ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಇತಿಹಾಸವನ್ನು ಗುರುತಿಸಲು ಹಲ್ಮಿಡಿ ಶಾಸನ ಹೇಗೆ ಮೊದಲೊ ಹಾಗೆಯೇ ಪ್ರಥಮ ಕವಿ,ಪ್ರಥಮ ಕಾವ್ಯವಾಗಿ ಪಂಪ ಮತ್ತು ಆತನ ಕೃತಿಗಳು ಪ್ರಮುಖವಾಗಿವೆ.ಈತ ಬರೆದಿರುವಂತದ್ದು ಎರಡು ಕೃತಿಗಳು ಆದಿಪುರಾಣ ,ವಿಕ್ರಾಮಾರ್ಜುನವಿಜಯ.
ಇವನ ನಂತರ ಪೊನ್ನ . ಈತನ ಕೃತಿಗಳು ಶಾಂತಿ ಪುರಾಣ ,ಭುವನೈಕ ರಾಮಾಭ್ಯುದಯ ,ಜಿನಾಕ್ಷರಮಾಲೆ. ರನ್ನನ ಕೃತಿಗಳು ಅಜಿತಪುರಾಣ, ಸಾಹಸಭೀಮವಿಜಯ ಅಥವಾ ಗದಾಯುದ್ಧ, ರನ್ನಕಂದ, ಪರುಶುರಾಮಚರಿತೆ, ಚಕ್ರೇಶ್ವರ ಚರಿತೆ . ಇವರೆಲ್ಲರು ರಾಜಾಶ್ರಯದಲ್ಲಿದ್ದು ಸಾಹಿತ್ಯ ರಚಿಸಿದವರು.ಮೊದಲ ಬಾರಿಗೆ ಪಂಪ ಪೊನ್ನರನ್ನ ಸೇರಿಸಿ "ಕವಿಜನದೊಳ್ ರತ್ನತ್ರಯ ಪವಿತ್ರಮೆನೆ ನೆಗೞ್ದ ಪಂಪನುಂ ಪೊನ್ನಿಗನುಂ ಕವಿರತ್ನನುಮೀ ಮೂವರ್ ಕವಿಗಳ್ ಜಿನಸಮಯದೀಪಕರ್ ಪೆಱರೊಳರೆ" ಎಂದು ಹೇಳಿದವನು ರನ್ನ.ಇವರೆಲ್ಲರು ಜೈನ ಧರ್ಮದ ಬೆಳವಣಿಗೆಗೆ ಹೆಚ್ಚುಹೊತ್ತು ಕೊಟ್ಟವರು.ಆದ್ದರಿಂದಲೆ ರನ್ನನು ಜೈನ ಸಮುದಾಯದ ದೀಪಕರು ನಾವು ಎಂದು ಹೇಳಿಕೊಂಡಿರುವುದು ಸೂಕ್ತವಾಗಿದೆ.ಏಕೆಂದರೆ ಮೂವರಲ್ಲೂ ತಾವು ಬರೆದಿರುವ ಕೃತಿಗಳ ಬಗ್ಗೆ ಹೆಮ್ಮೆ ಇದೆ.ಸಂಸ್ಕೃತದ ಕೃತಿಗಳನ್ನು ಆಕರವಾಗಿ ಇಟ್ಡುಕೊಂಡಿದ್ದರೂ ಅವರದೇ ಆದ ಅನುಭವ ಶೈಲಿಯಲ್ಲಿ ಸ್ವತಂತ್ರತೆಯನ್ನು ತೋರಿಸಿದ್ದಾರೆ.ಪಂಪನು "ಕವಿತೆ ನೆಗೞ್ತಿಯಂ ನಿಱಿಸೆ ಜೋಳದ ಪಾಪಿ ನಿಜಾಧಿನಾಥನಾಹವದೊಳರಾತಿನಾಯಕರ ಪಟ್ಟನೆ ಪಾಱಿಸೆ...ಏಂ ಕಲಿಯೋ ಸತ್ಕವಿಯೋ ಕವಿತಾ ಗುಣಾರ್ಣವಂ" ಎಂದೂ,ಪೊನ್ನನು "ಅಸಗಂಗೆ ನೂರ್ಮಡಿ" ಹಾಗೂ "ಸಕ್ಕದದೂಳ್ ಮುನ್ನುಳ್ಳ ಕಾಳಿದಾಸಂಗಂ ನಾಲ್ವಡಿ ರಚನೆಯೊಳ್ ಕುರುಳ್ಗಳ ಸವಣಂ" ಎಂದು ತಮ್ಮನ್ನು ತಾವು ಹೊಗಳಿಕೊಂಡಿದ್ದಾರೆ.ಈ ಹೊಗಳಿಕೆ ಅತಿಶಯವಲ್ಲ ಹಿಂದಿನವರನ್ನ ಅನುಸರಿಸಿ ಹೊಸದಾಗಿ ಬರೆದಿದ್ದೇವೆಂಬ ತೃಪ್ತಿ ಇದೆ.ಈ ಮೂವರಲ್ಲಿ ಪಂಪ ತನ್ನ ವೈಯುಕ್ತಿಕ ವಿಚಾರವನ್ನು ಹೇಳಿಲ್ಲ.ಹಾಗೂ ಕವಿಚಕ್ರವರ್ತಿ ಬಿರುದಿಲ್ಲ ಕಾರಣ ಇವನ ಆಶ್ರದಾತ ಚಾಲುಕ್ಯ ರಾಜ ಅರಿಕೇಸರಿ ಸಾಮಂತ ರಾಜನಾಗಿದ್ದರಿಂದ.ಪಂಪನು ಕವಿ ಕಲಿ ಎರಡೂ ಹೌದು .ಆಶ್ರಯದಾತ ಅರಿಕೇಸರಿಯನ್ನು ವಿಕ್ರಾಮಾರ್ಜುನ ವಿಜಯದಲ್ಲಿ ಅರ್ಜುನನಿಗೆ ಸಮೀಕರಿಸಿದರೂ ಕರ್ಣನನ್ನು ನೆನೆ ಎಂದಿರುವುದು ಆಶ್ಚರ್ಯ.