ಡಾ.
ಎಂ. ಎಂ. ಕಲಬುರ್ಗಿ (ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ)ಯವರು ೧೯೩೮ ನವಂಬರ ೨೮ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ; ತಂದೆ ಮಡಿವಾಳಪ್ಪ.
ಎಂ. ಎಂ. ಕಲಬುರ್ಗಿ | |
---|---|
ಜನನ | ೧೯೩೮ ಗುಬ್ಬೇವಾಡ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ |
ಮರಣ | ೩೦.೦೮.೨೦೧೫ ಧಾರವಾಡ |
ವೃತ್ತಿ | ಲೇಖಕ, ಪ್ರಾಧ್ಯಾಪಕ, ಕುಲಪತಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಸಂಶೋಧನೆ, ಸಂಪಾದನೆ, ಶಾಸನ |
ವಿಷಯ | ಹಳಗನ್ನಡ, ವಚನ ಸಾಹಿತ್ಯ, ಲಿಂಗಾಯತ |
ಪ್ರಭಾವಗಳು
|
ಕಲಬುರ್ಗಿಯವರು, ಕರ್ನಾಟಕದ ಬಹು ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವಿದೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದು ಕವನ ಸಂಕಲವನ್ನು ಪ್ರಕಟಿಸಿದ್ದಾರೆ.
ಕಲಬುರ್ಗಿಯವರ ಪ್ರಾಥಮಿಕ ಶಿಕ್ಷಣ ಯರಗಲ್ಲನಲ್ಲಿ, ಮಾಧ್ಯಮಿಕ ಶಿಕ್ಷಣ ಸಿಂದಗಿಯಲ್ಲಿ ಜರುಗಿತು.ಅವಿಭಕ್ತ ಕುಟುಂಬದಿಂದ ಬಂದವರು. ವಿಜಾಪುರ ವಿಜಯಾ ಕಾಲೇಜ್ ನಲ್ಲಿ ಬಿ.ಎ.(ಕನ್ನಡ) ಪದವಿಯನ್ನು ಯು.ಜಿ.ಸಿ. ಶಿಷ್ಯವೇತನದ ಸಹಾಯ ಪಡೆದು ಪ್ರಥಮ ವರ್ಗದಲ್ಲಿ ಮತ್ತು ಪ್ರಥಮ ರ್ಯಾಂಕ್ನೊಂದಿಗೆ ಗಳಿಸಿದರು. ಬಳಿಕ, ೧೯೬೨ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. 1968 ರಲ್ಲಿ, ಅವರು ಸಲ್ಲಿಸಿದ, 'ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ' ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಬಂತು.
೧೯೬೨ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಪ್ರಾರಂಭಿಸಿದ ಕಲಬುರ್ಗಿಯವರು, ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾದರು. ೧೯೮೨ರಲ್ಲಿ ಅಲ್ಲಿಯೆ ವಿಭಾಗ ಮುಖ್ಯಸ್ಥರಾದರು. ಹಂಪಿಯಲ್ಲಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಈ ಶತಮಾನದ ಶ್ರೇಷ್ಠ ಚಿಂತಕರಲ್ಲೊಬ್ಬರೆಂದು ಹೆಸರುವಾಸಿಯಾದ ಕಲಬುರ್ಗಿಯವರು ಸದಾ ಓದು, ಬರಹ, ಚಿಂತನೆ, ಪ್ರಕಟಣೆ, ಮಾರ್ಗದರ್ಶನ ಮತ್ತಿತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅತ್ಯಂತ ಸರಳ ವ್ಯಕ್ತಿತ್ವದ ವಿನಯಶೀಲರಾದ ಅವರು ಕನ್ನಡದ ಕ್ರಿಯಾಶೀಲ ಚೇತನವೆಂದು ಹೆಸರಾಗಿದ್ದಾರೆ. ಕಲಬುರ್ಗಿಯವರಲ್ಲಿ ಉತ್ತರ ಕರ್ನಾಟಕದ ಹಿರಿಯ ವಿದ್ವಾಂಸರ ವಿಶಿಷ್ಟ ಲಕ್ಷಣಗಳು ಮತ್ತು ಹಳೆಯ ಮೈಸೂರಿನ ಕಡೆಯ ವಿದ್ವತ್ ಪರಂಪರೆಯ ಅನನ್ಯ ಲಕ್ಷಣಗಳ ಸಂಯೋಜನೆಯನ್ನು ಕಾಣಬಹುದು. ತನ್ನ ಸಂಶೋಧನೆಯ ಫಲಿತಗಳ ನಿಕರತೆಯ ಬಗ್ಗೆ ನಂಬಿಕೆಯಿದ್ದಾಗ, ಅವರು ವಿವಾದಗಳನ್ನು ಹುಟ್ಟುಹಾಕಲು ಎಂದಿಗೂ ಹಿಂಜರಿದಿಲ್ಲ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಾನಪದ ಸಮ್ಮೇಲನವನ್ನು