ಸವಿತಾ ಭೀಮರಾವ್ ಅಂಬೇಡ್ಕರ್ (೨೭ ಜನವರಿ ೧೯೦೯ - ೨೯ ಮೇ ೨೦೦೩), ಭಾರತದ ಒಬ್ಬ ಸಾಮಾಜಿಕ ಕಾರ್ಯಕರ್ತೆ, ವೈದ್ಯೆ, ಭಾರತೀಯ ಸಂವಿಧಾನದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.
ಆರ್. ಅಂಬೇಡ್ಕರ್">ಡಾ.ಬಿ.ಆರ್. ಅಂಬೇಡ್ಕರ್ರವರ ಎರಡನೆಯ ಪತ್ನಿ. ಅಂಬೇಡ್ಕರ್ ವಾದಿಗಳು ಮತ್ತು ನವಬೌದ್ಧರು ಅವರನ್ನು ಮಾಯಿ ಅಥವಾ ಮಾಯಿಸಾಹೇಬ (ಮರಾಠಿ ಭಾಷೆಯಲ್ಲಿ ತಾಯಿ) ಎಂದು ಕರೆಯುತ್ತಾರೆ.ಅವರು ಡಾ.ಬಿ.ಆರ್. ಅಂಬೇಡ್ಕರ್ರ ಹಲವು ಚಳುವಳಿಗಳಲ್ಲಿ ಮತ್ತು ಪುಸ್ತಕ ಬರವಣಿಗೆಯಲ್ಲಿ ಸಹಾಯ ಮಾಡಿದರು. ಅವುಗಳಲ್ಲಿ ಹಿಂದೂ ಕೋಡ್ ಬಿಲ್, ಬುದ್ಧ ಮತ್ತು ಅವನ ದಮ್ಮ ಮುಖ್ಯವಾದವು.
ಸವಿತಾ ಭೀಮರಾವ್ ಅಂಬೇಡ್ಕರ್ | |
---|---|
Born | ಶಾರದಾ ಕೃಷ್ಣರಾವ್ ಕಬೀರ್ ೨೭ನೇ ಜನವರಿ ೧೯೦೯ |
Died | ೨೭ನೇ ಮೇ ೨೦೦೩ (ವಯಸ್ಸು ೯೪) |
Nationality | ಭಾರತೀಯ |
Education | ಎಂ.ಬಿ.ಬಿ.ಎಸ್ |
Alma mater | ಗ್ರಾಂಟ್ ವೈದ್ಯಕೀಯ ಕಾಲೇಜ್, ಮುಂಬೈ, ಮಹಾರಾಷ್ಟ್ರ |
Occupation(s) | ಸಾಮಾಜಿಕ ಕಾರ್ಯಕರ್ತೆ, ವೈದ್ಯೆ |
Known for | ಸಾಮಾಜಿಕ ಕಾರ್ಯ |
Works | ಡಾ.ಅಂಬೇಡ್ಕರಾಂಚ್ಯ ಸಹವಾಸತ್ |
Spouse(s) | ಡಾ.ಬಿ.ಆರ್. ಅಂಬೇಡ್ಕರ್ (ಮದುವೆ. ೧೯೪೮ - ಸಾವು. ೧೯೫೬) |
ಮುಂಬೈಯ ಒಂದು ಮರಾಠಿ ಬ್ರಾಹ್ಮಣ ಪರಿವಾರದಲ್ಲಿ ಸವಿತಾರ ಜನನವು ೨೭ ಜನವರಿ ೧೯೦೯ ರಂದು ಆಯಿತು. ಅವರ ತಂದೆಯ ಹೆಸರು ಕೃಷ್ಣರಾವ್ ವಿನಾಯಕ್ ಕಬೀರ್ ಮತ್ತು ತಾಯಿ ಜಾನಕಿ. ಅವರ ಜನ್ಮನಾಮ ಶಾರದಾ ಕಬೀರ್. ಅವರ ಮೂಲ ಗ್ರಾಮ ದೋರ್ಸ. ಈಗಿನ ಮಹಾರಾಷ್ಟ್ರ ರಾಜ್ಯದ, ರತ್ನಗಿರಿ ಜಿಲ್ಲೆಯ, ರಾಜಪುರ್ ತಾಲೂಕಿನಲ್ಲಿದೆ. ಅಲ್ಲಿಂದ ಅವರ ತಂದೆ ಮುಂಬೈಗೆ ವಲಸೆ ಬಂದಿದ್ದರು.
