಮವಾಗಿ ಪಶ್ಚಿಮ ಯುರೋಪಿನ ಪ್ರಾದೇಶಿಕ ಭದ್ರತಾ ಒಪ್ಪಂದವೊಂದರಲ್ಲಿ ಜರ್ಮನಿ ಭಾಗವಹಿಸುವುದನ್ನು ಉಪಾಯವಾಗಿ ತಪ್ಪಿಸಿದರೆ ಬ್ರಿಟಿಶ್ ರಾಜಕಾರಣಿಗಳಿಬ್ಬರೂ ಹಿಟ್ಲರನ ಮೈತ್ರಿಯ ಪ್ರಸ್ತಾಪವನ್ನು ಅದೇ ರೀತಿಯ ಚಾಕಚಕ್ಯತೆಯಿಂದ ಒಪ್ಪಿಕೊಳ್ಳಲಿಲ್ಲ. ಸೈಮನ್ ಮತ್ತು ಈಡೆನ್‌ರ ಜತೆಗಿನ ಮಾತುಕತೆಯಲ್ಲಿ ಹಿಟ್ಲರ್ ಬಹಳ ಪ್ರಭಾವಶಾಲಿಯಾಗಿದ್ದ ವಸಾಹತು ಸಂಧಾನ ತಂತ್ರವೆಂದು ಭಾವಿಸಿದ್ದ ಉಪಾಯವನ್ನು ಮೊದಲಬಾರಿಗೆ ಪ್ರಯೋಗಿಸಿದ. ಸೈಮನ್ ಲೀಗ್ ಆಫ್ ನೇಶನ್ಸ್‌ಗೆ ತಿರುಗಿ ಬರಲು ನೀಡಿದ ಆಮಂತ್ರಣಕ್ಕೆ ಪ್ರತಿಯಾಗಿ ಆಫ್ರಿಕಾದ ಜರ್ಮನ್ ವಸಾಹತುಗಳನ್ನು ಮರಳಿಸಬೇಕೆಂಬ ಷರತ್ತು ಹಾಕಿದ. ೧೯೩೫ರ ಆರಂಭದ ವೇಳೆಗೆ ತಾನು ವಾಗ್ದಾನ ನೀಡಿದಂತೆ ಪ್ರಗತಿ ತೋರದ ಥರ್ಡ್ ರೀಚ್‌ ನ ಬೆಳವಣಿಗೆಯ ಬಗ್ಗೆ ನಾಝೀ ಪಕ್ಷರ ಹಲವರಲ್ಲಿ ಅದರಲ್ಲೂ ಹಳೆಯ ಹೋರಾಟಗಾರರಾದ ಆಲ್ಟ್ ಕ್ಯಾಂಫರ್‌ (೧೯೩೦ಕ್ಕೂ ಮುನ್ನ ಪಕ್ಷಸೇರಿದ್ದ ಕಟ್ಟಾ ಯಹೂದೀ-ವಿರೋಧಿ ಅನುಯಾಯಿಗಳು)ಗಳಲ್ಲಿ ಹಾಗೂ SAಯಲ್ಲಿ ಹೊಗೆಯಾಡತೊಡಗಿದ ಅಸಮಾಧಾನವು ಅಲ್ಪಸಂಖ್ಯಾತರೂ, ಕಡಿಮೆ ಸುರಕ್ಷೆಯುಳ್ಳವರೂ ಆಗಿದ್ದ ಯಹೂದಿಗಳ ವಿರುದ್ಧ ಪ್ರದರ್ಶಿತವಾಗುವುದರ ಮೂಲಕ ಭುಗಿಲೇಳತೊಡಗಿತು. ಪಕ್ಷದ ಹಲವಾರು ಪ್ರಮುಖ ಶ್ರೇಣಿಗಳಲ್ಲಿದ್ದವರೂ ಕೂಡ ಥರ್ಡ್ ರೀಚ್ ಆರಂಭವಾಗಿ ಎರಡು ವರುಷಗಳು ಕಳೆದಿದ್ದರೂ, ೧೯೩೩ಕ್ಕೆ ಮೊದಲು ಹಿಟ್ಲರ್ ನೀಡಿದ್ದ ಎಣಿಕೆಯಿಲ್ಲದ ವಾಗ್ದಾನಗಳ ನಂತರವೂ, ’ಆರ್ಯನ್’ ಮತ್ತು ’ಯಹೂದೀ’ ’ಜನಾಂಗ’ಗಳಿಗೆ ಸೇರಿದ ಜರ್ಮನರ ನಡುವಣ ಮದುವೆ ಮತ್ತು ಯಾವುದೇ ಲೈಂಗಿಕ ಸಂಬಂಧವನ್ನು ನಿಷೇಧಿಸುವ ಯಾವ ಕಾನೂನೂ ಜಾರಿಗೆ ಬಂದಿರಲಿಲ್ಲವೆಂಬುದರ ಬಗ್ಗೆ ಅಸಮಾಧಾನ ಹೊಂದಿದ್ದರು. ೧೯೩೫ರ ವಸಂತಕಾಲದಲ್ಲಿ ನೀಡಲಾದ ಒಂದು ಗೆಸ್ಟಪೋ ವರದಿಯ ಪ್ರಕಾರ ’ಯಹೂದೀ ತೊಂದರೆ’ಗೆ ಪರಿಹಾರವಾಗಿ ನಾಝೀ ಪಕ್ಷದ ಶ್ರೇಣೀಕರಣವು ’ಕೆಳಮಟ್ಟದಿಂದ ಆರಂಭವಾಗುವುದು’ಮತ್ತು ’ನಂತರದಲ್ಲಿ ಇದನ್ನು ಸರ್ಕಾರವೂ ಅನುಸರಿಸಬೇಕಾಗುವುದು’. ಇದರ ಪರಿಣಾಮಸ್ವರೂಪ ನಾಝೀಪಕ್ಷದ ಉಗ್ರವಾದಿಗಳು ಮತ್ತು SA ಜತೆಸೇರಿಕೊಂಡು ಜರ್ಮನ್ ಯಹೂದಿಗಳ ಮೇಲೆ ದಾಳಿ, ಸ್ವತ್ತುನಾಶ ಮತ್ತು ಬಹಿಷ್ಕಾರದಂತಹ ಬಲವಾದ ಚಟುವಟಿಕೆಗಳನ್ನು ಆರಂಭಿಸಿದರು. ೧೯೩೫ರ ಜೂನ್ ೧೮ರಂದು ಲಂಡನ್ನಿನಲ್ಲಿ ಜರ್ಮನ್ ನೌಕಾಬಲವನ್ನು ಆಂಗ್ಲ ನೌಕಾಬಲದ ಶೇಕಡಾ ೩೫ರಷ್ಟು ಹೆಚ್ಚಿಸುವಂತೆ ಆಂಗ್ಲೋ-ಜರ್ಮನ್ ನೌಕಾದಳ ಒಪ್ಪಂದ(Anglo-German Naval Agreement-A.G.N.A)ಕ್ಕೆ ಸಹಿ ಹಾಕಲಾಯಿತು. ತಾನು ’ಮೈನ್ ಕ್ಯಾಂಫ್ ’ನಲ್ಲಿ ಭವಿಷ್ಯ ನುಡಿದಂತೆಯೇ ಆಂಗ್ಲೋ ಜರ್ಮನ್ ಮೈತ್ರಿ ಆರಂಭವಾದ್ದರಿಂದ A.G.N.Aಗೆ ಸಹಿ ಹಾಕಿದ ದಿನವನ್ನು ಹಿಟ್ಲರ್ ’ತನ್ನ ಜೀವನದ ಅತ್ಯಂತ ಸಂತೋಷಕರ ದಿನ’ವೆಂದು ಬಣ್ಣಿಸಿದ್ದಾನೆ. ಈ ಒಪ್ಪಂದದ ವೇಳೆಯಲ್ಲಿ ಫ್ರಾನ್ಸ್ ಅಥವಾ ಇಟಲಿಗಳ ಒಪ್ಪಿಗೆ ಕೇಳಲಾಗಿರಲಿಲ್ಲ, ಲೀಗ್ ಆಫ್ ನೇಶನ್ಸ್ ಅನ್ನು ಪರಿಗಣಿಸಲಾಗಿರಲಿಲ್ಲ ಮತ್ತು ವರ್ಸೇಲ್ಸ್ ಒಪ್ಪಂದವನ್ನು ಅಪ್ರಸ್ತುತವನ್ನಾಗಿ ಮಾಡಲಾಯಿತು. A.G.N.Aಗೆ ಸಹಿ ಹಾಕಿದ ನಂತರ ಹಿಟ್ಲರ್ ಆಂಗ್ಲೋ-ಜರ್ಮನ್ ಮೈತ್ರಿಯ ಮುಂದಿನ ಹೆಜ್ಜೆಯಾಗಿ ಜರ್ಮನಿಯ ಆಪ್ರಿಕನ್ ವಸಾಹತುಗಳನ್ನು ಹಿಂದಿರುಗಿಸಲು ಒತ್ತಾಯಿಸುತ್ತಿದ್ದ ಸಂಘಗಳನ್ನೆಲ್ಲಾ ಒಂದೆಡೆ ಸಂಘಟಿಸಿ(Gleichschaltung) ಹೊಸದಾದ ರೀಚ್ ವಸಾಹತು ಒಕ್ಕೂಟ(Reichskolonialbund) ವೊಂದನ್ನು ಹುಟ್ಟುಹಾಕಿದನು. ಈ ಒಕ್ಕೂಟ ಮುಂದಿನ ಕೆಲ ವರುಷಗಳವರೆಗೆ ವಸಾಹತು ಮರುಸ್ಥಾಪನೆಯ ವಿಷಯದಲ್ಲಿ ಉಗ್ರಪ್ರಚಾರಕ್ರಮಗಳನ್ನು ಕೈಗೊಂಡಿತು. ಹಿಟ್ಲರನಿಗೆ ಹಳೆಯ ಜರ್ಮನ್ ಆಫ್ರಿಕನ್ ವಸಾಹತುಗಳ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ಮೈನ್ ಕ್ಯಾಂಫ್‌ ನಲ್ಲಿ ಹಿಟ್ಲರ್ ಜರ್ಮನ್ ರಾಜಪ್ರಭುತ್ವ ಸರ್ಕಾರವನ್ನು ೧೯೧೪ಕ್ಕೆ ಮುನ್ನವೇ ಆಪ್ರಿಕಾದಲ್ಲಿ ವಸಾಹತು ವಿಸ್ತರಣೆ ಮಾಡಲೆಳಸಿದುದನ್ನು ಟೀಕಿಸುತ್ತ, ಲೀಬೆನ್‌ಸ್ಟ್ರಾಮ್‌ ಗೆ ಪಶ್ಚಿಮ ಯುರೋಪು ಮಾತ್ರ ತಕ್ಕುದಾದುದು-ಆಫ್ರಿಕಾ ಅಲ್ಲ ಎಂದು ಬರೆದಿದ್ದ. ವಸಾಹತುಗಳನ್ನು ಮರಳಿಸುವ ಬೇಡಿಕೆಯನ್ನು ’ತ್ಯಾಗ’ ಮಾಡುವುದರ ಮೂಲಕ ರೀಚ್‌ ನ ಜತೆ ಬ್ರಿಟಿಶ್ ಮೈತ್ರಿ ಜರ್ಮನಿಯ ಷರತ್ತಿನಂತೆ ಆಗುವಂತೆ ಮಾಡಲು ಸಂಧಾನ ತಂತ್ರವಾಗಿ ಬಳಸುವುದು ಮಾತ್ರ ಹಿಟ್ಲರನ ಉದ್ದೇಶವಾಗಿದ್ದಿತು. ೧೯೩೫ರ ಬೇಸಿಗೆಯಲ್ಲಿ ಹಣದುಬ್ಬರ ಮತ್ತು ಸಶಸ್ತ್ರೀಕರಣಕ್ಕಾಗಿ ಜರ್ಮನಿಗೆ ಅವಶ್ಯವಿದ್ದ ಕಚ್ಚಾಸಾಮಗ್ರಿಗೆಂದು ಬೇಕಾಗಿದ್ದ ವಿದೇಶೀ ವಿನಿಮಯ - ಇವೆರಡರ ಮಧ್ಯೆ ಮಿಲಿಟರಿ ವೆಚ್ಚಕ್ಕಾಗಿ ಕೇವಲ ೫ ಮಿಲಿಯನ್ ರೀಚ್‌ಮಾರ್ಕ್ಸ್ ಮಾತ್ರ ಲಭ್ಯವಿದೆಯೆಂದೂ, ಆಹಾರಕೊರತೆಯನ್ನು ತಡೆಗಟ್ಟಲು ಪ್ರತಿದಿನವೂ ೩೦೦,೦೦ ರೀಚ್‌ಮಾರ್ಕ್ಸ್‌ ಗಳ ಅವಶ್ಯಕತೆಯಿದೆಯೆಂದೂ ಹಿಟ್ಲರನಿಗೆ ತಿಳಿಸಲಾಯಿತು. ೧೯೩೫ರ ಆಗಸ್ಟಿನಲ್ಲಿ ಡಾ.ಜಾಲ್ಮರ್ ಶಾಖ್ಟ್ ಹಿಟ್ಲರನಿಗೆ ಯಹೂದಿಗಳ ವಿರುದ್ಧದ ಹಿಂಸಾತ್ಮಕ ಅಲೆಯು ಆರ್ಥಿಕ ಪರಿಸ್ಥಿತಿಯನ್ನು, ತನ್ಮೂಲಕ ಸಶಸ್ತ್ರೀಕರಣವನ್ನು ಹದಗೆಡಿಸುತ್ತಿದೆಯೆಂದೂ ಸೂಚಿಸಿದ. ಶಾಖ್ಟನ ದೂರುಗಳ ಜತೆಗೇ ಜರ್ಮನ್ ಜನತೆ ಯಹೂದಿಗಳ ಮೇಲಿನ ದಾಳಿಗಳನ್ನು ಅನುಮೋದಿಸುತ್ತಿಲ್ಲವೆಂಬ ವರದಿಗಳು ಹಾಗೂ ದಾಳಿಗಳಿಗೆ ದೊರಕುತ್ತಿದ್ದ ಪೊಲೀಸರ ಸಹಕಾರವು ಸರ್ಕಾರದ ಜನಪ್ರಿಯತೆಯನ್ನು ಕುಗ್ಗಿಸುತ್ತಿದೆಯೆಂಬ ವಿಷಯ ತಿಳಿದುಬಂದಾಗ ಹಿಟ್ಲರ್ ೧೯೩೫ರ ಆಗಸ್ಟ್ ೮ರಂದು ಜರ್ಮನ್ ಯಹೂದಿಗಳ ಮೇಲಿನ ’ವ್ಯಕ್ತಿಗತ ದಾಳಿ’ಗಳನ್ನು ನಿಲ್ಲಿಸುವಂತೆ ಆದೇಶಿಸಿದ. ಹಿಟ್ಲರನ ಪ್ರಕಾರ ಆಗಸ್ಟ್ ಎಂಟರ ಆದೇಶದ ಬಗ್ಗೆ ನಿರಾಶೆಯ ಭಾವನೆ ಹೊಂದಿದ್ದ್ದಪಕ್ಷದ ಸದಸ್ಯರಿಗೆ ಸಮಾಧಾನ ನೀಡಲು ಉಗ್ರವಾದ ಯಹೂದೀ-ವಿರೋಧದ ಕಾನುನುಗಳನ್ನು ಜಾರಿಗೆ ತರುವುದು ಬಹಳ ಅವಶ್ಯಕವಾಗಿದ್ದಿತು, ಏಕೆಂದರೆ ಆಗಸ್ಟ್ ಎಂಟರ ಆದೇಶವನ್ನು ಹಿಟ್ಲರ್ ಅರೆಮನಸ್ಸಿನಿಂದ ವ್ಯಾವಹಾರಿಕ ಕಾರಣಗಳಿಗಾಗಿ ನೀಡಿದ್ದರೂ ಆತನ ಒಲವು ಪಕ್ಷದ ಮೂಲಭೂತವಾದಿಗಳ ಕಡೆಗೇ ಇದ್ದುದಾಗಿತ್ತು. ೧೯೩೫ರಲ್ಲಿ ನ್ಯೂರೆಂಬರ್ಗ್‌ನಲ್ಲಿ ನಡೆಯಲಿದ್ದ ನಾಝೀ ಪಕ್ಷದ ಸಮಾವೇಶದಲ್ಲಿ ೧೫೪೩ರ ನಂತರ ಪ್ರಪ್ರಥಮ ಬಾರಿಗೆ ರೀಚ್‌ಸ್ಟ್ಯಾಗ್‌ ನ ಮೊದಲ ಅಧಿವೇಶನ ಸಭೆಯನ್ನು ನಡೆಸಲು ನಿರ್ಧರಿಸಲಾಯಿತು. ಹಿಟ್ಲರ್ ರೀಚ್‌ಸ್ಟ್ಯಾಗ್ ಮೂಲಕ ನಾಝೀ ಸ್ವಸ್ತಿಕಧ್ವಜವನ್ನು ಜರ್ಮನ್ ರೀಚ್‌ ನ ಧ್ವಜವನ್ನಾಗಿ ಮಾಡುವ ಕಾನೂನನ್ನು ಜಾರಿಗೊಳಿಸುವ ಮತ್ತು ಇಥಿಯೋಪಿಯದಲ್ಲಿ ಇಟಲಿ ನಡೆಸಬೇಕೆಂದಿದ್ದ ಹಿಂಸಾತ್ಮಕ ದಾಳಿಗಳನ್ನು ಬೆಂಬಲಿಸುವ ಪ್ರಮುಖ ಭಾಷಣವೊಂದನ್ನು ಮಾಡುವ ಯೋಜನೆ ಹಾಕಿದ. ಇಟಲಿಯ ಆಕ್ರಮಣವು ಜರ್ಮನಿಗೆ ಒಳ್ಳೆಯ ಅವಕಾಶಗಳನ್ನು ಕಲ್ಪಿಸುವುದೆಂದು ಹಿಟ್ಲರ್ ಭಾವಿಸಿದ್ದ. ೧೯೩೫ರ ಆಗಸ್ಟಿನಲ್ಲಿ ಹಿಟ್ಲರ್ ಗೀಬೆಲ್ಸ್‌ನಿಗೆ ತನ್ನ ವಿದೇಶಾಂಗನೀತಿಯ ಕಲ್ಪನೆಯನ್ನು ಈ ರೀತಿಯಾಗಿ ವಿವರಿಸಿದ:" ಇಂಗ್ಲೆಂಡಿನ ಜತೆ ನಿರಂತರ ಮೈತ್ರಿ. ಪೋಲಂಡಿನ ಜತೆಗೆ ಒಳ್ಳೆಯ ಬಾಂಧವ್ಯ.. ಪಶ್ಚಿಮದೆಡೆಗೆ ವಿಸ್ತರಣೆ. ಬಾಲ್ಟಿಕ್ ನಮ್ಮದು... ಇಟಲಿ-ಅಬಿಸೀನಿಯಾ-ಇಂಗ್ಲೆಂಡ್ ಮತ್ತು ಜಪಾನ್-ರಷ್ಯಾ ನಡುವಿನ ತಾಕಲಾಟ ತಪ್ಪಿಸಲಾಗದು." ಪಕ್ಷದ ನ್ಯೂರೆಂಬರ್ಗಿನ ಅಧಿವೇಶನ ಆರಂಭವಾಗುವ ಕೊಂಚ ಮುನ್ನ ಹಿಟ್ಲರ್ ತನ್ನ ಇಟಲಿಯ ಆಕ್ರಮಣಕಾರೀ ಮನೋಭಾವವನ್ನು ಹೊಗಳಿ ತಯಾರಿಸಿದ್ದ ಭಾಷಣವನ್ನು ಮಾಡದಂತೆ ಮನವೊಲಿಸುವಲ್ಲಿ ಜರ್ಮನಿಯ ವಿದೇಶಾಂಗ ಮಂತ್ರಿಯಾಗಿದ್ದ ಬ್ಯಾರನ್ ಕಾನ್‌ಸ್ಟಾಂತಿನ್ ವಾನ್ ನ್ಯೂರಾಥ್ ಸಫಲನಾದ. ಹಿಟ್ಲರನ ಭಾಷಣ ಬಹಳ ಪ್ರಚೋದನಾಕಾರಿಯಾಗಿರುವುದೆಂದೂ, ಹಿಟ್ಲರನ ಹಿಂದಿನ ’ಶಾಂತಿ ಭಾಷಣ’ಗಳಿಗೆ ಇದು ವಿರುದ್ಧವಾಗಿರುವುದರಿಂದ ಜರ್ಮನಿಯ ಹೊರಗೆ ಆತನ ಜನಪ್ರಿಯತೆಗೆ ಮಾರಕವಾಗಬಹುದೆಂದೂ ನ್ಯೂರಾಥ್ ಸೂಚಿಸಿದ ನಂತರ ಹಿಟ್ಲರನ ಬಳಿ ರೀಚ್‌ ನ ಧ್ವಜಕ್ಕೆ ಸಂಬಂಧಿಸಿದ ಕಾನೂನನ್ನು ಬಿಟ್ಟರೆ ನ್ಯೂರೆಂಬರ್ಗ್‌ನ ೧೫೪೩ರ ನಂತರದ ಪ್ರಥಮ ರೀಚ್‌ಸ್ಟ್ಯಾಗ್‌ ಅಧಿವೇಶನದಲ್ಲಿ ಮಾತನಾಡಲು ಇನ್ನೇನೂ ಉಳಿಯಲಿಲ್ಲ. ೧೯೩೫ರ ಸೆಪ್ಟೆಂಬರ್ ೧೩ರಂದು ಹಿಟ್ಲರ್ ಡಾ. ಬರ್ನ್‌ಹಾರ್ಡ್ ಲೂಸನರ್ ಮತ್ತು ಫ್ರಾನ್ಝ್ ಆಲ್‌ಬ್ರೆಕ್ಟ್ ಮೆಡಿಕಸ್ ಎಂಬ ಆಂತರಿಕ ಮಂತ್ರಾಲಯದ ಇಬ್ಬರು ಸರ್ಕಾರೀ ಅಧಿಕಾರಿಗಳಿಗೆ ಕೂಡಲೇ ನ್ಯೂರೆಂಬರ್ಗಿಗೆ ತೆರಳಿ ಯಹೂದ್ಯ-ವಿರೋಧೀ ಕಾನೂನುಗಳ ರೂಪುರೇಷೆಗಳನ್ನು ಸೆಪ್ಟೆಂಬರ್ ೧೫ರಂದು ರೀಚ್‌ಸ್ಟಾಗ್‌ ನ ಎದುರು ಮಂಡಿಸುವ ಸಲುವಾಗಿ ತಯಾರು ಮಾಡಲು ಸೂಚಿಸಿದನು. ೧೯೩೫ರ ಸೆಪ್ಟೆಂಬರ್ ೧೫ರ ಸಂಜೆ ಹಿಟ್ಲರ್ ರೀಚ್‌ಸ್ಟ್ಯಾಗ್‌ ನ ಎದುರಿಗೆ ’ಆರ್ಯನ್’ ಮತ್ತು ಜರ್ಮನ್ ಯಹೂದಿಗಳ ನಡುವೆ ಲೈಂಗಿಕ ಸಂಬಂಧ ಮತ್ತು ಮದುವೆಗಳನ್ನು, ೪೫ ವಯಸ್ಸಿಗೂ ಕೆಳಗಿನ ’ಆರ್ಯನ್’ಹೆಂಗಸನ್ನು ಯಹೂದೀ ಮನೆಗಳಲ್ಲಿ ಕೆಲಸಕ್ಕೆ ನಿಯಮಿಸುವುದನ್ನು ನಿಷೇಧಿಸುವ ಮತ್ತು ’ಆರ್ಯಜನಾಂಗದಲ್ಲದವರಿಗೆ’ ಜರ್ಮನ್ ಪೌರತ್ವದ ಹಕ್ಕುಗಳನ್ನು ನಿರಾಕರಿಸುವ ಎರಡು ಕಾನೂನುಗಳನ್ನು ಮಂಡಿಸಿದ. ೧೯೩೫ರ ಸೆಪ್ಟೆಂಬರಿನ ಈ ಕಾನೂನುಗಳನ್ನು ನ್ಯೂರೆಂಬರ್ಗ್ ಕಾನೂನುಗಳೆಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ೧೯೩೫ರ ಅಕ್ಟೋಬರ್‌ನಲ್ಲಿ ಆಹಾರಕೊರತೆಯನ್ನು ತಡೆಗಟ್ಟುವ ಮತ್ತು ಪಡಿತರಕ್ರಮವನ್ನು ಪ್ರಾರಂಭಿಸುವುದರ ಸಲುವಾಗಿ ಹಿಟ್ಲರ್ ಅರೆಮನಸ್ಸಿನಿಂದ ಮಿಲಿಟರಿ ವೆಚ್ಚವನ್ನು ಕಡಿಮೆ ಮಾಡಲು ಆದೇಶಿಸಿದನು. ೧೯೩ರ ವಸಂತಕಾಲದಲ್ಲಿ ರಿಚರ್ಡ್ ವಾಲ್ದರ್ ಡಾರ್‌ನ ಮನವಿಗೆ ಉತ್ತರವಾಗಿ ಜರ್ಮನ್ ರೈತರಿಗೆಂದು ಬೀಜದೆಣ್ಣೆಯನ್ನು ಕೊಳ್ಳಲು ೬೦ ಮಿಲಿಯನ್ ರೀಚ್‌ಮಾರ್ಕ್ಸ್‌ ನಷ್ಟು ವಿದೇಶೀ ವಿನಿಮಯವನ್ನು ಬಳಸುವಂತೆ ಹಿಟ್ಲರ್ ನಿಡಿದ ಆದೇಶವನ್ನು ವಿರೋಧಿಸಿ ಡಾ. ಶಾಖ್ಟ್ ಮತ್ತು ಯುದ್ಧಮಂತ್ರಿ ವರ್ನರ್ ವಾನ್ ಬ್ಲಾಂಬರ್ಗ್ ಆಹಾರ ಕೊರತೆಯನ್ನು ನೀಗಿಸಲು ವಿದೇಶೀ ವಿನಿಮಯದ ಹಣವನ್ನು ವಿನಿಯೋಗಿಸಿದರೆ ಸಶಸ್ತ್ರೀಕರಣ ಅಸಾಧ್ಯವೆಂದು ಕಟುವಾಗಿ ದೂರಿದರು. ಆದರೆ ಹಿಟ್ಲರ್ ಆರ್ಥಿಕ ತೊಂದರೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ವಿದೇಶಾಂಗ ನೀತಿಯೊಂದರ ವಿಜಯೋತ್ಸಾಹದ ಅವಶ್ಯಕತೆ ಬಹಳವಾಗಿದೆ ಎಂದು ತಿಳಿದುಕೊಂಡ. ೧೯೩೬ರ ಫೆಬ್ರುವರಿಯಲ್ಲಿ ಫ್ರೆಂಚ್ ಪತ್ರಕರ್ತ ಬರ್ಟ್ರಂಡ್ ದು ಜೌವೆನೆಲ್ ನಡೆಸಿದ ಸಂದರ್ಶನವೊಂದರಲ್ಲಿ ಹಿಟ್ಲರ್ ಮೈನ್ ಕ್ಯಾಂಫ್‌ ಅನ್ನು ಅಲ್ಲಗಳೆಯುತ್ತಾ ಅದರ ಕೆಲವು ಭಾಗಗಳು ಇಂದಿನ ಪರಿಸ್ಥಿತಿಗೆ ತಕ್ಕಹಾಗಿಲ್ಲ (ಯಾವ ಭಾಗಗಳೆಂದು ಸ್ಪಷ್ಟವಾಗಿ ತಿಳಿದಿಲ್ಲ) ಮತ್ತು ತಾನು ಆ ಪುಸ್ತಕವನ್ನು ಮಾರ್ಗದರ್ಶಿಯಾಗಿ ಬಳಸುತ್ತಿಲ್ಲವೆಂಬ ಅರ್ಥ ಬರುವ ಮಾತುಗಳನ್ನಾಡಿದ. ೧೯೩೬ರ ಮಾರ್ಚಿನಲ್ಲಿ ರೈನ್‌ಲ್ಯಾಂಡಿನ ಮಿಲಿಟರಿಮುಕ್ತ ಪ್ರದೇಶದ ಪುನರಾಕ್ರಮಣದ ಮೂಲಕ ಹಿಟ್ಲರ್ ಮತ್ತೊಂದು ಬಾರಿ ವರ್ಸೇಲ್ಸ್ ಒಪ್ಪಂದವನ್ನು ಉಲ್ಲಂಘಿಸಿದ. ಬ್ರಿಟನ್ ಮತ್ತು ಫ್ರಾನ್ಸ್ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಆತನ ಧೈರ್ಯ ಹೆಚ್ಚಿತು. ೧೯೩೬ರ ಜುಲೈನಲ್ಲಿ ಸ್ಪೇನಿನ ಚುನಾಯಿತ ಪಾಪ್ಯುಲರ್ ಫ್ರಂಟ್ ಸರ್ಕಾರದ ವಿರುದ್ಧ ಜನರಲ್ ಫ್ರಾನ್ಸಿಸ್ಕೋ ಫ್ರ್ಯಾಂಕೋನ ನೇತೃತ್ವದಲ್ಲಿ ಸೈನ್ಯ ಬಂಡೆದ್ದಾಗ ಸ್ಪಾನಿಶ್ ಅಂತರ್ಯುದ್ಧ ಆರಂಭವಾಯಿತು. ೧೯೩೬ರಲ್ಲಿ ಹಿಟ್ಲರ್ ಜನರಲ್ ಫ್ರ್ಯಾಂಕೋನ ಸಹಾಯದ ಕೋರಿಕೆಯನ್ನು ಮನ್ನಿಸಿ ಅತನಿಗೆ ಬೆಂಬಲವಾಗಿ ಸೈನ್ಯದಳಗಳನ್ನು ಕಳುಹಿಸಿದ್ದು ಜರ್ಮನ್ ಬಲಾಬಲ ಮತ್ತು ಅದರ ನೂತನ ಪ್ರಯೋಗಗಳ ಫಲಿತಾಂಶಗಳನ್ನು ಅರಿತುಕೊಳ್ಳಲು ಸಹಾಯವಾಯಿತು. ಇದೇ ಸಮಯದಲ್ಲಿ ಹಿಟ್ಲರ್ ಒಂದು ಪಕ್ಕಾ ಆಂಗ್ಲೋ ಜರ್ಮನ್ ಮೈತ್ರಿಗಾಗಿ ತನ್ನ ಪ್ರಯತ್ನಗಳನ್ನು ಮುಂದುವರೆಸಿದನು. ಬ್ರಿಟೀಶರು ರೀಚ್‌ ನ ಜತೆ ಮೈತ್ರಿ ಮಾಡಿಕೊಂಡರೆ ಜರ್ಮನಿಯು ಬ್ರಿಟಿಶ್ ವಸಾಹತುಗಳ ಸ್ವತ್ತುಗಳ ಮೇಲೆ ಜಪಾನ್‌ನ ಆಕ್ರಮಣವನ್ನೆದುರಿಸಿ ಅವುಗಳನ್ನು ರಕ್ಷಿಸಲು ತನ್ನ ಹನ್ನೆರಡು ತುಕಡಿಗಳನ್ನು ದೂರಪಶ್ಚಿಮದೇಶಗಳಿಗೆ ಕಳಿಸಲು ತಯಾರೆಂದು ೧೯೩೬ರ ಜುಲೈಯಲ್ಲಿ ಹಿಟ್ಲರ್ ಫಿಪ್ಸ್‌ಗೆ ವಾಗ್ದಾನ ನೀಡಿದ. ಹಿಟ್ಲರನ ಪ್ರಸ್ತಾಪವನ್ನು ನಿರಾಕರಿಸಲಾಯಿತು.

೧೯೩೬ರ ಆಗಸ್ಟಿನಲ್ಲಿ ಸಶಸ್ತ್ರೀಕರಣದಿಂದ ಜರ್ಮನ್ ಆರ್ಥಿಕ ಪರಿಸ್ಥಿತಿಯಲ್ಲಿ ಉಂಟಾದ ಬಿಕ್ಕಟ್ಟನ್ನೆದುರಿಸಲು ಹಿಟ್ಲರ್ ’ಚತುರ್ವಾರ್ಷಿಕ ಯೋಜನಾ ಸುತ್ತೋಲೆ’ಯನ್ನು ಹೊರಡಿಸಿ ಹರ್ಮನ್ ಗೋರಿಂಗ್‌ನಿಗೆ ಈ ಚತುರ್ವಾರ್ಷಿಕ ಯೋಜನೆಯನ್ನು ಜಾರಿಗೊಳಿಸಿ ಬರುವ ನಾಲ್ಕು ವರ್ಷಗಳಲ್ಲಿ ಜರ್ಮನಿಯ ಆರ್ಥಿಕ ನಿರ್ವಹಣೆಯು ಯುದ್ಧಕ್ಕೆ ತಯಾರಾಗಿರುವಂತೆ ಮಾಡಲು ಆದೇಶಿಸಿದ. ೧೯೩೬ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಜರ್ಮನ್ ಸರ್ಕಾರವು ಎರಡು ಬಣಗಳಾಗಿ ಭಾಗಗೊಂಡಿತು; ಒಂದು ಬಣವು ರೀಶ್‌ಬ್ಯಾಂಕ್‌ ನ ಅಧ್ಯಕ್ಷನಾದ ಜಾಲ್ಮರ್ ಶಾಖ್ಟ್ ಮತ್ತು ಮಾಜೀ ಪ್ರೈಸ್ ಕಮಿಶನರ್ ಡಾ. ಕಾರ್ಲ್ ಫ್ರೆಡೆರಿಕ್ ಗೋರ್ಡೆಲರ್‌ರ ನೇತೃತ್ವದಲ್ಲಿ ಮಿಲಿಟರಿ ವೆಚ್ಚದಲ್ಲಿ ಕಡಿತಕ್ಕೆ ಬೇಡಿಕೆ ಮಂಡಿಸಿ ಸ್ವಯಂಪೂರ್ಣ ಕಾರ್ಯನೀತಿಗೆ ವಿರೋಧವನ್ನು ವ್ಯಕ್ತಪಡಿಸಿದರೆ ಗೋರಿಂಗನ ನೇತೃತ್ವದ ಎರಡನೇ ಬಣವು ಮೊದಲನೇ ಬಣವನ್ನು ಸಂಪೂರ್ಣವಾಗಿ ವಿರೋಧಿಸುತ್ತಿತ್ತು.”ಮುಕ್ತ ಮಾರುಕಟ್ಟೆ’ಯನ್ನು ಬೆಂಬಲಿಸಿದ ಕೆಲ ಪ್ರಮುಖ ಉದ್ಯಮಿಗಳೆಂದರೆ AEGಯ ಹರ್ಮನ್ ಡ್ಯೂಶೆರ್, Robert Bosch GmbHನ ರಾಬರ್ಟ್ ಬಾಶ್ ಮತ್ತು Vereinigte Stahlwerke AGನ ಆಲ್ಬರ್ಟ್ ವೀಗೆಲರ್. ೧೯೩೬ರ ಪ್ರಥಮಾರ್ಧ ಭಾಗದುದ್ದಕ್ಕೂ ಹಿಂಜರಿಯುತ್ತಲೇ ಹಿಟ್ಲರ್ ತನ್ನ ಆಗಸ್ಟಿನ ’ಚತುರ್ವಾರ್ಷಿಕ ಯೋಜನೆ’ಯ ಸುತ್ತೋಲೆಯಲ್ಲಿ ಹೆಚ್ಚು ಉಗ್ರಗಾಮಿಯಾಗಿದ್ದ ಬಣವನ್ನು ಬೆಂಬಲಿಸಿದ. ರಿಚರ್ಡ್ ಓವೆರಿಯೇ ಮುಂತಾದ ಹಲವಾರು ಇತಿಹಾಸಜ್ಞರ ಅಭಿಪ್ರಾಯದ ಪ್ರಕಾರ ಬರೆಯುವುದರ ಬಗ್ಗೆಯೇ ವಿಚಿತ್ರ ಭೀತಿ ಬೆಳೆಸಿಕೊಂಡಿದ್ದ ಹಿಟ್ಲರ್ ಸ್ವತಃ ಈ ಸಂಪೂರ್ಣ ಸುತ್ತೋಲೆಯನ್ನು ಕೈಯಾರ ಬರೆದುದರಿಂದ ಈ ಸುತ್ತೋಲೆಗೆ ಹಿಟ್ಲರ್ ಕೊಟ್ಟಿದ್ದ ಪ್ರಾಮುಖ್ಯತೆ ಮತ್ತು ಆ ಮೂಲಕ ಹಿಟ್ಲರ್ ಏನೋ ಮುಖ್ಯವಾಗಿ ಹೇಳಬೇಕೆಂದಿದ್ದುದು ಸ್ಪಷ್ಟವಾಗುತ್ತದೆ. T ಈ ’ಚತುರ್ವಾರ್ಷಿಕ ಯೋಜನಾ ಸುತ್ತೋಲೆ’ಯು ಜೂಡೋ-ಬಾಲ್ಶೆವಿಸಮ್ ಮತ್ತು ಜರ್ಮನ್ ಸಮಾಜವಾದೀ ರಾಷ್ರೀಯತೆಯ ನಡುವೆ ನಡೆಯಲಿದ್ದ ಮಾರಣಾಂತಿಕ ತಾಕಲಾಟದ ಭವಿಷ್ಯ ನುಡಿದುದೇ ಅಲ್ಲದೆ ಸಂಪೂರ್ಣ ಸಶಸ್ತ್ರೀಕರಣದ ಅವಶ್ಯಕತೆ ಆರ್ಥಿಕ ವೆಚ್ಚಗಳನ್ನೂ ಮೆಟ್ಟಿನಿಲ್ಲುವಂತೆ ಮಾಡಿತು. ಸುತ್ತೋಲೆಯಲ್ಲಿ ಹಿಟ್ಲರ್ ಹೀಗೆಂದು ಬರೆದ:

ಫ್ರೆಂಚ್ ಕ್ರಾಂತಿಯ ನಂತರ ಪ್ರಪಂಚವು ಹೊಸತೊಂದು ಘರ್ಷಣೆಯತ್ತ ವೇಗವಾಗಿ ಸಾಗುತ್ತಿದೆ ಮತ್ತು ಇದರ ಕೊಟ್ಟಕೊನೆಯ ಪರಿಹಾರವೆಂದರೆ ಇಲ್ಲಿಯತನಕ ಮಾನವಕುಲದ ನಾಯಕತ್ವ ವಹಿಸಿದ ಪದರವನ್ನು ಕಿತ್ತೊಗೆದು ಅದರ ಜಾಗದಲ್ಲಿ ಅಂತರ್ರಾಷ್ಟ್ರೀಯ ಯಹೂದಿತ್ವದ ಸ್ಥಾಪನೆಯನ್ನು ಪ್ರತಿಪಾದಿಸುವ ಸಾಮ್ಯವಾದ(ಬೊಲ್ಷೆವಿಸಮ್). ಯಾವುದೇ ದೇಶ ಈ ಐತಿಹಾಸಿಕ ಘರ್ಷಣೆಯಿಂದ ಹಿಂದೆಗೆಯಲು ಅಥವಾ ದೂರವಿರಲು ಸಾಧ್ಯವೇ ಇಲ್ಲ... ಈ ಸುತ್ತೋಲೆಯ ಉದ್ದೇಶ ಯುರೋಪಿನ ಈ ಅನಿಯಂತ್ರಿತ ಸ್ಥಿತಿ ಯಾವಾಗ ಬಿಕ್ಕಟ್ಟೊಂದರ ರೂಪತಾಳಿ ಬಹಿರಂಗಗೊಳ್ಳುವುದು ಎಂದು ಭವಿಷ್ಯ ಹೇಳುವುದಲ್ಲ. ಈ ಸಾಲುಗಳ ಮೂಲಕ ಈ ಬಿಕ್ಕಟ್ಟು ಎಂದಿದ್ದರೂ ಬಂದೇ ಬರುವದು ಮತ್ತು ಈ ಮಾರಣಾಂತಿಕ ಸನ್ನಿವೇಶ ಉತ್ಪತ್ತಿಯಾದಾಗ ತನ್ನ ಇರವನ್ನು ಹೇಗಾದರೂ ಸರಿಯೆ, ಭದ್ರಪಡಿಸಿಕೊಳ್ಳುವುದು, ತನ್ನನ್ನು ತಾನು ರಕ್ಷಿಸಿಕೊಳ್ಳುವದು ಜರ್ಮನಿಯ ಕರ್ತವ್ಯ ಮತ್ತು ಇದರ ಫಲಸ್ವರೂಪವಾಗಿ ನಮ್ಮ ಜನತೆ ಅತಿಹೆಚ್ಚಿನ ಮಹತ್ವದ ಕೆಲಸಗಳನ್ನು ಎದುರುಗೊಳ್ಳಬೇಕಾಗಿದೆ ಎಂಬ ನನ್ನ ವಿಶ್ವಾಸವನ್ನು ನಿಮ್ಮೆದುರಿಗಿಡುವದು ಮಾತ್ರ ನನಗೆ ಬೇಕಿರುವುದು. ಜರ್ಮನಿಯ ಮೇಲೆ ಸಾಮ್ಯವಾದಿತ್ವ(ಬೊಲ್ಷೆವಿಸಮ್)ದ ವಿಜಯ ಇನ್ನೊಂದು ವರ್ಸೇಲ್ಸ್ ಒಪ್ಪಂದಕ್ಕೆ ಎಡೆಮಾಡದು, ಈ ಸಾರೆ ಆಗುವದು ಕೊನೆಯ ವಿನಾಶ, ಜರ್ಮನ್ ಜನರ ಮಾರಣಹೋಮ.. ನನ್ನ ಪ್ರಕಾರ ರೀಚ್‌ಸ್ಟ್ಯಾಗ್ ಈ ಕೆಳಗಿನ ಎರಡು ಕಾನೂನುಗಳನ್ನು ಜಾರಿಗೆ ತರುವದು ಬಹಳ ಅವಶ್ಯಕವಾಗಿದೆ: ೧) ಆರ್ಥಿಕ ಅಭದ್ರತೆ ಉಂಟುಮಾಡುವವರಿಗೆ ಮರಣದಂಡನೆ ವಿಧಿಸುವ ಕಾನೂನು ಮತ್ತು ೨) ಜರ್ಮನಿಯ ಎಲ್ಲ ರೀತಿಯ ಆರ್ಥಿಕ ಬಿಕ್ಕಟ್ಟಿಗೆ, ಆಮೂಲಕ ಜರ್ಮನ್ ಜನತೆಯ ತೊಂದರೆಗಳಿಗೆ ವ್ಯಕ್ತಿಗತವಾಗಿ ಕಾರಣರಾಗಿರುವ ಈ ಅಪರಾಧೀ ಜನಾಂಗದ ಸದಸ್ಯರೆಲ್ಲರ ಮೇಲಿರುವ ಅಪರಾಧಗಳ ಹೊಣೆಗಾರಿಕೆಯನ್ನು ಇಡೀ ಯಹೂದಿ ಜನಾಂಗದ ಮೇಲೆ ವಹಿಸುವ ಕಾನೂನು.

ಮುಂದಿನ ನಾಲ್ಕು ವರ್ಷಗಳಲ್ಲಿ ಅಧಿಕಾರಕ್ಕೋಸ್ಕರ ಹೋರಾಡಲೆಂದು ವಿಶ್ವದ ’ಪ್ರಥಮ ಸೈನ್ಯ’ವನ್ನು ಸಂಘಟಿಸಲು ಜರ್ಮನಿಗೆ ಕರೆನೀಡಿದ ಹಿಟ್ಲರ್ "ನಮ್ಮ ಸಂಪನ್ಮೂಲಗಳ ಮಿಲಿಟರಿ ಬೆಳವಣಿಗೆ ಬೃಹತ್ ಮಟ್ಟದಲ್ಲಿ ಅಥವಾ ಬಹಳ ವೇಗವಾಗಿ ನಡೆಯಕೂಡದು " (ಮೂಲ ಬರವಣಿಗೆ ಇಟಾಲಿಕ್ಸ್‌ನಲ್ಲಿ) ಎಂದು ಹೇಳಿದ್ದಲ್ಲದೆ ಆರ್ಥಿಕತೆಯು "ಸುಮ್ಮನೆ ಜರ್ಮನಿಯ ಈ ಸ್ವ-ಪ್ರತಿಪಾದನೆ ಮತ್ತು ಲೆಬೆನ್‌ಸ್ಟ್ರಾಮ್‌ ನ ವಿಸ್ತರಣೆಯನ್ನು ಬೆಂಬಲಿಸುವಂತಿರಬೇಕು" ಎಂಬ ಬಯಕೆಯನ್ನು ವ್ಯಕ್ತಪಡಿಸಿದ. ಇದರ ನಂತರ ಹಿಟ್ಲರ್ ಮುಂಬರಲಿರುವ ಹೋರಾಟದ ಪರಿಮಾಣಕ್ಕೆ ಹೋಲಿಸಿದರೆ ಈಗಿನ ಮಿಲಿಟರಿ ವೆಚ್ಚವು ಜರ್ಮನಿಯನ್ನು ದಿವಾಳಿಯೆಬ್ಬಿಸುತ್ತಿದೆ ಎಂದು ಮುಕ್ತಮಾರುಕಟ್ಟೆ ಬಣದ ಪ್ರತಿಪಾದಕರಾದ ಶಾಖ್ಟ್ ಮತ್ತು ಗೋರ್ಡೆಲರ್‌ ವ್ಯಕ್ತಪಡಿಸಿರುವ ಚಿಂತೆಗಳು ಅಪ್ರಸ್ತುತವಾದಂಥವು ಎಂದು ಬರೆದನು. ಆತನ ಬರವಣಿಗೆಯ ಪ್ರಕಾರ, "ಆದರೆ ಒಂದು ದೇಶದ ಜನಜೀವನದ ರೀತಿ ಎಷ್ಟೇ ಕ್ರಮಬದ್ಧವಾಗಿ ನಡೆದುಕೊಂಡು ಹೋಗುತ್ತಿದ್ದರೂ ಈ ಕ್ರಮಬದ್ಧತೆಯ ಸಮತೋಲನದಲ್ಲಿ ಸಹಜವಾಗಿ ತೊಂದರೆಗಳುಂಟಾದಾಗ ಕಡಿಮೆ ಪ್ರಾಮುಖ್ಯತೆಯುಳ್ಳ ಚಟುವಟಿಕೆಗಳನ್ನು ಕಡೆಗಣಿಸಬೇಕಾಗಿಬರುವುದು. ನಾವು ಆದಷ್ಟು ಬೇಗನೆ ಜರ್ಮನ್ ಸೈನ್ಯವನ್ನು ವಿಶ್ವದ ಸರ್ವಶ್ರೇಷ್ಠ ಸೈನ್ಯವನ್ನಾಗಿ ಮಾಡುವುದರಲ್ಲಿ ಜಯಶಾಲಿಗಳಾಗದೇ ಹೋದಲ್ಲಿ ಜರ್ಮನಿ ನಮ್ಮ ಕೈತಪ್ಪಿಹೋಗುವುದು!" ಹಾಗೂ "ಒಂದು ದೇಶ ಅದರ ಆರ್ಥವ್ಯವಸ್ಥೆ, ಆರ್ಥಿಕ ನಾಯಕರು ಅಥವಾ ಆರ್ಥಿಕ ಇಲ್ಲವೇ ವಿತ್ತ ವಿಚಾರಸರಣಿಗಳಿಗಾಗಿ ಬದುಕುವುದಿಲ್ಲ; ಬದಲಾಗಿ ದೇಶವೆಂದರೆ ಅದರ ಅರ್ಥವ್ಯವಸ್ಥೆ, ಆರ್ಥಿಕ ನಾಯಕರು ಮತ್ತು ವಿಚಾರಸರಣಿಗಳು - ಇವರ ಆದ್ಯ ಕರ್ತವ್ಯವೆಂದರೆ ದೇಶದ ಉಳಿವಿನ ಈ ಹೋರಾಟದಲ್ಲಿ ಪ್ರತಿಫಲ ಬಯಸದೇ ಸೇವೆ ಸಲ್ಲಿಸುವುದು."[clarification needed] ಚತುರ್ವಾರ್ಷಿಕ ಯೋಜನಾ ಸುತ್ತೋಲೆ ಮುಂತಾದ ದಾಖಲೆಗಳನ್ನು ಹೆನ್ರಿ ಆಶ್‌ಬೈ ಟರ್ನರ್‌ ಮತ್ತು ಕಾರ್ಲ್ ಡೀಟ್ರಿಚ್ ಬ್ರಾಶರ್‌ನಂತಹ ಬಲಪಂಥೀಯ ಇತಿಹಾಸಜ್ಞರ ಪ್ರಕಾರ ಹಿಟ್ಲರ್ ಮಾರ್ಕ್ಸಿಸ್ಟ್ ಇತಿಹಾಸಜ್ಞರು ಹೇಳುವಂತೆ ’ಆರ್ಥಿಕ ಪ್ರಾಮುಖ್ಯತೆ’ಯ ಮಾರ್ಗವನ್ನು(ಜರ್ಮನ್ ಬಂಡವಾಳಶಾಹಿಗೆ ಶರಣಾಗಿ ಅವರ ಏಜೆಂಟನಂತೆ) ಅನುಸರಿಸದೆ ’ರಾಜಕೀಯ ಪ್ರಾಮುಖ್ಯ’ ಮಾರ್ಗ(ಜರ್ಮನ್ ಉದ್ಯಮಶಾಹಿಗೆ ಶರಣಾಗದ ನೀತಿ)ವನ್ನು ಅನುಸರಿಸಿದನೆಂದು ವಾದಿಸಲು ಆಗಾಗ್ಗೆ ಬಳಸಿಕೊಂಡಿದ್ದಾರೆ.

