ಬಿ. ಆರ್. ಅಂಬೇಡ್ಕರ್

ಡಾ.

ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬) - ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ.

ಭೀಮರಾವ್ ರಾಮ್‌ಜೀ ಅಂಬೇಡ್ಕರ್
ಬಿ. ಆರ್. ಅಂಬೇಡ್ಕರ್
೧೩ ಅಕ್ಟೋಬರ್ ೧೯೩೫ ರಲ್ಲಿ ಯೋಲ ನಾಸಿಕ್ನಲ್ಲಿ ರಾಲಿಯಲ್ಲಿ ಉದ್ದೇಶಿಸಿ ಭಾಷಣ ಮಾಡುತ್ತಿರುವ ಡಾ.ಬಾಬಾ ಸಾಹೇಬ್ಅಂಬೇಡ್ಕರ್

ಅಧ್ಯಕ್ಷರು ಸಂವಿಧಾನ ರಚನಾ ಸಮಿತಿ
ಅಧಿಕಾರ ಅವಧಿ
೨೯ ಆಗಸ್ಟ್ ೧೯೪೭ – ೨೪ ಜನವರಿ ೧೯೫೦

ಮೊದಲನೆಯ ಕಾನೂನು ಸಚಿವ
ಅಧಿಕಾರ ಅವಧಿ
೧೫ ಆಗಸ್ಟ್ ೧೯೪೭ – ಸೆಪ್ಟೆಂಬರ್ ೧೯೫೧
ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್
ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು
ಪೂರ್ವಾಧಿಕಾರಿ ಸ್ಥಾನವನ್ನು ಸ್ಥಾಪಿಸಿದರು

ಕಾರ್ಮಿಕ ಸದಸ್ಯ ವೈಸ್ ರಾಯ್ ನಿರ್ವಾಹಕ ಸಮಿತಿ
ಅಧಿಕಾರ ಅವಧಿ
೧೯೪೨ – ೧೯೪೬
ಪೂರ್ವಾಧಿಕಾರಿ ಫಿರೋಜ್ ಖಾನ್ ನೂನ್
ಉತ್ತರಾಧಿಕಾರಿ ಸ್ಥಾನವನ್ನು ರದ್ದುಪಡಿಸಲಾಯಿತು
ವೈಯಕ್ತಿಕ ಮಾಹಿತಿ
ಜನನ (೧೮೯೧-೦೪-೧೪)೧೪ ಏಪ್ರಿಲ್ ೧೮೯೧
ಮೊವ್, ಕೇಂದ್ರೀಯ ಪ್ರಾಂತಗಳು, ಬ್ರಿಟಿಷ್ ಭಾರತ (ಈಗ ಮಧ್ಯಪ್ರದೇಶದಲ್ಲಿದೆ)
ಮರಣ 6 December 1956(1956-12-06) (aged 65)
ದೆಹಲಿ, ಭಾರತ
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ರಮಾಬಾಯಿ ಅಂಬೇಡ್ಕರ್ (ವಿವಾಹ 1906)

ಸವಿತಾ ಅಂಬೇಡ್ಕರ್ (ವಿವಾಹ 1948)

ಅಭ್ಯಸಿಸಿದ ವಿದ್ಯಾಪೀಠ ಮುಂಬಯಿ ವಿಶ್ವವಿದ್ಯಾಲಯ
ಕೊಲಂಬಿಯಾ ವಿಶ್ವವಿದ್ಯಾಲಯ
ಲಂಡನ್ ವಿಶ್ವವಿದ್ಯಾಲಯದ
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್
ಧರ್ಮ ಬೌದ್ಧ ಧರ್ಮ
ಸಹಿ ಬಿ. ಆರ್. ಅಂಬೇಡ್ಕರ್
ಮಿಲಿಟರಿ ಸೇವೆ
ಪ್ರಶಸ್ತಿಗಳು ಭಾರತರತ್ನ
ಬಿ. ಆರ್. ಅಂಬೇಡ್ಕರ್
ಡಾ. ಬಿ.ಆರ್. ಅಂಬೇಡ್ಕರ್
ಬಿ. ಆರ್. ಅಂಬೇಡ್ಕರ್
ಸಂವಿಧಾನ ರಚನಾಸಭೆ, 1950ರಲ್ಲಿ. ಬಲಗಡೆ ಮೇಲ್ತುದಿಯಲ್ಲಿ ಕುಳಿತಿರುವ ಡಾ. ಅಂಬೇಡ್ಕರ್
ಬಿ. ಆರ್. ಅಂಬೇಡ್ಕರ್
ಪತ್ನಿ ಸವಿತಾರೊಂದಿಗೆ, 1948ರಲ್ಲಿ
ಬಿ. ಆರ್. ಅಂಬೇಡ್ಕರ್
ಅಂಬೇಡ್ಕರ್ ವಿದ್ಯಾರ್ಥಿಯಾಗಿದ್ದಾಗ
ಬಿ. ಆರ್. ಅಂಬೇಡ್ಕರ್
1922 ರಲ್ಲಿ ನ್ಯಾಯವಾದಿಯಾಗಿ ಅಂಬೇಡ್ಕರ್
ಬಿ. ಆರ್. ಅಂಬೇಡ್ಕರ್
ಔರಂಗಾಬಾದ್ ನ ಮರಾಠವಾಡ ವಿಶ್ವವಿದ್ಯಾಲಯದಲ್ಲಿರುವ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಜನರು ಗೌರವ ಸಲ್ಲಿಸುತ್ತಿರುವುದು
ಬಿ. ಆರ್. ಅಂಬೇಡ್ಕರ್
ದೀಕ್ಷಾಭೂಮಿ, ನಾಗ್ಪುರದಲ್ಲಿ ಒಂದು ಸ್ತೂಪ, ಅಂಬೇಡ್ಕರ್ ಅವರ ಅನುಯಾಯಿಗಳ ಜೊತೆ ಬೌದ್ಧ ಧರ್ಮಕ್ಕೆ ಸೇರಿದ ಜಾಗ
ಬಿ. ಆರ್. ಅಂಬೇಡ್ಕರ್
ಬಿ. ಆರ್. ಅಂಬೇಡ್ಕರ್
ಅಂಬೇಡ್ಕರ್ ಮ್ಯೂಸಿಯಂನಲ್ಲಿ ಅಂಬೇಡ್ಕರ್ ಅವರ ಪ್ರತಿಮೆ, ಪುಣೆ

