ಕನ್ನಡ ಸಾಹಿತ್ಯವನ್ನು ಕಾಲದ ದೃಷ್ಠಿಯಿಂದ ಮೂರು ಪ್ರಮುಖ ವಿಭಾಗಗಳನ್ನಾಗಿ ಮಾಡಿಕೊಂಡು ಅಧ್ಯಯನ ಮಾಡಲಾಗುತ್ತಿದೆ.
ಆ ಹಿನ್ನೆಲೆಯಲ್ಲಿ ಹಳಗನ್ನಡ, ನಡುಗನ್ನಡ ಅಥವಾ ಮಧ್ಯಕಾಲೀನ ಕನ್ನಡ ಮತ್ತು ಆಧುನಿಕ ಅಥವಾ ಹೊಸಗನ್ನಡ ಸಾಹಿತ್ಯ ಎಂದು ವಿಭಾಗಿಸಿಕೊಂಡು ಧರ್ಮಾಧರಿತ, ಕಾಲಾಧಾರಿತ ಕ್ರಮಗಳಲ್ಲಿ ಅಧ್ಯಯನ ಮಾಡಲಾಗುವುದು. ಚಂಪೂ ಪ್ರಕಾರದ ಮುಖ್ಯಭೂಮಿಕೆಯಲ್ಲಿ ಸ್ಥಾಪಿತವಾದ 10ನೇ ಶತಮಾನದ ಸಂಸ್ಕøತ ಭೂಯಿಷ್ಠವಾದ ಹಳಗನ್ನಡದ ಪಂಪನಾದಿಯಾಗಿ 12ನೇ ಶತಮಾನದ ಉತ್ತರಾರ್ಧದವರೆಗೂ ಇದ್ದ ಸಾಹಿತ್ಯ ಪ್ರಕಾರವು ವಚನಕ್ರಾಂತಿಯ ಪ್ರಾರಂಭ ಮತ್ತು ಪ್ರೇರಣೆಯಿಂದ ಸಾಹಿತ್ಯ ರಚನೆಯ ಪ್ರಕಾರಗಳು ಹಲವು ರೀತಿಯ ಸ್ವರೂಪದಲ್ಲಿ ಬದಲಾವಣೆಗಳ ಮೂಲಕ ಸ್ಥಾಪಿತಗೊಂಡವು. ಈ ದೇಸಿ ಕಾವ್ಯ ಪ್ರಕಾರಗಳು ಸ್ಥಾಪಿತಗೊಂಡ ಫಲವಾಗಿ ಸಾಮಾನ್ಯರೂ ಕೂಡ ಸಾಹಿತ್ಯ ಓದುವ ಮತ್ತು ಬರೆಯುವ ಅವಕಾಶ ಪಡೆದುಕೊಂಡು ರಾಜಾಶ್ರಯವನ್ನು ನಿರಾಕರಿಸಿ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ ಕಾವ್ಯಗಳು ರಚನೆಗೊಂಡವು. ವಚನಕ್ರಾಂತಿಯ ಧಾರ್ಮಿಕ ಪ್ರೇರಣೆಯಿಂದ ಪ್ರಭಾವಿತರಾದ 13ನೇ ಶತಮಾನದ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಕೆರೆಯ ಪದ್ಮರಸ ಒಬ್ಬ. ಕೆರೆಯ ಪದ್ಮರಸನ ಕಾಲವು ನಿರ್ದಿಷ್ಟವಾಗಿ ತಿಳಿಯದೇ ಇರುವುದರಿಂದ ಮತ್ತು ಅವನ ಕಾಲದ ಬಗ್ಗೆ ವಿದ್ವಾಂಸರಲ್ಲಿ ಮತ್ತು ಸಾಹಿತ್ಯವಲಯದಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಅವನ ಕಾಲವನ್ನು ಅಧ್ಯಯನದ ದೃಷ್ಟಿಯಿಂದ ಕವಿ ಚರಿತೆಕಾರರು ತಿಳಿಸಿರುವ ಕಾಲವಾದ ಕ್ರಿ.ಶ.1200 ಎಂದು ಇಟ್ಟುಕೊಳ್ಳಬಹುದು.