೧೯೩೬ರ ಆಗಸ್ಟಿನಲ್ಲಿ ಹವ್ಯಾಸೀ ನಾಝೀ ರಾಜನೀತಿಜ್ಞನಾದ ಜೋಕಿಮ್ ವಾನ್ ರಿಬೆನ್‌ಟ್ರಾಪ್‌ನನ್ನು ಸೆಂಟ್ ಜೇಮ್ಸನ ಆಸ್ಥಾನಕ್ಕೆ ಜರ್ಮನ್ ರಾಯಭಾರಿಯನ್ನಾಗಿ ನಿಯಮಿಸಲಾಯಿತು. ೧೯೩೬ರ ಅಕ್ಟೋಬರ್‌ನಲ್ಲಿ ರಿಬೆನ್‌ಟ್ರಾಪ್ ತನ್ನ ಸ್ತಾನವನ್ನಲಂಕರಿಸಲು ಹೊರಡುವ ಮುನ್ನ ಹಿಟ್ಲರ್ ಆತನಿಗೆ ಹೇಳಿದ: " ರಿಬೆನ್‌ಟ್ರಾಪ್... ಬ್ರಿಟನ್ ಅನ್ನು ಆಂಟಿ-ಕೋಮಿಂಟರ್ನ್ ಕರಾರಿಗೆ ಸೇರಿಕೊಳ್ಳುವಂತೆ ಮಾಡುವುದು ನನಗೆ ಎಲ್ಲದಕ್ಕಿಂತ ಮುಖ್ಯ. ನೀನು ನನ್ನಲ್ಲಿರುವ ಅತ್ಯುತ್ತಮ ಅಭ್ಯರ್ಥಿಯಾದುದ್ದರಿಂದ ನಿನ್ನನ್ನು ಕಳುಹಿಸುತ್ತಿದ್ದೇನೆ.ಏನು ಮಾಡಬೇಕೋ ಮಾಡು... ಆದರೆ ಭವಿಷ್ಯದಲ್ಲಿ ನಮ್ಮ ಎಲ್ಲ ಪ್ರಯತ್ನಗಳು ಫಲಪ್ರದವಾಗದೇ ಹೋದಲ್ಲಿ, ಅದೂ ಸರಿಯೇ, ನಾನು ಯುದ್ಧಕ್ಕೂ ತಯಾರಾಗಿದ್ದೇನೆ. ಅದರಿಂದ ನನಗೆ ಬೇಸರವಾಗುವುದು ಖಚಿತವಾದರೂ ಹಾಗಾಗುವುದೇ ಸರಿಯೆಂದಾದಲ್ಲಿ ಅದೇ ಸರಿ. ಆದರೆ ನನಗನ್ನಿಸುವುದೆಂದರೆ ಒಂದು ಸಣ್ಣ ಯುದ್ಧ ನಡೆಯಬಹುದು ಮತ್ತು ಅದು ಮುಗಿದ ಕೂಡಲೇ ನಾನು ಬ್ರಿಟೀಶರಿಗೆ ಎರಡೂ ಪಕ್ಷಗಳಿಗೆ ಒಪ್ಪಿಗೆಯಾಗಬಲ್ಲ ಗೌರವಯುತವಾದ ಒಂದು ಶಾಂತಿಸಂಧಿಯನ್ನು ಮಂಡಿಸುವೆ. ಆದರೆ ನಾನು ಬ್ರಿಟನ್ ಆಂಟಿ-ಕೋಮಿಂಟರ್ನ್ ಕರಾರಿಗೆ ಬದ್ಧವಾಗಬೇಕೆಂದೋ ಅಥವಾ ಇನ್ನಾವುದೋ ಒಪ್ಪಂದಕ್ಕೆ ಬದ್ಧವಾಗಬೇಕೆಂದೋ ನಾನು ಷರತ್ತು ಹಾಕಬಹುದು. ಆದರೆ ನೀನು ಕಾರ್ಯನಿರತನಾಗು ರಿಬೆನ್‌ಟ್ರಾಪ್, ನಿನ್ನ ಬಳಿ ವಿಜಯದ ದಾಳಗಳಿವೆ, ಚೆನ್ನಾಗಿ ಆಡು. ನಾನು ಯಾವುದೇ ಸಮಯದಲ್ಲಿ ವಾಯುದಳ ಕರಾರಿಗೂ ಸಿದ್ಧವಾಗಿದ್ದೇನೆ. ನಿನ್ನ ಸಂಪೂರ್ಣ ಪ್ರಯತ್ನ ಮಾಡು. ನಿನ್ನ ಹೆಜ್ಜೆಗಳನ್ನು ಉತ್ಸಾಹದಿಂದ ಗಮನಿಸುತ್ತಿರುತ್ತೇನೆ." ೧೯೩೬ರ ಅಕ್ಟೋಬರ್ ೨೫ರಂಡು ಫ್ಯಾಸಿಸ್ಟ್ ಸರ್ವಾಧಿಕಾರಿಯಾಗಿದ್ದ್ದ ಬೆನಿಟೊ ಮುಸೊಲಿನಿಯ ವಿದೇಶಾಂಗ ಮಂತ್ರಿಯಾದ ಕೌಂಟ್ ಗ್ಯಾಲಿಯಾಜೊ ಚಿಯಾನೊ ಜರ್ಮನಿ ಮತ್ತು ಇಟಲಿಯ ನಡುವೆ ಸಮಾನಾಂತರ ಸಂಬಂಧ(ಆಕ್ಸಿಸ್)ದ ಘೋಷಣೆ ಮಾಡಿದನು. ಅದೇ ವರುಷ ನವೆಂಬರ್ ೨೬ರಂದು ಜರ್ಮನಿ ಜಪಾನ್‌ನ ಜತೆ ಆಂಟಿ-ಕೋಮಿಂಟರ್ನ್ ಕರಾರನ್ನು ಮಾಡಿಕೊಂಡಿತು ಈ ಒಪ್ಪಂದಕ್ಕೆ ಸಹಿ ಹಾಕುವ ವೇಳೆಗೆ ಬ್ರಿಟನ್, ಚೈನಾ, ಇಟಲಿ ಮತ್ತು ಪೋಲಂಡ್‌ದೇಶಗಳಿಗೆ ಈ ಕರಾರಿಗೆ ಬದ್ಧವಾಗಿರುವಂತೆ ಆಮಂತ್ರಣ ನೀಡಲಾಗಿತ್ತಾದರೂ, ಆಮಂತ್ರಿತರಲ್ಲಿ ಇಟಲಿ ಮಾತ್ರ ೧೯೩೭ರ ನವೆಂಬರಿನಲ್ಲಿ ಕರಾರಿಗೆ ಸಹಿ ಹಾಕಿತು. ಜಪಾನಿನ ಜತೆಗಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಹಿಟ್ಲರ್ ೧೯೩೭ರಲ್ಲಿ ಚಕ್ರವರ್ತಿ ಹಿರೊಹಿಟೋ ಅವರ ಸಹೋದರ ರಾಜಕುಮಾರ ಚಿಚಿಬು ಅವರನ್ನು ನ್ಯೂರೆಂಬರ್ಗಿನಲ್ಲಿ ಭೇಟಿಯಾದನು. ಚೈನಾಗೆ ಕಳುಹಿಸಲ್ಪಡುತ್ತಿದ್ದ ಜರ್ಮನ್ ಶಸ್ತ್ರಾಸ್ತ್ರ ಸರಕುಗಳನ್ನು ನಿಲ್ಲಿಸಲು ಮತ್ತು ಎರಡನೇ ಚೈನಾ-ಜಪಾನ್ ಯುದ್ಧದಲ್ಲಿ ಚೈನಾದ ಪಕ್ಷದಲ್ಲಿ ಭಾಗವಹಿಸಿದ ಜರ್ಮನ್ ಸೈನ್ಯಾಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಹಿಟ್ಲರ್ ಒಪ್ಪದೇ ಹೋದ್ದರಿಂದ ಈ ಭೇಟಿ ಅಷ್ಟೇನೂ ಪರಿಣಾಮಕಾರಿಯಾಗಲಿಲ್ಲ. ಜರ್ಮನ್ ಸೇನೆ ಮತ್ತು ವಿದೇಶಾಂಗ ಕಚೇರಿ(ಆಸ್ವಾರ್ಟಿಜೆಸ್ ಆಮ್ಟ್) ಗಳೆರಡೂ ೧೯೧೦ರಿಂದ ಅಲಿಖಿತವಾಗಿ ನಡೆದುಕೊಂಡು ಬಂದಿದ್ದ ಜರ್ಮನಿ ಮತ್ತು ಚೈನಾಗಳ ನಡುವಣ ಮೈತ್ರಿಯನ್ನು ಕೊನೆಗೊಳಿಸುವುದರ ವಿರುದ್ಧವಾಗಿದ್ದುದು ಮಾತ್ರವಲ್ಲದೆ ಚೈನಾವನ್ನು ಅಸಂತುಷ್ಟಗೊಳಿಸಬಾರದೆಂದು ಹಿಟ್ಲರನನ್ನು ಒತ್ತಾಯಿಸಿದರು.T ಜರ್ಮನಿಯ ಸಶಸ್ತ್ರೀಕರಣಕ್ಕೆ ಒದಗಿದ್ದ ವಿದೇಶೀ ವಿನಿಮಯದ ಅಡಚಣೆಗಳು ಮತ್ತು ಚೈನಾದ ಜತೆಗಿನ ಆರ್ಥಿಕ ಮೈತ್ರಿಯಿಂದ ಜರ್ಮನಿಗೆ ಒದಗುತ್ತಿದ್ದ ಕಚ್ಚಾ ಸರಕುಗಳಿಂದ ಕಡಿಮೆಯಾಗುತ್ತಿದ್ದ ವಿದೇಶೀ ವಿನಿಮಯದ ಖರ್ಚುಗಳಬಲವಾದ ಕಾರಣಗಳನ್ನು ನೀಡಿದ ವಿದೇಶಾಂಗ ಕಚೇರಿ(ಆಸ್ವಾರ್ಟಿಜೆಸ್ ಆಮ್ಟ್) ಮತ್ತು ಮಿಲಿಟರಿಗಳು ಜಪಾನಿನ ಜತೆಗೆ ಮೈತ್ರಿ ಬಯಸುವದರ ಮೂಲಕ ಚೈನಾ-ಜರ್ಮನಿಯ ಬಾಂಧವ್ಯವನ್ನು ಮುರಿಯುವ ತಪ್ಪನ್ನೆಸಗಬಾರದೆಂದು ಹಿಟ್ಲರನೆದುರು ವಾದಿಸಿದರು. ೧೯೩೭ರ ಕೊನೆಯ ಹೊತ್ತಿಗೆ ಹಿಟ್ಲರ್ ತನ್ನ ಆಂಗ್ಲೋ ಜರ್ಮನ್ ಮೈತ್ರಿಯ ಕನಸನ್ನು ಕೈಬಿಟ್ಟ ಮತ್ತು ಇದಕ್ಕೆ ’ನ್ಯೂನ’ವಾದ ಬ್ರಿಟಿಶ್ ನಾಯಕತ್ವವೇ ಕಾರಣವೆಂದು ದೂರಿದ. ೧೯೩೭ರ ಸೆಪ್ಟೆಂಬರಿನಲ್ಲಿ ಲೀಗ್ ಆಫ್ ನೇಶನ್ಸ್‌ನ ಸ್ವಿಸ್ ರಾಜನೀತಿಜ್ಞ ಕಾರ್ಲ್ ಜಾಕಬ್ ಬರ್ಕ್‌ಹಾರ್ಟ್‌ರೊಂದಿಗೆ ಡ್ಯಾನ್‌ಜಿಗ್ ಸ್ವತಂತ್ರ ನಗರದ ಬಗ್ಗೆ ಮಾತನಾಡುತ್ತಾ ಯುರೋಪಿನ ’ಜರ್ಮನ್ ವಲಯ’ದಲ್ಲಿ ಬ್ರಿಟಿಶ್ ಚಟುವಟಿಕೆಗಳನ್ನು ವಿರೋಧಿಸುತ್ತಲೇ, ಬ್ರಿಟನ್ ಜರ್ಮನಿಯ ಮೈತ್ರಿಗೆ ಬಹಳ ತಕ್ಕುದಾದ್ದೆಂದೂ, ಕೇವಲ ತನ್ನ ಸ್ವಾರ್ಥಕ್ಕೋಸ್ಕರ ಬ್ರಿಟನ್ ಜರ್ಮನಿಯ ಯೋಜನೆಗಳಿಗೆ ತಡೆಗಾಲು ಹಾಕುತ್ತಿದೆಯೆಂದೂ ಅಭಿಪ್ರಾಯಪಟ್ಟನು. ೧೯೩೬-೩೭ರ ಅವಧಿಯಲ್ಲಿ ಹಿಟ್ಲರ್ ತೀವ್ರವಾದ ಹೊಟ್ಟೆನೋವು ಮತ್ತು ಎಕ್ಸಿಮಾಗಳಿಂದ ಬಳಲತೊಡಗಿದ. ೧೯೩೭ರ ನಾಝೀ ಪಕ್ಷದ ಪ್ರಚಾರಾಂಗದ ಪ್ರಮುಖರ ಬಳಿ ತನ್ನ ತಂದೆತಾಯಂದಿರು ಕಡಿಮೆ ವಯಸ್ಸಿನಲ್ಲೇ ಸತ್ತುಹೋದುದರಿಂದ ತನಗೂ ಹೀಗೇ ಆಗುವ ಸಂಭಾವ್ಯತೆಯಿದೆ, ತನಗೆ ಅವಶ್ಯವಾದ ಲೀಬೆನ್‌ಸ್ರಾಮ್ ಅನ್ನು ಪಡೆದುಕೊಳ್ಳಲು ಇನ್ನು ಕೆಲವೇ ವರುಷಗಳು ಉಳಿದಿವೆ ಎಂದು ಹಿಟ್ಲರ್ ಹೇಳಿದ. ಇದೇ ಹೊತ್ತಿನಲ್ಲಿ ಡಾ. ಗೀಬೆಲ್ಸ್ ತನ್ನ ಡೈರಿಯಲ್ಲಿ ನಮೂದಿಸಿರುವ ಪ್ರಕಾರ ’ಮಹಾ ಜರ್ಮನಿಕ್ ರೀಚ್’ ಅನ್ನು ತನ್ನ ಜೀವನಕಾಲದಲ್ಲಿಯೇ ಕಾಣಬೇಕೆನ್ನುವದು ಹಿಟ್ಲರನ ಇಚ್ಚೆಯಾಗಿತ್ತು. ತನ್ನ ಉತ್ತರಾಧಿಕಾರಿಗಳಿಗೆ ’ಮಹಾ ಜರ್ಮನಿಕ್ ರೀಚ್’ ಅನ್ನು ಕಟ್ಟುವ ಕೆಲಸವನ್ನು ಬಿಡುವದು ಹಿಟ್ಲರನಿಗೆ ಇಷ್ಟವಿರಲಿಲ್ಲ. ೧೯೩೭ರ ನವೆಂಬರ್ ೫ರಂದು ರೀಚ್ ಚ್ಯಾನ್ಸೆಲರಿಯಲ್ಲಿ ಯುದ್ಧ ಮತ್ತು ವಿದೇಶಾಂಗ ಮಂತ್ರಿಗಳು ಹಾಗೂ ಮೂರು ಸೇವಾನಿರತ ಮುಖ್ಯಸ್ಥರ ಜತೆ ನಡೆಸಿದ ಗುಪ್ತಸಭೆಯೊಂದರಲ್ಲಿ ತನ್ನ ಹಾಸ್‌ಬಾಚ್ ಸುತ್ತೋಲೆಯನ್ನು ದಾಖಲಿಸಿದ ಹಿಟ್ಲರ್, ಜರ್ಮನ್ ಜನರಿಗೋಸ್ಕರ ’ಬದುಕುವ ಜಾಗ’(ಲೀಬೆನ್‌ಸ್ರಾಮ್ ) ಅನ್ನು ಅರ್ಜಿಸುವ ಬಯಕೆಯನ್ನು ವ್ಯಕ್ತಪಡಿಸಿದ. ೧೯೪೩ರ ಮೊದಲು ಲೆಬೆನ್‌ಸ್ರಾಮ್ ಅನ್ನು ಪಡೆದುಕೊಳ್ಳುವ ಸಲುವಾಗಿ ಪೂರ್ವದಲ್ಲಿ ಯುದ್ಧಕ್ಕೆ ಸಜ್ಜಾಗಲು ಯೊಜನೆಗಳನ್ನು ಸಿದ್ಧಗೊಳಿಸಲು ಸಭೆಗೆ ಹಾಜರಾದವರಿಗೆ ಆತ ಆದೇಶಿಸಿದ. ಆ ಸಭೆಯ ನಡಾವಳಿಗಳನ್ನು ತಾನೇನಾದರು ಸಾವಿಗೀಡಾದರೆ ತನ್ನ "ರಾಜಕೀಯ ಉಯಿಲು" ಎಂದು ಪರಿಗಣಿಸಬೇಕೆಂದು ಹಿಟ್ಲರ್ ಹೇಳಿಕೆ ನೀಡಿದ. ಈ ಸುತ್ತೋಲೆಯಲ್ಲಿ ಹಿಟ್ಲರನು ಜರ್ಮನಿಯ ಆರ್ಥಿಕ ಬಿಕ್ಕಟ್ಟು ಮತ್ತು ಜೀವನಶೈಲಿ ಎಂತಹ ಅಧೋಗತಿಗಿಳಿದಿದೆಯಂದರೆ, ತಡೆಗಟ್ಟಲು ಸದ್ಯದಲ್ಲಿ ಆಕ್ರಮಣಕಾರೀ ನೀತಿಯನ್ನು ಅನುಸರಿಸುವುದು ಮತ್ತು ಆಸ್ಟ್ರಿಯಾ, ಜೆಕೊಸ್ಲೊವಾಕಿಯಾಗಳನ್ನು ಆಕ್ರಮಿಸುವುದರ ಹೊರತು ಬೇರೆ ದಾರಿಯೇ ಇಲ್ಲಂದು ಹೇಳಿದನೆಂದು ದಾಖಲಿಸಲಾಯಿತು. ಇದರ ಜತೆಗೇ ಶಸ್ತ್ರಾಸ್ತ್ರ ಪಂಥದಲ್ಲಿ ಗೆಲ್ಲಬೇಕಾದರೆ ಬ್ರಿಟನ್ ಮತ್ತು ಫ್ರಾನ್ಸ್‌ಗಳಿಗೂ ಮುಂಚೆ ಕ್ರಮ ಕೈಗೊಳ್ಳಬೇಕಾಗಿ ಬರುವದೆಂದು ಕೂಡ ಹಿಟ್ಲರ್ ಹೇಳಿಕೆ ನೀಡಿದ. ಹಾಸ್‌ಬಾಚ್ ಸುತ್ತೋಲೆಯ ಪ್ರಮುಖ ಬದಲಾವಣೆಯೆಂದರೆ ಬ್ರಿಟನ್ ಜತೆಗೆ ಮೈತ್ರಿಯಿರಬೇಕೆಂದು ೧೯೨೮ರ ವೇಳೆಗೆ ’ಜ್ವೀಟರ್ ಬುಕ್’ ನಲ್ಲಿ ಬರೆದುಕೊಂಡಿದ್ದ ಹಿಟ್ಲರನೇ ೧೯೩೭ರ ಈ ಸುತ್ತೋಲೆಯಲ್ಲಿ ಬ್ರಿಟನ್‌ ಅನ್ನ್ನು ’ದ್ವೇಷಪೂರಿತ ಶತ್ರು’ ಎಂದು ಬಣ್ಣಿಸಿದ್ದು. ಈ ಸುತ್ತೋಲೆಯನ್ನು ಇತಿಹಾಸಜ್ಞ ಕ್ಲಾಸ್ ಹಿಲ್ಡರ್‌ಬ್ರಾಂಡ್ ಬ್ರಿಟನ್ನಿನ ಬಗೆಗಿನ ’ಸಂಕೀರ್ಣ ಮಾರ್ಗ’ವೆಂದು ಬಣ್ಣಿಸಿದರೆ ನಂತರದ ಇತಿಹಾಸಜ್ಞ ಆಂದ್ರಿಯಾಸ್ ಹಿಲ್‌ಗ್ರುಬರ್‌ನ ವಾದದ ಪ್ರಕಾರ ಹಿಟ್ಲರನು "ಬ್ರಿಟನ್ ಅನ್ನು ಹೊರತುಪಡಿಸಿದ, ಬ್ರಿಟನ್ ಜತೆಗೆ ಆಗಬಹುದಾಗಿದ್ದ, ಸನ್ನಿವೇಶವೊದಗಿದಲ್ಲಿ ಬ್ರಿಟನ್ನಿಗೆ ವಿರುದ್ಧವಾದ" ಜರ್ಮನ್ ವಿಸ್ತರಣೆಯ ಕಡೆಗೆ ಹೆಜ್ಜೆಹಾಕಿದನು. ಹಾಸ್‌ಬಾಚ್ ಸುತ್ತೋಲೆಯಲ್ಲಿ ವ್ಯಕ್ತವಾಗಿದ್ದ ಹಿಟ್ಲರನ ಧೋರಣೆಗಳನ್ನು ವಿದೇಶಾಂಗ ಮಂತ್ರಿಯಾಗಿದ್ದ ಬ್ಯಾರನ್ ಕಾನ್‌ಸ್ಟಾಂಟಿನ್ ವಾನ್ ನ್ಯೂರಾಥ್, ಯುದ್ಧ ಮಂತ್ರಿಯಾಗಿದ್ದ ಫೀಲ್ಡ್ ಮಾರ್ಷಲ್ ವರ್ನರ್ ವಾನ್ ಬ್ಲಾಂಬರ್ಗ್ ಮತ್ತು ಸೇನೆಯ ಕಮ್ಯಾಂಡರ್ ಆಗಿದ್ದ ಜನರಲ್ ವರ್ನರ್ ವಾನ್ ಫ್ರಿಟ್ಜ್ ಬಲವಾಗಿ ವಿರೋಧಿಸುತ್ತ ಪೂರ್ವ ಯುರೋಪಿನಲ್ಲಿ ಜರ್ಮನಿಯ ಯಾವುದೇ ಆಕ್ರಮಣದ ಪರಿಣಾಮವಾಗಿ ಕಾರ್ಡನ್ ಸ್ಯಾನಿಟೇರ್ ಎಂಬ ಫ್ರೆಂಚ್ ಮೈತ್ರಿಕೂಟ ವರ್ಗಕ್ಕೆ ಸೇರಿರುವ ಫ್ರಾನ್ಸಿನ ಜತೆಗೆ ಯುದ್ಧ ಮಾಡಬೇಕಾಗಿ ಬರಬಹುದು ಮತ್ತು ಫ್ರಾಂಕೋ-ಜರ್ಮನ್ ಯುದ್ಧವಾದರೆ ಫ್ರಾನ್ಸಿನ ಪರಾಭವವನ್ನು ಸಹಿಸದ ಬ್ರಿಟನ್ ಇದರಲ್ಲಿ ತಲೆತೂರಿಸುವ ಸಾಧ್ಯತೆಗಳೇ ಜಾಸ್ತಿ ಎಂದು ಸೂಚಿಸಿದರು. ಆಸ್ಟ್ರಿಯಾ ಮತ್ತು ಜೆಕೊಸ್ಲೊವಾಕಿಯಾದ ಮೇಲಿನ ಆಕ್ರಮಣಗಳು ಬ್ರಿಟನ್ ಮತ್ತು ಫ್ರಾನ್ಸಿನ ವಿರುದ್ಧದ ಕೊನೆಯ ಮುಖಾಮುಖಿಗೆ ಮೊದಲು ಯುರೋಪಿನಲ್ಲಿ ಜರ್ಮನಿಯ ಸ್ಥಾನವನ್ನು ಬಲಪಡಿಸುವ ಪೂರ್ವ ಯುರೋಪಿನ ಪ್ರಾಂತೀಯ ಯುದ್ಧಸರಣಿಗಳಲ್ಲಿ ಕೆಲವು ಮಾತ್ರವಾಗಿದ್ದವು. ಫ್ರಿಟ್ಜ್, ಬ್ಲಾಂಬರ್ಗ್ ಮತ್ತು ನ್ಯೂರಾಥರ ವಾದದ ಪ್ರಕಾರ ಹಿಟ್ಲರನ ಪ್ರಾಂತೀಯ ಯುದ್ಧಗಳ ತಂತ್ರವು ಬಹಳ ಅಪಾಯಕಾರಿಯಾದ್ದು ಮಾತ್ರವಲ್ಲದೆ ಜರ್ಮನಿ ತಯಾರಾಗುವದಕ್ಕೆ ಮುನ್ನವೇ ಅದರ ವಿರುದ್ಧ ಒಂದು ಮಹಾಯುದ್ಧಕ್ಕೆ ಕಾರಣವಾಗುವಂತಿತ್ತು. ಅವರು ಹಿಟ್ಲರನಿಗೆ ಇನ್ನೂ ಕೆಲಕಾಲ ಜರ್ಮನಿಯ ಸಶಸ್ತ್ರೀಕರಣವನ್ನು ಮುಂದುವರೆಸಲು ಸೂಚಿಸಿದರು. ಜರ್ಮನ್ ಆಕ್ರಮಣದ ಬಗ್ಗೆ ನ್ಯೂರಾಥ್, ಬ್ಲಾಂಬರ್ಗ್ ಮತ್ತು ಫ್ರಿಟ್ಜ್‌ರಿಗೆ ಯಾವುದೇ ಆಕ್ಷೇಪಗಳಿಲ್ಲದಿದ್ದರೂ ಆಕ್ರಮಣಕ್ಕೆ ತಕ್ಕುದಾದ ಸಮಯವನ್ನು ನಿರ್ಧರಿಸುವುದರ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ೧೯೩೭ರ ನವೆಂಬರಿನಲ್ಲಿ ಜರ್ಮನಿಗೆ ಬೇಟೆಪ್ರವಾಸವೊಂದರ ಭಾಗವಾಗಿ ಭೇಟಿಯಿತ್ತಿದ್ದ ಬ್ರಿಟಿಶ್ ಲಾರ್ಡ್ ಪ್ರೈವಿ ಸೀಲ್ ಲಾರ್ಡ್ ಹ್ಯಾಲಿಫ್ಯಾಕ್ಸ್‌ರನ್ನು ಹಿಟ್ಲರ್ ತನ್ನ ಅತಿಥಿಯನ್ನಾಗಿ ಬರಮಾಡಿಕೊಂಡ.S ಲಾರ್ಡ್ ಹ್ಯಾಲಿಫ್ಯಾಕ್ಸ್ ಹಿಟ್ಲರನೊಡನೆ ಜರ್ಮನಿಯ ಬದಲಾಗುತ್ತಿರುವ ಸರಹದ್ದುಗಳ ಬಗ್ಗೆ ಮಾತನಾಡುತ್ತಾ "ಎಲ್ಲಾ ಇತರೆ ಪ್ರಶ್ನೆಗಳೂ ಬರಲಿರುವ ಕಾಲಾವಧಿಯಲ್ಲಿ ಯುರೋಪಿಯನ್ ಕ್ರಮದಲ್ಲಿ ಆಗಬಹುದಾದ ಬದಲಾವಣೆಗಳನ್ನು ಆಧರಿಸಿದಂತಹವಾಗಿವೆ. ಈ ಪ್ರಶ್ನೆಗಳಲ್ಲಿ ಕೆಲವು ಡ್ಯಾನ್‌ಜಿಗ್, ಆಸ್ಟ್ರಿಯಾ ಮತ್ತು ಜೆಕೊಸ್ಲೊವಾಕಿಯಾ ಬಗೆಗಿನವು. ಆಗಬಹುದಾದಂತಹ ಯಾವುದೇ ಬದಲಾವಣೆಗಳು ಯಾವುದೇ ದುಷ್ಫರಿಣಾಮಗಳನ್ನು ಉಂಟುಮಾಡುವಂತಿರದೆ ಶ್ತಾಂತಿಯುತ ಬೆಳವಣಿಗೆಗಳಾಗಿರಲಿ ಎಂದು ಇಂಗ್ಲೆಂಡ್ ಆಶಿಸುತ್ತದೆ." ಯಾವುದೇ ಪ್ರಾದೇಶಿಕ ಬದಲಾವಣೆಗಳಾಗಲಿ, ಅವು ಶಾಂತಿಯುತವಾಗಿರಬೇಕೆಂದೂ, ಬ್ರಿಟನ್ನಿಗೆ ಪೂರ್ವ ಯುರೋಪಿನ ಜತೆಗೆ ಲೀಗ್ ಆಫ್ ನೇಶನ್ಸ್‌ನ ಬದ್ಧತೆಯನ್ನು ಬಿಟ್ಟರೆ ಯಾವುದೇ ಭದ್ರತಾ ಕಟ್ಟುಪಾಡುಗಳಿರದಿದ್ದರೂ ಅದು ಯುದ್ಧದ ಮೂಲಕ ಮಾಡಲಾಗುವ ಯಾವುದೇ ಗಡಿವಿಸ್ತರಣೆಯನ್ನು ಸಹಿಸದೆಂದೂ ಜನರಲ್ ಹ್ಯಾಲಿಫ್ಯಾಕ್ಸ್ ಹಿಟ್ಲರನಿಗೆ ಸುಸ್ಪಷ್ಟವಾಗಿ ತಿಳಿಸಿದರೂ ಹಿಟ್ಲರ್ ಅದರ ಗಂಭೀರತೆಯನ್ನು ಎಷ್ಟರಮಟ್ಟಿಗೆ ಪರಿಗಣಿಸಿದನೆನ್ನುವುದು ಅಸ್ಪಷ್ಟವಾಗಿದೆ. ಪೂರ್ವ ಯುರೋಪಿನಲ್ಲಿ ತಾನು ಮಿತಯುದ್ಧತಂತ್ರವನ್ನು ಅನುಸರಿಸುವಾಗ ಬ್ರಿಟನ್ ತನ್ನಪಾಡಿಗೆ ತಾನು ಸುಮ್ಮನಿರುವುದೆಂದು ಹಿಟ್ಲರ್ ಹ್ಯಾಲಿಫ್ಯಾಕ್ಸನ ಮಾತುಗಳಿಂದ ತಪ್ಪಾಗಿ ಗ್ರಹಿಸಿದಂತೆ ತೋರುತ್ತದೆ. ಹಾಸ್‌ಬಾಚ್ ಸುತ್ತೋಲೆಗೆ ನ್ಯೂರಾಥ್, ಬ್ಲಾಂಬರ್ಗ್ ಮತ್ತು ಫ್ರಿಟ್ಜ್‌ರಿಂದ ವ್ಯಕ್ತವಾಗಿದ್ದ ವಿರೋಧದ ಬಗ್ಗೆ ಅಸಂತುಷ್ಟನಾಗಿದ್ದ ಹಿಟ್ಲರ್ ೧೯೩೮ರ ಆರಂಭದ ವೇಳೆಗೆ ಸೇನೆ ಮತ್ತು ವಿದೇಶ ಮಂತ್ರಾಲಯಗಳ ಕಾರ್ಯಾಚರಣೆಯ ಮೇಲೆ ತನ್ನ ಸಂಪೂರ್ಣ ಹಿಡಿತವನ್ನು ಸಾಧಿಸಲೆಂದು ’ಬ್ಲಾಂಬರ್ಗ್-ಫ್ರಿಟ್ಜ್ ಹಗರಣ’ವನ್ನು ಹುಟ್ಟುಹಾಕಿ ಯುದ್ಧ್ದಮಂತ್ರಾಲಯವನ್ನು ರದ್ದುಮಾಡಿ, OKWವನ್ನು ಸ್ಥಾಪಿಸಿ, ೧೯೩೮ರ ಫೆಬ್ರುವರಿಯಲ್ಲಿ ನ್ಯೂರಾಥನನ್ನು ವಿದೇಶಾಂಗ ಮಂತ್ರಿಯ ಸ್ಥಾನದಿಂದ ತೆಗೆದುಹಾಕಿ ’ಓಬರ್‌ಸ್ಟರ್ ಬೆಫೆಲ್‌ಶೇಬರ್ ಡರ್ ವೆಹ್ರೆಮಾಚ್ಟ್ ’ ಎಂಬ ಪಟ್ಟವುಳ್ಳ ಅತ್ಯುನ್ನತ ಸ್ಥಾನವನ್ನು ತನ್ನದನ್ನಾಗಿ ಮಾಡಿಕೊಂಡನು. ಬ್ರಿಟಿಶ್ ಆರ್ಥಿಕ ಇತಿಹಾಸತಜ್ಞ ರಿಚರ್ಡ್ ಓವೆರಿಯ ಪ್ರಕಾರ ಸಾಧಾರಣವಾಗಿ ಶಾಂತಿಸಮಯದಲ್ಲಲ್ಲದೆ ಯುದ್ಧದ ಸಮಯದಲ್ಲಿ ಮಾತ್ರ ಸ್ಥಾಪಿಸಲ್ಪಡುವ ಪ್ರಧಾನ ಮುಖ್ಯಠಾಣ್ಯ ಸಂಸ್ಥೆಗಳಲ್ಲೊಂದಾದ OKWನ ಸ್ಥಾಪನೆ ೧೯೩೮ರಲ್ಲಿ ಆಗಿದ್ದು ಹಿಟ್ಲರನ ಉದ್ದೇಶದ ಸ್ಪಷ್ಟ ಸಂಕೇತವಾಗಿದೆ. T ಅಧಿಕೃತ ಜರ್ಮನ್ ಇತಿಹಾಸದ ಪ್ರಕಾರ ೧೯೩೮ರ ನಂತರ ಹಿಟ್ಲರ್ ಯುದ್ಧಕ್ಕೆ ಕಾರಣವಾಗಬಹುದಾದ ವಿದೇಶಾಂಗ ನೀತಿಯನ್ನು ಅನುಸರಿಸುವುದನ್ನು ಬಿಟ್ಟು ಸಂಪೂರ್ಣವಾಗಿ ಯುದ್ಧವನ್ನೇ ಗುರಿಯಾಗಿಸಿಕೊಂಡ ವಿದೇಶಾಂಗ ನೀತಿಯನ್ನು ಅನುಸರಿಸತೊಡಗಿದನು.

ಮಾರಣಹೋಮ- ದ ಹಾಲೋಕಾಸ್ಟ್

ಅಡೋಲ್ಫ್ ಹಿಟ್ಲರ್ 
ಆಗಷ್ಟೇ ಮುಕ್ತಗೊಳಿಸಲ್ಪಟ್ಟ ಬುಶೆನ್‌ವಾಲ್ಡ್ ಕಾನ್ಸಂಟ್ರೇಶನ್ ಕ್ಯಾಂಪಿನ ಹೊರಗೆ ಹೆಣಗಳನ್ನು ಪೇರಿಸಿದ ವಾಹನವೊಂದರ ಬಳಿ ನಿಂತುಕೊಂಡಿರುವ ಅಮೆರಿಕನ್ ಯೋಧ.

ಹಿಟ್ಲರನ ಸಾಮಾಜಿಕ ನೀತಿಗಳ ಮುಖ್ಯ ತಳಹದಿಯಾಗಿದ್ದ ವಿಷಯವೆಂದರೆ ಜನಾಂಗೀಯ ಆರೋಗ್ಯ(ರೇಶಿಯಲ್ ಹೈಜೀನ್). ಈ ನೀತಿಯು ಆರ್ಥರ್ ದು ಗೋಬಿನ್ಯೂ ಎಂಬ ಫ್ರೆಂಚ್ ಕೌಂಟ್ ಪ್ರತಿಪಾದಿಸಿದ್ದ ಜನಾಂಗೀಯ ಪರಿಶುದ್ಧತೆ ಮತ್ತು ಸಾಮಾಜಿಕ ಡಾರ್ವಿನ್‌ವಾದವನ್ನು ಸಮರ್ಥಿಸುತ್ತಿದ್ದ ’ಯೂಜೆನಿಕ್ಸ್’ ಎಂಬ ಮಿಥ್ಯವಿಜ್ಞಾನವನ್ನು ಆಧರಿಸಿದ್ದಾಗಿತ್ತು. "ಸಮರ್ಥವಾದುದು ಉಳಿದುಕೊಳ್ಳುವುದು" ಎಂಬ ಹೇಳಿಕೆಯನ್ನು ಮಾನವಜನಾಂಗಕ್ಕೆ ಪ್ರಯೋಗಿಸಿದಾಗ ಜನಾಂಗೀಯ ಪರಿಶುದ್ಧ್ದತೆಯ ಅವಶ್ಯಕತೆ ಮತ್ತು "ಜೀವಂತವಾಗಿರಲು ಅನರ್ಹವಾದ ಜೀವನ"ವನ್ನು ನಿರ್ಮೂಲನಗೊಳಿಸುವುದು ಎಂದು ಅರ್ಥೈಸಿಕೊಳ್ಳಲಾಯಿತು. ಇದರಡಿ ಆರಂಭಿಸಲಾದ ಆಕ್ಷನ್ ಟಿ4 ಎಂಬ ಅಭಿಯಾನದ ಮೊದಲ ಬಲಿಪಶುಗಳಾದವರು ದೈಹಿಕ ಮತ್ತು ಬೆಳವಣಿಗೆ ನ್ಯೂನತೆಗಳುಳ್ಳ ಮಕ್ಕಳು. ಸಾರ್ವಜನಿಕ ವಿರೋಧದ ನಂತರ ಹಿಟ್ಲರ್ ಈ ಕಾರ್ಯಕ್ರ್ಮವನ್ನು ಹಿಂತೆಗೆದುಕೊಂಡಂತೆ ನಟಿಸಿದನಾದರೂ ಈ ಕೊಲೆಗಳು ನಂತರದಲ್ಲಿಯೂ ಮುಂದುವರೆದವು. (ನೋಡಿ, ನಾಝೀ ಯೂಜೆನಿಕ್ಸ್). ೧೯೩೯ರಿಂದ ೧೯೪೫ರ ಕಾಲಾವಧಿಯಲ್ಲಿ ಇತರೆ ಸಹಕಾರೀ ಸರಕಾರಗಳ ನೆರವು ಮತ್ತು ತಾವು ಆಕ್ರಮಿಸಿದ ದೇಶಗಳಿಂದ ನಿಯಮಿಸಲ್ಪಟ್ಟವರಿಂದ ನೆರವು ಪಡೆದುಕೊಂಡ SS, ತನ್ನ ಕಾನ್ಸಂಟ್ರೇಶನ್ ಕ್ಯಾಂಪುಗಳು, ಘೆಟ್ಟೊಗಳು ಮತ್ತು ಸಾಮೂಹಿಕ ಹತ್ಯೆಗಳ ಮೂಲಕ ಕ್ರಮಬದ್ಧವಾಗಿ ಇಲ್ಲವೇ ಕೆಲವೆಡೆ ಕ್ರಮರಹಿತವಾಗಿ ಆರು ಮಿಲಿಯನ್ ಯಹೂದಿ ಗಳನ್ನೊಳಗೊಂಡಂತೆ ಸುಮಾರು ೧೧ರಿಂದ ೧೪ ಮಿಲಿಯನ್ ಜನರ ಮಾರಣಹೋಮ ನಡೆಸಿತು. ವಿಷಾನಿಲದಿಂದ ಸತ್ತವರನ್ನು ಹೊರತುಪಡಿಸಿ ಉಳಿದವರು ಗುಲಾಮಗಿರಿಯ ಜೀತ ಮಾಡುತ್ತಾ (ಕೆಲವೊಮ್ಮೆ ಖಾಸಗೀ ಜರ್ಮನ್ ಕಂಪನಿಗಳ ಲಾಭಕ್ಕಾಗಿ) ಹಸಿವು ಮತ್ತು ರೋಗಗಳಿಗೆ ತುತ್ತಾಗಿ ಸತ್ತುಹೋಗುತ್ತಿದ್ದರು. ಯಹೂದಿಗಳು ಮಾತ್ರವಲ್ಲದೆ, ಯಹೂದಿಗಳಲ್ಲದ ಪೋಲಿಶ್ ಜನರು, ಕಮ್ಯುನಿಸ್ಟರು, ರಾಜಕೀಯ ವಿರೋಧಿಗಳು, ಬಂಡೆದ್ದ ಗುಂಪುಗಳ ಸದಸ್ಯರು, ಸಲಿಂಗಕಾಮಿಗಳು, ರೋಮಾಗಳು, ದೈಹಿಕ ಮತ್ತು ಮಾನಸಿಕ ನ್ಯೂನತೆಗಳನ್ನುಳ್ಳವರು, ಸೋವಿಯೆತ್ ಯುದ್ಧಖೈದಿಗಳು(ಸುಮಾರು ಮೂರು ಮಿಲಿಯನ್), ಯೆಹೋವನ ಸಾಕ್ಷಿಗಳು, ಅಡ್ವೆಂಟಿಸ್ಟರು, ಟ್ರೇಡ್ ಯೂನಿಯನ್ ಸದಸ್ಯರು, ಮನೋರೋಗ ಪೀಡಿತರು - ಇವರೆಲ್ಲರನ್ನೂ ನಿರ್ದಯವಾಗಿ ಕೊಲ್ಲಲಾಯಿತು. ಈ ರೀತಿಯ ಸಾಮೂಹಿಕ ಹತ್ಯೆಗಳನ್ನು ನಡೆಸುತ್ತಿದ್ದ ಕೇಂದ್ರಗಳಲ್ಲಿ ಆಶ್‌ವಿಟ್ಜ್-ಬರ್ಕೆನಾದಲ್ಲಿದ್ದ ನಿರ್ಮೂಲನ ಕ್ಯಾಂಪ್ ಸಂಕೀರ್ಣವು ಅತಿ ದೊಡ್ಡದಾದುದಾಗಿತ್ತು. ಹಿಟ್ಲರ್ ಈ ಕಾನ್ಸಂಟ್ರೇಶನ್ ಕ್ಯಾಂಪುಗಳಿಗೆ[ಸೂಕ್ತ ಉಲ್ಲೇಖನ ಬೇಕು] ಒಮ್ಮೆಯೂ ಭೇಟಿನೀಡಲಿಲ್ಲ ಮತ್ತು ಯಾವಾಗಲೂ ಈ ಕೊಲೆಗಳ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟರೀತಿಯಲ್ಲಿ ಮಾತನಾಡಲಿಲ್ಲ. ಈ ಹಾಲೋಕಾಸ್ಟ್ ಮಾರಣಹೋಮವನ್ನು(ಎಂಡ್ಲೋಸಂಗ್ ಡರ್ ಜ್ಯೂಡಿಶೆನ್ ಫ್ರಾಜ್ -ಯಹೂದೀ ಸಮಸ್ಯೆಗೆ ಕೊಟ್ಟಕೊನೆಯ ಪರಿಹಾರ) ಅನ್ನು ನಿಯೋಜಿಸಿ ನಡೆಸುತ್ತಿದ್ದವರು ನಾಝೀ ಪ್ರಮುಖರಾದ ಹೀನ್ರಿಕ್ ಹಿಮ್ಲರ್ ಮತ್ತು ರೀನ್‌ಹಾರ್ಡ್ ಹೇಡ್ರಿಚ್. ಹಿಟ್ಲರ್ ಸ್ವತಃ ಈ ಮಾರಣಹೋಮಗಳ ಆಯೋಜನೆಯನ್ನು ಆದೇಶಿಸಿರುವ ಬಗ್ಗೆ ಯಾವ ದಾಖಲೆ ಲಭ್ಯವಿಲ್ಲವಾದರೂ, ಆತ ಪೋಲಂಡ್ ಮತ್ತು ರಷ್ಯಾಗಳಿಗೆ ತೆರಳಿದ ಜರ್ಮನ್ ಸೇನೆಯೊಂದಿಗಿದ್ದ ಕೊಲೆಗಡುಕ ತುಕಡಿಗಳಾದ ಈನ್‌ಸಾತ್ಸ್‌ಗ್ರುಪ್ಪೆನ್ ಅನ್ನು ಅನುಮೋದಿಸಿದ್ದರ ಬಗ್ಗೆ ಮತ್ತು ಈ ತುಕಡಿಗಳ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದನೆಂಬುದಕ್ಕೆ ದಾಖಲೆಗಳಿವೆ. ೧೯೪೧ರ ಚಳಿಗಾಲದ ವೇಳೆಗೆ ಹಿಮ್ಲರ್ ಮತ್ತು ಹಿಟ್ಲರ್ ಸಾಮೂಹಿಕ ನಿರ್ಮೂಲನಕ್ಕಾಗಿ ವಿಷಾನಿಲ ಬಳಕೆಯನ್ನು ಅನುಮೋದಿಸಿದರೆಂಬುದಕ್ಕೂ ದಾಖಲೆಗಳಿವೆ. ಐವತ್ತು ವರುಷಗಳ ನಂತರ ಸೋವಿಯೆತ್ ಗುಪ್ತಚರ ಅಧಿಕಾರಿಗಳು ಬಹಿರಂಗಗೊಳಿಸಿದ ವಿಚಾರಣೆಗಳ ವೇಳೆಯಲ್ಲಿ ಹಿಟ್ಲರನ ಪರಿಚಾರಕ ಹೈಂಜ್ ಲಿಂಜ್ ಮತ್ತು ಆತನ ಸೇನಾ ಸಹಾಯಕ ಒಟ್ಟೊ ಗುನ್ಷ್ ಅರುಹಿದ ಪ್ರಕಾರ "ಹಿಟ್ಲರ್ ಗ್ಯಾಸ್ ಚೇಂಬರುಗಳ ಮೊದಲ ನೀಲನಕ್ಷೆಗಳನ್ನು ಕೂಲಂಕಷವಾಗಿ ಪರೀಶೀಲಿಸಿದ". ಹಿಟ್ಲರನಿಗೆ ಡೆತ್ ಕ್ಯಾಂಪುಗಳ ಬಗ್ಗೆ ಸಂಪೂರ್ಣ ಅರಿವಿತ್ತು ಎಂದು ಆತನ ಆಪ್ತ ಕಾರ್ಯದರ್ಶಿ ಟ್ರಾಡ್ಲ್ ಯೂಂಗ್ ಸಾಕ್ಷಿ ನುಡಿದಿದ್ದಾನೆ. ಈ ’ಕೊಟ್ಟಕೊನೆಯ ಪರಿಹಾರ’ವು ಸುಲಲಿತವಾಗಿ ಸಂಪೂರ್ಣ ಸಹಕಾರದೊಡನೆ ಜಾರಿಗೆ ಬರುವಂತೆ ಮಾಡಲು ೧೯೪೨ರ ಜನವರಿ ೨೦ರಂದು ಬರ್ಲಿನಿನಲ್ಲಿ ರೀನ್‌ಹಾರ್ಡ್ ಹೇಡ್ರಿಚ್‌ ಮತ್ತು ಅಡಾಲ್ಫ್ ಈಶ್‌ಮನ್ನರ ನೇತೃತ್ವದಲ್ಲಿ ಐವತ್ತು ಹಿರಿಯ ಅಧಿಕಾರಿಗಳ ಸಭೆಯಾದ ’ವಾನ್ಸೀ ಅಧಿವೇಶನ’ವನ್ನು ನಡೆಸಲಾಯಿತು. ಈ ಸಭೆಯ ನಡಾವಳಿಗಳು ಮಾರಣಹೋಮವನ್ನು ಕ್ರಮಬದ್ಧವಾಗಿ ಆಯೋಜಿಸಲಾಗಿತ್ತೆನ್ನುವದಕ್ಕೆ ನಿಖರವಾದ ಸಾಕ್ಷಿಯನ್ನೊದಗಿಸುತ್ತವೆ. ೨೨ನೇ ಫೆಬ್ರುವರಿಯಲ್ಲಿ ಹಿಟ್ಲರ್ ತನ್ನ ಜತೆಗಾರರಿಗೆ "ಯಹೂದಿಗಲನ್ನು ನೀರ್ಮೂಲನ ಮಾಡುವುದರ ಮೂಲಕ ನಮ್ಮ ಆರೋಗ್ಯವನ್ನು ಮರಳಿ ಪಡೆಕೊಳ್ಳೋಣ" ಎಂದು ಹೇಳಿದನೆಂಬುದಾಗಿ ದಾಖಲಿಸಲಾಗಿದೆ.

II ನೇ ಮಹಾಯುದ್ಧ

ಆರಂಭದ ರಾಜತಾಂತ್ರಿಕ ವಿಜಯಗಳು

ಜಪಾನಿನೊಡನೆ ಮೈತ್ರಿ

ಅಡೋಲ್ಫ್ ಹಿಟ್ಲರ್ 
ಜಪಾನೀ ವಿದೇಶಾಂಗ ಮಂತ್ರಿ ಯೋಸುಕೆ ಮತ್ಸುವೊಕಾ ಹಿಟ್ಲರನೊಡನೆ ಬರ್ಲಿನ್‌ನಲ್ಲಿ.

ಫೆಬ್ರವರಿ ೧೯೩೮ರಲ್ಲಿ ಹಿಟ್ಲರನು ಕೊನೆಗೂ ಜರ್ಮನಿಯ ದೂರ ಪೌರ್ವಾತ್ಯ ನೀತಿ (Far eastern Policy)ಯನ್ನು ಬಾಧಿಸುತ್ತಿದ್ದ ದ್ವಂದ್ವವನ್ನು ಕೊನೆಗಾಣಿಸಿದನು. ಜರ್ಮನಿಯು ೧೯೧೦ರಿಂದಲೂ ಚೀನಾ ಗಣರಾಜ್ಯದೊಡನೆ ಹೊಂದಿದ್ದ ಅನೌಪಚಾರಿಕ ಸಿನೋ-ಜರ್ಮನ್ ಒಪ್ಪಂದವನ್ನು ಮುಂದುವರಿಸಬೇಕೆ ಅಥವಾ ಜಪಾನ್ ಜೊತೆಗೆ ಹೊಸ ಮೈತ್ರಿಯನ್ನು ಬೆಳೆಸಿಕೊಳ್ಳಬೇಕೆ ಎಂಬುದು ಅದರ ದ್ವಂದ್ವವಾಗಿತ್ತು. ಆ ಸಮಯದಲ್ಲಿ ಸೇನೆಯು ಚೀನಾದೊಡನೆ ಮೈತ್ರಿಯನ್ನು ಮುಂದುವರೆಸುವುದರ ಕಡೆಗೇ ಹೆಚ್ಚಿನ ಒಲವು ತೋರಿತ್ತು. ಚೀನಾವು “ಚೀನಾ ಲಾಬಿ" ಎಂದು ಕರೆಯಲ್ಪಡುವ ವಿದೇಶಾಂಗ ಮಂತ್ರಿ ಕಾನ್ಸ್‌ಟಾನ್ಟಿನ್ ವೊನ್ ನ್ಯೂರತ್ (Konstantin von Neurath) ಹಾಗೂ ಯುದ್ಧ ಮಂತ್ರಿ ವರ್ನೆರ್ ವೊನ್ ಬ್ಲೋಮ್‌ಬರ್ಗ್‌ (Werner von Blomberg)ರ ಬೆಂಬಲ ಹೊಂದಿದ್ದು, ಅವರು ಜರ್ಮನ್ ವಿದೇಶಾಂಗ ನೀತಿಯನ್ನು ಯುರೋಪಿನ ಯುದ್ಧದಿಂದ ವಿಮುಖವಾಗಿಸಲು ಯತ್ನಿಸಿದರು. ಆದರೆ, ೧೯೩೮ರ ಆರಂಭದ ದಿನಗಳಲ್ಲಿ ಇವರಿಬ್ಬರೂ ಹಿಟ್ಲರನಿಂದ ವಜಾಗೊಳಿಸಲ್ಪಟ್ಟರು. ತನ್ನಿಂದ ಹೊಸತಾಗಿ ನೇಮಕಗೊಂಡ, ಜಪಾನ್‌ನೆಡೆಗೆ ಬಲವಾದ ಆಸಕ್ತಿ ಹೊಂದಿದ್ದ ವಿದೇಶಾಂಗ ಮಂತ್ರಿ ಜೋಕಿಮ್ ವೊನ್ ರಿಬೆಂಟ್ರಾಪ್ (Joachim Von Ribbentrop) ಸಲಹೆಯಂತೆ, ಹಿಟ್ಲರನು ಹೆಚ್ಚು ಆಧುನಿಕವೂ ಶಕ್ತಿಶಾಲಿಯೂ ಆಗಿದ್ದ ಜಪಾನಿನ ಸ್ನೇಹದ ಗಳಿಕೆಯ ಮೇಲೆ, ಚೀನಾದೊಂದಿಗಿನ ಮೈತ್ರಿಗೆ ಕೊನೆಹಾಡಲು ಮುಂದಾದನು. ರೀಚ್‌ಸ್ಟ್ಯಾಗ್ ಅನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಹಿಟ್ಲರನು ಮಂಚೂರಿಯಾದ ಜಪಾನ್ ಆಕ್ರಮಿತ ರಾಜ್ಯ ಮನ್‌ಚುಕುಓ (Manchukuo) ಅನ್ನು ಜರ್ಮನಿಯು ಮಾನ್ಯಮಾಡುವುದೆಂದು ಘೋಷಿಸಿದನು. ಹಾಗೆಯೇ ಜಪಾನ್ ಹಿಡಿತದಲ್ಲಿದ್ದ ತನ್ನ ಹಿಂದಿನ ಪೆಸಿಫಿಕ್ ವಸಾಹತುಗಳ ಮೇಲಿನ ಜರ್ಮನಿಯ ವರಸುದಾರಿಕೆಯನ್ನು ಬಿಟ್ಟುಕೊಟ್ಟನು. ಹಿಟ್ಲರ್, ಚೀನಾಕ್ಕೆ ಶಸ್ತ್ರಾಸ್ತ್ರಗಳ ರವಾನೆಯನ್ನು ನಿಲ್ಲಿಸಬೇಕೆಂದೂ ಚೀನೀ ಸೇನೆಗೆ ಸಂಬಂಧಿಸಿದ ಎಲ್ಲ ಜರ್ಮನ್ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಬೇಕೆಂದೂ ಆದೇಶಗಳನ್ನು ಹೊರಡಿಸಿದನು. ಜಪಾನ್ ವಿರುದ್ಧದ ತನ್ನ ಯುದ್ಧಕ್ಕೆ ನೀಡಿದ ಬೆಂಬಲವನ್ನು ಜರ್ಮನಿ ಹಿಂಪಡೆದುದಕ್ಕೆ ಪ್ರತಿಯಾಗಿ ಚೀನೀ ಜನರಲಿಸ್ಸಿಮೊ ಚಿಯಾಂಗ್ ಕೈ ಶೆಕ್‌ (Chiang Kai-shek)ನು ಎಲ್ಲಸಿನೋ-ಜರ್ಮನ್ ಆರ್ಥಿಕ ಒಪ್ಪಂದಗಳನ್ನು ರದ್ದುಪಡಿಸಿದನು. ಇದರಿಂದಾಗಿ ಚೀನಾವು ಜರ್ಮನಿಗೆ ನೀಡುತ್ತಿದ್ದ ಟಂಗ್‌ಸ್ಟನ್‌ನಂತಹ ಕಚ್ಚಾ ವಸ್ತುಗಳ ಪೂರೈಕೆಯು ನಿಂತು ಜರ್ಮನಿಯು ಬಾಧೆ ಪಡಬೇಕಾಯಿತು. ಸಿನೋ-ಜರ್ಮನ್ ಒಪ್ಪಂದದ ರದ್ದತಿಯಿಂದ ಜರ್ಮನ್ ಶಸ್ತ್ರಾಸ್ತ್ರ ದಾಸ್ತಾನಿಗೆ ತೀವ್ರ ಸಮಸ್ಯೆಯುಂಟಾಯಿತು. ಅವರೀಗ ಮುಕ್ತ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳನ್ನು ಕೊಳ್ಳಲು ತಮ್ಮಲ್ಲಿದ್ದ ವಿದೇಶೀ ವಿನಿಮಯದ ಸೀಮಿತ ಹರಿವನ್ನು ಬಳಸಿಕೊಳ್ಳಬೇಕಾಯಿತು.