ಅಂಬೇಡ್ಕರ್ ಅವರ ಜೀವನ ಚರಿತ್ರೆ

  • ಡಾ ಬಿ. ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು.
  • ಇವರ ಅಜ್ಜ ಮಾಲೋಜಿ ಸಕ್ಪಾಲ್ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬಾಂಬೆ ಸೇನೆಯಲ್ಲಿ ಸೇರಿ, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ ಕಾಲಕ್ಕೆ 19 ಮೆಡಲ್ ಗಳನ್ನು ಗಳಿಸಿದ್ದರು. ಇವರಿಗೆ ಇಬ್ಬರು ಮಕ್ಕಳು ರಾಮಜಿ ಸಕ್ಪಾಲ್, ಮೀರಾ ಸಕ್ಪಾಲ್. ರಾಮಜಿ ಸಕ್ಪಾಲ್ ಅವರ ಹೆಂಡತಿ ಭೀಮಬಾಯಿ. ಇವರು ಠಾಣೆ ಜಿಲ್ಲೆಯ ಮುರಬಾದಕರ್ ಎಂಬ ಅಸ್ಪೃಶ್ಯ ಕುಟುಂಬದವರು.
  • ಇವರ ತಂದೆ ಹಾಗೂ ಆರು ಜನ ಚಿಕ್ಕಪ್ಪಂದಿರು, ಸೈನ್ಯದಲ್ಲಿ ಸುಬೇದಾರರಾಗಿದ್ದರು.ರಾಮಜಿ ಮತ್ತು ಭೀಮಬಾಯಿ ರವರು ಇಬ್ಬರು ಕಷ್ಟ ಸಹಿಷ್ಣುಗಳಾದ ಸತಿಪತಿಗಳಾಗಿದ್ದರು. ಇವರಿಗೆ 14 ಮಕ್ಕಳು ಹುಟ್ಟಿದರು. ಈ 14ನೇ ಮಗುವೇ ಅಂಬೇಡ್ಕರ್. ಅಂಬೇಡ್ಕರ್ ಅವರ ಮೊದಲ ಹೆಸರು ಭೀಮರಾವ್ ಆಗಿತ್ತು. ಡಾ. ಅಂಬೇಡ್ಕರರು ನಾನು ನನ್ನ ತಂದೆ ತಾಯಿಯರಿಗೆ 14 ನೇ ರತ್ನನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
  • ರಾಮಜಿ ಸಕ್ಪಾಲ್ ರವರಿಗೆ 14 ಮಕ್ಕಳಲ್ಲಿ ಬದುಕುಳಿದ್ದಿದ್ದು 5 ಜನ ಮಕ್ಕಳು , ಅವರು ಮಂಜುಳಾ, ತುಳಸಿ, ಬಲರಾಮ, ಆನಂದರಾವ್ ಮತ್ತು ಭೀಮರಾವ್. ಭೀಮರಾವ್ 2 ವರ್ಷದ ಬಾಲಕನಿದ್ದಾಗ ತಂದೆ ನೌಕರಿಯಿಂದ ನಿವೃತ್ತಿ ಹೊಂದಿದರು. ಇವರು 14 ವರ್ಷಗಳವರೆಗೆ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದರು. ಇವರು ಮರಾಠಿ, ಹಿಂದಿ ಭಾಷೆಯಲ್ಲಿ ಪ್ರಬುದ್ಧ ಜ್ಞಾನ ಹೊಂದಿದ್ದರು.
  • ಜೊತೆಗೆ ಆಂಗ್ಲ ಭಾಷೆಯನ್ನು ಬಲ್ಲವರಾಗಿದ್ದರು. ಮಕ್ಕಳಲ್ಲಿ ದೇಶಭಕ್ತಿ, ಜ್ಞಾನ, ಹಾಗೂ ಧರ್ಮದ ಬಗ್ಗೆ ತಿಳಿಹೇಳಿಕೊಡುವಲ್ಲಿ ಸಫಲರಾದರು. ಮುಂದೆ ಭೀಮರಾವ್ ರವರು ಉತ್ತಮ ಸಂಸ್ಕೃತಿ ಹೊಂದಲು ತಂದೆಯವರು ಹೇಳಿಕೊಟ್ಟ ನೀತಿ ಪಾಠ ಸಹಾಯಕವಾಯಿತು. ಇವರು ಕಬೀರ ಪಂಥದವರು, ಕಬೀರರ ಧೋಹೆಗಳು, ರಾಮಾಯಣ, ಮಹಾಭಾರತದ ಕತೆಗಳನ್ನು ಮಕ್ಕಳಿಗೆ ಮುಂಜಾನೆ ಮತ್ತು ಸಾಯಂಕಾಲ ಹೇಳಿಕೊಡುತ್ತಿದ್ದರು.
  • ರಾಮಜಿ ಸಕ್ಪಾಲ್ ರವರು ಮಿಲಿಟರಿ ಸೇವೆಯಿಂದ ನಿವೃತ್ತಿಯಾದ ನಂತರ ಡಾಪೋಲಿಗೆ ಬಂದರು. ಆದರೆ ಕೆಲವೇ ದಿನಗಳಲ್ಲಿ ಮಿಲಿಟರಿ ಕ್ವಾರ್ಟಸ್ನಲ್ಲಿ ಅವರಿಗೆ ಸೇವೆ ಸಿಕ್ಕ ಕಾರಣ 'ಸಾತಾರ'ಕ್ಕೆ ಕುಟುಂಬ ವರ್ಗಾಯಿಸಿದರು. ಭೀಮರಾವ್ ಪ್ರಾಥಮಿಕ ಶಿಕ್ಷಣ ಸಾತಾರದಲ್ಲಿ ಪ್ರಾರಂಭವಾಯಿತು. ಭೀಮರಾವ್ ಆರು ವರ್ಷದ ಬಾಲಕನಿದ್ದಾಗ ಅವರ ತಾಯಿ ಮರಣ ಹೊಂದುತ್ತಾರೆ.
  • ಈ ಕಾರಣಕ್ಕಾಗಿ ಭೀಮರಾವ್ ರು ತನ್ನ ತಾಯಿಯ ಮಮತೆ ತನ್ನ ಅತ್ತೆಯಾದ ಮೀರಾಳಲ್ಲಿ ಕಂಡುಕೊಳ್ಳುತ್ತಾರೆ. ಮೀರಾ ಕರುಣೆಯ ಮೂರ್ತಿಯಾಗಿದ್ದಳು, ಗೂನುಬೆನ್ನಿನಿಂದಾಗಿ ಮದುವೆ ಯಾಗದೆ ತನ್ನ ಅಣ್ಣನ ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಸರ್ವಸ್ವವನ್ನೂ ಕಂಡುಕೊಳ್ಳುವಳು. ಭೀಮರಾವ್ ರವರಿಗೆ ಪ್ರಾಥಮಿಕ ಶಾಲೆಯಲ್ಲಿಯೇ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಶಿಕ್ಷಕರು ಮತ್ತು ಸಹಪಾಠಿಗಳು ಇವರು ದಲಿತ ಜಾತಿಗೆ ಸೇರಿದವರೆಂಬ ಕಾರಣಕ್ಕಾಗಿ ಸೇರುತ್ತಿರಲ್ಲಿಲ್ಲ.
  • ಅದಕ್ಕಾಗಿ ತರಗತಿಯ ಹೊರಗಡೆ ಕುಳಿತುಕೊಂಡು ಕಲಿಯಬೇಕಾಯಿತು. ಪ್ರಾಥಮಿಕ ಶಾಲೆಯಲ್ಲಿ ಎಲ್ಲರ ಅಸಹ್ಯದಿಂದಾಗಿ ಶಿಕ್ಷಣದಲ್ಲಿ ಅವರಿಗೆ ಹೆಚ್ಚು ಒಲವೇ ಇರಲಿಲ್ಲ. ಧ್ಯಾನ ಮಾಡುವುದು, ಮೇಕೆಯೊಡನೆ ಆಟವಾಡುವುದು ಅವರ ಹವ್ಯಾಸಗಳಾಗಿದ್ದವು. ಈ ಮಧ್ಯ ರಾಮಜಿ ಸಕ್ಪಾಲ್ ರವರು ಸಂಸಾರದ ನಿರ್ವಹಣೆಗಾಗಿ ಇನ್ನೊಂದು ಮದುವೆಯಾದರು.
  • ಮಲತಾಯಿ ತನ್ನ ತಾಯಿಯ ಬಟ್ಟೆ ಹಾಗೂ ಒಡವೆಗಳನ್ನು ಹಾಕಿಕೊಂಡಾಗ, ಅದಕ್ಕಾಗಿ ತಂದೆ, ಅತ್ತೆಯೊಂದಿಗೆ ಜಗಳವಾಡುತ್ತಿದ್ದರು. ಸೋದರತ್ತೆ ವಾತ್ಸಲ್ಯದಿಂದ ಮಲತಾಯಿಯ ಅನಿವಾರ್ಯತೆಯ ಬಗ್ಗೆ ತಿಳಿ ಹೇಳಿದರು ಆದ್ರೂ ಸಹ ಸೋದರತ್ತೆಯ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಮನೆಯಲ್ಲಿ ಬದುಕುವುದು ಬೇಡ ಎಂದು ನಿರ್ಧರಿಸಿ ತನ್ನ ರೊಟ್ಟಿಯನ್ನು ತಾನೇ ಸಂಪಾದಿಸಿಕೊಳ್ಳಬೇಕೆಂದು ನಿರ್ಧರಿಸಿದರು.
