ಕವಿರಾಜಮಾರ್ಗ :-
ಕವಿರಾಜಮಾರ್ಗ ಕನ್ನಡದಲ್ಲಿ ಇದುವರೆಗೆ ಲಭ್ಯವಾಗಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು . ಇದು ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. ೮೫೦ ರ ಆಸುಪಾಸಿನಲ್ಲಿ ರಚಿಸಲಾಗಿದೆ. ಕರ್ತೃ ಶ್ರೀವಿಜಯನೆಂಬುದು ಬಹುತೇಕ ವಿದ್ವಾಂಸರ ಅಭಿಮತವಾಗಿದೆ. ಗ್ರಂಥದ ಮೊದಲಿಗೆ ಅಮೋಘವರ್ಷ ನೃಪತುಂಗ ದೊರೆಯ ಹೆಸರು ಬಂದಿರುವುದರಿಂದ ಇದನ್ನು ಆತನ ಆಳ್ವಿಕೆಯ ಅವಧಿಯಲ್ಲೇ ರಚಿಸಿದ್ದಿರಬಹುದಾಗಿದೆ.
ಕವಿರಾಜಮಾರ್ಗ(ಕ್ರಿ.ಶ.೮೫೦) : - ಕವಿರಾಜಮಾರ್ಗದ ಕರ್ತೃ ಶ್ರೀವಿಜಯ . ಕನ್ನಡದಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಗ್ರಂಥ. ಇದು ರಚಿತವಾದ ಕಾಲಾವಧಿ ಪ್ರ.ಶ. ೮೧೫-೭೭. ಇದರ ಕರ್ತೃ ರಾಷ್ಟ್ರಕೂಟ ಅರಸು ನೃಪತುಂಗನೆಂದು ಹೇಳುವುದು ವಾಡಿಕೆಯಾಗಿದೆ. ಆದರೆ ಈ ವಿಷಯದ ಬಗ್ಗೆ ವಿದ್ವಾಂಸರ ನಡುವೆ ಪ್ರಬಲವಾದ ವಾದವಿವಾದಗಳು ನಡೆದಿವೆ. ಅವರಲ್ಲಿ ಮೂರು ಪಕ್ಷಗಳಿವೆ. ಮೊದಲನೆಯ ಪಕ್ಷದವರು ನೃಪತುಂಗನೇ ಈ ಗ್ರಂಥವನ್ನು ರಚಿಸಿದನೆಂದು ಹೇಳುತ್ತಾರೆ. ಎರಡನೆಯ ಪಕ್ಷದವರು ಆತನ ಆಸ್ಥಾನದಲ್ಲಿದ್ದ ಕವೀಶ್ವರನೆಂಬಾತ ಇದರ ಕರ್ತೃವೆಂದು ಅಭಿಪ್ರಾಯಪಡುತ್ತಾರೆ. ನೃಪತುಂಗನ ಸಭಾಸದನಾದ ಶ್ರೀವಿಜಯನೆಂಬುವನು ಈ ಗ್ರಂಥವನ್ನು ಬರೆದನೆಂಬುದು ಮೂರನೆಯ ಪಕ್ಷದವರ ವಾದ. ಇವರಲ್ಲಿ ಮೂರನೆಯ ಪಕ್ಷದವರ ವಾದ ಪ್ರಬಲವಾದ ಸಾಕ್ಷ್ಯಗಳನ್ನು ಹೊಂದಿರುವುದಲ್ಲದೆ ಅದೇ ಸತ್ಯಾಂಶವಾಗಿಯೂ ನಿಲ್ಲಬಹುದೆಂದು ತೋರುತ್ತದೆ.
ಕವಿರಾಜಮಾರ್ಗದ ಪ್ರತಿ ಪರಿಚ್ಛೇದದ ಕೊನೆಯಲ್ಲಿ 'ನೃಪತುಂಗ ದೇವಾನುಮತಪ್ಪ ಕವಿರಾಜಮಾರ್ಗದೊಳ್' ಎಂದು ಹೇಳುವುದರಿಂದ ಇದು ರಾಷ್ಟ್ರಕೂಟದೊರೆ ಅಮೋಘವರ್ಷ ನೃಪತುಂಗನ (ಕ್ರಿ.ಶ ೮೧೪-೮೭೭)ಕಾಲದಲ್ಲಿ ಹುಟ್ಟಿದುದದೆಂದು ನಿರ್ಧರಿಸಲಾಗಿದೆ. ಕವಿರಾಜಮಾರ್ಗ ಕೃತಿಯಲ್ಲಿ ಮೂರು ಪರಿಚ್ಛೇದಗಳಿವೆ.