ಆಸ್ಟ್ರಿಯಾ ಮತ್ತು ಝೆಕೋಸ್ಲೋವಾಕಿಯಾ

೧೯೩೮ರಲ್ಲಿ ಹಿಟ್ಲರನು ಆಸ್ಟ್ರಿಯಾವು ಜರ್ಮನಿಯೊಡನೆ ಏಕೀಕರಣಗೊಳ್ಳಬೇಕೆಂದು (the Anchluss) ಒತ್ತಡ ತಂದನು ಹಾಗೂ ಮಾರ್ಚ್ ೧೪ರಂದು ವಿಯೆನ್ನಾದಲ್ಲಿ ವಿಜಯೀ ಪ್ರವೇಶವನ್ನು ಪಡೆದನು. ಮುಂದೆ ಅವನು, ಝೆಕೋಸ್ಲೋವಾಕಿಯಾದ ಸುಡೆಟೆನ್‌ಲ್ಯಾಂಡ್ ಜಿಲ್ಲೆಗಳ ಜರ್ಮನ್ ಭಾಷಿಗರಲ್ಲಿ ಬಿಕ್ಕಟ್ಟನ್ನು ಮತ್ತಷ್ಟು ಸಂದಿಗ್ದಗೊಳಿಸಿದನು. ೩, ಮಾರ್ಚ್ ೧೯೩೮ರಲ್ಲಿ, ಬ್ರಿಟಿಷ್ ರಾಯಭಾರಿ ಸರ್ ನೆವಿಲ್ ಹೆಂಡರ್ಸನ್ ಹಿಟ್ಲರನನ್ನು ಭೇಟಿ ಮಾಡಿ, ತನ್ನ ಸರ್ಕಾರದ ಪರವಾಗಿ ಪ್ರಸ್ತಾಪವೊಂದನ್ನು ಮುಂದಿಟ್ಟನು. ಅದು, ಬಹುತೇಕ ಆಫ್ರಿಕಾವನ್ನು ಆಳುವ (ಜರ್ಮನಿಗೆ ಪ್ರಮುಖ ಪಾತ್ರ ನೀಡಲಿದ್ದ) ಅಂತಾರಾಷ್ಟ್ರೀಯ ಸಾಂಗತ್ಯಕ್ಕೆ ಕೈಜೋಡಿಸುವುದಾಗಿತ್ತು. ಅದಕ್ಕೆ ಬದಲಾಗಿ ಜರ್ಮನಿಯು ಎಂದಿಗೂ ಗಡಿಗಳ ಬದಲಾವಣೆಯನ್ನು ಮುಂದಿಟ್ಟುಕೊಂಡು ಯುದ್ಧಹೂಡುವುದಿಲ್ಲವೆಂದು ಹಿಟ್ಲರನಿಂದ ವಾಗ್ದಾನ ಬಯಸಲಾಗಿತ್ತು. ಆದರೆ ಹಿಟ್ಲರ್ ಆಗ, ಅಂತಾರಾಷ್ಟ್ರೀಯ ಸಾಂಗತ್ಯದಲ್ಲಿ ಭಾಗವಹಿಸುವುದಕ್ಕಿಂತ ಪೌರ್ವಾತ್ಯ ಯುರೋಪಿನ lebensraum (ಬದುಕುವ ಅವಕಾಶ) ನಲ್ಲಿ ಹೆಚ್ಚು ಆಸಕ್ತನಾಗಿದ್ದನು ಮತ್ತು ಬ್ರಿಟಿಷರ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸುತ್ತ, ತಾನು ಪೂರ್ವದ ಜರ್ಮನ್ ಆಫ್ರಿಕನ್ ವಸಾಹತುಗಳನ್ನು ತನ್ನ ಸಾಮ್ರಾಜ್ಯ ಕ್ಕೆ ಹಿಂದಿರುಗಿಸುವುದನ್ನು ಬಯಸುವನೆಂದೂ, ಮಧ್ಯ ಆಫ್ರಿಕಾದ ಆಡಳಿತಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೊತೆಯಾಗುವ ಉದ್ದೇಶ ತನಗಿಲ್ಲವೆಂದೂ ಉತ್ತರಿಸಿದನು. ಅದಕ್ಕಿಂತ ಹೆಚ್ಚಾಗಿ ಹಿಟ್ಲರನು, ಆಫ್ರಿಕಾದಲ್ಲಿನ ಒಂದು ಪ್ರಾಂತ್ಯಕ್ಕೆ ಬದಲಾಗಿ ಯುರೋಪಿನಲ್ಲಿ ಜರ್ಮನಿಯ ನಡವಳಿಕೆಯ ಕುರಿತು ನಿಬಂಧನೆ ಹೇರಲು ಹೊರಟ ಬ್ರಿಟನ್ನಿನ ಪ್ರಯತ್ನವೇ ಸಂಪೂರ್ಣ ದಾರ್ಷ್ಟ್ಯದಿಂದ ಕೂಡಿದ್ದು ಎಂದು ವಾದಿಸಿದನು. ಕೊನೆಗೆ ಅವನು, ಯುದ್ಧದಿಂದ ತಪ್ಪಿಸಿಕೊಳ್ಳಲು ಬ್ರಿಟನ್ನಿನ ಕರಾರುಗಳಿಗೆ ಒಪ್ಪುವುದಕ್ಕಿಂತಲೂ ಪೂರ್ವದ ವಸಾಹತುಗಳ ಹಿಂಪಡೆಯುವಿಕೆಗೆ ತಾನು ಇಪ್ಪತ್ತು ವರ್ಷಗಳ ಕಾಲ ಕಾಯುವುದನ್ನೇ ಬಯಸುವುದಾಗಿ ಹೇಳಿ, ಹೆಂಡರ್ಸನ್‌ರೊಂದಿಗೆ ತನ್ನ ಮಾತು ಮುಗಿಸಿದನು. ೧೯೩೮ರ ಮಾರ್ಚ್ ೨೮ರಿಂದ ೨೯ರವರೆಗೆ ಹಿಟ್ಲರನು ಬರ್ಲಿನ್ನಿನಲ್ಲಿ ಸುಡೆಟೆನ್‌ಲ್ಯಾಂಡಿನ ಯಹೂದ್ಯೇತರ ಜರ್ಮನ್ ಪಕ್ಷಗಳಲ್ಲಿ ಅತಿದೊಡ್ಡದಾಗಿದ್ದ ಸುಡೆಟೆನ್ ಹೀಮ್‌ಫ್ರಂಟ್ (Heimfront - Home Front)ನ ಕೊನ್ರಾಡ್ ಹೆನ್ಲೀನ್ (Konrad Henlein)ನೊಂದಿಗೆ ನಿರಂತರವಾಗಿ ಗುಪ್ತ ಸಭೆಗಳನ್ನು ನಡೆಸಿದನು. ಈ ಹಿಟ್ಲರ್- ಹೆನ್ಲೀನ್ ಸಭೆಗಳಲ್ಲಿ ಹೆನ್ಲೀನನು ಝೆಕೊಸ್ಲೋವಾಕಿಯಾದ ವಿರುದ್ಧ ಜರ್ಮನಿಯ ಕ್ರೋಧವನ್ನು ಹೆಚ್ಚಿಸುವ ಹೇಳಿಕೆಗಳನ್ನು ನೀಡುತ್ತಿದ್ದನೆಂದು ನಮ್ಬಲಾಗಿದೆ. ಅವನು ಪ್ರಾಗ್ ಸಕಾರಣವಾಗಿಯೇ ಒಪ್ಪಲು ಅಸಾಧ್ಯವಾಗಿದ್ದ, ಸುಡೆಟೆನ್ ಜರ್ಮನ್ನರ ಏಕಾಧಿಪತ್ಯವನ್ನು ಹೆಚ್ಚಿಸುವ ಬೇಡಿಕೆಗಳನ್ನು ಪ್ರಾಗ್ ಮುಂದಿರಿದ್ದನು. ೧೯೩೮ರಲ್ಲಿ ಹೆನ್ಲೀನ್, ಹಂಗೆರಿಯ ವಿದೇಶಾಂಗ ಮಂತ್ರಿಯ ಬಳಿ, “ಝೆಕ್ ಸರ್ಕಾರವು ಅದೇನೇ ಕೊಡುಗೆಗಳನ್ನು ಮುಂದಿಟ್ಟರೂ ತಾನು ತನ್ನ ಬೇಡಿಕೆಗಳನ್ನು ಹೆಚ್ಚಿಸುತ್ತ ಹೋಗುವುದಾಗಿಯೂ, ಪರಸ್ಪರ ತಿಳುವಳಿಕೆಯ ಎಲ್ಲ ಮಾಧ್ಯಮಗಳನ್ನೂ ನಾಶಪಡಿಸಿ, ಝೆಕೋಸ್ಲೋವಾಕಿಯಾ ಶೀಘ್ರವಾಗಿ ಸ್ಫೋಟಗೊಳ್ಳುವಂತೆ ಮಾಡುವ ಈ ಮಾರ್ಗದ ಮೂಲಕ ಮುಂದುವರೆಯುವುದಾಗಿಯೂ" ಹೇಳಿಕೊಂಡಿದ್ದನು. ಖಾಸಗಿಯಾಗಿ ಹಿಟ್ಲರನು ಸುಡೆಟೆನ್ ಸಂಗತಿಯನ್ನು ಅಮುಖ್ಯವಾಗಿ ಗಣಿಸಿದ್ದನು; ಅವನ ನೈಜ ಉದ್ದೇಶಗಳು, ಸ್ವಧೃಢತೆ, ಮತ್ತು ಹೆನ್ಲೀನನ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಗ್ ನಿರಾಕರಣೆ - ಇವುಗಳ ನೆಲೆಯಲ್ಲಿ ಝೆಕೋಸ್ಲೋವಾಕಿಯಾವನ್ನು ನಾಶಪಡಿಸುವ ಮೂಲಕ ಸುಡೆಟೆನ್ ಪ್ರಶ್ನೆಯನ್ನು ನಾಡಿನಲ್ಲಿ ಮತ್ತು ಹೊರದೇಶಗಳಲ್ಲಿ ಸಮರ್ಥನೆಯಾಗಿ ಬಳಸಿಕೊಳ್ಳುವುದಾಗಿತ್ತು. ಹಿಟ್ಲರನ ಯೋಜನೆಗಳ ಪ್ರಕಾರ, ಸುಡೆನ್‌ಟೆನ್‌ ಜನರಿಗೆ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದಲ್ಲಿ, ಆಕ್ರಮಣದ ಪ್ರತ್ಯುತ್ತರ ನೀಡಲೆಂದು ಝೆಕೋಸ್ಲೋವಾಕಿಯಾ ಗಡಿಯಲ್ಲಿ ಸೇನಾ ದಟ್ಟಣೆಯು ಜಮಾವಣೆಗೊಂಡಿತು. ಅಂತಿಮವಾಗಿ, ಹೀಮ್‌ಫ್ರಂಟ್ ಚಳವಳಿಗಾರರು ಹಾಗೂ ಝೆಕೋಸ್ವೋವಾಕಿಯಾ ಅಧಿಕಾರಿಗಳ ನಡುವಿನ “ಘಟನೆಗಳು" ದಾಳಿಗೆ ಸಮರ್ಥನೆಯೊದಗಿಸಿ, ಇತರ ಯಾವುದೇ ಶಕ್ತಿಯು ಕಾರ್ಯಪ್ರವೃತ್ತವಾಗುವ ಮುನ್ನವೇ ಕೆಲವೇ ದಿನಗಳಲ್ಲಿ ಝೆಕೋಸ್ಲೋವಾಕಿಯಾವನ್ನು ಧೂಳೀಪಟಗೊಳಿಸುವ ಯೋಜನೆ ಸಿದ್ಧವಾಯಿತು. ಹಿಟ್ಲರನು ಈ ಕೊಯ್ಲಿನಲ್ಲಿ ಸಾಧ್ಯವಾದಷ್ಟು ಲಾಭವನ್ನು ತನ್ನದಾಗಿಸಿಕೊಳ್ಳಲು ಮತ್ತು ರಿನ್‌ಲ್ಯಾಂಡನ್ನು ಕಾಯುವ “ಪಶ್ಚಿಮ ಗೋಡೆ"ಯನ್ನು ಪೂರ್ಣಗೊಳಿಸಲು ಹವಣಿಸಿದ್ದರಿಂದ, ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಆರಂಭದ ದಿನಗಳನ್ನು ದಾಳಿಗೆಂದು ಆಯ್ಕೆ ಮಾಡಲಾಯಿತು. ಏಪ್ರಿಲ್ ೧೯೩೮ರಲ್ಲಿ ಹಿಟ್ಲರನು Fall Grün (Case Green - ಝೆಕೋಸ್ಲೋವಾಕಿಯಾ ದಾಳಿಯ ಸಂಕೇತ ಪದ )ಗೆ ತಯಾರಿ ನಡೆಸಲೆಂದು OKWಗೆ ಆದೇಶ ನೀಡಿದನು. ಯುರೋಪಿನಲ್ಲಿ ತಳಮಳ ಹೆಚ್ಚಿಸಿದ ಮುಂದಿನ ಘಟನೆ- ಮೇ ೧೯-೨೨, ೧೯೩೮ರ ಮೇ ಬಿಕ್ಕಟ್ಟು (May Crisis). ೧೯೩೮ರ ಮೇ ಬಿಕ್ಕಟ್ಟು, ಝೆಕೋಸ್ಲೋವಾಕಿಯಾವು ಆ ದೇಶದ ಮುನ್ಸಿಪಲ್ ಚುನಾವಣೆಗಳ ವಾರಾಂತ್ಯದಲ್ಲಿ ದಾಳಿಗೊಳಗಾಗುವುದೆಂಬ ವದಂತಿ ಹಬ್ಬಿ ಮೊಳಗಿದ ಸುಳ್ಳು ಎಚ್ಚರಿಕೆ ಗಂಟೆಯಾಗಿತ್ತು.ಚುನಾವಣೆಗಳಿಗೆ ಕೆಲವೇ ದಿನಗಳ ಮುನ್ನ ಝೆಕೋಸ್ಲೋವಾಕಿಯಾ ಗಡಿಭಾಗಗಳಲ್ಲಿ ಜರ್ಮನ್ ಸೇನೆಯ ಮುಖ್ಯ ತುಕಡಿಗಳು ಅಡ್ಡಾಡುತ್ತಿವೆಯೆಂಬ ತಪ್ಪು ವರದಿ, ಝೆಕೋಸ್ಲೋವಾಕಿಯಾ ಪೋಲಿಸರಿಂದ ಇಬ್ಬರು ಯಹೋದ್ಯೇತರ ಜರ್ಮನ್ನರು (Ethnik Germans) ಹತರಾಗಿದ್ದು, ಹೆಂಡರ್ಸನ್ನರು ರಿಬ್ಬನ್‌ಟ್ರೋಪ್‌ರನ್ನು ವಾರಾಂತ್ಯದಲ್ಲಿ ನಿಜವಾಗಿಯೂ ದಾಳಿ ನಿಶ್ಚಯವಾಗಿದೆಯೇ ಎಂದು ವಿಚಾರಿಸಿದಾಗ ಅವರಿಂದ ದೊರೆತ ಬಲವಾದ ಯುದ್ಧಪರ ಪ್ರತಿಕ್ರಿಯೆ, ಇವೆಲ್ಲವೂ ಆ ವಾರಾಂತ್ಯದಲ್ಲಿ ದಾಳಿಯ ಉದ್ದೇಶವಿಲ್ಲವೆಂಬುದು ತಿಳಿಯುವ ಮುನ್ನ, ಆಂಶಿಕವಾಗಿ ಝೆಕೋಸ್ಲೋವಾಕಿಯಾದ ಸಂಚಲನೆ ಹಾಗೂ ಝೆಕೋಸ್ಲೋವಾಕಿಯಾದ ಮೇಲೆ ಜರ್ಮನಿ ದಾಳಿ ಮಾಡುವುದರ ವಿರುದ್ಧ ಲಂಡನ್ನಿನಿಂದ ಧೃಢವಾದ ಎಚ್ಚರಿಕೆಯ ರವಾನೆಗಳಿಗೆ ನಾಂದಿಯಾಯಿತು. ೧೯೩೮ರ ಮೇ ತಿಂಗಳಿನಲ್ಲಿ ದಾಳಿ ನಡೆಸುವ ಯಾವ ಯೋಜನೆಗಳಿಲ್ಲದಿದ್ದರೂ, ಈ ಬಗೆಯ ಕ್ರಿಯೆಯು ಬರ್ಲಿನ್ನಿನಲ್ಲಿ ಪರಿಗಣಿಸಲ್ಪದಬೇಕೆಂದು ಲಂದನ್ ನಂಬಿತ್ತು. ಇದು, ಫ್ರಾನ್ಸ್, ಜರ್ಮನಿಯೊಂದಿಗೆ ಯುದ್ಧದಲ್ಲಿ ತೊಡಗಿಕೊಂಡರೆ ಯುನೈಟೆಡ್ ಕಿಂಗ್‌ಡಮ್, ಜರ್ಮನಿಯೊಡನೆ ಯುದ್ಧ ನಡೆಸುವುದಾಗಿ ಮೇ ೨೧ ಹಾಗೂ ಮೇ ೨೨ರಂದು ಒಟ್ಟು ಎರಡು ಬಾರಿ ಎಚ್ಚರಿಕೆ ರವಾನಿಸುವುದಕ್ಕೆ ನಾಂದಿಯಾಯಿತು. ಹಿಟ್ಲರ್, ವಾಸ್ತವವಾಗಿ ತಾನು ಆ ವಾರಾಂತ್ಯದಲ್ಲಿ ಯಾವ ಯೋಜನೆ ಹೊಂದಿಲ್ಲದಿದ್ದರೂ ಝೆಕೋಸ್ಲೋವಾಕಿಯಾದ ಸಂಚಲನೆ, ಲಂಡನ್ ಹಾಗೂ ಪ್ಯಾರಿಸ್‌ಗಳ ಎಚ್ಚರಿಕೆಗಳಿಂದಾಗಿ ಹಿಂಜರಿಯಬೇಕಾಯಿತೆಂಬ ನಿಟ್ಟಿನಲ್ಲಿ, ಅತ್ಯಂತ ಕ್ರೋಧದಿಂದ ಕೂಡಿದ ಹೇಳಿಕೆಯನ್ನು ನೀಡಿದನು. ಸದ್ಯದಲ್ಲೇ ಝೆಕೋಸ್ಲೋವಾಕಿಯಾದ ಮೇಲೆರಗುವ ಯೋಜನೆಯನ್ನು ೧೯೩೮ರ ಏಪ್ರಿಲ್‌ನಲ್ಲಿಯೇ ಮಾಡಿಕೊಂಡಿದ್ದರೂ, ಮೇ ಬಿಕ್ಕಟ್ಟು ಹಾಗೂ ರಾಜತಾಂತ್ರಿಕ ಸಂಗತಿಗಳಲ್ಲಿನ ಸೋಲುಗಳು ಪೂರ್ವನಿಯೋಜಿತ ಅವಧಿಯನ್ನು ಮುಂದೂಡುವಂತೆ ಮಾಡಿದವು. ಮೇ ಬಿಕ್ಕಟ್ಟು, ಹಿಟ್ಲರನು “ಬ್ರಿಟನ್ ಹೊರತಾದ" ವಿಸ್ತರಣೆ ಅಸಾಧ್ಯವೆಂದೂ, ಬ್ರಿಟನ್ ವಿರುದ್ಧ"ದ ವಿಸ್ತರಣೆಯೇ ಸಧ್ಯದ ಏಕೈಕ ಸಮರ್ಥ ಸಾಧ್ಯತೆಯೆಂದೂ ಮನಗಾಣುವಂತೆ ಪ್ರಭಾವ ಬೀರಿತು. ಮೇ ಬಿಕ್ಕಟ್ಟಿನ ಅನಂತರ ಅಲ್ಪಸಮಯದಲ್ಲೇ ಹಿಟ್ಲರನು A.G.N.A.ಯ ಮಿತಿಗಳನ್ನು ಮೀರಿ, ಜರ್ಮನಿಯ ನೌಕಾ ನಿರ್ಮಾಣಗಳಿಗೆ ವೇಗ ನೀಡಲು ಆದೇಶಿಸಿದನು, ಮತ್ತು ಹಿಟ್ಲರ ಆದೇಶಗಳ ಮೇರೆಗೆ ಹೊರತಂದ “ಹೇಯ್ ವಿಜ್ಞಾಪನೆ" (Heye memorandum)ಯಲ್ಲಿ ಮೊದಲಬಾರಿಗೆ ರಾಯಲ್ ನೆವಿಯನ್ನು ಕ್ರೀಗ್ಸ್‌ಮರೈನ್ (Kriegsmarine) ನ ಪ್ರಮುಖ ವಿರೋಧಿಯೆಂದು ಊಹಿಸಿದ್ದನು. ಮೇ ೨೮, ೧೯೩೮ರ ಗೋಷ್ಟಿಯಲ್ಲಿ ಹಿಟ್ಲರ್, ಅದೇ ವರ್ಷ ಅಕ್ಟೋಬರ್ ೧ರ ವೇಳೆಗೆ “ಝೆಕೋಸ್ಲೋವಾಕಿಯಾದ ನಿರ್ನಾಮ" ತನ್ನ ಬದಲಾಯಿಸಲಾಗದ ನಿರ್ಧಾರವೆಂದು ಘೋಷಿಸಿದನು. ಪೂರ್ವ ಪಾರ್ಶ್ವವನ್ನು ಗಳಿಸಿಕೊಂಡು “ಪಶ್ಚಿಮದ- ಇಂಗ್ಲೆಂಡ್ ಮತ್ತು ಫ್ರಾನ್ಸ್ ವಿರುದ್ಧ ಮುನ್ನಡೆಯುವುದಕ್ಕಾಗಿ" ಎಂದು ಅದನ್ನು ವಿವರಿಸಲಾಯಿತು. ಅದೇ ಗೋಷ್ಟಿಯಲ್ಲಿ ಹಿಟ್ಲರನು, ಬ್ರಿಟನ್ನಿನ ಸಶಸ್ತ್ರೀಕರಣ ಸಂಪೂರ್ಣವಾಗದ ಹೊರತು ಅದು ಯುದ್ಧದ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲವೆಂಬ ತನ್ನ ನಂಬಿಕೆಯನ್ನು ವ್ಯಕ್ತಪಡಿಸಿದನು. ಈ ಪ್ರಕ್ರಿಯೆಯು ಸುಮಾರು ೧೯೪೧-೪೨ರವರೆಗೆ ಆಗಬಹುದೆಂದೂ, ಆ ನಡುವಿನ ೧೯೩೮-೪೨ರ ಮಧ್ಯಂತರದಲ್ಲಿ ಜರ್ಮನಿಯು ಯುರೋಪಿನಲ್ಲಿ ಫ್ರಾನ್ಸ್ ಮತ್ತದರ ಮಿತ್ರ ರಾಷ್ಟ್ರಗಳ ನಿರ್ಮೂಲನಕ್ಕಾಗಿ ನಿರಂತರ ಯುದ್ಧಗಳಲ್ಲಿ ತೊಡಗಿರಬಹುದೆಂದೂ ಹಿಟ್ಲರ್ ಭಾವಿಸಿದ್ದನು. ೧೯೩೮ರಲ್ಲಿ Fall Grün ಕಾರ್ಯಾಚರಣೆ ನಡೆಸುವ ಹಿಟ್ಲರನ ಧೃಢನಿಶ್ಚಯವು ಜರ್ಮನಿಯ ಅಧಿಕಾರ ಸಂರಚನೆಯಲ್ಲಿ ಅತಿದೊಡ್ಡ ಬಿಕ್ಕಟ್ಟಿಗೆ ಪ್ರಚೋದನೆ ನೀಡಿತು. ಜರ್ಮನ್ ಜನರಲ್ ಸಿಬ್ಬಂದಿಯ ಮುಖ್ಯಸ್ಥ ಲುಡ್ವಿಗ್ ಬೆಕ್, Fall Grün ಜರ್ಮನಿಗೆ ಸೋಲು ತಂದೊಡ್ಡುವ ವಿಶ್ವಯುದ್ಧಕ್ಕೆ ಕಾರಣವಾಗುವುದೆಂದು ದೀರ್ಘ ಸರಣಿಯ ವಿಜ್ಞಾಪನೆಗಳ ಮೂಲಕ ಪ್ರತಿಭಟಿಸಿದನು, ಮತ್ತು ಯೋಜಿತ ಯುದ್ಧದಿಂದ ಹಿಟ್ಲರನು ಹಿಂದೆ ಸರಿಯಬೇಕೆಂದು ಒತ್ತಾಯಪಡಿಸಿದನು. ಯುದ್ಧಕ್ಕೆ ವಿರುದ್ಧವಾದ ಬೆಕ್‌ನ ವಾದಗಳನ್ನು ಹಿಟ್ಲರ್ "kindische Kräfteberechnugen" (“ಬಾಲಿಶ ಲೆಕ್ಕಾಚಾರಗಳು") ಎಂದು ಕರೆದನು. ೪ ಆಗಸ್ಟ್ ೧೯೩೮ರಂದು ಸೇನೆಯ ಗುಪ್ತಸಭೆ ಏರ್ಪಟಾಗಿ, ಬೆಕ್ ಅದರಲ್ಲಿ ತನ್ನ ವರದಿಯನ್ನು ಓದಿದನು. ಅವರೆಲ್ಲರೂ, ಬಂದೊದಗಲಿರುವ ವಿನಾಶವನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನಾದರೂ ಮಾಡಬೇಕೆಂದು ಒಮ್ಮತದಿಂದ ನಿರ್ಣಯಿಸಿದರು.ಬೆಕ್‌ನು, ಅವರೆಲ್ಲರೂ ತನ್ನೊಟ್ಟಿಗೆ ರಾಜೀನಾಮೆ ನೀಡುವರೆಂದು ತಿಳಿದಿದ್ದನು. ಆದರೆ ಬೆಕ್ ಒಬ್ಬನ ಹೊರತಾಗಿ ಯಾರೂ ರಾಜೀನಾಮೆ ನೀಡಲಿಲ್ಲ.ಆತನ ಬದಲಾಗಿ ನೇಮಕಗೊಂಡ ಜನರಲ್ ಫ್ರಾನ್ಝ್ ಹಾಲ್ಡರ್ (General Franz Halder), ಬೆಕ್ಕನೊಡನೆ ಸಹಮತವಿರಿಸಿಕೊಂಡಿದ್ದನು, ಮತ್ತು ಅವರಿಬ್ಬರು ಕೆಲವು ಪ್ರಮುಖ ಜನರಲ್‌ಗಳು, ಅಡ್ಮಿರಲ್ ವಿಲ್‌ಹೆಮ್ ಕೆನರೀಸ್ (Admiral Wilhelm Canaris - ಜರ್ಮನ್ ಗುಪ್ತಚರ ಇಲಾಖೆಯ ಮುಖ್ಯಸ್ಥ), ಮತ್ತು ಗ್ರಾಫ್ ವೊನ್ ಹೆಲ್ಡೋರ್ಫ್ (Graf von Helldorf- ಬರ್ಲಿನ್ ಪೋಲಿಸ್ ಮುಖ್ಯಸ್ಥ) ಮೊದಲಾದವರನ್ನು ಭೇಟಿಮಾಡಿ, ಹಿಟ್ಲರನು ದಾಳಿಯ ಆದೇಶ ನೀಡುತ್ತಿದ್ದಂತೆಯೇ ಆತನನ್ನು ಬಂಧಿಸುವಂತೆ ಪಿತೂರಿ ನಡೆಸಿದರು. ಆದರೆ, ಫ್ರಾನ್ಸ್ ಹಾಗೂ ಬ್ರಿಟನ್‌ಗಳು ಝೆಕೋಸ್ಲೋವಾಕಿಯಾದ ರಕ್ಷಣೆಗಾಗಿ ತಾವು ಹೋರಾಡುವೆವೆಂದು ಜಗತ್ತಿಗೆ ತಿಳಿಯಪಡಿಸಿದರೆ ಮಾತ್ರ ಈ ಯೋಜನೆಯು ಯಶಸ್ವಿಯಾಗುವುದಿತ್ತು. ಇದರಿಂದ ಜರ್ಮನಿಯ ಜನತೆಗೆ ನಿರ್ದಿಷ್ಟ ಸೋಲಿನ ಕುರಿತು ಮನವರಿಕೆ ಮಾಡಿಕೊಡಲು ಸಹಕಾರಿಯಾಗುತ್ತಿತ್ತು. ಝೆಕೋಸ್ಲೋವಾಕಿಯಾ ದಾಳಿಯ ಯೋಜನೆ ಸಿದ್ಧಗೊಂಡಿದೆಯೆಂದೂ, ಹಾಗೊಮ್ಮೆ ಅದು ನಡೆದರೆ ತಾವು ಹಿಟ್ಲರನನ್ನು ಕೆಳಗಿಳಿಸುವುದಾಗಿಯೂ ಚೆಂಬರ್ಲೀನ್‌ರಿಗೆ ತಿಳಿಸಲು ಇಂಗ್ಲೆಂಡಿಗೆ ಏಜೆಂಟ್‌ಗಳನ್ನು ಕಳಿಹಿಸಲಾಯ್ತು. ಆದರೆ, ಬ್ರಿಟಿಷರು ಈ ಸಂದೇಶವಾಹರನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಸೆಪ್ಟೆಂಬರಿನಲ್ಲಿ, ಚೆಂಬರ್ಲೈನ್ ಮತ್ತು ಡಲಡೀರ್, ಝೆಕೋಸ್ಲೋವಾಕಿಯಾದ ಮೇಲೆ ಯುದ್ಧ ಬೆದರಿಕೆ ಇರದೆಂದೂ, ಆ ಕಾರಣದಿಂದ ಹಿಟ್ಲರನ ಉಚ್ಚಾಟನೆ ಸಮರ್ಥನೀಯವಲ್ಲವೆಂದೂ ನಿರ್ಧರಿಸಿದರು. ಈ ಕಾರಣದಿಂದ, ಮ್ಯೂನಿಕ್ ಒಪ್ಪಂದವು ಹಿಟ್ಲರನನ್ನು ಅಧಿಕಾರದಲ್ಲಿ ಉಳಿಸಿತು. ೧೯೩೮ರ ಅಗಸ್ಟ್ ನಲ್ಲಿ ಜರ್ಮನಿಯು ತನ್ನ ಚಲನೆಯನ್ನು ಆರಂಭಿಸಿರುವುದರ ಕುರಿತ ಮಾಹಿತಿಗಳು ಲಂಡನ್ನನ್ನು ತಲುಪಲಾರಂಭಿದವು. ಇದರ ಜೊತೆಗೇ, ಜರ್ಮನಿ ಸೇನೆಯಲ್ಲಿದ್ದ ಯುದ್ಧವಿರೋಧೀ ಬಣಗಳು ಸೆಪ್ಟೆಂಬರ್‌ನಲ್ಲಿ ಯುದ್ಧ ನಿಗದಿಯಾಗಿರುವ ಬಗ್ಗೆ ಮಾಹಿತಿ ರಟ್ಟು ಮಾಡತೊಡಗಿದರು. ಅಂತಿಮವಾಗಿ, ಫ್ರೆಂಚರ ಅದರಲ್ಲೂ ವಿಶೇಷವಾಗಿ ಬ್ರಿಟಿಶರ ರಾಜತಾಂತ್ರಿಕ ಒತ್ತಡಕ್ಕೆ ಮಣಿದು, ಅಧ್ಯಕ್ಷ ಎಡ್ವರ್ಡ್ ಬೆನೆಸ್ (Edvard Beneš), ೫ ಸೆಪ್ಟೆಂಬರ್ ೧೯೩೮ರಂದು ತನ್ನ ದೇಶದ ಪುನರ್ಸಂಘಟನೆಗಾಗಿ “ನಾಲ್ಕನೇ ಯೋಜನೆ"(Fourth Plan) ಯನ್ನು ಪ್ರಕಟಿಸಿ, ಹೆನ್ಲೀನನು ಏಪ್ರಿಲ್ ೧೯೩೮ರಂದು ಮಾಡಿದ ಕಾರ್ಲ್ಸ್‌ಬಾಡ್ (Karlsbad) ಭಾಷಣದಲ್ಲಿ ಪ್ರಸ್ತಾಪಿಸಿದ ಸುಡೆಟೆನ್ ಸ್ವಯಮಾಧಿಪತ್ಯದ ಬೇಡಿಕೆಗಳಲ್ಲಿ ಹೆಚ್ಚಿನವನ್ನು ಮಾನ್ಯ ಮಾಡುವುದಾಗಿ ಹೇಳಿದರು. ಹಾಗೆಯೇ ಕಲಹ ಹೂಡಲು ನೆಪ ಅರಸುತ್ತಿರುವ ಜರ್ಮನಿಯ ವಿರುದ್ಧ ಎಚ್ಚರಿಕೆಯ ಬೆದರಿಕೆ ಹಾಕಿದರು. ನಾಲ್ಕನೇ ಯೋಜನೆಗೆ ಪ್ರತಿಕ್ರಿಯಿಸಿದ ಹೆನ್ಲೀನನ ಹೀಮ್‌ಫ್ರಂಟ್ , ಝೆಕೋಸ್ಲೋವಾಕಿಯಾದ ಪೋಲಿಸರೊಂದಿಗೆ ಸರಣಿ ಹಿಂಸಾತ್ಮಕ ಘರ್ಷಣೆಗಿಳಿಯಿತು ಮತ್ತು ಸೆಪ್ಟೆಂಬರ್ ಮಧ್ಯಭಾಗದ ದೊಡ್ಡ ಮಟ್ಟದ ಘರ್ಷಣೆಗಳು ಸುಡೆನ್ಟನ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಾರ್ಶಲ್ ಕಾನೂನಿನ ಹೇರಿಕೆಗೆ ದಾರಿ ಮಾಡಿಕೊಟ್ಟವು. ೧೯೩೮ರ ಅಗಸ್ಟ್ ಕೊನೆಯ ಭಾಗದಲ್ಲಿ ಗೋಚರಿಸತೊದಗಿದ ಕೇಡಿನ ಮುನ್ಸೂಚನೆಗೆ ಪ್ರತಿಕ್ರಿಯೆಯಾಗಿ, ಬ್ರಿಟಿಷ್ ಪ್ರಧಾನಿ ನೆವಿಲ್ ಚೇಂಬರ್ಲೈನ್ (Neville Chamberlain) z ಯೋಜನೆ (Plan Z)ಯನ್ನು ಅಳವಡಿಸಿಕೊಂಡರು. ಅದರ ಪ್ರಕಾರ, ಜರ್ಮನಿಗೆ ಹಾರುವುದು, ಹಿಟ್ಲರನನ್ನು ಭೇಟಿ ಮಾಡುವುದು ಮತ್ತು ಸದ್ಯಕ್ಕೆ ಉಂಟಾಗಿರುವ ಬಿಕ್ಕಟ್ಟಿಗೆ ಕೊನೆಹಾಡುವುದು ಅವರ ಉದ್ದೇಶವಾಗಿತ್ತು. ೧೩ ಸೆಪ್ಟೆಂಬರ್ ೧೯೩೮ರಂದು ಚೆಂಬರ್ಲೈನ್ ಜರ್ಮನಿಗೆ ಭೇಟಿ ನೀಡಿ ಬಿಕ್ಕಟ್ಟು ಪರಿಹಾರದ ಕುರಿತು ಚರ್ಚೆನಡೆಸುವಂತೆ ಕರೆ ನೀಡಲಾಯಿತು. ಸೆಪ್ಟೆಂಬರ್ ೧೮ರ ನಂತರ ಯಾವ ಕ್ಷಣದಲ್ಲಾದರೂ ದಾಳಿ ಆರಂಭವಾಗಬಹುದೆಂದು ಜರ್ಮನ್ ವಿರೋಧಿಗಳು ನೀಡಿದ ದಾರಿತಪ್ಪಿದ ಮಾಹಿತಿಯನ್ನನುಸರಿಸಿ, ಅದಕ್ಕೆ ಪ್ರತಿಕ್ರಿಯೆಯಾಗಿ ಚೆಂಬರ್ಲೈನ್ z ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದರು. ಹಿಟ್ಲರನು ಚೆಂಬರ್ಲೈನರ ಪ್ರಸ್ತಾಪದಿಂದ ಸಂತುಷ್ಟನಾಗದಿದ್ದರೂ, ಅದನ್ನು ತಿರಸ್ಕರಿಸುವುದರಿಂದ ಬೆನೆಸ್ನ ತಾನು ಶಾಂತಿಪ್ರಿಯನೂ ಯುದ್ಧಪ್ರವೃತ್ತಿಯಿಲ್ಲದವನೂ ಆಗಿದ್ದು, ಬೆನೆಸ್‌ನ ಹಟಮಾರಿತನದಿಂದಾಗಿ ಇದರಲ್ಲಿ ತೊಡಗಿರುವನೆಂಬ ತನ್ನ ಪುನರಾವರ್ತಿತ ಹೇಳಿಕೆಗಳಿಗಳು ಹುಸಿಹೋಗುವವೆಂದು ಯೋಚಿಸಿ, ಅವನು ಬ್ರಿಟಿಶ್ ಪ್ರಧಾನಿಯನ್ನು ಭೇಟಿಯಾಗಲು ಸಮ್ಮತಿಸಿದನು.ಬರ್ಕ್‌ಟೆಸ್‌ಗಾಡೆನ್‌ (Berchtesgaden) ನಲ್ಲಿ ನಡೆದ ಶೃಂಗ ಸಭೆಯಲ್ಲಿ ಚೆಂಬರ್ಲೈನ್‌ರು, ಹಿಟ್ಲರನು ಸುಡೆನ್ಟನ್ ಲ್ಯಾಂಡ್‌ (Sudetenland) ಅನ್ನು ಜರ್ಮನಿಗೆ ಸೇರಿಸುವಂತೆ ಸಾರ್ವಜನಿಕವಾಗಿ ಮುಂದಿಟ್ಟ ಬೇಡಿಕೆಗೆ ಬೆಂಬಲವಾಗಿ ಬೆನೆಸ್ನ ಮೇಲೆ ಒತ್ತಡ ತರುವುದಾಗಿಯೂ, ಅದಕ್ಕೆ ಪ್ರತಿಯಾಗಿ ತಾವು ನೀಡಿದ ವಾಗ್ದಾನ ಪೂರೈಕೆಗೆ ಸಮಯಾವಕಾಶ ನೀಡಿ ಮಿಲಿಟರಿ ಕಾರ್ಯಾಚರಣೆಯನ್ನು ಮುಂದೂಡುವುದಾಗಿ ಹಿಟ್ಲರ್ ವಾಗ್ದಾನ ನೀಡಬೇಕೆಂದೂ ಆಗ್ರಹಿಸಿದರು. ಚೆಂಬರ್ಲೈನ್, ಸುಡೆನ್ಟನ್ ಹಸ್ತಾಂತರದ ವಿಷಯದಲ್ಲಿ ಪ್ರಾಗ್ ಸಮ್ಮತಿಯನ್ನು ಗಳಿಸಲು ವಿಫಲರಾಗುವರೆಂಬ ನಿರೀಕ್ಷೆಯಿಂದ ಹಿಟ್ಲರನು ಕಾರ್ಯಾಚರಣೆ ಮುಂದೂಡಿಕೆಗೆ ಒಪ್ಪಿಗೆ ನೀಡಿದನು. ಆದರೆ, ಫ್ರಾಂಕೋ ಬ್ರಿಟಿಷ್ ಒತ್ತಡದಿಂದ ಅದು ಸಾಧಿತಗೊಂಡಾಗ ಅವನಿಗೆ ಎಲ್ಲ ಬಗೆಯಿಂದಲೂ ತೀವ್ರ ನಿರಾಸೆ ಉಂಟಾಯಿತು. ಸೆಪ್ಟೆಂಬರ್ ೧೯೩೮ರಲ್ಲಿ ಹಿಟ್ಲರ್ ಹಾಗೂ ಚೆಂಬರ್ಲೈನ್ ನಡುವೆ ನಡೆದ ಮಾತುಕಥೆಗಳು ಮತ್ತಷ್ಟು ಜಟಿಲತೆಯನ್ನು ತಂದೊಡ್ಡಿದವು. ಯುರೋಪ್ ಹೇಗಿರಬೇಕೆಂಬ ವಿಷಯದ ಬಗ್ಗೆ ಅವರಿಬ್ಬರಲ್ಲಿ ಅಗಾಧ ಭಿನ್ನಾಭಿಪ್ರಾಯಗಳಿದ್ದು, ಹಿಟ್ಲರನು ಸುಡೆನ್ಟನ್ ಪ್ರಕರಣವನ್ನು ಯುದ್ಧಕ್ಕೆ ನೆವವಾಗಿ ಬಳಸಿಕೊಳ್ಳಲು ಹವೈಸುತ್ತಿದ್ದರೆ, ಚೆಂಬರ್ಲೈನ್ ಅಂತಃಕರಣಪೂರ್ವಕವಾಗಿ ಶಾಂತಿಯುತ ಪರಿಹಾರವನ್ನು ಎದುರುನೋಡುತ್ತಿದ್ದರು. ಚೆಂಬರ್ಲೈನರು ಬಾಡ್ ಗೋಡೆಸ್‌ಬರ್ಗ್ (Bad Godesberg)ನಲ್ಲಿ ಆಯೋಜನೆಗೊಂಡಿದ್ದ ಶೃಂಗಸಭೆಯಲ್ಲಿ ಸುಡೆನ್ಟನ್ ಹಸ್ತಾಂತರಕ್ಕೆ ಶಾಂತಿಯುತ ಯೋಜನೆಯನ್ನು ಪ್ರಸ್ತುತಪಡಿಸಲು ಸೆಪ್ಟೆಂಬರ್ ೨೨ರಂದು ಜರ್ಮನಿಗೆ ತೆರಳಿದರು. ಆದರೆ, ಹಿಟ್ಲರನು ತಾನೇ ಬರ್ಕ್‌ಟೆಸ್‌ಗಾಡೆನ್‌ (Berchtesgaden) ನಲ್ಲಿ ಮುಂದಿಟ್ಟಿದ್ದ ಕರಾರುಗಳನ್ನು ಒಪ್ಪಲಾಗದೆಂದು ಈಗ ತಿರಸ್ಕರಿಸತೊಡಗಿದ್ದು ಬ್ರಿಟಿಷ್ ರಾಯಭಾರಿಗಳಲ್ಲಿ ಅಹಿತಕರ ಅಚ್ಚರಿ ಮೂಡಿಸಿದವು. ಚೆಂಬರ್ಲೈನರ ಶಾಂತಿ ಪ್ರಸ್ತಾಪನೆಗಳಿಗೆ ಒಮ್ಮೆಲೇ ಅಂತ್ಯ ನೀಡುವುದಕ್ಕಾಗಿ ಹಿಟ್ಲರನು ಮತ್ತಷ್ಟು ಬೇಡಿಕೆಗಳನ್ನು ಮುಂದಿಟ್ಟನು. ಅದರಂತೆ- ಸುಡೆನ್ಟೆನ್ಲ್ಯಾಂಡ್ ಅನ್ನು ಸೆಪ್ಟೆಂಬರ್ ೨೮ರ ಒಳಗೆ ಪ್ರಾಗ್ ಹಾಗೂ ಬರ್ಲಿನ್ ನಡುವೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳದೇ ಜರ್ಮನಿಗೆ ಹಸ್ತಾಂತರಿಸಬೇಕು ಮತ್ತು ಈ ವರ್ಗಾವಣೆಗೆ ಅಂತಾರಾಷ್ಟ್ರೀಯ ಮಂಡಳಿಯ ಯಾವ ನಿರೀಕ್ಷಕರೂ ಇರಬಾರದು; ಒಳಿತನ್ನು ತರುವುದಕ್ಕಾಗಿ, ಝೆಕೋಸ್ಲೋವಾಕಿಯಾದ ವಿರುದ್ಧ ಪೋಲ್ಯಾಂಡ್ ಹಾಗೂ ಹಂಗೆರಿಗಳ ಆರೋಪಗಳು ತೃಪ್ತಿಕರವಾಗಿ ಪರಿಹಾರಗೊಳ್ಳುವವರೆಗೆ ಜರ್ಮನಿಯು ಯುದ್ಧ ಕೈಬಿಡದು. ಈ ಇಬ್ಬರು ನಾಯಕರ ಭಿನ್ನ ನೋಟಗಳು, ಚೆಂಬರ್ಲೈನ್ರು ಹಿಟ್ಲರನ ಹೊಸ ಬೇಡಿಕೆಗಳನ್ನು ಹಾಗೂ ಅಂತಿಮ ಷರತ್ತು ನಿರ್ದೇಶಕಗಳನ್ನು ವಿರೋಧಿಸಿದ, ಹಾಗೂ ಹಿಟ್ಲರನು ತಾನು ಮುಂದಿಟ್ಟ ಬೇಡಿಕೆಗಳ ದಾಖಲೆಯು “ವಿಜ್ಞಾಪನೆ" ಎಂದಿರುವುದರಿದ ಅದು ಅಂತಿಮ ಷರತ್ತು ನಿರ್ದೇಶಕಗಳನ್ನು ಪ್ರತಿ ಹೇಳಿಕೆ ನೀಡಿದ ಸನ್ನಿವೇಶವು ಬಹಳ ಚೆನ್ನಾಗಿ ಸಾಂಕೇತಿಸುತ್ತದೆ. ೨೫ ಸೆಪ್ಟೆಂಬರ್ ೧೯೩೮ರಂದು ಬ್ರಿಟನ್, ಬಾಡ್ ಗೋಡೆಸ್ಬರ್ಗಿನ ಷರತ್ತು ನಿರ್ದೇಶಕಗಳನ್ನು ತಿರಸ್ಕರಿಸಿತು ಮತ್ತು ಯುದ್ಧ ತಯಾರಿಯನ್ನು ಆರಂಭಿಸಿತು. ಗಮನೀಯವಾದ ಮತ್ತೊಂದು ಬೆಳವಣಿಗೆಯಲ್ಲಿ, ಬ್ರಿಟಿಷ್ ಸರ್ಕಾರದ ಮುಖ್ಯ ಕೈಗಾರಿಕಾ ಸಲಹೆಗಾರ ಸರ್ ಹೊರೇಸ್ ವಿಲ್ಸನ್, ಜರ್ಮನ್ನರು ಝೆಕೋಸ್ಲೋವಾಕಿಯಾದ ಮೇಲೆ ಆಕ್ರಮಣ ನಡೆಸಿದರೆ, ಫ್ರಾನ್ಸ್ ೧೯೨೪ರ ಫ್ರಾಂಕೋ ಝೆಕೋಸ್ಲೋವಾಕ್ ಒಪ್ಪಂದವನ್ನು ಮಾನ್ಯ ಮಾಡಿ, ಅದರ ನೆರವಿಗೆ ಧಾವಿಸುವುದೆಂದೂ, ಮತ್ತು “ಫ್ರಾನ್ಸ್‌ಗೆ ಸಹಾಯಹಸ್ತ ಚಾಚುವುದು ಇಂಗ್ಲೆಂಡಿನ ಪ್ರತಿಷ್ಠೆಯ ಸಂಗತಿಯಾಗುವುದೆಂದೂ" ತಿಳಿಸಲು ಜರ್ಮನಿಗೆ ತೆರಳಿದರು. ಮೂಲತಃ ಅಕ್ಟೋಬರ್ ೧ರಂದು ಅಥವಾ ಸೆಪ್ಟೆಂಬರ್ ೨೭ ಯಾ ೨೮ರಂದು ದಾಳಿ ನಡೆಸುವ ಧೃಢ ನಿಶ್ಚಯ ಮಾಡಿದ್ದ ಹಿಟ್ಲರ್, ಮನಸು ಬದಲಿಸಿ, ಮುಸೋಲಿನಿಯೊಂದಿಗೆ ಮಾತುಕಥೆ ನಡೆಸಿ ಸಲಹೆಯನ್ನು ಕೇಳಲು ಮುಂದಾದನು ಹಾಗೂ ಆತನ ಮೂಲಕ ಮ್ಯೂನಿಚ್ನಲ್ಲಿ ಚೇಂಬರ್ಲೈನ್, ಮುಸೋಲಿನಿ ಹಾಗೂ ಫ್ರೆಂಚ್ ಪ್ರೀಮಿಯರ್ ಎಡ್ವರ್ಡ್ ಡಲಡೀರ್‌ (Édouard Daladier)ರೊಂದಿಗೆ ಝೆಕೋಸ್ಲೋವಾಕಿಯಾದ ಸನ್ನಿವೇಶವನ್ನು ಚರ್ಚಿಸುವ ಸಲುವಾಗಿ ಸಭೆ ಏರ್ಪಡಿಸಲು ಇಚ್ಚಿಸಿದನು. ಹೀಗೆ ಹಿಟ್ಲರ್ ಮನಸ್ಸು ಬದಲಿಸಲು ಸರಿಯಾದ ಕಾರಣಗಳು ತಿಳಿದುಬಂದಿಲ್ಲವಾದರೂ ಬಹುಶಃ ಫ್ರಾಂಕೋ ಬ್ರಿಟಿಷ್ ಎಚ್ಚರಿಕೆಗಳು ಮತ್ತು ಬ್ರಿಟಿಷರ ಕ್ಷಿಪ್ರ ಕಾರ್ಯಾಚರಣೆಗಳು ಫಾಲ್ ಗ್ರ್ಯೂನ್ (Fall Grüನ) ನ ಅಂತಿಮ ಫಲಿತಾಂಶದ ಬಗೆಗ್ ಆತನಲ್ಲಿ ಸ್ಪಷ್ಟ ಕಲ್ಪನೆ ಮೂಡಿಸಿರಬೇಕು. ಆತನ ಸಲಹೆಗಾರರ ದೃಷ್ಟಿಯಲ್ಲಿ ಜರ್ಮನಿಯಿನ್ನೂ ಮಹಾಯುದ್ಧಕ್ಕೆ ತಕ್ಕಂತೆ ಸೇನಾ ಸಂಘಟನೆಯ ದೃಷ್ಟಿಯಿಂದಲಾಗಲೀ ಆರ್ಥಿಕವಾಗಿಯಾಗಲೀ ಸಿದ್ಧಗೊಂಡಿರಲಿಲ್ಲ; ಅದಲ್ಲದೆ ಆತನಿಗೆ ದೊರೆತ ಎಚ್ಚರಿಕೆಗಳ ಪ್ರಕಾರ ಹಿಟ್ಲರನು ತನ್ನ ಭವಿಷ್ಯದ ಮೈತ್ರಿಕೂಟದ ಸದಸ್ಯರಾದ ಇಟಲಿ, ಜಪನ್, ಪೋಲ್ಯಾಂಡ್ ಮತ್ತು ಹಂಗೆರಿಗಳು ಜರ್ಮನಿಯ ಪರವಾಗಿ ಯುದ್ಧ ಮಾಡಲು ಸಿದ್ಧವಿರಲಿಲ್ಲ; ಅಷ್ಟೇ ಅಲ್ಲದೆ, ಬಹುಪಾಲು ಜರ್ಮನ್ನರಿಗೆ ಯುದ್ಧದ ಬಗ್ಗೆ ಯಾವುದೇ ಬಗೆಯ ಕಾತರವಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಜರ್ಮನಿಯು ತೈಲ ಮತ್ತಿತರ ಕಚ್ಚಾವಸ್ತುಗಳ ಕೊರತೆಯನ್ನೆದುರಿಸುತ್ತಿತ್ತು (ಜರ್ಮನ್ ಯುದ್ಧಕ್ಕೆ ತೈಲ ಉತ್ಪಾದಿಸಲು ಸ್ಥಾಪಿಸಲಾದ ಕಾರ್ಖಾನೆಗಳು ಆಗಿನ್ನೂ ಕಾರ್ಯಾರಂಭ ಮಾಡಿರಲಿಲ್ಲ), ಮತ್ತು ಅದು ತೈಲಕ್ಕಾಗಿ ಹೊರದೇಶಗಳ ಆಮದಿನ ಮೇಲೆ ವಿಪರೀತವಾಗಿ ಅವಲಂಬಿಸಿಕೊಂಡಿತ್ತು.ಕ್ರೀಗ್ಸ್‌ಮರಿನ್ (Kriegsmarine) ವರದಿಯಲ್ಲಿ, ಬ್ರಿಟನ್ನಿನೊಡನೆಯ ಯುದ್ಧದಲ್ಲಿ ಬ್ರಿಟಿಷ್ ಮುತ್ತಿಗೆಯನ್ನು ಅದು ಮುರಿಯಲಾಗದು, ಹಾಗೂ ಜರ್ಮನಿಯಲ್ಲಿ ತೈಲ ದಾಸ್ತಾನು ಅತ್ಯಂತ ಕಡಿಮೆ ಇರುವುದರಿಂದ ಅದು ಇತರೆಲ್ಲ ಕಾರಣಗಳಿಗಿಂತ ಹೆಚ್ಚಾಗಿ ಕೇವಲ ತೈಲದ ಕೊರತೆಯಿಂದಲೇ ಸೋತು ಹೋಗುವುದು ಎಂದು ಹೇಳಲಾಗಿತ್ತು. ಆರ್ಥಿಕ ಸಚಿವಾಲಯವು ಹಿಟ್ಲರನಿಗೆ, ಜರ್ಮನಿಯು ಕೇವಲ ೨.೬ ಮಿಲಿಯನ್ ಟನ್‌ಗಳಷ್ಟು ತೈಲ ದಾಸ್ತಾನು ಹೊಂದಿದೆಯೆಂದೂ, ಬ್ರಿಟನ್ ಹಾಗೂ ಫ್ರಾನ್ಸ್‌ ಜೊತೆಗಿನ ಯುದ್ಧಕ್ಕೆ ಕನಿಷ್ಠ ಪಕ್ಷ ೭.೬ ಮಿಲಿಯನ್ ಟನ್‌ಗಳಷ್ಟು ತೈಲದ ಅವಶ್ಯಕತೆ ಬೀಳುವುದೆಂದೂ ತಿಳಿಸಿತು. ೧೯೩೮ರ ಸೆಪ್ಟೆಂಬರ್ ೧೮ರಿಂದ ಬ್ರಿಟಿಷರು ಜರ್ಮನಿಗೆ ಲೋಹಗಳನ್ನು ಪೂರೈಸಲು ನಿರಾಕರಿಸಲಾರಂಭಿಸಿದರು, ಮತ್ತು ಸೆಪ್ಟೆಂಬರ್ ೨೪ರಂದು ನೌಕಾಪಡೆಯು ಬ್ರಿಟಿಷ್ ಹಡಗುಗಳು ಜರ್ಮನಿಯತ್ತ ಸಾಗುವುದನ್ನು ನಿರ್ಬಂಧಿಸಿತು.ಬ್ರಿಟಿಷರು ಹ್ಯಾಂಬರ್ಗಿಗೆ ೮,೬೦೦ ಟನ್‌ಗಳಷ್ಟು ತೈಲ ಕೊಂಡೊಯ್ಯುತ್ತಿದ್ದ ಇನ್ವೆರ್ಶನ್ನೊನ್ (Invershannon ) ಟ್ಯಾಂಕರನ್ನು ತಡೆಹಿಡಿದುದರ ಪರಿಣಾಮವಾಗಿ, ಜರ್ಮನಿಯು ತತ್‌ಕ್ಷಣದ ಆರ್ಥಿಕ ಆಘಾತಕ್ಕೊಳಗಾಯಿತು. ತೈಲಕ್ಕಾಗಿ ಜರ್ಮನಿಯ ಅವಲಂಬನೆ (೧೯೩೦ರ ದಶಕದಲ್ಲಿ ಜರ್ಮನಿಯ ೮೦% ತೈಲವು ನ್ಯೂ ವರ್ಲ್ಡ್‌ನಿಂದ ಪೂರೈಕೆಯಾಗುತ್ತಿತ್ತು), ಮತ್ತು ಬ್ರಿಟನ್ನಿನೊಡನೆ ಯುದ್ಧದ ಸಂಭಾವ್ಯತೆಗಳು ಜರ್ಮನಿಗೆ ತೈಲ ಪೂರೈಸುವಿಕೆಯನ್ನು ತಡೆಹಿಡಿಯುವ ಪ್ರಕ್ರಿಯೆಗೆ ನಾಂದಿಯಾಯಿತು. ಕೆಲವು ಇತಿಹಾಸಕಾರರು, ಫಾಲ್ ಗ್ರ್ಯೂನ್‌ ನ ಶಾಂತಿಯುತ ಅಂತ್ಯಕ್ಕೆ ಹಿಟ್ಲರ್ ಮನಸು ಮಾಡಿದುದು ಆತನಿಗೆ ತೈಲ ಸಮಸ್ಯೆಯ ಬಗ್ಗೆ ಇದ್ದ ಕಾಳಜಿಯಿಂದಾಗಿಯೇ ಎಂದು ವಾದಿಸುತ್ತಾರೆ.