ಶಾರದಾರವರು ಒಳ್ಳೆಯ ವಿಧ್ಯಾರ್ಥಿನಿಯಾಗಿದ್ದರು. ಪುಣೆಯಲ್ಲಿ ಅವರ ಪ್ರಾರಂಭಿಕ ಶಿಕ್ಷಣವಾಯಿತು. ನಂತರ ೧೯೩೭ರಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಗ್ರಾಂಟ್ ವೈದ್ಯಕೀಯ ಕಾಲೇಜ್ ಮುಂಬೈನಲ್ಲಿ ಪಡೆದರು. ಪದವಿ ಮುಗಿದ ಮೇಲೆ ಗುಜರಾತ ರಾಜ್ಯದ ಒಂದು ದೊಡ್ಡ ಆಸ್ಪತ್ರೆಯಲ್ಲಿ ಅವರಿಗೆ ವೈದ್ಯಕೀಯ ಅಧಿಕಾರಿಯಾಗಿ ಕೆಲಸ ದೊರೆಯಿತು. ಆದರೆ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಮುಂಬೈಗೆ ಹಿಂತಿರುಗಿದರು.
ಶಾರದಾರವರ ತಂದೆ ತಾಯಿಗೆ ೮ ಮಕ್ಕಳು. ಅವರಲ್ಲಿ ೬ ಮಕ್ಕಳು ಅಂತರ್ಜಾತೀಯ ವಿವಾಹವಾಗಿದ್ದರು. ಆಗಿನ ಸನ್ನಿವೇಶದಲ್ಲಿ ಮರಾಠಿ ಬ್ರಾಹ್ಮಣರಲ್ಲಿ ಇದೊಂದು ವಿಶೇಷ ವಿಶಯವಾಗಿತ್ತು. ಮುಂದೊಮ್ಮೆ ಇದರ ಬಗ್ಗೆ ಸವಿತಾರವರು "ನಮ್ಮ ಪರಿವಾರ ಅಂತರ್ಜಾತೀಯ ವಿವಾಹವನ್ನು ವಿರೋಧಿಸಲಿಲ್ಲ ಏಕೆಂದರೆ ಇಡೀ ಪರಿವಾರದಲ್ಲಿ ವಿದ್ಯಾವಂತರು ಮತ್ತು ಪ್ರಗತಿಪರರು ತುಂಬಿದ್ದರು." ಎಂದಿದ್ದರು .
ಎಸ್.ಎಮ್.ರಾವ್ ಎಂಬ ವೈದ್ಯರು ಮುಂಬೈಯ ವಿಲೆ ಪಾರ್ಲೆಯಲ್ಲಿ ಇದ್ದರು. ಇವರು ಡಾ| ಶಾರದಾ ಕಬೀರರ ಸಂಬಂಧಿಕರು ಮತ್ತು ಬಾಬಾಸಾಹೇಬ ಆಂಬೇಡ್ಕರರೊಂದಿಗೆ ಒಳ್ಳೆಯ ಸಂಬಂಧವನ್ನು ಹೋಂದಿದ್ದವರಾಗಿದ್ದರು. ಅಲ್ಲೆ ಇವರಿಬ್ಬರ ಮೊದಲು ಭೇಟಿಯಾಗಿದ್ದು. ಆಗ ಬಾಬಾಸಾಹೇಬರು ವೈಸ್ರಾಯ್ರ ಮಂತ್ರಿಮಂಡಲದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಬಾಬಾಸಾಹೇಬರ ಧೀಮಂತ ವ್ಯಕ್ತಿತ್ವವು ಡಾ| ಶಾರದಾರರನ್ನು ಆಕರ್ಷಿಸಿತು. ಡಾ|ಅಂಬೇಡ್ಕರರು ಒಬ್ಬ ಅಸಾಧಾರಣ ಮತ್ತು ಶ್ರೇಷ್ಠ ವ್ಯಕ್ತಿ ಎಂದು ಅವರ ಮೊದಲ ಭೇಟಿಯಲ್ಲೇ ಶಾರದಾರಿಗೆ ತಿಳಿಯಿತು. ಆ ಭೇಟಿಯಲ್ಲಿ ಬಾಬಾಸಾಹೇಬರು ಮಹಿಳೆಯರಿಗಾಗಿ ಇವರು ಮಾಡುತ್ತಿದ್ದ ಕಾರ್ಯವನ್ನು ಶ್ಲಾಘಿಸಿದರು. ಮೊದಲ ಭೇಟಿಯಲ್ಲೇ ಇವರಿಬ್ಬರು ಬೌದ್ಧ ಧರ್ಮದ ಬಗ್ಗೆ ಚರ್ಚಿಸಿದರು
