ಭೂತಾರಾಧನೆ ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು, ಇದನ್ನು 'ದೈವಾರಾಧನೆ' ಎಂದೂ ಕರೆಯುತ್ತಾರೆ ಎಂದೂ ಕರೆಯುತ್ತಾರೆ.
ದಕ್ಷಿಣ ಕನ್ನಡ, ಉಡುಪಿ, ಕೇರಳ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಒಂದು ರೀತಿಯ ಆರಾಧಾನೆ.
ಸಾಮಾನ್ಯವಾಗಿ ಆರಾಧನೆಗೊಳ್ಳುವ ಭೂತಗಳನ್ನು ಸ್ಥೂಲವಾಗಿ ಮೂರು ರೀತಿಯಲ್ಲಿ ವರ್ಗೀಕರಿಸಬಹುದು. ಪ್ರಾಣಿರೂಪದಲ್ಲಿರುವ ಭೂತ, ಮನುಷ್ಯನ ಮರಣಾನಂತರ ದೈವೀಕೃತವಾದ ಭೂತ, ಪುರಾಣದಿಂದ ಆಯ್ದುಕೊಂಡ ವ್ಯಕ್ತಿಗಳ ಭೂತ.
ಹುಲಿ, ಹಂದಿ, ನಂದಿ, ಕೋಣ ಇತ್ಯಾದಿ(ಪಿಲಿಚಂಡಿ, ಪಂಜುರ್ಲಿ, ಮೈಸಂದಾಯ) ಪ್ರಾಣಿಗಳು ಮೊದಲನೆಯ ವರ್ಗದ ರೂಪದಲ್ಲಿ ಆರಾಧನೆಗೊಳ್ಳುತ್ತವೆ. ಜುಮಾತಿ, ಕಲ್ಕುಡ-ಕಲ್ಕುರ್ಚಿ, ಕೋಟಿ - ಚನ್ನಯ,ಕುಜುಂಬ-ಕಂಜ, ಕಾಂತಾಬಾರೆ-ಬೂದಾ ಬಾರೆ ಮೊದಲಾದ ವ್ಯಕ್ತಿಗಳು ಮಾನವರಾಗಿದ್ದಾಗ ವೀರ ಕೆಲಸ ಮಾಡಿ ಅಕಾಲ ಮರಣಕ್ಕೆ ತುತ್ತಾಗಿ ಅನಂತರ ಭೂತಗಳಾಗಿ ದೈವತ್ವ ಹೊಂದಿ ಆರಾಧನೆಗೊಳ್ಳುತ್ತವೆ. ಇವು ಎರಡನೆಯ ವರ್ಗಕ್ಕೆ ಸೇರುತ್ತವೆ. ಕೊಡಮಣಿತ್ತಾಯ, ಕಿಕ್ಕುಣಂತಾಯ, ಶಿವತ್ತಾಯ, ಅಣ್ಣಪ್ಪ, ಅಡ್ಕತ್ತಾಯ ಮೊದಲಾದ ದೈವಗಳನ್ನೂ ಈ ಗುಂಪಿಗೇ ಸೇರಿಸಬಹುದು. ತುಳುನಾಡಿನಲ್ಲಿ ಬೆರ್ಮೆ ಎಂಬ ದೈವ ಬ್ರಹ್ಮನ ಪ್ರತಿರೂಪವೇ ಆಗಿದೆ. ವೇದಬ್ರಹ್ಮನ ನಿರ್ದೇಶನ ಒಂದು ಕ್ರಮದಲ್ಲಿದ್ದರೆ ಬೆರ್ಮೆ ಎಂಬ ದೈವ ಭೂತಬ್ರಹ್ಮವಾಗಿ ಇನ್ನೊಂದು ರೀತಿಯಲ್ಲಿ ಆರಾಧನೆಗೊಳ್ಳುತ್ತದೆ. ಇವನಿಗೆ ನಾಲ್ಕು ಮುಖ ಮತ್ತು ನಾಲ್ಕು ಕೈಗಳು, ಕೈಗಳಲ್ಲಿ ಖಡ್ಗ, ಡಮರು ಕಪಾಲ ಮತ್ತು ಕಠಾರಿ ಮೊದಲಾದ ಆಯುಧಗಳಿವೆ. ತುಳುವರ ಮೂಲ ದೇವರು "ಬೆಮ್ಮೆರ್"