  • ತನ್ನ ವಯಸ್ಸಿನವರು ಬಾಂಬೆಯ ಬಟ್ಟೆಯ ಮಿಲ್ಲಿನಲ್ಲಿ ಕಾರ್ಮಿಕರಾಗಿ ದುಡಿಯಬೇಕೆಂದು ನಿರ್ಧರಿಸಿ ಬಾಬ್ ಗೆಗೋಗಳು ಬೇಕಾಗುವ ಹಣವನ್ನು ತನ್ನ ಅತ್ತೆಯ ಪರ್ಸ್ ನ್ನು ಮುರು ದಿನ ರಾತ್ರಿ ಎದ್ದು ಹಣವನ್ನು ಕದಿಯಲು ಪ್ರಯತ್ನಿಸುತ್ತಾರೆ ಆದ್ರೆ ನಾಲ್ಕನೇ ದಿನ ರಾತ್ರಿ ಪರ್ಸ್ ಕದ್ದು ಅದ್ರಲ್ಲಿ ಕೇವಲ ಅರ್ಧ ಆಣೆ ಇದ್ದು, ಬಾಂಬೆಗೆ ರೈಲಿನ ಟಿಕೇಟು ಮೂರು ಆಣೆ ಇರುತ್ತದೆ ಕದ್ದ ಹಣದಿಂದ ಬಾಂಬೆಗೆ ಹೋಗಲು ಸರಿಹೋಗುವುದಿಲ್ಲ.
  • ಇದರಿಂದ ನೊಂದು ತನ್ನ ನಿರ್ಧಾರ ಬದಲಿಸಿ ಹೆಚ್ಚಿಗೆ ಓದಬೇಕೆಂದು ನಿರ್ಧರಿಸಿ ಓದುವ ಆಸೆ ಹೆಚ್ಚಿಸಿಕೊಳ್ಳುತ್ತಾರೆ. ಸತಾರ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ತರಗತಿಯಲ್ಲಿ ಓದುತ್ತಿರುವಾಗ ಮಹಾರ ಎಂಬ ಅಸ್ಪೃಶ್ಯರದವರೆಂಬ ಕಾರಣಕ್ಕಾಗಿ ಹೆಚ್ಚು ಕಡಿಮೆ ಎಲ್ಲ ಶಿಕ್ಷಕರು ಇವರನ್ನು ಅಸಹ್ಯವಾಗಿ ನೋಡುತ್ತಿದ್ದರು. ಯಾರೂ ಇವರ ಪ್ರತಿಭೆ ಗುರುತಿಸಲಿಲ್ಲ.
  • ಆದರೆ ಅಲ್ಲಿನ ಶಿಕ್ಷಕರಲ್ಲಿ ಒಬ್ಬರಾದ ಫೆಂಡೆಸೆ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ,ಕಲಿಯುವ ಹಂಬಲ,ಸೂಕ್ಷ್ಮಬುದ್ಧಿಶಕ್ತಿಯನ್ನು ಗುರುತಿಸಿ ಇವರಿಗೆ ಪ್ರೋತ್ಸಾಹಿಸಿದರು. ಜಾತಿಯಲ್ಲಿ ಆ ಶಿಕ್ಷಕರು ಬ್ರಾಹ್ಮಣರಾಗಿದ್ದರೂ ಕೂಡ ತಾವು ಊಟಕ್ಕೆ ತಂದಿದ್ದ ಬುತ್ತಿಯಲ್ಲಿ ಭೀಮರವರಿಗೆ ಒಂದಿಷ್ಟು ಕೊಟ್ಟು ಪ್ರೀತಿಯಿಂದ ಊಟ ಮಾಡಿಸುತ್ತಿದ್ದರು.
  • ಇದೇ ಫೆಂಡೆಸೆ ಅಂಬೇಡ್ಕರ್ ಭೀಮರಾವರವರ ಹೆಸರನ್ನು ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಎಂಬ ಹೆಸರನ್ನು ಅವರ ಅಡ್ಡ ಹೆಸರಿಗೆ ಬದಲಿಸಿ ಕೊಟ್ಟರು ಅಂದರೆ ಹಾಜರಿಯಲ್ಲಿ ಅವರ ಹೆಸರು ಭೀಮರಾವ್ ರಾಮಜಿ ಅಂಬೆವಾಡ್ಕರ್ ಎಂದು ಇದ್ದು, ಶಿಕ್ಷಕರು ಅದನ್ನು ಭೀಮರಾವ್ ರಾಮಜಿ ಅಂಬೇಡ್ಕರ್ ಎಂದು ತಿದ್ದಿದರು ಅಂದಿನಿಂದ ಭೀಮರಾವ್ ಅಂಬೇಡ್ಕರ್ ಆದರು.
  • ಪ್ರಾಥಮಿಕ ಶಿಕ್ಷಣ ಹಲವಾರು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿಗೆ ಸೇರಲು ನಿರ್ಧರಿಸುತ್ತಾರೆ. ಸಾತರದಂತೆ, ಇವರಿಗೆ ಹೆಚ್ಚು ಶೋಷಣೆ ಅನ್ಯಾಯ ಚುಚ್ಚು ಮಾತು ಅಪಮರ್ಯಾದೆ ಇರಕ್ಕಿಲ್ಲ ಎಂಬ ಭಾವನೆಯೊಂದಿಗೆ ಬಾಂಬೆಗೆ ಹೋಗಿ ಕಾರ್ಮಿಕರ ಬಡಾವಣೆ ಪರೇಲ ಎಂಬಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದು ಶಾಲೆಗೆ ಸೇರಿಸುತ್ತಾರೆ.
  • ಆದರೆ ಶಾಲೆಗೆ ಸೇರುವ ಸಂಧರ್ಭದಲ್ಲಿಯೇ ಇವರಿಗೆ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಶಾಲೆಯಲ್ಲಿ ಮೊದಲನೆಯ ಭಾಷೆ ಮರಾಠಿಯಾಗಿಯೂ,ಎರಡನೆಯ ಭಾಷೆ ಸಂಸ್ಕೃತ ಕಲಿಯಲು ಇಚ್ಛಿಸುತ್ತಾರೆ. ಆದರೆ ಸಂಸ್ಕೃತ ಶಿಕ್ಷಕರು ಇವರಿಗೆ ಸಂಸ್ಕೃತ ಕಲಿಸಲು ನಿರಾಕರಿಸುತ್ತಾರೆ.ಅದಕ್ಕಾಗಿಯೇ ಅನಿವಾರ್ಯವಾಗಿ ಪಾರ್ಸಿ ಭಾಷೆಯನ್ನು ಕಲಿಸಲು ನಿರ್ಧರಿಸುತ್ತಾರೆ.
  • ಒಂಬತ್ತನೆಯ ತರಗತಿಯಲ್ಲಿಯೂ ಇವರಿಗೆ ಅಸ್ಪೃಶ್ಯತೆಯು ಸಿಗುತ್ತದೆ. ಶಿಕ್ಷಕರು ಬೋರ್ಡ್ ಮೇಲೆ ಹಾಕಲಾಗಿದ್ದ ಬೀಜಗಣಿತದ ಲೆಕ್ಕ ಶಾಲೆಯ ಯಾವ ವಿದ್ಯಾರ್ಥಿ ಕೂಡ ಬಿಡಿಸದಿದ್ದಾಗ ಭೀಮರಾವ್ ರು ಬಿಡಿಸಲು ಬರುತ್ತಾರೆ. ಶಾಲೆಯ ಶಿಕ್ಷಕರು ಅನುಮತಿ ನೀಡುತ್ತಾರೆ . ಆದರೆ ವಿದ್ಯಾರ್ಥಿಗಳು ತಮ್ಮ ಊಟದ ಬುತ್ತಿ ಬೋರ್ಡಿನ ಹಿಂದುಗಡೆ ಇಟ್ಟಿರುವುದರಿಂದ ಮಹಾರ ವಿದ್ಯಾರ್ಥಿ ಬೋರ್ಡ್ ಮುಟ್ಟಿದರೆ ಬುತ್ತಿ ಅಸ್ಪೃಶ್ಯವಾಗುತ್ತದೆ ಎಂದು ನಿರಾಕರಿಸಿದರು.
  • ಇಂತಹ ಕಹಿ ಅನುಭವಗಳ ಮಧ್ಯಯೇ ಡಾ. ಅಂಬೇಡ್ಕರ್ 1907ರಲ್ಲಿ 10ನೆ ತರಗತಿಯಲ್ಲಿ ಪಾಸಾಗುತ್ತಾರೆ. ಒಟ್ಟು 750 ಅಂಕಗಳಿಗೆ 282 ಅಂಕ ಪಡೆದರು. ಅಸ್ಪೃಶ್ಯರಲ್ಲಿಯೇ ಇವರು ಇಷ್ಟು ಅಂಕಗಳನ್ನು ಪಡೆದು ಪಾಸಾದ ಮೊದಲನೇ ವಿದ್ಯಾರ್ಥಿ ಯಾಗುತ್ತಾರೆ. ಅಸ್ಪೃಶ್ಯರ ವರ್ಗದವರು ಈ ಬಾಲಕನಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲು ಆಗಿನ ಸಮಾಜ ಸುಧಾರಕರಾದ ಎಸ್ ಕೆ ಭೋಲೆಯವರು ನಿರ್ಧರಿಸುತ್ತಾರೆ.
