ಪುಷ್ಪಗಿರಿ ಬೆಟ್ಟ,
ಶ್ರೀ ಕ್ಷೇತ್ರ ಪುಷ್ಪಗಿರಿಯು ಮಲ್ಲಿಕಾರ್ಜುನ (ಶಿವ) ದೇವರನ್ನು ಹೊಂದಿರುವ ಸುಂದರವಾದ ಪವಿತ್ರ ಹಿಂದೂ ದೇವಾಲಯವಾಗಿದೆ. ಇದನ್ನು ಕರ್ನಾಟಕದ ಶ್ರೀಶೈಲ ಎಂದೂ ಕರೆಯುತ್ತಾರೆ. ಇಲ್ಲಿ ದೇವಸ್ಥಾನ ಮಾತ್ರವಲ್ಲ ಮಠವೂ ಇದೆ. ಶ್ರೀ ಶ್ರೀ ಶ್ರೀ 1108 ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಈ ಬೆಟ್ಟದಲ್ಲಿ ಮಠದ ಮುಖ್ಯಸ್ಥರಾಗಿದ್ದಾರೆ. ಈ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ಹಾಸನದ ಬೇಲೂರು, ಪುಷ್ಪಗಿರಿ ಹಳೇಬೀಡು ಬೆಟ್ಟದ ತುದಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಪಾರವತಮ್ಮ ದೇವಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಪುಷ್ಪಗಿರಿಯ ಸಮೀಪದಲ್ಲಿ ಹಲವಾರು ದೇವಾಲಯಗಳಿವೆ ಅವುಗಳೆಂದರೆ ಶ್ರೀ ಹುಲ್ಲಿಕಲ್ ವೀರಭದ್ರೇಶ್ವರ ದೇವಸ್ಥಾನ, ಹೊಯ್ಸಳೇಶ್ವರ ದೇವಸ್ಥಾನ ಹಳೇಬೀಡು, ಜೈನ ಬಸದಿ ಗುಡಿ ಇತ್ಯಾದಿ. ದೇವಾಲಯವು ಬೆಳಿಗ್ಗೆ 9:00 ಗಂಟೆಗೆ ತೆರೆಯುತ್ತದೆ ಮತ್ತು ದೇವಾಲಯವು ಮಧ್ಯಾಹ್ನದ ವೇಳೆಗೆ ಪ್ರಸಾದವನ್ನು ನೀಡುತ್ತದೆ. ಮಕರ ಸಂಕ್ರಾಂತಿ, ಮಹಾಶಿವರಾತ್ರಿ, ಕೆಂಡೋತ್ಸವ, ಜಾತ್ರಾ ಮಹೋತ್ಸವ ಮತ್ತು ಲಕ್ಷ ದೀಪೋತ್ಸವ ಇತ್ಯಾದಿ ಕೆಲವು ಹಬ್ಬಗಳನ್ನು ಪ್ರತಿ ವರ್ಷ ಮತ್ತು ಪ್ರತಿ ತಿಂಗಳು ಅಂವಾಸ್ಯೆ ಮತ್ತು ಪೋರ್ಣಮಿಯನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಸುಂದರವಾದ ಪ್ರಕೃತಿ, ಪರ್ವತಗಳು ಮತ್ತು ಹಸಿರಿನಿಂದ ಆವೃತವಾಗಿದೆ. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಸುಮಾರು 220 ಕಿ.ಮೀ. ಇಲ್ಲಿ ಸಾರ್ವಜನಿಕ ಸಾರಿಗೆಯ ಮೂಲಕ ತಲುಪಬಹುದು, ksrtc ಮೂಲಕ ಹಳೇಬೀಡು ತಲುಪಬಹುದು ನಂತರ ಖಾಸಗಿ ರಿಕ್ಷಾದಲ್ಲಿ ಹಳೇಬೀಡಿನಿಂದ 4 ಕಿಮೀ ಪ್ರಯಾಣಿಸಬಹುದು.