ಮೊದಲ ಪರಿಚ್ಛೇದದಲ್ಲಿ ಮಂಗಳಾಚರಣೆ, ಪೂರ್ವಕವಿಸ್ತುತಿ ಮೊದಲಾದ ಪೀಠಿಕಾಭಾಗದ ಪದ್ಯಗಳಾದ ಮೇಲೆ ನೃಪತುಂಗ ಕಾವ್ಯಾಭ್ಯಾಸದ ಅವಶ್ಯಕತೆ, ಕವಿತ್ವರಚನಾಶಕ್ತಿಯಿಂದ ಉಂಟಾಗುವ ಮಾರ್ಗ ಮೊದಲಾದ ವಿಷಯಗಳ ಬಗ್ಗೆ ತಿಳಿಸಿದ್ದಾನೆ.
ಕವಿರಾಜಮಾರ್ಗ ಕನ್ನಡದ ಆದ್ಯ ಉಪಲಬ್ಧ ಗ್ರಂಥವಾಗಿರುವುದಲ್ಲದೆ ಆದ್ಯ ಲಕ್ಷಣ ಗ್ರಂಥವೂ ಆಗಿದೆ. ಕನ್ನಡದಲ್ಲಿ ಕಾವ್ಯರಚನೆ ಮಾಡಬೇಕೆನ್ನುವ ಕವಿಗಳಿಗೆ ಬರೆದ ಕೈಪಿಡಿಯಿದು. ಇದರಲ್ಲಿ ಮೂರು ಪರಿಚ್ಛೇದಗಳಿವೆ:
ಗ್ರಂಥದ ಆದಿಯಲ್ಲಿ ಮಂಗಳಪದ್ಯಗಳು, ಸರಸ್ವತೀ ಪ್ರಾರ್ಥನೆ, ಕವೀಶ್ವರರ ಪ್ರಾರ್ಥನೆ, ನೃಪತುಂಗನ ಸಭಾಸದರ ವಿಚಾರ ಹಾಗೂ ಸ್ವವಿಚಾರಗಳಿವೆ. ಅನಂತರ ಕವಿ-ಕಾವ್ಯ, ಗದ್ಯ-ಪದ್ಯ ಮತ್ತು ಚತ್ತಾಣ-ಬೆದಂಡೆಗಳನ್ನು ಕುರಿತು ವಿಚಾರಗಳಿವೆ. ಕನ್ನಡನಾಡು ನುಡಿಗಳ ಬಗೆಗಿನ ಮಾತುಗಳಿವೆ. ಸಮಸಂಸ್ಕೃತ, ಯತಿ, ಕಾರಕ ಮುಂತಾದವುಗಳಿಗೆ ಸಂಬಂಧಿಸಿದ ದೋಷಗಳ ವಿವರಣೆಯಿದೆ. ಹೀಗೆ ಮೊದಲ ಪರಿಚ್ಛೇದದ ವಿಷಯಗಳು ವಿವಿಧವಾಗಿವೆ. ಎರಡನೆಯ ಪರಿಚ್ಛೇದದಲ್ಲಿ ಶಬ್ದಾಲಂಕಾರಗಳ ನಿರೂಪಣೆ ಮತ್ತು ದಕ್ಷಿಣೋತ್ತರ ಮಾರ್ಗಗಳ ಪ್ರಸ್ತಾಪವಿದೆ. ಮೂರನೆಯ ಪರಿಚ್ಛೇದ ಅರ್ಥಾಲಂಕಾರಗಳಿಗೆ ಸಂಬಂಧಿಸಿದೆ. ಇಡೀ ಗ್ರಂಥ ಕಂದಪದ್ಯಗಳಿಂದ ರಚಿತವಾಗಿದ್ದರೂ ಹಲಕೆಲವು ಗೀತಿಕೆಗಳು, ಶ್ಲೋಕಗಳು ಹಾಗೂ ವೃತ್ತಗಳು ನಡುನಡುವೆ ಬರುತ್ತವೆ.
ಕವಿಕಾವ್ಯಗಳ ಬಗ್ಗೆ ಇಲ್ಲಿ ಹೇಳಿರುವ ಮಾತುಗಳು ತುಂಬ ಸುಂದರವೂ ಉಚಿತವೂ ಆಗಿವೆ. ಕವಿಗಳಲ್ಲಿರುವ ತಾರತಮ್ಯಗಳನ್ನು ನಿರೂಪಿಸುವಲ್ಲಿ ಸ್ವತಂತ್ರ ವಿಚಾರಶಕ್ತಿ ವ್ಯಕ್ತವಾಗಿದೆ. ಆ ಪದ್ಯಗಳನ್ನು ನೋಡಬಹುದು.
