ವಿಜಯಪುರ ಲೋಕಸಭಾ ಕ್ಷೇತ್ರವು ಕರ್ನಾಟಕದ 28 ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವಾಗಿದೆ .
ಕ್ಷೇತ್ರವು 2008ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನೀಡಲಾಗಿದೆ.. ಲೋಕಸಭಾ ಕ್ಷೇತ್ರ(2018)ದಲ್ಲಿ 8,81,422 ಪುರುಷರು ಹಾಗೂ 8,32,396 ಮಹಿಳೆಯರು ಸೇರಿ ಒಟ್ಟು 17,13,818 ಮತದಾರರಿದ್ದಾರೆ.
ರಮೇಶ ಜಿಗಜಿಣಗಿ, ಪ್ರಸ್ತುತ ಸಂಸದರು | |
---|---|
ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರವು ಆದಿಲ್ಶಾಹಿ ಅರಸರ ರಾಜಧಾನಿಯಾಗಿತ್ತು . ಸೂಫಿ ಸಂತರ ಪ್ರಭಾವದ ನೆಲೆ, ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ,(ಮಿನಿ ತಾಜಮಹಲ್ ) ಭಾರ ಕಮಾನ್ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳಿವೆ.
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶಿವಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಗ್ರಾಮದ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಬೇಸಿಗೆ ಕಾಲದಲ್ಲಿಯೂ ಬತ್ತದ ಈ ಬಾವಿ ಈಗಲೂ ಇದೆ. ಮಮದಾಪುರದಲ್ಲಿ ಆದಿಲ್ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ.
ಬಬಲೇಶ್ವರದ ಶ್ರೀ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇಯಾದ ಪರಂಪರೆಯಿದೆ. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾಖಂಡಕಿ ಗ್ರಾಮದಲ್ಲಿ ಮಹಿಪತಿದಾಸರ ಬೃಂದಾವನವಿದೆ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ ಅರಕೇರಿ ಶ್ರೀ ಅಮೋಘ ಸಿದ್ಧೇಶ್ವರ ದೇವಾಲಯ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ ಬಬಲಾದಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠ, ಐತಿಹಾಸಿಕ ಬೆಳ್ಳುಬ್ಬಿಯ ಮಳೇಮಲ್ಲೇಶ್ವರ ದೇವಾಲಯ, ಐತಿಹಾಸಿಕ ಉಪ್ಪಲದಿನ್ನಿಯ ಸಂಗಮೇಶ್ವರ ದೇವಾಲಯ ಹಾಗೂ ದೇವರ ಗೆಣ್ಣೂರನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ ಬಬಲೇಶ್ವರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ವಾಸವಾಗಿದ್ದರು .
ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತೊಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿದೆ. ಇದರಂತೆ ಹತ್ತಾರು ಸಕ್ಕರೆ ಕಾರ್ಖಾನೆಗಳು ಆರಂಭಗೊಂಡಿವೆ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಲಿಂಬೆ ಹಣ್ಣಿನ ಖಣಜವಾದ ಇಂಡಿ ತಾಲ್ಲೂಕಿನಿಂದ ದೇಶ-ವಿದೇಶಕ್ಕೂ ನಿಂಬೆ ಹಣ್ಣು ರಫ್ತಾಗುತ್ತಿದೆ.
ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ಲಚ್ಯಾಣದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು. ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ ಸಾಲೋಟಗಿಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ. 12ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವರನಾವದಗಿ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ನೀರ್ಥರ ನೆಲೆಯೂ ಹೌದು.
ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸಗಿ-ತಂಗಡಗಿಯಲ್ಲೇ. ತಾಳಿಕೋಟಿ ಸಮೀಪದ ಮಿಣಜಗಿಯ ಪರ್ಸಿ(ತಾರಸಿ) ಎಲ್ಲೆಡೆ ಪ್ರಸಿದ್ಧಿ. ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿವಾಗಿದೆ . 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲ ಸಂಗಮವು ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.
ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಸಾಕಷ್ಟು ಲಂಬಾಣಿ ಜನಾಂಗವನ್ನು ಕಾಣಬಹುದು. ಈತ್ತಿಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್ಟಿಪಿಸಿ ಕೂಡಗಿ ಉಷ್ಣ ವಿದ್ಯುತ್ ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ.
ವಿಜಯಪುರ ಲೋಕಸಭಾ ಕ್ಷೇತ್ರವು ಈ ಕೆಳಗಿನ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.
ವಿಧಾನಸಭೆ ಸಂಖ್ಯೆ | ವಿಧಾನಸಭೆ | ಮೀಸಲಾತಿ |
---|---|---|
26 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
27 | ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
28 | ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
29 | ಬಬಲೇಶ್ವರ ವಿಧಾನ ಸಭಾ ಕ್ಷೇತ್ರ | ಸಾಮಾನ್ಯ |
30 | ವಿಜಯಪುರ ನಗರ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
31 | ನಾಗಠಾಣ ವಿಧಾನಸಭಾ ಕ್ಷೇತ್ರ | ಪರಿಶಿಷ್ಟ ಜಾತಿ |
32 | ಇಂಡಿ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
33 | ಸಿಂದಗಿ ವಿಧಾನಸಭಾ ಕ್ಷೇತ್ರ | ಸಾಮಾನ್ಯ |
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಭಾಗವಹಿಸಿದ ಪ್ರಮುಖ ರಾಜಕೀಯ ಪಕ್ಷಗಳು
ಸಂಸತ್ತಿನ ಸದಸ್ಯರ ವಿವರಣೆ
ವರ್ಷ | ಲೋಕ ಸಭಾ ಕ್ಷೇತ್ರ | ವಿಜೇತರು | ಪಕ್ಷ | ಮತಗಳು | ಉಪಾಂತ ವಿಜೇತರು | ಪಕ್ಷ | ಮತಗಳು |
ಕರ್ನಾಟಕ ರಾಜ್ಯ | |||||||
2019 | ವಿಜಯಪುರ ಲೋಕಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | BJP | 635867 | ಸುನಿತಾ ದೇವಾನಂದ ಚವ್ಹಾಣ | JDS | 377829 |
2014 | ವಿಜಯಪುರ ಲೋಕಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | BJP | 471757 | ಪ್ರಕಾಶ ರಾಠೋಡ | INC | 401938 |
2009 | ವಿಜಯಪುರ ಲೋಕಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | BJP | 308939 | ಪ್ರಕಾಶ ರಾಠೋಡ | INC | 266535 |
2004 | ವಿಜಯಪುರ ಲೋಕಸಭಾ ಕ್ಷೇತ್ರ | ಬಸನಗೌಡ ಪಾಟೀಲ(ಯತ್ನಾಳ) | BJP | 344905 | ಬಿ.ಎಸ್.ಪಾಟೀಲ(ಮನಗೂಳಿ) | INC | 307372 |
1999 | ವಿಜಯಪುರ ಲೋಕಸಭಾ ಕ್ಷೇತ್ರ | ಬಸನಗೌಡ ಪಾಟೀಲ(ಯತ್ನಾಳ) | BJP | 348816 | ಲಕ್ಷ್ಮಿಬಾಯಿ ಗುಡದಿನ್ನಿ | INC | 312177 |