ಇವರಿಬ್ಬರ ಎರಡನೆಯ ಭೇಟಿ ಡಾ|ಮಾವಳಂಕರರ ಚಿಕಿತ್ಸಾಲಯದಲ್ಲಿ ಆಯಿತು. ಆಗ ಸಂವಿಧಾನ ರಚನೆಯಲ್ಲಿ ತೊಡಗಿದ್ದ ಬಾಬಾಸಾಹೇಬರು, ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಕಾಲುಗಂಟು ನೋವಿನಿಂದ ಬಳಲುತ್ತಿದ್ದರು. ಆ ಕಾರಣಕ್ಕೆ ಮುಂಬೈಗೆ ಬಂದಿದ್ಧರು. ಈ ಚಿಕಿತ್ಸೆಯ ಸಮಯದಲ್ಲಿ ಅವರಿಬ್ಬರು ಒಬ್ಬರನ್ನೊಬ್ಬರು ಹೆಚ್ಚು ಅರಿತುಕೊಂಡರು. ಸಾಹಿತ್ಯ, ಸಮಾಜ, ಧರ್ಮ ಇವುಗಳ ಬಗ್ಗೆ ಇಬ್ಬರಲ್ಲೂ ಚರ್ಚೆಯಾಗುತ್ತಿತ್ತು. ೧೯೩೫ರಲ್ಲಿ ಬಾಬಾಸಾಹೇಬರ ಪತ್ನಿ, ರಮಾಬಾಯಿ ಅಂಬೇಡ್ಕರರು ನಿಧನರಾಗಿದ್ದರು. ಆನಂತರ ಬಾಬಾಸಾಹೇಬರು ಮತ್ತೆ ಮದುಮದುವೆಯಾಗಿರಲಿಲ್ಲ. ಬಾಬಾಸಾಹೇಬರು ತಮ್ಮನ್ನು ನೋಡಿಕೊಳ್ಳುಲು ಒಬ್ಬರಿದ್ದರೆ ಒಳಿತೆಂದು ಮತ್ತು ಇವರಿಬ್ಬರ ಆಸಕ್ತಿಗಳು ಹೊಂದುತ್ತಿದ್ದ ಕಾರಣ ೧೯೪೮ರಲ್ಲಿ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದರು.
೧೫ನೇ ಎಪ್ರಿಲ್ ೧೯೪೮ರಂದು ಇಬ್ಬರು ದಹಲಿಯಲ್ಲಿ ರಿಜಿಸ್ಟರ್ಡ ಮದುವೆಯಾದರು (ಸಿವಿಲ್ ಮದುವೆ). ಆಗ ಶಾರದಾರವರಿಗೆ ೩೯ ವರ್ಷ ಮತ್ತು ಬಾಬಾಸಾಹೇಬರಿಗೆ ೫೭ ವರ್ಷ. ಶಾರದಾರವರ ತಮ್ಮ ಈ ಮದುವೆಗೆ ಸಾಕ್ಷಿಯಾಗಿದ್ದರು. ಮದುವೆಯ ತರುವಾಯ ಶಾರದಾರವರು ತಮ್ಮ ಹೆಸರನ್ನು ಸವಿತಾ ಎಂದು ಬದಲಾಯಿಸಿಕೊಂಡರು. ಆಗಿನ ಗೌವರ್ನರ್ ಜೆನರಲ್ ಅಗಿದ್ದಂತ ಸಿ. ರಾಜಗೋಪಾಲಚಾರಿ ನವ ದಂಪತಿಗಳನ್ನು ಸ್ನೇಹ ಭೋಜನಕ್ಕೆ ತಮ್ಮ ಅಧಿಕೃತ ನಿವಾಸಕ್ಕೆ ಕರೆದು ಸತ್ಕರಿಸಿದರು.