ರೂಪಿಸಿದವರಲ್ಲಿ ಒಬ್ಬರು. ಕನ್ನಡ ವಿಶ್ವವಿದ್ಯಾಲಯದಲ್ಲಿ ದೇಸಿ ಸಮ್ಮೇಲನವನ್ನು ಸ್ಥಾಪಿಸಿದವರು ಡಾ| ಕಲಬುರ್ಗಿ. ಗದಗಿನ ಶ್ರೀ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆಯ ಸಂಸ್ಥಾಪಕರು. ಇದಲ್ಲದೆ ಮೈಸೂರಿನ ಸುತ್ತೂರು ಮಠದ ಸಮಗ್ರ ವಚನ ಸಾಹಿತ್ಯ ಪ್ರಕಟಣಮಾಲೆಯ , ಬೆಳಗಾವಿಯ ನಾಗನೂರು ಮಠದ ವೀರಶೈವ ಅಧ್ಯಯನ ಅಕಾಡೆಮಿಯ ಹಾಗು ಶಿವಮೊಗ್ಗೆಯ ಆನಂದಪುರ ಮಠದ ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
'ಬಸವಣ್ಣನವರ ಕುರಿತ ಶಾಸನಗಳು' ಎಂ.ಎಂ.ಕಲಬುರಗಿ ಅವರ ಮೊದಲ ಕೃತಿ. 41 ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿರುವ ಅವರು, 100 ಕೃತಿಗಳನ್ನು ರಚನೆ ಮಾಡಿದ್ದಾರೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.
ಕಲಬುರ್ಗಿಯವರು 30 ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಮೂಲಕ (೧)ಶಿವಶರಣರ ಸಮಗ್ರ ವಚನ ಸಂಪುಟಗಳನ್ನು ಹಾಗು (೨)ಹರಿದಾಸರ ಸಮಗ್ರ ಕೀರ್ತನ ಸಂಪುಟಗಳನ್ನು ಪ್ರಕಟಗೊಳಿಸಿದ್ದಾರೆ.
ಕಲಬುರ್ಗಿಯವರು ತಮ್ಮ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿಗಳು ಅವುಗಳಲ್ಲಿ ಕೆಲವು. ಅವರ ‘ಮಾರ್ಗ-4’ ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಅವರು ಬರೆದಿರುವ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ.
ಎಂ.ಎಂ. ಕಲಬುರ್ಗಿಯವರ ಸೇವೆಯನ್ನು ಅನುಲಕ್ಷಿಸಿ ಅನೇಕ ಗೌರವಗಳು ಅವರಿಗೆ ಸಂದಿವೆ. ತಂಜಾವೂರಿನಲ್ಲಿ ನಡೆದ All India Placename Confernceಕ್ಕೆ ಕಲಬುರ್ಗಿಯವರು ಅಧ್ಯಕ್ಷರಾಗಿದ್ದರು. ಮಹಾಲಿಂಗಪುರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಶ್ರೀಕೃಷ್ಣ ಪಾರಿಜಾತ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2011 ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆದ "ಆಳ್ವಾಸ್ ನುಡಿಸಿರಿ 2011" ಇದರ ಸರ್ವಾಧ್ಯಕ್ಷರಾಗಿದ್ದರು.
'ಕಲಬುರ್ಗಿ-60' ಮತ್ತು 'ಮಹಾಮಾರ್ಗ'ಗಳು ಈ ವಿದ್ವಾಂಸರಿಗೆ ಸಲ್ಲಿಸಿರುವ ಅಭಿನಂದನಾ ಗ್ರಂಥಗಳಲ್ಲಿ ಮುಖ್ಯವಾದವು.
30ನೇ ಆಗಸ್ಟ್, 2015ರಂದು, ಮುಸುಕುಧಾರಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಎಂ.ಎಂ.ಕಲಬುರ್ಗಿ ಸಾವನ್ನಪ್ಪಿದರು. ಧಾರವಾಡದಲ್ಲಿನ ಅವರ ಮನೆಗೆ ನುಗ್ಗಿದ ಅಪರಿಚಿತ ದಾಳಿಕೋರರು ಹಾರಿಸಿದ ಎರಡು ಸುತ್ತು ಗುಂಡುಗಳು ಹಣೆ ಮತ್ತು ಎದೆಗೆ ತಗುಲಿದ್ದವು. ಕಲಬುರ್ಗಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
This article uses material from the Wikipedia ಕನ್ನಡ article ಎಂ. ಎಂ. ಕಲಬುರ್ಗಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.