ಭೂತನೆಲೆಯ ಸ್ಥಳವನ್ನು ಭೂತಸ್ಥಾನ, ಭೂತಸಾನ ಎಂದು ಕರೆಯುತ್ತಾರೆ. ಭೂತಸ್ಥಾನಕ್ಕೆ ಅಲೆಡೆ, ಗರಡಿ, ಕಟ್ಟೆ, ತಾನೊ, ಚಾವಡಿ ಎಂಬ ಹೆಸರುಗಳೂ ಇವೆ. ಇವು ಸಾಮಾನ್ಯವಾಗಿ 3.5 ಮೀ ಉದ್ದ, 2.5 ಮೀ ಅಗಲ, 3.5 ಮೀ ಎತ್ತರದ ಸಾಧಾರಣ ಗುಡಿಗಳಾಗಿರುತ್ತವೆ. ಇವಕ್ಕೆ ಕಿಟಕಿಗಳಿರುವುದಿಲ್ಲ. ರಾಜನ್ ದೈವಗಳಿಗೆ ಭೂತಗಳಿಗೆ ಇದಕ್ಕೂ ದೊಡ್ಡದಾದ ಭೂತಸ್ಥಾನಗಳಿರುವುದುಂಟು. ಸ್ಥಾನದ ಒಳಗೆ ಮನುಷ್ಯರಂತೆ, ಪ್ರಾಣಿಗಳಂತೆ ರೂಪವಿರುವ ಹಿತ್ತಾಳೆಯ ಹಲವಾರು ಉರುಗಳಿರುತ್ತವೆ, ಜೊತೆಗೆ ಮಣೆಮಂಚ(ತೂಗುಮಂಚ) ಅಥವಾ ಕಾಲುಳ್ಳ ಮಂಚವಿರುತ್ತದೆ. ಇದನ್ನು ಉಜ್ಜಾಲ್ ಮಣೆಮಂಚ ಎನ್ನುತ್ತಾರೆ. ಇದರ ಮೇಲೆ ಭೂತದ ಖಡ್ಗ ಹಾಗೂ ಗುಂಟೆ ಇರುತ್ತವೆ. ಭೂತಸ್ಥಾನದಲ್ಲಿ ಕಂಡುಬರುವ ಹುಲಿ, ಹಂದಿ, ಕೋಣ, ಎತ್ತು ಮೊದಲಾದವುಗಳು ವಿಗ್ರಹಗಳನ್ನು ಭೂತವಾಹನಗಳಾಗಿ ಉಪಯೋಗಿಸುವುದರ ಜೊತೆಗೆ, ಅವನ್ನೂ ಭೂತಗಳ ಪರಿವಾರವೆಂದು ಕರೆದು ವಿಶೇಷ ಸಂದರ್ಭಗಳಲ್ಲಿ ಪೂಜಿಸುವುದೂ ಉಂಟು. ಹೀಗೆ ಪೂಜಿಸುವಾಗ ಭೂತದ ಬಳಿ ಒಂದು ಕತ್ತಿ, ಕಂಚಿನ ಕಳಸದಲ್ಲಿ ನೀರು ದೀಪ ಇಟ್ಟಿರುತ್ತಾರೆ.
ಪಾಡ್ದನಗಳು ಭೂತಗಳ ಹುಟ್ಟು, ಪ್ರಸರಣ, ಕಾರಣಿಕವನ್ನು ನಿರೂಪಣೆ ಮಾಡುವ ಪದ್ಯರೂಪದ ಕಥನಕವನಗಳು. ಪಾಡ್ದನವನ್ನು ತುಳುವರು ಪಾರ್ತನೊ, ಸಂದ್, ಸಂದಿ, ಹೀಗೆ ಬೇರೆಬೇರೆ ರೂಪದಲ್ಲಿ ಬಳಕೆ ಮಾಡುತ್ತಾರೆ.
