ಸುಳ್ಯ ದಕ್ಷಿಣ ಕನ್ನಡದ ಒಂದು ತಾಲೂಕು.
ಬಹುಭಾಗ ಕಾಡಾದರೂ ಶಿಕ್ಷಣದಲ್ಲಿ ಬಹಳ ಹೆಸರುವಾಸಿಯಾದ ಊರು. ಕುಕ್ಕೆ ಸುಬ್ರಹ್ಮಣ್ಯ ಈ ತಾಲೂಕಿನ ಪ್ರಸಿಧ್ಧ ದೇವಸ್ಥಾನ. ಪಯಸ್ವಿನಿ ನದಿ (ಚಂದ್ರಗಿರಿ ನದಿ ಎಂದೂ ಕರೆಯಲಾಗುತ್ತದೆ) ಮುಖ್ಯವಾದುವುಗಳು. "ಸುಳ್ಯ " ಪದವು "ಸುಳಿ" ಎಂಬ ಪದದಿಂದ ಉದ್ಭವಿಸಿತು ಎಂದು ಹೇಳಲಾಗಿದೆ. ಅದೇ ವೇಳೆ "ಸೂಳೆಯ ಗದ್ದೆ" ಎಂಬ ಪದದಿಂದ "ಸೂಳೆಯ" ಎಂದೂ ಅದರಿಂದ ಸೂಳ್ಯ ಎಂಬ ಪದ ಉದ್ಭವವಾಗಿ ಕೊನೆಗೆ "ಸುಳ್ಯ" ಆಯಿತು ಎಂದೂ ಹೇಳಲಾಗುತ್ತದೆ.
ಸುಳ್ಯ ಸುಳ್ಯ | |
---|---|
city | |
Population (2001) | |
• Total | ೧೮,೦೨೬ |
ಸುಳ್ಯ ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಜಿಲ್ಲೆಯ ದಕ್ಷಿಣದಲ್ಲಿ ಕೊನೆಯ ತಾಲ್ಲೂಕಾದ ಇದನ್ನು ಪಶ್ಚಿಮ, ವಾಯವ್ಯ ಮತ್ತು ಉತ್ತರದಲ್ಲಿ ಪುತ್ತೂರು ತಾಲ್ಲೂಕು, ಈಶಾನ್ಯದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಪೂರ್ವಕ್ಕೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕುಗಳೂ ಪಶ್ಚಿಮ ಮತ್ತು ನೈಋತ್ಯದಲ್ಲಿ ಕೇರಳರಾಜ್ಯ, ದಕ್ಷಿಣ ಮತ್ತು ಆಗ್ನೇಯದಲ್ಲಿ ಮಡಿಕೇರಿ ತಾಲ್ಲೂಕು ಸುತ್ತುವರಿದಿವೆ. ಪುತ್ತೂರು ಉಪವಿಭಾಗಕ್ಕೆ ಸೇರಿದ ಈ ಪ್ರದೇಶವನ್ನು ೧೯೬೫ ಡಿಸೆಂಬರ್ ೧೫ ರಂದು ಪ್ರತ್ಯೇಕಿಸಿ ತಾಲ್ಲೂಕೆಂದು ಗುರುತಿಸಲಾಯಿತು. ಪಂಜ ಮತ್ತು ಸುಳ್ಯ ಹೋಬಳಿಗಳು. ೪೧ ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 826.6 ಚ.ಕಿಮೀ. ಇತಿಹಾಸ ಪುರುಷರಾದ "ಕೋಟಿ ಚೆನ್ನಯರ" ಊರು ಎಣ್ಮೂರು ಕೂಡಾ ಇದೇ ತಾಲೂಕಿನಲ್ಲಿದೆ.
ಎಲ್ಲ ಮತ ಪಂಥಗಳ ಜನರೂ ಇಲ್ಲಿ ವಾಸಿಸುತ್ತಿದ್ದಾರೆ, ಮುಖ್ಯವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರು ವಾಸವಾಗಿದ್ದಾರೆ. ತುಳು ಇಲ್ಲಿನ ಪ್ರಮುಖ ಭಾಷೆ ಅಲ್ಲದೆ ಅರೆಭಾಷೆ, ಕನ್ನಡ, ಮಲಯಾಳಂ, ಕೊಂಕಣಿ, ಬ್ಯಾರಿ ಮುಂತಾದ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತಿದೆ. ಈ ಪಟ್ಟಣ ಜಿಲ್ಲಾ ಕೇಂದ್ರ ಮಂಗಳೂರಿನಿಂದ ೮೬ ಕಿ.ಮೀ ಹಾಗೂ ಜಿಲ್ಲೆಯ ಪ್ರಮುಖ ನಗರ ಪುತ್ತೂರಿನಿಂದ ೩೬ ಕಿ.ಮೀ ದೂರದಲ್ಲಿದೆ.
