ಸಾರಾ ಅಬೂಬಕ್ಕರ್

ಸಾರಾ ಅಬೂಬಕ್ಕರ್ (ಜೂನ್ ೩೦, ೧೯೩೬ - ಜನವರಿ ೧೦, ೨೦೨೩) ಕನ್ನಡದ ಕಥೆಗಾರ್ತಿ, ಕಾದಂಬರಿಗಾರ್ತಿ ಮತ್ತು ಮಹಿಳಾ ಸಂವೇದನೆಯ ಪ್ರಮುಖ ಲೇಖಕಿಯಾಗಿದ್ದರು.

ಸಾರಾ ಅಬೂಬಕ್ಕರ್
ಜನನಸಾರಾ
ಜೂನ್ ೩೦, ೧೯೩೬
ಕಾಸರಗೋಡು
ಮರಣಜನವರಿ ೧೦, ೨೦೨೩
ಮಂಗಳೂರು
ಭಾಷೆಕನ್ನಡ

ಜನನ, ಜೀವನ

ಸಾರಾ ಅಬೂಬಕ್ಕರ್ ಅವರು ಜೂನ್ ೩೦, ೧೯೩೬ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಮತ್ತು ತಾಯಿ ಜೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ನೆರವೇರಿತು. ಮುಂದೆ ಅವರು ಹೈಸ್ಕೂಲಿನವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಅರೇಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ ಅವರ ಬಾಲ್ಯದಲ್ಲೇ ಮೂಡಿಬಂದಿತ್ತು. ಎಂಜಿನಿಯರ್ ಆಗಿ ನೌಕರಿಯಲ್ಲಿದ್ದ ಅಬೂಬಕ್ಕರ್‌ ಅವರನ್ನು ಸಾರಾ ಅವರು ವಿವಾಹವಾದರು. ಮದುವೆಯ ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುರೆಸಲು ಅಸಾಧ್ಯವಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಎಸ್ ಎಲ್ ಭೈರಪ್ಪ, ಅನಂತಮೂರ್ತಿ ಇವರ ಬರವಣಿಗೆಗೆ ಮಾರುಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಜೊತೆಗೆ ಮನೋವಿಜ್ಞಾನವನ್ನು ಆಧರಿಸಿ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ ಆಕರ್ಷಣೆ ಹುಟ್ಟಿಸಿದವು.

ತಾನು ಬದುಕುತ್ತಿದ್ದ ಸುತ್ತಮುತ್ತಲಿನ ಪರಿಸರದಲ್ಲಿ ಮನೋವ್ಯಾಕುಲತೆಗೊಳಗಾಗುತ್ತಿದ್ದ ಬಹಳಷ್ಟು ಸಹ ಧರ್ಮೀಯರ ಕುರಿತು ಸಾರಾ ಅವರ ಮನಸ್ಸು ನಿರಂತರವಾಗಿ ಮಿಡಿಯುತ್ತಿತ್ತು. ತಲಾಕ್ ಸಂಪ್ರದಾಯ, ಮಕ್ಕಳಾದ ನಂತರದ ಅಸಹನೀಯ ಬದುಕು ಇವೆಲ್ಲಾ ಅವರನ್ನು ಕಾಡುತ್ತಿದ್ದವು.

ಕೃತಿಗಳು

ಕಾದಂಬರಿ

ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್‌ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಲ್ಲಿ ಬರೆಯಬೇಕೆಂಬ ಅಂತರಾಳದ ಒತ್ತಡ ನಿರಂತರವಾಗಿ ಹೊರಹೊಮ್ಮುತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ದ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಡೆಯು ಮೆಚ್ಚುಗೆ ಪಡೆಯಿತು. ಆ ನಂತರದಲ್ಲಿ ಸಾ.ರಾ.ಅಬೂಬಕ್ಕರ್ ಅವರು ಬರೆದ ಇತರ ಹಲವಾರು ಕಾದಂಬರಿಗಳೆಂದರೆ:

  1. ಚಂದ್ರಗಿರಿಯ ತೀರದಲ್ಲಿ- ೧೯೮೪
  2. ಸಹನಾ, - ೧೯೮೫
  3. ವಜ್ರಗಳು,
  4. ಕದನವಿರಾಮ, - ೧೯೮೮
  5. ಸುಳಿಯಲ್ಲಿ ಸಿಕ್ಕವರು,೧೯೯೪
  6. ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨),
  7. ತಳ ಒಡೆದ ದೋಣಿ, ೧೯೯೭
  8. ಪಂಜರ
  9. ಇಳಿಜಾರು
  10. ಕಾಣಿಕೆ