  • ಸರಕಾರಿ ಶಾಲೆಯ ನಿವೃತ್ತ ಶಿಕ್ಷಕರಾದ ಕೆ ಎ ಕೆಲಸ್ಕರ್ ರವರು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ಕೆ ಎ ಕೆಲಸ್ಕರ್ ರವರು ಅಂಬೇಡ್ಕರ್ ರವರನ್ನು ತುಂಬು ಹೃದಯದಿಂದ ಅಭಿನಂದಿಸಿ, ನೀವು ನಿಮ್ಮ ಸಮಾಜದ ಮತ್ತು ಭಾರತದ ಸುಧಾರಕರಾಗಬೇಕೆಂದು ಹರಸುತ್ತಾರೆ. ಮತ್ತು ಉನ್ನತ ವ್ಯಾಸಂಗಕ್ಕೆ ತಮ್ಮ ಕೈಲಾದ ಸಹಾಯ ಮಾಡುವೆವೆಂದು ಪ್ರೋತ್ಸಾಹಿಸುತ್ತಾರೆ. ತಾವೇ ಬರೆದ ಭಗವಾನ್ ಬುದ್ಧನ ಚರಿತ್ರೆಯ ಪುಸ್ತಕವನ್ನು ಭೀಮರಾವರವರಿಗೆ ಕಾಣಿಕೆ ನೀಡುತ್ತಾರೆ. ಡಾ.ಅಂಬೇಡ್ಕರ್ ರವರು ಬೌದ್ಧ ಧರ್ಮಕ್ಕೆ ಒಲಿಯಲು ಈ ಪುಸ್ತಕವೇ ಪ್ರೋತ್ಸಾಹ ಕೊಡುತ್ತದೆ.
  • ಅಂಬೇಡ್ಕರ್ ಅವರು 10 ನೇ ತರಗತಿ ಪಾಸಾದ ನಂತರ ಇವರ ಮನೆಯವರು ಡಾಪೋಲಿಯ ಬಿಕ್ಕು ವಾಲಂಗಕರ್ರವ ಎರಡನೆಯ ಪುತ್ರಿ ರಮಾಬಾಯಿಯವರೊಂದಿಗೆ ಮದುವೆ ಮಾಡುತ್ತಾರೆ. ಆಗ ಅವರಿಗೆ 17 ವರ್ಷ ರಮಾಬಾಯಿಯವರಿಗೆ 9 ವರ್ಷ ವಯಸ್ಸಾಗಿತ್ತು.
  • ಮುಂದಿನ ಅಭ್ಯಾಸಕ್ಕಾಗಿ ಎಲಿಫಿನ್ ಸ್ಟನ್ ಸೇರಿದ ಅಂಬೇಡ್ಕರ್ 1912 ರಲ್ಲಿ ಎಲಿಫಿನಸ್ಟನ್ ಕಾಲೇಜಿನಿಂದ ಬಿಎ ಮುಗಿಸುತ್ತಾರೆ. ಇವರಿಗೆ ಕೆ.ಎ ಕೆಲಸ್ಕರ್‍ರವರು ಪಿಯುಸಿ ಮತ್ತು ಬಿ ಎ ವ್ಯಾಸಂಗಕ್ಕಾಗಿ ಬರೊಡದ ಮಹಾರಾಜರಿಂದ ತಿಂಗಳಿಗೆ 25 ರೂಪಾಯಿಗಳ ಶಿಕ್ಷಣ ವೇತನವನ್ನು ಕೊಡಿಸುತ್ತಾರೆ.
  • ಬಿ ಎ ಓದುವಾಗ ಪ್ರೊ ಮುಲ್ಲರ್ ಎಂಬುವರು ಹೆಚ್ಚು ಪ್ರೋತ್ಸಾಹವನ್ನು ಕೊಟ್ಟಿರುತ್ತಾರೆ. ಅದಕ್ಕಾಗಿ ಡಾ. ಅಂಬೇಡ್ಕರ್ ರವರಿಗೆ ಇವರು ಆದರ್ಶರಾಗಿರುತ್ತಾರೆ. ಮೊದಲೇ ಸಯ್ಯಾಜಿರಾವ್ ಗಾಯಕವಾಡರೊಂದಿಗೆ ಮಾಡಿಕೊಂಡ ಒಪ್ಪಂದಂತೆ ಬಿ ಎ ಮುಗಿದ ನಂತರ ಬರೋಡಾದ ಮಹಾರಾಜರ ಆಸ್ಥಾನದಲ್ಲಿ ಮಿಲಿಟರಿ ಲೆಫ್ಟಿನೆಂಟ್ ಆಗಿ ನೇಮಕವಾಗುತ್ತಾರೆ.ಆದರೆ ಅವರು ಅಲ್ಲಿ ಹೆಚ್ಚು ಕಾಲ ಕೆಲಸ ಮಾಡಲಿಲ್ಲ.
  • ಕೇವಲ 15 ದಿನಗಳ ಕೆಲಸ ಮಾಡಿದರು,ತಂದೆ ಅನಾರೋಗ್ಯದಿಂದಿದ್ದಾರೆ ಎಂಬ ಟೆಲಿಗ್ರಾಮ್ ಬಂದಾಗ ಅವರು ಬರೋಡಾದಿಂದ ಬಾಂಬೆಗೆ ಬರುತ್ತಾರೆ.ತಂದೆ ಅಂತಿಮ ಕ್ಷಣ ಎಣಿಸುತ್ತಿದ್ದರು. ಬಂದ ಮಗನ ಮೈ ಮೇಲೆ ಕೈ ಎಳೆದು ಏನೋ ಹೇಳಲು ತಡವರಿಸಿ ಏನೂ ಹೇಳಲಾಗದೆ, ಫೆಬ್ರವರಿ 2 1913ಕ್ಕೆ ಪ್ರಾಣಬಿಟ್ಟರು. ತಂದೆ ಅಂತ್ಯಕ್ರಿಯೆಗಳನ್ನು ಮುಗಿಸಿದ ಡಾ. ಅಂಬೇಡ್ಕರರು ಮುಂದೆ ಏನು ಎಂಬ ಪ್ರಶ್ನೆಹಾಕಿಕೊಂಡು ಉನ್ನತ ವ್ಯಾಸಂಗ ಮಾಡಲು ನಿರ್ಧರಿಸುತ್ತಾರೆ.
  • ಇದೇ ಸಂಧರ್ಭದಲ್ಲಿ ಬರೋಡಾದ ಮಹಾರಾಜರು ಯೋಗ್ಯ ವಿದ್ಯಾರ್ಥಿಗಳಿಗೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಓದಲು ಶಿಷ್ಯವೇತನ ಘೋಷಣೆ ಮಾಡುತ್ತಾರೆ. ಶಿಕ್ಷಕರಾದ ಕೆ. ಎ ಕೆಲಸ್ಕರ್ ರವರ ಜೊತೆಗೆ ಬರೋಡದ ಮಹಾರಾಜರಲ್ಲಿ ಬಂದು ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಪಡೆದು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದಲು 1913ಕ್ಕೆ ಹೋಗುತ್ತಾರೆ.
  • ಅಲ್ಲಿ ಅರ್ಥಶಾಸ್ತ್ರ,ಸಮಾಜಶಾಸ್ತ್ರ,ಅತಿಹಾಸ,ತತ್ವಜ್ಞಾನ,ತರ್ಕಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಅಧ್ಯಯನ ಮಾಡುತ್ತಾರೆ. 1915ರಲ್ಲಿ ಪ್ರಾಚೀನ ಭಾರತದ ವಾಣಿಜ್ಯ ಪ್ರಬಂದ ಮಂಡಿಸಿ ಎಂ ಎ ಪದವಿ ಪಡೆದರು. ಅದೇ ವರ್ಷ ಅಂತಾರಾಷ್ಟ್ರೀಯ ಸಮಾಜ ಶಾಸ್ತ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಜಾತಿಗಳು ಎಂಬ ಪ್ರಬಂಧ ಮಂಡಿಸುತ್ತಾರೆ.
  • 1916ರಲ್ಲಿ ಭಾರತದಲ್ಲಿ ರಾಷ್ಟ್ರೀಯ ಉತ್ಪನ್ನ ಎಂಬ ಪ್ರಬಂಧ ಮಾಫಿಸಿ ಅದೇ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿಯನ್ನು ಪಡೆದರು. 8 ವರ್ಷದ ನಂತರ ಇಂಗ್ಲೆಂಡಿನ ಪ್ರಕಾಶನ ಸಂಸ್ಥೆ ಎಸ್ ಪಿ ಅಂಡ್ ಸನ್ಸ್, ಭಾರತದಲ್ಲಿ ರಾಷ್ಟ್ರೀಯ ಹಣ ಕಾಸಿನ ವಿಕಾಸ ಎಂಬ ಶೀರ್ಷಿಕೆಯಲ್ಲಿ ಪುಸ್ತಕವೊಂದು ಪ್ರಕಟಿಸಿತು. ಅಮೆರಿಕಾದಲ್ಲಿ ಇವರ ಮೇಲೆ ಪ್ರಭಾವ ಬೀರಿದ ಶಿಕ್ಷಕರೆಂದರೆ ಎಡ್ವಿನ್ ಕ್ಯಾನಾನ್, ಆರ್ ಎ ಸಲಿಗಮ್,ಜಾನ್ ಡಿವೆ.
  • ಅಮೆರಿಕಾದಲ್ಲಿ ಎಂ ಎ ,ಪಿಎಚ್ ಡಿ,ಪಡೆದ ನಂತರ ಉನ್ನತ ವ್ಯಾಸಂಗ ಇಂಗ್ಲೆಂಡಿನಲ್ಲಿ ಮುಂದುವರೆಸಲು ಅಂಬೇಡ್ಕರರು ಅಮೆರಿಕಾದಿಂದ ಇಂಗ್ಲೆಂಡಿಗೆ ಹೋಗುತ್ತಾರೆ. ಅಲ್ಲಿ ಲಂಡನ್ನಿನ ಅರ್ಥಶಾಸ್ತ್ರ ರಾಜಕೀಯಶಸ್ತ್ರ ವಿಶ್ವವಿದ್ಯಾಲಯದಲ್ಲಿ ಡಿ ಎಸ್ ಸಿ ಪದವಿಗಾಗಿ ನೋಂದಾಯಿಸಿಕೊಳ್ಳುತ್ತಾರೆ, ಅಲ್ಲದೆ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪದವಿಗೆ ಹೆಚ್ಚುವರಿಯಾಗಿ ಸೇರುತ್ತಾರೆ.
  • ಆದರೆ 1916ರ ಹೊತ್ತಿಗೆ ಸಯ್ಯಾಜಿರಾವ್ ಗಾಯಕವಾಡ ರ ಶಿಷ್ಯವೇತನ ಅವಧಿ ಮುಗಿದಿದೆ ಹಿಂದಕ್ಕೆ ಮರಳಿ ಬರಲು ಹೇಳಿದಾಗ ಅಂಬೇಡ್ಕರ್ ರವರಿಗೆ ತೀರ ನೋವಾಗುತ್ತದೆ. ಆದರೂ ಅನಿವಾರ್ಯವಾಗಿ ತಮ್ಮ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿ ಬರುತ್ತಾರೆ ಬರುವಾಗ ಅಂಬೇಡ್ಕರರು ತಮ್ಮ ಗುರುಗಳಿಗೆ ವಿನಂತಿಸಿ ತಮ್ಮ ಅಡ್ಮಿಷನ್ ರದ್ದು ಮಾಡದಂತೆ ಕೋರಿ ನಾಲ್ಕು ವರ್ಶದ ನಂತರ ಮರಳಿ ಬರುವುದಾಗಿ ಕೋರಿರುತ್ತಾರೆ.
  • ಪೂರ್ವ ನಿರ್ಧರಿತ ಒಪ್ಪಂದದಂತೆ,ಡಾ ಅಂಬೇಡ್ಕರ್ ರು ಬರೊಡದ ಮಹಾರಾಜರ ಆಸ್ಥಾನದಲ್ಲಿ ಸೈನ್ಯದ ಕಾರ್ಯದರ್ಶಿಗಳಾಗಿ ಕೆಲಸಕ್ಕೆ ಸೇರಿದರು. ಮಹಾರಾಜರಿಗೆ ತಿಳಿಯದಂತೆ ಅಲ್ಲಿಯೇ ಆಸ್ಥಾನಿಕ ಹಿರಿಯ ಮಂತ್ರಿಗಳು ಇವರೊಂದಿಗೆ ಅಸ್ಪೃಶ್ಯ ಆಚರಣೆ ಮಾಡುತ್ತಿದ್ದರು.ಸಮಾನ್ಯ ಸಿಪಾಯಿ ಕೂಡ ಇವರ ಫೈಲುಗಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಉಳಿಯಲು ಆಸ್ಥಾನದಲ್ಲಿ ನಿವೇಶನ ನೀಡಲಿಲ್ಲ ಮತ್ತು ಉಳಿದಿದ್ದ ಪಾರ್ಸಿ ಹೊಟೇಲ್ ನಿಂದ ಇವರನ್ನು ದಬ್ಬಿ ಹೊರಹಾಕಿದರು.
  • ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಲಾಗದೆ ಬಾಂಬೆಗೆ ಬಂದರು. ಬಂದು ಕೆಲವು ದಿನಗಳಲ್ಲಿ ಅವರ ಮಲತಾಯಿ ಮರಣಹೊಂದುತ್ತಾರೆ. ಅಂಬೇಡ್ಕರರು ಸಿಡ್ಯಾಮ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರುತ್ತಾರೆ. ಈ ಸರಕಾರಿ ಕಾಲೇಜಿನಲ್ಲಿಯೂ ಕೂಡ ಇವರ ಜೊತೆಗೆ ಅಸ್ಪೃಶ್ಯರ ಆಚರಣೆ ಮಾಡುತ್ತಾರೆ.
  • ಇವರ ಸಹಪಾಠಿಗಳು, ಪಾಠಮಾಡಿ ಉಪನ್ಯಾಸಕರಿಗಾಗಿ ಕುಡಿಯಲು ಇಟ್ಟ ನೀರಿನ ಪಾತ್ರೆಯಿಂದ ಅಂಬೇಡ್ಕರರು ನೀರನ್ನು ಕುಡಿದಾಗ ಗುಜರಾತ್ ನ ಉಪನ್ಯಾಸಕರೊಬ್ಬರು ಅಕ್ಷೇಪಿಸುತ್ತಾರೆ. ಮುಂದೆ 1920ರಲ್ಲಿ ಮುಖನಾಯಕ ಎಂಬ ಪತ್ರಿಕೆಯನ್ನು ಪ್ರಕಟಿಸಿದರು. ಈ ಅವಧಿಯಲ್ಲಿ ಅಂಬೇಡ್ಕರ್ ರವರಿಗೆ ಕೊಲ್ಲಾಪುರದ ಸಾಹೋ ಮಹಾರಾಜರು ಅಂಬೇಡ್ಕರವರ ಉನ್ನತ ವ್ಯಾಸಂಗಕ್ಕೆ ಶಿಷ್ಯವೇತನ ನೀಡಲು ಮುಂದಾಗುತ್ತಾರೆ.
  • ಹೇಗೂ ಅಂಬೇಡ್ಕರ್ ರವರು ಕಾಲೇಜಿನಲ್ಲಿ ಉಪನ್ಯಾಸ ಮಾಡಿ ಕೂಡಿಟ್ಟ ಸ್ವಲ್ಪ ಹಣ, ಸಾಹು ಮಹಾರಾಜರಿಂದ ಶಿಷ್ಯವೇತನ ಹಾಗೂ ಆತ್ಮೀಯ ಪಾರ್ಸಿ ಗೆಳೆಯ ನವಲಭೆತನಿಂದ ಸ್ವಲ್ಪ ಹಣ ಸಾಲ ಪಡೆದು ಅಂಬೇಡ್ಕರರವರು ಉನ್ನತ ವ್ಯಾಸಂಗಕ್ಕೆ ಲಂಡನ್ನಿಗೆ ಹೋದರು. ಅಲ್ಲಿ 1920ರಲ್ಲಿ ಲಂಡನ್ ಸ್ಕೂಲ್ ಆಫ್ ಏಕನಿಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ವಿಶ್ವವಿದ್ಯಾಲಯದಲ್ಲಿ ಎಂ ಎಸ್ ಸಿ ಪದವಿಗಾಗಿ ನೊಂದಾಯಿಸಿಕೊಂಡು ಹಗಲು ರಾತ್ರಿ ಅಧ್ಯಯನ ಮಾಡುತ್ತಾರೆ.
  • ಸ್ವಲ್ಪ ಹಣವಿರುವುದರಿಂದ ಅತ್ಯಧಿಕ ಕಷ್ಟ ಪಟ್ಟು ಅರ್ಧ ಬ್ರೆಡ್ ಒಂದು ದಿನಕ್ಕೆ ಊಟ ಮಾಡಿ ಲಂಡನ್ನಿನ ಮ್ಯೂಸಿಯಂ ಎಂಬ ಗ್ರಹಾಲಯದಲ್ಲಿ ದಿನದ 18 ಗಂಟೆಗಳ ಕಾಲ ಅದ್ಯಯನ ಮಾಡಿ ,1921 ರಲ್ಲಿ ಪ್ರೊ ಎಡ್ವಿನ್ ಕ್ಯಾನನ ರವರ ಮಾರ್ಗದರ್ಶನದಲ್ಲಿ ಬ್ರಿಟಿಷ ಭಾರತದಲ್ಲಿ ಸಾಮ್ರಾಜ್ಯಶಾಹಿಯ ಹಣಕಾಸಿನ ಪ್ರಾಂತೀಯ ವಿಕೇಂದ್ರೀಕರಣ. ಎಂಬ ಪ್ರಬಂಧ ಮಂಡಿಸಿ, ಎಂ ಎಸ್ ಸಿ ಪದವಿಪಡೆಯುತ್ತಾರೆ.
  • ಇವರು ಇದೇ ರೀತಿ ವಿದ್ಯಾರ್ಜನೆ ಮಾಡಿ 1921ರಲ್ಲಿ ಡಿ.ಎಸ್ ಸಿ ಪದವಿಗಾಗಿ ನೊಂದಾಯಿಸಿಕೊಂಡು 1922 ರಲ್ಲಿ ಹಣದ ಸಮಸ್ಯೆ ಎಂಬ ಪ್ರಬಂಧ ಮಂಡಿಸಿ ಡಿ ಎಸ್ ಸಿ ಪದವಿ ಪಡೆಯುತ್ತಾರೆ . ಅದೇ ವರ್ಷ ಗ್ರೇಸ್ ಇನ್ ಕಾಲೇಜಿನಿಂದ ಎಲ್ ಎಲ್ ಡಿ ಪಡೆಯುತ್ತಾರೆ. 1923 ರಲ್ಲಿ ಜರ್ಮನಿಯ ಬಾನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿಗಾಗಿ ನೊಂದಾಯಿಸಿಕೊಂಡು 6 ತಿಂಗಳವರೆಗೆ ಅಭ್ಯಾಸ ಮಾಡುತ್ತಾರೆ.
  • ಆರ್ಥಿಕ ಕಡುಬಡತನದಿಂದ ವ್ಯಾಸಂಗವನ್ನು ಮಧ್ಯದಲ್ಲಿಯೇ ನಿಲ್ಲಿಸಿ ಭಾರತಕ್ಕೆ ಬಂದು ವಕೀಲ ವ್ರತ್ತಿಯನ್ನು ಪ್ರಾರಂಭಿಸುತ್ತಾರೆ. ಕೆಲವು ದಿನಗಳ ಕಾಲ ಟ್ಯಾಕ್ಸ್ ಪ್ರ್ಯಾಕ್ಟಿಶನರ್ ಆಗಿಯೂ ಕೆಲಸ ಮಾಡುತ್ತಾರೆ. ಸಾಮಾಜಿಕ ಸೇವೆಯಲ್ಲಿ ಕಾಲಜಿಯುಳ್ಳ ಇವರು ಸಾಮಾಜಿಕ ಸೇವೆಗಾಗಿ ತಮ್ಮ ಬದುಕನ್ನು ಗುರುತಿಸಿಕೊಳ್ಳುತ್ತಾರೆ.