ಕೆರೆಯ ಪದ್ಮರಸ ಮತ್ತು ಆಂಧ್ರದ ಬ್ರಾಹ್ಮಣ ಕವಿ ತ್ರಿಭುವನತಾತನಿಗೂ ನಡೆದ ವಾದ ಪ್ರಕರಣವೇ ದೀಕ್ಷಾಬೋಧೆ ಕೃತಿ ರೂಪುಗೊಳ್ಳಲು ಕಾರಣ. ಅಂದರೆ ಬೇಲೂರಿನಲ್ಲಿ ತನ್ನ ತಪಶ್ಚಕ್ತಿಯಿಂದ ಕೆರೆಯನ್ನು ನಿರ್ಮಾಣ ಮಾಡಿದ ಶಿವಶರಣ ಪದ್ಮರಸನ ಪ್ರಖ್ಯಾತಿ, ಪ್ರಸಿದ್ಧಿ ಆಂಧ್ರದವರೆಗೂ ತಲುಪಿ ಅಲ್ಲಿಯ ತ್ರಿಭುವನತಾತನು ‘ವಿಷ್ಣುವೇ ಪರಮದೈವ’ನೆಂದು ಸ್ಥಾಪಿಸಲು ದ್ವಾರಸಮುದ್ರದ ನರಸಿಂಹಬಲ್ಲಾಳನ ಆಸ್ಥಾನಕ್ಕೆ ಬರುತ್ತಾನೆ. ಆಗ ಇದನ್ನರಿತ ಪದ್ಮರಸನು ಬೇಲೂರಿನಿಂದ ಹೊರಟು ದೋರಾಂಬುಧಿಯ ರಾಮಣ್ಣ, ಉಭಯ ಕವಿ ಶರಭಬೇರುಂಡ ರಾಘವ, (ರಾಘವಾಂಕ), ಹುಲಿಗೆರೆಯ ಮಾಯಿದೇವ, ಪುರಾಣಭಟ್ಟ, ಗುರುಭಕ್ತ ಕಾಮಣ್ಣ, ವಿಶ್ವಣ್ಣನಂತಹ ವಿದ್ವಾಂಸರ, ಪಂಡಿತರ ಜೊತೆಯಲ್ಲಿ ನರಸಿಂಹ ಬಲ್ಲಾಳನ ಆಸ್ಥಾನಕ್ಕೆ ಆಗಮಿಸಿದನು.
ಕೆರೆಯ ಪದ್ಮರಸ ವಿವರಿಸುವಂತೆ ಮಾಯಾಮಲವು ಜಾತಿಧರ್ಮಗಳ ಸಂಪ್ರೀತಿಯೇ ಆಗಿರುತ್ತದೆ. ಇದನ್ನು ತ್ಯಜಿಸಬೇಕಾದರೆ ‘ಕುಲ’ವೆಂಬ ಕಾಳ್ಮರುಳತನವನ್ನು ಬಿಡಬೇಕು. ಕುಲದ ನೆಲೆಯನ್ನು ತಿಳಿಯಬೇಕಾದರೆ ಹೊಲೆಯೆಂಬುದೇ ಉಚಿತಲ್ಲದೆ ಶುದ್ಧಕುಲವಿಲ್ಲ. ಕಾಯಕ್ಕೆ ಕುಲವೋ ಜೀವಕ್ಕೆ ಕುಲವೋ ಪೇಳು ಈ ಎರಡರೊಳಗೆಯನ್ನವುದಕ್ಕೆ ಕುಲಪೇಳು’ ಎಂದು ಶಿಷ್ಯ(ತ್ರಿಭುವನತಾತ)ನು ಕೇಳಿದಾಗ ಕಾಯವಾದರೂ ಸಹಿತ ಅದು ಹೊಲೆಯಲ್ಲಿ ಹುಟ್ಟಿದುದು. ಜೀವವೂ ನಿರವಯವಾದುದು. ಇವೆರಡಕ್ಕೂ ಸತ್ಕುಲವಿಲ್ಲ.