ಅಡೋಲ್ಫ್ ಹಿಟ್ಲರ್ 
ಮ್ಯುನಿಕ್ ಅಧಿವೇಶನದಲ್ಲಿ ಚೇಂಬರ್ಲೇನ್, ದ್ಯಾಲಾಡಿಯರ್, ಹಿಟ್ಲರ್ ಮತ್ತು ಮುಸೊಲಿನಿ

೧೯೩೮ರ ಸೆಪ್ಟೆಂಬರ್ ೩೦ರಂದು ಮ್ಯೂನಿಚ್‌ನಲ್ಲಿ ಏಕದಿನದ ಸಮ್ಮೇಳನವು ಆಯೋಜನೆಗೊಂಡು, ಹಿಟ್ಲರ್, ಚೆಂಬರ್ಲೈನ್, ಡಲಾಡೀರ್ ಮತ್ತು ಮುಸೋಲಿನಿ ಇದರಲ್ಲಿ ಭಾಗವಹಿಸಿದ್ದರು. ಇದು, ಸುಡೆಟೆನ್‌ಲ್ಯಾಂಡ್ ಅನ್ನು ಜರ್ಮನಿಗೆ ಹಸ್ತಾಂತರಿಸುವ ಬಗ್ಗೆ ಹಿಟ್ಲರನ ಮೇಲ್ತೋರಿಕೆಯ ಬೇಡಿಕೆಗಳನ್ನು ಕುರಿತ ಮ್ಯೂನಿಚ್ ಒಪ್ಪಂದಕ್ಕೆ ದಾರಿ ಮಾಡಿಕೊಟ್ಟಿತು. ಲಂಡನ್ ಹಾಗೂ ಪ್ಯಾರಿಸ್‌ಗಳು ವಿವಾದಿತ ಪ್ರದೇಶವನ್ನು ಮಧ್ಯ ಸೆಪ್ಟೆಂಬರ್‌ನಲ್ಲಿ ಹಸ್ತಾಂತರಿಸಲು ಅದಾಗಲೇ ಒಪ್ಪಿಕೊಂಡಿದ್ದರಿಂದ, ಮ್ಯೂನಿಚ್‌ನ ಏಕದಿನದ ಸಭೆಯಲ್ಲಿ ಬಹುಶಃ ಸುಡೆಟೆನ್‌ಲ್ಯಾಂಡ್‌ನ ಹಸ್ತಾಂತರ ಪ್ರಕ್ರಿಯೆಯು ಯಾವ ರೀತಿಯಿಂದ ನಡೆಯಬೇಕು ಎಂಬುದರ ತಾಂತ್ರಿಕ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗಿದ್ದಿರಬಹುದು. ಇದರ ಜೊತೆಗೇ, ಹಸ್ತಾಂತರ ಕುರಿತು ಹಿಟ್ಲರನ ಶರತ್ತುಗಳಲ್ಲಿ ಕೆಲವು ರಿಯಾಯಿತಿಗಳನ್ನು ಚರ್ಚಿಸಿ, ಅಕ್ಟೋಬರ್‌ನಲ್ಲಿ ಹತ್ತು ದಿನಗಳ ಅವಧಿಯಲ್ಲಿ ಅದನ್ನು ನಡೆಸಲಾಗುವುದೆಂದೂ, ಅಂತಾರಾಷ್ಟ್ರೀಯ ಸಮಿತಿಯು ಅದರ ಮೇಲ್ವಿಚಾರಣೆ ನಡೆಸುವುದೆಂದೂ, ಈ ನಿಟ್ಟಿನಲ್ಲಿ ಹಿಟ್ಲರನು ಹಂಗೆರಿ ಹಾಗೂ ಪೋಲೆಂಡ್‌ಗಳ ಸಮಸ್ಯೆ ಪರಿಹಾರವಾಗುವವರೆಗೆ ಕಾಯಬಾರದೆಂದೂ ಗೊತ್ತುವಳಿ ಮಾಡಲಾಯಿತು. ಸಭೆಯ ಅಂತ್ಯದಲ್ಲಿ ಚೆಂಬರ್ಲೈನ್‌ರು ಆಂಗ್ಲೋ ಬ್ರಿಟನ್ ಮೈತ್ರಿಯ ಘೋಷಣೆಗೆ ಹಿಟ್ಲರನಿಂದ ಸಹಿಯನ್ನು ಪಡೆದರು. ಚೆಂಬರ್ಲೈನ್ ಅದಕ್ಕೆ ಬಹಳ ದೊಡ್ಡ ಮಹತ್ವ ನೀಡಿದರೆ, ಹಿಟ್ಲರ್ ಅದನ್ನು ಅಷ್ಟಾಗಿ ಪರಿಗಣಿಸದೆ ಉಳಿದನು. ಚೆಂಬರ್ಲೈನ್‌ರು ಮ್ಯೂನಿಚ್ ಸಭೆಯಿಂದ ತೃಪ್ತರಾಗಿ, ಅವರ ಅಷ್ಟೇನೂ ಖ್ಯಾತಿ ಪಡೆಯದ “ನಮ್ಮ ಸಮಯದಲ್ಲಿ ಶಾಂತಿ" ಎಂಬ ಹೇಳಿಕೆಗೆ ದಾರಿ ಮಾಡಿಕೊಟ್ಟರೆ, ಇತ್ತ ಹಿಟ್ಲರನು ೧೯೩೮ರಲ್ಲಿ ತಾನು ನಡೆಸಲು ಕಾತರಿಸಿದ್ದ ಯುದ್ಧದಿಂದ ತನ್ನನ್ನು ವಂಚಿಸಲಾಯಿತೆಂದು ಕುಪಿತಗೊಂಡಿದ್ದನು. ಶೃಂಗದ ಫಲಿತಾಂಶವಾಗಿ, ಹಿಟ್ಲರನು ೧೯೩೮ರ ಟೈಮ್ ಪತ್ರಿಕೆಯ ‘ವರ್ಷದ ವ್ಯಕ್ತಿ’ಯಾಗಿ ಆಯ್ಕೆಯಾದನು.

ಅಡೋಲ್ಫ್ ಹಿಟ್ಲರ್ 
ಮ್ಯೂನಿಕ್ ಒಪ್ಪಂದದ ಪ್ರಕಾರ ಜರ್ಮನಿಗೆ 1938ರ ಅಕ್ಟೋಬರ್‌ನಲ್ಲಿ ಹಸ್ತಾಂತರಗೊಂಡ ಜೆಕೊಸ್ಲೊವಾಕಿಯಾದ ಜರ್ಮನ್ ಜನಸಂಖ್ಯೆಯುಳ್ಳ ಸುಡೆಟೆನ್‍೬ಲ್ಯಾಂಡ್ ಪ್ರದೇಶಕ್ಕೆ ಹಿಟ್ಲರನ ಪ್ರವೇಶ.

ಹಿಟ್ಲರನ ಬಗ್ಗೆ ಸಂತುಷ್ಟಗೊಂಡ ಬ್ರಿಟನ್ ಹಾಗೂ ಫ್ರಾನ್ಸ್‌ಗಳು ಝೆಕೋಸ್ಲೋವಾಕಿಯಾವನ್ನು ಹಿಟ್ಲರನ ಕರುಣೆಗೆ ಬಿಟ್ಟುಕೊಟ್ಟರು. ಸಾರ್ವಜನಿಕವಾಗಿ ಹಿಟ್ಲರನು ತನ್ನ ಮೇಲ್ತೋರಿಕೆಯ ಬೇಡಿಕೆಗಳು ಈಡೇರಿದ್ದಕ್ಕಾಗಿ ಸಂತೋಷ ನಟಿಸುತ್ತಿದ್ದರೂ, ಮುಂದಿನ ಬಾರಿ ತಾನು ಜರ್ಮನಿಯ ಭವಿಷ್ಯದ ಬೇಡಿಕೆಗಳು ಈಡೇರುವುದಿಲ್ಲವೆಂಬ ಕಾರಣವನ್ನು ಮುಂದಿಟ್ಟುಕೊಂಡು ಯುದ್ಧ ನಡೆಸಿಯೇ ತೀರುವುದಾಗಿ ಪಣತೊಟ್ಟಿದ್ದನು. ಹಿಟ್ಲರನ ದೃಷ್ಟಿಯಲ್ಲಿ ಬ್ರಿಟಿಷ್ ದಲ್ಲಾಳಿತನದ ಶಾಂತಿ ಒಪ್ಪಂದವು, ಅದು ಜರ್ಮನಿಯ ಬೇಡಿಕೆಗಳಿಗೆ ಪೂರಕವಾಗಿದ್ದರೂ ಕೂಡ, ರಾಜಕೀಯವಾಗಿ ತನ್ನ ಸೋಲಿನಂತೆ ಭಾಸವಾಗಿತ್ತು. ಅವನು ಅದನ್ನು, ತನ್ನ ಪೂರ್ವ ರಾಜ್ಯ ವಿಸ್ತರಣೆಯ ಕನಸಿನ ಈಡೇರಿಕೆಗೆ ಬ್ರಿಟನ್ನಿನ ಅನುಮತಿ ಅಗತ್ಯವೆಂಬುದು ಸಾಧಿತಗೊಳಿಸಿದಂತೆ ಎಂದು ಭಾವಿಸಿದನು. ಬ್ರಿಟನ್ ತನ್ನನ್ನು ತಾನು ಮೈತ್ರಿಗೊಳಪಡಿಸಿಕೊಳ್ಳುವವರೆಗೆ ಹಾಗೂ ಜರ್ಮನಿಯ ಆಕಾಂಕ್ಷೆಗಳಿಂದ ದೂರವುಳಿಯುವವರೆಗೆ, ಅದನ್ನು ದೊಡ್ಡ ಬೆದರಿಕೆಯಾಗಿ ಪರಿಗಣಿಸಿದ್ದ ಹಿಟ್ಲರ್, ಮ್ಯೂನಿಚ್ ಸಭೆಯ ಅನಂತರದ ದಿನಗಳಲ್ಲಿ ಕ್ರಮೇಣವಾಗಿ ಬ್ರಿಟನ್ ಸ್ಥಾನದಲ್ಲಿ ಸೋವಿಯತ್ ಒಕ್ಕೂಟವನ್ನು ಇರಿಸಿ, ಅದೇ ತನ್ನ ಸಾಮ್ರಾಜ್ಯ ದ ದೊಡ್ಡ ಶತ್ರುವೆಂದು ತಿಳಿಯಲಾರಂಭಿಸಿದನು, ಮತ್ತು ಅದಕ್ಕೆ ತಕ್ಕಂತೆ ಜರ್ಮನ್ ನೀತಿಗಳನ್ನು ಪುನರ್ರಚಿಸಲಾರಂಭಿಸಿದನು. ೧೯೩೮ರ ಅಕ್ಟೋಬರ್ ೯ರಂದು ಸಾರ್‌ಬ್ರ್ಯೂಕೆನ್‌(Saarbrücken)ನಲ್ಲಿ ಮಾಡಿದ ಭಾಷಣದಲ್ಲಿ ಹಿಟ್ಲರನು ಮ್ಯೂನಿಚ್ ಒಪ್ಪಂದದ ಬಗ್ಗೆ ತನ್ನ ಅಸಮಾಧಾನವನ್ನು ಹೊರಗೆಡಹಿದನು. ಈ ಭಾಷಣದಲ್ಲಿ ಅವನು ಕನ್ಸರ್ವೇಟಿವ್ ಶಾಂತಿವಿರೋಧಿಗಳಾದ ವಿನ್‌ಸ್ಟನ್ ಚರ್ಚಿಲ್, ಆಲ್ಫ್ರೆಡ್ ಡಫ್ ಕೂಪರ್ ಮತ್ತು ಅಂಥೋಣಿ ಈಡೆನ್ ರ ವಿರುದ್ಧ ಹೇಳಿಕೆ ನೀಡುತ್ತಾ, ಅವರೆಲ್ಲರೂ ಯುದ್ಧ ಪಿಪಾಸುಗಳಾದ ಜರ್ಮನ್ ದ್ವೇಷಿಗಳೆಂದೂ, ಅವರು ಮೊದಲ ಅವಕಾಶದಲ್ಲೇ ಜರ್ಮನಿಯ ಮೇಲೆರಗಿ ಅಧಿಕಾರ ಸೂತ್ರ ಕಸಿಯಬಹುದೆಂದೂ ಕಿಡಿಕಾರಿದನು. ಅದೇ ಭಾಷಣದಲ್ಲಿ ಹಿಟ್ಲರ್, “ನಾವು ಜರ್ಮನರು ಆಡಳಿತದಲ್ಲಿ ಯಾವುದೇ ಬಗೆಯ ಹಸ್ತಕ್ಷೇಪಕ್ಕೆ ಅವಕಾಶ ನೀಡಲಾರೆವು.ಬ್ರಿಟನ್ ತನ್ನ ವ್ಯವಹಾರವನ್ನು ತಾನು ನೋಡಿಕೊಂಡು, ತನ್ನ ಸಮಸ್ಯೆಗಳ ಬಗ್ಗೆ ಚಿಂತಿಸುವುದು ಒಳ್ಳೆಯದು" ಎಂದು ಹೇಳಿಕೆ ನೀಡಿದನು. ನವೆಂಬರ್ ೧೯೩೮ರಲ್ಲಿ ಹಿಟ್ಲರ್, ದೊಡ್ಡ ಮಟ್ಟದ ಬ್ರಿಟಿಷ್ ವಿರೋಧಿ ಪ್ರಚಾರವನ್ನು ರೂಪಿಸಿ, ಜಗತ್ತಿನಾದ್ಯಂತ ಸಾಮ್ರಾಜ್ಯ ವಿಸ್ತರಿಸಿರುವ ಬ್ರಿಟನ್, ಜರ್ಮನಿಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ತಡೆಯೊಡ್ಡುವ ಮೂಲಕ ದ್ವಿಮುಖ ನೀತಿ (ಹಿಪಾಕ್ರಸಿ) ಅನುಸರಿಸುತ್ತಿದೆ ಎಂದು ದೊಡ್ಡ ಕಂಠದಲ್ಲಿಯೇ ಆಪಾದನೆ ಮಾಡತೊಡಗಿದನು. ಬ್ರಿಟಿಷ್ ವಿರೋಧಿ ಪ್ರಚಾರದಲ್ಲಿ ಮುಖ್ಯಾಂಶವಾಗಿ ಆತ ಬಳಸಿದ್ದು, ಪ್ಯಾಲೆಸ್ತೀನ್ ರಾಯಸವನ್ನು ಹೊರಿಸುವಾಗಿನ ಅರಬರ ಮೇಲಿನ ದೌರ್ಜನ್ಯ ಹಾಗೂ ಭಾರತದಲ್ಲಿ ಬ್ರಿಟಿಷರು ನಡೆಸುತ್ತಿದ್ದ ಬರ್ಬರ ಕೃತ್ಯಗಳು. ಇವುಗಳ ಜೊತೆಗೆ ೧೯೩೮ರ ಕ್ರಿಸ್ಟಲ್ನಶ್ಟ್ (Kristallnacht) ಸನ್ನಿವೇಶದ ಕುರಿತು ಬ್ರಿಟಿಷ್ ಟೀಕಾಕಾರರು ಅನುಸರಿಸಿದ ದ್ವಿಮುಖನೀತಿ (ಹಿಪಾಕ್ರಸಿ). ಇದು, ಜರ್ಮನ್ ಮಾಧ್ಯಮಗಳು ಬ್ರಿಟಿಷರನ್ನು ಆಪ್ತವಾಗಿ ಚಿತ್ರಿಸುತ್ತಿದ್ದ ತೃತೀಯ ಸಾಮ್ರಾಜ್ಯ ದ ಆರಂಭದ ದಿನಗಳಲ್ಲಿದ್ದ ಅಭಿಪ್ರಾಯದಲ್ಲಿ ಭಾರೀ ಬದಲಾವಣೆಯನ್ನೇ ತಂದಿತು. ನವೆಂಬರ್ ೧೯೩೮ರಲ್ಲಿ ವಿದೇಶಾಂಗ ಮಂತ್ರಿ ಜೋಕಿಮ್ ವೊನ್ ರಿಬ್ಬನ್‌ಟ್ರಾಪ್‍ನಿಗೆ(Joachim von Ribbentrop) ಕಮಿನ್‌ಟರ್ನ್ ವಿರೋಧಿ ಕೌಲನ್ನು, ಬ್ರಿಟನ್ ಮತ್ತು ಫ್ರಾನ್ಸ್ ವಿರುದ್ಧ ಯುದ್ಧ ಹೂಡುವ ಹಿನ್ನೆಲೆಯಾಗಿ ಮುಕ್ತ ಬ್ರಿಟಿಷ್ ವಿರೋಧಿ ಸೇನಾ ಮೈತ್ರಿ ಒಪ್ಪಂದವಾಗಿ ಪರಿವರ್ತಿಸುವಂತೆ ಆದೇಶ ನೀಡಲಾಯಿತು. ೧೯೩೭ರ ಜನವರಿ ೨೭ರಂದು ಹಿಟ್ಲರನು ಪಂಚವಾರ್ಷಿಕ ನೌಕಾವಿಸ್ತರಣೆ ಕಾರ್ಯಕ್ರಮವಾದ ಝಡ್ ಪ್ಲ್ಯಾನ್‌ಗೆ ಸಮ್ಮತಿ ನೀಡಿದನು. ಇದು, ರಾಯಲ್ ನೆವಿಯನ್ನು ಧೂಳಿಪಟ ಮಾಡುವ ಉದ್ದೇಶದಿಂದ ೧೯೪೪ರ ಒಳಗಾಗಿ ಕ್ರೀಗ್ಸ್‌ಮರೈನ್‌ ಗೆ ೧೦ ಯುದ್ಧ ನೌಕೆಗಳು, ನಾಲ್ಕು ಏರ್‌ಕ್ರಾಫ್ಟ್ ಕ್ಯಾರಿಯರ್‌ಗಳು, ಮೂರು ಬ್ಯಾಟಲ್ ಕ್ರ್ಯೂಸರ್‌ಗಳು, ಎಂಟು ಭಾರದ ಕ್ರ್ಯೂಸರ‍್‌ಗಳು, ೪೪ ಹಗುರ ಕ್ರ್ಯೂಸರ್‌ಗಳು, ೬೮ ವಿನಾಶಕಗಳು, ಮತ್ತು ೨೪೯ ಯು ಬೋಟ್‌ಗಳನ್ನು ಹೊಂದಿಸುವುದಕ್ಕಾಗಿ ರೂಪಿಸಿದ ಯೋಜನೆಯಾಗಿತ್ತು. ಅಲ್ಲಿಂದ ಮುಂದೆ, "ಕಚ್ಚಾವಸ್ತು ಪೂರೈಕೆಯಲ್ಲಿ, ಹಣ ಮಂಜೂರಾತಿಯಲ್ಲಿ ಹಾಗೂ ನುರಿತ ಕೆಲಸಗಾರರ ನೇಮಕಾತಿಯಲ್ಲಿ ಕ್ರೀಗ್ಸ್‌ಮರೈನ್‌ ನ ಸ್ಥಾನ ಮೂರನೆಯದರಿಂದ ಮೊದಲನೆಯದಕ್ಕೆ ಏರಬೇಕು" ಎಂಬ ಆದೇಶದಲ್ಲಿ ಹಿಟ್ಲರನು ಝಡ್ ಪ್ಲ್ಯಾನಿಗೆ ನೀಡಿದ್ದ ಪ್ರಾಮುಖ್ಯತೆಯು ಎಂಥದೆಂಬುದು ಅರಿವಾಗುತ್ತದೆ. ೧೯೩೯ರ ವಸಂತದಲ್ಲಿ, ಬ್ರಿಟಿಷ್ ನಗರಗಳನ್ನು ನೆಲಸಮ ಮಾಡಬಲ್ಲಂಥ ಕಾರ್ಯತಂತ್ರವುಳ್ಳ ಬಾಂಬಿಂಗ್ ಫೋರ್ಸ್‌ಗಳನ್ನು ನಿರ್ಮಿಸುವಂತೆ ಲಫ್ಟ್‌ವಫ್ಫೆ (Luftwaffe) ಗೆ ಆದೇಶ ನೀಡಲಾಯಿತು. ಬ್ರಿಟನ್ ವಿರುದ್ಧ ಹಿಟ್ಲರನ ಕಾರ್ಯಯೋಜನೆಯು ಕ್ರೀಗ್ಸ್‌ಮರೈನ್- ಲುಫ್ಟ್‌ವಫ್ಫೆ ಜಂಟಿ ಯೋಜನೆಯೆನಿಸಿತು. “ಬ್ರಿಟನ್‌ಗೆ ಅಗತ್ಯ ವಸ್ತು ಪೂರೈಕೆಯಲ್ಲಿ ತಡೆಯುಂಟಾದ ತತ್‌ಕ್ಷಣ ಅದು ಶರಣಾಗತನಾಗುವ ಅನಿವಾರ್ಯಕ್ಕೆ ದೂಡಲ್ಪಡುತ್ತದೆ" ಎಂಬ ನಿರೀಕ್ಷೆಯಿಂದ ಬ್ರಿಟಿಷ್ ನಗರಗಳ ಹಾಗೂ ನೌಕಾ ವ್ಯವಹಾರಗಳ ಮೇಲೆ “ತೀವ್ರ ಆಘಾತಕಾರಿ ಹೊಡೆತ ನೀಡುವ" ಈ ಯೋಜನೆ ಸಿದ್ಧಗೊಂಡಿತ್ತು. ಏಕೆಂದರೆ ಹಿಟ್ಲರನು, ನಿರ್ಬಂಧಕ್ಕೊಳಗಾದ, ಕ್ಷಾಮಕ್ಕೀಡಾದ, ಬಾಂಬ್ ದಾಳಿಗೆ ಸಿಲುಕಿದ ದ್ವೀಪದ ಜೀವನವು ಬ್ರಿಟಿಷ್ ಜನತೆಯ ಪಾಲಿಗೆ ಭರಿಸಲಾಗದೆಂದು ಯೋಚಿಸಿದ್ದನು.

ಅಡೋಲ್ಫ್ ಹಿಟ್ಲರ್ 
ಕ್ರಿಸ್ಟಲ್‍ನಾಶ್ತ್‌ನ ನಂತರ ಹಾಳುಗೆಡವಲಾದ ಮ್ಯಾಗ್ಡಿಬರ್ಗ್‌ನ ಯಹೂದ್ಯ ಉದ್ಯಮಗಳು

ನವೆಂಬರ್ ೧೯೩೮ರಲ್ಲಿ, ಜರ್ಮನ್ ಪತ್ರಕರ್ತರಿಗೆ ನೀಡಿದ ರಹಸ್ಯ ಭಾಷಣದಲ್ಲಿ ಹಿಟ್ಲರನು, “ಮುಂದಿನ ಹೆಜ್ಜೆಯಿರಿಸಲು ಅನುಕೂಲಕರವಾದ ಮುಂದಾಲೋಚನೆ"ಯಾಗಿ ಉನ್ನತಮಟ್ಟದ ಸಶಸ್ತ್ರೀಕರಣಕ್ಕೆ ಅವಕಾಶ ಪಡೆಯುವ ಉದ್ದೇಶದಿಂದ ಶಾಂತಿ ಮಾತುಕಥೆಯ ಅನಿವಾರ್ಯಕ್ಕೆ ಸಿಲುಕಿದನೆಂದು ಹೇಳಿಕೊಂಡಿದ್ದನು. ಅದೇ ಭಾಷಣದಲ್ಲಿ ಹಿಟ್ಲರ್, ಐದು ವರ್ಷಗಳಿಂದ ತನ್ನ ಶಾಂತಿ ಕಾರ್ಯಾಚರಣೆಯು ವಿಪರೀತ ಯಶಸ್ಸು ಕಂಡಿದೆಯೆಂದೂ, ಇದೀಗ ಜರ್ಮನ್ ಜನತೆಯು ಯುದ್ಧ ಕಾರ್ಯಾಚರಣೆಗೆ ಸಿದ್ಧಗೊಳ್ಳಬೇಕೆಂದೂ ಹೇಳಿದ್ದನು. ಹಿಟ್ಲರನು: “ದಶಕದಿಂದ ಅಳವಡಿಸಿಕೊಂಡಿರುವ್ ಶಾಂತಿ ಕಾರ್ಯಾಚರಣೆಯು ಅಪಾಯದ ಆಯಾಮವನ್ನು ಹೊಂದಿದೆಯೆಂಬುದು ಸ್ವತಃಸಿದ್ಧಗೊಂಡಿದೆ. ಏಕೆಂದರೆ, ಈಗಿನ ಸರ್ಕಾರವು ತನ್ನ ನಿರ್ಧಾರಕ್ಕೆ ಸಮಾನವಾಗಿರುತ್ತದೆ ಹಾಗೂ ಎಂಥದೇ ಸನ್ನಿವೇಶದಲ್ಲಿಯಾದರೂ ಶಾಂತಿಯನ್ನು ಕಾಪಾಡಿಕೊಳ್ಳುತ್ತದೆ ಎಂಬ ನಿರ್ಧಾರಕ್ಕೆ ಜನರು ಸುಲಭವಾಗಿ ಒಗ್ಗಿಕೊಳ್ಳುವಂತೆ ಅದು ಪ್ರೇರಿಸುತ್ತದೆ" ಎಂದು ಹೇಳಿಕೆ ನೀಡಿದ್ದನು. ಅಲ್ಲದೆ, ಪತ್ರಿಕೋದ್ಯಮಿಗಳಿಗೆ ಕರೆ ನೀಡಿ, “ಕೆಲವು ನಿರ್ದಿಷ್ಟ ವಿದೇಶೀ ನೀತಿಗಳನ್ನು, ಜನರ ಒಳದನಿಯು ಸೇನಾ ಕಾರ್ಯಾಚರಣೆಗಾಗಿ ದೊಡ್ಡ ದನಿಯಾಗಿ ಹೊಮ್ಮುವಂತೆ ಪ್ರೇರೇಪಿಸಬಲ್ಲ ರೀತಿಯಲ್ಲಿ ನಿರೂಪಿಸಬೇಕು" ಎಂದು ಸಲಹೆ ನೀಡಿದ್ದನು. ನವೆಂಬರ್ ೧೯೩೮ರ ಕೊನೆಯ ಭಾಗದಲ್ಲಿ ಹಿಟ್ಲರನು ಒಂದು ವರ್ಗದ ಜನರು ನೀಡುತ್ತಿದ್ದ ಸಲಹೆಯ ವಿರುದ್ಧ ತಿರುಗಿಬಿದ್ದನು. ಅವನು ಆರ್ಥಿಕ ತಜ್ಞ ಕಾರ್ಲ್ ಫ್ರೆಡ್ರಿಕ್ ಗೋರ್ಡೆಲರ್‌, ಜನರಲ್ ಲುಡ್ವಿಗ್ ಬೆಕ್, ಡಾ.ಜಾಲ್ಮರ್ ಶಶ್ತ್, ರಾಜತಂತ್ರಜ್ಞ ಉಲ್ರಿಚ್ ವೊನ್ ಹಸ್ಸೆಲ್ ಹಾಗೂ ಅರ್ಥ ಶಾಸ್ತ್ರಜ್ಞ ರುಡಾಲ್ಫ್ ಬ್ರಿಂಕ್‌ಮನ್ ಮೊದಲಾದವರನ್ನು “ಹೊಟ್ಟೆ ತುಂಬಿದ ಬುದ್ಧಿಜೀವಿ ತಂಡ"ವೆಂದು ಜರಿದನು. ಅವರು ತಮ್ಮ ಎಚ್ಚರಿಕೆಗಳಿಂದ ತನ್ನ ಧ್ಯೇಯೋದ್ದೇಶಗಳಿಗೆ ತಣ್ಣೀರೆರಚುತ್ತಿರುವರೆಂದೂ, ಅದರ ಬದಲಿಗೆ ಅವರೆಲ್ಲರ ಕೌಶಲ್ಯವು ತನಗೆ ಪೂರಕವಾಗಿರುವುದನ್ನು ತಾನು ಬಯಸುವನೆಂದೂ, “ಇಲ್ಲವಾದರೆ, ನಾವು ಒಂದಿಲ್ಲೊಂದು ದಿನ ಅವರ ಹುಟ್ಟಡಗಿಸುತ್ತೇವೆ ಅಥವಾ ಅಂಥದೇ ಯಾವುದಾದರೂ ಗತಿಯನ್ನು ತಂದೊಡ್ಡುತ್ತೇವೆ" ಎಂದೂ ಹರಿಹಾಯ್ದಿದ್ದನು. ಡಿಸೆಂಬರ್ ೧೯೩೮ರಲ್ಲಿ ಫಿಲಿಪ್ ಬೊಹ್ಲರ್ ನೇತೃತ್ವದ ಫ್ಯೂರೆರ್ ಚಾನ್ಚೆಲರಿಯು ಲೀಪ್ಝಿಗ್‌ನಲ್ಲಿ ವಾಸಿಸಿದ್ದ ತೀವ್ರ ಮಾನಸಿಕ ಹಾಗೂ ದೈಹಿಕ ಅಸ್ವಸ್ಥತೆ ಹೊಂದಿದ್ದ ಬಾಲಕಿ ಸೋಫಿಯಾ ನಾವೆರ್ ಎಂಬುವವಳ ಕುರಿತು ಕಾಳಜಿಯಿದ್ದ ಪತ್ರವನ್ನು ಪಡೆಯಿತು. ಆ ಕಾಲದಲ್ಲಿ, ಹನ್ಸ್ ಹೆನ್ರಿಕ್ ಲಾಮ್ಮೆರ್ಸ್‌ ನೇತೃತ್ವದ ಸಾಮ್ರಾಜ್ಯ ದ ಚಾನ್ಸೆಲರಿ ಕಛೇರಿಯಾಗಿದ್ದ ಬೋಹ್ಲರನ ಕಛೇರಿ ಹಾಗೂ ಮಾರ್ಟಿನ್ ಬೋರ್ಮನ್‌ನಿಂದ ಸಮರ್ಥವಾಗಿ ನಿಭಾಯಿಸಲ್ಪಡುತ್ತಿದ್ದ ಹಿಟ್ಲರ್‌ನ ಸೇನಾಧಿಕಾರಿ ವಿಲ್ಹೆಮ್ ಬಕ್ನರ್ ಹಾಗೂ ಡೆಪ್ಯುಟಿ ಫ್ಯೂರೆರ್‌ ನ '​ ಕಛೇರಿಯಾಗಿದ್ದ ಒಟ್ಟೋ ಮೀಸ್ನರ್‌ ಅಧ್ಯಕ್ಷೀಯ ಚಾನ್ಸೆಲರಿ ಕಛೇರಿಗಳ ನಡುವೆ ಹಿಟ್ಲರನ ಸಾತತ್ಯ ಪಡೆಯುವ ಪೈಪೋಟಿಯಿಂದ ಭಾರೀ ದ್ವೇಷದ ವಾತಾವರಣವೇರ್ಪಟ್ಟಿತ್ತು. ತನ್ನ ವೈರಿಗಳ ವಿರುದ್ಧ ಅಧಿಕಾರದ ಆಟ ಹೂಡಲಿಕ್ಕಾಗಿ ಬೊಹ್ಲರನು ಅಸ್ವಸ್ಥ ಮಗುವಿನ ವಿವರಗಳಿದ್ದ ಪತ್ರವನ್ನು ಹಿಟ್ಲರನಿಗೆ ನೀಡಿದನು. ಅವನು ಆ ಪತ್ರವನ್ನು ತಂದೊಪ್ಪಿಸಿ, ಪ್ರಸ್ತುತ ವಿಷಯದ ಬಗ್ಗೆ ಗಮನ ಸೆಳೆದಿದ್ದಕ್ಕಾಗಿ ಬೊಹ್ಲರನಿಗೆ ಅಭಿನಂದಿಸಿ, ತನ್ನ ಖಾಸಗಿ ಶಸ್ತ್ರಜ್ಞ ಡಾ. ಕಾರ್ಲ್ ಬ್ರಾಂಡ್ಟ್‌ನಿಗೆ ನಾವೆರ್‌ಳನ್ನು ಕೊಂದುಹಾಕುವಂತೆ ಆದೇಶ ನೀಡಿದನು. ಜನವರಿ ೧೯೩೯ರಲ್ಲಿ ಹಿಟ್ಲರನು ಬೊಹ್ಲರ್ ಹಾಗೂ ಬ್ರಾಂಡ್ಟ್‌ನಿಗೆ, ಮುಂದಿನ ದಿನಗಳಲ್ಲಿ ಜರ್ಮನಿಯಲ್ಲಿ ಜನಿಸಿದ ಎಲ್ಲ ಅಸ್ವಸ್ಥ ಶಿಶುಗಳನ್ನೂ ಕೊಂದುಹಾಕುವಂತೆ ಆದೇಶ ನೀಡಿದನು. ಇದು Action T4 ಯೋಜನೆಗೆ ಮೂಲವಾಯಿತು.ಇದಕ್ಕೆ ಸರಿಯಾಗಿ ಬೊಹ್ಲರ್ ಹಾಗೂ ಡಾ.ಬ್ರಾಂಡ್ಟ್‌ರು, ಹಿಟ್ಲರನ ಮೆಚ್ಚುಗೆ ಗಳಿಸುವ ಹುನ್ನಾರದಿಂದ ಹತ್ಯೆಗೈಯುವ T೪ ಯೋಜನೆಯನ್ನು ವಿಸ್ತರಣೆಗೊಳಿಸಿ, ಮೊದಲು ಜರ್ಮನಿಯಲ್ಲಿನ ಎಲ್ಲ ಅಸ್ವಸ್ಥ ಬಾಲಕ/ಕಿಯರನ್ನೂ, ನಂತರ ಎಲ್ಲ ಅಸ್ವಸ್ಥ ಯುವಕರನ್ನೂ ಹತ್ಯೆಗೈಯುವ ಯೋಜನೆಯನ್ನು ರೂಪಿಸಿದರು. ೧೯೩೮ರ ಕೊನೆಯ ಭಾಗ ಹಾಗೂ ೧೯೩೯ರ ಮೊದಲ ಭಾಗದಲ್ಲಿ, ಸಶಸ್ತ್ರೀಕರಣದ ಸಮಸ್ಯೆಗಳಿಂದಾಗಿ ಉಂಟಾದ ನಿರಂತರ ಆರ್ಥಿಕ ಮುಗ್ಗಟ್ಟಿನಿಂದಾಗಿ, ವಿಶೇಷತಃ ಕಚ್ಚಾವಸ್ತು ಪೂರೈಕೆಯ ಕೊರತೆಯಿಂದಾಗಿ ಚತುರ್ವಾರ್ಷಿಕ ಯೋಜನೆಯು ಅವಧಿಯೊಳಗೆ ನೆರವೇರಲು ಸಾಧ್ಯವಾಗದಷ್ಟು ಬಿಕ್ಕಟ್ಟು ಎದುರಿಸುತ್ತಿದೆಯೆಂಬ ವರದಿಯನ್ನು ಗೋರಿಂಗ್‌ನಿಂದ ಪಡೆದನಂತರ ಹಿಟ್ಲರನು ಜನವರಿ ೧೯೩೯ರಲ್ಲಿ ವರ್ಮಾಕ್ಟ್‌ (Wehrmacht)ಗೆ ಅದರ ಸ್ಟೀಲ್ ಪೂರೈಕೆಯಲ್ಲಿ ೩೦%, ಅಲ್ಯುಮಿನಿಯಮ್ ಪೂರೈಕೆಯಲ್ಲಿ ೪೭%, ಸಿಮೆಂಟ್ ಪೂರೈಕೆಯಲ್ಲಿ ೨೫%, ರಬ್ಬರ್ ಪೂರೈಕೆಯಲ್ಲಿ ೧೪% ಹಾಗೂ ತಾಮ್ರದ ಪೂರೈಕೆಯಲ್ಲಿ ೨೦% ಕಡಿತವನ್ನು ಘೋಷಿಸುವ ಅನಿವಾರ್ಯಕ್ಕೊಳಗಾದನು. ೧೯೩೯ರ ಜನವರಿ ೩೦ರಂದು ಹಿಟ್ಲರ್, ತನ್ನ “ರಫ್ತು ಇಲ್ಲವೇ ಸಾವು" ("Export or die") ಭಾಷಣವನ್ನು ನೀಡಿ, ಸೇನಾ ಪರಿಕರಗಳಿಗೆ ಅತ್ಯಗತ್ಯವಾಗಿದ್ದ ಉನ್ನತದರ್ಜೆಯ ಕಬ್ಬಿಣವನ್ನು ಕೊಳ್ಳಲು ಬೇಕಾಗಿದ್ದ ವಿದೇಶೀ ವಿನಿಮಯವನ್ನು ಹೆಚ್ಚಿಸಲು ಜರ್ಮನ್ ಆರ್ಥಿಕ ಅಪರಾಧಕ್ಕೆ (ಹಿಟ್ಲರನ ಭಾಷೆಯಲ್ಲಿ ಹೇಳುವುದಾದರೆ, “ರಫ್ತು ಸಮರ") ಕರೆನೀಡಿದನು. ೧೯೩೯ರ ಜನವರಿ ೩೦ರ ಈ "Export or die" ಭಾಷಣವು ಹಿಟ್ಲರನ “ಪ್ರವಾದ ಭಾಷಣ" ("Prophecy Speech")ವೆಂದೂ ಕರೆಯಲ್ಪಡುತ್ತದೆ.ಈ ಹೆಸರು, ಹಿಟ್ಲರನು ತನ್ನ ಭಾಷಣದ ಕೊನೆಯಲ್ಲಿ ಜಾರಿಗೊಳಿಸಿದ “ಪ್ರವಾದ"ದಿಂದ ಬಂದಿದೆಯೆಂದು ಹೇಳಲಾಗುತ್ತದೆ:

“ಇಂದು ನಾನು ಇತರರಿಗೆ ಹಾಗೂ ಜರ್ಮನರಿಗೆ ಅವಿಸ್ಮರಣೀಯವಾಗಿ ಉಳಿಯಬಲ್ಲಂತಹ ಮಾತನ್ನು ಹೇಳಬಯಸುತ್ತೇನೆ: ನನ್ನ ಜೀವನದುದ್ದಕ್ಕೂ ನಾನು ಬಹಳ ಬಾರಿ ಪ್ರವಾದಿಯಂತೆ ನುಡಿದಿದ್ದೇನೆ ಹಾಗೂ ಸಾಮಾನ್ಯವಾಗಿ ಇದಕ್ಕಾಗಿ ಉಪೇಕ್ಷೆಯನ್ನೂ ಎದುರಿಸಿದ್ದೇನೆ.ಅಧಿಕಾರಕ್ಕಾಗಿ ನನ್ನ ಸಂಘರ್ಷದ ಸಮಯದಲ್ಲಿ ನಾನು- ಮುಂದೊಂದು ದಿನ ನಾನು ರಾಜ್ಯದ, ಇಡೀ ದೇಶದ ಅಧಿಕಾರದ ಚುಕ್ಕಾಣಿ ಹಿಡೀಯುತ್ತೇನೆ ಹಾಗೂ ಇನ್ನಿತರ ಸಮಸ್ಯೆಗಳೊಡನೆ ಜ್ಯೂಗಳಿಂದುಂಟಾದ ಸಮಸ್ಯೆಯನ್ನೂ ನಿವಾರಿಸುತ್ತೇನೆ ಎಂದು ನುಡಿದಿದ್ದ ಪ್ರವಾದಗಳನ್ನು ಜ್ಯೂ ಜನಾಂಗವು ವ್ಯಂಗ್ಯ ನಗುವಿನೊಡನೆ ಸ್ವೀಕರಿಸಿದ್ದು ಪ್ರಥಮ ನಿದರ್ಶನ. ಅವರ ನಗೆಯು ಅಟ್ಟಹಾಸದಂತಿತ್ತು. ಆದರೆ ನಾನು, ಇತ್ತೀಚೆಗೆ ಕೆಲ ಸಮಯದಿಂದ ಅವರು ಮುಖದ ಮತ್ತೊಂದು ಬದಿಯಿಂದ ನಗುತ್ತಿರುವರೆಂದು ಯೋಚಿಸುತ್ತೇನೆ. ಇಂದು ನಾನು ಮತ್ತೊಮ್ಮೆ ಪ್ರವಾದಿಯಾಗುವೆ.ಯುರೋಪಿನ ಹೊರಗಿರುವ ಯಹೂದಿ ಧನಿಕರು ಇತರ ರಾಷ್ಟ್ರಗಳು ಮಹಾಯುದ್ಧಕ್ಕೆ ಸಜ್ಜುಗೊಳ್ಳುವಂತೆ ಮಾಡುವಲ್ಲಿ ಯಶಸ್ಸು ಪಡೆದರಾದರೆ, ಅದರ ಫಲಿತಾಂಶವು ಭೂಮಿಯ ಮೇಲಿನ ಮಹಾ ಕ್ರಾಂತಿಯಷ್ಟೇ ಆಗುಳಿಯದು ಮತ್ತು ಆ ಮೂಲಕ ಯಹೂದಿಗಳ ವಿಜಯವಲ್ಲ, ಯುರೋಪಿನಲ್ಲಿ ಯಹೂದಿ ಜನಾಂಗದ ನಿರ್ಮೂಲನೆಯಾಗಿಹೋಗುವುದು!"