ದೇವರಿಗೆ ದೇವಸ್ಥಾನ ಹೇಗೆ ಇದೆಯೋ ? ಹಾಗೆ ತಲುವರ ನಂಬುವ ದೈವಗಳಿಗೆ ದೈವಸಾನ...
ಭೂತ
ಕೋಲ
ಭೂತಾರತುಲುವರ್ಉತ್ಸವ ಲಿ ಸಾಮಾನ್ಯವಾಗಿ ೧೬ ಕಟ್ಟುಕಟ್ಟಲೆಗಳನ್ನು ಕಾಣಬಹುದು. ನೇಮದ ವೇಳೆ ಕಟ್ಟುವ ಭೂತವೇಷಗಳು ಆಯಾ ಭೂತದ ಸ್ವಭಾವ ಸ್ವರೂಪಗಳಿಗೆ ತಕ್ಕುದಾಗಿರುತ್ತವೆ. ಮುಖವರ್ಣಿಕೆ, ಉಡುಪು ತೊಡುಪು, ಅಣಿಗಳಲ್ಲಿ (ಬೆನ್ನುಹಿಂದಕ್ಕೆ ಕಟ್ಟಿ ಕೊಳ್ಳುವ ಅಗಲವಾದ ರಚನೆ) ಸಾಕಷ್ಟು ವೈವಿಧ್ಯವಿರುತ್ತದೆ. ಕುಣಿತದ ವೈಖರಿಯಲ್ಲೂ ಹಾಗೆಯೇ. ನೇಮಕ್ಕೆ ಸಂಬಂಧಪಟ್ಟಂತೆ ವಾಲಸಿರಿ, ಬಂಡಿ ಮೊದಲಾದ ಸಮಾರಂಭಗಳೂ ಜರಗುವುದುಂಟು. ವಾಲ ಸಿರಿ ಭೂತಸ್ಥಾನದ ಆವರಣದ ಹೊರಗೆ ನಡೆಯುತ್ತದೆ. ಎಲ್ಲ ಭೂತಸ್ಥಾನಗಳಲ್ಲಿ ಬಂಡಿ ಇರಬೇಕೆಂದಲ್ಲ. ಬಂಡಿ ಇದ್ದಲ್ಲ ಅದನ್ನು ಸಿಂಗರಿಸಿ ಎಳೆಯುತ್ತಾರೆ. ಬಂಡಿಗಳಲ್ಲಿ ಹುಲಿ, ಹಂದಿ, ಕುದುರೆ ಮುಂತಾದವುಗಳ ಮೇಲೆ ಕುಳಿತಿರುವ ಭೂತಗಳ ವಿಗ್ರಹಗಳಿರುತ್ತವೆ. ವಿಗ್ರಹಗಳಿಲ್ಲದಿದ್ದಲ್ಲಿ ಭೂತವೇಷವನ್ನು ತೊಟ್ಟ ವ್ಯಕ್ತಿಯೇ ಕುಳಿತುಕೊಳ್ಳುತ್ತಾನೆ. ನೇಮದ ಅಂಗವಾಗಿ ತಪ್ಪಂಗಾಯಿ, ಸೊಟೆದಾರೆ ಮೊದಲಾದ ವಿನೋದಗಳೂ ಕೋಳಿ ಅಂಕವೂ ನಡೆಯುವುದುಂಟು. ಭೂತಗಳಲ್ಲಿಯೂ ಸೀಮೆಯ ರಾಜಂದೈವ, ಗ್ರಾಮದ ದೈವ, ಜಾಗದ ದೈವ, ಕುಟುಂಬದ ದೈವ, ಮನೆಯ ದೈವ—ಹೀಗೆ ಪ್ರತ್ಯೇಕವಾದ ವ್ಯವಸ್ಥೆ ಇದೆ. ಕೆಲವೊಮ್ಮೆ ವಿಶಿಷ್ಟ ಕಾರಣಗಳಿಗಾಗಿ ಧರ್ಮನೇಮ ಎಂಬ ವಿಶೇಷೋತ್ಸವವನ್ನು ಜರಗಿಸುವುದುಂಟು. ಅದರ ಅಂಗವಾಗಿ ಅನ್ನಸಂತರ್ಪಣೆಯೂ ನಡೆಯುವುದಿದೆ.