ಮದುವೆಯಾದ ಮೇಲೆ ಸವಿತಾರವರು ತಮ್ಮ ಪತಿಯ ಸೇವೆಯಲ್ಲಿ ತಲ್ಲೀನರಾದರು. ಬಾಬಾಸಾಹೇಬರಿಗೆ ಅವರ ಕಡೆಗಾಲದವರೆಗೂ ಈ ಸೇವೆಯನ್ನು ಮುಂದುವರೆಸಿದರು. ಈ ನಿಷ್ಕಲ್ಮಷ ಸೇವೆಯನ್ನು ತಮ್ಮ ಕೃತಿಯಲ್ಲಿ ಅಂಬೇಡ್ಕರರು ನೆನೆದಿದ್ದಾರೆ.
ಇದನ್ನು ಕೂಡ ನೋಡಬಹುದು ದಲಿತ ಬೌದ್ಧ ಚಲುವಳಿ, ನವಬೌದ್ಧರು
೧೪ ಅಕ್ಟೋಬರ್ ೧೯೫೬, ಅಶೋಕ ವಿಜಯ ದಶಮಿಯ ದಿನ (ಈ ದಿನ ಸಾಮ್ರಾಟ್ ಅಶೋಕ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ), ಸವಿತಾ ಅಂಬೇಡ್ಕರರು ತಮ್ಮ ಪತಿಯೊಂದಿಗೆ ನಾಗಪುರದ ದೀಕ್ಷಾಭೂಮಿಯಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಬರ್ಮಾದ ಬೌದ್ಧ ಭಿಕ್ಕು ಮಹಾಸ್ತವಿರ್ ಬೌದ್ಧ ಧರ್ಮದ ಸಾಂಪ್ರದಾಯಿಕ ದೀಕ್ಷೆ ನೀಡಿದರು. ಇದನ್ನು ಸ್ವೀಕರಿಸಿದ ಅಂಬೇಡ್ಕರ್, ತಮ್ಮ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳನ್ನೊಳಗೊಂಡ ೫,೦೦,೦೦೦ಕ್ಕೂ ಹೆಚ್ಚಿನ ಜನಸಮೂಹಕ್ಕೆ ತಾವೇ ದೀಕ್ಷೆ ಕೊಟ್ಟರು. ಬೆಳಗ್ಗೆ ೦೯ಕ್ಕೆ ಸರಿಯಾಗಿ ಶುರುವಾದ ದೀಕ್ಷಾ ಕಾರ್ಯಕ್ರಮದಲ್ಲಿ ಸವಿತಾ ಅಂಬೇಡ್ಕರರು ದೀಕ್ಷೆ ಸ್ವೀಕರಿಸಿದ ಮೊದಲ ಮಹಿಳೆಯಾಗಿದ್ದರು.
