ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯ - ಹೊಸಗನ್ನಡ ಸಾಹಿತ್ಯಯಲ್ಲಿ ಮುಖ್ಯವಾಗಿ ಎರಡು ಘಟ್ಟಗಳನ್ನು ಕಾಣುತ್ತೇವೆ : ನವೋದಯ ಮತ್ತು ನವ್ಯ ಸಾಹಿತ್ಯ.
ಇವುಗಳ, ನಡುವೆ ಪ್ರಗತಿಶೀಲ ಎಂಬುದೊಂದುಂಟು. ಆದರೆ ಇದನ್ನು ಸ್ವತಂತ್ರ ಪ್ರಸ್ಥಾನವೆಂದು ಪರಿಗಣಿಸದೆ, ಕೇವಲ ಸಂಧಿ ಸ್ಥಿತಿ ಎಂದು ಭಾವಿಸುವವರೂ ಇದ್ದಾರೆ. ಸು. 1940 ರಿಂದ ಸು. 1950 ರ ವರೆಗೆ ಪ್ರಗತಿಶೀಲ ಸಾಹಿತ್ಯದ ಹರವು ಕಂಡು ಬರುತ್ತದೆ. ಇದು ನವೋದಯ ಸಾಹಿತ್ಯದ ಮುಂದಿನ ಮಜಲು ; ನವೋದಯಕ್ಕೆ ಪ್ರತಿಭಟನೆಯಾಗಿ ತಲೆಯೆತ್ತಿದ್ದು. ಮುಂದೆ ಪ್ರಗತಿಶೀಲ ಸಾಹಿತ್ಯ ಎರಡು ಕವಲುಗಳಾಗಿ ಒಡೆದು, ಒಂದು ಮತ್ತೆ ನವೋದಯದಲ್ಲೂ ಇನ್ನೊಂದು ನವ್ಯದಲ್ಲೂ ವಿಲೀನವಾದುವು. ನವೋದಯ ಪಂಥ ಬಹುಮಟ್ಟಿಗೆ ಕಾವ್ಯ ಪ್ರಕಾರಕ್ಕೆ ಸಂಬಂಧಿಸಿದ್ದರೆ, ಪ್ರಗತಿಶೀಲ ಪಂಥಕತೆ, ಕಾದಂಬರಿಗಳಿಗೆ ಸೀಮಿತವಾಯಿತು ಎಂಬುದು ಗಮನಾರ್ಹ.
ಪ್ರಗತಿಶೀಲ ಸಾಹಿತ್ಯ ಕನ್ನಡದಲ್ಲೇ ಉದ್ಭವಿಸಿದ್ದಲ್ಲ ; ಅಖಿಲ ಭಾರತ ಮಟ್ಟದಲ್ಲಿ ಹುಟ್ಟಿಕೊಂಡ ಚಳವಳಿಯೊಂದರ ಅಲೆಯಾಗಿ ಇದು ಕನ್ನಡಕ್ಕೆ ಬಂತು. ಆ ಚಳವಳಿ ಸು. 1928 ರಲ್ಲೆ ಮೊದಲಾಯಿತೆಂದೂ ಅದಕ್ಕೊಂದು ಸುಸಂಘಟಿತ ರೂಪ ಬಂದದ್ದು 1943 ರಲ್ಲೆ ಎಂದೂ ಹೇಳಲಾಗಿದೆ. ಆ ವರ್ಷ ಅಖಿಲ ಭಾರತ ಪ್ರಗತಿಶೀಲ ಬರಹಗಾರರ ಸಮ್ಮೇಳನ ಮುಂಬಯಿಯಲ್ಲಿ ನಡೆಯಿತು. ಪ್ರಗತಿಶೀಲ ಲೇಖಕರ ಸಂಘ ತನ್ನ ಪ್ರಣಾಳಿಕೆಯಲ್ಲಿ ಮುಂದಿಟ್ಟ ಕೆಲವು ಧ್ಯೇಯಗಳನ್ನು ಲಕ್ಷಿಸಿದರೆ, ಈ ಸಾಹಿತ್ಯದ ಪ್ರೇರಣೆ, ಸ್ವರೂಪಗಳು ವಿಷದವಾಗಬಹುದು.