ಈ “ಪ್ರವಾದ ಭಾಷಣ"ದ ಸುತ್ತ ಮಹತ್ವದ ಐತಿಹಾಸಿಕ ಚರ್ಚೆಗಳೇ ನಡೆದುಹೋಗಿವೆ.ಎಬರ್‌ಹರ್ಡ್ ಜಾಕೆಲ್‌ರಂತಹ ಅಂತಾರಾಷ್ಟ್ರೀಯವಾದಿಗಳ ಸಾಲಿನಲ್ಲಿ ನಿಲ್ಲುವ ಇತಿಹಾಸಕಾರರು “ಪ್ರವಾದ ಭಾಷಣ"ದ ನಂತರ ಅತ್ಯಲ್ಪ ಸಮಯದ ಅವಧಿಯಲ್ಲಿ ಹಿಟ್ಲರನು ಯಹೂದಿಗಳ ಮಾರ‍ಣಹೋಮವನ್ನು ತನ್ನ ಕೇಂದ್ರ ಉದ್ದೇಶವಾಗಿ ಮಾಡಿಕೊಳ್ಳಲು ಕಟ್ಟುಬಿದ್ದನೆಂದು ವಾದಿಸುತ್ತಾರೆ.ಲೂಸಿ ಡೇವಿಡೋವಿಝ್ ಮತ್ತು ಜೆರಾಲ್ಡ್ ಫ್ಲೆಮಿಂಗ್‌ರು, “ಪ್ರವಾದ ಭಾಷಣ"ವು, ಒಮ್ಮೆ ಯುದ್ಧ ಆರಂಭಗೊಂಡ ನಂತರ, ತನ್ನ ಪೂರ್ವ ಯೋಜನೆಯಾದ ಜಿನೋಸೈಡ್ (ಮಾರಣಹೋಮ) ಅನ್ನು ಮರೆಮಾಚಲು ಯುದ್ಧವನ್ನು ಬಳಸಿಕೊಳ್ಳುವುದಾಗಿ ಹೇಳಲು ಹಿಟ್ಲರನು ಬಳಸಿದ ಅವನ ಶೈಲಿಯಾಗಿತ್ತಷ್ಟೆ ಎಂದು ತರ್ಕಿಸುತ್ತಾರೆ.ಕ್ರಿಸ್ಟೋಫರ್ ಬ್ರೌನಿಂಗ್‌ರಂತಹ ಕಾರ್ಯವಾದಿ ಇತಿಹಾಸಕಾರರು, ಹಿಟ್ಲರನು ತನ್ನ ಪ್ರವಾದ ಭಾಷಣದಲ್ಲಿ ವ್ಯಕ್ತಪಡಿಸಿದ ಉದ್ದೇಶಗಳ ಬಗ್ಗೆ ಗಂಭೀರನಾಗಿದ್ದುದೇ ಆಗಿದ್ದರೆ, ೧೯೩೯ರ ಸೆಪ್ಟೆಂಬರ್‌ನಲ್ಲಿ ಎರಡನೇ ಮಹಾಯುದ್ಧದ ಆರಂಭ ಹಾಗೂ ೧೯೪೧ರ ಅಂತ್ಯಭಾಗದಲ್ಲಿ ಮೊದಲ “ವರ್ನಿಕ್ಟನ್ಗ್ಸ್‌‍ಲಾಗರ್" (Vernichtungslager) ಆರಂಭಗಳ ನಡುವೆ ಅದೇಕೆ ೩೦ತಿಂಗಳ ಕಾಲ “ನಿರ್ಮೂಲನೆಗೆ ತಡೆ"ಯನ್ನು ತರುತ್ತಿದ್ದ ಎಂದು ಪ್ರಶ್ನಿಸುತ್ತಾ, ಅದರ ಆಧಾರದ ಮೇಲೆ ಈ ವ್ಯಾಖ್ಯಾನವನ್ನು ತಳ್ಳಿ ಹಾಕುತ್ತಾರೆ. ಇದಕ್ಕೆ ಸೇರಿಕೆಯಾಗಿ, ಬ್ರೌನಿಂಗ್‌ರು ೧೯೪೦-೪೧ರ ಮಡಗಾಸ್ಕರ್ ಪ್ಲ್ಯಾನ್ ಹಾಗೂ ಇನ್ನಿತರ ವಿವಿಧ ಯೋಜನೆಗಳ ಅಸ್ತಿತ್ವದತ್ತ ಬೊಟ್ಟು ಮಾಡುತ್ತಾ, ಯಹೂದಿ ನರಮೇಧದ ಯಾವ ಪೂರ್ವಯೋಜನೆಯೂ ಇದ್ದಿಲ್ಲವೆಂಬುದಕ್ಕೆ ಸಾಕ್ಷಿಯಾಗಿ ಎದುರಿಡುತ್ತಾರೆ. ಬ್ರೌನಿಂಗನ ಅಭಿಪ್ರಾಯದಲ್ಲಿ, “ಪ್ರವಾದ ಭಾಷಣ"ವು ಹಿಟ್ಲರನ ಪಾಲಿಗೆ ವೀರಾವೇಶದ ಅಭಿವ್ಯಕ್ತಿಯಷ್ಟೆ ಆಗಿದ್ದು, ಆತನ ಸೆಮೆಟಿಕ್ ವಿರೋಧಿ ನೀತಿಗಳೊಂದಿಗೆ ಅತ್ಯಲ್ಪ ಸಂಬಂಧವಿರಿಸಿಕೊಂಡಿತ್ತು. ಹಿಟ್ಲರನು ಮ್ಯೂನಿಚ್ ಒಪ್ಪಂದವನ್ನು ಉಲ್ಲಂಘಿಸಿ ೧೯೩೯ರ ಮಾರ್ಚ್‌ನಲ್ಲಿ ಝೆಕೋಸ್ಲೋವಾಕಿಯಾದಿಂದ ಅರ್ಧ ಭಾಗ ಝೆಕ್ ಅನ್ನು ಕಸಿದುಕೊಂಡಿದ್ದಕ್ಕೆ ತನ್ನ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಿಕೊಳ್ಳಲು ಝೆಕೋಸ್ಲೋವಾಕಿಯಾದ ಸಂಪತ್ತನ್ನು ಬಳಸಿಕೊಳ್ಳುವುದು ಕೂಡ ಕೊನೆಯಪಕ್ಷ ಕಾರಣದ ಒಂದು ಭಾಗವಾದರೂ ಆಗಿತ್ತು. ಹಿಟ್ಲರನು ೧೫ ಮಾರ್ಚ್ ೧೯೩೯ರಂದು ಜರ್ಮನಿಯ ಸೇನೆಗೆ ಪ್ರಾಗ್‌ ಅನ್ನು ಪ್ರವೇಶಿಸಲು ಆದೇಶ ನೀಡಿದನು. ಮತ್ತು ಪ್ರಾಗ್ ಕ್ಯಾಸೆಲ್‌ನಿಂದ, ಬೊಹೆಮಿಯಾ ಹಾಗೂ ಮೊರವಿಯಾಗಳು ಜರ್ಮನಿಯಿಂದ ಸಂರಕ್ಷಿತವಾಗಿವೆಯೆಂದು ಘೋಷಿಸಿದನು.

ದ್ವಿತೀಯ ಮಹಾಯುದ್ಧದ ಆರಂಭ

ಬ್ರಿಟಿಷ್ ವಿರೋಧಿ ಅಭಿಯಾನದ ಅಂಗವಾಗಿ, ಹಿಟ್ಲರನಿಗೆ ಪೋಲೆಮ್ಡ್ ಒಂದೋ ತನ್ನ ಹಿಂಬಾಲಕನಾಗಿ ಇಲ್ಲವೇ ನಿರ್ಲಿಪ್ತವಾಗಿ ಉಳಿಯುವುದು ಅಗತ್ಯವೆಂದು ತೋರಿತು.ಹಿಟ್ಲರನು ಇದನ್ನು ಸಾಮ್ರಾಜ್ಯ ದ '​ ಪೂರ್ವ ಭಾಗವನ್ನು ಬಲಪಡಿಸುವ ಕಾರ್ಯತಾಂತ್ರಿಕ ನೆಲೆಗಟ್ಟಿನಲ್ಲಿ ಹಾಗೂ ಬ್ರಿಟಿಷ್ ನಿರ್ಬಂಧದಿಂದ ಉಂಟಾದ ಪರಿಣಾಮಗಳಿಂದ ನುಣುಚಿಕೊಳ್ಳುವ ದಾರಿಯಾಗಿ ಪರಿಗಣಿಸಿ, ಅತ್ಯಗತ್ಯವಾಗಿ ಸಾಧಿಸಬೇಕಾದ ಸಂಗತಿಯೆಂದು ಪಟ್ಟುಹಿಡಿದನು. ಮೂಲದಲ್ಲಿ, ಜರ್ಮನಿಯು ಪೋಲೆಂಡನ್ನು ತನ್ನ ಹಿಂಬಾಲಕ ರಾಜ್ಯವನ್ನಾಗಿ ವರ್ಗಾಯಿಸಿಕೊಳ್ಳಲು ಯೋಚಿಸಿತ್ತು. ಆದರೆ, ೧೯೩೯ರ ಮಾರ್ಚ್‌ನಲ್ಲಿ ಪೋಲೆಂಡ್ ಮೂರು ಬಾರಿ ಗರ್ಮನಿಯ ಬೇಡಿಕೆಗಳನ್ನು ತಿರಸ್ಕರಿಸಿದ್ದು, ಹಿಟ್ಲರನು ಪೋಲೆಂಡ್‌ನ ಸರ್ವನಾಶವೇ ೧೯೩೯ರ ಮುಖ್ಯ ವಿದೇಶಾಂಗ ನೀತಿಯನ್ನಾಗಿ ಮಾಡಿಕೊಳ್ಳುವಂತೆ ಪ್ರೇರೇಪಿಸಿತು. ೩ ಏಪ್ರಿಲ್, ೧೯೩೯ರಂದು ಹಿಟ್ಲರನು ೨೯ ಅಗಸ್ಟ್ ೧೯೩೯ರಂದು ದಾಳಿ ನಡೆಸುವ ಯೋಜನೆ ಫಾಲ್ ವೀಸ್‌ (ಕೇಸ್ ವೈಟ್)ಗಾಗಿ ತಯಾರಿ ನಡೆಸುವಂತೆ ಸೇನೆಗೆ ಆದೇಶ ನೀಡಿದನು. ೧೯೩೯ರ ಅಗಸ್ಟ್‌ನಲ್ಲಿ ಹಿಟ್ಲರನು ತನ್ನ ಜನರಲ್‌ಗಳೊಡನೆ ಮಾತನಾಡಿ, ೧೯೩೯ರ ಅವನ ನೈಜ ಯೋಜನೆಯು “... ಪಶ್ಚಿಮದ ವಿರುದ್ಧ ಹೋರಾಡುವ ಸಲುವಾಗಿ ಪೋಲೆಂಡ್‌ನೊಂದಿಗೆ ಸ್ವೀಕಾರಾರ್ಹ ಸಂಬಂಧವನ್ನು ಸ್ಥಾಪಿಸುವುದು" ಆಗಿತ್ತೆಂದೂ ಆದರೆ ಪೋಲೆಂಡಿಗರು “ಸ್ವೀಕಾರಾರ್ಹ ಸಂಬಂಧ" (ಅಂದರೆ, ಜರ್ಮನಿಯ ಹಿಂಬಾಲಕ ದೇಶವಾಗುವುದು)ದ ಏರ್ಪಾಟಿಗೆ ಸಹಕಾರ ತೋರದೆಹೋದ ಕಾರಣ, ಉದ್ವೇಗವಶನಾದ ಅವನು, ಪೋಲೆಂಡನ್ನು ಭೂಪಟದಿಂದ ಅಳಿಸಿಹಾಕದೆ ಬೇರೆ ಆಯ್ಕೆ ಮಾಡಲಾಗದೆ ಹೋದನೆಂದೂ ಹೇಳಿದನು. ಇತಿಹಾಸಕಾರ ಜೆರಾರ್ಡ್ ವೀನ್‌ಬರ್ಗ್ ವಾದಿಸುವಂತೆ, ಹಿಟ್ಲರನ ಕೇಳುಗರಲ್ಲಿದ್ದ ಜನರೆಲ್ಲರೂ ಪೋಲೆಂಡನ್ನು ಧೂಳೀಪಟ ಮಾಡಲು ಉತ್ಸುಕರಾಗಿದ್ದವರೇ (ಜರ್ಮನ್ ಸೇನೆಯಲ್ಲಿ ಪೋಲೆಂಡ್ ವಿರೋಧಿ ಭಾವನೆಯು ಪಾರಂಪರಿಕವಾಗಿ ನೆಲೆಸಿತ್ತು), ಆದರೆ ಅವರು ಬ್ರಿಟನ್ ಹಾಗೂ ಫ್ರಾನ್ಸ್ ಯುದ್ಧದ ಆಲೋಚನೆಯ ಬಗ್ಗೆ ಅಸಂತುಷ್ಟರಾಗಿದ್ದರು. ಪೋಲೆಂಡ್ ನಾಶಕ್ಕೆ ಜರ್ಮನಿ ತೆರಬೇಕಿದ್ದ ಬೆಲೆ ಅದೇ ಆಗಿದ್ದುದಾದರೆ, ಈ ಸಂದರ್ಭದಲ್ಲಿ ಹಿಟ್ಲರನು ನಿಜವನ್ನೇ ಆಡಿದನೆಂದು ತೋರುತ್ತದೆ. ೧೯೩೯ರಲ್ಲಿ ತನ್ನ ಧಿಕಾರಿಗಳೊಡನೆ ನಡೆಸಿದ ಖಾಸಗಿ ಮಾತುಕಥೆಗಳಲ್ಲಿ ಹಿಟ್ಲರನು ಯಾವಾಗಲೂ ಬ್ರಿಟನ್ನನ್ನು ಸೋಲಿಸಲೇಬೇಕಿರುವ ಪ್ರಮುಖ ಶತ್ರುವೆಂದು ವರ್ಣಿಸುತ್ತಿದ್ದನು. ಅವನ ದೃಷ್ಟಿಯಲ್ಲಿ, ತನ್ನ ಪೂರ್ವ ಭಾಗವನ್ನು ಬಲಪಡಿಸಿಕೊಳ್ಳುವುದಕ್ಕಾಗಿ ಹಾಗೂ ಜರ್ಮನಿಯ ಲೆಬೆನ್‌ಸ್ರಾಮ್ (ಬದುಕುವ ಅವಕಾಶ) ಗೆ ಯಶಸ್ವಿಯಾಗಿ ಸೇರ್ಪಡೆಗೊಳಿಸುವುದಕ್ಕಾಗಿ ಪೋಲೆಂಡ್‌ ನಿರ್ನಾಮವು ಅತ್ಯಗತ್ಯ ಕಾರ್ಯಾಚರಣೆಯಾಗಿತ್ತು. ಬ್ರಿಟಿಷರು ೧೯೩೯ರ ಮಾರ್ಚ್ ೩೧ರಂದು ಪೋಲಿಷ್ ಸ್ವಾತಂತ್ರ್ಯದ ಬಗ್ಗೆ ನೀಡಿದ ಭರವಸೆಯಿಂದ ಹಿಟ್ಲರನು ಬಹಳವಾಗಿ ಘಾಸಿಗೊಂಡನು, ಮತ್ತು ತನ್ನ ಸಹಚರರಿಗೆ, “ನಾನು ಅವರನ್ನು ಸೈತಾನನ ಪೇಯದಂತೆ ಕಾಯಿಸುತ್ತೇನೆ" ("I shall brew them a devil's drink") ಎಂದು ತನ್ನ ಆಕ್ರೋಶವನ್ನು ತೋಡಿಕೊಂಡನು. ೧ ಏಪ್ರಿಲ್, ೧೯೩೯ರಂದು ವಿಲ್‌ಹೆಮ್‌ಶೇವನ್‌ (Wilhelmshaven)ನಲ್ಲಿ, ಅಡ್ಮಿರಲ್ ಟಿರ್‌ಪಿಟ್ಜ್ (Admiral Tirpitz) ಯುದ್ಧ ನೌಕೆಯ ಉದ್ಘಾಟನಾ ಭಾಷಣದಲ್ಲಿ ಹಿಟ್ಲರ್, ಪೋಲಿಷ್ ಸ್ವಾತಂತ್ರ್ಯ “ಭರವಸೆ"ಯು ಪ್ರತಿನಿಧಿಸಿದಂತೆ ಬ್ರಿಟಿಷರು ತಮ್ಮ “ಸುತ್ತುಗಟ್ಟುವ" ನೀತಿಯನ್ನು ಮುಂದುವರೆಸಿದರೆ, A.G.N.Aಯನ್ನು ಅವನತಿಗೀಡುಮಾಡುವ ಬೆದರಿಕೆಯನ್ನು ಒಡ್ಡಿದನು. ಹೊಸ ಅಭಿಯಾನದ ಭಾಗವಾಗಿ, ೨೮ ಏಪ್ರಿಲ್ ೧೯೩೯ರಂದು ರೀಚ್‌ಸ್ಟ್ಯಾಗ್ ಹಿಂದಿನ ಭಾಷಣದಲ್ಲಿ, ಅಡಾಲ್ಫ್ ಹಿಟ್ಲರನು ಬ್ರಿಟಿಷರು ಜರ್ಮನಿಯನ್ನು “ಸುತ್ತುಗಟ್ಟುತ್ತಿರುವ" ಬಗ್ಗೆ ದೂರುತ್ತಾ, ಆಂಗ್ಲೋ ಜರ್ಮನ್ ನೇವಲ್ ಒಪ್ಪಂದ ಹಾಗೂ ಜರ್ಮನ್ ಪೋಲಿಶ್ ನಾನ್ ಅಗ್ರೆಶನ್ ಕೌಲುಗಳನ್ನು ವರ್ಜಿಸಿದನು. ಪೋಲೆಂಡ್ ವಿರುದ್ಧದ ಆಕ್ರಮಣಕ್ಕೆ ಹಿನ್ನೆಲೆಯಾಗಿ ಹಿಟ್ಲರನು ಡ್ಯಾನ್‌ಜಿಂಗ್‌ ಸ್ವತಂತ್ರ ನಗರ ಮತ್ತು ವರ್ಸೈಲ್ಸ್ ಒಪ್ಪಂದದ ಸಮಯದಲ್ಲಿ ಜರ್ಮನಿಯು ಅನೈಚ್ಚಿಕವಾಗಿ ತ್ಯಜಿಸಿದ್ದ ಪೋಲಿಷ್ ಕಾರಿಡಾರಿನುದ್ದಕ್ಕೂ ಪ್ರಾಂತ್ಯಬಾಹಿರ ಮಾರ್ಗಗಳನ್ನು ನಿರ್ಮಿಸುವ ಹಕ್ಕಿಗಾಗಿ ಬೇಡಿಕೆಯಿರಿಸಿದನು. ಹಿಟ್ಲರನ ಪಾಲಿಗೆ ಡ್ಯಾನ್ಜಿಂಗ್, ೧೯೩೮ರಲ್ಲಿ ಸುಡೆಟೆನ್ ಆಗಿದ್ದಂತೆ, ಅದರ ಬದಲಿಗೆ ದಾಳಿಗೆ ಹಿನ್ನೆಲೆಯಾಗಿ ಒದಗಿಸಿಕೊಂಡಿದ್ದ ನೆವವಾಗಿತ್ತಷ್ಟೆ. ೧೯೩೯ರ ಉದ್ದಕ್ಕೂ ಡ್ಯಾನ್‌ಜಿಂಗ್ ಪ್ರಕರಣವನ್ನೇ ಮುಖ್ಯ ವಿಷಯವಾಗಿ ಮುಂದಿಟ್ಟುಕೊಂಡು ಪ್ರಲಾಪಿಸುತ್ತಿದ್ದ ಜರ್ಮನರು, ಈ ಸಂಗತಿಗೆ ಸಂಬಂಧಿಸಿದ ಮಾತುಕಥೆಗಳಲ್ಲಿ ಭಾಗವಹಿಸಲು ನಿರಾಕರಿಸುತ್ತಲೇ ಉಳಿದರು. ಬ್ರಿಟಿಷ್ ವಿರೋಧಿ ಅಭಿಯಾನದ ಮುಖ್ಯ ಸಲಕರಣೆಯಾಗಿದ್ದ, ಪೂರೈಸಲು ಬಹಳ ವರ್ಷಗಳ ಅವಧಿಯನ್ನು ಬೇಡುತ್ತಿದ್ದ, ವಿಸ್ತೃತ ಕ್ರೀಗ್ಸ್‌ಮರೈನ್ ಹಾಗೂ ಲಫ್ಟ್‌ವಫ್ಫೆ ಯೋಜನೆಯನ್ನು ನೆಚ್ಚಿಕೊಂಡಿದ್ದ ಹಿಟ್ಲರನ ದೀರ್ಘಕಾಲಿಕ ಬ್ರಿಟಿಷ್ ವಿರೋಧಿ ಅಭಿಯಾನ ಹಾಗೂ ಪೋಲೆಂಡನ್ನು ಆಕ್ರಮಿಸುವ ಮೂಲಕ ಯುದ್ಧವನ್ನು ಪ್ರಚೋದಿಸುವಂತಿದ್ದ ೧೯೩೯ರ ತತ್‌ಕ್ಷಣದ ವಿದೇಶಾಂಗ ನೀತಿಗಳ ನಡುವೆ ವಿರೋಧಾಭಾಸವಿತ್ತು. ತನ್ನ ದೀರ್ಘಕಾಲೀನ ಹಾಗೂ ಅಲ್ಪ ಕಾಲೀನ ಗುರಿಗಳ ನಡುವೆ ಗೊಂದಲಗೊಂಡಿದ್ದ ಹಿಟ್ಲರನ ದ್ವಂದ್ವವು, ವಿದೇಶಾಂಗ ಸಚಿವ ರಿಬ್ಬನ್‌ಟ್ರಾಪ್‌ನಿಂದ ಪರಿಹಾರ ಕಂಡಿತು. ಆತನು ಹಿಟ್ಲರನಿಗೆ, ಬ್ರಿಟನ್ ಆಗಲೀ ಫ್ರಾನ್ಸ್ ಆಗಲೀ ಪೋಲೆಂಡ್‌ನೆಡೆಗಿನ ತಮ್ಮ ಬದ್ಧತೆಯನ್ನು ಗೌರವಿಸುವುದಿಲ್ಲವೆಂದೂ, ಜರ್ಮನಿ ಹಾಗೂ ಪೋಲೆಂಡ್ ನಡುವೆ ನಡೆಯುವ ಯಾವುದೇ ಯುದ್ಧವು ಪ್ರಾಂತೀಯ ಯುದ್ಧಕ್ಕೆ ಸೀಮಿತವಾಗುವುದೆಂದೂ ಹೇಳಿದನು. ರಿಬ್ಬನ್‌ಟ್ರೋಪ್‌ನು, ಫ್ರೆಂಚ್ ವಿದೇಶಾಂಗ ಸಚಿವ ಜಾರ್ಜ್ ಬೋನ್ನೆಟ್ ೧೯೩೮ರ ಡಿಸೆಂಬರ್‌ನಲ್ಲಿ ತನ್ನನ್ನು ಕುರಿತು, ಫ್ರಾನ್ಸ್ ಇದೀಗ ಪೂರ್ವ ಯುರೋಪನ್ನು ಜರ್ಮನಿಯ ಬಹಿಷ್ಕೃತ ಪ್ರಭಾವದ ಗೋಳವೆಂದು ಗುರುತಿಸುತ್ತದೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ, ತನ್ನ ಅಂತಸ್ತನ್ನು ಸ್ವಲ್ಪ ಮಟ್ಟಿಗೆ ಏರಿಸಿಕೊಂಡಿದ್ದನು. ಅದಕ್ಕೆ ಸೇರಿಕೆಯಾಗಿ, ಲಂಡನ್ನಿಗೆ ಮಾಜಿ ರಾಯಭಾರಿಯಾಗಿದ್ದ ರಿಬ್ಬನ್‌ಟ್ರಾಪನ ಅಂತಸ್ತು ಆತನನ್ನು ಹಿಟ್ಲರನ ಕಣ್ಣಲ್ಲಿ ಪ್ರಮುಖ ನಾಝಿ ಬ್ರಿಟಿಷ್ ಎಕ್ಸ್‌ಪರ್ಟ್ ಎಂದು ತೋರುವಂತೆ ಮಾಡಿತು ಹಾಗೂ ಈ ಕಾರಣದಿಂದಲೇ, ರಿಬ್ಬನ್‌ಟ್ರೋಪನು ಹೇಳಿದ, ಬ್ರಿಟನ್ ಪೋಲೆಂಡಿನೆಡೆಗಿನ ತನ್ನ ಬದ್ಧತೆಯನ್ನು ಗೌರವಿಸಲಾರದು ಎಂಬ ಮಾತಿಗೆ ಹಿಟ್ಲರನಿಂದ ಹೆಚ್ಚಿನ ಮನ್ನಣೆ ದೊರೆಯಿತು. ರಿಬ್ಬನ್‌ಟ್ರೋಪನು ಹಿಟ್ಲರನಿಗೆ, ತನ್ನ ವಿಶ್ಲೇಷಣೆಗಳನ್ನು ಬೆಂಬಲಿಸುವ ಎಳೆಗಳನ್ನು ಮಾತ್ರ ತೋರಿಸಿದನು. ಇದಕ್ಕೆ ಪೂರಕವಾಗಿ, ಲಂಡನ್ನಿನಲ್ಲಿದ್ದ ಜರ್ಮನ್ ರಾಯಭಾರಿ ಹರ್ಬರ್ಟ್ ವೊನ್ ಡಿರ್ಕ್‌ಸನ್, ನೆವಿಲ್ಲೆ ಚೆಂಬರ್ಲೈನ್‌ರು “ಬ್ರಿಟನ್ನಿನ ಸಾಮಾಜಿಕ ಸಂರಚನೆಯನ್ನು ತಿಳಿದಿರುವರು, ಬ್ರಿಟಿಷ್ ಸಾಮ್ರಾಜ್ಯದ ಗ್ರಹಣ ಸಾಮರ್ಥ್ಯದ ಅರಿವು ಅವರಿಗಿದೆ, ಅದು ವಿಜಯೀಯುದ್ಧದ ನಷ್ಟವನ್ನು ಕೂಡ ಭರಿಸಲಾರದೆಂದು" ಅವರಿಗೆ ತಿಳಿದಿದೆ ಮತ್ತು ಈ ಕಾರಣದಿಂದಲೇ ಅದು ಹಿಂಜರಿಯುತ್ತದೆ ಎಂಬ ರಿಬ್ಬನ್‌ಟ್ರೋಪನ ವಿಶ್ಲೇಷಣೆಯನ್ನು ಬೆಂಬಲಿಸುವ ವರದಿಯನ್ನು ಕಳುಹಿಸಲು ಉದ್ದೇಶಿಸಿದ್ದರು. ರಿಬ್ಬನ್‌ಟ್ರೋಪನ ಸಲಹೆಯು ಹಿಟ್ಲರನ ಮೇಲೆ ಬೀರಿದ್ದ ಪ್ರಭಾವದ ವೈಪರೀತ್ಯವನ್ನು ಆತನು ೨೧ಅಗಸ್ಟ್ ೧೯೩೯ರಂದು ಪೋಲೆಂಡಿನ ವಿರುದ್ಧ ಮಾತ್ರ ಸೀಮಿತ ಸೇನೆಯು ಮುಂದುವರೆಯುವಂತೆ ಜರ್ಮನ್ ಮಿಲಿಟರಿಗೆ ನೀಡಿದ ಆದೇಶಗಳಲ್ಲಿ ಕಾಣಬಹುದು. ಹಿಟ್ಲರನು, ಜರ್ಮನಿಯ ಕೃಷಿಗಾರಿಕೆಗೆ ಸೇನೆಯ ಮುಂದುವರಿಕೆಯಿಂದ ಸೀಮಿತ ಹಾನಿಯಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಫಾಲ್ ವೀಸ್‌ ಗಾಗಿ ಅಗಸ್ಟ್ ಕೊನೆಯ ವಾರವನ್ನು ಆಯ್ದುಕೊಂಡನು. ಅಕ್ಟೋಬರ್ ಮಳೆ ಆರಂಭವಾಗುವ ಮುನ್ನ ಪೋಲೆಂಡ್‌ನಲ್ಲಿ ಅಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಾಚರಣೆ ಮುಗಿಸಬೇಕಾದ ಅನಿವಾರ್ಯತೆಯಿಂದ ಉಂಟಾದ ಸಮಸ್ಯೆಗಳು, ಹಾಗೂ ಪೋಲಿಷ್ ಗಡಿಯಲ್ಲಿ ಜರ್ಮನ್ ತುಕಡಿಗಳ ಜಮಾವಣೆಗೆ ಬೇಕಿದ್ದ ಸಮಯಾವಕಾಶದ ಅನಿವಾರ್ಯತೆಗಳು ೧೯೩೯ರಲ್ಲಿ ಹಿಟ್ಲರನನ್ನು ತನಗೆ ತಾನೇ ಹೇರಿಕೊಂಡ ದುರವಸ್ಥೆಗೆ ತಳ್ಳಿದವು. ಅದೇ ಸಮಯಕ್ಕೆ ಆ ವರ್ಷ ಆತನೇನಾದರೂ ಯುದ್ಧಕ್ಕೆ ಮುಂದಾಗಿದ್ದರೆ, ಸೋವಿಯತ್ ಸಹಕಾರ ಕೂಡ ನಿರ್ಣಾಯಕವಾಗಿ ಪರಿಣಮಿಸುವುದರಲ್ಲಿತ್ತು. ಮ್ಯೂನಿಚ್ ಒಪ್ಪಂದವು ಸೋವಿಯತ್ ವಲಯದಲ್ಲಿ ಇರಬಹುದಾಗಿದ್ದ ಸಾಂಘಿಕ ಸುರಕ್ಷತೆ ಚಿಂತನೆಯ ಮೇಲಿನ ಅಳೆದುಳಿದ ಹಿಡಿತವನ್ನೂ ತೆಗೆದುಹಾಕಲು ಸಮರ್ಥವಿರುವಂತೆ ತೋರುತ್ತಿತ್ತು. ೧೯೩೯ರ ಅಗಸ್ಟ್ ೨೩ರಂದು ಜೋಸೆಫ್ ಸ್ಟ್ಯಾಲಿನ್, ಗುಪ್ತವಾಗಿ ಪೋಲೆಂಡ್ ವಿಭಜನೆಯ ಹುನ್ನಾರದ ಒಪ್ಪಂದವಿದ್ದ ಹಿಟ್ಲರನ ನಾನ್ ಅಗ್ರೆಶನ್ ಕೌಲಿನ (ಮೊಲೊಟೊವ್-ರಿಬ್ಬನ್‌ಟ್ರೋಪ್ ಕೌಲು) ಪ್ರಸ್ತಾಪಕ್ಕೆ ಸಮ್ಮತಿಮುದ್ರೆ ನೀಡಿದನು.ಹಿಟ್ಲರನ ೧೯೩೯ರ ವಿದೇಶಾಂಗ ನೀತಿಯ ಆಯ್ಕೆಗಳು ಪ್ರಮುಖ ಐತಿಹಾಸಿಕ ಚರ್ಚೆಗೆ ಒಳಗಾಗಿದ್ದು, ಮಾರ್ಕ್ಸ್‌ವಾದಿ ಇತಿಹಾಸಕಾರ ಟಿಮೋತಿ ಮೇಸನ್‌ರು, ಆರ್ಥಿಕ ಸಂರಚನೆಯಲ್ಲಿ ಉಂಟಾದ ಬಿಕ್ಕಟ್ಟುಗಳು ಹಿಟ್ಲರನನ್ನು ಯುದ್ಧಕ್ಕೆ ಮುನ್ನುಗ್ಗುವಂತೆ ಪ್ರೇರೇಪಿಸಿದವೆಂದು ತರ್ಕಿಸಿದರೆ, ಆರ್ಥಿಕ ಚರಿತ್ರಕಾರ ರಿಚರ್ಡ್ ಓವರಿಯವರು, ಹಿಟ್ಲರನ ಬಹುತೇಕ ಕ್ರಿಯೆಗಳು ಆರ್ಥಿಕ ಚಿಂತನೆಗಳಿಂದ ಹೊರತಾಗಿತ್ತೆಂದು ಅಭಿಪ್ರಾಯಪಡುತ್ತಾರೆ. ವಿಲಿಯಮ್ ಕರ್, ಜೆರಾರ್ಡ್ ವೀನ್‌ಬರ್ಗ್ ಹಾಗೂ ಇಯಾನ್ ಕೆರ್ಶಾರಂತಹ ಇತಿಹಾಸಕಾರರು ಯುದ್ಧದೆಡೆಗೆ ಮುನ್ನುಗಿದ ಹಿಟ್ಲರನ ಧಾವಂತಕ್ಕೆ ಆರ್ಥಿಕೇತರ ಕಾರಣವನ್ನು ನೀಡುತ್ತಾ, ಹಿಟ್ಲರನ ಜಾಡ್ಯವಾಗಿಹೋಗಿದ್ದ, ಅಕಾಲ ಮರಣಕ್ಕೆ ತುತ್ತಾಗುವ ಭಯದ ಗೀಳು ಮತ್ತು ತನ್ನ ಕೆಲಸ ಪೂರೈಸಲು ಅಗತ್ಯವಿರುವಷ್ಟು ಸಮಯ ತನ್ನಲ್ಲಿಲ್ಲವೆಂಬ ಆತನ ಭಾವನೆಗಳನ್ನು ಮುಖ್ಯವಾಗಿ ಉಲ್ಲೇಖಿಸುತ್ತಾರೆ. ಶಾಂತಿಯ ಕೊನೆಯ ದಿನಗಳಲ್ಲಿ ಹಿಟ್ಲರ್, ಅಗತ್ಯ ಬಿದ್ದರೆ ತಾನು ಪಶ್ಚಿಮದ ಶಕ್ತಿಗಳ ವಿರುದ್ಧ ಹೋರಾಡಬೇಕೆನ್ನುವ ನಿಶ್ಚಯ, ಮತ್ತು ಬ್ರಿಟನ್ನನ್ನು ಯುದ್ಧದಿಂದ ಹೊರಗಿಡುವ ಉದ್ದೇಶದಿಂದ ರೂಪಿಸಿದ ವಿವಿಧ ಯೋಜನೆಗಳ ನಡುವೆ ತೊಯ್ದಾಟ ನಡೆಸುತ್ತಿದ್ದನು. ಆದರೆ, ಯಾವುದೇ ಕಾರಣಕ್ಕೂ, ಹಿಟ್ಲರನು ಪೋಲೆಂಡ್ ಮೇಲೆ ದಾಳಿ ನಡೆಸುವ ತನ್ನ ಗುರಿಯಿಂದ ಹಿಂತೆಗೆಯಲು ಸಿದ್ಧನಿರಲಿಲ್ಲ. ಸಂಕ್ಷಿಪ್ತವಾಗಿ ಹೇಳಬಹುದಾದರೆ, ಜರ್ಮನ್- ಸೋವಿಯತ್ ನಾನ್ ಅಗ್ರೆಶನ್ ಕೌಲಿಗೆ ಪ್ರತಿಕ್ರಿಯೆಯಾಗಿ (ರಿಬ್ಬನ್‌ಟ್ರೋಪ್ ಊಹೆಯಂತೆ ಲಂಡನ್ ಹಾಗೂ ವಾರ್ಸಾ ನಡುವೆ ಸಂಬಂಧ ಸಾಧಿಸುವ ಬದಲಾಗಿ) ೨೫ ಅಗಸ್ಟ್ ೧೯೩೯ರಂದು ಆಂಗ್ಲೋ- ಪೋಲಿಷ್ ಮೈತ್ರಿಗೆ ಸಹಿಹಾಕಿದ ಸುದ್ದಿ ಹಾಗೂ ಮುಸೋಲಿನಿಯು ಸ್ಟೀಲ್ ಒಪ್ಪಂದವನ್ನು ಮಾನ್ಯ ಮಾಡುವುದಿಲ್ಲವೆಂದು ಹೇಳಿಕೆ ನೀಡಿದ ಸುದ್ದಿಗಳು ಒಟ್ಟಾಗಿ ಹಿಟ್ಲರನು ತನ್ನ ಪೋಲೆಂಡ್ ದಾಳಿಯ ಯೋಜನೆಯನ್ನು ಅಗಸ್ಟ್ ೨೫ರಿಂದ ಸೆಪ್ಟೆಂಬರ್ ೧ಕ್ಕೆ ಮುಂದೂಡಿದನು. ಶಾಂತಿ ಕಾಲದ ಕೊನೆಯ ದಿನಗಳನ್ನು ಹಿಟ್ಲರನು ಬ್ರಿಟಿಷರಿಗ ೨೫ ಅಗಸ್ಟ್ ೧೯೩೯ರ ಬ್ರಿಟಿಷ್ ಸಾಮ್ರಾಜ್ಯದ “ಭರವಸೆ"ಯನ್ನು ಮುಂದಿಡೂವ ಮೂಲಕ ಅವರನ್ನು ತಟಸ್ಥವಾಗಿರುವಂತೆ ಮನವೊಲಿಸಲು ಪ್ರಯತ್ನಿಸುವುದರಲ್ಲಿ, ಇಲ್ಲವೇ ಹೆಂಡರ್ಸನ್‌ರೆದುರು ಅಂತಿಮ ಕ್ಷಣದ ಶಾಂತಿ ಯೋಜನೆಗಳನ್ನು ರಿಬ್ಬನ್‌ಟ್ರೋಪರ ಮೂಲಕ ಮುಂದಿಟ್ಟು, ಸಮ್ಮತಿಗೆ ಅಸಾಧ್ಯವೆನ್ನುವಷ್ಟು ಅತ್ಯಂತ ಕಡಿಮೆ ಅವಧಿ ನಿಗದಿಪಡಿಸುವ ಮೂಲಕ ಯುದ್ಧದ ದೋಷವನ್ನು ಬ್ರಿಟನ್ ಹಾಗೂ ಪೋಲೆಂಡ್‌ಗಳ ಮೇಲೆ ಹೊರಿಸುವ ಉಪಾಯ ಹೂಡುವುದರಲ್ಲಿ ಕಳೆದನು. ಕೊನೆಗೂ ಜರ್ಮನಿ ೧೯೩೯ರ ಸೆಪ್ಟೆಂಬರ್ ೧ರಂದು ಪಶ್ಚಿಮ ಪೋಲೆಂಡಿನ ಮೇಲೆ ದಾಳಿಮಾಡಿತು.ಸೆಪ್ಟೆಂಬರ್ ೩ರಂದು ಬ್ರಿಟನ್ ಮತ್ತು ಫ್ರಾನ್ಸ್‌ಗಳು ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದವಾದರೂ ತತ್‌ಕ್ಷಣ ಕಾರ್ಯರೂಪಕ್ಕೆ ತಾರದೆ ಉಳಿದವು.೧೯೩೯ರ ಸೆಪ್ಟೆಂಬರ್ ೩ರಂದು ಬ್ರಿಟಿಷರಿಂದ ಯುದ್ಧ ಘೋಷಣೆ ಹೊರಟಿದ್ದನ್ನು ಕಂಡ ಹಿಟ್ಲರನಿಗೆ ಏಕಕಾಲದಲ್ಲಿ ಅಚ್ಚರಿಯೂ ಅಸಂತೋಷವೂ ಉಂಟಾಗಿ, ರಿಬ್ಬನ್‌ಟ್ರೋಪನತ್ತೆ ತಿರುಗಿ “ಮುಂದೇನು?" ಎಂದು ಕೋಪದಿಂದಪ್ರಶ್ನಿಸಿದನು. ಆದರೆ ರಿಬ್ಬನ್‌ಟ್ರೋಪನ ಬಳಿ ಹೇಳಲೇನೂ ಉಳಿದರಲಿಲ್ಲ. ಅಲ್ಲದೆ, ಅದೇ ದಿನದ ಕೊನೆಯ ಘಳಿಗೆಯಲ್ಲಿ ಫ್ರೆಂಚ್ ರಾಯಭಾರಿ ರಾಬರ್ಟ್ ಕೌಲೊನ್ಡ್ರೆಯು ಫ್ರಾನ್ಸ್ ಕೂಡ ಯುದ್ಧ ಘೋಷಣೆ ಮಾಡಿದ ಸುದ್ದಿಯನ್ನು ಮುಟ್ಟಿಸಿದನು. ಇಲ್ಲಿಂದ ಮುಂದೆ ಕಡಿಮೆ ದಿನಗಳ ಅಂತರದಲ್ಲಿ, ಅಂದರೆ ಸೆಪ್ಟೆಂಬರ್ ೧೭ರಂದು ಸೋವಿಯತ್ ಪಡೆಗಳು ಪೂರ್ವ ಪೋಲೆಂಡಿನ ಮೇಲೆರಗಿದವು.

ಅಡೋಲ್ಫ್ ಹಿಟ್ಲರ್ 
ಪೋಲಿಷ್ ಕಾರ್ಯಾಚರಣೆಯ ನಂತರ ರೀಚ್‌ಸ್ಟ್ಯಾಗ್‌ನ ಸದಸ್ಯರು 1939ರ ಅಕ್ಟೋಬರ್‌ನಲ್ಲಿ ಹಿಟ್ಲರನನ್ನು ಅಭಿನಂದಿಸಿದರು.
ಅಡೋಲ್ಫ್ ಹಿಟ್ಲರ್ 
ಮ್ಯೂನಿಚ್‌ನಲ್ಲಿ ಹಿಟ್ಲರ್ ಹಾಗೂ ಮುಸೋಲಿನಿ, 1940
Poland never will rise again in the form of the Versailles treaty. That is guaranteed not only by Germany, but also... Russia.
    —Adolf Hitler in a public speech in Danzig at the end of September 1939.

ಪೋಲೆಂಡ್ ಪತನದ ನಂತರ ಪತ್ರಕರ್ತರಿಂದ “ಫೋನಿ ವಾರ್" ಎಂದು ಕರೆಯಲ್ಪಟ್ಟ ಅವಧಿಯು ಎದುರಾಯಿತು. ಜರ್ಮನಿಗೆ ಹೊಂದಿಕೊಂಡಂತಿದ್ದ ವಾಯೂವ್ಯ ಪೋಲೆಂಡನ್ನು ಜರ್ಮನೀಕರಿಸುವುದಕ್ಕಾಗಿ, ಅದರ ಭಾಗವೊಂದರಲ್ಲಿ ಹಿಟ್ಲರನು ಆ ಕ್ಷೇತ್ರದ ಮೇಲ್ವಿಚಾರಕರಾಗಿ ಆಲ್ಬರ್ಟ್ ಫೋರ್ಸ್‌ಟರ್ ಮತ್ತು ಆರ್ಥರ್ ಗ್ರೀಸೆರ್ ಎಂಬಿಬ್ಬರು ಫ್ರೆಂಚ್ ಜನಾಂಗೀಯರನ್ನು (Gauleiters) ನಿಯುಕ್ತಿಗೊಳಿಸಿದನು ಹಾಗೂ ಅವರಿಗೆ ಈ ಜರ್ಮನೀಕರಣವು ಹೇಗೆ ನೆರವೇರುವುದೆಂಬ ಬಗ್ಗೆ ಯಾವ ಬಗೆಯ ಪ್ರಶ್ನೆಯನ್ನೂ ಕೇಳಲಾಗುವುದಿಲ್ಲ ಎಂದು ಭರವಸೆಯಿತ್ತನು. ಹಿಟ್ಲರನ ಆದೇಶಗಳು ಫೋರ್ಸ್‌ಟರ್ ಹಾಗೂ ಗ್ರೀಸೆರ್‌ರಿಂದ ವಿಭಿನ್ನ ರೀತಿಗಳಲ್ಲಿ ಅರ್ಥೈಸಲ್ಪಟ್ಟವು.ಫೋರ್ಸ್‌ಟರನು ಸ್ಥಳೀಯ ಪೋಲೆಂಡಿಗರಿಗೆ ಯಾವುದೇ ದಾಖಲಾತಿಯ ಅಗತ್ಯವಿಲ್ಲದೆ ಅವರು ಜರ್ಮನ್ ರಕ್ತ ಹೊಂದಿರುವರೆಂದು ಗುರುತು ಪತ್ರಗಳನ್ನು ನೀಡುತ್ತ ಹೋದರೆ, ಗ್ರೀಸರನು ಇಡಿಯ ಪೋಲಿಷ್ ಜನತೆಯನ್ನು ಉಚ್ಚಾಟಿಸುವ ಕ್ರೂರತರವಾದ ಜನಾಂಗ ನಾಶದ ದಾರಿಯನ್ನು ತನ್ನದಾಗಿಸಿಕೊಂಡನು. ಹಿಮ್ಲರನ ಜೊತೆಗೂಡಿದ ಗ್ರೀಸರ್, ಹಿಟ್ಲರನ ಬಳಿ ಸಾರಿ, ಫೋರ್ಸ್‌ಟರನು ಸಾವಿರಾರು ಪೋಲೆಂಡಿಗರಿಗೆ ಜರ್ಮನ್ ಜನಾಂಗೀಯರೆಂದು ಬಿಂಬಿಸಿಕೊಳ್ಳಲು ಅವಕಾಶ ನೀಡುವ ಮೂಲಕ ಜರ್ಮನಿಯ “ಜನಾಂಗೀಯ ಶುದ್ಧತೆ"ಯನ್ನು “ಕಲುಷಿತ"ಗೊಳಿಸುತ್ತಿರುವನೆಂದು ದೂರಿಕೊಂಡನು ಹಾಗೂ ಫೋರ್ಸ್‌ಟರನಿಗೆ ಅದನ್ನು ನಿಲ್ಲಿಸುವಂತೆ ಆದೇಶ ನೀಡಲು ಕೇಳಿಕೊಂಡನು.ಹಿಟ್ಲರನು ಫೋರ್ಸ್‌ಟರನೊಡನೆ ಅವರಿಗಿದ್ದ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳಬೇಕೆಂದೂ ಅದನ್ನೆಲ್ಲ ತನ್ನ ಬಳಿ ತರಬಾರದೆಂದೂ ಹಿಮ್ಲರ್ ಮತ್ತು ಗ್ರೀಸರರಿಗೆ ಸ್ಪಷ್ಟವಾಗಿ ಹೇಳಿಬಿಟ್ಟನು. ಈ ಫೋರ್ಸ್‌ಟರ್-ಗ್ರೀಸರ್ ವ್ಯಾಜ್ಯವನ್ನು ಹಿಟ್ಲರ್ ನಿರ್ವಹಿಸಿದ ಬಗೆಯು ಇಯಾನ್ ಕೆರ್ಶಾರ- ಹಿಟ್ಲರನು ಒಟ್ಟಾರೆಯಾಗಿ ನಿರ್ದೇಶನಗಳನ್ನು ನೀಡಿ, ತನ್ನ ಕೆಳಗಿನ ಅಧಿಕಾರಿಗಳಿಗೆ ಅವನ್ನು ಅವರದೇ ದಾರಿಯಲ್ಲಿ ಸಾಧಿಸಲು ಬಿಟ್ಟುಬಿಡುತ್ತಿದ್ದ “ಫ್ಯೂರೆರನ ಕಾರ್ಯಶೈಲಿ" ಸಿದ್ಧಾಂತಕ್ಕೆ ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಲ್ಪಡುತ್ತದೆ. ಪೋಲೆಂಡ್ ಆಕ್ರಮಣದ ಅನಂತರ, ರೀಚ್ಸ್‌ಫ್ಯೂರೆರ್ ಎಸ್‌ಎಸ್ ಹೆನ್ರಿಕ್ ಹಿಮ್ಲರ್ ಹಾಗೂ ಆರ್ಥರ್ ಗ್ರೀಸರ್‌ರ ಪೋಲೆಂಡಿನ ಜನಾಂಗೀಯ ಶುದ್ಧತೆ ಕಾರ್ಯಕ್ರಮಗಳನ್ನು ಕೇಂದ್ರವಾಗಿಸಿಕೊಂಡ ಹಾಗೂ ಪೋಲೆಂಡನ್ನು ರೀಚ್‌ನ (ಸಾಮ್ರಾಜ್ಯದ) ಗ್ರಾನರಿಯಾಗಿಸಿಕೊಳ್ಳಲು ಕರೆ ನೀಡಿದ ಹರ್ಮನ್ ಗೋರಿಂಗ್ ಹಾಗೂ ಹಾನ್ಸ್ ಫ್ರಾಂಕ್‌ರ ಪ್ರಯತ್ನವನ್ನು ಕೇಂಡ್ರವಾಗಿಸಿಕೊಂಡ ಎರಡು ವಿಭಿನ್ನ ಬಣಗಳ ನಡುವೆ ದೊಡ್ಡ ಮಟ್ಟದ ವ್ಯಾಜ್ಯಗಳು ಆರಂಭಗೊಂಡವು. ೧೯೪೦ರ ಫೆಬ್ರವರಿ ೧೨ರಂದು ಆಯೋಜನೆಗೊಂಡಿದ್ದ ಗೋರಿಂಗರ ಕಾರಿನ್‌ಹಾಲ್ ಎಸ್ಟೇಟ್ ಸಭೆಯಲ್ಲಿ ಈ ವ್ಯಾಜ್ಯವು ಆರ್ಥಿಕ ಲಾಭ ಪಡೆಯುವತ್ತ ಒಲವು ಹಾಗೂ ಸಾಮೂಹಿಕ ಉಚ್ಚಾಟನೆಯು ಆರ್ಥಿಕ ಸಿಡಿತಕ್ಕೆ ಕಾರಣವಾಗುವುದೆಂಬ ದೃಷ್ಟಿಕೋನ ಹೊಂದಿದ್ದ ಗೋರಿಂಗ್-ಫ್ರಾಂಕ್‌ರ ಪರವಾಗುವ ಮೂಲಕ ಇತ್ಯರ್ಥಗೊಂಡಿತು. ೧೯೪೦ರ ಮೇ ೧೫ರಂದು ಹಿಮ್ಲರನು ಹಿಟ್ಲರ್‌ಗೆ “ಪೂರ್ವದಲ್ಲಿ ಪರಕೀಯ ಜನತೆಯ ನಿವಾರಣೆ ಕುರಿತು ಕೆಲವು ಆಲೋಚನೆಗಳು" ಎಂಬ ಶಿರೋನಾಮೆ ಹೊತ್ತ ವಿಜ್ಞಾಪನೆಯನ್ನು ತೋರಿಸಿದನು. ಅದು, ಯುರೋಪ್‌ನಿಂದ ಸಂಪೂರ್ಣ ಯಹೂದಿ ಜನಾಂಗವನ್ನೆ ಆಫ್ರಿಕಾದತ್ತ ತಳ್ಳುವ ಹಾಗೂ ಉಳಿದ ಪೋಲಿಷ್ ಜನತೆಯನ್ನು “ನೇತಾರರಿಲ್ಲದ ಕಾರ್ಮಿಕ ವರ್ಗ" ವನ್ನಾಗಿಸಿಕೊಳ್ಳುವ ಚಿಂತನೆಗಳನ್ನು ಹೋದಿತ್ತು. ಹಿಟ್ಲರನು ಹಿಮ್ಲರನ ವಿಜ್ಞಾಪನೆಯು “ಚೆನ್ನಾಗಿದೆ ಮತ್ತು ಸೂಕ್ತವಾಗಿದೆ" ಎಂದು ಸಮ್ಮತಿಸಿದನು. ಹಿಟ್ಲರನ ಈ ಪ್ರತಿಕ್ರಿಯೆಯು ಕಾರಿನ್‌ಹಾಲ್ ಒಪ್ಪಂದವೆಂದು ಕರೆಯಲ್ಪಟ್ಟ ನಿರ್ಣಯಗಳಿಗೆ ವ್ಯತಿರಿಕ್ತವಾಗಿ ಪರಿಣಾಮ ಬೀರಿತು ಹಾಗೂ ಪೋಲೆಂಡ್‌ನೆಡೆಗಿನ ಜರ್ಮನ್ ವಿದೇಶಾಂಗ ನೀತಿ ಕುರಿತಂತೆ ಹಿಮ್ಲರ್- ಗ್ರೀಸರ್ ದೃಷ್ಟಿಕೋನಕ್ಕೆ ಜಯ ದೊರಕಿಸಿಕೊಟ್ಟಿತು. ಈ ಅವಧಿಯಲ್ಲಿ, ಹಿಟ್ಲರನು ಜರ್ಮನಿಯ ಪಶ್ಚಿಮ ಮುಂಗಟ್ಟಿನಲ್ಲಿ ತನ್ನ ಸೇನಾಅಬಲವನ್ನು ಹೆಚ್ಚಿಸುವ ಕಾರ್ಯದಲ್ಲಿ ನಿರತನಾಗಿದ್ದನು.ಮುಂದೆ ೧೯೪೦ರ ಏಪ್ರಿಲ್ ತಿಂಗಳಲ್ಲಿ ಜರ್ಮನ್ ಸೇನೆಗಳು ಡೆನ್ಮಾರ್ಕ್ ಮತ್ತು ನಾರ್ವೆಗಳ ಮೇಲೆ ದಾಳಿ ನಡೆಸಿದವು.ಮುಂದುವರೆದ ಹಿಟ್ಲರ್ ಸೇನೆಯು ೧೯೪೦ರ ಮೇ ತಿಂಗಳಿನಲ್ಲಿ ಫ್ರಾನ್ಸ್‌ನ ಮೇಲೆರಗಿತು ಹಾಗೂ ಲಕ್ಸೆಂಬರ್ಗ್, ನೆದರ್‌ಲ್ಯಾಂಡ್ಸ್ ಹಾಗೂ ಬೆಲ್ಜಿಯಮ್‌ಗಳನ್ನು ವಶಪಡಿಸಿಕೊಂಡಿತು. ೧೯೪೦ರ ಜೂನ್ ೨೨ರಂದು ಫ್ರಾನ್ಸ್ ಜರ್ಮನಿಗೆ ಶರಣಾಯಿತು.ಈ ಗೆಲುವುಗಳು, ೧೯೪೦ರ ಜೂನ್ ೧೦ರ ವೇಳೆಗೆ ಇಟಲಿಯ ಬೆನೆಟೋ ಮುಸೋಲಿನಿಯು ಯುದ್ಧದಲ್ಲಿ ಹಿಟ್ಲರನ ಸಾತತ್ಯ ವಹಿಸಲು ಮುಂದಾಗುವಂತೆ ಮಾಡಿದವು. ಡನ್‌ಕಿರ್ಕ್‌ನಿಂದ ಸಮುದ್ರ ಮಾರ್ಗದ ಮೂಲಕ ಫ್ರಾನ್ಸ್‌ನಿಂದ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದ ಬ್ರಿಟನ್, ಅಟ್ಲಾಂಟಿಕ್ ಕದನದಲ್ಲಿ ಇತರ ಬ್ರಿಟಿಷ್ ಸಾಮ್ರಾಜ್ಯಗಳುದ್ದಕ್ಕೂ ಹೋರಾಟ ಮುಂದುವರೆಸಿತು.ಇದೀಗ ವಿನ್‌ಸ್ಟನ್ ಚರ್ಚಿಲ್ ಮುಂದಾಳುತ್ವದಲ್ಲಿದ್ದ ಬ್ರಿಟಿಷರಿಂದ ತನ್ನ ಶಾಂತಿ ಪ್ರಸ್ತಾಪಗಳು ತಿರಸ್ಕರಿಸಲ್ಪಟ್ಟ ಅನಂತರ, ಹಿಟ್ಲರನು ಯುನೈಟೆಡ್ ಕಿಂಗ್‌ಡಮ್‌ನ ಮೇಲೆ ಬಾಂಬ್ ದಾಳಿ ನಡೆಸುವಂತೆ ಆದೇಶ ಹೊರಡಿಸಿದನು.ಬ್ರಿಟನ್ ಕದನವು ಹಿಟ್ಲರನ ಪೂರ್ವ ಯೋಜಿತ ದಾಳಿಗೆ ನೆವವಾಗಿ ಪರಿಣಮಿಸಿತ್ತು.ರಾಯಲ್ ಏರ್ ಫೋರ್ಸ್, ವಾಯು ನೆಲೆಗಳು ಹಾಗೂ ಆಗ್ನೇಯ ಇಂಗ್ಲೆಂಡನ್ನು ಸಂರಕ್ಷಿಸುತ್ತಿದ್ದ ರೇಡಾರ್ ತಾಣಗಳನ್ನು ನುಚ್ಚು ನೂರು ಮಾಡುವ ಮೂಲಕ ದಾಳಿಗಳು ಆರಂಭಗೊಂಡವುಆದರೆ, ರಾಯಲ್ ಏರ್‌ಫೋರ್ಸ್ ಅನ್ನು ಸೋಲಿಸುವಲ್ಲಿ ಲಫ್ಟ್‌ವಫ್ಫೆ ತಂತ್ರಗಳು ವಿಫಲಗೊಮ್ಡವು.೧೯೪೦ರ ಸೆಪ್ಟೆಂಬರ್ ೨೭ರಂದು ಬರ್ಲಿನ್‌ನಲ್ಲಿ ಜಪಾನ್ ಚಕ್ರಾಧಿಪತ್ಯದ ಸಬುರೊ ಕುರುಸು, ಹಿಟ್ಲರ್ ಮತ್ತು ಸಿಯಾನೋ ಟ್ರಿಪಾರ್ಟೈಟ್ ಒಪ್ಪಂದಕ್ಕೆ ಸಹಿ ಹಾಕಿದರು.ಟ್ರಿಪಾರ್ಟೈಟ್ ಒಪ್ಪಂದವು ಸಂಯುಕ್ತ ಸಂಸ್ಥಾನವೆಂದು ಸ್ಪಷ್ಟವಾಗಿ ತಿಳಿಯುವಂತಿದ್ದ ಆದರೆ ಒಪ್ಪಂದದಲ್ಲಿ ಹೆಸರಿಸದ ಶಕ್ತಿಯ ವಿರುದ್ಧ ನೇರವಾಗಿ ಮಾಡಿಕೊಂಡ ಒಪ್ಪಂದವಾಗಿದ್ದು, ಅಮೆರಿಕನ್ನರು ಬ್ರಿಟಿಷರನ್ನು ಬೆಂಬಲಿಸಲು ಹಿಂಜರಿಯುವಂತೆ ಮಾಡುವ ಉದ್ದೇಶ ಹೊಂದಿತ್ತು. ಮುಂದೆ ಇದು ಹಂಗೆರಿ, ರೊಮೇನಿಯಾ ಹಾಗೂ ಬಲ್ಗೇರಿಯಾಗಳನ್ನೂ ಒಳಗೊಂಡು ವಿಸ್ತೃತವಾಗುತ್ತ ಸಾಗಿತು.ಅವೆಲ್ಲವೂ ಒಟ್ಟಾಗಿ ಅಕ್ಷ ರಾಷ್ಟ್ರ (Axis Powers)ಗಳೆಂದು ಕರೆಯಲ್ಪಟ್ಟವು.೧೯೪೦ರ ಅಕ್ಟೋಬರ್ ಅಂತ್ಯದ ವೇಳೆಗೆ ಆಪರೇಶನ್ ಸೀ ಲಯನ್ ಹೆಸರಿನ ದಾಳಿ ನಡೆಸಲು ವಾಯುನೌಕೆಗಳ ಹೊಂದಿಕೆಯಾಗದ ಕಾರಣ, ಹಿಟ್ಲರನು ಲಂಡನ್, ಪ್ಲೈಮೌತ್ ಹಾಗೂ ಕೊವೆಂಟ್ರಿಗಳನ್ನೊಳಗೊಂಡಂತೆ ಬ್ರಿಟಿಷ್ ನಗರಗಳ ಮೇಲೆ ರಾತ್ರಿಯವೇಳೆಯಲ್ಲಿ ಬಾಂಬ್ ದಾಳಿ ನಡೆಸುವಂತೆ ಆದೇಶಿಸಿದನು. ೧೯೪೧ರ ವಸಂತದಲ್ಲಿ ಉತ್ತರ ಆಫ್ರಿಕಾ, ಬಲ್ಕನ್ಸ್ ಹಾಗೂ ಮಧ್ಯಪ್ರಾಚ್ಯಗಳಲ್ಲಿ ನಡೆದ ವಿವಿಧ ಚಟುವಟಿಕೆಗಳನ್ನು ನಡೆಸುವ ಮೂಲಕ ನಡೆಸಬೇಕೆಂದು ರೂಪಿಸಿಕೊಂಡಿದ್ದ ತನ್ನ ಪೂರ್ವಭಾಗದ ಯೋಜನೆಗಳಿಂದಾಗಿ ಹಿಟ್ಲರನು ಬುದ್ಧಿಭ್ರಂಶನಂತಾಗಿಹೋಗಿದ್ದನು.ಫೆಬ್ರವರಿ ತಿಂಗಳಲ್ಲಿ ಇಟಾಲಿಯನ್ ಸೇನೆಗಳಿಗೆ ಒತ್ತಾಸೆ ನೀಡುವ ಉದ್ದೇಶದಿಂದ ಜರ್ಮನ್ ಸೇನೆಗಳು ಲಿಬಿಯಾವನ್ನು ಪ್ರವೇಶಿಸಿದವು. ಏಪ್ರಿಲ್‌ನಲ್ಲಿ ಆತನು ಯುಗೋಸ್ಲೇವಿಯಾ ಆಕ್ರಮಣವನ್ನು ಘೋಷಿಸಿದನು. ಅದರನಂತರ ಅಲ್ಪಾವಧಿಯಲ್ಲೇ ಗ್ರೀಸ್ ಆಕ್ರಮಣವೂ ಘೋಷಿತವಾಯಿತು.ಮೇ ತಿಂಗಳಲ್ಲಿ ಜರ್ಮನ್ ಸೇನೆಗಳು ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಇರಾಕಿ ಬಂಡುಕೋರ ಸೇನೆಗಳಿಗೆ ಬೆಂಬಲ ನೀಡುವ ಹಾಗೂ ಕ್ರೀಟ್ ಮೇಲೆ ದಾಳಿ ನಡೆಸುವ ಸಲುವಾಗಿ ಕಳುಹಿಸಲ್ಪಟ್ಟವು. ಮೇ ೨೩ರಂದು ಹಿಟ್ಲರನು ಫ್ಯೂರೆರ್ ನಿರ್ದೇಶಕ ಸಂಖ್ಯೆ 30ನ್ನು ಬಿಡುಗಡೆ ಮಾಡಿದನು.