  • ದಲಿತ ವರ್ಗದವರನ್ನು ಜಾಗೃತರನ್ನಾಗಿ ಮಾಡಲು ಅವರಲ್ಲಿ ಶಿಕ್ಷಣದ ಪ್ರಸಾರ ಮಾಡಲು ಸಂಸ್ಕೃತಿಯ ಬಗ್ಗೆ ತಿಳಿಸಲು ಆರ್ಥಿಕ ಸೌಕರ್ಯ ಮಾಡಲು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಇವರ ಉದ್ದೇಶವಾಗಿತ್ತು. ಅದೇ ರೀತಿ ಬಹಿಷ್ಕೃತ ಭಾರತ ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಸಾಮಾಜಿಕ ಹೋರಾಟದ ಜೀವನ ಪ್ರಾರಂಭಿಸಿದ ಇವರು 1927ರಲ್ಲಿ ಮಹಾಡದ ಚೌಡರ ಕೆರೆಯ ನೀರನ್ನು ಮುಟ್ಟುವ ಚಳುವಳಿಯನ್ನು ಹಮ್ಮಿಕೊಳ್ಳುತ್ತಾರೆ.
  • ತನ್ನ 10 ಸಾವಿರ ಅನುಯಾಯಿಗಳೊಂದಿಗೆ ಚೌಡರ ಕೆರೆಯ ನೀರನ್ನು ಮುಟ್ಟಿಸಿ ಬಹುದಿನಗಳಿಂದ ನಿಷೇಧಿಸಿದ ಈ ಕೆರೆಯಿಂದ ನೀರು ಕುಡಿಯುವ ಹಕ್ಕು ಒತ್ತಾಯಿಸಿದರು. 1927 ರಲ್ಲಿ ಶ್ರೇಣಿ ಪದ್ದತಿಯ ವರ್ಣಾಶ್ರಮ ಹಾಗೂ ಸ್ತ್ರಿದಮನ ಮಸ್ಡಿದ ಮನಸ್ಮೃತಿಯನ್ನು ಸುತ್ತು ಹಾಕುತ್ತಾರೆ. 1930 ತನ್ನ 15 ಸಾವಿರ ಅನುಯಾಯಿಗಳೊಂದಿಗೆ ನಾಸಿಕದ ಕಾಳರಾಂ ದೇವಾಲಯದ ಪ್ರವೇಶ ಚಳುವಳಿಯನ್ನು ಮಾಡುತ್ತಾರೆ.
  • 1927ರಲ್ಲಿ ಇವರಿಗೆ ಮುಂಬಯಿಯ ಶಾಸಕಾಂಗದ ಸದಸ್ಯರಾಗಿ ಬ್ರಿಟಿಷ್ ಸರ್ಕಾರ ನೇಮಿಸುತ್ತದೆ. 1930 ರಿಂದ 1932 ವರೆಗೆ ಲಂಡನ್ನಿನಲ್ಲಿ ನಡೆಯುವ ದುಂಡು ಮೇಜಿನ ಸಮ್ಮೇಳನದಲ್ಲಿ ದಲಿತರ ಪ್ರತಿನಿಧಿಯಾಗಿ ಭಾಗವಹಿಸಿ ದಲಿತರಿಗೆ ಪ್ರತ್ಯೇಕ ಮತದಾನದ ಸೌಲಭ್ಯ ಕಲ್ಪಿಸಿಕೊಟ್ಟು ಬಹುದಿನಗಳಿಂದ ಆಳ್ವಿಕೆ ಮಾಫಿಯಾ ಅಧಿಕಾರದಿಂದ ದೂರವಿದ್ದ ದಲಿತರಿಗೆ ಆಳ್ವಿಕೆ ಮಾಡುವ ಅಧಿಕಾರವನ್ನು ದೊರಕಿಸಿಕೊಡುತ್ತಾರೆ.
  • ಇಂಗ್ಲೆಂಡಿನ ಪ್ರಧಾನಿಯಾದ ಮ್ಯಾಕ್ ಡೊನಾಲ್ಡ್ ಕೋಮುಆದೇಶದ ಮೂಲಕ ಈ ಅಧಿಕಾರವನ್ನು ದಲಿತರಿಗೆ ನೀಡುತ್ತಾರೆ. ಆದ್ರೆ ಗಾಂಧೀಜಿ ದಲಿತರಿಗೆ ಪ್ರತ್ಯೇಕ ಮತದಾನ ಬೇಡ ಹಿಂದೂ ಧರ್ಮ ಒಡೆದು ಹೋಗುತ್ತದೆಂದು ಪುಣೆಯ ಯರವಾಡ ಜೈಲಿನಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡುತ್ತಾರೆ. ಅಂತಿಮವಾಗಿ ಗಾಂದೀಜಿ ಮತ್ತು ಅಂಬೇಡ್ಕರ್ ರವರ ನಡುವೆ ಸಂಧಾನ ನಡೆಸಿ ಪ್ರತ್ಯೇಕ ಮತ ಕ್ಷೇತ್ರದ 71 ಸೀಟುಗಳ ಬದಲ್ಲಾಗಿ 148 ಸೀಟು ಗಳ ಜಂಟಿ ಮತದಾನ ಪದ್ದತಿ ನೀಡಿ ದಲಿತರಿಗೆ ಮೀಸಲಾತಿ ನೀಡಲಾಯಿತು. ಇದು ಸೆಪ್ಟೆಂಬರ್ 24 1932 ರಲ್ಲಿ ನಡೆದಿದ್ದು ಇದನ್ನು ಪುನಾ ಒಪ್ಪಂದ ಎಂದು ಕರೆಯಲಾಯಿತು.
  • ಡಾ ಅಂಬೇಡ್ಕರ ರವರು ಅಸ್ಪೃಶ್ಯರಿಗಾಗಿ ಮತ್ತು ಅವರ ಸಾಮಾಜಿಕ ಆರ್ಥಿಕ ಪ್ರಗತಿಗಾಗಿ ನಿರಂತರವಾದ ಹೋರಾಟ ಬ್ರಿಟಿಷ್ ಮತ್ತು ವರ್ಣವ್ಯವಸ್ಥೆಯ ವಿರುದ್ಧ ನಡೆಸಿದರು. 1935ರಲ್ಲಿ ಯೌಲ್ಲ ಸಮ್ಮೇಳನದಲ್ಲಿ ಅಂಬೇಡ್ಕರರವರು ತಾನು ಹಿಂದೂ ಧರ್ಮದಲ್ಲಿ ಇರುವುದಿಲ್ಲ, ನಾನು ಹಿಂದುವಾಗಿ ಹುಟ್ಟಿದ್ದು ಅನಿಶ್ಚಿತವಾಗಿ ಆದರೆ ಹಿಂದುವಾಗಿ ಸಾಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ.
  • ಅದೇ ವರ್ಷ 1935 ರಲ್ಲಿ ಅವರ ಪತ್ನಿ ರಮ್ಮ ಬಾಯಿಯವರು ತೀರಿಕೊಳ್ಳುತ್ತಾರೆ. ಡಾ ಅಂಬೇಡ್ಕರ್ ರವರಿಗೆ ಒಟ್ಟು 5 ಮಕ್ಕಳು ಹುಟ್ಟಿದ್ದು ಯಶ್ವಂತರಾವ್ ಅಂಬೇಡ್ಕರರನ್ನು ಬಿಟ್ಟರೆ ಉಳಿದವರೆಲ್ಲ ತೀರಿಕೊಳ್ಳುತ್ತಾರೆ. ಅಸ್ಪೃಶ್ಯರಿಗೆ ಅಧಿಕಾರ ಪಡೆದು 1936ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಸ್ಥಾಪಿಸಿ, ಪ್ರಾಂತೀಯ ಶಾಸಕಾಂಗದಲ್ಲಿ ನಡೆದ ಚುನಾವಣೆಯಲ್ಲಿ 17 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹಾಕುತ್ತಾರೆ.
  • ಅದರಲ್ಲಿ 15 ಅಭ್ಯರ್ಥಿಗಳು ಗೆಲ್ಲುತ್ತಾರೆ. ದಲಿತರಿಗೆ ಶಿಕ್ಷಣದ ಅವಶ್ಯಕತೆಯನ್ನು ಗಮನಿಸಿ 1946ರಲ್ಲಿ ಪೀಪಲ್ಸ್ ಎಜುಕೇಶನ್ ಇನ್ಸ್ಟಿಟ್ಯೂಶನ್ ಸ್ಥಾಪಿಸಿದರು. 1946ರಲ್ಲಿ ಸಂವಿಧಾನ ರಚನಾ ಸಭೆಗೆ ಬಂಗಾಳ ಪ್ರಾಂತದಿಂದ ಆಯ್ಕೆಯಾಗಿ ಮುಂದೆ 1947ರಲ್ಲಿ ಕರಡು ಸಮಿತಿ ಅಧ್ಯಕ್ಷರಾಗಿ ನೇಮಕ ಹೊಂದಿ, ಸತತವಾಗಿ ಮೂರು ವರ್ಷಗಳವರೆಗೆ ಹಗಲು ರಾತ್ರಿ ಸಂವಿಧಾನ ಬರೆದು 1950ರಲ್ಲಿ ಮುಗಿಸುತ್ತಾರೆ. ಅದಕ್ಕಾಗಿ ಇವರನ್ನು ಸಂವಿಧಾನದ ಶಿಲ್ಪಿ ಎಂದು ಪರಿಗಣಿಸಲಾಗಿದೆ.