ಕೋಲ ಎಂದರೆ ಅಲಂಕಾರ ಎಂದರ್ಥ. ಭೂತ ವೇಷಧಾರಿಗೆ ತೊಡಿಸುವ ವಿಶೇಷ ವೇಷ ಪರಿಕರಗಳ ಬೆಡಗಿನಿಂದಾಗಿ ಸಂಬಂಧಪಟ್ಟ ಉತ್ಸವಕ್ಕೂ ಅದೇ ಹೆಸರು ಬಂದಿದೆ. ಕೋಲವನ್ನು ವಾಡಿಕೆಯಂತೆ ವರ್ಷಕ್ಕೊಂದು ಬಾರಿ ನಿರ್ದಿಷ್ಟ ಸ್ಥಳದಲ್ಲಿ ನಿಶ್ಚಿತ ದಿನಗಳಲ್ಲಿ ಜರಗಿಸಬಹುದು; ಅಥವಾ ವಿಶೇಷ ಸೇವೆಯಾಗಿ ಬೇರೆಯೇ ಸಂದರ್ಭಗಳಲ್ಲಿಯೂ ನಡೆಯಿಸಬಹುದು. ಕೋಲದ ಚಪ್ಪರಕ್ಕೆ ಪತಾಕೆಯ ರೂಪದಲ್ಲಿ ಮಡಿವಾಳನು ಬಿಳಿ ಅಥವಾ ಕೆಂಪು ಬಟ್ಟೆ ಕಟ್ಟುವುದಿದೆ. ಎಳನೀರು, ಸೌತೆ, ಕುಂಬಳ ಮುಂತಾದವನ್ನು ಚಪ್ಪರದಲ್ಲಿ ತೂಗಿಸುತ್ತಾರೆ. ಕೋಲಕ್ಕೆ ಮೊದಲು ಮಣ್ಣು ಮುಹೂರ್ತ ಎಂಬ ವಿಧಿ ಜರುಗುವುದಿದೆ. ಕೋಲ ಜರಗಬೇಕಾದ ಸ್ಥಳದ ತುಸು ಮಣ್ಣನ್ನು ಆಯಾಸ್ಥಾನದ ಪೂಜಾರಿ ತಂದು, ಗಂಧಿ ಪ್ರಸಾದ ಸ್ವೀಕರಿಸಿ ಒಳಗೆ ಹೊರಗೆ ತುಲಸಿಕಟ್ಟೆ, ಪಾಗಾರ ಮುಂತಾದ ಎಡೆಗಳಲ್ಲಿ ಎಲ್ಲೆಲ್ಲಿ ಬಿರುಕುಗಳಿವೆಯೋ ಅಲ್ಲಿಗೆ ಮಣ್ಣನ್ನು ಮೆತ್ತಿ ಜಾಗವನ್ನು ಪ್ರಶಸ್ತಗೊಳಿಸುವನು. ಕೋಲದ ಚಪ್ಪರದ ನಡುವೆ ಗರಡಿಯ ಒಳಗೆ ನೆಲದಲ್ಲಿ ವಿವಿಧ ರೀತಿಯ ಮಂಡಲಗಳನ್ನು ಬಣ್ಣದ ಪುಡಿಗಳಿಂದ ಬರೆಯುವುದುಂಟು. ಮಂಡಲದ ಮೇಲಕ್ಕೆ ನೇರವಾಗಿ ಒಂದು ತೆಂಗಿನಕಾಯನ್ನು ವಿಧಿಪೂರ್ವಕವಾಗಿ ತೂಗಿಸುತ್ತಾರೆ. ಇದಕ್ಕೆ ಕುಕ್ಯಾಲಿ ಎಂದು ಹೆಸರು.