ಎಂದು ಸತ್ಕುಲದವರಿಗೆ ಹೊಲೆಯೆಂಬುದೇ ಇಲ್ಲ ಎಂದು ಪದ್ಮರಸನು ಹೇಳಿದಾಗ, ತ್ರಿಭುವನತಾತನು “ದೇಹವಿಡಿದ ಮೇಲೆ ಕುಲವಿಲ್ಲವೆಂದು ಹೇಗೆ ಹೇಳುವುದು? ಪ್ರಾಣಿಗಳಿಗೂ, ವಸ್ತುಗಳಿಗೂ ಕುಲವನ್ನು ಹೇಳಲಾಗುವುದಿಲ್ಲವೇ? ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಗುರುವು ಆ ಪ್ರಾಣಿವಸ್ತುಗಳಿಗೆ ಕುಲಗಳನ್ನು ಹೇಳುವವರು ಮನುಷ್ಯರು. ಅವುಗಳಿಗೆ ಜಾತಿಸೂತಕವಿಲ್ಲವಾಗಿ ಜಾತಿದೋಷಗಳಿಲ್ಲ. ರತಿಸಂಕರಗಳಿಲ್ಲದ ಪ್ರಾಣಿಗಳಿಗೆ ಕುಲವಿಲ್ಲವೆಂದಾಗ ರತಿ ಸಂಕರವುಳ್ಳ ಮಾನವರಿಗೆ ಸತ್ಕುಲವೆಲ್ಲಿಂದ ಬಂತು? ಸೂತಕ ಜನನದವರಿಗೆ ಕೀಳುಕುಲ, ಸೂತಕ ರಹಿತವಾದ ಶಿವಭಕ್ತರಿಗೆ ಇರುವುದು ಸತ್ಕುಲವೊಂದೇ. ಆದ್ದರಿಂದ ಶಿವಲಿಂಗಕ್ಕೆ ವರ್ಣವಿಲ್ಲ. ಆಶ್ರಮಗಳಿಲ್ಲ, ಯಾವ ಕುಲವೂ ಇಲ್ಲ, ಇಂತಹ ಶಿವಲಿಂಗರಿಂದ ಜನಿಸಿದ ಶಿವಜಾತರಿಗೂ ಕುಲವಿಲ್ಲ ಎನ್ನುತ್ತಾರೆ. ಶಿವಭಕ್ತರಾದವರಿಗೆ ಸೂತಕವಾಗಲಿ ಜಾತೀಯತೆಯಾಗಲಿ ಇರುವುದಿಲ್ಲ. ಅವರು ಲಿಂಗದ ನಿಜದಲ್ಲಿ ಯುಕ್ತರಾದವರು, ಕುಲದ ಬೀಜವನ್ನು ಸುಟ್ಟಂಥವರು, ಕುಲದ ಮದವನ್ನು ಕಳಚಿ ಹಾಕಿ ನಾಶಪಡಿಸಿದಂಥವರು; ನಾರಿಯರು, ಪುರುಷರು, ಷಂಡ ಶಬರಾದಿಗಳು, ದ್ವಿಪಚರು, ದ್ವಿಜಾಧಿಪರು ಮುಂತಾದ ಯಾರೇ ಆಗಲಿ ಶುದ್ಧಲಿಂಗದ ಅರ್ಚನೆಯನ್ನು ಮಾಡಿದಲ್ಲಿ ಅವರಿಗೆ ಶಿವಪ್ರಾಪ್ತಿಯುಂಟಾಗುವುದು. ಈ ಶ್ರದ್ಧೆ ನಿಶ್ಚಲಗೊಂಡಾಗ ಮಾಯಾಮಲ ನಾಶವಾಗುವುದು ಎಂದು ಪದ್ಮರಸ ಕುಲದ ಬಗ್ಗೆ ವಿವರಿಸುತ್ತಾ ತಿಳಿಸಿದ್ದಾನೆ.
ಇನ್ನು ಕಾರ್ಮಿಕಮಲದ ಬಗ್ಗೆ ವಿವರಿಸುತ್ತಾ ‘ಮನುಜಜನ್ಮದಲ್ಲಿ ಬಂದ ಮೇಲೆ ಪ್ರತಿಯೊಬ್ಬರೂ ಅನುಭವಿಸಬೇಕೆಂದು ಶಿವನು ಹಲವಾರು ರೀತಿಯಲ್ಲಿ ದ್ರವ್ಯವನ್ನು ನಿರ್ಮಿಸಿದ್ದಾನೆ. ಧರೆಧರೆ, ಶಿಲೆ, ತರು, ಗುಲ್ಮ, ಲತೆಗಳಲ್ಲಿ ಉದ್ಯೋಗಾದಿಗಳಲ್ಲಿ, ಕನಕ ಮೊದಲಾದ ಅಖಿಲಾದಿ ವಸ್ತುಗಳಲ್ಲಿ ಇರಿಸಿದ್ದಾನೆ. ಇಲ್ಲಿ ಸಂಗ್ರಹಿಸಿದ ಹಣವನ್ನು ಸಹಿತ ಶಿವಭಕ್ತರಿಗೆ ಅಂದರೆ ತನುವನ್ನು ಗುರುವಿಗೂ, ಮನವನ್ನು ಲಿಂಗಕ್ಕೂ, ಧನವನ್ನು ಜಂಗಮಕ್ಕೂ ಅರ್ಪಿಸಬೇಕೆಂಬ ನಿಲುವನ್ನು ಪದ್ಮರಸನೂ ಒಪ್ಪಿರುವುದು ಸಮಯೋಚಿತವಾಗಿದೆ. ಹೀಗೆಯೇ ಹಲವು ರೀತಿಯಲ್ಲಿ ಮಾನವ ಸಮಾಜದ ನೈತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ವಿಚಾರಗಳು ಹೇಳಲ್ಪಟ್ಟಿವೆ. ಸಮಾಜದಲ್ಲಿರುವ ಅನಿಷ್ಟ, ಆಚಾರ-ವಿಚಾರಗಳನ್ನು ಕುರಿತು ತೋರಿದ ಪದ್ಮರಸನ ಪ್ರತಿಭಟನಾ ಮನೋಧರ್ಮವನ್ನು ಇಲ್ಲಿ ಗುರುತಿಸಬಹುದಾಗಿದೆ. ದೀಕ್ಷೆಯು ವೀರಶೈವ ಮತದ ಪ್ರಮುಖವಾದ ಸಂಸ್ಕಾರವಾಗಿದೆ. ದೀಕ್ಷಾಬೋಧೆಯಲ್ಲಿ ತ್ರೈಮಲವನ್ನು ತೊಡೆವ, ಸುಜ್ಞಾನವನ್ನು ನೀಡುವ ಮೃಡನೊಳೇಕಾರ್ಥವಹ ಬೆಡಗಿನ ಉಪಾಯವಿದೆಂದು ಸಮುಚಿತವಾಗಿ ವರ್ಣಿಸಲಾಗಿದೆ.
ದೀಯತೇ ಜ್ಞಾನಸಂಬಧಃ ಕ್ಷೀಯತೇ ಚ ಮಲತ್ರಯಂ ದೀಯತೆ ಕ್ಷೀಯತೇ ಯೇನ ಸಾದೀಕ್ಷೇತಿ ನಿಗದ್ಯತೇ
ಹಾಗಾಗಿ ಕೆರೆಯ ಪದ್ಮರಸನು ತ್ರಿಭುವನತಾತನಿಗೆ ನೀಡಿದ ದೀಕ್ಷಾಬೋಧೆಯು ವೀರಶೈವ ತತ್ವ, ಮತನಿಷ್ಠೆ, ಏಕಮೇವ ಧರ್ಮಪ್ರತಿಪಾದನೆಯ ಸಂಕೇತವಾಗಿದೆ. ಇಲ್ಲಿ ದೀಕ್ಷೆ ಪಡೆದ ತ್ರಿಭುವನತಾತನಿಗೆ ಕೆರೆಯ ಪದ್ಮರಸನು ವೀರಶೈವ ಧರ್ಮದ ಅತ್ಯಂತ ಕಠಿಣವಾದ ಆಚರಣೆಯ ಮೂಲಕ ಪಡೆಯಬಹುದಾದ ಆತ್ಮ ಮತ್ತು ಜೀವಾತ್ಮಗಳ ಮುಕ್ತಿ ಮತ್ತು ತೃಪ್ತಿಯ ಬಗೆಗಿನ ನಿಲುವನ್ನು ಹೇಳುತ್ತಾನೆ. ಆ ಆಚರಣೆಗಳು ಇಂದಿಗೂ ಕಂಡರೂ ಅವುಗಳ ಸ್ವರೂಪ ಮತ್ತು ವಿಧಾನಗಳು ವಿಭಿನ್ನವಾಗಿದ್ದು ಜಾತ್ಯಾತೀತವಾಗಿವೆ. ಆದರೆ ಆತ್ಮ ಮತ್ತು ಜೀವಾತ್ಮ ಎಂದು ವಿಂಗಡಿಸುವ ಪದ್ಮರಸನ ವಾದವು ವೀರಶೈವ ಮತಕ್ಕೆ ವಿರುದ್ಧವಾಗಿದೆ. ಬ್ರಾಹ್ಮಣನಾಗಿದ್ದ ತ್ರಿಭುವನತಾತ ವಾದದಲ್ಲಿ ಸೋತ ಕಾರಣ ತನ್ನ ಬ್ರಾಹ್ಮಣ್ಯವನ್ನು ತ್ಯಜಿಸಿ ಶಿವತ್ವಕ್ಕೆ ಶರಣಾಗುವುದು ದೈವಾಂತರದ ಕುರುಹಾಗಿದ್ದು; ಇಲ್ಲಿ ಮತಾಂತರದ ಪ್ರಭಾವವಿರುವುದನ್ನು ಗಮನಿಸಬಹುದು. 