:ತೆರೆದಿರೆ ಪೆರರ್ಗರೆಪಲಾರ್ಪವಂ ಮಾತರೆವಂ. :ಕಿರೆದರೊಳೆ ಪಿರಿದುಮರ್ಥಮ :ನರೆಪಲ್ ನೆರೆವಾತನಂತನಿಂದಂ ನಿಪುಣಂ"|| - ಪದ್ಯ ೧೫
:ತೊಡರ್ಚಲರೆವಾತನಾತನಿಂದಂ ಜಾಣಂ :ತಡೆಯದೆ ಮಹಾಧ್ವ ಕೃತಿಗಳ :ನೊಡರಿಸಲಾರ್ಪಾತ ನೆಲ್ಲರಿಂದಂ ಬಲ್ಲಂ"|| - ಪದ್ಯ ೧೬
ಸಾಹಿತ್ಯಚರಿತ್ರೆಯ ಅಜ್ಞಾತಯುಗದ ಮೇಲೆ ಕವಿರಾಜಮಾರ್ಗ ವಿಶೇಷವಾಗಿ ಬೆಳಕು ಬೀರುತ್ತದೆ. ಕನ್ನಡ ಕಾವ್ಯಗಳಲ್ಲಿ ಗದ್ಯಪದ್ಯಸಂಮಿಶ್ರಿತವಾದ, ಗದ್ಯ ಪ್ರಾಚುರ್ಯ ಹೆಚ್ಚಾದ, ಗದ್ಯಕಥಾಪ್ರಕಾರವೊಂದಿದ್ದಿತು (೧-೨೭), ಚತ್ತಾಣ-ಬೆದಂಡೆ ಎಂಬ ದೇಸಿಗಬ್ಬಪ್ರಕಾರಗಳು ಪ್ರಚುರವಾಗಿದ್ದುವು (೧-೩೩), ವಿಮಳೋದಯ ನಾಗಾರ್ಜುನಾದಿಗಳು ಗದ್ಯಾಶ್ರಮಗುರುತಾಪ್ರತೀತಿಯನ್ನು ಕೈಗೊಂಡಿದ್ದರು (೧-೨೯), ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲಾದಿಗಳ ವಸ್ತು ವಿಸ್ತರರಚನೆ ‘ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ’ ಎನ್ನಿಸಿಕೊಂಡಿದ್ದುವು (೧-೩೨), ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ (೧-೪೮), ಆಗಿನ ಕಾಲಕ್ಕೇ ಕನ್ನಡ ಕಾವ್ಯ ಪರಂಪರೆಯೊಂದು ರೂಢಮೂಲವಾಗಿದ್ದಿತು, ಪೂರ್ವದ ಹಳಗನ್ನಡವೊಂದಿದ್ದಿತು-ಇವೇ ಮುಂತಾದ ಅಂಶಗಳಲ್ಲದೆ ಅಲ್ಲಲ್ಲಿ ಬರುವ ಪುರಾಣಕವಿಗಳ್, ಪರಮಕವಿಪ್ರಧಾನರಾಕಾವ್ಯಂಗಳ್, ಪೂರ್ವಕಾವ್ಯರಚನೆಗಳೂ-ಇತ್ಯಾದಿ ಪ್ರಯೋಗಗಳು ಕವಿರಾಜಮಾರ್ಗಕ್ಕಿಂತ ಹಿಂದಿನ ಕಾವ್ಯನಿರ್ಮಾಣೋದ್ಯೋಗದ ಜಾಡಿನ ಹೆಜ್ಜೆಗುರುತುಗಳಾಗಿವೆ.
ಕವಿರಾಜಮಾರ್ಗ ಆ ಕಾಲದ ಕನ್ನಡನಾಡು, ನುಡಿ ಮತ್ತು ಜನರ ಬಗೆಗೆ ತಿಳಿವಳಿಕೆ ನೀಡಿರುವುದು ಅದರ ವಿಶೇಷತೆಯನ್ನು ಹೆಚ್ಚಿಸಿದೆ. ಆ ಕಾಲಕ್ಕೆ ಕನ್ನಡನಾಡಿನ ಸೀಮೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು (೧-೩೬). ಕಿಸುವೊಳಲು, ಕೊಪಣ, ಪುಲಿಗೆರೆ, ಒಂಕುಂದಗಳು ತಿರುಳ್ಗನ್ನಡದ ಪ್ರದೇಶಗಳೆಂದು ಖ್ಯಾತವಾಗಿದ್ದುವು (೧-೩೭). ಕನ್ನಡದಲ್ಲಿ ಅನೇಕ ಉಪಭಾಷೆಗಳು ರೂಢಿಯಲ್ಲಿದ್ದುವು (೧-೪೬) ನಾಡವರ ನುಡಿಬಲ್ಮೆ ಹಾಗೆ ಅಸದಳವಾಗಿತ್ತು. ಅವರು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳಾಗಿದ್ದರು (೧-೩೮).
