ಯುವಾನ್ ಚಾಂಗ್ 600-664.
ಚೀನದ ಬೌದ್ಧ ಯಾಂತ್ರಿಕ ಮತ್ತು ವಿದ್ವಾಂಸ; ಇವನನ್ನು ಹ್ಯೂಯೆನ್ತ್ಸಾಂಗ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಇವನ ಹೆಸರನ್ನು ವಿವಿಧ ರೀತಿಯಲ್ಲಿ ಉಚ್ಚರಿಸಲಾಗಿದೆ. ಭಾರತದಲ್ಲಿ ಇವನನ್ನು ಹ್ಯೂಯೆನ್ ತ್ಸಾಂಗ್ ಎಂದೇ ಕರೆಯಲಾಗುತ್ತದೆ. ಹುಯಾನ್ ಚ್ವಾಂಗ್, ಯುಯೆನ್ ಚ್ವಾಂಗ್ ಮೊದಲಾದ ರೂಪದಲ್ಲೂ ಇವನ ಹೆಸರು ನಮೂದಾಗಿದೆ. ಆದರೆ ಚೀನೀ ಭಾಷೆಯ ಇವನ ಹೆಸರಿನ ಮೂಲ ರೂಪ ಯುವಾನ್ ಚಾಂಗ್.
ಇವನು 600ರಲ್ಲಿ ಚೀನದ ಹೊನನ್ ಪ್ರಾಂತ್ಯದ ಕೌ-ಷಿಕ್ ಎಂಬ ನಗರದ ಸಮೀಪದ ಮೆನ್-ಪಾಪ್-ಕು ಎಂಬ ಹಳ್ಳಿಯಲ್ಲಿ ಹುಟ್ಟಿದ. ಇವನ ತಂದೆ ವೈನ್-ಹುಯಿ ಸುಸಂಸ್ಕೃತ ಮನೆತನಕ್ಕೆ ಸೇರಿದ್ದು ಸ್ವತಃ ವಿದ್ವಾಂಸನಾಗಿದ್ದ. ಇವನ ನಾಲ್ಕು ಜನ ಮಕ್ಕಳಲ್ಲಿ ಯುವಾನ್ ಚಾಂಗ್ ಕೊನೆಯವ.
ಯುವಾನ್ ಚಾಂಗ್ ತನ್ನ ಮೂವತ್ತನೆಯ ವಯಸ್ಸಿನಲ್ಲಿ ಬೌದ್ಧ ಮತಾವಲಂಬಿಯಾದ. ಇವನಿಗೆ ಬಾಲ್ಯದಲ್ಲಿ ಒಳ್ಳೆಯ ಶಿಕ್ಷಣ ದೊರೆತಿದ್ದು ಸೂಕ್ಷ್ಮ ಗ್ರಾಹಿಯೂ ವಾಚಾಳಿಯೂ ಬಹುಶ್ರುತನೂ ಆಗಿದ್ದು ಪಂಡಿತನೆನಿಸಿದ. ಭಾರತಕ್ಕೆ ಹೋಗಿ ಅಲ್ಲಿ ದೊರೆಯುವ ಮೂಲ ಬೌದ್ಧ ಗ್ರಂಥಗಳನ್ನು ಅಭ್ಯಾಸಮಾಡಿ ಬೌದ್ಧಧರ್ಮದ ಸೂಕ್ಷ್ಮಾತಿಸೂಕ್ಷ್ಮ ತತ್ತ್ವಗಳನ್ನು ತಿಳಿದು ತನ್ನ ದೇಶದ ಜನರಲ್ಲಿ ಅವನ್ನು ಪ್ರಚುರಪಡಿಸಬೇಕೆಂಬುದು ಇವನ ಹಂಬಲವಾಗಿತ್ತು. ಇವನು ಭಾರತಕ್ಕೆ ಪ್ರಯಾಣ ಬೆಳಸಲು ಅಲ್ಲಿನ ರಾಜನಿಂದ ಪ್ರೋತ್ಸಾಹ ದೊರೆಯದಿದ್ದರೂ ಸ್ವಂತ ಸಾಹಸದಿಂದ ತನ್ನ ರಾಜ್ಯವನ್ನು ತೊರೆದು ಭಾರತದ ಹಾದಿ ಹಿಡಿದ.