12 ಮತ್ತು 13ನೇ ಶತಮಾನದ ವಚನಸಾಹಿತ್ಯ ಅನಂತರದಲ್ಲಿ ಕಾಣಿಸಿಕೊಂಡ ವೀರಶೈವ ಸಾಹಿತ್ಯವು ಜೈನಧರ್ಮದೊಂದಿಗೆ ಸಂಘರ್ಷಕ್ಕೊಳಗಾಗಿ ಬೆಳೆದು ಜನಪದೀಯವಾಗಿ ಸಾಮಾನ್ಯನಿಗೂ ನಿಲುಕವಂತ ಸಾಹಿತ್ಯವಾಗಿದೆ. ವೈಧಿಕ ಬ್ರಾಹ್ಮಣರು ಕೃಷ್ಣಪಾರಮ್ಯವನ್ನು ಎತ್ತಿ ಹಿಡಿಯುವ ಸಂದರ್ಭದಲ್ಲಿ ಶಿವಾಧಿಕ್ಯವನ್ನೇ ಮೊದಲು ಮಾಡಿ ಸೃಷ್ಠಿಯ ಮೂಲ ಶಿವನೇ ಎಂದು ಸ್ವಧರ್ಮ ಪರಿಪಾಲನೆ ಮತ್ತು ಪ್ರತಿಷ್ಠಾಪನೆಗೈದ ವೀರಶೈವ ಸಾಹಿತ್ಯವು ಶಿವನನ್ನು ಶಿವತ್ವವನ್ನೂ ಎತ್ತಿ ಹಿಡಿದಿದೆ. ಪದ್ಮರಸನು ಶಿವಶರಣರು ಮತ್ತು ಅವರ ಗುರುತರವಾದ ಲಾಂಛನವನ್ನು ಕಂಡರೆ ಭವಿಯು (ಅರಸ, ರಾಜ, ದೊರೆ ಸೇರಿದಂತೆ ಇತ್ಯಾದಿ) ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಹೇಳುತ್ತ ಮತ್ತು ಅದಕ್ಕೆ ವಿರುದ್ಧವಾದರೆ ಅದರಿಂದಾಗುವ ಅನಾಹುತದ ಬಗ್ಗೆ ಬಹಳ ಸ್ವಾರಸ್ಯಕರವಾಗಿ ತಿಳಿಸಿದ್ದಾನೆ.
ಈಶಲಾಂಛನವ ಕಂಡಾಸನವಿಳಿಯಬೇಕು. ........................... ಇಳಿಯದಾಸನದೊಳಿರೆ ಪಿತನ ಸದ್ಧರ್ಮಮಂ ಕಳೆದು ತಾನುಂಬ ಕೌರವಮಪ್ಪನರಕಮಂ (1-72)
ಇಲ್ಲಿ ಗಮನಿಸಬೇಕಾದದ್ದು ರಾಜಪ್ರಭುತ್ವವನ್ನು ಕೆರೆಯ ಪದ್ಮರಸ ವಿರೋಧಿಸಿರುವುದು ಮತ್ತು ಪ್ರತಿಭಟಿಸಿರುವುದನ್ನು. ಶಿವನಿಂದೇ ಜನ್ಮ ಪ್ರಾಪ್ತಿ ಆದರೂ ಕೂಡ ಸಾವಿರ ಜನ್ಮದ ತಪಸ್ಸಾಚರಣೆಯಿಂದ ಮಾತ್ರವೇ ಶಿವಶರಣ ಜನ್ಮಬರುವುದು. ಹಾಗಾಗಿಯೇ ಸ್ವಧರ್ಮ, ಸ್ವಜಾತಿಯ ಅಭಿಮಾನದಿಂದ ಕೆರೆಯ ಪದ್ಮರಸನು