ದಿಲ್ಲಿಯ ಅಧಿಕೃತ ನಿವಾಸಕ್ಕೆ ಅಂಬೇಡ್ಕರರ ಅನುಯಾಯಿಗಳು, ಗೆಳೆಯರು ಬರುತ್ತಿದ್ದರು. ಆದರೆ ಬಾಬಾಸಾಹೇಬರ ಖಾಯಿಲೆಯ ಕಾರಣ ಬಂದವರಿಗೆ ಬಾಬಾಸಾಹೇಬರ ಭೇಟಿಗೆ ಅವಕಾಶ ಸಿಗುತ್ತಿರಲಿಲ್ಲ. ಇದು ಕೆಲ ಹಿಂಬಾಲಕರಿಗೆ ಬೇಸರ ಮೂಡಿಸಿತ್ತು. ಸವಿತಾ ಅಂಬೇಡ್ಕರರು, ಬಾಬಾಸಾಹೇಬರ ಪತ್ನಿ ಮತ್ತು ವೈದ್ಯ ಎಂಬ ಎರಡೂ ಪಾತ್ರಗಳನ್ನು ದಕ್ಷವಾಗಿ ನಿರ್ವಹಿಸುತ್ತಿದ್ದರು.
ಅಂಬೇಡ್ಕರರ ನಿಧನದ ನಂತರ ಕೆಲ ಅಂಬೇಡ್ಕರವಾದಿಗಳು ಅವರ ಸಾವಿಗೆ ಸವಿತಾ ಅಂಬೇಡ್ಕರರೇ ಕಾರಣ ಎಂದು ಆರೋಪಿಸಿದರು. ಅವರು ಮೂಲತಃ ಬ್ರಾಹ್ಮಣರಾದ ಕಾರಣ ಅವರನ್ನು ದಲಿತ ಚಳುವಳಿಯಿಂದ ದೂರ ಮಾಡಲಾಯಿತು. ತತ್ಕಾಲೀನ ಪ್ರಧಾನಿ ಜವಾಹರಲಾಲ್ ನೆಹರುರವರು ಅಂಬೇಡ್ಕರರ ಸಾವಿನ ಬಗ್ಗೆ ತನಿಖೆಗೆ ಒಂದು ಸಮಿತಿ ರಚಿಸಿದರು. ಈ ತನಿಖಾ ಸಮಿತಿ ಕೂಲಂಕೂಷವಾಗಿ ಎಲ್ಲಾ ಮಾಹಿತಿಗಳನ್ನು ಪರಾಂಬರಿಸಿ, ಸವಿತಾ ಅಂಬೇಡ್ಕರರನ್ನು ಈ ಆರೋಪದಿಣದ ಮುಕ್ತಗೊಳಿಸಿತು. ಸವಿತಾರವರು ೧೯೭೨ರವರೆಗೂ ದೆಹಲಿಯ ಬಳಿಯ ಮೆಹರೌಲಿಯ ಅಂಬೇಡ್ಕರರ ತೋಟದ ಮನೆಯಲ್ಲಿ ವಾಸಿಸಿದರು .
ಅಂಬೇಡ್ಕರರ ನಿಧನದ ನಂತರ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ಸರ್ವೆಪಲ್ಲಿ ರಾಧಾಕೃಷ್ಣನ್ ರವರು ಸವಿತಾ ಅಂಬೇಡ್ಕರರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ಮಾಡಲು ಪ್ರಯತ್ನಿಸಿದರು. ಕಾಂಗ್ರೆಸ್ಸಿನ ಸಹಾಯ ಪಡೆದುಕೊಂಡು ರಾಜ್ಯಸಭೆಯ ಸದಸ್ಯಳಾದರೆ ಅದು ಅಂಬೇಡ್ಕರರು ಜೀವನ ಪರ್ಯಂತ ನಂಬಿದ್ದ ಸಿದ್ಧಾಂತಗಳಿಗೆ ದ್ರೋಹಬಗೆದು ಅವುಗಳಿಗೆ ತಿಲಾಂಜಲಿ ಇಟ್ಟಂತಾಗುತ್ತದೆಂದು ಸವಿತಾ ಅಂಬೇಡ್ಕರರು ಇದನ್ನು ಸ್ವೀಕರಿಸಲಿಲ್ಲ
ಅವರನ್ನು ರಿಪಬ್ಲಿಕನ್ ಪಾರ್ಟಿ ಆಫ ಇಂಡಿಯಾದ ನಾಯಕರಾದ ರಾಮದಾಸ್ ಅಠಾವಳೆ ಮತ್ತು ಗಂಗಾಧರ ಗಧೆಯವರು ಅಂಬೇಡ್ಕರವಾದಿ ಚಳುವಳಿಯ ಮುಖ್ಯಪ್ರವಾಹಕ್ಕೆ ಮರುಳಿ ಕರೆತಂದರು. ದಲಿತ್ ಪಾಂಥರ್ಸ ಪಕ್ಷದ ಯುವ ಕಾರ್ಯಕರ್ತರು ಅವರನ್ನು 'ಮಾಯಿ' ಎಂದು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ರಿಡ್ಡಲ್ಸ ಇನ್ ಹಿಂದುಯಿಸಂ ಪುಸ್ತಕದಲ್ಲಿ ಇವರ ಪಾತ್ರದಿಂದ ದಲಿತರಲ್ಲಿ ಇವರ ಬಗ್ಗೆಯಿದ್ದ ತಪ್ಪು ತಿಳುವಳಿಕೆ ದೂರವಾಗಿ ಗೌರವ ಹೆಚ್ಚಾಯಿತು. ನಂತರ ಅವರು ವಯೋಸಹಜ ಕಾರಣದಿಂದ ದಲಿತ ಚಳುವಳಿಯಿಂದ ದೂರವಾದರು.