ಈತ ಕಲ್ಪನೆಗೂ ಎಟುಕದ ರೀತಿಯಲ್ಲಿ ಕಷ್ಟಪಟ್ಟು ಕುದುರೆ, ಒಂಟೆ, ಹೇಸರ ಕತ್ತೆಗಳ ಮೇಲೆ ಮತ್ತು ಕಾಲ್ನಡಿಗೆಯಲ್ಲಿ ಮರುಭೂಮಿಗಳನ್ನೂ ಹಿಮಚ್ಛಾದಿತ ಪರ್ವತಗಳನ್ನೂ ಗಿರಿಕಂದರಗಳನ್ನೂ ದಾಟಿ ಹಿಂದೂಕುಶ್ ಪರ್ವತ ಮಾರ್ಗದಲ್ಲಿ ಬಂದು ಪೆಷಾವರ್ ಮೂಲಕ ಕಾಶ್ಮೀರ ಮತ್ತು ಪಂಜಾಬ್ಗಳನ್ನು ಹಾದು ಉತ್ತರ ಭಾರತವನ್ನು ಪ್ರವೇಶಿಸಿದ. ಆಗ ಸ್ಥಾನೇಶ್ವರದಲ್ಲಿ ಹರ್ಷವರ್ಧನನ ಆಳ್ವಿಕೆ. ಇವನು ಭಾರತ ತಲುಪಿದ ಕಾಲ ಸುಮಾರು 634. ಹರ್ಷವರ್ಧನನ ಯೋಗಾಯೋಗವೆಂಬಂತೆ ಬೌದ್ಧಧರ್ಮದಲ್ಲಿ ನಿಷ್ಠೆಹೊಂದಿದ್ದ. ಯುವಾನ್ ಚಾಂಗ್ನ ಬರುವನ್ನು ಆದರದಿಂದ ಸ್ವಾಗತಿಸಿದಲ್ಲದೆ ಇವನಿಗೆ ಎಲ್ಲ ಪ್ರೋತ್ಸಾಹಗಳನ್ನು ನೀಡಿದ.
ಯುವಾನ್ ಚಾಂಗ್ ಭಾರತದ ವಿವಿಧ ಬೌದ್ಧಪೀಠಗಳನ್ನು ಸಂದರ್ಶಿಸಿ ಅಮೂಲ್ಯ ಹಸ್ತಪ್ರತಿಗಳನ್ನು ಸಂಗ್ರಹಿಸಿದ. ಸಂಸ್ಕೃತ ಮತ್ತು ಪಾಲೀ ಭಾಷೆಗಳನ್ನು ಕಲಿತು ಅನೇಕ ಕೃತಿಗಳನ್ನು ಅನುವಾದಿಸಿಕೊಂಡ. ಕಪಿಲವಸ್ತು, ಪಾಟಲಿಪುತ್ರ, ನಾಲಂದ, ತಾಮ್ರಲಿಪಿ, ನಾಗಾರ್ಜುನಕೊಂಡಗಳಿಗೆ ಭೇಟಿನೀಡಿ ವಿದ್ವಾಂಸರೊಂದಿಗೆ ಚರ್ಚಿಸಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡ. ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಪ್ರವಾಸ ಮಾಡಿ ಕಾಂಚಿ, ಪುನ್ನಾಟ, ಬನವಾಸಿ, ನಾಸಿಕ, ಹಾಗೂ ವಲ್ಲಭಿಗಳನ್ನು ಸಂದರ್ಶಿಸಿದ. ಕರ್ನಾಟಕ ಸಾಮ್ರಾಜ್ಯವನ್ನು ಬಾದಾಮಿಯಿಂದ ಆಳುತ್ತಿದ್ದ ಚಾಳುಕ್ಯ ಪುಲಕೇಶಿಯ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ್ದಾನೆ. ಪುಲಕೇಶಿ ಹರ್ಷವರ್ಧನನ ಸೈನ್ಯವನ್ನು ಹಿಮ್ಮೆಟ್ಟಿಸಿದ ಬಗ್ಗೆ ತಿಳಿಸಿದ್ದಾನೆ. ಕನ್ನಡಿಗರ ಸತ್ಯಸಂಧತೆ ಮತ್ತು ಸನ್ನಡೆತೆಗಳನ್ನು ಕೊಂಡಾಡಿದ್ದಾನೆ. ಈತ ಸಿಂಹಳಕ್ಕೆ ಹೋಗಿರಲಿಲ್ಲವೆಂದೂ ದಕ್ಷಿಣ ಭಾರತದ ಪ್ರವಾಸ ಕಾಲದಲ್ಲಿ ಆ ದೇಶದ ಬಗ್ಗೆ ವಿವರಗಳನ್ನು ತಿಳಿದು ಬಂದಿದ್ದಾನೆಂಬುದು ಇತಿಹಾಸಕಾರರ ಅಭಿಪ್ರಾಯ.