ನಾವು ಇಲ್ಲಿ ವಸ್ತುಸಂಗ್ರಹಾಲಯವನ್ನು ನೋಡಬಹುದು ಮತ್ತು ಪ್ರತಿ ಭೇಟಿಗೆ INR 20 ಶುಲ್ಕ ವಿಧಿಸಲಾಗುತ್ತದೆ. ಇದು 108 ಶಿವಲಿಂಗಗಳು, ಉದ್ಯಾನ, ಮಕ್ಕಳ ಆಟದ ಪ್ರದೇಶ, ಅಕ್ವೇರಿಯಂ, ಸಾಕುಪ್ರಾಣಿಗಳು ಮತ್ತು ಪ್ರಾಣಿಗಳನ್ನು ಒಳಗೊಂಡಿರುವ ಸುಂದರವಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ನಾವು ಹುಕ್ಕುಡಗಾತ್ರಿ ಅಜ್ಜಯ್ಯನ ಪ್ರತಿಮೆ ಮತ್ತು ಅನೇಕ ಸ್ವಾಮೀಜಿಯ ಪ್ರತಿಮೆಗಳನ್ನು ಸಹ ನೋಡಬಹುದು.
ಮತ್ತು ಈ ಸ್ಥಳದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ವೇದಗಳು, ಜ್ಯೋತಿಷ್ಯ ಇತ್ಯಾದಿಗಳನ್ನು ಕಲಿಯುತ್ತಿದ್ದಾರೆ ಅವರಿಗೆ ಸರಿಯಾದ ವಸತಿ ಸೌಕರ್ಯವನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ಆ ಸುಂದರ ಪರಿಸರದಲ್ಲಿ ಕಲಿಯಲು ಆನಂದಿಸುತ್ತಿದ್ದರು ಮತ್ತು ಸಂದರ್ಶಕರಿಂದ ಎಲ್ಲಾ ಪ್ರತಿಮೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ.
ಪುಷ್ಪಗಿರಿಯಲ್ಲಿ ನಮಗೆ ಮದುವೆ ಸಮಾರಂಭದ ಉದ್ದೇಶಕ್ಕಾಗಿ ಎರಡು ಫಂಕ್ಷನ್ ಹಾಲ್ ಸಿಗುತ್ತದೆ. ದೇವಾಲಯದ ಮೂಲಸೌಕರ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಅತ್ಯಂತ ಸ್ವಚ್ಛ ಮತ್ತು ತುಂಬಾ ಅಭಿವೃದ್ಧಿಯಾಗಿದೆ.
ಉತ್ತಮ ಪರಿಸರ ಮತ್ತು ಈ ಸ್ಥಳಕ್ಕೆ ಭೇಟಿ ನೀಡುವ ಮೂಲಕ ನಾವು ಆನಂದಿಸಬಹುದು ಮತ್ತು ಆಶೀರ್ವಾದ ಪಡೆಯಬಹುದು.