....ಸುರೆಮಾಂಸಭಕ್ಷಣೆಯು ಕಾಮಮೇಳಂಗಳಂ ಪರದೈವ ಭಜನೆ ಪರವಧುಪರಧನಂಗಳಂ ಬಿಡಬೇಕು ಬಿಡದಿರಲು ಬಿಡುಗವನ ಗುರುಲಿಂಗ ತೊಡರುಗು ಮಹಾದ್ರೋಹ ಭವಿ ಪಾತಕರ ಸಂಗ (1-49)
ಎನ್ನುತ್ತಾ ಸನ್ಮಾರ್ಗದಿಂದ ಸಚ್ಚಾರಿತ್ರದಿಂದ ಇರಬೇಕೆಂದು ದೀಕ್ಷಾಬೋಧೆಯಲ್ಲಿ ನೇರವಾಗಿ ಬೋಧಿಸುತ್ತಾ, ಅಂತಹ ಆಚರಣೆಯನ್ನು ಪಾಲಿಸದಿದ್ದರೆ ಆಗುವಂತಹ ಅನಾಹುತಗಳನ್ನು ಸಾಂಕೇತಿಕವಾಗಿ ನಿರ್ದೇಶಿಸಿದ್ದಾನೆ. ಪರದೈವ ಭಜನೆ ಬಿಡಬೇಕೆಂಬ ಮಾತಿನಲ್ಲಿ ‘ಏಕದೇವೋಪಾಸನೆ’ಯನ್ನು ಪಾಲಿಸುವ ಕ್ರಮ ‘ಅದ್ವೈತ’ ಸಿದ್ಧಾಂತವನ್ನು ಕಾಣಬಹುದಾಗಿದೆ. ಸಮಾಜದಲ್ಲಿ ನಾನಾವರ್ಗದ, ನಾನಾವೃತ್ತಿಯ ಜನವರ್ಗವಿರುವಾಗ ‘ಏಕದೇವೋಪಾಸನೆ’ಯ ಪರಿಕಲ್ಪನೆ ಮತಾಂತರ ಮತ್ತು ಸ್ವಧರ್ಮವೇ ಶ್ರೇಷ್ಠವೆಂಬದು ಪುನರುಕ್ತಿಯಾಗಿದೆ.
ಭವಿಯ ಮನೆಯನ್ನಪಾನವನುಣ್ಣದಿರಬೇಕು ಭವಿಯಾದ ಮಾತಪಿತರಂ ವಿವರಿಸಲು ಬೇಕು ವಿವರಿಸದೆಯವರಿಡಲು ಉಂಡುದುಂ ಮನಸಂದು ಶಿವರಹಸ್ಯದೊಳೆಂದ ಗೋಮಾಂಸ ಸರಿಯೆಂದು (1-58)
ಇಲ್ಲಿ ಗಮನಿಸಬೇಕಾದದ್ದು ಮುಖ್ಯವಾಗಿ ಆಹಾರ ಪದ್ಧತಿಯ ವಿಡಂಬನೆ. ಜಗತ್ತಿನಲ್ಲಿ ಸರ್ವರಿಗೂ ಒಂದೇ ರೀತಿಯ ಆಹಾರವು ರುಚಿಸುವುದಿಲ್ಲ. ಅದು ಅವರವರ ಬಾಯಿ ರುಚಿಗೆ ಸೇರಿದ್ದಾಗಿರುತ್ತದೆ. ಆಹಾರಕ್ಕೆ ಯಾವುದೇ ರೀತಿಯ ಜಾತಿಯ ಲೇಪನ ಸಲ್ಲುವುದಿಲ್ಲ. ಗೋಮಾಂಸ ‘ದಲಿತರ’ ಶ್ರೇಷ್ಟವಾದ ಆಹಾರ ಕ್ರಮವಾಗಿದೆ. ತನ್ನ ತಾನು ಬಣ್ಣಿಸಿಕೊಳ್ಳಲು ಅಥವಾ ತನ್ನ ಅಸ್ತಿತ್ವವನ್ನು ನಿರೂಪಿಸಲು ಇನ್ನೊಂದು ವರ್ಗದ ಜನರ ಬಗ್ಗೆ ಹೀಯಾಳಿಸುವುದು ಅನರ್ಥವಾಗುತ್ತದೆ. ಬೇಡರ ಕಣ್ಣಪ್ಪನು ಶಿವನಿಗೆ ಮಾಂಸವನ್ನೇ ನೈವೇಧ್ಯ ಮಾಡುತ್ತಿದ್ದನು. ಅವನಂತೆ ಅನೇಕ ಶರಣರು ಕೂಡ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರು ಎಂಬುದನ್ನು ವಚನಕಾರರ ವಚನಗಳಲ್ಲಿ ನಾವು ಕಾಣಬಹುದು.