ಇವನು ಹರ್ಷವರ್ಧನ ಏರ್ಪಡಿಸಿದ್ದ ಮಹಾಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿ ಅಗ್ರಮಾನ್ಯತೆಗೆ ಪಾತ್ರನಾದ. ಅಸ್ಸಾಂ ಮತ್ತು ಕಾಶ್ಮೀರ ರಾಜರುಗಳಿಂದ ಗೌರವಕ್ಕೆ ಪಾತ್ರನಾದ. 648ರ ಹೊತ್ತಿಗೆ ಚೀನಕ್ಕೆ ಹಿಂದಿರುಗಲು ಈತ ನಿರ್ಧರಿಸಿದ್ದ. ಹರ್ಷವರ್ಧನ ಇವನ ಪ್ರಯಾಣಕ್ಕೆ ಸಕಲ ಏರ್ಪಾಟುಗಳನ್ನು ಮಾಡಿ ಬೀಳ್ಕೊಟ್ಟ. ಹೋಗುವಾಗ ಬಳಸು ದಾರಿಯನ್ನು ತೊರೆದು ಪೇಷಾವರದಿಂದ ನೇರವಾಗಿ ಕ್ಯಾಷ್ಘರ್, ಯಾರ್ಕಂಡ್ ಮತ್ತು ಖೋತಾನ್ ಮೂಲಕ ಚಂಗ್ ರಾಜ್ಯವನ್ನು ತಲುಪಿದ.
ಯುವಾನ್ ಚಾಂಗ್ ಚೀಣಕ್ಕೆ ಹಿಂದಿರುಗಿದ್ದು ಭಾರಿ ಸುದ್ದಿಯನ್ನು ಮಾಡಿತು. ಚಕ್ರವರ್ತಿ ಇವನಿಗೆ ಅದ್ದೂರಿಯ ಸ್ವಾಗತ ನೀಡಿದ. ಚೀನಕ್ಕೆ ಹೋದ ಮೇಲೆ ತಾನು ತೆಗೆದುಕೊಂಡು ಹೋಗಿದ್ದ ಹಸ್ತಪ್ರತಿಗಳ ಭಾಷಾಂತರ ಕಾರ್ಯವನ್ನು ಮುಂದುವರಿಸಿದ. ರಾಜಕುಮಾರರೂ ಮಂತ್ರಿಗಳೂ ಇವನ ಪ್ರವಚನ ಕೇಳಲು ಬರುತ್ತಿದ್ದರು. ತಾನು ಮಾರ್ಗಮಧ್ಯದಲ್ಲಿ ಕಳೆದುಕೊಂಡಿದ್ದ ಕೆಲವು ಹಸ್ತಪ್ರತಿಗಳ ನಕಲುಗಳನ್ನು ಭಾರತದಿಂದ ತರಿಸಿಕೊಂಡ. 652ರಲ್ಲಿ ಒಂದು ಚೈತ್ಯವನ್ನು ಕಟ್ಟಿಸಿ ಅದರಲ್ಲಿ ತಾನು ತಂದಿದ್ದ ಗ್ರಂಥಗಳನ್ನು ಮತ್ತು ಬುದ್ಧನ ವಿಗ್ರಹಗಳನ್ನು ಸುರಕ್ಷಿತವಾಗಿಟ್ಟ. 658ರಲ್ಲಿ ಚೀನದ ರಾಜಧಾನಿಗೆ ಬಂದು ನೆಲೆಸಿದ. ಅಲ್ಲಿನ ಅರಮನೆಯೊಂದನ್ನು ಇವನ ವಾಸ್ತವ್ಯಕ್ಕೆ ಬಿಟ್ಟುಕೊಡಲಾಯಿತು. ಇವನು `ಸಿ-ಯು-ಕಿ'ಎಂಬ ಗ್ರಂಥದಲ್ಲಿ ತನ್ನ ಪ್ರವಾಸ ಕಥನವನ್ನು ಬರೆದಿಟ್ಟಿದ್ದಾನೆ. ಇವನ ಬರವಣಿಗೆಗಳು ಸ್ಪಷ್ಟತೆ, ನಿಖರತೆ, ಮತ್ತು ಸುಂದರ ಶೈಲಿಗೆ ಹೆಸರಾಗಿವೆ. ಅವು ಚೀನೀ ಸಾಹಿತ್ಯದ ಭವ್ಯತೆಯ ಹೆಗ್ಗುರುತೆಂದು ಚೀನೀಯರು ಭಾವಿಸುತ್ತಾರೆ. ಇವನು ಒಟ್ಟು 74 ಗ್ರಂಥಗಳನ್ನು ಭಾಷಾಂತರಿಸಿದ್ದಾನೆಂದು ತಿಳಿದುಬರುತ್ತದೆ. ಚೀನೀ ಮತ್ತು ಸಂಸ್ಕøತ ಭಾಷೆಗಳ ನಿಘಂಟನ್ನು ರಚಿಸಿದ. ಪ್ರವಾಸದ ಕಾಠಿಣ್ಯ ಮತ್ತು ಬರವಣಿಗೆ ಮತ್ತು ಬೋಧನೆಗಳ ಶ್ರಮದಿಂದ ಇವನ ದೇಹಾರೋಗ್ಯ ದುರ್ಬುಲಗೊಳ್ಳುತ್ತಾ ಬಂದಿತು. 664ರ ಹತ್ತನೆಯ ತಿಂಗಳಿನ 13ನೆಯ ದಿನದಂದು ಯುವಾನ್ ಚಾಂಗ್ ಇಹಲೋಕವನ್ನು ತ್ಯಜಿಸಿದ.
ಯುವಾನ್ ಚಾಂಗ್ ಬೌದ್ಧಧರ್ಮದಲ್ಲಿ ಚೀನದಲ್ಲಿ ಪ್ರಚಾರ ಪಡೆಯಲು ನೀಡಿದ ಕೊಡುಗೆ ಅಪಾರವಾದದು. ಚೀನದಲ್ಲಿ ಇವನದೇ ಆದ ಹೊಸ ಬೌದ್ಧ ತತ್ತ್ವಶಾಸ್ತ್ರ ಸ್ಥಾಪಿತವಾಯಿತು. ಚೀನೀ ಬೌದ್ಧಸನ್ಯಾಸಿಗಳು ಭಾರತದಲ್ಲಿ ಯಾತ್ರೆ ಕೈಗೊಳ್ಳಲು ಪ್ರೇರೇಪಿಸಿದ. ಈ ಮೂಲಕ ಭಾರತ ಚೀನ ಸಂಬಂಧಗಳು ಹೆಚ್ಚಿದವು. ಭಾರತೀಯ ರಾಜರುಗಳೊಂದಿಗೆ ಚೀನೀ ಚಕ್ರವರ್ತಿ ರಾಜಕೀಯ ಸಂಬಂಧ ಹೊಂದುವಂತಾಯಿತು. ಯುವಾನ್ ಚಾಂಗ್ನ ನಿಧನಾನಂತರ ಚೀನೀ ಚಕ್ರವರ್ತಿ ಈ ಮಹಾಪುರುಷನ ಗೌರವಾರ್ಥವಾಗಿ ಸಮಾಧಿ ಕಟ್ಟಿ ಗೋಪುರ ನಿರ್ಮಿಸಿದ.
This article uses material from the Wikipedia ಕನ್ನಡ article ಹ್ಯುಯೆನ್ ತ್ಸಾಂಗ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.