ಈ ಊರು ಒಂದೊಮ್ಮೆ ಹೊಯ್ಸಳ ವಂಶದ ರಾಜಧಾನಿಯಾಗಿತ್ತು. ಹೊಯ್ಸಳರು ಹತ್ತನೆಯ ಶತಮಾನದ ಆರಂಭದಿಂದ ಹದಿಮೂರನೆಯ ಶತಮಾನದ ಅಂತ್ಯದವರೆವಿಗೂ ಈಗಿನ ಕರ್ನಾಟಕ ವೂ ಸೇರಿದಂತೆ ತಮಿಳುನಾಡು ಮತ್ತು ಆಂಧ್ರಪ್ರದೇಶ ದ ಕೆಲವು ಭಾಗಗಳನ್ನು ಆಳಿದ್ದರು. ಮೂಲತಃ ಹೊಯ್ಸಳರು ಕಲ್ಯಾಣದ ಚಾಲುಕ್ಯರಿಗೆ ಸಾಮಂತರಾಗಿದ್ದುಕೊಂಡೇ ಅಧಿಕಾರವನ್ನು ನೆಡೆಸಿದವರು. ೧೨ ನೆಯ ಶತಮಾನದ ಆರಂಭದಲ್ಲಿ ರಾಜ ವಿಷ್ಣುವರ್ಧನ ಮತ್ತು ವೀರಬಲ್ಲಾಳ ನ ಕಾಲದಲ್ಲಿ ಚಾಲುಕ್ಯರು ಅವನತಿಯನ್ನು ಕಂಡಾಗ ಇವರು ಹೆಚ್ಚು ಸ್ವತಂತ್ರವಾಗಿ ಆಡಳಿತವನ್ನು ನೆಡೆಸುತ್ತಾರೆ. ಹೊಯ್ಸಳರ ಮೂಲ ಊರು ಇಂದಿನ ಚಿಕ್ಕಮಗಳೂರು ಜಿಲ್ಲೆ ಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಅಂಗಡಿ ಎಂಬ ಪುಟ್ಟ ಗ್ರಾಮ. ಆಗಿಂದಾಗ್ಗೆ ಉಂಟಾಗುತ್ತಿದ್ದ ನೆರೆಯೆ ಶತ್ರುಗಳ ಕಿರುಕುಳದ ನಡುವೆಯೂ ಇವರು ತಮ್ಮ ರಾಜಕೀಯ ಕಾರ್ಯಕ್ಷ್ತೇತ್ರವನ್ನು ಇಂದಿನ ಹಾಸನ ಜಿಲ್ಲೆ ಯ ಮಧ್ಯಭಾಗದಲ್ಲೇ ಸ್ಠಿರಗೊಳಿಸಿಕೊಂಡು ರಾಜ್ಯಭಾರ ನೆಡೆಸುತ್ತಾರೆ. ಇಂದಿನ ಹಳೇಬೀಡು ಹೊಯ್ಸಳರ ಬಹುಕಾಲದ ರಾಜಧಾನಿಯಾಗಿ ಮೆರೆದಿದ್ದ ಊರು. ಹೊಯ್ಸಳರಿಗಿಂತ ಮುಂಚಿನಿಂದಲೂ ಅಸ್ತಿತ್ವದಲ್ಲಿ ಇದ್ದ ಊರಾದ್ದರಿಂದ ಜನಪದವಾಗಿ ಹಳೆಯ ಬೀಡು(ಊರು), ಹಳೇಬೀಡು ಎಂಬ ರೂಪಾಂತರಗಳನ್ನು ಕಂಡಿದೆ.
ಸುಮಾರು ಒಂಬತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ದೊರೆ ದೋರ ಎಂಬುವವನು ಈ ಊರಿನಲ್ಲಿ ದೊಡ್ಡಕೆರೆಯೊಂದನ್ನು ಕಟ್ಟಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಈ ಕೆರೆಯು ೧೨೦೦ ಎಕರೆಗೂ ಮೀರಿ ವ್ಯಾಪ್ತಿಯನ್ನು ಹೊಂದಿದ್ದು ಈಗಲೂ ಕೆರೆಯು ನೀರಿನಿಂದ ತುಂಬಿಕೊಂಡಾಗ ಸಮುದ್ರದಂತೆ ತೋರುತ್ತದೆ. ಈ ಕಾರಣದಿಂದಾಗಿಯೇ ಈ ಕೆರೆಯನ್ನು ದೋರಸಮುದ್ರ ಎಂದು ಉಲ್ಲೇಖಿಸಲಾಗಿದೆಯೆಂದು ತಿಳಿದುಬರುತ್ತದೆ. ಅಂದಿನ ಕಾಲಕ್ಕೆ ದೋರಸಮುದ್ರ ಎನ್ನುವ ಹೆಸರೇ ಊರಿಗೂ ಇತ್ತೆಂದು ಹೊಯ್ಸಳರ ಕಾಲದ ಅನೇಕ ಶಾಸನಗಳಿಂದ ತಿಳಿದುಬರುತ್ತದೆ. ಹದಿನೆಂಟನೆಯ ಶತಮಾನದ ಆಸು-ಪಾಸಿನಲ್ಲಿ ದ್ವಾರಾವತಿ-ದ್ವಾರಸಮುದ್ರ ಎನ್ನುವ ಹೆಸರಿನ ಬಳಕೆಯೂ ಇತ್ತೆಂದು ಜನಪದದಿಂದ ತಿಳಿದುಬರುತ್ತದೆ. ದೋರಸಮುದ್ರ ಕೆರೆಯೇ ಅಂದಿನ ಕಾಲಕ್ಕೆ ಇಡೀ ರಾಜಧಾನಿಯ ಮತ್ತು ಸುತ್ತಲಿನ ಪ್ರದೇಶಗಳ ಮುಖ್ಯ ನೀರಾವರಿ ಸೌಲಭ್ಯವಾಗಿತ್ತು. ಇಂದಿನ ಬೇಲೂರು ಪಟ್ಟಣದ ಮೂಲಕ ಹರಿಯುವ ಯಗಚಿ ನದಿ ಅಥವಾ ಸೋಮವತೀ ಎನ್ನುವ ನದಿಯು ಈ ಕೆರೆಗೆ ನೀರುಣಿಸುವ ಮುಖ್ಯ ಮೂಲವಾಗಿತ್ತು. ಹನ್ನೆರಡೆನೆಯ ಶತಮಾನದಲ್ಲೇ ನದಿಯ ಪಾತ್ರದಿಂದ ದೊಡ್ಡ ಕಾಲುವೆಗಳನ್ನು ನಿರ್ಮಿಸಿರುವ ಕುರುಹುಗಳನ್ನು ಇಂದೂ ಕಾಣಬಹುದು. ಕೆಲವು ಕಾಲುವೆಗಳು ಇಂದಿಗೂ ದೊಡ್ಡಕೆರೆಗೆ ನೀರುಣಿಸುತ್ತಿವೆ..
ರಾಜ ವಿಷ್ಣುವರ್ಧನನ ಕಾಲವನ್ನು ಹೊರತುಪಡಿಸಿ ಮಿಕ್ಕ ಎಂಟು ರಾಜರ ಕಾಲದಲ್ಲೂ ಇಂದಿನ ಹಳೇಬೀಡು ಪಟ್ಟಣವೇ ರಾಜಧಾನಿಯಾಗಿತ್ತೆಂದು ಸಂಶೋಧನೆಗಳಿಂದ ತಿಳಿದುಬಂದಿರುತ್ತದೆ. ಹೊಯ್ಸಳರಲ್ಲಿ ಒಂಬತ್ತು ಮಂದಿ ರಾಜರುಗಳು ಆಗಿಹೋಗಿದ್ದರೂ ವೀರಬಲ್ಲಾಳ , ವಿಷ್ಣುವರ್ಧನ ಮತ್ತು ನರಸಿಂಹ ಬಲ್ಲಾಳ ರು ಮಾತ್ರ ಹೆಚ್ಚು ಸಾಮರ್ಥ್ಯವುಳ್ಳರಾಗಿದ್ದರೆಂದು ಇತಿಹಾಸವು ಹೇಳುತ್ತದೆ.
ಅಂದಿನ ಈ ನಗರದಲ್ಲಿ ಸುಮಾರು ಒಂದು ಲಕ್ಷ ಮಂದಿ ವಾಸಿಸುತ್ತಿದ್ದು ನಗರದ ರಕ್ಷಣೆಗಾಗಿ ಹೊರವಲಯದಲ್ಲಿ ಸುತ್ತಲೂ ದೊಡ್ಡ ಕಲ್ಲುಗಳಿಂದ ಎರಡು ಸುತ್ತಿನ ಕೋಟೆಯನ್ನು ನಿರ್ಮಿಲಾಗಿತ್ತು. ಕೋಟೆಯ ಕುರುಹುಗಳನ್ನು ಇಂದೂ ಕಾಣಬಹುದು. ಊರಿನ ಪ್ರವೇಶಕ್ಕೆ ಒಟ್ಟು ಐದು ಹೆಬ್ಬಾಗಿಲುಗಳಿದ್ದುದು ಕೋಟೆಯ ರಚನೆಯಲ್ಲಿ ಕಂಡುಬರುತ್ತದೆ.