ಕಥಾ ಸಂಕಲನಗಳು

  1. ಚಪ್ಪಲಿಗಳು, ೧೯೮೯
  2. ಪಯಣ ಮತ್ತು ಇತರ ಕಥೆಗಳು,
  3. ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ೧೯೯೨
  4. ಖೆಡ್ಡ .
  5. ಸುಮಯ್ಯಾ (ಜನಪದ ಆಧರಿಸಿದ ಕಥೆಗಳು), ೨೦೦೪
  6. ಗಗನ ಸಖಿ, ೨೦೦೭

ಬಾನುಲಿ ನಾಟಕಗಳು

  1. ಕಮರಿದ ಕನಸು.
  2. ಮಗಳು ಹುಟ್ಟಿದಳು.
  3. ತೇಲಾಡುವ ಮೋಡಗಳು.
  4. ತಾಳ.
  5. ಹೀಗೂ ಒಂದು ಬದುಕು.

ಲೇಖನ ಮತ್ತು ಅನುವಾದಗಳು

  1. ಲೇಖನ ಗುಚ್ಛ.
  2. ಮನೋಮಿ,
  3. ಬಲೆ,
  4. ನಾನಿನ್ನು ನಿದ್ರಿಸುವೆ (ಕಾದಂಬರಿಗಳು).

ಪ್ರವಾಸಕಥನ

  1. ಐಷಾರಾಮದ ಆಳದಲ್ಲಿ.

ಪ್ರಶಸ್ತಿ ಗೌರವಗಳು

  1. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
  2. ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ.
  3. ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ.
  4. ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ.
  5. ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು
  6. ಸಂದೇಶ ಪ್ರಶಸ್ತಿ.
  7. ಅನುಪಮ ಪ್ರಶಸ್ತಿ.
  8. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
  9. ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ.
  10. ಮಾಸ್ತಿ ಪ್ರಶಸ್ತಿ.
  11. ನೃಪತುಂಗ ಪ್ರಶಸ್ತಿ.
  12. ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಪ್ರಶಸ್ತಿ

ಮುಂತಾದ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.

ಮುಕ್ತ ಮನೋಭಾವ

ತಮ್ಮಲ್ಲಿ ಮೂಡಿಬಂದ ಮುಕ್ತ ಮಾನೋಭಾವದ ಬಗ್ಗೆ ಸಾರಾ ಅಬೂಬಕ್ಕರ್ ಹೀಗೆ ಹೇಳುತ್ತಾರೆ: “ನನ್ನ ಅಜ್ಜ ಪುಡಿಯಾಪುರ ಮಹಮದ್ ಅವರು ಕೇರಳದ ಕಾಸರಗೋಡಿನಲ್ಲಿ ಕೃಷಿಕರಾಗಿದ್ದರು. ಹಳೆಯ ಕಾಲದವರಾಗಿದ್ದರೂ ಪ್ರಗತಿಪರ ಧೋರಣೆ ಹೊಂದಿದ್ದರು. ಅವರ ಕಾಲದಲ್ಲೇ ಮಹಿಳಾ ಸ್ವಾತಂತ್ರ್ಯದ ಕನಸು ಕಂಡಿದ್ದರು. ನನ್ನ ತಂದೆ ಪುಡಿಯಾಪುರ ಅಹಮದ್ ವಕೀಲರಾಗಿದ್ದುಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿದ್ದರು. ಏನನ್ನೇ ಆದರೂ ಪ್ರಶ್ನಿಸದೇ ಒಪ್ಪಿಕೊಳ್ಳಬಾರದು ಎಂಬ ಪಾಠ ನನಗೆ ಹೇಳಿಕೊಟ್ಟರು. ನನ್ನನ್ನು ಶಾಲೆಗೆ ಸೇರಿಸಿ ಓದಿಸಿದರು. ಹಾಗಾಗಿ ನಾನು ಪ್ರತಿಯೊಂದನ್ನೂ ಪ್ರಶ್ನಿಸಲು ಆರಂಭಿಸಿದೆ. ಮುಸ್ಲಿಂ ಮಹಿಳೆಗೆ ಪ್ರತಿನಿತ್ಯ ಆಗುವ ಶೋಷಣೆ, ಅವಮಾನಗಳನ್ನು ನನಗೆ ಸಹಿಸಲಾಗಲಿಲ್ಲ. ಅದನ್ನು ಲೇಖನಿಯ ಮೂಲಕ ಬಿಚ್ಚಿಟ್ಟೆ. ನಾನು ಓದಿದ್ದು ಮೆಟ್ರಿಕ್‌ವರೆಗೆ ಮಾತ್ರ (11ನೇ ತರಗತಿ) ನನ್ನನ್ನು ಮತ್ತಷ್ಟು ಓದಿಸಬೇಕು ಎಂಬ ಆಸೆ ತಂದೆಗೆ ಇತ್ತು. ಆದರೆ ಅಂದಿನ ಸಮಾಜ ಮುಸ್ಲಿಂ ಹೆಣ್ಣು ಮಕ್ಕಳು ಓದುವುದನ್ನು ಸಹಿಸುತ್ತಿರಲಿಲ್ಲ. ಹಾಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಲೇಬೇಕು, ಇದಕ್ಕಾಗಿ ಹೋರಾಡಬೇಕು ಎಂದು ನಾನು ಆಗಲೇ ನಿರ್ಧರಿಸಿಕೊಂಡೆ.”