  • 1947 ರಲ್ಲಿ ಕಾನೂನು ಮಂತ್ರಿಯಾಗಿ ಪಂಡಿತ ಜವಹಾರಲಾಲ್ ನೆಹರೂ ಮಂತ್ರಿ ಮಂಡಲದಲ್ಲಿ ಇವರು ಪ್ರಧಾನ್ ಮಂತ್ರಿಗೆ ಆತ್ಮೀಯರಾಗುತ್ತಾರೆ. ನೆಹರೂ ಕಲ್ಪಿಸಿದ ಸಮಾಜವಾದಿ ಪ್ರಜಾಸತ್ತಾತ್ಮಕ ರಾಜ್ಯವ್ಯವಸ್ಥೆ ಡಾ ಅಂಬೇಡ್ಕರ್ ರವರಿಂದಲೇ ಪ್ರಭಾವಿತರಾಗಿದ್ದರು. ನೆಹರುಜಿ ಹಾಕಿಕೊಂಡ ಪಂಚ ವಾರ್ಷಿಕ ಯೋಜನೆಗೆ ಅಂಬೇಡ್ಕರರವರು ಮಾರ್ಗದರ್ಶಿಗಳಾಗಿದ್ದರು. ಮತ್ತು ಭಾಕ್ರಾನಂಗಲ್ ಅಣೆಕಟ್ಟು ಕಟ್ಟಲು ಸಲಹೆ ನೀಡಿದವರೆ ಅಂಬೇಡ್ಕರರವರು.
  • ಅಂಬೇಡ್ಕರವರು ಭಾರತದ ನೀರಾವರಿ ಯೋಜನೆಯ ಜನಕನಾಗಿದ್ದು.ಉತ್ತರ ಭಾರತ ಮತ್ತು ದಕ್ಷಿಣ ಭಾರತ ನದಿಗಳ ಜೋಡಣೆಗೆ 1952 ರಲ್ಲಿ ಸಲಹೆ ನೀಡಿದರು.ನೆಹರೂರವರು ವಿದೇಶಿ ಗಣ್ಯರಿಗೆ ಇವರನ್ನು ಪರಿಚಯಿಸುವಾಗ ಇವರು ಡಾ ಅಂಬೇಡ್ಕರ್, ನನ್ನ ಮಂತ್ರಿ ಮಂಡಲದ ವಜ್ರವಾಗಿದ್ದಾರೆ,ಎಂದು ಪರಿಚಯಿಸುತ್ತಿದ್ದರು.
  • ನೆಹರು ರವರ ಸಹಕಾರ ಪಡೆದು ಅಂಬೇಡ್ಕರ್ ದೇಶದ ಮಹಿಳಾ ವಿಮೋಚನೆಯನ್ನು ಮನು ರವಾರ ಮನಸ್ಮೃತಿಯ ಮೂಲಕ ಶೋಷಿತ ಮಹಿಳೆಗೆ ಬಿಡುಗಡೆ ಗೊಳಿಸಲು ದ ಹಿಂದೂ ಕೋಡ್ ಬಿಲ್ ನ್ನು ರಚನೆ ಮಾಡಿ ಪಾರ್ಲಿಮೆಂಟಿನಲ್ಲಿ ಮಂಡಿಸಿದ್ದರು. ಸಂಪ್ರದಾಯವಾದಿಗಳಿಂದ ಕೂಡಿದ ಪಾರ್ಲಿಮೆಂಟ್ ನ ಸಭೆಯಲ್ಲಿ ಮಹಿಳೆಗೆ ಹಿಂದೂ ಕೋಡ್ ಬಿಲ್ ನಲ್ಲಿ ಕೇಳಲಾದ ಹಕ್ಕುಗಳನ್ನು ನಿರಾಕರಿಸಿತು.
  • ಹಿಂದೂ ಕೋಡ್ ಬಿಲ್ ನಲ್ಲಿ ಪ್ರಮುಖ ನಾಲ್ಕು ಅಂಶಗಳು ಇದ್ದವು 1. ಮಹಿಳೆಯು ಕೂಡ ತನ್ನ ಪತಿಯನ್ನು ಆಯ್ಕೆಮಾಡುವ ಹಕ್ಕು 2. ಪುರುಷರ ಹಾಗೆ ವಿಚ್ಚೇಧಿಸುವ ಹಕ್ಕು 3. ತಂದೆಯ ಆಸ್ತಿಯಲ್ಲಿ ಗಂಡುಮಕ್ಕಳ ಸಮನಾಗಿ ಹೆಣ್ಣುಮಗಳಿಗೂ ಆಸ್ತಿ ಹಕ್ಕು 4.ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳ ಜೊತೆಯಲ್ಲಿ ಹೆಣ್ಣುಮಕ್ಕಳಿಗೂ ಮತ್ತು ವಿಧವೆ ಸೊಸೆಗೂ ಸಮ ಪಾಲು ಹಕ್ಕು.
  • ಕೊನೆಗೆ ಹಿಂದೂ ಕೋಡ್ ಬಿಲ್ ಪಾಸಾಗದ ಕಾರಣ ಅಂಬೇಡ್ಕರ್ ರವರು ಕಾನೂನು ಮ್ಯಾಟ್ರಿ ಪದವಿಗೆ ರಾಜೀನಾಮೆ ನೀಡಿದರು. 1950 ರಲ್ಲಿ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಭಾರತ ಸಂವಿಧಾನ ರಚಿಸಿದ್ದಕ್ಕಾಗಿ ಇವರನ್ನು ಸಂವಿಧಾನ ಶಿಲ್ಪಿ ,ಆಧುನಿಕ ಭಾರದ ನಿರ್ಮಾಪಕ, ಸಮಾಜದ ಪ್ರವರ್ತಕ, ಎಂದು ಪರಿಗಣಿಸಿ, ಡಾಕ್ಟರ್ ಆಫ್ ಲಾ ಪದವಿ ನೀಡಿತು
  • 1953ರಲ್ಲಿ ಆಂಧ್ರಪ್ರದೇಹದ ಉಸ್ಮಾನಿಯ ವಿಶ್ವವಿದ್ಯಾಲಯ ಸಂವಿಧಾನದ ಸೇವೆಯನ್ನು ಪರಿಗಣಿಸಿ ಡಾಕ್ಟರ್ ಆಫ್ ಲಿಟರೇಚರ ಎಂಬ ಗೌರವ ಪದವಿಯನ್ನು ನೀಡಿತು. 1951ರಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು ಸಕ್ರಿಯ ರಾಜಕೀಯದಿಂದ ದೂರ ಉಳಿದು ಡಾ ಅಂಬೇಡ್ಕರ್ ರವರು ಬೌದ್ಧ ಧರ್ಮದ ಆಚಾರ ಮತ್ತು ಪ್ರಚಾರಕ್ಕಾಗಿ ಜೀವನವನ್ನು ಅರ್ಪಿಸಿಕೊಂಡರು.
  • 1951 ರಲ್ಲಿ ಜಾಗತಿಕ ಬೌದ್ಧ ಸಮ್ಮೇಳನ ರಂಗುನದಲ್ಲಿ ನಡೆಯಿತು, ಅದರಲ್ಲಿ ಭಾಗವಹಿಸಿದರು. 1954ರಲ್ಲಿ ಕಟ್ಮೊಂಡಾದಲ್ಲಿ ನಡೆದ ಜಾಗತಿಕ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿದರು. 1951ರಲ್ಲಿ ಭಾರತೀಯ ಬೌದ್ಧ ಸಂಘಟನೆಯಲ್ಲಿ ಬುದ್ಧ ಮತ್ತು ಮಾರ್ಕ್ಸ್ ಕುರಿತು ಪ್ರಬಂಧ ಮಂಡಿಸಿದರು. 1955ರಲ್ಲಿ ಭಾರತೀಯ ಬೌದ್ಧ ಮಹಾಸಭೆ ಸ್ಥಾಪಿಸಿದರು.
  • ಬದುಕಿನ ಕೊನೆಯ ದಿನಗಳಲ್ಲಿ ಡಾ ಅಂಬೇಡ್ಕರ್ ರು ಬೌದ್ಧ ಧರ್ಮ ಸ್ವೀಕಾರದ ನಿರ್ಧಾರಮಾಡಿ ಅಕ್ಟೊಬರ್ 14 1956ರಲ್ಲಿ ತನ್ನ 5ಲಕ್ಷ ಅನುಯಾಯಿಗಳೊಂದಿಗೆ ಪತ್ನಿ ಸವಿತಾ ಅಂಬೇಡ್ಕರ್ ಜೊತೆಗೆ ನಾಗ ಜನತೆಯ ಮೂಲ ನಾಡಾದ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕಾರಮಾಡಿ, ಹಿಂದುವಾಗಿ ಸಾಯಲಾರೆ ಎಂಬ ಪ್ರತಿಜ್ಞೆ ಪೂರ್ಣಗೊಳಿಸಿದರು.
  • ಇವರಿಗೆ ಬರ್ಮಾದ ಬೌದ್ಧ ಬಂತೆ, ವೀರ ಚಂದ್ರಮಣಿ ಬೌದ್ಧಧೀಕ್ಷೆ ನೀಡಿದರು. ಮುಂದೆ ಡಿಸೆಂಬರ್6 1956ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಡಿಸೆಂಬರ್7ಕ್ಕೆ ಮುಂಬಯಿಯ ದಾದರಿನಲ್ಲಿ ಬೌದ್ಧ ಧರ್ಮದ ನಿಯಮದ ಪ್ರಕಾರ ಮಹಾಪರಿನಿರ್ವಾಣದ ವಿಧಿಯನ್ನು ಅಂತ್ಯಕ್ರಿಯೆಯಲ್ಲಿ ಮಾಡಲಾಯಿತು.

