ರತ್ನಾಕರವರ್ಣಿಯ ಕಾಲ ಸುಮಾರು ಕ್ರಿ.ಶ. 1560. ಇವರ ತಂದೆಯ ಹೆಸರು ದೇವರಾಜ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ. ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿದ್ದರು. ಇವರ ದೀಕ್ಷಾಗುರು ಚಾರುಕೀರ್ತಿ ಆಚಾರ್ಯ. ಮೋಕ್ಷ ಗುರು ಹಂಸನಾಥ. ಇವರಿಗೆ ಶೃಂಗಾರಕವಿ ,ರತ್ನಾಕರ ಸಿದ್ಧ ಎಂಬ ಬಿರುದುಗಳಿವೆ
ವಿವರ
- ರತ್ನಾಕರವರ್ಣಿ 16ನೆಯ ಶತಮಾನದ ಜೈನಕವಿ. ಕನ್ನಡದ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯನಾದವ. ಭರತೇಶವೈಭವ, ತ್ರಿಲೋಕಶತಕ, ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ವರಶತಕ ಎಂಬ ಗ್ರಂಥಗಳ ಕರ್ತೃ. ಇವನಿಗೆ ರತ್ನಾಕರ. ರತ್ನಾಕರಅಣ್ಣ, ರತ್ನಾಕರಸಿದ್ಧ ಎಂಬ ಹೆಸರುಗಳೂ ಇದ್ದು ತನಗೆ ರತ್ನಾಕರಸಿದ್ಧ ಎಂಬ ಹೆಸರು ಅತ್ಯಂತ ಮೆಚ್ಚುಗೆಯಾದುದೆಂದು ಹೇಳಿಕೊಂಡಿದ್ದಾನೆ. ಚಾರುಕೀರ್ತಿ ಆಚಾರ್ಯ ಇವನ ದೀಕ್ಷಾಗುರು. ಹಂಸನಾಥ ಮೋಕ್ಷಗುರು.
- ರತ್ನಾಕರವರ್ಣಿ ತನ್ನ ಕಾವ್ಯಗಳಲ್ಲಿ ಸ್ವಂತ ಜೀವಿತಕ್ಕೆ ಸಂಬಂಧಿಸಿದ ಯಾವ ವಿವರಗಳನ್ನೂ ಹೇಳಿಲ್ಲ. ಇವನನ್ನು ಕುರಿತು ಕೆಲವು ಬಾಹ್ಯವಿವರಗಳು ದೊರೆತಿವೆ. ದೇವ ಚಂದ್ರ (1770-1841) ತನ್ನ ರಾಜಾವಳೀಕಥೆಯಲ್ಲಿ ರತ್ನಾಕರವರ್ಣಿಯ ಬಗ್ಗೆ ಕೆಲವು ವಿವರಗಳನ್ನು ಕೊಟ್ಟಿದ್ದಾನೆ. ಆತನ ಹೇಳಿಕೆಯ ಪ್ರಕಾರ ರತ್ನಾಕರವರ್ಣಿ ಸೂರ್ಯವಂಶಕ್ಕೆ ಸೇರಿದವನು. ಕ್ಷತ್ರೀಯ ಕುಲದವನು. ತುಳುನಾಡಿನವನು, ಮೂಡುಬಿದರೆಯವನು, ದೇವರಾಜನ ಮಗ, ರತ್ನಾಕರಾಧೀಶನೆಂದು ಹೆಸರು. ಬಾಲ್ಯದಲ್ಲಿ ಜೈನಾಗಮಗಳ ಶಿಕ್ಷಣವನ್ನು ಪಡೆದಿದ್ದ. ಕವಿಯಾದ ಮೇಲೆ ತೌಳವ ದೇಶದ ಭೈರರಸ ಒಡೆಯರ ಆಸ್ಥಾನ ಕವಿಯಾಗಿ ಶೃಂಗಾರಕವಿಯೆಂಬ ಪ್ರಶಸ್ತಿ ಪಡೆದ.
-
ರತ್ನಾಕರನ ಧಾರ್ಮಿಕತೆ
- ರತ್ನಾಕರ ಸಂಪ್ರದಾಯಗಳಿಗೆ ಶರಣಾದವನಲ್ಲ; ಸಂಸಾರ ಸುಖವನ್ನು ನಿರಾಕರಿಸಬೇಕೆಂದವನಲ್ಲ; ಉಂಡರೇನು ಉಟ್ಟರೇನು ಅಬಲೆಯರೊಡನೆ ಕೂಡಿದರೇನು-ಎಂದು ನೇರವಾಗಿ ಕೇಳಿದವನು; ಯಾವುದರಲ್ಲೂ ಒಂದು ಇತಿಮಿತಿ ಇರಬೇಕೆಂದವನು. ವಸ್ತುವಿನ ಆಯ್ಕೆಯಲ್ಲಿ, ನಿರ್ವಹಣೆಯಲ್ಲಿ, ಛಂದಸ್ಸಿನಲ್ಲಿ, ನಿರೂಪಣೆಯಲ್ಲಿ ಯಾದೃಚ್ಚಿಕವಾಗಿ ನಡೆದವನು. ರೂಢಿ ನೀತಿ ರಿವಾಜುಗಳಲ್ಲಿ ಅರ್ಥಹೀನತೆಯಿದ್ದಾಗ ಮುಲಾಜಿಲ್ಲದೆ ಕಿತ್ತೆಸೆದು ಸರಿಕಂಡ ದಾರಿಯಲ್ಲಿ ಧೀಮಂತನಂತೆ ಹೆಜ್ಜೆ ಹಾಕಿದವನು.