ಹೆಣ್ಣು ಮಕ್ಕಳಿಗೆ ಶಿಕ್ಷಣ

ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕೆಂದು ನಿರಂತರವಾಗಿ ಪ್ರತಿಪಾದಿಸುವ ಸಾರಾ ಅಬೂಬಕ್ಕರ್ “ಹೆಣ್ಣು ಮಕ್ಕಳು ಪ್ರಾಣಿಗಳು, ಹೆರಲು ಇರುವ ಯಂತ್ರಗಳು ಎಂದು ಬಿಂಬಿಸಿರುವ ಸಮಾಜ ನಮ್ಮದು. ಇಸ್ಲಾಂನ ಮೂಲದಲ್ಲಿ ಹೆಣ್ಣಿಗೆ ಅಪಾರ ಗೌರವವಿವೆ. ಆದರೆ ಸೌದಿ ಅರೇಬಿಯಾ ಮೂಲದ `ವಹಾಬಿಸಂ’ ಅನ್ನು ಮುಂದಿಟ್ಟುಕೊಂಡು ಈಗೀಗ ವಿಶ್ವದ ನಾನಾ ಭಾಗಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂದೆಲ್ಲಾ ವಾದಿಸುತ್ತಿದ್ದಾರೆ. ಮಹಿಳೆಗೆ ಶಿಕ್ಷಣ ಸಿಗಬೇಕು. ಅದರಲ್ಲೂ ತಾಯಂದಿರಿಗೆ ಅಕ್ಷರ ಜ್ಞಾನ ಬೇಕು. ಆದರೆ ಕೇರಳ, ಕರ್ನಾಟಕ ಕರಾವಳಿ ಭಾಗದ ಬಹುತೇಕ ಮುಸ್ಲಿಂ ಕುಟುಂಬಗಳಲ್ಲಿನ ತಾಯಂದಿರಿಗೆ ಶಿಕ್ಷಣ ಇಲ್ಲ. ಎಲ್ಲೋ ದೂರದ ದುಬೈನಲ್ಲೋ, ಮತ್ತೊಂದೆಡೆಯೋ ಕುಳಿತ ಪತಿ ಹಣ ಕಳುಹಿಸುತ್ತಾನೆ. ಅದನ್ನು ಮಕ್ಕಳು ಮಜಾ ಮಾಡುತ್ತಾರೆ. ಹಣವನ್ನು ಸರಿಯಾಗಿ ನಿರ್ವಹಿಸಲೂ ಬಾರದ ಮಕ್ಕಳು ಕುಟುಂಬ ಸಮೇತ ಹಾಳಾಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಮಹಿಳೆಯನ್ನು ಶಿಕ್ಷಣದಿಂದ ವಂಚಿಸುವುದು ಸರಿಯಲ್ಲ.” ಎಂದು ಸ್ಪಷ್ಟಪಡಿಸುತ್ತಾರೆ.

ಮರಣ

ಸಾರಾ ಅಬೂಬಕರ್ ಜನವರಿ ೧೦,೨೦೨೩ರಂದು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ನಿಧನರಾದರು. ಸಾರಾ ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು.