ತಾಲ್ಲೂಕಿನ ಪೂರ್ವಭಾಗ ಪಶ್ಚಿಮ ಘಟ್ಟ ಶ್ರೇಣಿಗಳಿಂದ ಆವೃತವಾಗಿದ್ದು ಪಶ್ಚಿಮ ಭಾಗ ಘಟ್ಟಶ್ರೇಣಿಯ ಇಳಿಜಾರು ಮತ್ತು ವ್ಯವಸಾಯಯೋಗ್ಯ ಭೂಪ್ರದೇಶದಿಂದ ಕೂಡಿದೆ. ಕುಮಾರಧಾರಾ ಮತ್ತು ಪಯಸ್ವಿನಿ ನದಿ ಈ ತಾಲ್ಲೂಕಿನ ಮುಖ್ಯ ನದಿಗಳು. ಸುಬ್ರಹ್ಮಣ್ಯದ ಬಳಿಯ ಕುಮಾರಪರ್ವತದಿಂದ ಹರಿದು ಬರುವ ಕುಮಾರಧಾರಾ ತಾಲ್ಲೂಕಿನ ಪೂರ್ವದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವುದು. ಮುಂದೆ ಪುತ್ತೂರು ತಾಲ್ಲೂಕನ್ನು ಪ್ರವೇಶಿಸಿ ಮತ್ತೆ ತಾಲ್ಲೂಕಿನ ಉತ್ತರದಲ್ಲಿ ಸ್ವಲ್ಪದೂರ ತಾಲ್ಲೂಕು ಗಡಿಯಾಗಿ ಹರಿದು ಪುತ್ತೂರನ್ನು ಪ್ರವೇಶಿಸುವುದು. ಈ ನದಿಗೆ ಅನೇಕ ಸಣ್ಣಪುಟ್ಟ ಹೊಳೆ, ತೊರೆಗಳು ಕೂಡಿಕೊಳ್ಳುವುವು. ಪಯಸ್ವಿನಿ ನದಿ ತಾಲ್ಲೂಕಿನ ದಕ್ಷಿಣದಲ್ಲಿ ಆಗ್ನೇಯ ದಿಂದ ವಾಯವ್ಯಕ್ಕೆ ಹರಿದು ಸುಳ್ಯವನ್ನು ಮುಟ್ಟಿ ಅನಂತರ ಪಶ್ಚಿಮಾಭಿ ಮುಖವಾಗಿ ಹರಿದು ಕೇರಳ ರಾಜ್ಯವನ್ನು ಪ್ರವೇಶಿಸುವುದು. ತಾಲ್ಲೂಕಿನಲ್ಲಿ ಕರಾವಳಿ ಪರ್ವತ ಪ್ರದೇಶದ ವಾಯುಗುಣವಿದ್ದು ಮಲೆನಾಡ ಪ್ರದೇಶಕ್ಕೆ ಸೇರಿದ್ದರೂ ವರ್ಷದ ಹೆಚ್ಚುಕಾಲ ಸೆಕೆಯಿಂದ ಕೂಡಿರುತ್ತದೆ.
ಈ ತಾಲ್ಲೂಕು ಜಲಸಮೃದ್ಧಿಯೊಂದಿಗೆ ಸಸ್ಯಸಮೃದ್ಧಿಯಿಂದಲೂ ಕೂಡಿದೆ. ಬೆಟ್ಟ, ಕಣಿವೆಗಳಲ್ಲಿ ದಟ್ಟ ಅರಣ್ಯಗಳಿವೆ. 46,626 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು ಸಾಗುವಾನಿ, ಬೀಟೆ, ಮತ್ತಿ, ಜಂಬೆ, ಕಾಡಹಲಸು, ಹುನಗಲು, ನಂದಿ, ಮಾವು, ಕೀರಲಬೋಗಿ ಮುಂತಾದ ಬೆಲೆಬಾಳುವ ಮರಗಳ ಜೊತೆಗೆ ಹುಣಿಸೆ, ರಾಮಪತ್ರೆ, ಅಂಟುವಾಳದಂತಹ ಮರಗಳೂ ಬೊಂಬು, ಬೆತ್ತ, ಬೆಂಕಿಕಡ್ಡಿಗಳಿಗೆ ಬೇಕಾದಂಥ ಮೆದು ತಿರುಳಿನ ಮರಗಳೂ ಬೆಳೆಯುತ್ತವೆ. ರಬ್ಬರ್ ತೋಟಗಳನ್ನೂ ಬೆಳೆಸಿ ವಿಸ್ತರಿಸಲಾಗುತ್ತಿದೆ. ೪೩೯೦ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ತೋಟವನ್ನು ಬೆಳೆಸಲಾಗಿತ್ತು.