ಪೊನ್ನನು ಸಹ ತನ್ನ ಭುವನೈಕ ರಾಮಭ್ಯದಯವನ್ನು ರಾಷ್ಟ್ರಕೂಟ ದೂರೆ ಕೃಷ್ಣನಿಗೆ ಸಮೀಕರಿಸಿ ಬರೆದಿರಬಹುದು ಎನಿಸುತ್ತದೆ.ಕೃಷ್ಣನೆ ಪೊನ್ನನಿಗೆ ಉಭಯಕವಿಚಕ್ರವರ್ತಿ ಎಂಬ ಬಿರುದನ್ನು ನೀಡಿದ್ದಾನೆ.ಹಾಗೆಯೆ ರನ್ನನು ಸಹ ಗದಾಯುದ್ಧದಲ್ಲಿ ಸತ್ಯಾಶ್ರಯನನ್ನು ಭೀಮನಿಗೆ ಸಮೀಕರಿಸಿ ಬರೆದ್ದಾನೆ.ಸಾಹಸ ಭೀಮ ವಿಜಯವು ಅವನೆ ಹೇಳಿರುವ "ಒಳಪೊಕ್ಕು ನೋಡೆ ಭಾರತದೊಳಗಣ ಕಥೆಯೆಲ್ಲಮೀ ಗದಾಯುದ್ದದೊಳಂ ತೊಳಕೊಂಡಿತ್ತೆನೆ ಸಿಂಹಾವಲೋಕನಕ್ರಮದಿನಱಿಪಿದಂ ಕವಿರತ್ನಂ"ಹೀಗೆ ಸಿಂಹಾವಲೋಕನ ಕ್ರಮದಲ್ಲಿದ್ದು ನಾಟಕೀಯ ಶೈಲಿಯಲ್ಲಿದೆ.ಇವನಿಗು ಇರಿವಬೆಡಂಗನು ಕವಿ ಚಕ್ರವರ್ತಿ ಎಂಬ ಬಿರುದನ್ನು ನೀಡಿದ್ದನು.ಉಳಿದಂತೆ ಕವಿಮುಖಚಂದ್ರ,ಕವಿರತ್ನ,ಕವಿರಾಜಶೇಖರ,ಕವಿಜನ ಚೂಡಾರತ್ನ,ಕವಿ ಚತುರ್ಮುಖ,ಉಭಯ ಕವಿ ಮುಂತಾದ ಬಿರದುಗಳಿವೆ.ಪಂಪನು ಸಮಗ್ರಭಾರತವನ್ನು ವ್ಯಾಸಭಾರತ ಅನುಸರಿಸಿ ಬರೆದರೂ" ನೆತ್ತಮನಾಡಿ ಬಾನುಮತಿ ಸೊಲ್ತೊಡೆ" ಯನ್ನು ಹೊಸದಾಗಿ ಸೇರಿಸಿದ್ದಾನೆ ಎನಿಸುತ್ತದೆ.ರನ್ನ ಅದೇ ಭಾರತವನ್ನು ಒಂದು ಕೊನೆ ಭಾಗದಿಂದ ಸಿಂಹಾವಲೋಕನ ಕ್ರಮದಲ್ಲಿ ನಾಟಕೀಯ ಶೈಲಿಯಲ್ಲಿ ಹೇಳಿದ್ದಾನೆ.ಪಂಪನ ಆದಿಪುರಾಣದಲ್ಲಿ ಭವಾವಳಿಗಳು ಕ್ರಮವಾಗಿವೆ.ಆದರೆ ಪೊನ್ನನು ಶಾಂತಿಪುರಾಣದಲ್ಲಿ ಭವಾವಳಿ ಕ್ರಮತೆ ಕಡಿಮೆ,ಅದೆ ರನ್ನನಲ್ಲು ಕಾಣುತ್ತದೆ.ರನ್ನನ ಸಿಂಹಾವಲೋಕನ ಮತ್ತು ನಾಟಕೀಯತೆಯ ಶಕ್ತಿ ಪಂಪನಲ್ಲಿಲ್ಲ.ಪೊನ್ನನ ಬಗೆಗಿನ ಒಲವು ,ಶೈಲಿ ಹೆಚ್ಚಿದೆ.ಒಬ್ಬೊಬ್ಬ ಒಂದೊಂದು ರೀತಿಯಲ್ಲಿ ತಮ್ಮ ವಿಶೇಷತೆಯನ್ನು ಉಳಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇವರೆಲ್ಲರು ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಕೃತಿಗಳನ್ನ ರಚಿಸಿದ್ದಾರೆ ಆದ್ದರಿಂದಲೆ ಇವರು ರತ್ನತ್ರಯರು.ಮೂವರ ಕೃತಿಗಳು ಕೊನೆಗೆ ಹೇಳುವುದು ತ್ಯಾಗವನ್ನು. ಯುದ್ಧದಿಂದ ಆಗುವ ನಷ್ಟ, ನೋವು, ಭೋಗದಿಂದ ಆಗುವ ಜಿಗುಪ್ಸೆ ಇವೆಲ್ಲ ಮೀರಿದ ವೈರಾಗ್ಯವನ್ನು ಇವು ಬೋಧಿಸುತ್ತವೆ.
This article uses material from the Wikipedia ಕನ್ನಡ article ರತ್ನತ್ರಯರು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.