ಹೊರಸಂಪರ್ಕ ಕೊಂಡಿಗಳು

ಉಲ್ಲೇಖ

Tags:

ಸಾರಾ ಅಬೂಬಕ್ಕರ್ ಜನನ, ಜೀವನಸಾರಾ ಅಬೂಬಕ್ಕರ್ ಕೃತಿಗಳುಸಾರಾ ಅಬೂಬಕ್ಕರ್ ಪ್ರಶಸ್ತಿ ಗೌರವಗಳುಸಾರಾ ಅಬೂಬಕ್ಕರ್ ಮುಕ್ತ ಮನೋಭಾವಸಾರಾ ಅಬೂಬಕ್ಕರ್ ಹೆಣ್ಣು ಮಕ್ಕಳಿಗೆ ಶಿಕ್ಷಣಸಾರಾ ಅಬೂಬಕ್ಕರ್ ಮರಣಸಾರಾ ಅಬೂಬಕ್ಕರ್ ಹೊರಸಂಪರ್ಕ ಕೊಂಡಿಗಳುಸಾರಾ ಅಬೂಬಕ್ಕರ್ ಉಲ್ಲೇಖಸಾರಾ ಅಬೂಬಕ್ಕರ್ಜೂನ್ ೩೦೧೯೩೬

🔥 Trending searches on Wiki ಕನ್ನಡ:

ದಕ್ಷಿಣ ಕನ್ನಡಸುಭಾಷ್ ಚಂದ್ರ ಬೋಸ್ದೂರದರ್ಶನದಶರಥದೇವನೂರು ಮಹಾದೇವಹುರುಳಿನಾಟಕಅಂತಿಮ ಸಂಸ್ಕಾರರಕ್ತದೊತ್ತಡಕ್ರೀಡೆಗಳುಸಮಾಜಶಾಸ್ತ್ರಕವಿರಾಜಮಾರ್ಗಅಷ್ಟ ಮಠಗಳುಗ್ರಹಭೌಗೋಳಿಕ ಲಕ್ಷಣಗಳುಸತಿ ಪದ್ಧತಿಪ್ರಾಥಮಿಕ ಶಿಕ್ಷಣಅಂತಾರಾಷ್ಟ್ರೀಯ ಸಂಬಂಧಗಳುಭೂಮಿವಿಧಾನಸೌಧಗ್ರೀನ್ ಮಾರ್ಕೆಟಿಂಗ್ಸಿದ್ಧಯ್ಯ ಪುರಾಣಿಕಹೊಯ್ಸಳ ವಾಸ್ತುಶಿಲ್ಪರಾಮ್-ಲೀಲಾ (ಚಲನಚಿತ್ರ)ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಹೊಯ್ಸಳೇಶ್ವರ ದೇವಸ್ಥಾನವಂದನಾ ಶಿವಝಾನ್ಸಿ ರಾಣಿ ಲಕ್ಷ್ಮೀಬಾಯಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೊರೂರು ರಾಮಸ್ವಾಮಿ ಅಯ್ಯಂಗಾರ್ವಿಜಯನಗರ ಸಾಮ್ರಾಜ್ಯಹಾಲುಅಮ್ಮಅಡಿಕೆಶಿವಭಾರತದ ಚುನಾವಣಾ ಆಯೋಗಮಹಾವೀರಮಂಗಳೂರುಕೈಗಾರಿಕಾ ಕ್ರಾಂತಿಕರ್ನಾಟಕದ ಸಂಸ್ಕೃತಿಮೂಲಧಾತುಮೊಘಲ್ ಸಾಮ್ರಾಜ್ಯಗಿರೀಶ್ ಕಾರ್ನಾಡ್ಎಳ್ಳೆಣ್ಣೆತಂತ್ರಜ್ಞಾನಮುಹಮ್ಮದ್ಮಳೆಲೋಕಸಭೆಎ.ಎನ್.ಮೂರ್ತಿರಾವ್ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಸಂಧಿಪುರಂದರದಾಸಹರಿಶ್ಚಂದ್ರಗುರುಜಾಹೀರಾತುಆಂಧ್ರ ಪ್ರದೇಶಷಟ್ಪದಿಪರೀಕ್ಷೆಕರ್ನಾಟಕದ ಇತಿಹಾಸಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿವಿಕ್ರಮಾರ್ಜುನ ವಿಜಯಅರ್ಜುನಪ್ರಜಾವಾಣಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಶಾಂತಲಾ ದೇವಿಬಸವೇಶ್ವರಉಮಾಶ್ರೀಕನ್ನಡ ಸಾಹಿತ್ಯರಾಷ್ಟ್ರಕವಿಜಶ್ತ್ವ ಸಂಧಿರಾಮ ಮಂದಿರ, ಅಯೋಧ್ಯೆಬೆಡಗುಭಾರತದ ಪ್ರಧಾನ ಮಂತ್ರಿನುಗ್ಗೆಕಾಯಿಇರಾನ್ನರೇಂದ್ರ ಮೋದಿಪು. ತಿ. ನರಸಿಂಹಾಚಾರ್ಯಕ್ಷಗಾನಒಕ್ಕಲಿಗ🡆 More