ಸೋಲಿನ ಹಾದಿ

೧೯೪೧ರ ಜೂನ್ ೨೨ರಂದು ಸ್ಟಾಲಿನ್ ಜತೆ ಎರಡು ವರ್ಷಗಳ ಹಿಂದೆ ಹಿಟ್ಲರ್ ಮಾಡಿಕೊಂಡಿದ್ದ ಶಾಂತಿ ಒಪ್ಪಂದವನ್ನು ಮುರಿದ ಮೂರು ಮಿಲಿಯನ್ ಜರ್ಮನ್ ತುಕಡಿಗಳು ಸೋವಿಯೆತ್ ಒಕ್ಕೂಟದ ಮೇಲೆ ಆಕ್ರಮಣ ಮಾಡಿದವು. ಈ ಆಪರೇಶನ್ ಬಾರ್ಬರೋಸಾವನ್ನು ಹಿಟ್ಲರ್ ನಡೆಸಿದುದರ ಕಾರಣಗಳ ಬಗ್ಗೆ ಒಂದು ಐತಿಹಾಸಿಕ ಕಲಹವೇ ನಡೆದುಹೋಗಿದೆ. ಆಂದ್ರಿಯಾಸ್ ಹಿಲ್‌ಗ್ರುಬರ್‌ನಂತಹ ಇತಿಹಾಸಜ್ಞರ ಪ್ರಕಾರ ಆಪರೇಶನ್ ಬಾರ್ಬರೋಸಾ ಇಡೀ ಪ್ರಪಂಚವನ್ನು ಆಳಬೇಕೆಂದಿದ್ದ ಹಿಟ್ಲರ್ ೧೯೨೦ರಿಂದಲೇ ಆಯೋಜಿಸಿದ್ದ ಕ್ರಮಬದ್ಧ ಉಪಾಯದ (ಸ್ಟೂಫೆನ್‌ಪ್ಲಾನ್ ) ಒಂದು ’ಹೆಜ್ಜೆ’ಮಾತ್ರವಾಗಿತ್ತು. ಜಾನ್ ಲುಕಾಚ್‌ನಂತಹ ಇತರ ಇತಿಹಾಸಜ್ಞರು ಹಿಟ್ಲರನಿಗೆ ಯಾವುದೇ ಸ್ಟೂಫೆನ್‌ಪ್ಲಾನ್ ಇರಲಿಲ್ಲವೆಂದೂ, ಬ್ರಿಟನ್ ಶರಣಾಗಲು ಒಪ್ಪದಿದ್ದಾಗ ಹಿಟ್ಲರ್ ತಾತ್ಕಾಲಿಕ ಹೆಜ್ಜೆಯಾಗಿ ಸೋವಿಯತ್ ಒಕ್ಕೂಟದ ಮೇಲೆ ದಾಳಿ ಮಾಡಿದನೆಂದೂ ವಾದಿಸುತ್ತಾರೆ. ವಿನ್‌ಸ್ಟನ್ ಚರ್ಚಿಲ್‌ನಿಗೆ ಸೋವಿಯೆತ್ ಒಕ್ಕೂಟವು ಮಿತ್ರರಾಷ್ಟ್ರಗಳ ಜತೆಸೇರಿ ಯುದ್ಧಕ್ಕಿಳಿಯಬಹುದೆಂಬ ಭರವಸೆಯಿತ್ತು ಮತ್ತು ಬ್ರಿಟೀಶರ ಈ ಆಶಾಗೋಪುರವನ್ನು ಕೆಡವಿ ಅವರು ಶರಣಾಗತರಾಗುವಂತೆ ಮಾಡಲು ಹಿಟ್ಲರನಿಗಿದ್ದ ಒಂದೇ ಮಾರ್ಗವೆಂದರೆ ಬಾರ್ಬರೋಸಾ ಆಕ್ರಮಣ ಮತ್ತು ಇದೇ ಆತ ಸೋವಿಯೆತ್ ಮೇಲೆ ದಾಳಿ ಮಾಡಲು ನಿಜವಾದ ಕಾರಣವೆಂದು ಲುಕಾಚ್ ವಾದಿಸಿದ. ಲುಕಾಚನ ಪ್ರಕಾರ ಬಾರ್ಬರೋಸಾ ಆಕ್ರಮಣ ಸೋವಿಯೆತ್ ವಿರೋಧಿ ಅನ್ನುವದಕ್ಕಿಂತ ಹೆಚ್ಚಾಗಿ ಬ್ರಿಟೀಶರ ವಿಜಯದ ನಿರೀಕ್ಷೆಗಳನ್ನು ಹುಸಿಗೊಳಿಸಿ ಅವರು ಶಾಂತಿಗೋಸ್ಕರ ತಹತಹಿಸುವಂತೆ ಮಾಡಬೇಕೆಂಬ ಹಿಟ್ಲರನ ಬ್ರಿಟಿಶ್-ವಿರೋಧೀ ಆಕಾಂಕ್ಷೆಯ ಮೊದಲ ಹೆಜ್ಜೆಯಾಗಿತ್ತು ಎನ್ನಬಹುದು. ಕ್ಲಾಸ್ ಹಿಲ್ಡರ್‌ಬ್ರಾಂಡ್ ದಾಖಲಿಸಿರುವ ಪ್ರಕಾರ ಹಿಟ್ಲರ್ ಮತ್ತು ಸ್ಟಾಲಿನ್ ೧೯೪೧ರಿಂದ ಒಬ್ಬರೊಬ್ಬರ ಮೇಲೆ ಆಕ್ರಮಣದ ಯೋಜನೆಗಳನ್ನು ಸ್ವತಂತ್ರವಾಗಿ ರೂಪಿಸತೊಡಗಿದ್ದರು. ಹಿಲ್ಡರ್‌ಬ್ರಾಂದನ ಹೇಳಿಕೆಯ ಪ್ರಕಾರ ೧೯೪೧ರ ವಸಂತದ ವೇಳೆಗೆ ಗಡಿಸೀಮೆಯ ಬಳಿ ಸೋವಿಯೆತ್ ತುಕಡಿಗಳು ಜಮಾ ಆಗುತ್ತಿವೆಯೆಂಬ ಸುದ್ದಿ ತಿಳಿದ ಕೂಡಲೆ ಹಿಟ್ಲರ್ ’ಫ್ಲಖ್ಟ್ ನಾಶ್ ವಾರ್ನ್ ’(’ಮುನ್ನುಗ್ಗುವುದು’- ಎಂದರೆ ಅಪಾಯವಿದೆಯೆಂದು ತಿಳಿದ ಕೂಡಲೆ ಹಿಂದೆಸರಿಯುವ ಬದಲು ಮುನ್ನುಗ್ಗಿ ಆಕ್ರಮಣ ಮಾಡುವದು) ಮಾಡಬೇಕೆಂದು ಆದೇಶ ಹೊರಡಿಸಿದ. ವಿಕ್ಟರ್ ಸ್ಯುವೊರೊವ್, ಅರ್ನ್ಸ್ಟ್ ಟಾಪಿಶ್, ಜೋಕಿಮ್ ಹಾಫ್‌ಮನ್, ಅರ್ನ್ಸ್ಟ್ ನೋಲ್ಟೆ ಮತ್ತು ಡೇವಿಡ್ ಇರ್ವಿಂಗ್ ಮುಂತಾದ ವೈವಿಧಮಯ ಇತಿಹಾಸಜ್ಞರನ್ನೊಳಗೊಂಡ ಮೂರನೇ ಬಣದವರು ವಾದಿಸುವ ಪ್ರಕಾರ ಜರ್ಮನರು ಬಾರ್ಬರೋಸಾ ಅಕ್ರಮಣಕ್ಕೆ ನೀಡಿರುವ ಅಧಿಕೃತ ಕಾರಣವಾದ - ಜುಲೈ ೧೯೪೧ರಲ್ಲಿ ಆಗಬಹುದಾಗಿದ್ದ ಸೋವಿಯೆತ್ ದಾಳಿಯನ್ನು ಎದುರಿಸಲು ಹಿಟ್ಲರ್ ಬೇರೆ ವಿಧಿಯಿಲ್ಲದೆ ಕೈಗೊಂಡ ’ನಿವಾರಣಾ ಯುದ್ಧ’ವೇ ಬಾರ್ಬರೋಸಾ ಆಕ್ರಮಣಕ್ಕೆ ಕಾರಣವಾಯಿತು - ಎಂಬುದೇ ನಿಜವಾದ ಕಾರಣ. ಈ ವಾದವು ದೊಷಪೂರಿತವಾಗಿದೆಯೆಂದು ಎಲ್ಲೆಡೆ ಇದನ್ನು ಟೀಕಿಸಲಾಯಿತು. ಅಮೆರಿಕನ್ ಇತಿಹಾಸಜ್ಞ ಜೆರ್ಹಾರ್ಡ್ ವೀನ್‌ಬರ್ಗ್‌ ಒಮ್ಮೆ ಈ ’ನಿವಾರಣಾ ಯುದ್ಧ್ದ’ ವಾದದ ಪ್ರತಿಪಾದಕರನ್ನು ಅಜ್ಜಿಕತೆಗಳನ್ನು ನಿಜವೆಂದು ನಂಬುವವರಿಗೆ ಹೋಲಿಸಿದ್ದಾನೆ. ಈ ದಂಡಯಾತ್ರೆಯಿಂದ ಬಾಲ್ಟಿಕ್ ರಾಜ್ಯಗಳು, ಬೆಲಾರುಸ್, ಉಕ್ರೇನ್ ಮೊದಲಾದ ಪ್ರದೇಶಗಳ ಮೇಲೆ ಜರ್ಮನಿಗೆ ಹಿಡಿತ ದೊರಕಿತು. ಹಿಂದಿರುಗಬಾರದೆಂದು ಸ್ತಾಲಿನ್ ಆದೇಶಿಸಿದ್ದ ಹಲವಾರು ಸೋವಿಯೆತ್ ಸೇನಾತುಕಡಿಗಳನ್ನು ಸುತ್ತುವರೆದು ಧ್ವಂಸಮಾಡಲಾಯಿತು. ಹೀಗಿದ್ದರೂ ಸಹ ೧೯೪೧ರ ಡಿಸೆಂಬರಿನಲ್ಲಿ ಜರ್ಮನರು ಮಾಸ್ಕೊ ತಲುಪಲು ಸ್ವಲ್ಪ ದೂರವಿದ್ದಂತೆಯೇ ರಷ್ಯನ್ ಚಳಿಗಾಲ ಮತ್ತು ಉಗ್ರವಾದ ಸೋವಿಯೆತ್ ಪ್ರತಿಭಟನೆಯ ದೆಸೆಯಿಂದಾಗಿ ತಮ್ಮ ಆಕ್ರಮಣವನ್ನು ತಡೆಹಿಡಿಯಬೇಕಾಯಿತು. ಹಿಟ್ಲರ್ ಬಯಸಿದ್ದಂತಹ ವೇಗದ ವಿಜಯವನ್ನು ಗಳಿಸಿಕೊಡಲು ಈ ಆಕ್ರಮಣವು ವಿಫಲವಾಯಿತು. ೧೯೪೧ರ್ ಡಿಸೆಂಬರ್ ೧೮ರಂದು ರೀಶ್‌ಫ್ಯೂರೆರ್‌-SS ನ ಭೇಟಿನಿಗದಿ ಪುಸ್ತಕದಲ್ಲಿ ದಾಖಲಾಗಿರುವಂತೆ ಹೀನ್ರಿಕ್ ಹಿಮ್ಲರ್ ಹಿಟ್ಲರನನ್ನು ಭೇಟಿಯಾಗಿ "ರಷ್ಯಾದ ಯಹೂದಿಗಳನ್ನೇನು ಮಾಡೋಣ?" ಎಂದು ಕೇಳಿದಾಗ ಹಿಟ್ಲರ್ ಅದಕ್ಕೆ ಉತ್ತರವಾಗಿ "ಆಲ್ಸ್ ಪಾರ್ಟಿಸಾನೆನ್ ಆಜ್ಯೂರಾಟೆನ್ "("ಅವರನ್ನೂ ಇತರ ಪಂಗಡದವರಂತೆ ನಿರ್ಮೂಲನ ಮಾಡು") ಎಂದು ಹೇಳಿದನೆಂಬುದಾಗಿ ದಾಖಲಿಸಲಾಗಿದೆ. ಇಸ್ರೇಲೀ ಇತಿಹಾಸಜ್ಞ ಯೆಹುದಾ ಬಾಯರ್ ವ್ಯಾಖ್ಯಾನಿಸಿರುವ ಪ್ರಕಾರ ಹಿಮ್ಲರನ ಪುಸ್ತಕದಲ್ಲಿ ದಾಖಲಾಗಿರುವ ಈ ಮಾತು ಹಿಟ್ಲರ್ ಹಾಲೋಕಾಸ್ಟ್ ಅನ್ನು ಆದೇಶಿಸಿದನೆಂಬುದಕ್ಕೆ ಯಾವುದೇ ಇತಿಹಾಸಜ್ಞನಿಗೆ ದೊರಕಬಹುದಾದ ಅತಿ ಹತ್ತಿರದ ದಾಖಲೆಯಾಗಿದೆ.

ಅಡೋಲ್ಫ್ ಹಿಟ್ಲರ್ 
ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ವಿರುದ್ಧ ರೀಚ್‌ಸ್ಟ್ಯಾಗ್‌ನಲ್ಲಿ ಭಾಷಣ ನೀಡುತ್ತಿರುವ ಹಿಟ್ಕರ್.11 ಡಿಸೆಂಬರ್ 1941.
ಅಡೋಲ್ಫ್ ಹಿಟ್ಲರ್ 
20 ಜುಲೈ 1944ರ ದಾಳಿಯ ನಂತರ ನಾಶಗೊಂಡ ವೋಲ್ಫ್‌ನ ಲಾಯಿರ್ ಬ್ಯಾರಕ್‌ಗಳು

ಜಪಾನ್ ಸಾಮ್ರಾಜ್ಯವು ಪರ್ಲ್ ಹಾರ್ಬರ್ ದಾಳಿ ಮತ್ತು ಹವಾಯಿಗಳ ಮೇಲೆ ದಾಳಿ ನಡೆಸಿದ ನಾಲ್ಕುದಿನಗಳ ನಂತರ ಮತ್ತು ನಾಝೀ ಜರ್ಮನಿಯ ಮಾಸ್ಕೋ ಬಳಿಯ ದಾಳಿಯ ಆರು ದಿನಗಳ ನಂತರ ೧೯೪೧ರ ಡಿಸೆಂಬರ್ ೧೧ರಂದು ಹಿಟ್ಲರ್ ಯುನೈಟೆಡ್ ಸ್ತೇಟ್ಸ್‌ನ ಮೇಲೆ ಯುದ್ಧ್ದಸಾರುವ ಪ್ರಕಟಣೆಯನ್ನು ಹೊರಡಿಸಿದ. ಇದರಿಂದ ಆತ ಪ್ರಪಂಚದ ಅತಿದೊಡ್ಡ ಸಾಮ್ರಾಜ್ಯ(ಬ್ರಿಟಿಶ್ ಸಾಮ್ರಾಜ್ಯ), ಪ್ರಪಂಚದ ಅತಿದೊಡ್ಡ ಉದ್ಯಮ ಮತ್ತು ಆರ್ಥಿಕ ಶಕ್ತಿ(ಯುನೈಟೆಡ್ ಸ್ತೇಟ್ಸ್) ಮತ್ತು ಪ್ರಪಂಚದ ಅತಿದೊಡ್ಡ ಸೇನೆ(ಸೋವಿಯೆತ್ ಒಕ್ಕೂಟ)ಗಳನ್ನೊಳಗೊಂಡ ಮೈತ್ರಿ ಒಕ್ಖೂಟದ ವಿರುದ್ಧ ನಿಲ್ಲುವಂತಾಯಿತು. ೧೯೪೨ರ ಕೊನೆಯ ವೇಳೆಗೆ ಎಲ್ ಅಲಮೀನ್‌ನ ಎರಡನೇ ಕದನದಲ್ಲಿ ಜರ್ಮನ್ ಸೇನೆಯು ಸೋಲನ್ನಪ್ಪಿದ್ದರಿಂದ ಸುಯೆಜ್ ಕಾಲುವೆ ಮತ್ತು ಮಧ್ಯ ಪಶ್ಚಿಮವನ್ನು ತನ್ನದಾಗಿಸಿಕೊಳ್ಳುವ ಹಿಟ್ಲರನ ಯೋಜನೆ ವಿಫಲವಾಯಿತು. ೧೯೪೩ರ ಫೆಬ್ರುವರಿಯಲ್ಲಿ ಜರ್ಮನರ ಆರನೇ ಸೇನೆಯ ವಿನಾಶದೊಂದಿಗೆ ಸ್ಟಾಲಿನ್‌ಗ್ರಾಡ್ ಕದನವು ಮುಕ್ತಾಯಗೊಂಡಿತು. ಆದರ ನಂತರ ನಡೆದದ್ದು ಕರ್ಸ್ಕ್ ಕದನ. ಹಿಟ್ಲರನ ಯುದ್ಧತಂತ್ರಗಳು ಹೆಚ್ಚುಹೆಚ್ಚು ವಿಫಲವಾಗತೊಡಗಿದವು ಹಾಗೂ ಆತನ ಕೆಡುತ್ತಿದ್ದ ಆರೋಗ್ಯದ ಜತೆಗೇ ಜರ್ಮನಿಯ ಮಿಲಿಟರಿ ಮತ್ತು ಆರ್ಥಿಕ ಪರಿಸ್ಥಿತಿಯೂ ಹದಗೆಡುತ್ತಲೇ ಹೋಯಿತು. ಆತನ ಎಡಗೈ ನಡುಕವೂ ಈ ವೇಳೆಗೇ ವಿಪರೀತವಾಯಿತು. ಹಿಟ್ಲರನ ಜೀವನ ಚರಿತ್ರೆ ಬರೆದ ಇಯಾನ್ ಕೆರ್ಶಾ ಮತ್ತಿತರರು ಹಿಟ್ಲರನಿಗೆ ಪಾರ್ಕಿನ್ಸನ್ಸ್ ರೋಗವಿತ್ತೆಂದು ನಂಬುತ್ತಾರೆ. ಆತನಿಗೆ ಸಿಫಿಲಿಸ್ ಇತ್ತೆಂದು ಕೂಡಾ ಕೆಲವೊಂದು ರೋಗಲಕ್ಷಣಗಳಿಂದ ಸಂಶಯ ವ್ಯಕ್ತಪಡಿಸಲಾಗಿದೆಯಾದರೂ ಈ ಬಗ್ಗೆ ಯಾವುದೇ ಬಲವಾದ ಆಧಾರಗಳು ದೊರಕಿಲ್ಲ. ಸಿಸಿಲಿಯ ಮೇಲೆ ಮಿತ್ರರಾಷ್ಟ್ರಗಳು ೧೯೪೩ರಲ್ಲಿ ಆಕ್ರಮಣ (ಆಪರೇಶನ್ ಹಸ್ಕಿ) ಮಾಡಿದಾಗ ಪಿಯೆತ್ರೊ ಬಾದೋಗ್ಲಿಯೋ ಮಿತ್ರರಾಷ್ಟ್ರಗಳಿಗೆ ಶರಣಾದುದರಿಂದ ಮುಸೊಲಿನಿ ಪದಚ್ಯುತನಾಗಬೇಕಾಯಿತು. ೧೯೪೩ ಮತ್ತು ೧೯೪೪ರ ಅವಧಿಯಲ್ಲಿ ಸೋವಿಯೆತ್ ಒಕ್ಕೂಟವು ಹಿಟ್ಲರನ ಸೇನೆಯನ್ನು ಪೂರ್ವ ಗಡಿರೇಖೆಯುದ್ದಕ್ಕೂ ಹಿಂದೆ ತಳ್ಳತೊಡಗಿತು. ೧೯೪೪ರ ಜೂನ್ ೬ರಂದು ಪಾಶ್ಚಾತ್ಯ ಮಿತ್ರರಾಷ್ಟ್ರಗಳ ಸೇನೆಗಳು ಇತಿಹಾಸದಲ್ಲೇ ಅತಿ ದೊಡ್ಡದೆನ್ನಿಸಿಕೊಂಡಿರುವ ಭೂಜಲಚರ ಕಾರ್ಯಾಚರಣೆಯಾದ ಆಪರೇಶನ್ ಓವರ್‌ಲಾರ್ಡ್ ಅನ್ನು ನಡೆಸುವುದರ ಮೂಲಕ ಉತ್ತರ ಫ್ರಾನ್ಸನ್ನು ತಲುಪಿದವು. ಜರ್ಮನ್ ಸೇನೆಯ ವಾಸ್ತವವಾದಿಗಳಿಗೆ ಸೋಲು ಖಚಿತವೆಂದು ತಿಳಿದಿದ್ದರಿಂದ ಕೆಲವರು ಹಿಟ್ಲರನನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕೆಂದು ಹವಣಿಸತೊಡಗಿದರು. ೧೯೪೪ರ ಜುಲೈನಲ್ಲಿ ಕ್ಲಾಸ್ ವಾನ್ ಸ್ಟಾಫೆನ್‌ಬರ್ಗ್ ಎಂಬಾತ ’ತೋಳದ ಗುಹೆ’( Wolfsschanze - Wolf's Lair) ಎಂದೇ ಹೆಸರಾಗಿದ್ದ ರಾಸ್ಟೆನ್‌ಬರ್ಗ್‌ನಲ್ಲಿದ್ದ ಹಿಟ್ಲರನ ಫ್ಯೂರೆರ್ ಕೇಂದ್ರಕಚೇರಿಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದರೂ ಹಿಟ್ಲರ್ ಕೂದಲೆಳೆಯ ಅಂತರದಿಂದ ಪಾರಾದನು. ಇದಾದ ನಂತರ ಹಿಟ್ಲರನ ನಿರ್ದಯವಾದ ಪ್ರತೀಕಾರಕ್ಕೆ ಸುಮಾರು ೪,೯೦೦ ಜನರು ಬಲಿಯಾದರು. ಹೆಚ್ಚಿನವರನ್ನು ಆಹಾರ ನೀಡದೆ ಏಕಾಂತ ಬಂಧನದಲ್ಲಿರಿಸಿ ನಂತರ ಮೆಲ್ಲನೆ ಉಸಿರುಗಟ್ಟಿಸಿ ಕೊಲ್ಲಲಾಯಿತು. ಈ ಮುಖ್ಯವಾದ ಬಂಡಾಯವನ್ನು ಹತ್ತಿಕ್ಕಲಾಯಿತಾದರೂ ಸಣ್ಣ ಸಣ್ಣ ಗುಂಪುಗಳು ಈ ದಿಸೆಯಲ್ಲಿ ಸ್ವತಂತ್ರವಾಗಿ ಚಟುವಟಿಕೆಗಳನ್ನು ನಡೆಸತೊಡಗಿದವು.

ಸೋಲು ಮತ್ತು ಸಾವು

೧೯೪೪ರ ಕೊನೆಯ ವೇಳೆಗೆ ಕೆಂಪು ಸೈನ್ಯವು ಜರ್ಮನರನ್ನು ಮಧ್ಯ ಯುರೋಪಿಗೆ ಹಿಂದಕ್ಕೆ ಅಟ್ಟಿಯಾಗಿತ್ತು ಮತ್ತು ಪಾಶ್ಚಾತ್ಯ ಮಿತ್ರರಾಷ್ಟ್ರಗಳು ಜರ್ಮನಿಯ ಮೇಲೆ ಆಕ್ರಮಣ ಮಾಡಲು ದಾಪುಗಾಲು ಹಾಕತೊಡಗಿದ್ದವು. ಜರ್ಮನಿ ಈ ಯುದ್ಧದಲ್ಲಿ ಸೋತಿತೆಂದು ಹಿಟ್ಲರನಿಗೆ ಅರಿವಾಯಿತಾದರೂ ಆತ ಸೇನೆಯನ್ನು ಹಿಂದೆಗೆದುಕೊಳ್ಳಲಿಲ್ಲ. ೧೯೪೫ರ ಏಪ್ರಿಲ್ ೧೨ರಂದು ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್‌ನ ನಿಧನದ ನಂತರ ಹುರುಪುಗೊಂಡ ಹಿಟ್ಲರ್ ಅಮೆರಿಕಾ ಮತ್ತು ಬ್ರಿಟನ್ನುಗಳ ಜತೆ ಬೇರೆಬೇರೆಯಾಗಿ ಶಾಂತಿ ಒಪ್ಪಂದದ ಮಾತುಕತೆ ನಡೆಸುವ ನಿರೀಕ್ಷೆಯಿಟ್ಟುಕೊಂಡಿದ್ದ. ಹಿಟ್ಲರ್ ತನ್ನ ಮೊಂಡತನ ಮತ್ತು ಮಿಲಿಟರಿಯ ನಿಯಮಗಳನ್ನು ಅಂಗೀಕರಿಸಲೊಪ್ಪದ ಕಾರಣದಿಂದಾಗಿ ಹಾಲೋಕಾಸ್ಟ್ ಮಾರಣಹೋಮವನ್ನು ಮುಂದುವರೆಯಲು ಬಿಟ್ಟ. ಜರ್ಮನಿ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲದಿದ್ದರೆ ಉಳಿಯಲು ಸಾಧ್ಯವಿಲ್ಲ ಎಂಬ ಕಾರಣವನ್ನು ನೀಡಿದ ಹಿಟ್ಲರ್ ಮಿತ್ರರಾಷ್ಟ್ರಗಳು ಜರ್ಮನಿಯನ್ನು ಆಕ್ರಮಿಸಿಕೊಳ್ಳುವ ಮೊದಲು ಜರ್ಮನಿಯ ಉದ್ಯಮೀಕರಣಕ್ಕೆ ಸಂಬಧಿಸಿದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣವಾಗಿ ಹಾಳುಗೆಡವಲು ಆದೇಶಿಸಿದ. ತನ್ನ ಅವನತಿಯ ಜತೆಗೇ ಇಡೀ ದೇಶದ ಅವನತಿಯಾಗಬೇಕೆಂದು ಹಿಟ್ಲರ್ ಆಶಿಸಿದ. ಈ ’ಸುಟ್ಟ ಭೂಮಿ’ಯೋಜನೆಯನ್ನು ಜಾರಿಗೆ ತರಲು ಶಸ್ತ್ರಾಸ್ತ್ರ ಮಂತ್ರಿಯಾಗಿದ್ದ ಆಲ್ಬರ್ಟ್ ಸ್ಪೀಯರ್ ಅನ್ನು ನಿಯಮಿಸಲಾಯಿತಾದರೂ ಆತ ತನಗೆ ನೀಡಲಾದ ಆದೇಶವನ್ನು ಉಲ್ಲಂಘಿಸಿದನು. ೧೯೪೫ರ ಏಪ್ರಿಲ್‌ನಲ್ಲಿ ಸೋವಿಯೆತ್ ಸೇನೆಯು ಬರ್ಲಿನಿನ ಹೊರಭಾಗದ ಮೇಲೆ ಆಕ್ರಮಣ ಮಾಡಿತು. ಹಿಟ್ಲರನ ಬೆಂಬಲಿಗರು ಆತನನ್ನು ಬವೇರಿಯದ ಪರ್ವತಗಳಲ್ಲಿ ತಲೆಮರೆಸಿಕೊಂಡು ರಾಷ್ಟ್ರೀಯವಾಗಿ ಬಲಿಷ್ಠನಾದಮೇಲೆ ಕೊನೆಯ ಯುದ್ಧಕ್ಕೆ ತಯಾರಾಗಬೇಕೆಂದು ಒತ್ತಾಯಿಸಿದರು. ಆದರೆ ಹಿಟ್ಲರ್ ರಾಜಧಾನಿಯಲ್ಲೇ ಬದುಕಬೇಕು ಇಲ್ಲವೇ ಸಾಯಬೇಕು ಎಂದು ನಿರ್ಧರಿಸಿಯಾಗಿತ್ತು. ಏಪ್ರಿಲ್ ೨೦ರಂದು ಹಿಟ್ಲರ್ ತನ್ನ ೫೬ನೇ ಹುಟ್ಟುಹಬ್ಬವನ್ನು ರೀಚ್ ಚಾನ್ಸೆಲರಿ(Reichskanzlei )ಯ ಅಡಿಗೆ ನಿರ್ಮಿಸಲಾಗಿದ್ದ ಫ್ಯೂರೆರ್ ಬಂಕರ್‌ ನೊಳಗೆ ಆಚರಿಸಿದ. ಸೋಲನ್ನಪ್ಪಿದ್ದ ಬ್ರೆಸ್ಲಾವ್ ಕೋಟೆ (ಫೆಸ್ತುಂಗ್ ಬ್ರೆಸ್ಲಾವ್ )ಯ ಗ್ಯಾರಿಸನ್ ಕಮ್ಯಾಂಡರ್ ಆಗಿದ್ದ ಜನರಲ್ ಹರ್ಮನ್ ನೀಹಾಫ್ ಹಿಟ್ಲರನ ಹುಟ್ಟುಹಬ್ಬದ ಸಂಭ್ರಮದಲ್ಲಿ ತನ್ನ ತುಕಡಿಗಳಿಗೆ ಚಾಕೊಲೆಟ್ ಹಂಚಿದ. ೨೧ನೇ ಏಪ್ರಿಲ್ ಹೊತ್ತಿಗೆ ಜೋರ್ಜಿ ಜುಕೋವ್‌ನ ಮೊದಲನೇ ಬೆಲೋರುಸಿಯನ್ ಫ್ರಂಟ್ ಸೇನೆಯು ಸೀಲೋ ಹೈಟ್ಸ್ ಕದನದಲ್ಲಿ ಜನರಲ್ ಗೋಥಾರ್ಡ್ ಹೀನ್ರೀಚಿಯ ಆರ್ಮಿ ಗ್ರೂಪ್ ವಿಸ್ತುಲಾವನ್ನು ಮುರಿದು ಒಳನುಗ್ಗಿತು. ಅಡ್ಡಿತಡೆಗಳು ಕಡಿಮೆಯಿದ್ದ ಸೋವಿಯೆತ್ ಸೇನೆ ಹಿಟ್ಲರನ ಬಂಕರಿನೆಡೆ ಧಾವಿಸತೊಡಗಿತು. ಎಲ್ಲಾ ವರದಿಗಳನ್ನು ಬದಿಗೊತ್ತಿದ ಹಿಟ್ಲರನಿಗೆ ವಾಫೆನ್ SS ಜನರಲ್ ಆಗಿದ್ದ ಫೆಲಿಕ್ಸ್ ಸ್ಟೀನರ್‌ನ ನೇತೃತ್ವದಲ್ಲಿ ಉಳಿದುಕೊಂಡಿದ್ದ ಅರಬರೆ ತುಕಡಿಗಳಿಂದ ತಮ್ಮ ಉಳಿವು ಸಾಧ್ಯವೆಂದೆನ್ನಿಸಿತು. ಸ್ಟೀನರನ ಈ ನೇತೃತ್ವವನ್ನು "ಸ್ಟೀನರ್‌ನ ಪ್ರತ್ಯೇಕ ಸೇನೆ(ಆರ್ಮೀಅಬ್‌ಟೈಲುಂಗ್ ಸ್ಟೀನರ್ )" ಎಂದು ಕರೆಯಲಾಯಿತು. ಆದರೆ ಈ ’ಸ್ಟೀನರನ ಪ್ರತ್ಯೇಕ ಸೇನೆ’ ಬರೆ ಕಾಗದದ ಹುಲಿಯಾಗಿತ್ತಷ್ಟೆ. ಅದು ತುಕಡಿಗಿಂತ ದೊಡ್ಡದೂ ಸೇನೆಗಿಂತ ಸಣ್ಣದೂ ಆಗಿತ್ತು. ಜುಕೋವನ ಮೊದಲನೇ ಬೆಲೊರಶಿಯನ್ ಫ್ರಂಟಿನ ಒಳನುಗ್ಗುವಿಕೆಯಿಂದ ಉತ್ತರಭಾಗದಲ್ಲಿ ಉಂಟಾದ ಪ್ರಧಾನವಾದ ಬಿರುಕಿನ ಮೇಲೆ ದಾಳಿ ಮಾಡಲು ಹಿಟ್ಲರ್ ಸ್ಟೀನನಿಗೆ ಆದೇಶ ನೀಡಿದ. ಇದೇ ವೇಳೆಗೆ ಸೇನೆಯ ಒಳನುಗ್ಗುವಿಕೆಯಿಂದ ದಕ್ಷೀಣದೆಡೆಗೆ ಹಿಂದೂಡಲ್ಪಟ್ಟಿದ್ದ ಜರ್ಮನಿಯ 9ನೇ ಸೇನೆಗೆ ಉತ್ತರದೆಡೆ ನುಗ್ಗಿ ಇಬ್ಬದಿಯ ಆಕ್ರಮಣ(ಪಿನ್ಸರ್ ಅಟ್ಯಾಕ್) ನಡೆಸಲು ಆಜ್ಞಾಪಿಸಲಾಯಿತು. ಏಪ್ರಿಲ್ ೨೧ರಂದು ಸರ್ವೋಚ್ಚ ಸೇನಾ ಪ್ರಭುತ್ವ (ಓಬರ್‌ಕಮ್ಯಾಂಡೋ ಡೆಸ್ ಹೀರೆಸ್ )ದ ಪ್ರಮುಖನಾದ ಹಾನ್ಸ್ ಕ್ರೆಬ್ಸ್‌ನನ್ನು ಸಂಪರ್ಕಿಸಿದ ಹೀನ್ರಿಚಿ ಹಿಟ್ಲರನ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಿಲ್ಲವೆಂದು ತಿಳಿಸಿದನು. ಹೀನ್ರಿಚಿ ಹಿಟ್ಲರನೊಂದಿಗೆ ನೇರವಾಗಿ ಮಾತನಾಡಲು ಅಪ್ಪಣೆ ಕೋರಿದಾಗ ಹಿಟ್ಲರ್ ಬಹಳ ವ್ಯಸ್ತನಾಗಿದ್ದಾನೆಂದು ಕ್ರೆಬ್ಸ್ ತಿಳಿಸಿದನು. ಏಪ್ರಿಲ್ ೨೨ರಂದು ನಡೆಸಿದ ಕೊನೆಯ ಮಿಲಿಟರಿ ಸಭೆಗಳಲ್ಲೊಂದರಲ್ಲಿ ವರದಿಯ ನಡುವೆ ಹಿಟ್ಲರ್ ಜನರಲ್ ಸ್ಟೀನರನ ಆಕ್ರಮಣದ ಬಗ್ಗೆ ಪ್ರಶ್ನಿಸಿದನು. ಇಡೀ ಸಭೆ ದೀರ್ಘ ಮೌನ ತಾಳಿತು. ನಂತರ ಹಿಟ್ಲರನಿಗೆ ಆಕ್ರಮಣವು ನಡೆಯಲಿಲ್ಲವೆಂದೂ, ಹಿಟ್ಲರನ ಆದೇಶದ ಪ್ರಕಾರ ಸ್ಟೀನರನ ತುಕಡಿಗಳು ಬರ್ಲಿನ್‌ನಿಂದ ದೂರಸರಿದ ನಂತರ ರಶಿಯನ್ನರು ಬಲಹೀನವಾಗಿದ್ದ ಬರ್ಲಿನ್ ಸರಹದ್ದನ್ನು ಭೇದಿಸಿ ಒಳನುಗ್ಗಿರುವರೆಂದೂ ತಿಳಿಸಲಾಯಿತು. ವಿಲ್ಹೆಲ್ಮ್ ಕೀಟೆಲ್, ಹಾನ್ಸ್ ಕ್ರೆಬ್ಸ್, ಆಲ್ಫ್ರೆಡ್ ಜಾಡ್ಲ್, ವಿಲ್ಹೆಲ್ಮ್ ಬರ್ಗ್‌ಡಾರ್ಫ್ ಮತ್ತು ಮಾರ್ಟಿನ್ ಬೋರ್ಮನ್‌ರನ್ನು ಹೊರತುಪಡಿಸಿ ಬಾಕಿಯುಳಿದವರನ್ನು ಕೋಣೆಯಿಂದ ಹೊರಹೋಗಲು ಆಜ್ಞಾಪಿಸಿದ ಹಿಟ್ಲರ್ ತನ್ನ ಸೇನಾಧಿಕಾರಿಗಳ ಅಯೋಗ್ಯತೆ ಮತ್ತು ಅವರು ಬಗೆದ ದ್ರೋಹಗಳನ್ನು ತೀವ್ರವಾಗಿ ಖಂಡಿಸಿದ. ಇದರ ಪರಿಣಾಮವಾಗಿ ಹಿಟ್ಲರ್ ಬರ್ಲಿನ್‌ನಲ್ಲಿಯೇ ಉಳಿದುಕೊಂಡು ನಗರದ ಸುರಕ್ಷೆಯನ್ನು ಕಾಪಾಡುತ್ತಾ ಕೊನೆಗೆ ತಲೆಗೆ ಗುಂಡುಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪ್ರತಿಜ್ಞೆ ಮಾಡಿದ. ಅದೇ ದಿನ ಹಿಟ್ಲರ್ ಜನರಲ್ ವಾಲ್ದರ್ ವೆಂಕ್‌ನ ಹನ್ನೆರಡನೇ ಸೇನೆಯನ್ನು ಬಳಸಿಕೊಂಡು ಆಕ್ರಮಣದಿಂದ ವಿಮೋಚನೆ ಹೊಂದುವ ಯೋಜನೆಯನ್ನು ರೂಪಿಸಿದ. ಈ ಯೋಜನೆಯ ಪ್ರಕಾರ ಪಶ್ಚಿಮದಲ್ಲಿ ಅಮೆರಿಕನ್ನರನ್ನು ಎದುರಿಸಿ ಹೋರಾಡುತ್ತಿದ್ದ ವೆಂಕ್ ಮತ್ತು ಆತನ ಸೇನೆ ಪೂರ್ವದೆಡೆ ತಿರುಗಿಕೊಂಡು ಬರ್ಲಿನ್ನನ್ನು ಉಳಿಸಲೋಸುಗ ಯುದ್ಧ್ದ ಮಾಡಬೇಕಾಗಿತ್ತು. ಓಂಬತ್ತನೇ ಸೇನೆಯ ಜತೆಗೆ ಸೇರಿಕೊಂಡ ಹನ್ನೆರಡನೇ ಸೇನೆಯು ನಗರದ ಮೇಲಿನ ಆಕ್ರಮಣವನ್ನು ಭೇದಿಸಿ ಒಳನುಗ್ಗಬೇಕಾಗಿತ್ತು. ವೆಂಕ್ ಆಕ್ರಮಣ ಮಾಡಿದ ಮತ್ತು ಎಲ್ಲ ಗಲಿಬಿಲಿಯ ನಡುವೆ ಪಾಟ್ಸ್‌ಡ್ಯಾಮ್ ಕಾವಲುದಂಡನ್ನು ಸಂಪರ್ಕಿಸುವಲ್ಲ್ಲಿ ಯಶಸ್ವಿಯೂ ಆದ. ಆದರೆ ಒಂಬತ್ತನೇ ಸೇನೆಯ ಜತೆಗಿನ ಕೂಡಿಕೆಯು ಇತರ ಎಲ್ಲಾ ಯೋಜನೆಗಳಂತೆಯೇ ಕೊನೆಗೆ ವಿಫಲವಾಯಿತು. ಏಪ್ರಿಲ್ ೨೩ರಂದು ಜೋಸೆಫ್ ಗೀಬೆಲ್ಸ್ ಬರ್ಲಿನ್ನಿನ ಜನರೆದುರು ಈ ಕೆಳಗಿನಂತೆ ಘೋಷಣೆ ಮಾಡಿದ:

I call on you to fight for your city. Fight with everything you have got, for the sake of your wives and your children, your mothers and your parents. Your arms are defending everything we have ever held dear, and all the generations that will come after us. Be proud and courageous! Be inventive and cunning! Your Gauleiter is amongst you. He and his colleagues will remain in your midst. His wife and children are here as well. He, who once captured the city with 200 men, will now use every means to galvanize the defense of the capital. The Battle for Berlin must become the signal for the whole nation to rise up in battle...

ಅದೇ ದಿನ ಥರ್ಡ್ ರೀಚ್‌ ನ ಮೂರನೇ ಪ್ರಮುಖ ನಾಯಕನೂ, ಲಫ್ಟ್‌ವಾಫ್‌ ನ ಕಮ್ಯಾಂಡರನೂ ಆಗಿದ್ದ ಹರ್ಮನ್ ಗೋರಿಂಗ್ ಬವೇರಿಯದ ಬರ್ಚ್‌ಟೆಸ್‌ಗ್ಯಾಡೆನ್‌ ನಿಂದ ಒಂದು ತಂತಿ ಕಳುಹಿಸಿದ. ಹಿಟ್ಲರ್ ಬರ್ಲಿನ್ನಿನಲ್ಲಿ ನಿರ್ಬಂಧಿಸಲ್ಪಟ್ಟಿರುವ ಕಾರಣ ಆತನ ನಂತರದ ಉತ್ತರಾಧಿಕಾರಿಯಾದ ತಾನು ಜರ್ಮನಿಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆನ್ನುವುದು ಗೋರಿಂಗನ ಒತ್ತಾಯವಾಗಿತ್ತು. ಗೋರಿಂಗ್ ಒಂದು ಕಾಲಾವಧಿಯನ್ನು ನೀಡಿ ಈ ಗಡುವು ಮುಗಿದ ನಂತರ ಹಿಟ್ಲರ್ ಅಸಮರ್ಥನೆಂದು ತಾನು ಪರಿಗಣಿಸುವುದಾಗಿ ತಿಳಿಸಿದ. ಇದಕ್ಕೆ ಪ್ರತ್ಯುತ್ತರವಾಗಿ ಕುಪಿತಗೊಂಡಿದ್ದ ಹಿಟ್ಲರ್ ಗೋರಿಂಗನನ್ನು ಸೆರೆಹಿಡಿಸಿದ. ಏಪ್ರಿಲ್ ೨೯ರಂದು ಹಿಟ್ಲರ್ ಬರೆದ ಉಯಿಲಿನಲ್ಲಿ ಗೋರಿಂಗನನ್ನು ಸರ್ಕಾರದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿತ್ತು. ಇದಾದ ನಂತರ ಏಪ್ರಿಲ್ ೨೩ರಂಡು ಜೆನೆರಲ್ ಡೆರ್ ಆರ್ಟಿಲರೀ ಆಗಿದ್ದ ಹೆಲ್ಮಥ್ ವೀಲ್ಡಿಂಗ್‌ನನ್ನು ಹಿಟ್ಲರ್ ಬರ್ಲಿನ್ ಡಿಫೆನ್ಸ್ ಏರಿಯಾದ ಸೇನಾನಾಯಕನನ್ನಾಗಿ ನಿಯಮಿಸಿದ. ಲೆಫ್ಟಿನೆಂಟ್ ಜನರಲ್(ಜನರಲ್ಲೆಫ್ಟಿನೆಂಟ್ ) ಹೆಲ್ಮಥ್ ರೇಮ್ಯಾನ್ ಮತ್ತು ಕರ್ನಲ್(ಓಬರ್ಸ್ಟ್ ) ಅರ್ನ್ಸ್ಟ್ ಕೀದರ್‌ರ ಜಾಗದಲ್ಲಿ ವೀಲ್ಡಿಂಗನನ್ನು ನೇಮಿಸಲಾಯಿತು. ರೀಚ್ ಚ್ಯಾನ್ಸೆಲರಿ ಮತ್ತು ಫ್ಯೂರೆರ್‌ಬಂಕರುಗಳನ್ನೊಳಗೊಂಡ ಸರ್ಕಾರೀ ಪ್ರದೇಶವನ್ನು ಸಂರಕ್ಷಿಸುವ ಸಲುವಾಗಿ ವಾಫೆನ್ SSನ ಜನರಲ್(SS ಬ್ರಿಗೇಡ್‌ಫ್ಯೂರೆರ್) ಆಗಿದ್ದ ವಿಲ್ಹೆಲ್ಮ್ ಮಾಂಕ್‌ನನ್ನು ಸಮರಸೇನಾನಾಯಕನನ್ನಾಗಿ ಹಿಟ್ಲರ್ ನಿಯಮಿಸಿದನು. ಏಪ್ರಿಲ್ ೨೭ರ ಹೊತ್ತಿಗೆ ಬರ್ಲಿನ್‌ಗೆ ಹೊರಗಿನ ಜರ್ಮನಿಯ ಜತೆ ಯಾವ ಸಂಪರ್ಕವೂ ಇಲ್ಲದಂತೆ ಆಗಿಹೋಗಿತ್ತು. ಏಪ್ರಿಲ್ ೨೮ ರಂದು ಹಿಟ್ಲರನಿಗೆ SSನಾಯಕ ಹೀನ್ರಿಕ್ ಹಿಮ್ಲರ್ ಸ್ವೀಡಿಶ್ ರಾಜನೀತಿಜ್ಞ ಕೌಂಟ್ ಫೋಕ್ ಬರ್ನಡಾಟ್‌ನ ಮುಖಾಂತರ ಪಾಶ್ಚಾತ್ಯ ಮಿತ್ರರಾಷ್ಟ್ರಗಳೊಡನೆ ಶರಣಾಗತಿಯ ಕರಾರುಗಳನ್ನು ಚರ್ಚಿಸಲೆತ್ನಿಸುತ್ತಿರುವ ವಿಷಯ ತಿಳಿದುಬಂತು. ಹಿಮ್ಲರನನ್ನು ಸೆರೆಗೆ ತಳ್ಳುವ ಆದೇಶ ಹೊರಡಿಸಿದ ಹಿಟ್ಲರ್ ಬರ್ಲಿನಿನಲ್ಲಿ ಹಿಮ್ಲರನ ಪ್ರತಿನಿಧಿಯಾಗಿದ್ದ ಹರ್ಮನ್ ಫೆಜೆಲೀನ್‌ನನ್ನು ಗುಂಡಿಕ್ಕಿ ಕೊಲ್ಲಿಸಿದನು.