ಕೆಲವು ಕೋಲಗಳಿಗೆ ಭಂಡಾರ ಹೋಗುವ ಕ್ರಮವಿದೆ, ಭೂತದ ಮೊಗ, ಬೆಳ್ಳಿ ಒಂಗಾರದ ನಗನಾಣ್ಯಗಳೇ ಮುಂತಾದ ವೇಷ ಸಾಮಗ್ರಿಗಳೂಸುರಿಗೆ ಮುಂತಾದ ಆಯುಧಗಳೂ ನಿಶಾನಿ, ಗಣಿ, ದೀವಟಿಗೆ, ಸತ್ತಿಗೆ ಮುಂತಾದ ಬಿರ್ದಿನಿಂದ ಕೊಂಬುವಾಲಗದೊಂದಿಗೆ ಕೋಲದ ಚಪ್ಪರದದೆಡೆಗೆ ಸಾಗುವುವು. ಭೂತದ ವೇಷಕ್ಕೆ ತೆಂಗಿನ ಎಳೆಯಗರಿ, ಕೇಪಳದಹೂ, ಅರದಾಳ, ಮಸಿ, ಇಂಗಳಿಕ, ಕೆಂಪುವಸ್ತ್ರ, ದಗಲೆ, ಗೆಜ್ಜೆ, ಗಗ್ಗರ, ಕೈದಂಡೆ, ನೆತ್ತಿಪಟ್ಟ, ಚಪ್ಪರಕೊಂಬು, ಮಾಲೆಗಳು, ಅಣಿ ಮೊದಲಾದವನ್ನು ಉಪಯೋಗಿಸುತ್ತಾರೆ. ಆಯಾ ಭೂತದ ಸ್ವರೂಪ, ಸ್ವಭಾವಗಳಿಂದ ತಕ್ಕ ಅಣಿಯನ್ನೂ ಮಖವರ್ಣಿಕೆಯನ್ನೂ ಇತರ ಪರಿಕರಗಳನ್ನೂ ಬಳಸುತ್ತಾರೆ.
ಪೂಜೆ ರೀತಿಯಲ್ಲಿ ಆಯಾ ಭೂತದ ರೌದ್ರಭಾವನೆಗೆ ಅನುಗುಣವಾಗಿ ಕುಣಿತದ ಮೂಲಕ ಪೂಜೆಯಾಗುತ್ತದೆ. ಭೂತವನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಬೂತ ಕಟ್ಟುನಾಯೆ(ಪಾತ್ರಿ) ಎನ್ನುತ್ತಾರೆ. ಒಂದೊಂದು ಭೂತಕ್ಕೂ ಅದಕ್ಕೊಪ್ಪುವ ಅರದಳವಿರುತ್ತದೆ. ಅಲಂಕಾರ, ವೇಷ, ಮುಖ ವರ್ಣಿಕೆ ಇರುತ್ತವೆ. ಮೈಗೆ ಕೆಂಪುಬಟ್ಟೆ, ನಡುವಿಗೆ ನೆರಿಗೆಯುಳ್ಳ ಲಂಗ, ತಲೆಗೆ ಕಿರೀಟ (ಅಣಿ), ಕಾಲಿಗೆ ಗಗ್ಗರ, ಸೊಂಟಕ್ಕೆ ದಟ್ಟಿ, ತೋಳಿಗೆ ವಂಕಿ, ಕೈಗೆ ಬಳೆ, ಎದೆಗೆ ಕಂಚಿನ ರಕ್ಷೆ, ಕಿವಿಗೆ ಮತ್ತು ಹಣೆಗೆ ಅಲಂಕಾರ ಇರುತ್ತದೆ. ಒಮ್ಮೊಮ್ಮೆ ಆಯಾ ಭೂತದ ಮುಖವಾಡ ಧರಿಸಿ ಕುಣಿಯುವುದೂ ಉಂಟು. ಭೂತಾರಾಧನೆ ಕೆಲವೊಮ್ಮೆ ಸಾರ್ವಜನಿಕವಾಗಿಯೂ ಒಂದೊಂದೆ ಮನೆಯಲ್ಲಿಯೂ ನಡೆಯುತ್ತದೆ. ಬತ್ತ, ಅಕ್ಕಿ, ಬತ್ತದ ಅರಳು, ಎಳನೀರು, ತೆಂಗಿನಕಾಯಿ, ಅಡಿಕೆ, ಹೊಂಬಾಳೆ, ತೆಂಗಿನ ಗರಿ—ಇವು ಭೂತಾರಾಧನೆಯ ಮುಖ್ಯ ವಸ್ತುಗಳು. ಎಲ್ಲ ರೀತಿಯ ಭೂತ ಕಟ್ಟುವಾಗಲೂ ಕೈಯಲ್ಲಿ ದೀವಟಿಗೆಯಿರುತ್ತದೆ.