ಹಳೇಬೀಡಿನ ಐತಿಹಾಸಿಕ ನಾಗರಿಕತೆಯು ಇಂದಿಗಿಂತಲೂ ಉತ್ತಮವಾಗಿಯೇ ಇದ್ದುದು ಶಾಸನಗಳಿಂದ ತಿಳಿದುಬರುತ್ತದೆ. ಅಂದು ಹೆಚ್ಚಿನವರು ಕೃಷಿಕರಾಗಿದ್ದು ವಸ್ತುವಿನಿಮಯ ಪಧ್ಧತಿಯನ್ನು ಅನುಸರಿಸಿಕೊಂಡು ಬಂದಿರುತ್ತಾರೆ. ಹೊಯ್ಸಳರ ರಾಜಕೀಯ ಮತ್ತು ಆರ್ಥಿಕ ಕೇಂದ್ರಸ್ಥಾನವಾಗಿದ್ದ ಈ ಊರು ಇಂದಿನ ಯಾವ ರಾಜಯಾಗಿಧಾನಿಗೂ ಕಡಿಮೆ ಇರಲಿಲ್ಲವೆಂದು ಅಂದುಕೊಳ್ಳಬಹುದು. ಊರಿನ ರಾಜಬೀದಿಗಳಲ್ಲಿ ನ್ಯಾಯವಾದಿಗಳು, ಆರ್ಥಿಕ ಪರಿಣತರು, ದೊಡ್ಡ ವ್ಯಾಪಾರಸ್ಥರು, ವಿದ್ವಾಂಸರು ಮತ್ತು ಧಾರ್ಮಿಕ ಮುಖಂಡರು ವಾಸಿಸುತ್ತಿದ್ದರೆಂದು ಶಾಸನಗಳು ಹೇಳುತ್ತವೆ. ಕಲಾವಿದರು, ಸೇವಕರು ಮತ್ತು ಇತರೆ ಎಲ್ಲಾ ವರ್ಗದ ಜನರಿಗೂ ಉತ್ತಮ ಸೌಲಭ್ಯಗಳುಳ್ಳ ಕೇರಿಗಳೂ ಮರ್ಯಾದೆಗಳೂ ದೊರೆಯುತ್ತಿದ್ದವು. ವಿಶೇಷವಾಗಿ ಕಲಾವಿದರಿಗೆಂದೇ ಪ್ರತ್ಯೇಕವಾದ ವಿಹಾರಧಾಮಗಳೂ ಮತ್ತು ವಿದ್ಯಾಲಯಗಳೂ ಇದ್ದುವೆಂದು ಇಲ್ಲಿನ ಪ್ರಾಚೀನ ಕುರುಹುಗಳಿಂದ ತಿಳಿದುಬರುತ್ತದೆ. ಕುಂಬಾರರು, ಹಾಕುಮತದವರು ಮತ್ತು ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎಲ್ಲರೂ ತಮ್ಮ ವೃತ್ತಿಯ ಜೊತೆಗೆ ಬಹುವಾಗಿ ಕೃಷಿಯನ್ನೇ ನಂಬಿಕೊಂಡಿದ್ದರು. ಆದರೆ, ಇಂದು ಆ ವೈಭವದ ದಿನಗಳ ಕುರುಹುಗಳು ಅತ್ಯಲ್ಪ ಎನ್ನುವಷ್ಟು ಉಳಿದಿದೆ. ಪದೇಪದೆ ಪರಕೀಯರ ಆಕ್ರಮಣಕ್ಕೆ ತುತ್ತಾಗಿದ್ದೂ ಅಲ್ಲದೆ ಬಹು ವರುಷಗಳ ಕಾಲ ಕಾಲಗರ್ಭದಲ್ಲಿ ಕಳೆದುಹೋಗಿದ್ದೂ ಸಹ ಹಳೇಬೀಡಿನ ನಾಗರಿಕತೆಯ ಕುರುಹುಗಳು ಕಡಿಮೆಯಾಗಲು ಕಾರಣ ಎನ್ನಬಹುದು. ಇಂದು ಹಳೇಬೀಡಿನ ಜನಸಂಖ್ಯೆ ಸುಮಾರು ಹತ್ತುಸಾವಿರದಷ್ಟಿದ್ದು ಎಲ್ಲಾ ಅತ್ಯಾಧುನಿಕ ಸೌಲಭ್ಯಗಳು ದೊರುಕುತ್ತಿವೆ. ವಾಸಿಸುತ್ತಿರುವ ಜನರಲ್ಲಿ ಅರ್ಧದಷ್ಟು ಮಂದಿ ಕೃಷಿಕರಿದ್ದು ಉಳಿದಂತೆ ಸರ್ಕಾರಿ ನೌಕರರು, ವ್ಯಾಪಾರಸ್ಥರು ಮುಂತಾಗಿ ಹಂಚಿಹೋಗಿದ್ದಾರೆ. ಇಂದಿಗೂ ಕೃಷಿ ಉತ್ಪನ್ನಗಳೇ ಇಲ್ಲಿನ ವ್ಯಾಪಾರದ ಮುಖ್ಯವಸ್ತು.