ಅಡೋಲ್ಫ್ ಹಿಟ್ಲರ್ 
US ಮಿಲಿಟರಿ ಸುದ್ದಿ ಪತ್ರಿಕೆಯ ಮುಖಪುಟ ನಕ್ಷತ್ರಗಳು ಹಾಗೂ ಗೀಟುಗಳು, ಮೇ 1945

ಏಪ್ರಿಲ್ ೨೮ರ ರಾತ್ರಿ ಜನರಲ್ ವೆಂಕ್ ತನ್ನ ಹನ್ನೆರಡನೇ ಸೇನೆಯನ್ನು ಗಡಿರೇಖೆಯುದ್ದಕ್ಕೂ ಹಿಮ್ಮೆಟ್ಟಿಸಲಾಗಿದೆಯೆಂದು ವರದಿ ಸಲ್ಲಿಸಿದ. ಬರ್ಲಿನ್‌ನ ಕಡೆಗೆ ಇನ್ನು ಮುನ್ನುಗ್ಗಿ ಆಕ್ರಮಣ ಮಾಡಿವುದು ತಮಗೆ ಸಾಧ್ಯವಿಲ್ಲವೆಂದೂ ವೆಂಕ್ ಸೂಚಿಸಿದ. ಈ ಮಾಹಿತಿಯನ್ನು ಪಡೆದುಕೊಂಡ ಜನರಲ್ ಆಲ್ಫ್ರೆಡ್ ಜಾಡ್ಲ್(ಸುಪ್ರೀಮ್ ಆರ್ಮಿ ಕಮ್ಯಾಂಡ್) ಏಪ್ರಿಲ್ ೩೦ರ ಮುಂಜಾವದ ತನಕವೂ ಇದನ್ನು ಬರ್ಲಿನ್ನಿನಲ್ಲಿದ್ದ ಹಾನ್ಸ್ ಕ್ರೆಬ್ಸನಿಗೆ ತಿಳಿಸಲಿಲ್ಲ. ಏಪ್ರಿಲ್ ೨೯ರಂಡು ಹಿಟ್ಲರ್ ತನ್ನ ಆಪ್ತ ಕಾರ್ಯದರ್ಶಿ ಟ್ರಾಡ್ಲ್ ಯೂಂಗ್‌ನಿಗೆ ತನ್ನ ಉಯಿಲು ಮತ್ತು ರಾಜಕೀಯ ಹೇಳಿಕೆಯನ್ನು ಬರೆದುಕೊಳ್ಳಲು ನಿರ್ದೇಶಿಸಿದ. ಅಡಾಲ್ಫ್ ಹಿಟ್ಲರನ ಈ ಕೊನೆಯ ಉಯಿಲು ಮತ್ತು ಶಾಸನಕ್ಕೆ ಹಾನ್ಸ್ ಕ್ರೆಬ್ಸ್, ವಿಲ್ಹೆಲ್ಮ್ ಬರ್ಗ್‌ಡಾರ್ಫ್, ಜೋಸೆಫ್ ಗೀಬೆಲ್ಸ್ ಮತ್ತು ಮಾರ್ಟಿನ್ ಬೋರ್ಮನ್ ಸಾಕ್ಷಿಗಳಾಗಿ ಸಹಿಹಾಕಿದರು. ಅದೇ ದಿನ ಹಿಟ್ಲರನಿಗೆ ಇಟಾಲಿಯನ್ ಸರ್ವಾಧಿಕಾರಿ ಬೆನಿಟೊ ಮುಸೊಲಿನಿಯ ಹಿಂಸಾತ್ಮಕ ಸಾವಿನ ಸುದ್ದಿ ದೊರಕಿದ್ದು ಆತನ ಸೆರೆಯಾಳಾಗಬಾರದೆಂಬ ಇಚ್ಚೆಗೆ ಪುಷ್ಟಿ ನೀಡಿತೆನ್ನಲಾಗುತ್ತದೆ. ೧೯೪೫ರ ಏಪ್ರಿಲ್ ೩೦ರಂದು ಬರ್ಲಿನಿನ ಬೀದಿಬೀದಿಗಳಲ್ಲಿ ಖಾಡಾಖಾಡಿ ಯುದ್ಧ ನಡೆದು ಸೋವಿಯೆತ್ ತುಕಡಿಗಳು ಹಿಟ್ಲರನ ಬಂಕರಿನಿಂದ ಇನ್ನೇನು ಒಂದು ಬ್ಲಾಕ್ ದೂರವಿದ್ದಂತೆಯೇ ಹಿಟ್ಲರ್ ತನ್ನ ಹಣೆ ಮತ್ತು ಕಿವಿಯ ನಡುಭಾಗಕ್ಕೆ ಗುಂಡು ಹೊಡೆದುಕೊಂಡು, ಜತೆಗೇ ಸಯನೈಡ್ ಗುಳಿಗೆಯೊಂದನ್ನು ಕಚ್ಚಿಕೊಂಡ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ. ಕೆಂಪು ಸೈನ್ಯ ಮುನ್ನುಗ್ಗುತ್ತ ಶೆಲ್ಲುಗಳು ಸಿಡಿಯುತ್ತಿರುವಂತೆಯೇ SS ಸ್ಟರ್ಮ್‌ಬಾನ್‌ಫ್ಯೂರೆರ್ ಆಗಿದ್ದ ಒಟ್ಟೊ ಗುನ್ಷ್ಫ್ ಫ್ಯೂರೆರ್‌ಬಂಕರ್‌ ನ ಸಹಾಯಕರೊಡನೆ ಸೇರಿಕೊಂಡು ಹಿಟ್ಲರ್ ಮತ್ತು ಎವಾ ಬ್ರಾನ್(ಹಿಂದಿನ ದಿನವಷ್ಟೇ ಮದುವೆಯಾಗಿದ್ದ ಆತನ ಪ್ರೇಯಸಿ)ರ ದೇಹಗಳನ್ನು ಬಾಂಬ್ ಕ್ರೇಟರೊಂದರಲ್ಲಿ ಹಾಕಿ ಗ್ಯಾಸೊಲಿನ್ ಸುರಿದು ಸುಟ್ಟುಹಾಕಿದರು. ಮೇ ೨ರಂದು ಬರ್ಲಿನ್ ಶರಣಾಯಿತು. ಯುದ್ಧಾನಂತರ ಹಿಟ್ಲರನ ಅವಶೇಷಗಳು ಏನಾದವೆಂಬುದರ ಬಗ್ಗೆ ವಿವಾದಾಸ್ಪದ ವರದಿಗಳು ಹುಟ್ಟಿಕೊಂಡವು. ಸೋವಿಯೆತ್ ಒಕ್ಕೂಟದ ಅಳಿವಿನ ನಂತರ ಬಹಿರಂಗವಾದ ದಾಖಲೆಗಳ ಪ್ರಕಾರ ಹಿಟ್ಲರ್, ಎವಾ ಬ್ರಾನ್, ಜೋಸೆಫ್ ಮತ್ತು ಮಾಗ್ಡಾ ಗೀಬೆಲ್ಸ್, ಆರು ಗೀಬೆಲ್ಸ್ ಮಕ್ಕಳು, ಜನರಲ್ ಹಾನ್ಸ್ ಕ್ರೆಬ್ಸ್ ಮತ್ತು ಹಿಟ್ಲರನ ನಾಯಿಗಳನ್ನು ಬ್ರಾಂಡೆನ್‌ಬರ್ಗ್‌ನ ರಾಥೆನೋವ್ ಬಳಿಯ ಗೋರಿಗಳಲ್ಲಿ ರಹಸ್ಯವಾಗಿ ಸಮಾಧಿ ಮಾಡಲಾಯಿತು. ೧೯೭೦ರಲ್ಲಿ ಈ ಎಲ್ಲಾ ಅವಶೇಷಗಳನ್ನು ಸೋವಿಯೆತ್‌ನವರು ಹೊರತೆಗೆದು ಸುಟ್ಟು ಆ ಬೂದಿಯನ್ನು ಎಲ್ಬ್ ನದಿಯ ಮೇಲೆ ಚೆದುರಿಸಿದರು. ರಶಿಯನ್ ಫೆಡರಲ್ ಸೆಕ್ಯೂರಿಟಿ ಸರ್ವಿಸ್‌ನ ಪ್ರಕಾರ ಅವರ ಸಂಗ್ರಹಾಲಯದಲ್ಲಿ ಉಳಿದುಕೊಂಡಿದ್ದ ೨೦೦೦ನೇ ಇಸವಿಯಲ್ಲಿ ಸಾರ್ವಜನಿಕ ಪ್ರದರ್ಶನವೊಂದರಲ್ಲಿ ತೋರಿಸಲಾದ ತಲೆಬುರುಡೆಯ ಚೂರೊಂದು ಹಿಟ್ಲರನ ದೇಹದ ಏಕೈಕ ಅವಶೇಷವೆಂದೂ ಹೇಳಲಾಗಿದೆ. ಈ ತಲೆಬುರುಡೆಯ ಸತ್ಯಾಸತ್ಯತೆಯನ್ನು ಇತಿಹಾಸಜ್ಞರು ಮತ್ತು ಸಂಶೋಧಕರು ಪ್ರಶ್ನಿಸುತ್ತ ಬಂದಿದ್ದಾರೆ.

ಪರಂಪರೆ

ಅಡೋಲ್ಫ್ ಹಿಟ್ಲರ್ 
ಅಡಾಲ್ಫ್ ಹಿಟ್ಲರ್ ಜನಿಸಿದ ಆಸ್ಟ್ರಿಯಾದ ಬ್ರೌನೌ ಇನ್‌ ಕಟ್ಟ್ಡದ ಹೊರಭಾಗದಲ್ಲಿ ದ್ವಿತೀಯ ಮಹಾಯುದ್ಧದ ಭೀಕರತೆಗಳನ್ನು ಕುರಿತು ಎಚ್ಚರಿಕೆಯ ಸ್ಮಾರಕಶಿಲೆ.
"What manner of man is this grim figure who has performed these superb toils and loosed these frightful evils?"—Winston Churchill in Great Contemporaries (1935)

ಹಿಟ್ಲರ್, ನಾಝೀ ಪಕ್ಷ ಮತ್ತು ನಾಝಿತ್ವದ ಪರಿಣಾಮಗಳನ್ನು ಇಂದು ಎಲ್ಲೆಡೆ ಬಹಳ ಅನೈತಿಕವೆಂದು ಪರಿಗಣಿಸಲಾಗುತ್ತದೆ. ಇತಿಹಾಸಜ್ಞರು, ತತ್ವಶಾಸ್ತ್ರಜ್ಞರು ಮತ್ತು ರಾಜಕಾರಣಿಗಳು ಇದನ್ನು ಸೂಚಿಸುವಾಗ ಜಾತ್ಯತೀತ ಮತ್ತು ಧಾರ್ಮಿಕ ಅರ್ಥಗಳೆರಡನ್ನೂ ಒಳಗೊಂಡ ’ದುಷ್ಟಶಕ್ತಿ ’ಎಂಬ ಪದವನ್ನು ಆಗಾಗ ಬಳಸಿದ್ದಾರೆ. ಹಿಟ್ಲರನ ಸಾಂಸ್ಕೃತಿಕ ಬಣ್ಣನೆ ಮತ್ತು ಐತಿಹಾಸಿಕ ಚಿತ್ರಣಗಳು ವಿಪರೀತ ಖಂಡನಾಪೂರಿತವಾಗಿವೆ. ಜರ್ಮನಿ ಮತ್ತು ಆಸ್ಟ್ರಿಯಾಗಳಲ್ಲಿ ಸ್ವಸ್ತಿಕ ಅಥವಾ ಇತರ ಯಾವುದೇ ನಾಝೀ ಸಂಕೇತಗಳನ್ನು ಬಳಸುವದನ್ನು ನಿಷೇಧಿಸಲಾಗಿದೆ. ಹಾಲೋಕಾಸ್ಟ್ ನಿರಾಕರಣೆಯನ್ನೂ ಎರಡೂ ದೇಶಗಳಲ್ಲಿ ನಿಷೇಧಿಸಲಾಗಿದೆ. ಆಸ್ಟ್ರಿಯಾದ ಬ್ರಾನಾ ಆಮ್ ಇನ್‌ನಲ್ಲಿರುವ ಹಿಟ್ಲರನ ಹುಟ್ಟಿದ ಜಾಗದ ಗುರುತು ತೋರುವ ಒಂದು ಕಲ್ಲಿನ ಮೇಲೆ ಈ ಕೆಳಗಿನ ಸಂದೇಶವನ್ನು ಕೆತ್ತಲಾಗಿದೆ:

FÜR FRIEDEN FREIHEIT

UND DEMOKRATIE
NIE WIEDER FASCHISMUS

MILLIONEN TOTE MAHNEN

ಸರಳವಾಗಿ ಅನುವಾದಿಸುವುದಾದರೆ ಈ ಸಂದೇಶ ಇಂತಿದೆ: "ಶಾಂತಿ ಮತ್ತು ಸ್ವಾತಂತ್ರ್ಯಕ್ಕಾಗಿ // ಮತ್ತು ಪ್ರಜಾಪ್ರಭುತ್ವಕ್ಕಾಗಿ // ಫ್ಯಾಸಿಸಮ್ ಎಂದೆಂದಿಗೂ ಬೇಕಿಲ್ಲ // ಸತ್ತ ಮಿಲಿಯಗಟ್ಟಲೆ ಜನ (ನಮಗೆ) ನೆನಪಿಸುತ್ತಾರೆ" ಹೀಗಿದ್ದಾಗ್ಯೂ ಕೆಲವು ಜನ ಹಿಟ್ಲರನ ಪರಂಪರೆಯ ಬಗ್ಗೆ ಮಾತನಾಡುವಾಗ ತಟಸ್ಥ ಅಥವಾ ಪಕ್ಷಪಾತೀ ಧೋರಣೆಯನ್ನು ವಹಿಸಿದ್ದಾರೆ. ಈಜಿಪ್ಟ್‌ನ ಮಾಜೀ ಅಧ್ಯಕ್ಷ ಅನ್ವರ್ ಎಲ್ ಸಾದತ್ ಯುವಕನಾಗಿದ್ದಾಗ ೧೯೫೩ರಲ್ಲಿ ಹಿಟ್ಲರನ ಬಗ್ಗೆ ತನಗಿದ್ದ ’ಮೆಚ್ಚುಗೆ’ಯನ್ನು ವ್ಯಕ್ತಪಡಿಸಿದರು. ಆದರೆ ಇವರ ಈ ಅಭಿಪ್ರಾಯವು ಬ್ರಿಟಿಶ್ ಸಾಮ್ರಾಜ್ಯದ ವಿರುದ್ಧ ಬಂಡೇಳುವುದರ ಬಗ್ಗೆ ಆಗಿರಬಹುದು. ಲೂಯಿಸ್ ಫರ್ರಾಖಾನ್ ಹಿಟ್ಲರನ ಬಗ್ಗೆ ಮಾತನಾಡುತ್ತ ಆತ ’ಒಬ್ಬ ಮಹಾನ್ ವ್ಯಕ್ತಿ’ ಎಂದಿದ್ದಾರೆ. ಭಾರತದ ಮಹಾರಾಷ್ಟ್ರ ರಾಜ್ಯದ ಬಲಪಂಥೀಯ ಪಕ್ಷವಾದ ಶಿವಸೇನೆಯ ನೇತಾರ ಬಾಳಾ ಠಾಕ್ರೆ ೧೯೯೫ರಲ್ಲಿ ತಾನು ಹಿಟ್ಲರನ ಅಭಿಮಾನಿ ಎಂದು ಬಹಿರಂಗವಾಗಿ ಸಾರಿದರು. ಜರ್ಮನ್ ಇತಿಹಾಸಜ್ಞ ಫ್ರೆಡರಿಕ್ ಮೀನೆಕ್ ಹಿಟ್ಲರನ ಜೀವನವು "ಇತಿಹಾಸದ ಮೇಲೆ ಒಂದು ವ್ಯಕ್ತಿತ್ವ ಮಾಡಬಹುದಾದ ಅದ್ವಿತೀಯ, ಊಹಾತೀತ ಪ್ರಭಾವಕ್ಕೆ ನೀಡಬಹುದಾದ ಮಹಾನ್ ಉದಾಹರಣೆ" ಎಂದು ಹೇಳಿದ್ದಾರೆ.

ಧಾರ್ಮಿಕ ನಂಬಿಕೆಗಳು

ತನ್ನ ತಂದೆತಾಯಿಗಳ ಜತೆಯಿದ್ದಾಗ ರೋಮನ್ ಕ್ಯಾಥೊಲಿಕ್ ಧರ್ಮವನ್ನು ಅನುಸರಿಸುತ್ತಿದ್ದ ಹಿಟ್ಲರ್ ಮನೆಯನ್ನು ತೊರೆದ ನಂತರ ಮಾಸ್‌ಗಳಿಗೆ ಹೋಗುತ್ತಿದ್ದನೆ ಅಥವಾ ಸ್ಯಾಕ್ರಮೆಂಟ್‌ಗಳನ್ನು ತೆಗೆದುಕೊಳ್ಳುತ್ತಿದ್ದನೆ ಎಂಬುದು ತಿಳಿದುಬಂದಿಲ್ಲ. ಆದರೆ ಚರ್ಚ್ ತೆರಿಗೆಯ ಮೂಲಕ ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟೆಂಟ್ ಚರ್ಚುಗಳನ್ನು ನಡೆಸಲಾಗುತ್ತಿದ್ದ ಜರ್ಮನಿಯಲ್ಲಿ ನೆಲೆಸತೊಡಗಿದ ನಂತರ ಹಿಟ್ಲರ್(ಗೀಬೆಲ್ಸ್‌ನಂತೆ) "ತನ್ನ ಚರ್ಚನ್ನು ಬಿಡಲಿಲ್ಲ ಮತ್ತು ತೆರಿಗೆ ಕಟ್ಟುವುದನ್ನು ವಿರೋಧಿಸಲಿಲ್ಲ. ಆದ್ದರಿಂದ ನಾಮಕವಾಗಿಯಾದರೂ ಹಿಟ್ಲರನನ್ನು ಕ್ಯಾಥೊಲಿಕ್ ಎಂದು ವರ್ಗೀಕರಿಸಬಹುದು" ಎಂದು ಇತಿಹಾಸಜ್ಞ ಸ್ಟೀಗ್‌ಮಾನ್-ಗಾಲ್ ಹೇಳಿಕೆ ನೀಡಿದ್ದಾರೆ. ಆದರೆ ಇದರ ಜತೆಗೇ ನಾಝೀ ಜರ್ಮನಿಯಲ್ಲಿ ಧರ್ಮದ ಬಗ್ಗೆ ಮಾತನಾಡುತ್ತಾ ಸ್ಟೀಗ್‌ಮಾನ್-ಗಾಲ್ " ಈ ಲೆಕ್ಕದಲ್ಲಿ ನಿಜವಾದ ಭಕ್ತಿಯಿದೆಯೆಂದು ತೋರುವದಕ್ಕಾಗಿ ಸುಮ್ಮನೆ ಚರ್ಚಿನ ಸದಸ್ಯರಾಗಿರುವುದೇನೂ ಕಡ್ಡಾಯವಾಗಿರಲಿಲ್ಲ." ಎಂದು ಹೇಳುತ್ತಾರೆ. ಸಾರ್ವಜನಿಕವಾಗಿ ಕ್ರಿಶ್ಚಿಯನ್ ಪರಂಪರೆ ಮತ್ತು ಜರ್ಮನ್ ಕ್ರಿಶ್ಚಿಯನ್ ಸಂಸ್ಕೃತಿಯನ್ನು ಆಗಾಗ್ಗೆ ಹೊಗಳುತ್ತಿದ್ದ ಹಿಟ್ಲರ್ ಯಹೂದಿಗಳ ವಿರುದ್ಧ ಹೋರಾಡಿದ ಆರ್ಯನ್ ಯೇಸುಕ್ರಿಸ್ತನನ್ನು ತಾನು ನಂಬುವುದಾಗಿ ಸಾರಿದ. ತನ್ನ ಭಾಷಣ ಮತ್ತು ಪ್ರಕಟಣೆಗಳಲ್ಲಿ ತನ್ನ ಯಹೂದ್ಯ-ವಿರೋಧಕ್ಕೆ ತನ್ನ ಕ್ರೈಸ್ತಧರ್ಮದ ಅರ್ಥೈಸುವಿಕೆಯನ್ನು ಪ್ರಮುಖ ಕಾರಣವನ್ನಾಗಿ ಹೆಸರಿಸುತ್ತ ಹಿಟ್ಲರ್ "ಒಬ್ಬ ಕ್ರಿಶ್ಚಿಯನ್ನನಾಗಿ ನನ್ನ ಕರ್ತವ್ಯವೆಂದರೆ ಮೋಸಹೋಗದಿರುವುದು ಮತ್ತು ಸತ್ಯ ಹಾಗು ನ್ಯಾಯಕ್ಕಾಗಿ ಹೋರಾಡುವದು." ಎಂದು ಹೇಳಿಕೆ ನೀಡಿದ್ದಾನೆ. ಆತನ ಅಪ್ತರ ವರದಿಗಳ ಪ್ರಕಾರ ವೈರುಧ್ಯಗಳಿಂದ ಕೂಡಿದ ವ್ಯಕ್ತಿಗತ ಹೇಳಿಕೆಗಳು ಹಿಟ್ಲರನನ್ನು ಸಾಂಪ್ರದಾಯಿಕ ಕ್ರೈಸ್ತಧರ್ಮದ ವಿರೋಧಿಯಾಗಿದ್ದ ಧಾರ್ಮಿಕ ವ್ಯಕ್ತಿಯಾಗಿ ಬಿಂಬಿಸುತ್ತವೆ. "ಕ್ಯಾಥೊಲಿಕ್ ಸಂಸ್ಥೆಯು ಯಹೂದಿಗಳನ್ನು ಬೆಂಬಲಿಸುತ್ತಿದೆಯೆಂಬ ಸ್ಟ್ರೀಶರನ ವಾದ"ಕ್ಕೆ ಪುಷ್ಟಿ ನೀಡುವಂತೆ ಹಿಟ್ಲರನು ಕ್ರೈಸ್ತಧರ್ಮವನ್ನು ಒಮ್ಮೆಯಾದರೂ ಟೀಕಿಸಿದನು. ಜಾನ್ ಎಸ್. ಕಾನ್‌ವೇ ಮತ್ತಿತರ ಇತಿಹಾಸಜ್ಞರ ಪ್ರಕಾರ ಈ ವ್ಯಕ್ತಿಗತ ಹೇಳಿಕೆಗಳು ಹಿಟ್ಲರ್ ಕ್ರಿಶ್ಚಿಯನ್ ಚರ್ಚುಗಳ ಬಗ್ಗೆ "ಮೂಲಭೂತ ವಿರೋಧ" ಹೊಂದಿದ್ದನೆನ್ನುವದಕ್ಕೆ ಸಾಕ್ಷಿಯಾಗಿವೆ. ಹಿಟ್ಲರನ ವ್ಯಕ್ತಿಗತ ಹೇಳಿಕೆಗಳ ಅನೇಕ ವರದಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಇದಕ್ಕೆ ಮುಖ್ಯ ಉದಾಹರಣೆಗೆ ಹೆಚ್ಚಿನ ಇತಿಹಾಸಜ್ಞರು ಹರ್ಮನ್ ರಾಶ್ನಿಂಗ್‌ನ ’ಹಿಟ್ಲರ್ ಸ್ಪೀಕ್ಸ್ ’ ಅನ್ನು ಊಹಾತ್ಮಕ ಕಲ್ಪನೆಗಳಿಂದ ಕೂಡಿದ್ದೆಂದು ಅಭಿಪ್ರಾಯಪಡುತ್ತಾರೆ. ಹಿಟ್ಲರನ ವ್ಯಕ್ತಿಗತ ಧಾರ್ಮಿಕ ಹೇಳಿಕೆಗಳನ್ನು ಆಧರಿಸಿದ ಸಿಂಹಾವಲೋಕನಗಳು ಮಿಖಾಯೆಲ್ ರಿಬ್‌ಮಾನ್‌ರ ಪ್ರಸಿದ್ಧ ಪುಸ್ತಕದಲ್ಲಿ ಅಥವಾ ಸ್ಟೀಗ್‌ಮಾನ್-ಗಾಲ್‌ರ ನಾಝಿಸಮ್ ಮತ್ತು ಕ್ರಿಶ್ಚಿಯಾನಿಟಿಯ ಬಗೆಗಿನ ವಿವಾದಾಸ್ಪದ ಪುಸ್ತಕದ ಪುಟಸಂಖ್ಯೆ ೨೫೨-೨೫೯ರಲ್ಲಿ ಲಭ್ಯವಿವೆ. ಜರ್ಮನಿಯ ಚರ್ಚುಗಳ ಜತೆಗಿನ ರಾಜಕೀಯ ಸಂಬಂಧಗಳ ಬಗ್ಗೆ ಹಿಟ್ಲರ್ "ತನ್ನ ರಾಜಕೀಯ ಗುರಿಸಾಧನೆಗೆ ತಕ್ಕುದಾದ" ತಂತ್ರವನ್ನು ಪಾಲಿಸಿದನು. ನಾಝಿಗಳು ಅಧಿಕಾರಕ್ಕೇರುವ ಮುನ್ನವೇ ರೀಚ್‌ನೊಳಗಿನ ಕ್ರಿಶ್ಚಿಯಾನಿಟಿಯನ್ನು ತೊಡೆದುಹಾಕುವುದು ಹಿಟ್ಲರನ ಸಾರ್ವತ್ರಿಕ ಯೋಜನೆಯಾಗಿತ್ತು. ಹಿಟ್ಲರ್ ಯೂಥ್‌ನ ನೇತಾರನ ಹೇಳಿಕೆಯ ಪ್ರಕಾರ "ಕ್ರೈಸ್ತಧರ್ಮವನ್ನು ತೊಡೆದುಹಾಕುವುದು ಮೊದಲಿನಿಂದಲೂ ನ್ಯಾಶನಲ್ ಸೋಶಿಯಲಿಸ್ಟ್ ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು" ಆದರೂ, ಈ ತೀವ್ರ ಮನೋಭಾವವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದು "ಜಾಗ್ರತೆಯಿಂದ ಮಾಡಿದ ಪರಿಗಣನೆಯಿಂದಾಗಿ ಸಾಧ್ಯವಾಗಲಿಲ್ಲ." ಹೆಚ್ಚಿನ ಇತಿಹಾಸಜ್ಞರ[ಸೂಕ್ತ ಉಲ್ಲೇಖನ ಬೇಕು] ನಂಬಿಕೆಯಂತೆ ಕೆಲವು ನಾಝೀ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದ ಹಿಟ್ಲರ್ ರಹಸ್ಯದೀಕ್ಷೆ(ಈಸೋಟರಿಕ್ ಐಡಿಯಾ), ಗೌಪ್ಯಶಾಸ್ತ್ರ(ಒಕಲ್ಟಿಸಮ್) ಅಥವಾ ಏರಿಯಾಸಫಿ ಯನ್ನು ನಂಬುತ್ತಿರಲಿಲ್ಲ ಮತ್ತು ಇಂತಹ ನಂಬಿಕೆಗಳನ್ನು ಮೈನ್ ಕ್ಯಾಂಫ್‌ ನಲ್ಲಿ ಟೀಕಿಸಿದ. ಇನ್ನುಳಿದವರು ಹಿಟ್ಲರ್ ತನ್ನ ಜನಾಂಗೀಯ ಭಾವನೆಗಳ ವಿಚಾರದಲ್ಲಿ ಜರ್ಮನರ ಆಧ್ಯಾತ್ಮಿಕ ಶ್ರೇಷ್ಠತೆಯ ಬಗೆಗಿನ ರಹಸ್ಯಶಾಸ್ತ್ರದ ಪುಸ್ತಕಗಳಿಂದ, ಅದರಲ್ಲೂ ಯಹೂದ್ಯ ವಿರೋಧಿ ಆಧ್ಯಾತ್ಮಿಕ ಪತ್ರಿಕೆಯಾಗಿದ್ದ ಓಸ್ಟಾರಾದಂತಹ ಪ್ರಕಟಣೆಗಳಿಂದ ಬಹಳ ಪ್ರಭಾವಿತನಾಗಿದ್ದನೆಂದೂ, ಈ ಪತ್ರಿಕೆಯ ಪ್ರಕಾಶಕ ಲ್ಯಾನ್ಜ್ ವಾನ್ ಲೀಬೆನ್‌ಫೆಲ್ಸ್‌ನ ಧೋರಣೆಗಳನ್ನು ಅನುಮೋದಿಸುತ್ತಿದ್ದನೆಂದೂ, ೧೯೦೯ರಲ್ಲಿ ಲೀಬೆನ್‌ಫೆಲ್ಸನನ್ನು ಭೇಟಿಮಾಡಿ ಆತನ ಕೆಲಸವನ್ನು ಶ್ಲಾಘಿಸಿದನೆಂದೂ ವಾದಿಸುತ್ತಾರೆ. ಹಿಟ್ಲರ್ ತನ್ನನ್ನು ಭೇಟಿಮಾಡಿದ್ದನೆಂದು ನೀಡಿರುವ ಲ್ಯಾಂಜನ ಹೇಳಿಕೆಯ ಸತ್ಯಾಸತ್ಯತೆಗಳ ಬಗ್ಗೆ ಇತಿಹಾಸಜ್ಞರಲ್ಲಿ ಇಂದಿಗೂ ಭಿನ್ನಾಭಿಪ್ರಾಯಗಳಿವೆ. ನಿಕೊಲಸ್ ಗುಡ್ರಿಕ್-ಕ್ಲಾರ್ಕ್ ಈ ಹೇಳಿಕೆ ನಿಜವೆಂದು ಹೇಳಿದರೆ ಬ್ರಿಜಿಟ್ ಹಮಾನ್ ಇದು ನಿಜವೂ ಆಗಿರಬಹುದು ಸುಳ್ಳೂ ಆಗಿರಬಹುದೆಂಬ ಮುಕ್ತ ಪ್ರಶ್ನೆ ಹಾಕಿದ್ದಾರೆ. ಇಯಾನ್ ಕೆರ್ಶಾ ಈ ಬಗ್ಗೆ ಬಹಳ ಸಂದೇಹಾತ್ಮಕ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲಕಾಲದವರೆಗೆ ಹಿಟ್ಲರ್ ಜರ್ಮನರೆದುರು ಸಾಂಪ್ರದಾಯಿಕ ಕ್ರೈಸ್ತಧರ್ಮದಲ್ಲಿ ತಾನು ವಿರೋಧಿಸುತ್ತಿದ್ದ ಅಂಶಗಳನ್ನು ಹೊರತುಪಡಿಸಿ ಹೊರಬಂದು ಪರಿಶುದ್ಧವಾದ, ಜನಾಂಗೀಯ ಅಂಶಗಳನ್ನೊಳಗೊಂಡ "ಪಾಸಿಟಿವ್(ಧನಾತ್ಮಕ) ಕ್ರಿಶ್ಚಿಯಾನಿಟಿ" ಎಂಬ ಧಾರ್ಮಿಕ ನಂಬಿಕೆಯ ಪ್ರಚಾರ ನಡೆಸಿದ. ೧೯೪೦ರ ವೇಳೆಗೆ ಹಿಟ್ಲರ್ ಪಾಸಿಟಿವ್ ಕ್ರಿಶ್ಚಿಯಾನಿಟಿಯ ಸಿಂಕ್ರೆಟಿಸ್ಟ್(ವೈರುಧ್ಯಗಳನ್ನು ಒಂದುಗೂಡಿಸುವ) ಯೋಜನೆಯನ್ನು ಕೂಡ ಕೈಬಿಟ್ಟಿದ್ದನೆನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಹಿಟ್ಲರನೇ ಹೇಳಿದಂತೆ, "ಧಾರ್ಮಿಕ ಆತಂಕವಾದದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ಅದು ಕ್ರಿಶ್ಚಿಯಾನಿಟಿಯು ಸರ್ವಮಾನ್ಯವನ್ನಾಗಿ ಮಾಡಿರುವ ಯಹೂದೀ ಸಿದ್ಧಾಂತವಾಗಿದೆ ಮತ್ತು ಅದರ ಗುರಿ ತೊಂದರೆ ಬಿತ್ತುವದು ಹಾಗೂ ಮನುಷ್ಯರ ಮನಸ್ಸಿನಲ್ಲಿ ಗೊಂದಲವನ್ನುಂಟುಮಾಡುವದು ಮಾತ್ರ. " ಮಾಸ್‌ಗೆ ಹೋಗದಿರುವುದು ಮತ್ತು ಸ್ಯಾಕ್ರಮೆಂಟ್‌ಗಳನ್ನು ತೆಗೆದುಕೊಳ್ಳದಿರುವದರ ಜತೆಗೇ ತನ್ನ ಪ್ರವೃತ್ತಿಗೆ ತಕ್ಕನಾಗಿದ್ದ ಪ್ರಾಟೆಸ್ಟೆಂಟ್ ಧರ್ಮದ ಕೆಲ ಅಂಶಗಳನ್ನು ಕೂಡ ಹಿಟ್ಲರ್ ಬೆಂಬಲಿಸುತ್ತಿದ್ದನು. ಇದರ ಜತೆಗೇ ಆತ ಕ್ಯಾಥೊಲಿಕ್ ಚರ್ಚಿನ ಕ್ರಮಾಗತ ವ್ಯವಸ್ಥೆ, ಸಾರ್ವಜನಿಕ ಪ್ರಾರ್ಥನಾ ಪದ್ಧತಿ ಮತ್ತು ವಾಕ್‌ಶೈಲಿಯ ಕೆಲ ಅಂಶಗಳನ್ನು ಅಳವಡಿಸಿಕೊಂಡನು. ಮುಸ್ಲಿಂ ಸೇನಾ ಸಂಪ್ರದಾಯದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ ಹಿಟ್ಲರ್ ಮುಸ್ಲಿಂ SS ವಿಭಾಗಗಳನ್ನು ನೀತಿಗನುಸಾರವಾಗಿ ಆರಂಭಿಸುವಂತೆ ಹಿಮ್ಲರನಿಗೆ ಆದೇಶ ನಿಡಿದನು. ಆಪ್ತನೊಬ್ಬನ ಹೇಳಿಕೆಯ ಪ್ರಕಾರ ಏಕಾಂತದಲ್ಲಿದ್ದಾಗ ಒಮ್ಮೆ ಹಿಟ್ಲರ್ "ಮೊಹೊಮ್ಮದನ್ ಧರ್ಮವು ನಮಗೆ ಕ್ರಿಶ್ಚಿಯನ್ ಧರ್ಮಕ್ಕಿಂತ ಹೆಚ್ಚು ಯುಕ್ತವಾಗಿರುತ್ತಿತ್ತು. ಕ್ರಿಶ್ಚಿಯನ್ ಧರ್ಮದಂತೆ ಸಾಧುವಾಗಿ ಮೆತ್ತಗಿರಬೇಕಾಗಿ ಬರುತ್ತಿರಲಿಲ್ಲ." ಎಂದು ಹೇಳಿದ. ಹಿಟ್ಲರ್ ಒಮ್ಮೆ ಹೇಳಿದ, "ನಮಗೆ ಜರ್ಮನಿಯನ್ನು ಬಿಟ್ಟರೆ ಇನ್ನಾವ ದೇವರೂ ಬೇಕಾಗಿಲ್ಲ. ಜರ್ಮನಿಯಲ್ಲಿ ಮತ್ತು ಜರ್ಮನಿಯ ಬಗ್ಗೆ ಅಂಧಶ್ರದ್ಧೆ ಮತ್ತು ನಂಬಿಕೆ ಮತ್ತು ಪ್ರೇಮವಿರುವುದು ಅತ್ಯವಶ್ಯಕ."

ಆರೋಗ್ಯ ಹಾಗೂ ಲೈಂಗಿಕತೆ

ಆರೋಗ್ಯ

ಹಿಟ್ಲರನ ಆರೋಗ್ಯವು ಮೊದಲಿನಿಂದಲೂ ಚರ್ಚಾಸ್ಪದ ವಿಷಯವಾಗಿದೆ. ಆತನಿಗೆ ಇರಿಟಬಲ್ ಬೊವೆಲ್ ಸಿಂಡ್ರೋಮ್, ಚರ್ಮವ್ರಣ(ಸ್ಕಿನ್ ಲೀಶನ್), ಕ್ರಮಬದ್ಧವಾಗಿಲ್ಲದ ಎದೆಬಡಿತ, ಪಾರ್ಕಿನ್ಸನ್ಸ್ ಕಾಯಿಲೆ, ಸಿಫಿಲಿಸ್, ಆಸ್ಪರ್ಜರ್ ಸಿಂಡ್ರೋಮ್ ಮತ್ತು ಮೀಥಾಂಫಿಟಾಮೈನ್‌ ಅನ್ನು ತೆಗೆದುಕೊಳ್ಳುವ ಚಟವಿತ್ತೆಂದು ಹೇಳಲಾಗಿದೆ. ಆತನಿಗೆ ಹಲ್ಲುಗಳ ತೊಂದರೆಗಳಿದ್ದವು ಮತ್ತು ಆತನ ಆಪ್ತ ದಂತವೈದ್ಯನಾಗಿದ್ದ ಹ್ಯೂಗೋ ಬ್ಲಾಶ್ಕ್ ಹೇಳಿರುವಂತೆ ಆತ ೧೯೩೩ರಲ್ಲಿ ಹಿಟ್ಲರನ ಮೇಲುದವಡೆಯಲ್ಲಿ ಒಂದು ದೊಡ್ಡ ಡೆಂಟಲ್ ಬ್ರಿಡ್ಜ್ ಅನ್ನು ಜೋಡಿಸಿದ ಮತ್ತು ೧೯೪೪ರ ನವೆಂಬರ್ ೧೦ರಂದು ಒಸಡಿನ ಸೋಂಕಿನಿಂದಾಗಿ ತೀವ್ರ ಹಲ್ಲುನೋವಿನಿಗೊಳಗಾಗಿದ್ದ ಹಿಟ್ಲರನ ಡೆಂಟಲ್ ಬ್ರಿಡ್ಜ್‌ನ ಒಂದು ಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಯಿತು. ಆತ ಹಿಟ್ಲರನಿಗೆ ಸೈನಸ್ ಸೋಂಕು ಇದ್ದಿತೆಂದೂ ವರದಿ ಮಾಡಿದ್ದಾನೆ. ೧೯೩೦ರ ನಂತರ ಹಿಟ್ಲರ್ ಸಾಮಾನ್ಯವಾಗಿ ಸಸ್ಯಾಹಾರವನ್ನೇ ಬಳಸುತ್ತಿದ್ದನಾದರೂ ಆಗಾಗ್ಗೆ ವಿಶೇಷ ಸಂದರ್ಭಗಳಲ್ಲಿ ಮಾಂಸಾಹಾರವನ್ನು ಕೂಡ ತಿನ್ನುತ್ತಿದ್ದನು. ತನ್ನ ಅತಿಥಿಗಳಲ್ಲಿ ಮಾಂಸಾಹಾರದ ಬಗ್ಗೆ ಅಸಹ್ಯ ಹುಟ್ಟಿಸಿ ಅವರು ಮಾಂಸಾಹಾರವನ್ನು ವರ್ಜಿಸುವಂತೆ ಮಾಡಲು ಆತ ವಿವಿಧ ಪ್ರಾಣಿಗಳನ್ನು ಹೇಗೆ ಕೊಲ್ಲಲಾಗುವದೆಂದು ವೈವಿಧ್ಯಮಯವಾಗಿ ಬಣ್ಣಿಸುತ್ತಿದ್ದನೆಂಬ ವರದಿಗಳಿವೆ. ಕ್ಯಾನ್ಸರ್ ಬಗ್ಗೆ ಆತನಿಗಿದ್ದ ಭಯವೇ(ಆತನ ತಾಯಿ ಸತ್ತದ್ದು ಕ್ಯಾನ್ಸರ್‌ನಿಂದ) ಇದಕ್ಕೆ ಕಾರಣವೆಂದು ಹೆಚ್ಚಿನವೇಳೆ ನಂಬಲಾಗುತ್ತದೆಯಾದರೂ ಹಲವಾರು ಲೇಖಕರು ಹಿಟ್ಲರ್ ಪ್ರಾಣಿಗಳ ಬಗ್ಗೆ ಹೊಂದಿದ್ದ ಆಳವಾದ ಪ್ರೇಮವೇ ಇದಕ್ಕೆ ಕಾರಣವೆಂದು ವಾದಿಸುತ್ತಾರೆ. ಯುದ್ಧದ ವೇಳೆಯಲ್ಲಿ ಹಿಟ್ಲರನಿಗೆ ತಾಜಾ ಹಣ್ಣುತರಕಾರಿಗಳು ತಡೆಯಿಲ್ಲದೆ ದೊರೆಯಲೆಂದು ಮಾರ್ಟಿನ್ ಬೋರ್ಮನ್ನನು ಬರ್ಗ್‌ಹಾಫ್‌ ನ ಬಳಿಯಲ್ಲಿ (ಬರ್ಚ್‌ಟೆಸ್‌ಗಾಡೆನ್ ಬಳಿ) ಹಸಿರುಮನೆಯೊಂದನ್ನು ನಿರ್ಮಿಸಿದ್ದನು. ಬೋರ್ಮನ್ನನ ಮಕ್ಕಳು ಈ ಹಸಿರುಮನೆಯ ತೋಟದಲ್ಲಿ ಕೆಲಸಮಾಡುತ್ತಿರುವ ಛಾಯಾಚಿತ್ರಗಳು ಇಂದಿಗೂ ಉಳಿದುಕೊಂಡಿವೆ. ೨೦೦೫ರಲ್ಲಿ ನಾಝೀ ನಾಯಕರಿಗೆ ಸಂಬಂಧಪಟ್ಟ ಪ್ರದೇಶದ ಕಟ್ಟಡಗಳ ಅವಶೇಷಗಳ ನಡುವೆ ಕಾಣಸಿಕ್ಕ ಅಡಿಪಾಯಗಳಲ್ಲಿ ಇದೂ ಒಂದು. ಹಿಟ್ಲರ್ ಧೂಮಪಾನ ಮಾಡುತ್ತಿರಲಿಲ್ಲ ಮತ್ತು ಮತ್ತು ಜರ್ಮನಿಯ ಉದ್ದಗಲಕ್ಕೂ ಧೂಮಪಾನ ವಿರೋಧೀ ಆಂದೋಲನಗಳಿಗೆ ಬಹಳ ಪ್ರಚಾರ ನೀಡಿದ. ಒಂದು ವರದಿಯ ಪ್ರಕಾರ ಆತ ಧೂಮಪಾನವನ್ನು ವರ್ಜಿಸಿದ ತನ್ನ ಆಪ್ತ ಅನುಯಾಯಿಗಳಿಗೆ ಚಿನ್ನದ ಕೈಗಡಿಯಾರಗಳನ್ನು ನೀಡುವುದಾಗಿ ಮಾತುಕೊಟ್ಟ (ಮತ್ತು ಕೆಲವು ಕೊಡುಗೆಗಳನ್ನು ನೀಡಿದ). ಹಲವಾರು ಸಾಕ್ಷಿಗಳು ನೀಡಿರುವ ಹೇಳಿಕೆಗಳ ಪ್ರಕಾರ ಹಿಟ್ಲರನ ಆತ್ಮಹತ್ಯೆ ಖಚಿತವಾದ ಕೂಡಲೇ ಫ್ಯೂರೆರ್‌ಬಂಕರ್‌ ನಲ್ಲಿದ್ದ ಹಲವಾರು ಅಧಿಕಾರಿಗಳು, ಸಹಾಯಕರು ಮತ್ತು ಕಾರ್ಯದರ್ಶಿಗಳು ಸಿಗರೇಟುಗಳನ್ನು ಹೊತ್ತಿಸಿದರು.

ಲೈಂಗಿಕತೆ

ಹಿಟ್ಲರ್ ಸಾರ್ವಜನಿಕವಾಗಿ ತನ್ನನ್ನು ಸಾಂಸಾರಿಕ ಜೀವನವಿಲ್ಲದ, ಸಂಪೂರ್ಣವಾಗಿ ರಾಜಕೀಯ ಗುರಿಸಾಧನೆಯಲ್ಲಿ ತೊಡಗಿಕೊಂಡ ವ್ಯಕ್ತಿಯಂತೆ ತೋರ್ಪಡಿಸಿಕೊಂಡನು. ೧೯೨೦ರಲ್ಲಿ ಆತನಿಗೆ ಮಿಮಿ ರೀಟರ್ ಎಂಬಾಕೆಯ ಜತೆ ನಿಶ್ಚಿತಾರ್ಥವಾಗಿತ್ತು ಮತ್ತು ನಂತರದ ದಿನಗಳಲ್ಲಿ ಆತನಿಗೆ ಎವಾ ಬ್ರಾನ್ ಎಂಬ ಪ್ರೇಯಸಿಯಿದ್ದಳು. ಆತನ ಅರೆ-ಸೋದರಸೊಸೆಯಾಗಿದ್ದ ಗೆಲಿ ರಾಬಾಲ್‌ ಜತೆಗೆ ಗಾಢವಾದ ಸ್ನೇಹವಿದ್ದ ಹಿಟ್ಲರನ ಈ ಸಂಬಂಧವು ಲೈಂಗಿಕವಾಗಿತ್ತೆಂದು ಹಲವಾರು ವ್ಯಾಖ್ಯಾನಕಾರರು ಹೇಳಿದರೂ ಇದು ನಿಜವೆಂದು ತೋರ್ಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ. ಜಾನ್ ಟೊಲ್ಯಾಂಡ್(ತನ್ನ ಪುಸ್ತಕ ಎ.ಎಚ್.: ಎ ಡೆಫಿನಿಟಿವ್ ಬಯಾಗ್ರಫಿ ಯಲ್ಲಿ) ದಾಖಲಿಸಿರುವಂತೆ ಹಿಟ್ಲರ್ ಗೆಲಿಯ ಬಳಿ ಆಗಾಗ ಪ್ರೇಮಾಸಕ್ತನ ರೀತಿ ಹೋಗುತ್ತಿದ್ದುದಲ್ಲದೆ ತನ್ನ ಜತೆಗಲ್ಲದೆ ಇನ್ನಾರ ಜತೆಗೂ ಗೆಲಿ ಹೊರಹೋಗುವದನ್ನು ನಿಷೇಧಿಸಿದ್ದ. ಈ ಮೂರೂ ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು (ಇಬ್ಬರು ಯಶಸ್ವಿಯಾದರು) ಹಿಟ್ಲರನ ರಾಜಕೀಯ ವಿರೋಧಿಯಾದ ಒಟ್ಟೊ ಸ್ಟ್ರ್ಯಾಸರ್ ಸಾರಿದ ಪ್ರಕಾರ ಹಿಟ್ಲರನಿಗೆ ಯುರೋಲಾಗ್ನಿಯಾದಂತಹ ಲೈಂಗಿಕ ವಿಕೃತಿಗಳಿದ್ದುವೆನ್ನುವ ಊಹೆಗಳಿಗೆ ಎಡೆಮಾಡಿಕೊಡುತ್ತದೆ. ಆದರೆ ನಾಝೀ ಆಳ್ವಿಕೆಯ ನಂತರ ಉಳಿದುಕೊಂಡ ಏಕೈಕ ವ್ಯಕ್ತಿಯಾದ ರೀಟರ್ ಈ ಆರೋಪವನ್ನು ಅಲ್ಲಗಳೆದನು. ಯುದ್ಧದ ವೇಳೆಯಲ್ಲಿ ಮತ್ತು ಆನಂತರ ಆತನ ರೋಗಲಕ್ಷಣಗಳ ಬಗ್ಗೆ ಮನೋವಿಶ್ಲೇಷಕರು ಹಲವಾರು ಅನಿಶ್ಚಿತವಾದ ಮನೋಲೈಂಗಿಕ ವಿವರಣೆಗಳನ್ನು ನೀಡಿದ್ದಾರೆ. ಹಿಟ್ಲರನಿಗೆ ಬ್ರಿಟಿಶ್ ಫ್ಯಾಸಿಸ್ಟ್ ಯೂನಿಟಿ ಮಿಟ್‌ಫೋರ್ಡ್‌ಳ ಜತೆಗೆ ಸಂಬಂಧವಿತ್ತೆಂದು ವಾದಿಸುವವರಿದ್ದಾರೆ. ಇತ್ತೀಚೆಗೆ ಲೊಥರ್ ಮಾಚ್ಟನ್ ತನ್ನ ಪುಸ್ತಕ ’ದ ಹಿಡನ್ ಹಿಟ್ಲರ್ ’ನಲ್ಲಿ ಹಿಟ್ಲರ್ ಸಲಿಂಗಕಾಮಿಯಾಗಿದ್ದನೆಂದು ವಾದಿಸಿದ್ದಾನೆ.

