ಕು.
ಶಿ. ಹರಿದಾಸ ಭಟ್ಟರು ಮಾರ್ಚ ೧೭, ೧೯೨೪ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಶಿವಗೋಪಾಲ ಭಟ್ಟರು ಗದಗ ಪಟ್ಟಣದಲ್ಲಿ ಚಹದಂಗಡಿಯನ್ನು ನಡೆಯಿಸುತ್ತಿದ್ದರು.
ಕು. ಶಿ. ಹರಿದಾಸ ಭಟ್ಟ | |
---|---|
ಜನನ | ಮಾರ್ಚ್ ೧೭, ೧೯೨೪ ಉಡುಪಿ |
ಮರಣ | ಆಗಸ್ಟ್ ೨೦, ೨೦೦೦ |
ವೃತ್ತಿ | ಅಧ್ಯಾಪನ ಮತ್ತು ಸಾಹಿತ್ಯ ರಚನೆ |
ವಿಷಯ | ಕನ್ನಡ ಸಾಹಿತ್ಯ |
ಹರಿದಾಸ ಭಟ್ಟರ ಆರಂಭದ ಶಿಕ್ಷಣ ಕಡಿಯಾಳಿನಲ್ಲಾಯಿತು. ಅಲ್ಲಿಂದ ಉಡುಪಿ ಬೋರ್ಡ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಯಿತು. ಬಡತನದಿಂದಾಗಿ ಕಾಲೇಜಿಗೆ ಹೋಗಲಾಗಲಿಲ್ಲ.ಮಂಗಳೂರಿನಲ್ಲಿ ಎರಡು ವರ್ಷದ ಶಿಕ್ಷಕರ ತರಬೇತಿ ಪಡೆದರು ಅದೇ ಸಮಯದಲ್ಲಿಯೆ 'ಕನ್ನಡ ಜಾಣ' ಹಾಗು ಹಿಂದಿ ಪರೀಕ್ಷೆಗಳಲ್ಲಿಯೂ ಸಹ ಉತ್ತೀರ್ಣರಾದರು. ಮದ್ರಾಸ ವಿಶ್ವವಿದ್ಯಾಲಯದಿಂದ ಕನ್ನಡ ಹಾಗು ಸಂಸ್ಕೃತ 'ವಿದ್ವಾನ್' ಪದವಿ ಪಡೆದರು. ೧೯೪೬ ರಲ್ಲಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿಗೆ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಸೇರಿಕೊಂಡರು. ೧೯೪೯ರಲ್ಲಿ ಬಿ.ಏ.(ಆನರ್ಸ್) ಪದವಿ ಪಡೆದರು.
ಮದರಾಸಿಗೆ (ಈಗಿನ ಚೆನ್ನೈಗೆ) ಕಲಿಯಲು ಹೋಗುವದಕ್ಕೆ ಮೊದಲು ೧೯೪೨ ರಲ್ಲಿ ಹರಿದಾಸ ಭಟ್ಟರು ಕಡಿಯಾಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಕಾಲೇಜು ಶಿಕ್ಷಣಕ್ಕಾಗಿ ಈ ಕೆಲಸ ತ್ಯಜಿಸಿದ ಹರಿದಾಸ ಭಟ್ಟರು, ಬಿ.ಏ. ಪದವಿಯನ್ನು ಪಡೆದ ಬಳಿಕ ೧೯೫೦ ರಲ್ಲಿ ಮಹಾತ್ಮಾ ಗಾಂಧಿ ಮೆಮೊರಿಯಲ್ ಕಾಲೇಜ್ ದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ಈ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ಮುಂದೆ ಅದೇ ಕಾಲೇಜಿನ ಪ್ರಾಂಶುಪಾಲರಾಗಿದ್ದ ಭಟ್ಟರ ಗರಡಿಯಲ್ಲಿ ಪಳಗಿದ ಸಾವಿರಾರು ವಿದ್ಯಾರ್ಥಿಗಳು, ತಾವು ಭಟ್ಟರ ವಿದ್ಯಾರ್ಥಿಗಳೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾರೆ.
ಉಡುಪಿಯಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹರಿದಾಸ ಭಟ್ಟರು ಕೇಂದ್ರಬಿಂದುವಾದರು. ಸಾಹಿತ್ಯ,ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಶೋಧನೆಗಳಿಗೆ ಸೂಕ್ತವಾದ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಮುಖ್ಯವಾಗಿ ಯಕ್ಶಗಾನ ಕೇಂದ್ರ, ರಾ.ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ ಇವೆಲ್ಲವುಗಳ ಜೊತೆ ಜೊತೆಯಲ್ಲಿ ಸಮ್ಮೇಳನ, ರಂಗಪ್ರಯೋಗ ಮೊದಲಾದವುಗಳು ಹರಿದಾಸ ಭಟ್ಟರ ನೆರವಿನಿಂದಾಗಿ ಕಳೆಗೊಂಡವು. ಯಕ್ಷಗಾನ ಕಲೆಯನ್ನು ಕಡಲಾಚೆಯಲ್ಲೂ ಹರಡಲು ರಷ್ಯಾ, ಜರ್ಮನಿ, ಬ್ರಿಟನ್ ಹಾಗೂ ಅಮೆರಿಕೆಗಳಿಗೆ ಭಾರತದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಪ್ರವಾಸ ಮಾಡಿದ್ದರು.
ಕರ್ನಾಟಕದ ಜಾನಪದ ಕಲೆಯನ್ನು ವಿಶ್ವಾದ್ಯಂತ ಪರಿಚಯಿಸಿ, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಭಟ್ಟರಿಗೆ ಸಲ್ಲುತ್ತದೆ. ೧೯೮೮-೮೯ರ ಸಾಲಿನಲ್ಲಿ ಅಮೆರಿಕದ ಫೋರ್ಡ್ ಫೌಂಡೇಷನ್ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನ ವಿಶ್ವದ ಗಮನವನ್ನೇ ಸೆಳೆಯಿತು.
ಈ ಎಲ್ಲ ಚಟುವಟಿಕೆಗಳ ನಡುವೆಯೂ ಬಹುಮುಖ ವ್ಯಕ್ತಿತ್ವವನ್ನು ಕಾಯ್ದುಕೊಂಡ ಹರಿದಾಸ ಭಟ್ಟರು ಗದ್ಯ ಲೇಖಕರೆಂದೇ ಹೆಸರಾದವರು. ಇವರ ಪ್ರಬಂಧಗಳಲ್ಲಂತೂ ವೈಶಿಷ್ಟ್ಯ ಪೂರ್ಣ ವೈವಿಧ್ಯತೆಯನ್ನು ಕಾಣಬಹುದು.೧೯೫೦ರಲ್ಲಿ ಭಟ್ಟರು ಬರೆದ ‘ಅರ್ಥಶಾಸ್ತ್ರ ’ ಅವರ ಮೊದಲ ಶಾಸ್ತ್ರೀಯ ಗ್ರಂಥ. ಕಾದಂಬರಿ, ಕತೆ, ಕವನ, ಇತಿಹಾಸ, ಸಂಶೋಧನೆ ಹೀಗೆ ಎಲ್ಲ ಪ್ರಕಾರಗಳಲ್ಲೂ ಕೃತಿ ರಚಿಸಿರುವ ಭಟ್ಟರು ೩೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಆರು ಬೃಹತ್ ಸಂಪುಟಗಳಲ್ಲಿ ಪ್ರಕಟವಾದ ತುಳು ನಿಘಂಟಿನ ಸಂಪಾದಕರಾಗಿದ್ದರು.
ಕು.ಶಿ.ಹರಿದಾಸ ಭಟ್ಟರು ಬರೆದ ಕೆ.ಕೆ.ಹೆಬ್ಬಾರ ರವರ ಜೀವನ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೧೯೮೮ನೆಯ ಸಾಲಿನ ಬಹುಮಾನ ಲಭಿಸಿದೆ. ಇದಲ್ಲದೆ ೧೯೮೫ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೮೬ರಲ್ಲಿ ಫಿನ್ಲ್ಯಾಂಡ್ಪ್ರಶಸ್ತಿ ಹಾಗೂ ೧೯೮೯ರಲ್ಲಿ ಪ್ರತಿಷ್ಠಿತ ವಿಶ್ವ ಮಾನವ ಪ್ರಶಸ್ತಿ ಮುಂತಾದ ಗೌರವಗಳು ಕೂಡಾ ಭಟ್ಟರಿಗೆ ಸಂದಿದ್ದವು.
ಈ ಮಹಾನ್ ಸಾಂಸ್ಕೃತಿಕ ಮಹಾನುಭಾವರು ಆಗಸ್ಟ್ ೨೦, ೨೦೦೦ದಲ್ಲಿ ಈ ಲೋಕವನ್ನಗಲಿದರು. ಅವರು ಉಳಿಸಿ ಹೋಗಿರುವ ಸಾಂಸ್ಕೃತಿಕ ಸೌಗಂಧ ಚಿರಂತನವೆನಿಸಿದೆ.
This article uses material from the Wikipedia ಕನ್ನಡ article ಕು. ಶಿ. ಹರಿದಾಸ ಭಟ್ಟ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.