ಕನ್ನಡ ನವೋದಯದ ಮುಂಗೋಳಿ ಎಂದು ಪ್ರಸಿದ್ಧರಾದ.
ಮುದ್ದಣ (೧೮೭೦-೧೯೦೧) - ಕನ್ನಡ ಸಾಹಿತ್ಯಲೋಕದಲ್ಲಿ ಮಹಾಕವಿ ಎಂದು ಖ್ಯಾತಿಪಡೆದ ಕವಿ/ಸಾಹಿತಿ. ಮುದ್ದಣ ಅವರ ನಿಜ ನಾಮಧೇಯ ಲಕ್ಷ್ಮೀನಾರಣಪ್ಪ. ಹುಟ್ಟೂರು ನಂದಳಿಕೆಯಾದ್ದರಿಂದ ನಂದಳಿಕೆ ಲಕ್ಷ್ಮೀನಾರಣಪ್ಪ ಎಂಬ ಹೆಸರು ಕೂಡ ಇವರಿಗಿದೆ. ರತ್ನಾವತಿ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ ಮತ್ತು ಶ್ರೀ ರಾಮಾಶ್ವಮೇಧ ಮುದ್ದಣ ಅವರು ಬರೆದಿರುವ ಕೆಲವು ಮುಖ್ಯವಾದ ಕೃತಿಗಳು. ಅನಾರೋಗ್ಯ ಮತ್ತು ಬಡತನದಿಂದ ಬಳಲಿದ ಮುದ್ದಣ, ಕಿರಿಯ ವಯಸ್ಸಿಗೆ ಇಹಲೋಕ ಯಾತ್ರೆ ಮುಗಿಸಿದರು. ಕರ್ನಾಟಕದಲ್ಲಿನ ಶಾಲಾ ಕಾಲೇಜುಗಳಲ್ಲಿನ ಕನ್ನಡ ಸಾಹಿತ್ಯ ಪಠ್ಯಗಳಲ್ಲಿ ಮುದ್ದಣನವರ ಪದ್ಯ/ಗದ್ಯಗಳು ಹಾಸು ಹೊಕ್ಕಾಗಿವೆ.
ಮುದ್ದಣ | |
---|---|
ಜನನ | ಜನವರಿ 24, 1870 ನಂದಳಿಕೆ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ |
ಮರಣ | ಫೆಬ್ರವರಿ 15, 1901 ಮೈಸೂರು, ಕರ್ನಾಟಕ, ಭಾರತ |
ಅಂತ್ಯ ಸಂಸ್ಕಾರ ಸ್ಥಳ | ಉಡುಪಿ |
ಕಾವ್ಯನಾಮ | ಮುದ್ದಣ |
ವೃತ್ತಿ | ಕವಿ, ದೈಹಿಕ ಶಿಕ್ಷಕ |
ರಾಷ್ಟ್ರೀಯತೆ | ಕನ್ನಡಿಗ |
ಕಾಲ | ೧೯ನೆಯ ಶತಮಾನ |
ಪ್ರಕಾರ/ಶೈಲಿ | ಮಹಾಕಾವ್ಯ, ಯಕ್ಷಗಾನ ಪ್ರಸಂಗಗಳು |
ಬಾಳ ಸಂಗಾತಿ | ಕಮಲಾ ಬಾಯಿ |
ಮಕ್ಕಳು | ರಾಧಾಕೃಷ್ಣ |
ಲಕ್ಷ್ಮಿನಾರಣಪ್ಪ ೧೮೭೦ರ ಜನವರಿ ೨೪ರಂದು ನಂದಳಿಕೆಯಲ್ಲಿ ಜನಿಸಿದರು.ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ಸೇರಿದ ಒಂದು ಗ್ರಾಮ. ಈತನ ತಂದೆ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಶ್ಮಿ. ತಂದೆ ಕ್ರಿ. ಶ. ೧೮೩೯ರಲ್ಲಿ ಹುಟ್ಟಿದರೆಂದೂ, ತಾಯಿ ಕ್ರಿ. ಶ. ೧೮೫೪ರಲ್ಲಿ ಹುಟ್ಟಿದರೆಂದೂ ಹೇಳುತ್ತಾರೆ. ಇವರು ಮದುವೆಯಾಗಿ ಸಂಸಾರ ಹೂಡಿ ನಂದಳಿಕೆಯಲ್ಲಿ ನೆಲೆಯಾಗಿ ನಿಂತ ವೇಳೆ ತಿಮ್ಮಪ್ಪಯ್ಯ ಊರ ದೇವಸ್ಥಾನದಲ್ಲಿ ಪಾಟಾಲಳಿಯಾಗಿ ಕೆಲಸದಲ್ಲಿ ಇದ್ದರೆಂದು ಹೇಳುತ್ತಾರೆ. ಗಂಡ ದೇವರ ಊಳಿಗದಲ್ಲಿ ತೊಡಗಿದಂದು ಹೆಂಡತಿ ಗಂಡನ ಸೇವೆ, ದೇವರ ಸೇವೆ, ಮನೆಗೆಲಸಗಳಲ್ಲಿ ನಿರತಳಾಗಿದ್ದಳೆಂದು ಊಹಿಸಬಹುದಾಗಿದೆ. ತಿಮ್ಮಪ್ಪಯ್ಯನವರಿಗೆ ಮೂವತ್ತು ವರ್ಷವೂ, ಮಹಾಲಕ್ಷ್ಮಮ್ಮನವರಿಗೆ ಹದಿನೈದು ವರ್ಷವೂ ವಯಸ್ಸಾಗಿದ್ದಾಗ ಇವರ ಹಿರಿಯಮಗನಾಗಿ ಲಕ್ಶ್ಮೀನಾರಾಯಣನು ಹುಟ್ಟಿದನು. ಈತ ಹುಟ್ಟಿದ್ದು ಶುಕ್ಲ ಸಂ||ರದ ಪುಷ್ಯ ಬಹುಳ ಅಷ್ಟಮಿ ಸೋಮವಾರ. ಮುದ್ದಾಗಿ ಕಾಣುತ್ತಿದ್ದನಾದ್ದರಿಂದ ಆತನನ್ನು ಎಲ್ಲರೂ ಮುದ್ದಣ ಎಂದು ಕರೆಯಲು ಪ್ರಾರಂಭಿಸಿದರು ಎಂದು ತಿಳಿದು ಬಂದಿದೆ. ಹುಡುಗ ಬೆಳೆದು ಬುದ್ಧಿ ತಿಳಿದ ಮೇಲೆ ತನ್ನ ತಾಯಿ ಪ್ರೀತಿಯಿಂದ ಕರೆದ ಹೆಸರನ್ನೇ ತನ್ನ ಕಾವ್ಯ ನಾಮವನ್ನಾಗಿ ಆರಿಸಿಕೊಂಡನು.
ನಂದಳಿಕೆಯಲ್ಲಿ ಮುರೂರು ಚರಡಪ್ಪನವರು ಸ್ಥಾಪಿಸಿದ ಪಾಠಶಾಲೆಯಲ್ಲಿ ಇವರ ಪ್ರಾಥಮಿಕ ಶಿಕ್ಷಣ ನಡೆಯಿತು. ಉಡುಪಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಬಳಿಕ ಬಿಟ್ಟು ಶಿಕ್ಷಕರ ತರಬೇತಿ ಶಾಲೆಗೆ ಸೇರಿದರು. ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನು ಮನೆಯಲ್ಲಿಯೇ ಕಲಿಯತೊಡಗಿದರು. ಶಿಕ್ಷಕರ ತರಬೇತಿ ಶಾಲೆಯಲ್ಲಿ ಉತ್ತೀರ್ಣರಾಗುವುದರ ಜೊತೆಗೆ ಯಕ್ಷಗಾನವನ್ನು ರಚಿಸುವ ಸಾಮರ್ಥ್ಯವನ್ನೂ ಪಡೆದರು. ಗಟ್ಟಿ ಮುಟ್ಟಾಗಿ ಕಂಡುಬಂದ ಇವರನ್ನು ಸ್ಕೂಲಿನ ಮುಖ್ಯೋಪಾಧ್ಯಾಯರು ಅಂಗಸಾಧನೆಯಲ್ಲಿ ಹೆಚ್ಚಿನ ಪರಿಶ್ರಮ ಗಳಿಸುವ ಸಲುವಾಗಿ ಮದರಾಸಿಗೆ ಕಳುಹಿಸಿಕೊಟ್ಟರು. ಮದರಾಸಿನಲ್ಲಿ (ಇಂದಿನ ಚೆನ್ನೈ) ಅಂಗಸಾಧನೆಯ ಜೊತೆಗೆ ತಮಿಳು ಮಲೆಯಾಳಿ ಭಾಷಾ ಸಾಹಿತ್ಯಗಳ ಪರಿಚಯವನ್ನೂ ಪ್ರಯತ್ನಿಸಿದಂತೆ ತೋರುತ್ತದೆ. ಶ್ರೀ ಎಚ್. ನಾರಾಯಣ ರಾಯರು, , ಶ್ರೀ ಬೆನಗಲ್ ರಾಮರಾಯರು ಮುಂತಾದವರ ಸಹಾಯದಿಂದ ದ್ರಾವಿಡ ಭಾಷೆಗಳಿಗೆ ಸಂಬಂಧಪಟ್ಟ ಅನೇಕ ಟಿಪ್ಪಣಿಗಳನ್ನು ರಚಿಸಿದ್ದರೆಂದು ಹೇಳುತ್ತಾರೆ. ಮದರಾಸಿನಿಂದ ಹಿಂದಿರುಗಿದ ಮೇಲೆ ಉಡುಪಿಯ ಹೈಸ್ಕೂಲಿನಲ್ಲಿ ಲಕ್ಶ್ಮೀನಾರಾಯಣನಿಗೆ ವ್ಯಾಯಾಮ ಶಿಕ್ಷಕನ ಕೆಲಸ ದೊರೆಯಿತು. ದೈಹಿಕ ಶಿಕ್ಷಕನಾಗಿ ಉಡುಪಿಯಲ್ಲಿ ನೆಲೆಸಿದ್ದು ೧೮೮೯ನೆಯ ಮೇ ತಿಂಗಳಲ್ಲಿ. ಈ ವೃತ್ತಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಇಲ್ಲಿ ಇದ್ದರೆಂದು ತೋರುತ್ತದೆ. ಈ ಅವಧಿಯಲ್ಲಿ ಮಳಲಿ ಸುಬ್ಬರಾಯರೆಂಬ ಅದೇ ಶಾಲೆಯ ಉಪಾಧ್ಯಾಯರ ಪರಿಚಯ ಇವರಿಗಾಯಿತು. ಸುಬ್ಬರಾಯರೂ ಗ್ರಂಥಕರ್ತರು. ಅವರು ತಾವು ರಚಿಸಿದ ಕೃತಿಗಳನ್ನು ಲಕ್ಶ್ಮೀನಾರಾಯಣರಿಗೆ ಓದಲು ಕೊಟ್ಟರು. ತಮ್ಮ ಸ್ವಕೀಯ ಪುಸ್ತಕಭಂಡಾರದ ಗ್ರಂಥಗಳನ್ನೂ ಕೊಟ್ಟರು. ಲಕ್ಶ್ಮೀನಾರಾಯಣರು ಅನೇಕ ಯಕ್ಷಗಾನ ಪ್ರಸಂಗಗಳನ್ನು ಓದಿದರು. ಬಳಿಕ ಸುಬ್ಬರಾಯರ ಮಾರ್ಗದರ್ಶನದಲ್ಲಿ ಲಕ್ಶ್ಮೀನಾರಾಯಣಪ್ಪ `ರತ್ನಾವತಿ ಕಲ್ಯಾಣ' ಎಂಬ ಕೃತಿಯನ್ನು ರಚಿಸಿದರು. ಮುದ್ದಣ ಉಡುಪಿಯ ಕ್ರಿಶ್ಚ್ಯನ್ ಹೈಸ್ಕೂಲ್ನಲ್ಲಿ ಕೂಡ ಸೇವೆ ಸಲ್ಲಿಸಿದ್ದರು.
