ಉಪ್ಪಿನ ಕುದುರು ಕೊಗ್ಗ ಕಾಮತ್:(27 ನವೆಂಬರ್ 1921 - 27 ಆಗಸ್ಟ್ 2003) .
ಯಕ್ಷಗಾನ ಗೊಂಬೆಯಾಟದ ಹೆಸರಾಂತ ಕಲಾವಿದರು.
ಕೊಗ್ಗ ದೇವಣ್ಣ ಕಾಮತ್ | |
---|---|
Born | 27 ನವೆಂಬರ್ 1921 |
Died | 27 August 2003 ಉಪ್ಪಿನಕುದ್ರು, ಉಡುಪಿ ಜಿಲ್ಲೆ, ಕರ್ನಾಟಕ | (aged 81)
Occupation | ಬೊಂಬೆಯಾಟಗಾರ |
ಇಂದಿನ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಉಪ್ಪಿನಕುದುರು ಗ್ರಾಮದಲ್ಲಿ 1921 ನವೆಂಬರ್ 27ರಂದು ಜನಿಸಿದರು . ರಾಷ್ಟ್ರಪ್ರಶಸ್ತಿ ವಿಜೇತ ಉಪ್ಪಿನ ಕುದುರು ದೇವಣ್ಣ ಕಾಮತ್ ಇವರ ತಂದೆ, ತಾಯಿ ರಾಧಾಬಾಯಿ. ವಂಶ ಪಾರಂಪರ್ಯವಾಗಿ ಯಕ್ಷಗಾನ ಗೊಂಬೆಯಾಟ ಕಲೆಯನ್ನು ಮುಂದುವರೆಸಿಕೊಂಡು ಬಂದ ತಂದೆಯಿಂದ ತರಬೇತಿ, ಅನುಭವ ಪಡೆದ ಕೊಗ್ಗ ಕಾಮತರು ಗೊಂಬೆಯಾಟಕ್ಕೆ ಹೊಸತನ ಹಾಗೂ ಜೀವಂತಿಕೆ ತುಂಬಿದರು. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬಳಿಕ ತಮ್ಮ ತಂದೆ ಹಾಗೂ ಅಜ್ಜ ನಾಗಪ್ಪ ಭಾಗವತರ ಆಟಗಳನ್ನು ನೋಡಿ ತರಬೇತಿ ಪಡೆದರು.
ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ತಂದೆಯ ಗೊಂಬೆಯಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶೃಂಗೇರಿಯಲ್ಲಿ ಪ್ರದರ್ಶನ ಮಾಡುವ ಹೊತ್ತಿಗೆ (1941) ಆರ್ಥಿಕ ಮುಗ್ಗಟ್ಟು ಹಾಗೂ ಸಾರ್ವಜನಿಕ ಪ್ರೋತ್ಸಾಹವಿಲ್ಲದೆ ತಮ್ಮ ತಂದೆ ಹತ್ತು ಎಕರೆ ಜಮೀನು ಕಳೆದುಕೊಂಡಿದ್ದನ್ನು ನೋಡಿದ್ದರು. ಆದ್ದರಿಂದ ಈ ಕಲೆಯನ್ನಾಧರಿಸಿದರೆ ಉದರ ನಿರ್ವಹಣೆಗೆ ತೊಂದರೆಯಾಗಬಹುದೆಂದು ಭಾವಿಸಿ ನಾಗಪುರ, ಪುಣೆ, ಮುಂಬಯಿಗಳಲ್ಲಿ ಕೆಲಕಾಲ ನೌಕರಿ ಮಾಡಿದರು. ಹದಿನಾಲ್ಕು ವರ್ಷಗಳ ಅನಂತರ ಕಲೆಯ ತುಡಿತದಿಂದ ಮರಳಿ ಊರಿಗೆ ಬಂದರು (1955). ಬಣ್ಣ ಕಳೆದುಕೊಂಡು, ವೇಷ ಹರಿದುಕೊಂಡು ಮೂಲೆಯಲ್ಲಿ ಬಿದ್ದ ಗೊಂಬೆಗಳನ್ನು ಕೈಗೆತ್ತಿಕೊಂಡು ಅವಕ್ಕೆ ಹೊಸರೂಪ ಕೊಡಲು ಮುಂದಾದರು. ಅಲ್ಲಲ್ಲಿ ಪ್ರದರ್ಶನ ನೀಡಲಾರಂಭಿಸಿದರು. ಆದರೂ ಜೀವನ ಸಾಗಿಸುವುದು ಕಷ್ಟವಾದಾಗ ಕುಂದಾಪುರದ ಒಂದು ಕಟ್ಟಿಗೆ ಕೊರೆಯುವ ಮಿಲ್ಲಿನಲ್ಲಿ ಕೆಲಸಕ್ಕೆ ಸೇರಿಕೊಂಡರು.