ಪ್ರಗತಿಶೀಲ ಸಾಹಿತ್ಯಕ್ಕೆ ಸಾಕಷ್ಟು ರಾಜಕೀಯ ಹಿನ್ನೆಲೆಯಿದೆ. ಕಮ್ಯೂನಿಸಂ ಮಾರ್ಕ್ಸ್ವಾದ, ಲೆನಿನ್ ವಿಚಾರಧಾರೆ ಮತ್ತು ರಷ್ಯನ್ ಸಾಹಿತ್ಯ ಅದರ ಮೇಲೆ ಪ್ರಭಾವ ಬೀರಿವೆ. ವರ್ಗ ಸಂಘರ್ಷದಿಂದ ಅದು ಪ್ರಚೋದಿತ. 1942 ರ ಭಾರತ ಸ್ವಾತಂತ್ರ್ಯ ಚಳವಳಿ, ಕ್ಷಾಮ ಪರಿಸ್ಥಿತಿಯ ದಾರುಣತೆ, ದ್ವಿತೀಯ ಮಹಾಯುದ್ಧ ಮುಂತಾದುವೂ ಪ್ರಗತಿಶೀಲ ಆಂದೋಲನದ ಪ್ರೇರಕ ಶಕ್ತಿಗಳು. ಸಮಗ್ರ ಭಾರತದ ಜೀವನವನ್ನು ಪ್ರತಿಬಿಂಬಿಸಬೇಕೆಂಬ ಹಂಬಲ ಮತ್ತು ಭಾರತೀಯ ಸಾಹಿತ್ಯ ಅಂತರ ರಾಷ್ಟ್ರೀಯ ಮಹತ್ವವನ್ನು ಗಳಿಸಬೇಕೆಂಬ ನಿರೀಕ್ಷೆ ಕೂಡ ಅದರ ಹುಟ್ಟಿಗೆ ಕಾರಣಗಳು.
ಮುಖ್ಯವಾಗಿ ಹಿಂದಿ ಸಾಹಿತ್ಯದಿಂದ ಹಾಗೂ ಭಾರತೀಯ ಲೇಖಕರ ಇಂಗ್ಲಿಷ್ ಸಾಹಿತ್ಯದಿಂದ ಕನ್ನಡ ಪ್ರಗತಿಶೀಲ ಸಾಹಿತ್ಯಕ್ಕೆ ಸ್ಫೂರ್ತಿಯೊದಗಿತು. ಅ.ನ.ಕೃ. ಕನ್ನಡದಲ್ಲಿ ಈ ಚಳವಳಿಯ ಮುಂದಾಳಾದರು. ತ.ರಾ.ಸು., ಬಸವರಾಜ ಕಟ್ಟೀಮನಿ, ನಿರಂಜನ, ಚದುರಂಗ, ಅರ್ಚಕ ವೆಂಕಟೇಶ, ಕುಮಾರ ವೆಂಕಣ್ಣ, ಎಸ್.ಅನಂತನಾರಾಯಣ ಮುಂತಾದವರು ಈ ಪಂಥದ ಇತರ ಲೇಖಕರು. ಇದರ ಮೇಲೆ ಮಾಯಾಕೊವಸ್ಕಿ, ಮಾಕ್ಸಿಂಗಾರ್ಕಿ ಮುಂತಾದ ರಷ್ಯನ್ ಸಾಹಿತಿಗಳ ಮತ್ತು ವಾಲ್ಟೇರ್. ಎಮಿಲಿ ಜೋಲಾ, ಸಿಂಕ್ಲೇರ್, ಮೊಪಾಸಾ, ಕುಪ್ರಿನ್, ಇಪ್ಸನ್, ಬರ್ನಾಡ್ ಷಾ ಇತ್ಯಾದಿ ಪಾಶ್ಚಾತ್ಯ ಲೇಖಕರ ಪ್ರಭಾವವಿದೆ. ಪ್ರಗತಿಶೀಲ ಸಾಹಿತ್ಯ ತನ್ನ ಕಾಲದಲ್ಲಿ ತುಂಬ ವಾದವಿವಾದಗಳಿಗೆ ಎಡೆಗೊಟ್ಟಿತು. ಅದರ ಮೇಲಿನ ಮೂರು ಪ್ರಮುಖವಾದ ಆರೋಪಗಳಿವು :