ಹೊಯ್ಸಳರ ಕಾಲದಲ್ಲಿ ಈ ಪ್ರಾಂತ್ಯವು ದಟ್ಟವಾದ ಮಲೆನಾಡಾಗಿದ್ದು ಕಾಡಿನ ಉತ್ಪನ್ನಗಳು ಹೆಚ್ಚಾಗಿ ಬಳಕೆಯಲ್ಲಿತ್ತು. ಅಡಿಕೆ, ತೆಂಗು, ಬಾಳೆ, ಕಾಳುಮೆಣ ಇ
ಸು ಮತ್ತು ಹುರುಳಿ, ರಾಗಿ ಮುಂತಾದ ಧಾನ್ಯಗಳನ್ನೂ ಬೆಳೆಯುತ್ತಿದ್ದರು. ಕೃಷಿ ಉತ್ಪನ್ನಗಳು ಸ್ಥಳೀಯವಾಗಿಯೇ ವಿನಿಮಯ ಮಾಡಿಕೊಳ್ಳುತ್ತಿದ್ದುದರಿಂದ ಹಣಕ್ಕೆ ಹೆಚ್ಚಿನ ಆದ್ಯತೆ ದೊರೆತಿರಲಿಲ್ಲ. ಬಂಗಾರ ಮುಂತಾದ ಬೆಲೆಬಾಳುವ ವಸ್ತುಗಳ ಬಳಕೆಯೂ ಕಡಿಮೆಯೇ ಇದ್ದೀತೆಂದು ಹೇಳಬಹುದು. ಆದರೆ, ಒಡವೆಗಳ ರಚನಾ ಚಾತುರ್ಯ ಮತ್ತು ತಾಂತ್ರಿಕತೆಯು ಉನ್ನತಮಟ್ಟದಾಗಿತ್ತೆಂಬುದು ಹೊಯ್ಸಳರ ಶಿಲ್ಪಕಲೆಯಿಂದಲೇ ತಿಳಿದುಬರುತ್ತದೆ. ಹೊಯ್ಸಳರ ಕಾಲದ ನಾಣ್ಯಗಳು ಹೆಚ್ಚು ದೊರೆತಿಲ್ಲವಾದರೂ ಸಿಕ್ಕಿರುವ ಕೆಲವಷ್ಟನ್ನು ಇಲ್ಲಿಯ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ. ಇಂದು ಈ ಪ್ರಾಂತ್ಯವು ಅರೆಮಲೆನಾಡು ಪ್ರದೇಶಕ್ಕೆ ಸೇರಿದ್ದು ಎಲ್ಲ ಬಗೆಯ ತರಕಾರಿಗಳನ್ನು ಹೆಚ್ಚು ಬೆಳೆಯುತ್ತಾರೆ. ಸೂರ್ಯಕಾಂತಿ. ರಾಗಿ, ಹತ್ತಿ, ಮುಸುಕಿನ ಜೋಳ , ತೆಂಗು, ಬಾಳೆ ಇಲ್ಲಿಯ ಪ್ರಮುಖ ಉತ್ಪನ್ನಗಳಾಗಿದ್ದು ಅವರೆಕಾಯಿ , ಆಲೂಗೆಡ್ಡೆ ಮತ್ತು ಸೌತೆಕಾಯಿ ಋತುಮಾನದ ವಿಶೇಷ ಬೆಳೆಯಾಗಿದೆ. ಈ ಪ್ರಾಂತ್ಯದ ಅವರೆಕಾಯಿಗೆ ವಿಶೇಷ ರುಚಿಯ ಕಾರಣ ಹೆಚ್ಚು ಬೇಡಿಕೆ ಇದೆ. ಕಬ್ಬು ಮತ್ತು ಹತ್ತಿ ಇಲ್ಲಿಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ಆ ಜಾಗವನ್ನು ಇಂದು ಶುಂಠಿ ಮತ್ತು ಅರಿಸಿನ ಬೆಳೆಗಳು ಆವರಿಸಿಕೊಂಡಿದೆ. ಅಡಿಕೆ, ಏಲಕ್ಕಿ ಮತ್ತು ಮೆಣಸನ್ನೂ ಸಹ ಸಾಮಾನ್ಯ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಉಳಿದಂತೆ ಎಲ್ಲಾ ಆಧುನಿಕ ಅಂಗಡಿಗಳು , ಹೋಟೆಲ್ಲುಗಳು ಮುಂತಾದವು ಇಲ್ಲಿವೆ. ಸದ್ಯ ಇದು ಹಾಸನ ಜಿಲ್ಲೆ - ಬೇಲೂರು ತಾಲ್ಲೂಕಿನಲ್ಲಿ ಒಂದು ಹೋಬಳಿ ಕೇಂದ್ರವಾಗಿದೆ.