ಕಮಲಾದೇವಿ ಚಟ್ಟೋಪಾಧ್ಯಾಯರ ಪ್ರೋತ್ಸಾಹದಿಂದ ಹ್ಯಾಂಡಿಕ್ರಾಫ್ಟ್ ಬೋರ್ಡಿನಿಂದ ಆರಂಭವಾದ ಟ್ರೈನಿಂಗ್ ಸೆಂಟರ್ ಕಾರಣಾಂತರಗಳಿಂದ ಮುಚ್ಚಿಹೋಗಿದ್ದರೂ (1966) ತಯಾರಾದ ಗೊಂಬೆಗಳು ಸುಸ್ಥಿತಿಯಲ್ಲಿದ್ದವು. ಇಂಥ ಸಂದರ್ಭದಲ್ಲಿ ಮೈಸೂರು ಎಜ್ಯುಕೇಶನಲ್ ಕಲ್ಚರಲ್ ಅಂಡ್ ಸರ್ವಿಸ್ ಕೋ-ಆಫ್ ಸಂಸ್ಥೆಯವರು ಆರ್ಥಿಕ ಸಹಾಯಕ ಮಾಡಿ ಗೊಂಬೆಯಾಟ ತರಬೇತಿ ಕೇಂದ್ರ ನಡೆಸುವಂತೆ ಮಾಡಿದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯೂ ಕೊಂಚ ಆರ್ಥಿಕ ನೆರವು ನೀಡಿತು. ಈ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅಕಾಡೆಮಿ ನೆರವು ನೀಡಲು ಮುಂದೆ ಬಂದರೂ ಕಾರಣಾಂತರಗಳಿಂದ ಕಾಮತರು ಅದನ್ನು ಸ್ವೀಕರಿಸಲಿಲ್ಲ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ದೆಹಲಿಯಲ್ಲಿ ನಡೆಸಿದ ಮುಖವಾಡ ಮತ್ತು ಗೊಂಬೆಗಳ ಉತ್ಸವಕ್ಕೆ ಕೊಗ್ಗ ಕಾಮತರನ್ನು ಆಹ್ವಾನಿಸಿತ್ತು (1972). ಅದೇ ವರ್ಷ ರಾಜ್ಯ ಸಾಹಿತ್ಯ ಅಕಾಡೆಮಿಯ ಸಹಕಾರದಿಂದ ಶಿವರಾಮ ಕಾರಂತರು ಏರ್ಪಡಿಸಿದ ಗೊಂಬೆಗಳ ಉತ್ಸವದಲ್ಲಿ ಭಾಗವಹಿಸಿ ಇವರು ಪ್ರಥಮ ಬಹುಮಾನ ಪಡೆದರು. ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿಯಲ್ಲಿ ವಿಚಾರಗೋಷ್ಠಿ ಏರ್ಪಡಿಸಿದಾಗ (1972), ಇವರ ಗೊಂಬೆಯಾಟ ಪ್ರದರ್ಶನಗೊಂಡಿತು. ಮುಂಬಯಿಯ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆಟ್ರ್ಸ್ ಸಂಸ್ಥೆ ಇವರನ್ನು ಆಮಂತ್ರಿಸಿ ಪ್ರದರ್ಶನ ಏರ್ಪಡಿಸಿದಾಗ (1976) ದೇಶವಿದೇಶಗಳಿಂದ ಬಂದ ಜನ ಇವರ ಗೊಂಬೆಯಾಟದ ಪ್ರದರ್ಶನ ನೋಡಿ ತಮ್ಮಲ್ಲಿ ಪ್ರದರ್ಶನ ನೀಡಲು ಇವರನ್ನು ಆಹ್ವಾನಿಸಿದರು.