ತಾಲ್ಲೂಕಿನ ಹೆಚ್ಚುಭಾಗ ಜಂಬುಮಣ್ಣಿನ ಹೆಚ್ಚು ಮಳೆ ಬೀಳುವ ಪ್ರದೇಶಕ್ಕನುಗುಣವಾಗಿರುವ ಮತ್ತು ಪೂರ್ವದ ಕಡೆ ಬಂಡು ಮಣ್ಣಿನ ಪ್ರದೇಶದಿಂದ ಕೂಡಿದೆ. ಬತ್ತ ಇಲ್ಲಿನ ಮುಖ್ಯ ಬೆಳೆ. ಅಡಕೆ, ತೆಂಗು, ಗೋಡಂಬಿ, ಕೋಕೊ, ವೀಳೆಯದೆಲೆ, ಮೆಣಸು, ಶುಂಠಿ, ಏಲಕ್ಕಿ, ಬಾಳೆ, ಮಾವು, ಮರಗೆಣಸು-ಇವು ವಾಣಿಜ್ಯ ಬೆಳೆಗಳು
ಸುಳ್ಯದ ಈಶಾನ್ಯಕ್ಕೆ ೩೪ ಕಿಮೀ ದೂರದಲ್ಲಿರುವ ಬಳಪಗ್ರಾಮ ವಿಜಯನಗರದ ಕಾಲದಲ್ಲಿ ಕೆಲವು ನಾಯಕರ ಆಡಳಿತ ಕೇಂದ್ರವಾಗಿತ್ತು. ಇಲ್ಲಿ ಸ್ವಲ್ಪಭಾಗ ಹಾಳಾಗಿರುವ ತ್ರಿಶೂಲಿನಿ ದೇವಾಲಯವಿದೆ. ಸುಳ್ಯದ ಉತ್ತರಕ್ಕೆ ೧೯ ಕಿಮೀ ದೂರದಲ್ಲಿರುವ ಬೆಳ್ಳಾರೆ ಒಂದು ವ್ಯಾಪಾರ ಕೇಂದ್ರ. ಇದು ಬಲ್ಲಾಳ ವಂಶಸ್ಥರ ಗ್ರಾಮವಾಗಿದ್ದು ಇಲ್ಲಿ ಅವರು ಅರಮನೆ ಮತ್ತು ಬಸದಿಯನ್ನು ಕಟ್ಟಿಸಿದ್ದರು. ಇಕ್ಕೇರಿಯ ವೆಂಕಟಪ್ಪನಾಯಕ ಇಲ್ಲಿ ಒಂದು ಕೋಟೆ ಕಟ್ಟಿಸಿದ್ದ. ೧೭೭೫ರಲ್ಲಿ ಟಿಪ್ಪುವಿನ ವಶವಾಗಿದ್ದು ಮತ್ತೆ ೧೭೯೯ರಲ್ಲಿ ಕೊಡಗಿನ ರಾಜರಿಗೆ ಸೇರಿತು. ೧೮೩೪ರಲ್ಲಿ ಈ ಪ್ರದೇಶವೆಲ್ಲ ಕೊಡಗಿನ ಜೊತೆ ಬ್ರಿಟಿಷರಿಗೆ ಸೇರಿಹೋಯಿತು. ಸುಳ್ಯದ ಈಶಾನ್ಯಕ್ಕೆ ೪೪ ಕಿಮೀ ದೂರದಲ್ಲಿರುವ ಸುಬ್ರಹ್ಮಣ್ಯ ಒಂದು ಪುಣ್ಯಕ್ಷೇತ್ರ. ಕುಮಾರ ಮತ್ತು ಶೇಷ ಪರ್ವತಗಳ ಮಧ್ಯೆ ಇರುವ ಇದನ್ನು ಕುಕ್ಕೆ ಸುಬ್ರಹ್ಮಣ್ಯ, ಪುಷ್ಪಗಿರಿ ಎಂದೂ ಕರೆಯುತ್ತಾರೆ. ಮಳೆಗಾಲದಲ್ಲಿ ಹೋಗಲಾಗದ ಈ ಗ್ರಾಮಕ್ಕೆ ತಾಲ್ಲೂಕಿನ ಎಲ್ಲ ಕಡೆಯಿಂದಲೂ ಮಾರ್ಗವಿದೆ. ಇಲ್ಲಿನ ಸುಬ್ರಹ್ಮಣ್ಯ ದೇವಾಲಯ ಮತ್ತು ಪ್ರತಿವರ್ಷ ನವೆಂಬರ್ - ಡಿಸೆಂಬರ್ ತಿಂಗಳಲ್ಲಿ ಜರಗುವ ಜಾತ್ರೆ ಬಹು ಪ್ರಸಿದ್ಧ.
This article uses material from the Wikipedia ಕನ್ನಡ article ಸುಳ್ಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.