ಕನ್ನಡ ಸಾರಸ್ವತ ಲೋಕದಲ್ಲಿ 'ಹಂಪನಾ' ಎಂದೇ ಚಿರಪರಿಚಿತರಾಗಿರುವ ಹಂ ಪ ನಾಗರಾಜಯ್ಯನವರು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಎಂಬ ಗ್ರಾಮದಲ್ಲಿ ಶಾನುಬೋಗ ಪದ್ಮನಾಭಯ್ಯ ಮತ್ತು ಪದ್ಮಾವತಮ್ಮ ನವರ ಮಗನಾಗಿ ಅಕ್ಟೋಬರ್ ೭, ೧೯೩೬ರಲ್ಲಿ ಜನಿಸಿದರು. ತಂದೆಯವರು ಮನೆಯಲ್ಲಿ ನಡೆಸುತ್ತಿದ್ದ ವಿದ್ವತ್ಪೂರ್ಣ ಪ್ರವಚನಗಳು ಹಂಪನಾ ಅವರ ಮೇಲೆ ಅಪಾರ ಪ್ರಭಾವ ಬೀರಿದ್ದವು.
ಹಂ ಪ ನಾಗರಾಜಯ್ಯನವರು ಮಂಡ್ಯ, ಗೌರಿಬಿದನೂರು, ಮಧುಗಿರಿ, ತುಮಕೂರುಗಳಲ್ಲಿ ಕಾಲೇಜುವರೆಗಿನ ವಿದ್ಯಾಭ್ಯಾಸ ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದು ಎಂ.ಎ. ವ್ಯಾಸಂಗಕ್ಕೆ ಸೇರಿ ಕುವೆಂಪು, ತೀನಂಶ್ರೀ, ಡಿ. ಎಲ್. ನರಸಿಂಹಾಚಾರ್, ಎಸ್. ವಿ. ಪರಮೇಶ್ವರಭಟ್ಟ, ಕೆ. ವೆಂಕಟರಾಮಪ್ಪ, ದೇಜಗೌ ಮುಂತಾದ ಸಾಹಿತ್ಯಿಕ ದಿಗ್ಗಜಗಳ ನೆರಳಿನಲ್ಲಿ ಸ್ಫೂರ್ತಿ ಪಡೆದರು. ಮೈಸೂರು ವಿ.ವಿ ಯಿಂದ ಎಂಎ ಪದವಿಯನ್ನೂ, ವಡ್ಡಾರಾಧನೆ ಸಮಗ್ರ ಅಧ್ಯಯನಕ್ಕಾಗಿ ಬೆಂಗಳೂರು ವಿ.ವಿ ಯಿಂದ ಡಾಕ್ಟರೇಟ್ ಪದವಿಯನ್ನು ಪಡೆದರು.
ವೃತ್ತಿ
೧೯೫೯ರಿಂದ ೧೯೭೦ರವರೆಗೆ ಮೈಸೂರಿನ ಮಹಾರಾಣಿ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮಂಡ್ಯ, ದಾವಣಗೆರೆ, ಬೆಂಗಳೂರಿನ ಕಾಲೇಜುಗಳಲ್ಲಿ ಪದವಿ ತರಗತಿಗಳಲ್ಲಿ ಕನ್ನಡ ವಿಷಯವನ್ನು ಬೋಧಿಸಿದ ಇವರು ೧೯೭೦ರಿಂದ ೧೯೯೬ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ವೃತ್ತಿ ಕೈಗೊಂಡು ಸ್ನಾತಕೋತ್ತರರಿಗೆ ಬೋಧಿಸಿದರು. ಬೆಂಗಳೂರು ವಿವಿಯಲ್ಲಿರುವಾಗಲೇ ಕಲಾವಿಭಾಗದ ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ದುಡಿದರು. ವಿವಿಧ ಅವಧಿಗಳಲ್ಲಿ ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಪ್ರವೃತ್ತಿ
ನಾಡಿನ ಪರಮೋಚ್ಛ ಸಾಹಿತ್ಯ ದೇಗುಲವಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ೧೯೭೮ರಿಂದ ೧೯೮೬ರ ದೀರ್ಘ ಅವಧಿಗೆ ಇವರು ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ ೧೯೬೬ರಿಂದ ೧೯೭೪ರ ಅವಧಿಯಲ್ಲಿ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ತಮ್ಮ ಅಧ್ಯಕ್ಷತೆ ಅವಧಿಯಲ್ಲಿ ಕನ್ನಡದ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಲೇಖಕರ ಸುಮಾರು ಮುನ್ನೂರು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು.
ಹಾಗೆಯೇ ಯುನೆಸ್ಕೋದವರು ೧೯೭೯ನೇ ವರ್ಷವನ್ನು ಅಂತರಾಷ್ಟ್ರೀಯ ಮಕ್ಕಳ ವರ್ಷವೆಂದು ಘೋಷಿಸಿದಾಗ ಶಿಶುಸಾಹಿತ್ಯದ ಸುಮಾರು ಇನ್ನೂರು ಪುಸ್ತಕಗಳನ್ನು ಪ್ರಕಟಿಸಿದರು. ಇದೇ ಅವಧಿಯಲ್ಲಿ ಕೃಷ್ಣರಾಜ ಪರಿಷನ್ಮಂದಿರದ ಆವರಣದಲ್ಲಿ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಭವನ ತಲೆಯೆತ್ತಿತು.
ದೇಶವಿದೇಶಗಳಲ್ಲಿ ನಡೆದ ಹತ್ತಾರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದಾರೆ. ಟೊರೆಂಟೊ, ಬುಡಾಪೆಸ್ಟ್, ಮಾಂಟ್ರಿಯಲ್, ಲಂಡನ್, ನವದೆಹಲಿ ಹಾಗೂ ಕೊಲ್ಕತ್ತಗಳಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಪಾಲುಗೊಂಡಿದ್ದಾರೆ.