ಉತ್ಸವಕ್ಕೆ ಕೊಡಿ (ಧ್ವಜ) ಏರಿಸುವ ಕ್ರಮವಿದೆ. ನೇಮಕ್ಕೆ ಕೆಲವು ದಿನ ಮುಂಚೆ ಕೋಳಿಕುಂಟ ಎಂಬ ವಿಧಿ ಜರುಗುವುದುಂಟು. ಅಂದು ನೇಮಕ್ಕಾಗಿ ಬಾಳೆಗೊನೆ ಕಡಿಯುವ ಗೊನೆಮುಹೂರ್ತ ಎಂಬ ಕ್ರಮ ಇದೆ (ಕೋಳಿಕುಂಟವಾದ ಮೇಲೆ ಆ ಊರನ್ನು ಬಿಟ್ಟು ಯಾರೂ ದೂರ ಪ್ರಯಾಣ ಕೈಗೊಳ್ಳಬಾರದೆಂಬ ಕಟ್ಟಳೆ ಇದೆ). ಊರ ಜನವರ್ಗದ ಪ್ರತಿನಿಧಿಗಳೂ ದೈವದ ಸೇವೆಗೆ ಸಂಬಂಧಪಟ್ಟ ಪೂಜಾರಿ ಮುಂತಾದ ವ್ಯಕ್ತಿಗಳೂ ಸಕಲ ಬಿರುದಾವಳಿಗಳಿಂದ ಭೂತದ. ಭಂಡಾರವನ್ನು (ಆಯುಧ, ಮೊಗ ಮುಂತಾದ ಪೂಜಾ ಸಾಮಗ್ರಿಗಳನ್ನು) ಭೂತಸ್ಥಾನಕ್ಕೆ ಒಯ್ಯುತ್ತಾರೆ. ಉತ್ಸವದ ಸಂದರ್ಭದಲ್ಲಿ ಆಯಾ ಭೂತದ ಹುಟ್ಟುಕಟ್ಟುಗಳನ್ನು ಭೂತಕ್ಕೆ ಕಟ್ಟುವವರೂ ಅವರ ಸಂಗಡಿಗರೂ ತೆಂಬರೆ ಎಂಬ ವಾದ್ಯದ ಬಡಿತದೊಂದಿಗೆ ರಾಗವಾಗಿ ಹಾಡುತ್ತಾರೆ. ಒಂದೇ ವೇಳೆ ಎರಡು ಅಥವಾ ಮೂರು ಭೂತಗಳು ಕಾಣಿಸಿಕೊಳ್ಳಬಹುದು. ಬೇರೆ ಬೇರೆ ಭೂತಗಳನ್ನು ಒಬ್ಬನೇ ವ್ಯಕ್ತಿ ಒಂದಾದ ಮೇಲೆ ಒಂದರಂತೆ ಆವೇಶ ಬರಿಸಿಕೊಳ್ಳಬಹುದು.