ಜಾತಿಯೊಂದೇ ಜನನವೊಬ್ಬರಿಂದಾದರಿಗೆ ವರ್ಣವಿಲ್ಲಾ ಶ್ರಮಗಳಿಲ್ಲ ಶಿವಲಿಂಗಕ್ಕೆ ನಿರ್ಣಯವ ತಿಳಿ ಯಾವ ಕುಲವಿಲ್ಲ ಲಿಂಗಕ್ಕೆ ಇಂತಾತನಿಂದಾದವರ್ಗಾವ ಕುಲವಿಲ್ಲ ಸಂತತಂ ಶಿವಜಾತರಿಗೆ ಮುನ್ನ ಕುಲವಿಲ್ಲ... (1-116)
ಎಂದು ದೀರ್ಘವಾಗಿ ಸತ್ಕುಲದ ಬಗ್ಗೆ ಮತ್ತು ಶಿವನಿಂದಾದವರಿಗೆ ಕುಲವಿಲ್ಲವೆಂದು ತಿಳಿಸುವಾಗ ಲಿಂಗವಂತರೆಲ್ಲ ಸತ್ಕುಲದವರೆಂದು ಹೇಳಿದ್ದಾನೆ. ಆದ್ದರಿಂದ ಇಂದಿನ ದಲಿತ ಲಿಂಗವಂತರು ಸತ್ಕುಲದವರು ಅವರುಗಳು ಕೀಳಲ್ಲ ಮತ್ತು ಸಮಾಜದಲ್ಲಿ ಅವರು ಸಮಾನರೆಂಬುದನ್ನು ಈ ಮೂಲಕ ಇಂದಿನ ಮತಾಂಧರು, ಜಾತಿವಾದಿಗಳು ಸ್ಮøತಿಪಟಲದಲ್ಲಿ ಅರಿಯಬೇಕಾಗಿದೆ.
ಶಿವ ಭಕ್ತರುಗಳ ಕುಲ ವಿವರಿಸದೆ ಇರಬೇಕು ಅವರ ಗೃಹದೊಳು ಪದಾರ್ಥವನ್ನು ಭುಂಜಿಸಬೇಕು ಉಳಿದವರ ಕುಲವು ಸತ್ಕುಲವಾದೊಡಂತವರ ಕಳೆವುದಂತ್ಯಜರೆಂದು ಶಿವಭಕ್ತರಲ್ಲದವರ...1-(59)
ಯಾವುದೇ ವರ್ಗ, ವರ್ಣ, ಜಾತಿಯವರು ಶರಣರಾಗಿದ್ದರೆ ಅಥವಾ ಶಿವಭಕ್ತರಾಗಿದ್ದರೆ ಅವರ ಕುಲವನ್ನು ವಿಚಾರಿಸದೆ ಅವರ ಗೃಹ (ನಿವಾಸ)ದೊಳಗೆ ಕೊಡುವ ಆಹಾರವನ್ನು ಸೇವಿಸಬಹುದು. ಅಂದರೆ ದಲಿತನೊರ್ವ ಶರಣ/ಶಿವಭಕ್ತನಾಗಿದ್ದರೂ ಕೂಡ ಅವರ ಮನೆಯಲ್ಲಿ ಆಹಾರ ಸೇವಿಸುವುದು ಉಚಿತ ಮತ್ತು ಅವನ ಕುಲವನ್ನು ಕೇಳುವಂತಿಲ್ಲ. ಆದರೆ ಉತ್ತಮ ಜಾತಿಯಲ್ಲಿಯೇ ಹುಟ್ಟಿ ಸತ್ಕುಲನಾಗಿಲ್ಲದಿದ್ದರೆ ಅವನ ಮನೆಯಲ್ಲಿ ಆಹಾರ ಸೇವನೆ ನಿಷಿದ್ಧವಾಗಿರುತ್ತದೆ. ಇದನ್ನು ದಲಿತ ಸಂವೇದನೆಯ ಹಿನ್ನೆಲೆಯಲ್ಲಿಯೇ ಗ್ರಹಿಸಬಹುದಾಗಿದೆ.
ಹೀಗೆ ಒಟ್ಟಾರೆ ಕೃತಿಯ ಹಿನ್ನೆಲೆಯಲ್ಲಿ ಗಮನಿಸಿದಾಗ ಕೆರೆಯ ಪದ್ಮರಸನು ವೀರಶೈವನಾಗಿದ್ದು ಧರ್ಮವಾದದಲ್ಲಿ ಸೋತ ತ್ರಿಭುವನತಾತನು ವೈಷ್ಣವನಾಗಿದ್ದು ಅಂದಿನ (13ನೇ ಶತಮಾನ) ಕಾಲದ ಸಂದರ್ಭದಲ್ಲಿ ಉತ್ಕøಷ್ಟ ಸ್ಥಿತಿಯಲ್ಲಿದ್ದ ಎರಡು ಪ್ರಮುಖ ಧರ್ಮಗಳ ಪ್ರತಿನಿಧಿಗಳಾಗಿದ್ದರು. ಆದರೆ ಸೋತ ತ್ರಿಭುವನತಾತನು ವೀರಶೈವ ಧರ್ಮವನ್ನು ಒಪ್ಪಿಕೊಂಡು ತನ್ನವರಿಗೆಲ್ಲಾ ವೀರಶೈವ ದೀಕ್ಷೆಯನ್ನು ಪಡೆಯುವ ಮೂಲಕ ಮತಾಂತರಗೊಂಡಿರುವುದು ಕಣ್ಣಿಗೆ ಕಾಣಿಸುವ ಸತ್ಯವಾಗಿದೆ.