ಎರಡನೇ ಪರಿಚ್ಛೇದ ಅಲಂಕಾರಗಳ ಲಕ್ಷಣಗಳನ್ನು ಹೇಳಲು ಮೀಸಲಾಗಿದೆ. ಇದರಲ್ಲಿ ನೃಪತುಂಗ ಪ್ರಾಸದ ವಿಷಯವನ್ನು ಹೇಳತೊಡಗಿ-'ಕನ್ನಡಕ್ಕೆ ಸತತಂ ಪ್ರಾಸಂ' ಎಂದು ನುಡಿದು ಪ್ರಸಭೇದಗಳನ್ನು ವಿವರಿಸಿ ಅವುಗಳಿಗೆ ದೇಷ್ಟಾಂತಗಳನ್ನು ನೀಡಿದ್ದಾನೆ. ಮೂರನೇ ಪರಿಚ್ಛೇದದಲ್ಲಿ ಆ ಕಾಲಕ್ಕೆ ಸಂಸ್ಕೃತದ ಲಾಕ್ಷಣಿಕರು ಪ್ರಚಾರ ಮಾಡಿದ್ದ ಸುಮಾರು.೩೫ ಅಲಂಕಾರಗಳನ್ನು ಹೇಳಿದ್ದಾನೆ.
ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡನಾಡಿನ ವರ್ಣನೆ ಇದಾಗಿದೆ.ಕಿಸುವೊಳಲು ಪಟ್ಟದಕಲ್ಲಿಗೆ ಮೊದಲಿದ್ದ ಹೆಸರು. ಪುಲಿಗೆರೆ ಇಂದಿನ ಲಕ್ಷ್ಮೇಶ್ವರ (ಗದಗ ಜಿಲ್ಲೆ). ಕೊಪಣ ಇಂದಿನ ಕೊಪ್ಪಳ. ಒಕ್ಕುಂದ ಬೆಳಗಾವಿ ಜಿಲ್ಲೆಯಲ್ಲಿರುವ ಒಕ್ಕುಂದ.
ಕವಿರಾಜಮಾರ್ಗ ಶಾಸ್ತ್ರಗ್ರಂಥವಾದರೂ ಅಲ್ಲಲ್ಲಿ ಕವಿತ್ವದ ಸೊಗಸು ಮಿನುಗಿದೆ; ಅಲ್ಲಲ್ಲಿ ಕಂಡುಬರುವ ಉಪಮೆ, ನಾಣ್ಣುಡಿಗಳು ಮನಸೆಳೆಯುವಂತಿವೆ. ಕಲ್ತೊಡನೋದುವುವಲ್ತೆ ಗಿಳಿಗಳುಂ ಪುರುಳಿಗಳುಂ, ಕಾಣದಂತೆಂದುಂ ಕಣ್ಗಳ್ ತಮ್ಮ ಕಾಡಿಗೆಯಂ, ಒತ್ತುಂಗರಡೆಯ ಮದ್ದಳೆಯ ಜರ್ಝರ ಧ್ವನಿಗಳವೊಲ್, ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೊಲ್, ಕೇಡಡಸಿದಂದು ಬಗೆಯುಂ ಕೂಡದು, ಕೂಸಿನ ತಲೆಯೊಳ್ ಬಿಣ್ಪೊರೆಯನಿಟ್ಟವೋಲ್ ಈ ಮೊದಲಾದವು ಮನೋಹರವಾದ ವರ್ಣನಾಭಾಗಗಳು. ಇದರ ಶೈಲಿ ಲಲಿತವಾಗಿದೆ, ಉಚಿತವಾಗಿದೆ. ಇದರಲ್ಲಿ ನಾಣ್ನುಡಿಯ ಬೆಡಗಿದೆ. ಉದ್ದಕ್ಕೂ ಸ್ವತಂತ್ರವಿಚಾರಮಾರ್ಗವಿದೆ.(ಜೆ.ಎಸ್.ಸಿ.)
This article uses material from the Wikipedia ಕನ್ನಡ article ಕವಿರಾಜಮಾರ್ಗ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.