- ಅವರು ಬರೆದ ಕೃತಿಗಳಲ್ಲಿ ಹಲವಾರು ಶಾಲಾ ಮಕ್ಕಳಿಗೆ ಪದ್ಯ ಗದ್ಯವಾಗಿ ಬಂದಿವೆ
ರತ್ನಾಕರವರ್ಣಿ ರಚಿಸಿದ ಕೃತಿಗಳು:
- ಭರತೇಶ ವೈಭವ - ರತ್ನಾಕರವರ್ಣಿಯ ಮೇರು ಕೃತಿ.೮೦ಸಂಧಿ ಸಾಂಗತ್ಯ ಕೃತಿ.
- ತ್ರಿಲೋಕ ಶತಕ
- ಅಪರಾಜಿತೇಶ್ವರ ಶತಕ
- ರತ್ನಾಕರಾಧೀಶ್ವರ ಶತಕ
- ಅಣ್ಣನ ಪದಗಳು
ರಚನೆಯ ಕಾಲ
ಘಟನೆ | ಕಾಲ |
---|
ಜನನ | ೧೫೬೦ |
ತ್ರಿಲೋಕಶತಕದ ರಚನೆ | ೧೫೫೭ |
ಭರತೇಶವೈಭವದ ರಚನೆ | ೧೫೬೭ |
ವೀರಶೈವನಾದುದು | ೧೫೭೨ |
ಮತ್ತೆ ಜೈನನಾದುದು | ೧೫೭೫ |
ರತ್ನಾಕರಶತಕದ ರಚನೆ | ೧೫೭೭ |
ಅಪರಾಜಿತಶತಕದ ರಚನೆ | ೧೫೮೨ |
ಅಧ್ಯಾತ್ಮಗೀತದ ರಚನೆ | ೧೫೮೭ |
ಮರಣ | ೧೬೦೦ರ ಮೇಲೆ |
ಭರತೇಶ ವೈಭವ
- ಭರತೇಶ ವೈಭವವು ನಡುಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿ. ಇದು ರತ್ನಾಕರವರ್ಣಿಯ ಮೇರು ಕೃತಿ. ಹಳೆಗನ್ನಡದ ಕವಿಗಳು ಛಂದಸ್ಸುಗಳಲ್ಲಿ ತೋಯ್ದ ಘನವಾದ ಕೃತಿಗಳನ್ನು ರಚಿಸುತ್ತಿದ್ದ ಕಾಲದಲ್ಲಿ ರತ್ನಾಕರವರ್ಣಿಯು ಸಾಂಗತ್ಯರೂಪದಲ್ಲಿ ಭರತೇಶ ವೈಭವವನ್ನು ರಚಿಸಿ ಕನ್ನಡ ಕಾವ್ಯದ ಹೊಸ ಶಕೆಯೊಂದಕ್ಕೆ ನಾಂದಿ ಹಾಡುತ್ತಾನೆ.ಉಂಡು ಉಪವಾಸಿ,ಬಳಸಿ ಬ್ರಹ್ಮಚಾರಿ ಭೂ ಮಂಡಲದಲ್ಲಿದ್ದು ನಿಸ್ಸೀಮ.
- ಭರತೇಶ ವೈಭವ’ ರತ್ನಾಕರವರ್ಣಿಯು ಸಾಂಗತ್ಯ ರೂಪದಲ್ಲಿದೆ. ಆದಿತೀರ್ಥಂಕರ ವೃಷಭನಾಥನ ಮಗ ಭರತ ಈ ಕಾವ್ಯದ ನಾಯಕ. ಈ ಕಾವ್ಯದಲ್ಲಿ ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ,ಮೋಕ್ಷವಿಜಯ ಎನ್ನುವ ಐದು ಸಂಧಿಗಳಿದ್ದು ಒಟ್ಟು ಹತ್ತುಸಾವಿರ ಪದ್ಯಗಳಿವೆ.
-
-
-
-
-
- ಭರತೇಶ ವೈಭವ’ ಕಾವ್ಯದಲ್ಲಿ ಒಂದು ಪದ್ಯ:
- ‘ಬಡವಗೆ ಬಲುರೋಗ ಬಂದು ಬಾಯ್ಬಿಡಲೊರ್ವ/
- ರೆಡಹಿಯು ಕಾಣರುರ್ವಿಯೊಳು/
- ಒಡವೆಯುಳ್ಳವಗಲ್ಪರುಜೆ ಬರೆ ವಿಸ್ಮಯ/
- ಬಡುತ ಸಾರುವರದು ಸಹಜ’ ||
ಉಲ್ಲೇಖ
This article uses material from the Wikipedia ಕನ್ನಡ article ರತ್ನಾಕರ ವರ್ಣಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.