೧೮೯೩ರಲ್ಲಿ ಲಕ್ಷ್ಮಿನಾರಣಪ್ಪರ ವಿವಾಹ ಕಮಲಾಬಾಯಿ ಎಂಬರೊಂದಿಗೆ ನಡೆಯಿತು. ಇವರು ಮೈಸೂರು ಸೀಮೆಯ ಶಿವಮೊಗ್ಗ ಜಿಲ್ಲೆಯ ಕಾಗೇಗೋಡುಮಗ್ಗಿಯವರು. ಅದ್ಭುತ ರಾಮಾಯಣ, ರಾಮಪಟ್ಟಾಭಿಷೇಕ. ರಾಮಾಶ್ವಮೇಧಗಳನ್ನು ಇವರು ಮದುವೆಯ ಬಳಿಕವಷ್ಟೇ ಬರೆದದ್ದು ಎನ್ನಲಾಗಿದೆ. ರಾಮಾಶ್ವಮೇಧದಲ್ಲಿ ಬರುವ ಮುದ್ದಣ-ಮನೋರಮೆಯರ ಸರಸ ಸಂವಾದ ಭಾಗ ರಸಿಕ ಲಕ್ಶ್ಮೀನಾರಾಯಣರ ಸರಸ ಸಂಸಾರ ಚಿತ್ರದ ಒಂದು ಮುಖ ಎನ್ನುತ್ತಾರೆ. ೧೮೯೮ ಇವರಿಗೆಒಬ್ಬ ಮಗ ಹುಟ್ಟಿದನು. ಈತನಿಗೆ ರಾಧಾಕೃಷ್ಣನೆಂದು ಹೆಸರಿಟ್ಟರು.
ಕ್ಷಯ ರೋಗ ಮತ್ತು ತೀವ್ರ ಬಡತನದಿಂದ ಅಂತಿಮ ದಿನಗಳನ್ನು ಕಳೆದ ಮುದ್ದಣ, ೩೧ರ ಕಿರಿಯ ವಯಸ್ಸಿನಲ್ಲಿ ೧೫ ಫೆಬ್ರುವರಿ ೧೯೦೧ರಂದು ಮರಣ ಹೊಂದಿದರು.
ಕಿರಿಯ ವಯಸ್ಸಿನಲ್ಲಿಯೇ ಪ್ರತಿಭಾವಂತ ಕವಿಯಾಗಿ ರೂಪುಗೊಂಡಿದ್ದ ಮುದ್ದಣನವರು ನಾಚಿಕೆ ಸ್ವಭಾವದವರೂ ಹಾಗು ಅತ್ಯಂತ ವಿನಯವಂತರೂ ಆಗಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣದಿಂದ ಅವರು ತಮ್ಮ ಅದ್ಭುತ ರಾಮಾಯಣಂ(ಹೊಸಗನ್ನಡ ಗದ್ಯಶೈಲಿ), ಶ್ರೀರಾಮ ಪಟ್ಟಾಭಿಷೇಕಂ (೨೪೨ ಷಟ್ಪದಿ ಶೈಲಿ ಪದ್ಯಗಳು), ಹಾಗೂ ಶ್ರೀ ರಾಮಾಶ್ವಮೇಧಂ (ಮುದ್ದಣನ ಶ್ರೇಷ್ಠ ಕೃತಿಯೆಂದು ವಿಮರ್ಶಕರು ಅಭಿಪ್ರಾಯಪಟ್ಟಿರುವ) ಕೃತಿಗಳನ್ನು ಬೇರೊಬ್ಬರ ಹೆಸರಿನಲ್ಲಿ ಪ್ರಕಾಶನಕ್ಕೆ ಕಳಿಸಿದರು. ಈ ಕೃತಿಗಳು ಪ್ರಾಚೀನ ಸಾಹಿತಿಗಳಿಂದ ರಚಿತವಾದದ್ದೆಂದೂ, ಅವರ ವಂಶಸ್ಥರಿಂದ ತನಗೆ ದೊರೆತದ್ದೆಂದು, ಆ ವಂಶಸ್ಥರ ಬಗ್ಗೆ ಈಗ ಯಾವುದೇ ಮಾಹಿತಿಗಳಿಲ್ಲವೆಂದೂ ಪ್ರಕಾಶಕರಿಗೆ ತಿಳಿಸಿದರು. ಈ ಕೃತಿಗಳನ್ನು ಮೊದಲ ಬಾರಿಗೆ, ೧೮೯೫, ೧೮೯೬ ಮತ್ತು ೧೮೯೯-೧೯೦೧ರಲ್ಲಿ, ಮೈಸೂರಿನಲ್ಲಿರುವ ಶ್ರೀ ಎಂ.ಎ.ರಾಮಾನುಜ ಅಯ್ಯಂಗಾರ್ ಮತ್ತು ಶ್ರೀ ಎಸ್.ಜಿ.