ಕೊಗ್ಗ ಕಾಮತರ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯೊಂದಿಗೆ ಸಂಪರ್ಕ ಹೊಂದಿದ ಕೆ.ಎಸ್. ಉಪಾಧ್ಯಾಯರ ಮೂಲಕ ಇವರು ಯುರೋಪ್ ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡಿ ಅಪಾರ ಜನಪ್ರಿಯತೆ ಗಳಿಸಿದರು (1978-79). ಫ್ರಾನ್ಸಿನ ರೆನ್ನೆಯಲ್ಲಿ ನಡೆದ ಐದನೆಯ ಸಾಂಪ್ರದಾಯಿಕ ಕಲೆಗಳ ಉತ್ಸವದಲ್ಲಿ ಕಾಮತರು ಪಾಲ್ಗೊಂಡರು (1978). ಪ್ಯಾರಿಸ್ ನಗರವೂ ಸೇರಿದಂತೆ ಫ್ರಾನ್ಸಿನ ಪ್ರಮುಖ ನಗರಗಳಲ್ಲಿ ಪ್ರದರ್ಶನ ನೀಡಿ ಭಾರತದ ಈ ಕಲೆಗೆ ಪ್ರತಿಷ್ಠೆ ತಂದುಕೊಟ್ಟರು. ಮೊದಲ ವಿದೇಶ ಯಾತ್ರೆಯಲ್ಲಿ ಜಯಭೇರಿ ಬಾರಿಸಿದ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯನ್ನು ಫ್ರಾನ್ಸ್ ಮತ್ತೊಮ್ಮೆ ಆಹ್ವಾನಿಸಿ ಫ್ರಾನ್ಸಿನ ಲೀಲೆ ಉತ್ಸವದಲ್ಲಿ ಭಾಗವಹಿಸುವಂತೆ ಮಾಡಿದ್ದಲ್ಲದೆ ಇನ್ನೂ ಅನೇಕ ಕಡೆ ಪ್ರದರ್ಶನ ಏರ್ಪಡಿಸಿತು (1979).ದಿ ರಾಯಲ್ ಡ್ರಾಪಿಕಲ್ ಇನ್ಸ್ಟಿಟ್ಯೂಟ್ ಆಫ್ ಆಮ್ಸ್ಟರ್ಡ್ಯಾಮ್, ಹಾಲೆಂಡ್ ಎಂಬ ಸಂಸ್ಥೆ ಈ ಯಕ್ಷಗಾನ ಗೊಂಬೆಯಾಟ ಮಂಡಳಿಯನ್ನು ಆಹ್ವಾನಿಸಿ ಆಮ್ಸ್ಟರ್ ಡ್ಯಾಮ್ ಮತ್ತು ಬ್ರಿಡಾಗಳಲ್ಲಿ ಪ್ರದರ್ಶನ ಏರ್ಪಡಿಸಿತ್ತು.
ಯಕ್ಷಗಾನ ಗೊಂಬೆಯಾಟವನ್ನು ಜನಪ್ರಿಯಗೊಳಿಸಿದ ಇವರಿಗೆ ಅನೇಕ ಗೌರವ ಪ್ರಶಸ್ತಿಗಳು ಲಭಿಸಿವೆ. ಅವುಗಳಲ್ಲಿ ಮುಖ್ಯವಾದವು- ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1979), ರಾಜ್ಯೋತ್ಸವ ಪ್ರಶಸ್ತಿ (1985), ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಠಿತ ತುಳಸಿ ಸಮ್ಮಾನ್ (1995). ಕು.ಶಿ. ಹರಿದಾಸಭಟ್ಟರು ಕೊಗ್ಗ ಕಾಮತರ ಗೊಂಬೆಗಳು ಎಂಬ ಪುಸ್ತಕ ಬರೆದಿದ್ದಾರೆ. ಕಾಮತರು ಸ್ವತಃ ತಯಾರಿಸುತ್ತಿದ್ದ ಗೊಂಬೆಗಳಿಗೂ ಬೇಡಿಕೆಯಿತ್ತು. ಈ ಗೊಂಬೆಗಳು ದೇಶ ವಿದೇಶದ ಅನೇಕ ವಸ್ತು ಸಂಗ್ರಹಾಲಯಗಳನ್ನಲಂಕರಿಸಿವೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಈ ಕಲೆಯ ಬೆನ್ನು ಬಿಡದೆ ಶ್ರೀಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯನ್ನು ಬದುಕಿಸಿಕೊಂಡು ಬಂದರು. ಲಕ್ಷ್ಮೀದೇವಿ ಇವರ ಪತ್ನಿ. ಈ ದಂಪತಿಗಳಿಗೆ ಒಬ್ಬ ಮಗ, ನಾಲ್ವರು ಹೆಣ್ಣು ಮಕ್ಕಳು. ಕೊಗ್ಗ ಕಾಮತರು 2003 ಆಗಸ್ಟ್ 27ರಂದು ನಿಧನರಾದರು. ಕೊಗ್ಗ ಕಾಮತರ ಮಗ ಭಾಸ್ಕರ ಕಾಮತರು ತಮ್ಮ ತಂದೆಯ ಕಲೆಯನ್ನು ಮುಂದುವರಿಸಿಕೊಂಡು ಬಂದರು.
This article uses material from the Wikipedia ಕನ್ನಡ article ಉಪ್ಪಿನ ಕುದುರು ಕೊಗ್ಗ ಕಾಮತ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.