ದಕ್ಷಿಣ ಕನ್ನಡ ಜಿಲ್ಲೆಯ ತುಳು ಮಾತನಾಡುವ ಪ್ರದೇಶದ ಭೂತಾರಾಧನೆಗೂ ಕನ್ನಡ ಮಾತನಾಡುವ ಪ್ರದೇಶದ ಭೂತಾರಾಧನೆಗೂ ಕೆಲವು ವೈಶಿಷ್ಟ್ಯಗಳೂ ವ್ಯತ್ಯಾಸಗಳೂ ಕಂಡುಬರುತ್ತವೆ. ತುಳು ಮಾತನಾಡುವಲ್ಲಿ ಕೆಲವೇ ನಿಶ್ಚಿತ ಜಾತಿಗೆ ಸೇರಿದ—ಮುಖ್ಯವಾಗಿ ಬೈದ್ಯ, ನಲಿಕೆ, ಪರವ, ಪಂಬರ, ಪಾಣಾರ—ಜನ ಮಾತ್ರ ಭೂತಾರಾಧನೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಒಂದು ಭೂತವನ್ನು ಇಂಥವನೇ ಪೂಜಿಸಬೇಕೆಂಬ ನಿಯಮವಿದೆ ಅದಕ್ಕೆ ಅಜಲು ಎನ್ನುವರು. ಒಂದೇ ಗುಡಿಯಲ್ಲಿ ಅನೇಕ ದೈವಗಳ ಉರು, ಮುಗೊಗಳಿರುತ್ತವೆ. ಈ ಭೂತಗಳಿಗೆ ಪಾಡ್ಡನಗಳಿಲ್ಲ; ಸರಿಯಾದ ಕಥೆಯಿಲ್ಲ. ಈ ದೈವಗಳಿಗೆ ವರ್ಷಕ್ಕೊಂದು ಸಲ ಎಥವಾ ವಿಶಿಷ್ಟ ಸಂದರ್ಭಗಳಲ್ಲಿ ಕೋಲ, ನೇಮ, ಬಲಿ, ಅಗಲು, ತಂಬಿಲ. ಬಂಡಿ ಮೊದಲಾದ ವಿವಿಧ ರೀತಿಯ ಉತ್ಸವ ಹಾಗೂ ಸೇವೆ ಜರುಗುತ್ತವೆ. ಕೋಲ ಮತ್ತು ನೇಮ ದೈವದ ನೃತ್ಯಸಹಿತ ಉತ್ಸವದ ರೂಪದಲ್ಲಿ ನಡೆಯುತ್ತವೆ. ನೇಮ ಹೆಚ್ಚಾಗಿ ರಾತ್ರಿ ನಡೆಯತ್ತದೆ. ಅಗಲು ಸಾಮಾನ್ಯವಾಗಿ ಕೋಲದ ಹಿಂದಿನ ರಾತ್ರಿ ನಡೆಯುತ್ತದೆ. ಕೋಲವನ್ನು ಹೆಚ್ಚಾಗಿ ಪಂಬರರು, ಪರವರು, ನಲಿಕೆಯವರು ಕಟ್ಟುತ್ತಾರೆ. 'ಪರ್ವ ಭೂತಗಳಿಗೆ ಇನ್ನೊಂದು ರೀತಿಯಲ್ಲಿ ನಡೆಯುವ ಪೂಜೆ. ನೇಮ, ಊರವರೆಲ್ಲ ಸೇರಿ ನಡೆಸುವ, ಸ್ವಲ್ಪ ಹಿರಿಯ ಪ್ರಮಾಣದ ಉತ್ಸವ. ಎರಡೋ ಮೂರೋ ದಿನ ನಡೆಯಬಹುದು.
ಮುಗವನ್ನು ಮುಖವಾಡವೆಂದು ತಿಳಿಯಬಹುದು. ಮುಖವಾಡಗಳನ್ನು ಹಿತ್ತಾಲೆ ಮತ್ತು ತಾಮ್ರ ಮಿಶ್ರಿತ ಕಂಚಿನಿಂದ ತಯಾರಿಸಲಾಗಿರುತ್ತದೆ.
This article uses material from the Wikipedia ಕನ್ನಡ article ಭೂತಾರಾಧನೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.