ನಾಡಿನ ವಾಸ್ತುಶಿಲ್ಪ ಕಲೆಯನ್ನು ಶ್ರೀಮಂತಗೊಳಿಸುವಲ್ಲಿ ಹೊಯ್ಸಳರ ಕೊಡಗೆ ಅಪಾರ. ಬೇಲೂರು, ಹಳೆಬೀಡಿನಲ್ಲಿ ಅದ್ಬುತ ದೇವಾಲಯ ನಿರ್ಮಾಣಕ್ಕೂ ಮುನ್ನ ಅವರು ನಿರ್ಮಾಣ ಮಾಡಿದ ದೇವಸ್ಥಾನ ಬೆಳವಾಡಿಯ ವೀರ ನಾರಾಯಣ ಸ್ವಾಮಿ ದೇವಾಲಯ. ಜಿಲ್ಲೆಯ ಬೆಳವಾಡಿಯಲ್ಲಿರುವ ವೀರ ನಾರಾಯಣ ದೇವಾಲಯ. ಹೊಯ್ಸಳರ ವಾಸ್ತು ಶಿಲ್ಪದಲ್ಲಿ ವಿಭಿನ್ನ ಮತ್ತು ಆಕರ್ಷಕ. 108ವಿಭಿನ್ನ ಶೈಲಿಯ ಕೆತ್ತನೆಯನ್ನು ಹೊಂದಿರುವ ಈ ದೇವಾಲಯ ವಿಮಾನ ಗೋಪುರವನ್ನು ಹೊಂದಿದೆ. ದೇವಾಲಯದ ಮಧ್ಯಭಾಗದಲ್ಲಿ ವೀರನಾರಾಯಣ, ಎಡಭಾಗದಲ್ಲಿನ ವೇಣುಗೋಪಾಲಸ್ವಾಮಿ, ಬಲ ಭಾಗದ ಯೋಗನರಸಿಂಹ ಸ್ವಾಮಿ ಮೂರ್ತಿಯನ್ನು ಇಲ್ಲಿ ಕಾಣಬಹುದಾಗಿದೆ. ತ್ರಿಕೂಟಾಚಲ ದೇವಾಲಯ ಎಂದು ಕರೆಯುವ ಈ ದೇವಾಲಯದ ಮತ್ತೊಂದು ವಿಶೇಷ ಎಂದರೆ ಪ್ರತಿ ಮಾರ್ಚ್ 23ರಂದು ಸಪ್ತ ಬಾಗಿಲನ್ನು ದಾಳಿ ಸೂರ್ಯನ ಬೆಳಕು ನಾರಾಯಣದ ಸ್ಪರ್ಶ ಮಾಡುತ್ತದೆ.