ಹೀಗಿದ್ದೂ ಪ್ರಗತಿಶೀಲ ಸಾಹಿತ್ಯಕ್ಕೆ ಚಾರಿತ್ರಿಕವಾಗಿ ಒಂದು ಗಣ್ಯವಾದ ಸ್ಥಾನವಿದೆ. ವಸ್ತು ವಲಯವನ್ನು ವಿಸ್ತರಿಸಿದ್ದು ಮಾತ್ರವಲ್ಲದೆ ವಾಚಕರ ವಲಯವನ್ನೂ ವಿಸ್ತರಿಸಿದ್ದು, ಓದುವ ಅಭಿರುಚಿಯನ್ನು ಬೆಳೆಸಿದ್ದು ಅದರ ದೊಡ್ಡ ಸಾಧನೆ. " ಪ್ರಗತಿಶೀಲರು ಸಾಹಿತ್ಯದ ಮೂಲಭೂತ ತತ್ತ್ವಗಳಿಗೆ ಸವಾಲು ಹಾಕಿದರು. ಅವುಗಳನ್ನು ಬದಲಿಸುವಲ್ಲಿ ಅವರು ಯಶಸ್ವಿಯಾಗದಿದ್ದರೂ ಅವುಗಳ ಪುನರ್ವಿಮರ್ಶೆ ಅನಿವಾರ್ಯವಾಗುವಂತೆ ಮಾಡಿದರು" ಎಂಬ ಹೇಳಿಕೆಯನ್ನೂ ನೆನೆಯಬಹುದು.
ಇಂದು ಕನ್ನಡದಲ್ಲಿ ಮತ್ತೆ ಪ್ರಗತಿಶೀಲ ಸಾಹಿತ್ಯವನ್ನು ನೆನಪಿಗೆ ತರುವಂಥ ಕೃತಿಗಳ ರಚನೆಯಾಗುತ್ತಿರುವುದು ಗಮನಾರ್ಹ. ನವ್ಯ ಪಂಥಕ್ಕೆ ಪ್ರತಿಭಟನೆಯಾಗಿ ಅನೇಕ ಲೇಖಕರು ಉತ್ಕಟವಾದ ಸಾಮಾಜಿಕ ನಿಷ್ಠೆಯಿಂದ ಬರೆಯುತ್ತಿದ್ದಾರೆ. ಆದರೆ ಇವರು ಕಲೆಯ ಮೇಲೂ ಒಂದು ಕಣ್ಣಿಟ್ಟಿರುವುದರಿಂದ, ಪ್ರಗತಿಶೀಲ ಲೇಖಕರಿಗಿಂತ ಬೇರೆಯಾಗಿ ನಿಲ್ಲುತ್ತಾರೆ. ಈ ಹೊಸ ಬೆಳವಣಿಗೆಯನ್ನು ನಾವಿನ್ನೂ ಕಾದು ನೋಡಬೇಕಾಗಿದೆ.
This article uses material from the Wikipedia ಕನ್ನಡ article ಪ್ರಗತಿಶೀಲ ಸಾಹಿತ್ಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.