೧೯೯೦ರಲ್ಲಿ ಬಾಬಾಸಾಹೇಬ ಅಂಬೇಡ್ಕರರ ಜನ್ಮಶತಾಬ್ಧಿ ಆಚರಣೆಯ ಸಮಯದಲ್ಲಿ, ಬಾಬಾಸಾಹೇಬರಿಗೆ ಭಾರತದ ಆತ್ಯುಚ್ಚ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು, ಮರಣೋಪರಾಂತ, ತತ್ಕಾಲೀನ ರಾಷ್ಟ್ರಪತಿ ಆರ್ ವೆಂಕಟರಾಮನ್ರವರು, ರಾಷ್ಟ್ರಪತಿ ಭವನದಲ್ಲಿ ೧೪ ಎಪ್ರಿಲ್ ೧೯೯೦ರಂದು ಸವಿತಾ ಅಂಬೇಡ್ಕರರಿಗೆ ನೀಡಿದರು.
ತಮ್ಮ ಪತಿಯ ಸಾವಿನ ನಂತರ ಸವಿತಾ ಅಂಬೇಡ್ಕರರು ಏಕಾಂಗಿಯಾದರು. ಕೆಲವು ವರ್ಷಗಳ ತರುವಾಯ ಅವರು ದಲಿತ ಚಳುವಳಿಯೊಡನೆ ಸ್ವಲ್ಪ ಸಮಯ ಗುರುತಿಸಿಕೊಂಡರು. ೧೯ ಎಪ್ರಿಲ್ ೨೦೦೩ ರಂದು ಅವರಿಗೆ ಉಸಿರಾಟದ ತೊಂದರೆಯುಂಟಾಗಿ, ಮುಂಬೈಯ ಜೆ.ಜೆ ಆಸ್ಪತ್ರೆಗೆ ಸೇರಿಸಲಾಯಿತು. ೨೯ ಮೇ ೨೦೦೩ರಂದು ತಮ್ಮ ೯೪ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಅವರು ಡಾ.ಅಂಬೇಡ್ಕರಾಂಚ್ಯ ಸಹವಾಸತ್ ಎಂಬ ಒಂದು ಆತ್ಮಚರಿತ್ರೆ ಬರೆದಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಎಂಬ ಚಲನಚಿತ್ರಕ್ಕೆ ಕೊಡುಗೆ ನೀಡಿದ್ದಾರೆ. ಚಲನಚಿತ್ರದಲ್ಲಿ ಮೃಣಾಲ್ ಕುಲ್ಕರ್ಣಿಯವರು ಸವಿತಾ ಅಂಬೇಡ್ಕರರ ಪಾತ್ರವನ್ನು ನಿರ್ವಹಿಸಿದ್ದಾರೆ.
This article uses material from the Wikipedia ಕನ್ನಡ article ಸವಿತಾ ಅಂಬೇಡ್ಕರ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.