ಇಂತಹ ವಿಶೇಷ, ವಿಶಿಷ್ಟ ಗುಣಗಳನ್ನು ಹೊಂದಿರುವ ಈ ದೇವಾಲಯ ಈಗ ಕಾಯಕಲ್ಪದ ನಿರೀಕ್ಷೆಯಲ್ಲಿದೆ. ಯಾವುದೇ ಮೂಲಸೌಲಭ್ಯಗಳನ್ನು ಹೊಂದಿರುವ ಕಾರಣ ಈ ಅದ್ಭುತ ವಾಸ್ತುಶಿಲ್ಪಕಲೆಯನ್ನು ಹೊಂದಿರುವ ದೇವಾಲಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇನ್ನು ಇದರ ಇತಿಹಾಸ ಅರಿತು ದೇವಾಲಯ ವೀಕ್ಷಣೆಗೆಂದು ಇಲ್ಲಿಗೆ ಪ್ರವಾಸಿಗರು ನೋಡಲು ಬಂದರೂ ಯಾವುದೇ ಸೌಲಭ್ಯವಿಲ್ಲದೇ ಅವರು ಪರದಾಡುವ ಸ್ಥಿತಿ ಹೊಂದಿದೆ. ಪುರತಾತ್ವ ಇಲಾಖೆ ಅಡಿಯಲ್ಲಿ ಬರುವ ಈ ದೇವಾಲಯಕ್ಕೆ ಸೂಕ್ತ ಸೌಲಭ್ಯ ಕಲ್ಪಿಸುವ ಮೂಲಕ ನಮ್ಮ ಐತಿಹಾಸಿಕ ಕುರುಹಗಳ ಸಂರಕ್ಷಣೆ ಮಾಡುವುದು ಕೂಡ ಅವಶ್ಯಕವಾಗಿದೆ. ಅಲ್ಲದೇ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಲ್ಲಿ ಇದು ಪ್ರವಾಸೋದ್ಯಮಕ್ಕೂ ಲಾಭಾ ತಂದುಕೊಂಡಲಿದೆ. ಈ ಮೂಲಕ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿ, ರಕ್ಷಣೆಗೆ ಇನ್ನಾದರೂ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಗಮನ ಹರಿಸಬೇಕಿದೆ.
ಹಳೇಬೀಡು ಕರ್ನಾಟಕದ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದೆ. ಹೊಯ್ಸಳೇಶ್ವರ ದೇವಸ್ಥಾನವು ಒಂದು ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಳೇಬೀಡು ಪಟ್ಟಣದಲ್ಲಿರುವ ಶಿವನಿಗೆ ಅರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನವನ್ನು ಮುಖ್ಯ ವಾಸ್ತುಶಿಲ್ಪಿ ಕೇತಮಲಾ 12ನೇ ಶತಮಾನದಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನ್ ಅವರ ಆದೇಶದ ಮೇರೆಗೆ ನಿರ್ಮಿಸಿದರು ಹೊಯ್ಸಳೇಶ್ವರ ದೇವಸ್ಥಾನವನ್ನು ದ್ವಾರಸಮುದ್ರ ಎಂಬ ಮಾನವ ನಿರ್ಮಿತ ಸರೋವರದ ತೀರದಲ್ಲಿ ನಿರ್ಮಿಸಲಾಗಿದೆ.ದೆಹಲಿ ಸುಲ್ತಾನರ ಸೈನ್ಯದ ದಾಳಿಯಿಂದ ಹೊಯ್ಸಳೇಶ್ವರ ದೇವಸ್ಥಾನಕ್ಕೆ ಹನಿಯಾಯಿತು.
ಮಾರ್ಗ.ತಾಲ್ಲೂಕು ಕೇಂದ್ರವಾದ ಬೇಲೂರಿನಿಂದ ೧೬ ಕಿ.ಮೀ. ಅಂತರದಲ್ಲಿದ್ದು ಬೇಲೂರು-ಹೆಬ್ಬಾಳು ಮಾರ್ಗವಾಗಿ ತಲುಪಬಹುದು. ಬೆಂಗಳೂರಿನಿಂದ ೨೨೫ ಕಿ.ಮೀ. ಮತ್ತು ಮಂಗಳೂರಿನಿಂದ ೧೮೫ ಕಿ.ಮೀ.ಅಂತರದಲ್ಲಿದೆ.
This article uses material from the Wikipedia ಕನ್ನಡ article ಹಳೇಬೀಡು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.