1998 | ವಿಜಯಪುರ ಲೋಕಸಭಾ ಕ್ಷೇತ್ರ | ಎಂ.ಬಿ.ಪಾಟೀಲ | INC | 261623 | ಬಸನಗೌಡ ಲಿಂಗನಗೌಡ ಪಾಟೀಲ | BJP | 208801 |
1996 | ವಿಜಯಪುರ ಲೋಕಸಭಾ ಕ್ಷೇತ್ರ | ಬಸನಗೌಡ ರುದ್ರಗೌಡ ಪಾಟೀಲ | JD | 185504 | ಬಸನಗೌಡ ಪಾಟೀಲ(ಯತ್ನಾಳ) | BJP | 154911 |
1991 | ವಿಜಯಪುರ ಲೋಕಸಭಾ ಕ್ಷೇತ್ರ | ಬಿ.ಕೆ.ಗುಡದಿನ್ನಿ | INC | 207887 | ರಾಜಶೇಖರ ಪಟ್ಟಣಶೆಟ್ಟಿ | BJP | 140233 |
1989 | ವಿಜಯಪುರ ಲೋಕಸಭಾ ಕ್ಷೇತ್ರ | ಬಿ.ಕೆ.ಗುಡದಿನ್ನಿ | INC | 306050 | ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ | JD | 182717 |
1984 | ವಿಜಯಪುರ ಲೋಕಸಭಾ ಕ್ಷೇತ್ರ | ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ | JNP | 206737 | ಡಾ.ಆರ್.ಬಿ.ಚೌಧರಿ | INC | 204318 |
1980 | ವಿಜಯಪುರ ಲೋಕಸಭಾ ಕ್ಷೇತ್ರ | ಕೆ.ಬಿ.ಚೌಧರಿ | INC(I) | 167091 | ನಿಂಗಪ್ಪ ಸಿದ್ದಪ್ಪ ಖೇಡ | JNP | 156529 |
1977 | ವಿಜಯಪುರ ಲೋಕಸಭಾ ಕ್ಷೇತ್ರ | ಕೆ.ಬಿ.ಚೌಧರಿ | INC(I) | 173700 | ಈರಪ್ಪ ಚನ್ನಮಲ್ಲಪ್ಪ ನಾಗಠಾಣ | BLD | 152026 |
ಮೈಸೂರು ರಾಜ್ಯ | |||||||
1971 | ವಿಜಯಪುರ ಲೋಕಸಭಾ ಕ್ಷೇತ್ರ | ಭೀಮಪ್ಪ ಎಲ್ಲಪ್ಪ ಚೌಧರಿ | INC(I) | 131486 | ಬಿ.ಕೆ.ಗುಡದಿನ್ನಿ | INC(O) | 83798 |
ಉಪಚುನಾವಣೆ 1968 | |||||||
1968 | ವಿಜಯಪುರ ಲೋಕಸಭಾ ಕ್ಷೇತ್ರ | ಬಿ.ಕೆ.ಗುಡದಿನ್ನಿ | INC | 107997 | ಆರ್.ಬಿ.ಪಾಟೀಲ | SWA | 59089 |
1967 | ವಿಜಯಪುರ ಲೋಕಸಭಾ ಕ್ಷೇತ್ರ | ಗುರುಲಿಂಗಪ್ಪ ದೇವಪ್ಪ ಪಾಟೀಲ | SWA | 113208 | ರಾಜಾರಾಮ ಗಿರಿಧರಲಾಲ ದುಬೆ | INC | 111104 |
1962 | ವಿಜಯಪುರ ಲೋಕಸಭಾ ಕ್ಷೇತ್ರ | ರಾಜಾರಾಮ ಗಿರಿಧರಲಾಲ ದುಬೆ | INC | 105452 | ಮುರಿಗಪ್ಪ ಸಿದ್ದಪ್ಪ ಸುಗಂಧಿ | SWA | 63456 |
1957 | ವಿಜಯಪುರ ಲೋಕಸಭಾ ಕ್ಷೇತ್ರ | ಮುರಿಗಪ್ಪ ಸಿದ್ದಪ್ಪ ಸುಗಂಧಿ | IND | 88209 | ರಾಜಾರಾಮ ಗಿರಿಧರಲಾಲ ದುಬೆ | INC | 77273 |
ಬಾಂಬೆ ರಾಜ್ಯ | |||||||
1951 | ವಿಜಯಪುರ ಲೋಕಸಭಾ ಕ್ಷೇತ್ರ | ರಾಜಾರಾಮ ಗಿರಿಧರಲಾಲ ದುಬೆ | INC | 119895 | ಮುರಿಗಪ್ಪ ಸಿದ್ದಪ್ಪ ಸುಗಂಧಿ | KMPP | 44095 |
This article uses material from the Wikipedia ಕನ್ನಡ article ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.