ಕುಟುಂಬ

ಅಡಾಲ್ಫ್ ಹಿಟ್ಲರನ ಹತ್ತಿರದ ಸಂಬಂಧಿ ಪೌಲಾ ಹಿಟ್ಲರ್, ೧೯೬೦ರಲ್ಲಿ ಮರಣಹೊಂದಿದರು. ಅಡಾಲ್ಫನ ಸಹೋದರನ ಮಗ ವಿಲಿಯಮ್ ಪ್ಯಾಟ್ರಿಕ್ ಹಿಟ್ಲರ್, ದೀರ್ಘಕಾಲ ಬದುಕಿದ್ದ ಅಡಾಲ್ಫ್ ಹಿಟ್ಲರನ ತಂದೆಯ ನೇರ ವಂಶದ ಕುಡಿಯಾಗಿದ್ದ.ತನ್ನ ಪತ್ನಿ ಫಿಲ್ಲಿಸ್‌ಳೊಂದಿಗೆ ಆತ ನ್ಯೂಯಾರ್ಕ್‌ನ ಲಾಂಗ್ ದ್ವೀಪಕ್ಕೆ ಹೋಗಿ ನೆಲೆಸಿದ್ದು, ತನ್ನ ಕೊನೆಯ ಹೆಸರನ್ನು ಬದಲಿಸಿಕೊಂಡಿದ್ದ. ಈತನಿಗೆ ನಾಲ್ವರು ಗಂಡುಮಕ್ಕಳು.ವಿಲಿಯಮ್ ಹಿಟ್ಲರನ ಮಕ್ಕಳಲ್ಲಿ ಯಾರಿಗೂ ತಮ್ಮ ಸ್ವಂತದ ಮಕ್ಕಳಾಗಲಿಲ್ಲ. ವಿವಿಧ ಅನ್ವೇಷಣಾ ವರದಿಗಾರರು ವರ್ಷಾನುಗಟ್ಟಲೆ ಅನ್ವೇಷಣೆ ನಡೆಸಿ ಫ್ಯೂರರ್‌ನ ಇನ್ನಿತರ ಸಂಬಂಧಿಗಳನ್ನು ಪತ್ತೆಹಚ್ಚಲು ಯತ್ನಿಸಿದರು.ಅವರಲ್ಲಿ ಕೆಲವರು ಬಹಳ ಕಾಲದ ಹಿಂದೆಯೇ ತಮ್ಮ ಹೆಸರಿನ ಕೊನೆಯನ್ನು ಬದಲಿಸಿಕೊಂಡಿದ್ದು, ಈಗ ಅಷ್ಟೇನೂ ಗಮನೀಯವಲ್ಲದ ಸಾದಾ ಬದುಕನ್ನು ಬಾಳುತ್ತಿರುವರೆಂದು ಹೇಳಲಾಗಿದೆ.

ಅಡೋಲ್ಫ್ ಹಿಟ್ಲರ್ 
ಅಡಾಲ್ಫ್ ಹಿಟ್ಲರನ ವಂಶವೃಕ್ಷ
  • ಅಲೋಯಿಸ್ ಹಿಟ್ಲರ್, ತಂದೆ
  • ಅಲೋಯಿಸ್ ಹಿಟ್ಲರ್, ಜ್ಯೂನಿಯರ್., ಮಲ ಸಹೋದರ
  • ಏಂಜೆಲಾ ಹಿಟ್ಲರ್ ರೌಬಲ್ , ಮಲ ಸಹೋದರಿ
  • ಬ್ರಿಡ್ಜೆಟ್ ಡೌಲಿಂಗ್, ಅತ್ತಿಗೆ
  • ಎವಾ ಬ್ರೌನ್, ಪ್ರೇಯಸಿಯಾಗಿದ್ದು, ನಂತರ ಪತ್ನಿಯಾದವಳು
  • ಗೇಲಿ ರೌಬಲ್, ಸೋದರ ಸೊಸೆ
  • ಗ್ರೆಟ್ಲ್ ಬ್ರೌನ್, ನಾದಿನಿ- ಎವಾ ಬ್ರೌನ್‌ಳನ್ನು ವಿವಾಹವಾದುದರಿಂದ ಉಂಟಾದ ಸಂಬಂಧ
  • ಹೀಂಝ್ ಹಿಟ್ಲರ್, ಸಹೋದರನ ಮಗ
  • ಹರ್ಮನ್ ಫೆಗೆಲಿನ್, ಮೈದುನ- ಎವಾ ಬ್ರೌನ್‌ಳನ್ನು ವಿವಾಹವಾದುದರಿಂದ ಉಂಟಾದ ಸಂಬಂಧ
  • ಈಸೆ ಬ್ರೌನ್, ನಾದಿನಿ- ಎವಾ ಬ್ರೌನ್‌ಳನ್ನು ವಿವಾಹವಾದುದರಿಂದ ಉಂಟಾದ ಸಂಬಂಧ
  • ಜೊಹಾನ್ ಜಾರ್ಜ್ ಹೀಡ್ಲರ್, ಅಜ್ಜ (ಎಂದು ಅಂಗೀಕರಿಸಲಾಗಿದೆ)
  • ಜೊಹಾನ್ ನೆಪೋಮಕ್ ಹೀಡ್ಲರ್, ತಾಯಿಯ ಕಡೆಯಿಂದ ಮುತ್ತಜ್ಜ, ಹಿಟ್ಲರನ ಚಿಕ್ಕ ಮುತ್ತಜ್ಜನೆಂದೂ ಬಹುಶಃ ಹಿಟ್ಲರನ ನಿಜವಾದ ಪಿತಾಮಹ (ತಂದೆಯ ತಂದೆ)ನೆಂದೂ ಊಹಿಸಲಾಗಿದೆ.
  • ಕ್ಲಾರಾ ಹಿಟ್ಲರ್, ತಾಯಿ
  • ಲಿಯೋ ರೌಬಲ್ ಜ್ಯೂನಿಯರ್, ಸೋದರಳಿಯ
  • ಮಾರಿಯಾ ಶಿಕ್ಲ್‌ಗ್ರೂಬರ್, ಅಜ್ಜಿ
  • ಪೌಲಾ ಹಿಟ್ಲರ್, ಸಹೋದರಿ
  • ವಿಲಿಯಮ್ ಪ್ಯಾಟ್ರಿಕ್ ಹಿಟ್ಲರ್, ಸಹೋದರನ ಮಗ

ಮಾಧ್ಯಮದಲ್ಲಿ ಹಿಟ್ಲರ್

ವಾಕ್ಪಟುತ್ವ ಮತ್ತು ಸಭೆಗಳು

ಹಿಟ್ಲರನು ಒಬ್ಬ ಹುಟ್ಟಾ ವಾಕ್ಪಟುವಾಗಿದ್ದನು ಮತ್ತು ತನ್ನ ಅಸ್ಖಲಿತವಾದ ಹಾಗೂ ಭಾವತೀವ್ರತೆಯ ಭಾಷಣಗಳಿಂದಲೇ ಬಹುತೇಕರನ್ನು ಸೆಳೆದುಕೊಂಡುಬಿಡುತ್ತಿದ್ದನು.೧೯೧೯ ಮತ್ತು ೧೯೨೦ರಲ್ಲಿ ಸೈನಿಕರನ್ನುದ್ದೇಶಿಸಿ ಭಾಷಣಗಳನ್ನು ನೀಡುತ್ತಿದ್ದ ಸಂದರ್ಭದಲ್ಲಿ ಅವನು ತನ್ನ ಕೌಶಲಕ್ಕೆ ಸಾಣೆಹಿಡಿದುಕೊಂಡನು.ಜನರು ತಾವೇನನ್ನು ಕೇಳಲು ಬಯಸುತ್ತಿದ್ದರೋ ಅದನ್ನೇ ನುಡಿಯುವ (ಸ್ಟ್ಯಾಬ್ ಇನ್ ದ ಬ್ಯಾಕ್ ದೃಷ್ಟಾಂತ, ಜಗತ್ತನ್ನು ವಶಮಾಡಿಕೊಳ್ಳಲು ಯಹೂದೀ-ಮಾರ್ಕ್ಸ್‌ವಾದಿ ವೇದಿಕೆ, ಮತ್ತು ವರ್ಸೈಲ್ಸ್ ಒಪ್ಪಂದದಲ್ಲಿ ಜರ್ಮನಿಯ ದ್ರೋಹ ಇತ್ಯಾದಿ) ನೈಪುಣ್ಯವನ್ನು ಹಾಗೂ ಕಾರ್ಯಸಾಧನೆಗೆ ಅಗತ್ಯವಿರುವ ಬಲಿಪಶುವನ್ನು ಗುರುತಿಸುವ ಕಲೆಗಳನ್ನು ಅವನು ರೂಢಿಸಿಕೊಂಡಿದ್ದನು.ಕಾಲಕ್ರಮೇಣ ಹಿಟ್ಲರ್, ಕನ್ನಡಿಯೆದುರು ನಿಂತು ಅಭ್ಯಾಸ ಮಾಡುತ್ತಾ ಭಾಷಣ ನೀಡುವ ಶೈಲಿಯನ್ನು ಮತ್ತಷ್ಟು ಪರಿಪೂರ್ಣವಾಗಿಸಿಕೊಳ್ಳುವುದರತ್ತ ಶ್ರಮಿಸುತ್ತಿದ್ದನು ಮತ್ತು ಬಹಳ ಕಾಳಜಿಯಿಂದ ಭಾವನೆಗಳ ಅಭಿವ್ಯಕ್ತಿಕ್ರಮವನ್ನು ಸಂಯೋಜಿಸಿಕೊಳ್ಳುತ್ತಿದ್ದನು.ಅವನು ತನ್ನ ಕೈಗಳ ಹಾಗೂ ಭುಜದ ಚಲನೆಗಳ ಮೇಲೆ ಕೇಂದ್ರೀಕರಿಸಿದ ಸ್ವರೂಪಿತ ಅತೀಂದ್ರಿಯ ದೃಷ್ಟಿಯಿಂದ ತರಬೇತಿಪಡೆದನು.ಇತರ ಯಾರುಬೇಕಾದರೂ ಅರಿಯಬಹುದಾದಂತೆ ಹಿಟ್ಲರನನ್ನು ಬಹಳ ಚೆನ್ನಾಗಿ ಅರಿತಿದ್ದ ಶಸ್ತ್ರಾಸ್ತ್ರ ಸಚಿವ ಹಾಗೂ ವಾಸ್ತುಶಿಲ್ಪಿ ಆಲ್ಬರ್ಟ್ ಸ್ಪೀರ್‌ನು ಹಿಟ್ಲರನು ಎಷ್ಟೆಂದರೂ ಒಬ್ಬ ನಟನಷ್ಟೆ ಎಂಬ ಹೇಳಿಕೆ ನೀಡಿದ್ದನು. ಸ್ಪೀರ್‌ನಿಂದ ಆಯೋಜಿಸಲ್ಪಡುತ್ತಿದ್ದ ಸಾಮೂಹಿಕ ನಾಝಿ ಪ್ರಚಾರಸಭೆಗಳು ಭಾಗವಹಿಸುವವರಲ್ಲಿ ಕಿಡಿಹೊತ್ತಿಸುವಂತೆ ವಿನ್ಯಾಸಗೊಳಿಸಲ್ಪಡುತ್ತಿದ್ದವು.ಪ್ರಚಾರ ಸಭೆಗಳಲ್ಲಿ ಭಾಗವಹಿಸುವ ಮೂಲಕ, ಪಾದಯಾತ್ರೆಗಳ ಮೂಲಕ, ‘ಹೈಲ್ ’ ಎಂದು ಕೂಗುವ ಮೂಲಕ, ಮತ್ತು ಕೈಯನ್ನು ಎದೆಗೆ ತಾಕಿಸಿ ಸೆಲ್ಯೂಟ್ ನೀಡುವ ಮೂಲಕ, ಸಭಿಕರು ನಾಝಿ ಚಳವಳಿಯೆಡೆಗೆ ತಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದ್ದರು.ಈ ಪ್ರಕ್ರಿಯೆಯನ್ನು ೧೯೩೪ರ ನ್ಯೂರೆಂಬರ್ಗ್ ಪ್ರಚಾರಸಭೆಯನ್ನು ಬಿಂಬಿಸುವ ಲೆನಿ ರೀಫೆನ್‌ಸ್ಟಲ್‌ನ ಟ್ರಯಂಫ್ ಆಫ್ ದ ವಿಲ್‌ ನಲ್ಲಿ ನೋಡಿ ಮೆಚ್ಚಿಕೊಳ್ಳಬಹುದು.ಇದರಲ್ಲಿ ಹಿಟ್ಲರನನ್ನು ಎತ್ತರದಿಂದ ಹಾಗೂ ಕೆಳಗಿನಿಂದ ಚಿತ್ರೀಕರಿಸಲಾಗಿದೆ. ಆದರೆ, ಕೇವಲ ಎರಡುಬಾರಿ ಮೇಲ್ಮುಖ ತೋರಿಸಲಾಗಿದೆ.ಛಾಯಾಗ್ರಹಣದ ಈ ಕೋನಗಳು ಹಿಟ್ಲರನಿಗೆ ಕ್ರಿಸ್ತನ ರೀತಿಯ ಪ್ರಭೆಯನ್ನು ಒದಗಿಸಿವೆ.ಈ ಚಿತ್ರದಲ್ಲಿನ ಕೆಲ ಜನರು ಹಣ ಪಡೆದು ಬಂದ ನಟರು. ಆದರೆ ಸಭಿಕರಲ್ಲಿ ಬಹುತೇಕರು ಅದರಲ್ಲಿ ಪಾಲ್ಗೊಳ್ಳಲೆಂದೇ ಬಂದವರು.ಈ ಚಿತ್ರದಿಂದ ಠಿಯೇಟರಿನ ಹೊರಗೆ ಹೊಸ ನಾಝಿಗಳನ್ನು ನೇಮಿಸಿಕೊಳ್ಳಲು ಸಾಧ್ಯವಾಯಿತೇ ಇಲ್ಲವೇ ಎಂಬುದು ತಿಳಿದುಬಂದಿಲ್ಲ. ಸ್ವ ಒಡಂಬಡಿಸುವಿಕೆಯ ಈ ಪ್ರಕ್ರಿಯೆಯು ಬಹುಶಃ ಹಿಟ್ಲರನ ಮೇಲೆ ಪರಿಣಾಮ ಬೀರಿರಬಹುದು.ಅವನು ನೂರಾರು ಬಾರಿ (ಅದು ಪುನರಾವರ್ತನೆಯಿಂದಾಗಿ ಮತ್ತಷ್ಟು ಇನ್ನಷ್ಟು ಮೃದುವಾಗುತ್ತ ಸಾಗಿದ್ದರೂ ಸಹ) ಸೈನಿಕರಿಗೆ ಹಾಗೂ ಬೀರ್ ಹಾಲ್ ಸಭಿಕರೆದುರು ಅದೇ ಭಾಷಣವನ್ನು ಮಾಡಿದನು.ಈ ಪ್ರಕ್ರಿಯೆಗಳಿಂದಾಗಿ ಅವನ ದ್ವೇಷವು, ಅದರಲ್ಲಿಯೂ ಅವನ ಸರ್ವಸ್ವವನ್ನೂ ತಿಂದುಹಾಕುತ್ತಿದ್ದ ಯಹೂದಿಗಳೆಡೆಗಿನ ಅವನ ದ್ವೇಷವು ಮತ್ತಷ್ಟು ಗಾಢವಾಗುತ್ತ ಸಾಗಿತು.

ಅಡೋಲ್ಫ್ ಹಿಟ್ಲರ್ 
ಹಿಟ್ಲರ್ ಮತ್ತು ಬ್ಯಾರನ್ ಮ್ಯಾನರ್‌ಹೀಮ್(ಜೂನ್ 1942)

ಖಾಸಗಿ ಸಂಭಾಷಣೆಯ ಧ್ವನಿಮುದ್ರಿಕೆ

ಹಿಟ್ಲರನು ಫಿನ್ನಿಷ್ ಫೀಲ್ಡ್ ಮಾರ್ಶಲ್ ಮ್ಯಾನರ್‌ಹೀಮ್‌ನನ್ನು ೧೯೪೨ರ ಜೂನ್ ೪ರಂದು ಭೇಟಿಯಾದನು.ಈ ಭೇಟಿಯ ಸಂದರ್ಭದಲ್ಲಿ ಫಿನ್ನಿಷ್ ಬ್ರಾಡ್‌ಕ್ಯಾಸ್ಟಿಂಗ್ ಕಂಪೆನಿಯ ಇಂಜಿನಿಯರ್ YLE, ಥಾರ್ ಡೇಮನ್, ಹಿಟ್ಲರನು ಯಾವುದೇ ಮೇಲ್ವಿಚಾರಣೆಯಿಲ್ಲದೆ ತನ್ನ ಮಾತುಕಥೆಗಳನ್ನು ರೆಕಾರ್ಡ್ ಮಾಡಲು ಎಂದಿಗೂ ಅವಕಾಶ ನೀಡದಿರುತ್ತಿದ್ದ ಕಾರಣ, ಹಿಟ್ಲರ್ ಹಾಗೂ ಮ್ಯಾನರ್‌ಹೀಮ್ ನಡುವಿನ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡನು. ಹಿಟ್ಲರನ ಅನೌಪಚಾರಿಕ ರೀತಿಯ ಸಂಭಾಷಣೆಯ ಧ್ವನಿಮುದ್ರಿಕೆ ಇಂದು ಲಭ್ಯವಿರುವುದು ಇದೊಂದೇ. ಈ ಧ್ವನಿಮುದ್ರಿಕೆಯು ಈ ಇಬ್ಬರು ನಾಯಕರ ಹನ್ನೊಂದೂವರೆ ನಿಮಿಷದ ಖಾಸಗಿ ಸಂಭಾಷಣೆಯನ್ನು ಹಿಡಿದಿಟ್ಟುಕೊಂಡಿದೆ. ಇದರಲ್ಲಿ ಹಿಟ್ಲರನು ಕೊಂಚ ಉದ್ವೇಗಭರಿತನಾದಂತೆ, ಆದರೂ ಕೂಡ ಈ ಮಾತುಕಥೆಯುದ್ದಕ್ಕೂ ಬುದ್ಧಿಪೂರ್ವಕವಾಗಿ ನಿರ್ಲಿಪ್ತನಾಗಿದ್ದಂತೆ ತೋರುತ್ತಾನೆ (ಇಲ್ಲಿನ ಮಾತು ಕಾರ್ಮಿಕವರ್ಗದವರೊಂದಿಗೆ ಹೋಲಿಸಲ್ಪದುತ್ತದೆ).ಈ ಧ್ವನಿಮುದ್ರಿಕೆಯ ಬಹುಪಾಲು ಹಿಟ್ಲರನೊಬ್ಬನಿಂದಲೇ ತುಂಬಿಹೋಗಿದೆ.ಧ್ವನಿಮುದ್ರಿಕೆಯಲ್ಲಿ ಹಿಟ್ಲರನು, ಯುದ್ಧ ನಡೆಸಲು ಸೋವಿಯತ್ ಒಕ್ಕೂಟದ ಸಾಮರ್ಥ್ಯವನ್ನು ಅರಿಯುವ ಬಗ್ಗೆ ಮಾತನಾಡಿದ್ದಾನೆ (ಕೆಲವು ಆಂಗ್ಲ ಲೇಖರೂಪಗಳು ಲಭ್ಯವಿದೆ).

ಪೇಟ್ರಿಯಾ ಪಿಚ್ಚರ್ ಡಿಸ್ಕ್

ಅಡಾಲ್ಫ್ ಹಿಟ್ಲರ್ ತನ್ನ ಭಾಷಣಗಳಲ್ಲೊಂದರ ೭" ಪಿಚ್ಚರ್ ಡಿಸ್ಕ್ ಅನ್ನು ಕೂಡ ಬಿಡುಗಡೆ ಮಾಡಿದ್ದನು.ಇದು ಪೇಟ್ರಿಯಾ ಫಾದರ್‌ಲ್ಯಾಂಡ್ ಪಿಚ್ಚರ್ ಡಿಸ್ಕ್ ಎಂದು ಹೆಸರಾಗಿದ್ದು, ಅದರ ಮೇಲ್ಭಾಗವು ಹಿಟ್ಲರನು ಭಾಷಣ ನೀಡುತ್ತಿರುವ ಚಿತ್ರವನ್ನು ಹೊಂದಿದೆ ಹಾಗೂ ಇದರಲ್ಲಿ ಹಿಟ್ಲರ್ ಹಾಗೂ ಪಕ್ಷದ ಸದಸ್ಯ ಹನ್ಸ್ ಹಿಂಕೆಲ್‌ರ ಭಾಷಣಗಳು ರೆಕಾರ್ಡ್ ಮಾಡಲ್ಪಟ್ಟಿವೆ. ಡಿಸ್ಕ್‌ನ ಹಿಂಭಾಗದಲ್ಲಿ ಸ್ವಸ್ತಿಕ ಧ್ವಜವನ್ನು ಹಿಡಿದಿರುವ ಕೈಯೊಂದರ ಚಿತ್ರವಿದೆ ಮತ್ತು ಈ ಭಾಗದಲ್ಲಿ "In Dem Kampf um die Heimat—Faschistenmarsch" ರೆಕಾರ್ಡ್ ಮಾಡಲ್ಪಟ್ಟಿರುವ ವೊಯ್ಟ್‌ಸ್ಕ್ಯಾಶ್ (Woitschach) ಮುದ್ರಿಕೆ (೧೯೩೩—ಟೆಲಿಫಂಕೆನ್ A ೧೪೩೧) ಇದೆ.

ಥರ್ಡ್ ರೀಚ್ ಅವಧಿಯ ಡಾಕ್ಯುಮೆಂಟರಿಗಳು

ಹಿಟ್ಲರನು ಆರಂಭದ ದಿನಗಳ ಚಿತ್ರನಿರ್ಮಾಣಕಾರ ಲೆನಿ ರೀಫೆನ್‌ಸ್ಟಲ್‌ನೊಂದಿಗೆ ಯೂನಿವರ್ಸಮ್ ಫಿಲ್ಮ್ ಎಜಿ (UFA) ಮೂಲಕ ಸರಣಿ ಚಿತ್ರಗಳಲ್ಲಿ ತೊಡಗಿಕೊಂಡನು ಹಾಗೂ ಕೆಲವದರಲ್ಲಿ ತಾನೂ ಕಾಣಿಸಿಕೊಂಡನು:

  • ಡೆರ್ ಸೀಗ್ ಡೆಸ್ ಗ್ಲೌಬೆನ್ಸ್- Der Sieg des Glaubens (ವಿಕ್ಟರಿ ಆಫ್ ಫೆಯ್ತ್ , ೧೯೩೩).
  • ಟ್ರಯಂಫ್ ಡೆಸ್ ವಿಲ್ಲೆನ್ಸ್-Triumph des Willens (ಟ್ರಯಂಫ್ ಆಫ್ ದ ವಿಲ್ , ೧೯೩೪), ಇದಕ್ಕೆ ಹಿಟ್ಲರನು ಸಹನಿರ್ಮಾಪಕನಾಗಿದ್ದ.
  • ಟಾಗ್ ಡೆರ್ ಫ್ರೀಹೀಟ್: ಉನ್ಸೀರ್ ವೆರ್ಮಕ್ತ್-Tag der Freiheit: Unsere Wehrmacht (ಡೇ ಆಫ್ ಫ್ರೀಡಮ್: ಅವರ್ ಆರ್ಮ್ಡ್ ಫೋರ್ಸಸ್ ,೧೯೩೫).
  • ಒಲಿಂಪಿಯಾ (೧೯೩೮).

ಮೊದಲ ಮೂರು ಚಿತ್ರಗಳಲ್ಲಿ ಹಿಟ್ಲರನೇ ಕೇಂದ್ರಬಿಂದುವಾಗಿದ್ದನು; ಅವು ಆಯಾ ವರ್ಷಗಳಲ್ಲಿ ನಡೆದ ಪಕ್ಷದ ಪ್ರಚಾರ ಸಭೆಗಳ ಮೇಲೆ ಕೇಂದ್ರೀಕೃತವಾಗಿದ್ದು, ಅದುವೇ ಚಿತ್ರಗಳ ಮೂಲೋದ್ದೇಶವಾಗಿತ್ತು.ಹಿಟ್ಲರನು ಒಲಿಂಪಿಯಾ ಚಿತ್ರದಲ್ಲಿ ಪ್ರಧಾನಪಾತ್ರವನ್ನು ಕೂಡ ನಿರ್ವಹಿಸಿದ್ದನು.ಈ ಕೊನೆಯ ಚಿತ್ರವು ಕಾರ್ಯೋದ್ದೇಶಿತ ಚಿತ್ರವೋ ಅಥವಾ ನಿಜವಾದ ಡಾಕ್ಯುಮೆಂಟರಿಯೋ ಎಂಬುದರ ಬಗ್ಗೆ ಇಂದಿಗೂ ವಿವಾದಗಳಿವೆ. ಆದರೆ ಇದು ೧936ರ ಒಲಿಂಪಿಕ್ ಕ್ರೀಡೆಗಳ ಸಂದರ್ಭದಲ್ಲಿ ನಾಝಿ ಜರ್ಮನಿಯು ಸಂಪದ್ಭರಿತ ಹಾಗೂ ಶಾಂತಿಪ್ರಿಯ ರಾಷ್ಟ್ರವೆಂಬ ಚಿತ್ರಣವನ್ನು ಕಟ್ಟಿಕೊಡುವ ಹಾಗೂ ಹರಡುವ ಉದ್ದೇಶಪೂರ್ವಕ ಸಂದೇಶವನ್ನು ಹೊಂದಿತ್ತು. ಒಬ್ಬ ಪ್ರಧಾನ ರಾಜಕಾರಣಿಯಾಗಿ ಹಿಟ್ಲರನು ಹಲವಾರು ನ್ಯೂಸ್ ರೀಲ್‌ಗಳಲ್ಲಿ ಕಾಣಿಸಿಕೊಂಡಿರುವನು.

ದೂರದರ್ಶನ

೧೯೩೬ರ ಒಲಿಂಪಿಕ್ ಕ್ರೀಡೆಗಳು ಹಾಗೂ ನ್ಯೂರೆಮ್‌ಬರ್ಗ್ ಪ್ರಚಾರ ಸಭೆ ಸೇರಿದಂತೆ ಹಲವಾರು ಸಾರ್ವಜನಿಕ ಸಭೆಗಳಲ್ಲಿ ಹಿಟ್ಲರ್ ಪಾಲ್ಗೊಂಡಿದ್ದ ಚಿತ್ರಣಗಳು ೧೯೩೫ ಹಾಗೂ ೧೯೩೯ರ ನಡುವೆ ದೂರದರ್ಶನದಲ್ಲಿ ಪ್ರಸಾರಗೊಂಡವು.ಸಾರ್ವಜನಿಕ ಅಧಿಕಾರಿಗಳ ಚಟುವಟಿಕೆಗಳನ್ನು ಪ್ರಮುಖವಾಗಿ ಬಿಂಬಿಸುವ ಇನ್ನಿತರ ಕಾರ್ಯಕ್ರಮಗಳೊಡನೆ ಈ ಕಾರ್ಯಕ್ರಮಗಳು ಸಾರ್ವಜನಿಕ ದೃಶ್ಯಕೇಂದ್ರಗಳಲ್ಲಿ ಮತ್ತೆ ಮತ್ತೆ ಪ್ರಸಾರಗೊಂಡವು.ನಾಝಿ ಜರ್ಮನಿ ಕಾಲದ ಅಳಿದುಳಿದ ಕೆಲವೇ ದೂರದರ್ಶನದ ಚಿತ್ರಗಳನ್ನು ೧೯೯೯ರ Das Fernsehen unter dem Hakenkreuz (ಟೆಲಿವಿಜನ್ ಅಂಡರ್ ದ ಸ್ವಸ್ತಿಕ) ಡಾಕ್ಯುಮೆಂಟರಿಯಲ್ಲಿ ಸೇರಿಸಿಕೊಳ್ಳಲಾಗಿದೆ.

ಥರ್ಡ್ ರೀಚ್ ನಂತರದ ಕಾಲದ ಡಾಕ್ಯುಮೆಂಟರಿಗಳು

  • ದ ವರ್ಲ್ಡ್ ವಾರ್ (೧೯೭೪): ಹಿಟ್ಲರ್ ಹಾಗೂ ನಾಝಿ ಜರ್ಮನಿಯು ಕುರಿತು ಮಾಹಿತಿಗಳು ಹಾಗೂ ಆತನ ಕಾರ್ಯದರ್ಶಿ ಟ್ರೌಡಲ್ ಜಂಗ್‌ (Traudl Junge)ಳ ಸಂದರ್ಶನವುಳ್ಳ ಥೇಮ್ಸ್ ಟೆಲಿವಿಜನ್ ಸರಣಿ.
  • ಅಡಾಲ್ಫ್ ಹಿಟ್ಲರ್ಸ್ ಲಾಸ್ಟ್ ಡೇಸ್ : ಈ “ಸೀಕ್ರೆಟ್ಸ್ ಆಫ್ ಸೆಕೆಂಡ್ ವರ್ಲ್ಡ್ ವಾರ್" ಬಿಬಿಸಿ ಸರಣಿಯು ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರನ ಅಂತಿಮ ದಿನಗಳ ಕುರಿತು ಹೇಳುತ್ತದೆ.
  • ದ ನಾಝೀಸ್: ಎ ವಾರ್ನಿಂಗ್ ಫ್ರಮ್ ಹಿಸ್ಟರಿ (೧೯೭೯): ಆರು ಭಾಗಗಳ ಬಿಬಿಸಿ ಟೀವಿ ಸರಣಿ. ಇದು, ಜರ್ಮನಿಯ ಸುಸಂಸ್ಕೃತ ಹಾಗೂ ಸುಶಿಕ್ಷಿತ ಜನರು ಹೇಗೆ ಹಿಟ್ಲರ್ ಹಾಗೂ ನಾಝಿಗಳನ್ನು ಒಪ್ಪಿಕೊಂಡು ಪತನಕ್ಕೀಡಾದರು ಎಂಬುದನ್ನು ಹೇಳುತ್ತದೆ.ಇದರ ಐತಿಹಾಸಿಕ ಸಲಹೆಗಾರರು ಇಯಾನ್ ಕೆರ್ಶಾ.
  • ಇಮ್ ಟೋಟೆನ್ ವಿನ್‌ಕೆಲ್- ಹಿಟ್ಲರ್ಸ್ ಸೆಕ್ರೆಟೇರಿನ್ (Im toten Winkel—Hitlers Sekretärin- ಬ್ಲೈಂಡ್ ಸ್ಪಾಟ್: ಹಿಟ್ಲರ್ಸ್ ಸೆಕ್ರೆಟರಿ ) (೨೦೦೨): ಹಿಟ್ಲರನ ಸೆಕ್ರೆಟರಿ ಟ್ರೌಡಲ್ ಜಂಗ್‌ಳೊಂದಿಗೆ ೯೦ನಿಮಿಷಗಳ ವಿಶೇಷ ಸಂದರ್ಶನ.ಜಂಗ್ ಶ್ವಾಸಕೋಶ ಕ್ಯಾನ್ಸರಿನಿಂದ ಸಾಯುವ ಕೆಲವೇ ದಿನಗಳ ಮುನ್ನ ಆಸ್ಟ್ರಿಯನ್ ಯಹೂದಿ ನಿರ್ದೇಶಕ ಆಂಡ್ರೆ ಹೆಲ್ಲರ್‌ನಿಂದ ನಿರ್ಮಿಸಲ್ಪಟ್ಟ ಈ ಡಾಕ್ಯುಮೆಂಟರಿಯಲ್ಲಿ, ಜಂಗ್ ಬರ್ಲಿನ್ ಬಂಕರಿನ ಕೊನೆಯ ದಿನಗಳನ್ನು ನೆನೆಸಿಕೊಂಡಿದ್ದಾನೆ.ಈ ಸಂದರ್ಶನದ ಕೆಲವು ತುಣುಕುಗಳನ್ನು ಡೌನ್‌ಫಾಲ್‌ ನಲ್ಲಿ ಬಳಸಿಕೊಳ್ಳಲಾಗಿದೆ.
  • ಉಂಡರ್‌ಗೇಂಜನ್ಸ್ ಆರ್ಕಿಟೆಕ್ಟುರ್ (Undergångens arkitektur- ದ ಆರ್ಕಿಟೆಕ್ಚರ್ ಆಫ್ ಡೂಮ್) (೧೯೮೯): ಹಿಟ್ಲರನಿಂದ ದೃಷ್ಟಿಯಲ್ಲಿ ರಾಷ್ಟ್ರೀಯ ಸಮಾಜವಾದೀಯ ಲಲಿತಕಲಾ ವಿಜ್ಞಾನ ಕುರಿತ ಡಾಕ್ಯುಮೆಂಟರಿ.
  • ಡಾಸ್ ಫೆರ್ನ್‌ಸೆಹೆನ್ ಉಂಟರ್ ಡೆಮ್ ಹಕೆನ್‌ಕ್ರುಝ್ (Das Fernsehen unter dem Hakenkreuz- ಟೆಲಿವಿಜನ್ ಅಂಡರ್ ಸ್ವಸ್ತಿಕ) (೧೯೯೯): ೧೯೩೫ರಿಂದ ೧೯೪೫ರವರೆಗೆ ಪ್ರಚಾರೋದ್ದೇಶದಿಂದ ನಾಝಿ ಜರ್ಮನಿಯು ದೂರದರ್ಶನವನ್ನು ಬಳಸಿಕೊಂಡ ಬಗೆಯನ್ನು ವಿವರಿಸುವ ಮಿಶೆಲ್ ಕ್ಲೋಫ್ಟ್ ನಿರ್ಮಿತ ಡಾಕ್ಯುಮೆಂಟರಿ.
  • ರುಯ್ನ್ಸ್ ಆಫ್ ದ ರೀಚ್ (೨೦೦೭): ತೃತೀಯ ಸಾಮ್ರಾಜ್ಯದ ಚರಿತ್ರಕಾರ ಆರ್.ಜೆ.ಆಡಮ್ಸ್‌ರಿಂದ ರೂಪಿಸಲ್ಪಟ್ಟ ಹಿಟ್ಲರ್ ಸಾಮ್ರಾಜ್ಯದ ಉದಯಾಸ್ತಮಾನಗಳು ಹಾಗೂ ಅದರ ಪರಿಣಾಮಗಳನ್ನು ವಿವರಿಸುವ ನಾಲ್ಕು ಭಾಗಗಳ ಸರಣಿ.

ನಾಟಕೀಕರಣ

  • ಹಿಟ್ಲರ್: ದ ಲಾಸ್ಟ್ ಟೆನ್ ಡೇಸ್ (೧೯೭೩): ಹಿಟ್ಲರನ ಸಾವಿನವರೆಗೆ ಆತನ ಕೊನೆಯ ದಿನಗಳನ್ನು ಚಿತ್ರಿಸುವ ಸಿನೆಮಾ, ಸರ್ ಅಲೆಕ್ ಗಿನ್ನಿಸ್ ಇದರಲ್ಲಿ ನಟಿಸಿದ್ದಾರೆ.
  • ಹನ್ಸ್ ಜರ್ಗೆನ್ ಸೈಬರ್‌ಬರ್ಗ್ ನಿರ್ಮಾಣದ ಹಿಟ್ಲರ್ ಈನ್ ಫಿಲ್ಮ್ ಔಸ್ ಡಚಸ್‌ಲ್ಯಾಂಡ್- Hitler—Ein Film aus Deutschland (ಹಿಟ್ಲರ್: ಎ ಫಿಲ್ಮ್ ಫ್ರಮ್ ಜರ್ಮನಿ) (೧೯೭೭): ನಾಲ್ಕು ಭಾಗಗಳಲ್ಲಿ ಚಿತ್ರೀಕರಣಗೊಂಡ ಏಳುಗಂಟೆ ಅವಧಿಯ ಚಿತ್ರ. ಇದರಲ್ಲಿ ನಿರ್ದೇಶಕರು ಡಾಕ್ಯುಮೆಂಟರಿ ತುಣುಕುಗಳು, ಛಾಯಾಚಿತ್ರಗಳ ಹಿನ್ನೆಲೆ, ಬೊಂಬೆಯಾಟದ ಬೊಂಬೆಗಳು, ರಂಗಮಂದಿರದ ವೇದಿಕೆಗಳು ಹಾಗೂ ಇನ್ನಿತರ ಪರಿಕರಗಳನ್ನು ಬಳಸಿದ್ದಾರೆ.
  • ದ ಬಂಕರ್ (೧೯೭೮): ೧೯೪೫ರ ಜನವರಿ ೧೭ರಿಂದ ಮಾರ್ಚ್ ೨ರವರೆಗಿನ ಫ್ಯೂರೆರ್ ಬಂಕರಿನ ಅಂತಿಮ ದಿನಗಳನ್ನು ವಿವರಿಸುವ ಚಲನ ಚಿತ್ರ.ದೂರದರ್ಶನ ಚಿತ್ರವಾಗಿ ಮಾಡಲ್ಪಟ್ಟ ದ ಬಂಕರ್ ಚಲನ ಚಿತ್ರ (೧೯೮೧): ಅಂಥೋಣಿ ಹಾಪ್‌ಕಿನ್ಸ್ ಪ್ರಮುಖ ಪಾತ್ರವಹಿಸಿದ್ದರು.
  • ಯುರೋಪಾ, ಯುರೋಪಾ (೧೯೯೦): ಹಾಲೋಕ್ಯಾಸ್ಟ್‌ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಿಟ್ಲರನ ಯುವಸೇನೆಯನ್ನು ಸೇರಿದ ಜರ್ಮನ್ ಯಹೂದಿಯೊಬ್ಬನ ನೈಜ ಕಥೆ ಆಧರಿಸಿದ ಚಲನ ಚಿತ್ರ.ಇದರಲ್ಲಿ ಹಿಟ್ಲರ್ ಪಾತ್ರವನ್ನು ರೈಝರ್ಡ್ ಪೀಟ್ರುಸ್ಕಿ ನಿಭಾಯಿಸಿರುವರು.
  • ಫಾದರ್ ಲ್ಯಾಂಡ್ (೧೯೯೪): ೧೯೬೪ರಲ್ಲಿ ಜರ್ಮನಿಯ ಪೂರ್ವಕಲ್ಪಿತ ನೋಟ. ಇದರಲ್ಲಿ ಹಿಟ್ಲರನು ದ್ವಿತೀಯ ಮಹಾಯುದ್ಧವನ್ನು ಗೆದ್ದಿರುತ್ತಾನೆ. ಈ ಎಳೆಯನ್ನು ಮಾಜಿ ಪತ್ರಕರ್ತ ರಾಬರ್ಟ್ ಹ್ಯಾರಿಸ್‌ನ ಕಾದಂಬರಿಯಿಂದ ಅಳವಡಿಸಿಕೊಳ್ಳಲಾಗಿದೆ.
  • ದ ಎಂಪ್ಟಿ ಮಿರರ್ (೧೯೯೬): ನಾಝಿ ಜರ್ಮನಿಯ ವೈಫಲ್ಯವನ್ನು ಪಾರುಗಾಣಿಸುವ ಹಿಟ್ಲರನ ಪ್ರಯತ್ನಗಳನ್ನು ಬಿಂಬಿಸುವ ಸೈಕೋಡ್ರಾಮಾ (ನಾರ್ಮನ್ ರಾಡ್‌ವೇ ಇದನ್ನು ನಿರೂಪಿಸಿದ್ದಾರೆ).
  • ಮೊಲೋಚ್ (೧೯೯೯): ಲಿಯೋನಿಡ್ ರುಫನೊವಾರಿಂದ ಕೆತ್ತಲ್ಪಟ್ಟ ಹಿಟ್ಲರನ ಚಿತ್ರಣ. ಬವೇರಿಯನ್ ಆಲ್ಪ್ಸ್‌ನಲ್ಲಿ ಆತನ ಬರ್ಗೋಫ್ ಆಶ್ರಯತಾಣದಲ್ಲಿನ ಊಹಾತ್ಮಕ ಮಾನವೀಯ ನೆಲೆಗಟ್ಟಿನ ಕಥನ.
  • “ಮ್ಯಾಕ್ಸ್" (೨೦೦೨): ಯಹೂದಿ ಚಿತ್ರ ಚಿತ್ರಕಲಾಕೃತಿ ಮಾರಾಟಗಾರ ಮ್ಯಾಕ್ಸ್ ರೋತ್‌ಮನ್ (ಜಾನ್ ಚುಸಕ್) ಹಾಗೂ ವಿಯೆನ್ನಾದ ವಿಫಲ ಚಿತ್ರಕಾರನಾಗಿದ್ದ ಯುವಕ ಹಿಟ್ಲರ್ (ನೋವಾ ಟೇಲರ್) ನಡುವಿನ ಸ್ನೇಹವನ್ನು ವಿವರಿಸುವ ಕಾಲ್ಪನಿಕ ನಾಟಕ.
  • ಹಿಟ್ಲರ್: ದ ರೈಸ್ ಆಫ್ ಇವಿಲ್ (೨೦೦೩): ಅಡಾಲ್ಫ್ ಹಿಟ್ಲರನ ಆರಂಭದ ದಿನಗಳು ಹಾಗೂ ಅಧಿಕಾರದತ್ತ ಆತನ ಬೆಳವಣಿಗೆ (೧೯೩೩ರವರೆಗೆ) ಕುರಿತ ಎರಡು ಭಾಗಗಳ ಟೀವಿ ಸರಣಿ. ರಾಬರ್ಟ್ ಕಾರ್ಲೈಲ್ ಪ್ರಮುಖ ಪಾತ್ರ ವಹಿಸಿದ್ದಾರೆ.
  • ಡೆರ್ ಉಂಟರ್‌ಗ್ಯಾಂಗ್- Der Untergang (ಡೌನ್‌ಫಾಲ್ ) (೨೦೦೪): ಅಡಾಲ್ಫ್ ಹಿಟ್ಲರ್ ಹಾಗೂ ತೃತೀಯ ಸಾಮ್ರಾಜ್ಯದ ಅಂತಿಮ ದಿನಗಳನ್ನು ಬಿಂಬಿಸುವ ಜರ್ಮನ್ ಚಲನಚಿತ್ರ. ಬ್ರೂನೋ ಗನ್ಜ್ ಮುಖ್ಯ ತಾರಾಗಣದಲ್ಲಿದ್ದಾರೆ. ಈ ಚಲನ ಚಿತ್ರವು ಆಂಶಿಕವಾಗಿ ಹಿಟ್ಲರನ ನೆಚ್ಚಿನ ಕಾರ್ಯದರ್ಶಿ ಟ್ರೌಡಲ್ ಜಂಗ್‌ಳ ಆತ್ಮಕಥೆಯನ್ನು ಆಧರಿಸಿದೆ.೨೦೦೨ರಲ್ಲಿ ಜಂಗ್, ತಾನು “...ಭೂಮಿಯ ಮೇಲೆ ಬದುಕಿದ್ದ ಅತಿ ದೊಡ್ಡ ಅಪರಾಧಿಯನ್ನು ಮೆಚ್ಚಿಕೊಂಡಿದ್ದಕ್ಕಾಗಿ" ಪಶ್ಚಾತ್ತಾಪಪಡುತ್ತಿರುವುದಾಗಿ ಹೇಳಿಕೊಂಡಿದ್ದಳು.
  • ವಲ್ಕೈರೀ (೨೦೦೮): ಹಿಟ್ಲರ್ ಪಾತ್ರವನ್ನು ಡೇವಿಡ್ ಬೇಂಬರ್ ನಿರ್ವಹಿಸಿರುವನು. ಇದನ್ನು ಸ್ಟೌಫನ್‌ಬರ್ಗ್‌ನ ಕುಖ್ಯಾತ ವಧಾಸ್ಥಾನವನ್ನು ಗುರಿಯಾಗಿಟ್ಟುಕೊಂಡು ನಿರ್ಮಿಸಲಾಗಿದೆ.
  • Dr Freud Will See You Now Mr Hitler (೨೦೦೮): radio drama by Laurence Marks and Maurice Gran presenting an imagined scenario in which Sigmund Freud treats the young Hitler.

ಡಾ. ಫ್ರಾಯ್ಡ್ ವಿಲ್ ಸೀ ಯು ನೌ ಮಿ.ಹಿಟ್ಲರ್ (೨೦೦೮): ಲಾರೆನ್ಸ್ ಮಾರ್ಕ್‌ ಹಾಗೂ ಮೌರಿಸ್ ಗ್ರಾನ್‌ ರ ರೇಡಿಯೋ ನಾಟಕ. ಇದರಲ್ಲಿ, ಯುವ ಹಿಟ್ಲರನಿಗೆ ಸಿಗ್ಮಂಡ್ ಫ್ರಾಯ್ಡ್ ಚಿಕಿತ್ಸೆ ನೀಡುತ್ತಿರುವಂತೆ ಕಲ್ಪಿಸಿಕೊಂಡು ನಾಟಕ ಹೆಣೆಯಲಾಗಿದೆ. ಟೊಬಿ ಜೋನ್ಸ್ ಹಿಟ್ಲರನ ಪಾತ್ರ ವಹಿಸಿದ್ದಾರೆ

ಆಕರಗಳು

ಅಡಿ ಟಿಪ್ಪಣಿಗಳು

ಹೊರಗಿನ ಕೊಂಡಿಗಳು

    ವಿಡಿಯೋ ಮತ್ತು ಚಿತ್ರಗಳು
    ಭಾಷಣಗಳು ಮತ್ತು ಪ್ರಕಟಣೆಗಳು
Political offices
ಪೂರ್ವಾಧಿಕಾರಿ
Anton Drexler
Leader of the NSDAP
1921–1945
ಉತ್ತರಾಧಿಕಾರಿ
None
ಪೂರ್ವಾಧಿಕಾರಿ
Franz Pfeffer von Salomon
Leader of the SA
1930–1945
ಪೂರ್ವಾಧಿಕಾರಿ
Kurt von Schleicher
Chancellor of Germany(1)
1933–1945
ಉತ್ತರಾಧಿಕಾರಿ
Joseph Goebbels
ಪೂರ್ವಾಧಿಕಾರಿ
Paul von Hindenburg (as President)
Führer of Germany(1)
1934–1945
ಉತ್ತರಾಧಿಕಾರಿ
Karl Dönitz (as President)
Military offices
ಪೂರ್ವಾಧಿಕಾರಿ
Walther von Brauchitsch
Oberbefehlshaber des Heeres (Army Commander)
1941–1945
ಉತ್ತರಾಧಿಕಾರಿ
Ferdinand Schörner
Notes and references
1. The positions of Head of State and Government were combined 1934–1945 in the office of Führer and Chancellor of Germany

ckb:ئادۆڵف ھیتلەر

Tags:

ಅಡೋಲ್ಫ್ ಹಿಟ್ಲರ್ ಆರಂಭದ ದಿನಗಳುಅಡೋಲ್ಫ್ ಹಿಟ್ಲರ್ ರಾಜಕಾರಣಕ್ಕೆ ಪ್ರವೇಶಅಡೋಲ್ಫ್ ಹಿಟ್ಲರ್ ಅಧಿಕಾರಪ್ರಾಪ್ತಿಯೆಡೆಗೆ..ಅಡೋಲ್ಫ್ ಹಿಟ್ಲರ್ ತೃತೀಯ ಸಾಮ್ರಾಜ್ಯ (Third Reich)ಅಡೋಲ್ಫ್ ಹಿಟ್ಲರ್ II ನೇ ಮಹಾಯುದ್ಧಅಡೋಲ್ಫ್ ಹಿಟ್ಲರ್ ಪರಂಪರೆಅಡೋಲ್ಫ್ ಹಿಟ್ಲರ್ ಧಾರ್ಮಿಕ ನಂಬಿಕೆಗಳುಅಡೋಲ್ಫ್ ಹಿಟ್ಲರ್ ಆರೋಗ್ಯ ಹಾಗೂ ಲೈಂಗಿಕತೆಅಡೋಲ್ಫ್ ಹಿಟ್ಲರ್ ಕುಟುಂಬಅಡೋಲ್ಫ್ ಹಿಟ್ಲರ್ ಮಾಧ್ಯಮದಲ್ಲಿ ಹಿಟ್ಲರ್ಅಡೋಲ್ಫ್ ಹಿಟ್ಲರ್ ಆಕರಗಳುಅಡೋಲ್ಫ್ ಹಿಟ್ಲರ್ ಹೊರಗಿನ ಕೊಂಡಿಗಳುಅಡೋಲ್ಫ್ ಹಿಟ್ಲರ್ಆಗ್ನೇಯ ಏಷ್ಯಾಆಸ್ಟ್ರಿಯಾಉತ್ತರ ಆಫ್ರಿಕಾಒಂದನೆಯ ಮಹಾಯುದ್ಧಜರ್ಮನಿನಾಜಿ ಪಕ್ಷನಿರಂಕುಶ ಪ್ರಭುತ್ವಪೂರ್ವ ಏಷ್ಯಾಪೋಲೆಂಡ್ಫ್ರಾನ್ಸ್‌‌ಯಹೂದಿಯುರೋಪ್‌ಸರ್ವಾಧಿಕಾರಹತ್ಯಾಕಾಂಡ

🔥 Trending searches on Wiki ಕನ್ನಡ:

ಕ್ರಿಯಾಪದಕೊ. ಚನ್ನಬಸಪ್ಪತಾಳೀಕೋಟೆಯ ಯುದ್ಧಬೆಂಗಳೂರು ನಗರ ಜಿಲ್ಲೆಬ್ಯಾಡ್ಮಿಂಟನ್‌ಮುಹಮ್ಮದ್ಮಾಧ್ಯಮಪಾಲಕ್ಕನ್ನಡ ಸಾಹಿತ್ಯಅಂಶಗಣಸಾಸಿವೆಪಶ್ಚಿಮ ಬಂಗಾಳಸಿಗ್ಮಂಡ್‌ ಫ್ರಾಯ್ಡ್‌ನರೇಂದ್ರ ಮೋದಿಖ್ಯಾತ ಕರ್ನಾಟಕ ವೃತ್ತಋತುಸವದತ್ತಿಕನ್ನಡ ರಂಗಭೂಮಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜಯಮಾಲಾಜಾಗತಿಕ ತಾಪಮಾನ ಏರಿಕೆಕರ್ನಾಟಕದ ತಾಲೂಕುಗಳುಮೂಲಭೂತ ಕರ್ತವ್ಯಗಳುಕಾಂತಾರ (ಚಲನಚಿತ್ರ)ಹಂಪೆಚಂದ್ರಶೇಖರ ವೆಂಕಟರಾಮನ್ತುಳಸಿಮಾಹಿತಿ ತಂತ್ರಜ್ಞಾನಯೋಗ ಮತ್ತು ಅಧ್ಯಾತ್ಮವಾಟ್ಸ್ ಆಪ್ ಮೆಸ್ಸೆಂಜರ್ಲೋಹಆವಕಾಡೊಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಶಾಲೆಸುಧಾ ಮೂರ್ತಿನಾಗರೀಕತೆಹಣಕಾಸುಭಾರತದ ಮುಖ್ಯ ನ್ಯಾಯಾಧೀಶರುಮಸೂದೆಬಾದಾಮಿ ಗುಹಾಲಯಗಳುಜೀವಸತ್ವಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಬೊಜ್ಜುಪು. ತಿ. ನರಸಿಂಹಾಚಾರ್ಭಾರತದ ಬಂದರುಗಳುನುಗ್ಗೆ ಕಾಯಿಹದಿಹರೆಯಸಾಮ್ರಾಟ್ ಅಶೋಕಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಜಪಾನ್ಕೊರೋನಾವೈರಸ್ಮಂಗಳೂರುರಾಧಿಕಾ ಕುಮಾರಸ್ವಾಮಿಸಮಾಜಶಾಸ್ತ್ರಭಾರತದ ಉಪ ರಾಷ್ಟ್ರಪತಿಗಳ ಪಟ್ಟಿರಸ(ಕಾವ್ಯಮೀಮಾಂಸೆ)ದಲಿತಪಿರಿಯಾಪಟ್ಟಣಇಸ್ಲಾಂ ಧರ್ಮಕುಟುಂಬಹಾ.ಮಾ.ನಾಯಕಲೆಕ್ಕ ಪರಿಶೋಧನೆಎ.ಪಿ.ಜೆ.ಅಬ್ದುಲ್ ಕಲಾಂಭೀಷ್ಮಶಿವರಾಮ ಕಾರಂತಪ್ರಜಾವಾಣಿಶ್ರೀಲಂಕಾ ಕ್ರಿಕೆಟ್ ತಂಡವಿಜಯನಗರಕೆರೆಗೆ ಹಾರ ಕಥನಗೀತೆಬೆಸಗರಹಳ್ಳಿ ರಾಮಣ್ಣಮಹಮದ್ ಬಿನ್ ತುಘಲಕ್ರಕ್ತಪಿಶಾಚಿಗಿರೀಶ್ ಕಾರ್ನಾಡ್ಗ್ರಂಥಾಲಯಗಳುಭಾರತದ ವಾಯುಗುಣ🡆 More