ಸಾರ್ಥಕ ಜೀವನ
ಅವರ ಪತ್ನಿ ಕಮಲಾ ಹಂಪನಾ ಅವರೂ ಸಾಹಿತ್ಯವೇತ್ತರು, ಉತ್ತಮ ವಾಗ್ಮಿಗಳು ಹಾಗೂ ನಾಡೋಜ ಪ್ರಶಸ್ತಿಗೆ ಭಾಜನರಾದವರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಹಂಪನಾ ಅವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಸಾಹಿತ್ಯ ಲೋಕದಲ್ಲಿ ಅವಿರತವಾಗಿ ದುಡಿದಿದ್ದಾರೆ. ಕನ್ನಡದ ಮಹಾನ್ ಶಿಕ್ಷಕ ಪರಂಪರೆಯನ್ನು ಪೋಷಿಸಿ ಅದನ್ನು ಮುಂದಿನ ಪೀಳಿಗೆಗೆ ದಾಟಿಸಿದ ಹಿರಿಮೆ ಇವರದು. ಯಾವುದೇ ಲಾಬಿಗಳನ್ನು ಒಣಸಿದ್ಧಾಂತಗಳನ್ನು ಎಂದೂ ತಮ್ಮ ವಿದ್ಯಾರ್ಥಿಗಳ ಮೇಲೆ ಹೇರಿದವರಲ್ಲ.
ನಾಗೇಂದ್ರಪ್ಪ ದಾಗಿನಕಟ್ಟೆ ಹಾಗೂ ಬಾಳೇಶ ಲಕ್ಸೆಟ್ಟಿ ಅವರು ಪ್ರತ್ಯೇಕವಾಗಿ ಹಂಪನಾ ಜೀವನಚರಿತ್ರೆಯನ್ನು ದಾಖಲಿಸಿದ್ದಾರೆ. ಹಂಪನಾ ಕೃತಿಗಳ ಅಧ್ಯಯನವನ್ನು ಸಂಶೋಧನಾ ವಿಷಯವನ್ನಾಗಿ ತೆಗೆದುಕೊಂಡು ಕಲಬುರ್ಗಿ ವಿವಿಯಲ್ಲಿ ಡಾ ಚೆನ್ನಣ್ಣ ವಾಲೀಕಾರ ಅವರ ಮಾರ್ಗದರ್ಶನದಲ್ಲಿ ಡಾ. ನಾಗಪ್ಪ ಚಲವಾದಿಯವರು ಡಾಕ್ಟರೆಟ್ ಪಡೆದಿದ್ದಾರೆ.
ಹಂಪನಾ ಅವರು ವಿಶೇಷವಾಗಿ ಅವರು ಶ್ರಮಣ ಪರಂಪರೆಯನ್ನು ಕನ್ನಡಿಗರ ಮುಂದೆ ತೆರೆದಿಟ್ಟರು. ಅದಕ್ಕಾಗಿ ಅವರು ಪಾಲಿ ಪ್ರಾಕೃತಗಳ ಮೂಲಕ ನಮ್ಮ ದೇಶದ ಪ್ರಾಚೀನ ಲೋಕದರ್ಶನವನ್ನು ಮಾಡಿಸಿದ್ದಾರೆ. ಕನ್ನಡ ನಾಡಿನಲ್ಲೇ ಅತ್ಯಂತ ಒಳಹುನ್ನಾರದ ಭಾಗವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ ಅಳಿಸಿಹಾಕಿದ್ದ ಒಂದು ಧಾರ್ಮಿಕ ಪರಂಪರೆಯ ಕುರಿತಾದ ಮಾಹಿತಿಯನ್ನು ಸದ್ದಿಲ್ಲದೆ ತುಂಬಿ ಕೊಡುತ್ತಾ ಬಂದಿದ್ದಾರೆ.
ಭಾವಹಿಂಸೆಯೂ ಪಾಪ ಎಂಬ ಪರಂಪರೆಯ ಹಂಪನಾ ಎಂದೂ ಯಾರನ್ನೂ ಕಟುವಾಗಿ ಮಾತನಾಡಿ ನೋಯಿಸಿದವರಲ್ಲ. ಒಟ್ಟಿನಲ್ಲಿ ನಾಡೋಜ ಹಂಪನಾ ಅವರು ಸೃಜನಶೀಲತೆ, ವಿದ್ವತ್ತು, ಸಂಶೋಧನೆ ಮತ್ತು ಭಾಷಾವಿಜ್ಞಾನದ ಅಪಾರ ತಿಳಿವಳಿಕೆಯೊಂದಿಗೆ ಆಡಳಿತಾತ್ಮಕ ಪರಿಣತಿಯೂ ಉಳ್ಳ ಅಪರೂಪದ ವಿದ್ವಾಂಸ.
ಕೃತಿಗಳು
ಸರಸ್ವತಿಯ ಔರಸಪುತ್ರರೋ ಎಂಬಂತೆ ಹಂಪನಾ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಇವರ ಲೇಖನಿಯಿಂದ ೧೧೫ ಪುಸ್ತಕಗಳು ಪ್ರಕಟವಾಗಿದೆ. ಅವನ್ನು ವಿಷಯವಾರು ರೀತ್ಯಾ ವರ್ಗೀಕರಿಸಬಹುದಾದರೆ
This article uses material from the Wikipedia ಕನ್ನಡ article ಹಂ.ಪ.ನಾಗರಾಜಯ್ಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.