ದೀಕ್ಷೆಯ ಸಂದರ್ಭದಲ್ಲಿ ದೀಕ್ಷೆಯ ಸ್ವರೂಪವನ್ನು ತಿಳಿಯ ಹೇಳಿದ ಪದ್ಮರಸನು ಕುಲ, ಧರ್ಮ, ವರ್ಗ, ವರ್ಣ, ಜಾತಿ, ಸಂಕರ, ಆಹಾರ ಪದ್ಧತಿಗಳಂತಹ ಅನೇಕ ಸಾಮಾಜಿಕ ವಿಷಯಗಳನ್ನು ಹಲವಾರು ಘಟನೆಗಳ ಮೂಲಕ ಸಾಂದರ್ಭಿಕ ಮತ್ತು ಸಾಂಕೇತಿಕವಾಗಿ ವಿವರಿಸಿದ್ದಾನೆ. ಇದು ವೀರಶೈವ ಧರ್ಮ ಮತಪ್ರಚಾರದ ಮತ್ತು ತತ್ವ ಸಿದ್ಧಾಂತಗಳನ್ನೊಳಗೊಂಡ ಏಕೈಕ ಸ್ವತಂತ್ರ ಪ್ರಥಮ ಕೃತಿಯಾಗಿದೆ ಮತ್ತು ಇಡೀ ವೀರಶೈವ ಧರ್ಮಸಾರವನ್ನು ಈ ಕೃತಿಯು ಒಳಗೊಂಡಿದೆ.
ಹೀಗೆ ದೀಕ್ಷೆ ಎಂದರೆ ಗುರುವಿನಿಂದ ಲಿಂಗಸಂಗವ ಮಾಡಿ ಮೋಕ್ಷಗೊಳ್ಳುವುದು. ಅಂದರೆ ಭಾವದಲ್ಲಿ ನೆಲೆಗೊಳ್ಳುವಿಕೆ ವೀರಶೈವ ಮತಸ್ಥರಲ್ಲಿ ಸಾಂಪ್ರದಾಯಿಕವಾಗಿ 1. ಸಮಯ ದೀಕ್ಷೆ 2. ಸಾಧಕ ದೀಕ್ಷೆ 3. ಆಚಾರ್ಯ ದೀಕ್ಷೆ 4. ಅನುಗ್ರಹ ದೀಕ್ಷೆ – ಈ ನಾಲ್ಕು ಬಗೆಯ ದೀಕ್ಷೆಗಳು ಕಂಡುಬರುತ್ತವೆ. ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಕೆರೆಯ ಪದ್ಮರಸನು ವೀರಶೈವ ಧರ್ಮದ ಪ್ರಚಾರಕ್ಕಾಗಿ ಕೃತಿ ರಚನೆ ಮಾಡಿರುವುದು ವಿಧಿತವಾಗುತ್ತದೆ. ಈ ಕೃತಿಯಲ್ಲಿ ಕುಲ, ಜಾತಿ ವರ್ಣಗಳೆಂಬ ದಲಿತ ಸಂವೇದನೆಯುಳ್ಳ ಸಾಮಾಜಿಕ ವಿಡಂಬನಾ ಅಂಶಗಳು ಕಂಡುಬರುವುದನ್ನು ಚರ್ಚಿಸಲಾಗಿದೆ. ಆದರೆ ಈ ಕಾವ್ಯವು ವೀರಶೈವ ಧರ್ಮಸಾರವನ್ನು ಹೆಚ್ಚು ವಿಜೃಂಬಿಸಿರುವುದರಿಂದ ಈ ಕೃತಿಯು ವೀರಶೈವ ಧರ್ಮ ತತ್ವಸಾರದ ಕೃತಿಯಾಗಿ ಪರಿಣಮಿಸಿದೆ.
https://www.duhoctrungquoc.vn/wiki/kn/%E0%B2%A4%E0%B3%86%E0%B2%B2%E0%B3%81%E0%B2%97%E0%B3%81
This article uses material from the Wikipedia ಕನ್ನಡ article ಕೆರೆಯ ಪದ್ಮರಸ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.