ನರಸಿಂಹಾಚಾರ್ ಅವರು ಪ್ರಕಾಶಿಸುವ ಕರ್ನಾಟಕ ಕಾವ್ಯ ಮಂಜರಿ ಮತ್ತು ಕರ್ನಾಟಕ ಕಾವ್ಯ ಕಲಾನಿಧಿ ಎಂಬ ಪತ್ರಿಕೆಗಳಲ್ಲಿ ಪ್ರಕಟಿಸಲಾಯಿತು. ಮುದ್ದಣನು ಇದಕ್ಕೆ ಮುಂಚೆಯೇ ಹಲವಾರು ಬಾರಿ ಪ್ರಾಚೀನ ಕೃತಿಗಳನ್ನು ಪ್ರಕಟಣೆಗಾಗಿ ಕಳಿಸಿದ್ದರಿಂದ, ಪ್ರಕಾಶಕರು ಈ ಮೂರೂ ಕೃತಿಗಳೂ ಕೂಡ ಪ್ರಾಚೀನವಾದುವೇ! ಎಂದು ನಂಬಿದರು. ನಂತರ ನಿಜ ವಿಷಯ ಬೆಳಕಿಗೆ ಬಂದದ್ದು, ವರ್ಷ ೧೯೨೯ರಲ್ಲಿ (ಅಂದರೆ, ಮುದ್ದಣನ ಮರಣವಾಗಿ ೨೮ ವರ್ಷಗಳ ನಂತರ) ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಮುದ್ದಣ ಸ್ಮರಣ ಸಂಚಿಕೆಯನ್ನು ಪ್ರಕಟಿಸಿದರು.ಆ ಸಂದರ್ಭದಲ್ಲಿ, ಮುದ್ದಣನ ಸ್ನೇಹಿತರೂ, ಸಮೀಪವರ್ತಿಗಳೂ ಆಗಿದ್ದ ಪಂಜೆ ಮಂಗೇಶರಾಯರು, ಬೆನೆಗಲ್ ರಾಮರಾವ್, ಹುರಳಿ ಭೀಮರಾವ್ ಮತ್ತು ಮಳಲಿ ಸುಬ್ಬರಾವ್ ಅವರುಗಳು ಮುದ್ದಣನೊಂದಿಗಿನ ತಮ್ಮ ಒಡನಾಟಗಳನ್ನು ಕಲೆಹಾಕಿ, ಈ ಮೂರೂ ಕೃತಿಗಳು ಮುದ್ದಣನಿಂದಲೇ ಸ್ವಯಂರಚಿತ ವಾಗಿರುವುದನ್ನು ಪ್ರತಿಪಾದಿಸಿದರು. ಇವರು ಕನ್ನಡವನ್ನು "ಕನ್ನಡ೦ ಕಸ್ತೂರಿಯ೦ತೆ" ಎಂದು ಮುಕ್ತ ಕ೦ಠದಿ೦ದ ಹೊಗಳಿದ್ದಾರೆ. ಕಬ್ಬಗರ ಬಲ್ಲಹಂ ಎಂಬ ಬಿರುದೂ ಇವರಿಗಿದೆ. ಸಾಹಿತಿ ಪಂಜೆ ಮಂಗೇಶರಾಯರುರ ಪ್ರಕಾರ "ಮುದ್ದಣನವರಿಗಿಂತ ಒಳ್ಳೆಯ ಕವಿ ಬೇರಾರಿಲ್ಲ".
ಮುದ್ದಣ ಅವರು ತಮ್ಮ ನಲ್ಬರಹಗಳಲ್ಲಿ ಹೆಚ್ಚಿನ ಕನ್ನಡದ್ದೇ ಪದಗಳನ್ನು ಬಳಸಿ ಕನ್ನಡದ ಒಲವು ಮೆರೆದವರು. ಸಂಸ್ಕೃತ ಪದಗಳ ಹಂಗಿಲ್ಲದೆ ಕೂಡ ಒಳ್ಳೆಯ ಮೇಲ್ಮಟ್ಟದ ಕನ್ನಡ ನಲ್ಬರಹಗಳನ್ನು ಬರೆಯಬಹುದು ಎಂಬುದನ್ನು ಮುದ್ದಣ ತೋರಿಸಿ ಕೊಟ್ಟರು.
This article uses material from the Wikipedia ಕನ್ನಡ article ಮುದ್ದಣ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.