ವಿದ್ಯಾಭ್ಯಾಸ

  • ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರಾದ ಅಂಬೇಡ್ಕರರ ತಂದೆ ರಾಮ್ ಜೀ ಸಕ್ಪಾಲ್ ಅವರು ಮರಾಠಿ ಹಾಗೂ ಇಂಗ್ಲೀಷಿನಲ್ಲಿ ಕಲಿತರು. ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರರಾಗಿ ಸೇವೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅವರು ತಮ್ಮ ಮಕ್ಕಳಿಗೆ, ಅದರಲ್ಲಿಯೂ ಮುಖ್ಯವಾಗಿ ಭೀಮರಾಯರಿಗೆ, ಸ್ವತಃ ಕಲಿಸಿ ಅವರ ಜ್ಞಾನಾರ್ಜನೆಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಾಯಿತು.
  • ೧೯೦೮ರಲ್ಲಿ ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಆಗಿನ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಎಂದು ಕರೆಯಲ್ಪಡುತ್ತಿದ್ದ ತಮ್ಮ ಸಮಾಜಕ್ಕೆ ಮೊದಲನೆಯವರಾದರು. ನಾಲ್ಕು ವರ್ಷಗಳ ನಂತರ, ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು.
  • ವಾಪಾಸು ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ವಿದೇಶದಲ್ಲಿ ಓದು ಮುಂದುವರಿಸಲು ವಿದ್ಯಾರ್ಥಿವೇತನ ದೊರಕಿತು. ೧೯೧೩ರಿಂದ ೧೯೧೬ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವ ಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜನೀತಿ/ರಾಜ್ಯಶಾಸ್ತೃ ಅಭ್ಯಾಸ ಮಾಡಿದರು.
  • ೧೯೧೫ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. ೧೯೧೬ರಲ್ಲಿ, ಅವರು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದು ಕೊಂಡರು.
  • ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ ಎಂಬ ಪ್ರಬಂಧ ಅವರ ಮೊಟ್ಟ ಮೊದಲ ಪ್ರಕಾಶಿತ ಕೃತಿ. ೧೯೧೬ ಜೂನ್ ನಲ್ಲಿ ಅಮೇರಿಕದಲ್ಲಿ ಓದು ಮುಗಿಸಿದ ಅಂಬೇಡ್ಕರ್ ಮುಂದೆ ಲಂಡನ್ನಿನ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಟಿಕಲ್ ಸೈನ್ಸ್” ಸೇರಿ ನಂತರ ಗ್ರೇ'ಸ್ ಇನ್ ಸಂಸ್ಥೆಯನ್ನು ಸೇರಿದರು. ಮತ್ತೊಂದು ವರ್ಷದ ಕಳೆಯುವ ವೇಳೆಗೆ ಅವರ ವಿದ್ಯಾರ್ಥಿವೇತನ ಕೊನೆಗೊಂಡಿತು.
  • ೧೯೨೦ರವರೆಗೆ ಮುಂಬಯಿಯ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಕಲಿಸಿ, “ಮೂಕನಾಯಕ” ಎಂಬ ಮರಾಠಿ ಸಾಪ್ತಾಹಿಕವನ್ನು ಹೊರಡಿಸುತ್ತಿದ್ದ ಅಂಬೇಡ್ಕರ್ , ಮತ್ತೆ ಲಂಡನ್ನಿಗೆ ಮರಳಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು “ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಮಹಾಪ್ರಬಂಧವನ್ನು ಬರೆದು, ಲಂಡನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಗೌರವವನ್ನು ಸಂಪಾದಿಸಿದರು.
  • ಇದರೊಂದಿಗೇ, ಬಾರ್-ಎಟ್-ಲಾ ಪದವಿ ಓದಿ ಬ್ಯಾರಿಸ್ಟರ್ ಆಗಿ, ಬ್ರಿಟಿಷ್ ಬಾರಿಗೆ ಸದಸ್ಯತ್ವ ಪಡೆದರು. ಇಂಗ್ಲೆಂಡಿನಿಂದ ಶಾಶ್ವತವಾಗಿ ವಾಪಸು ಬರುವ ಮುನ್ನ, ಅಂಬೇಡ್ಕರ್ ಮೂರು ತಿಂಗಳು ಜರ್ಮನಿಯಲ್ಲಿ ಬಾನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು. ೧೯೫೨ ಜೂನ್ ೧೫ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು. ೧೯೫೩, ಜನವರಿ ೧೨ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.

ವೃತ್ತಿ ಜೀವನ

  • ಭಾರತಕ್ಕೆ ಮರಳಿ ಮುಂಬಯಿಯಲ್ಲಿ ನೆಲೆನಿಂತ ಅಂಬೇಡ್ಕರ್ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಕಾಲೇಜೊಂದರಲ್ಲಿ ಬೋಧಿಸುತ್ತಲೇ, ವಿವಿಧ ಸರಕಾರೀ ಸಂಸ್ಥೆಗಳಲ್ಲಿ ಸಾಕ್ಷ್ಯ ನೀಡುತ್ತಲೇ, ಹೊಸ ವೃತ್ತ ಪತ್ರಿಕೆಯನ್ನು ನಡೆಸುತ್ತಲೇ, ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ನಾಮಕರಣಗೊಂಡು ಅಲ್ಲಿನ ಆಗುಹೋಗುಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಲೇ, ಅದರೊಂದಿಗೇ ವಕೀಲಿ ವೃತ್ತಿಯನ್ನೂ ಆರಂಭಿಸಿದರು.
  • ಭಾರತದ ವಿವಿಧ ಪಂಗಡಗಳ ಮುಖಂಡರುಗಳೂ, ಮೂರು ಬ್ರಿಟಿಷ್ ರಾಜಕೀಯ ಪಕ್ಷಗಳೂ ಕಲೆತು, ಭಾರತದ ಭವಿಷ್ಯದ ಸಂವಿಧಾನದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲು ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು.
  • ಭಾರತಕ್ಕೆ ಹಿಂದಿರುಗಿದ ಮರುವರ್ಷವೇ “ಬಹಿಷ್ಕೃತ ಹಿತಕಾರಿಣೀ ಸಭಾ” ಎಂಬ ದಲಿತ ವರ್ಗದ ಕಲ್ಯಾಣ ಸಂಸ್ಥೆಯನ್ನು ಹುಟ್ಟು ಹಾಕಲು ಸಹಾಯ ಮಾಡಿದರು. ಅಸ್ಪೃಶ್ಯ ಹಾಗೂ ಇತರ ಕೆಳವರ್ಗಗಳಲ್ಲಿ ವಿದ್ಯೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು, ಅವರ ಜೀವನ ಮಟ್ಟವನ್ನು ಸುಧಾರಿಸುವುದು ಹಾಗೂ ಈ ವರ್ಗವು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಧ್ವನಿ ಕೊಡುವುದು ಇವು ಈ ಸಂಸ್ಥೆಯ ಉದ್ದೇಶವಾಗಿತ್ತು.

ಅಸ್ಪೃಶ್ಯತೆಯ ವಿರುದ್ದ ಹೋರಾಟ

  • ೧೯೨೭ರಿಂದ ೧೯೩೨ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ.
  • ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ಸಾಧಿಸು ವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ 'ಮನುಸ್ಮೃತಿ' ಎಂದು ಅಂಬೇಡ್ಕರ್ ನಂಬಿದ್ದರು.
  • ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು. ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೂ ಎಂಬುದು ಚರ್ಚಾಸ್ಪದ.
  • ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರದಾಯಶೀಲ ಹಿಂದೂಗಳ ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್ , ೧೯೩೧-೩೨ ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ಭಾರತದ ಹಿಂದುಗಳು ಅತ್ಯಂತ ದ್ವೇಷಿಸುವ ವ್ಯಕ್ತಿಯಾದರು. ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು.
  • ಮಹಾತ್ಮ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯ ವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ, ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದೆಂಬುದು ಅವರ ನಿಲುವಾಗಿತ್ತು.
  • ೧೯೩೨ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೇಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು.ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು.
  • ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತ ತೊಡಗಿದರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ.ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ.
  • ಜಾತಿ ಪದ್ಧತಿಯ ಪುನರ್ವಿಮರ್ಶೆ ನಡೆಸಲು ಸನಾತನಿ ಹಿಂದೂಗಳ ಅನಾಸಕ್ತಿಯಿಂದ, ಭ್ರಮನಿರಸನವಾದಂತೆ ಅನ್ನಿಸಿದ್ದು ಹಾಗೂ ಮಹತ್ವದ ರಾಜಕೀಯ ವಿಷಯಗಳಲ್ಲಿ ಗಾಂಧಿಯವರ ಅಭಿಪ್ರಾಯಗಳಿಗೆ ಮಣಿಯಬೇಕಾಗಿ ಬಂದದ್ದು, ಅಂಬೇಡ್ಕರರನ್ನು ಅಸಮಾಧಾನಕ್ಕೀಡು ಮಾಡಿತು. ಪ್ರತ್ಯೇಕ ಚುನಾವಣಾ ಕ್ಷೇತ್ರದ ವಿಷಯದಲ್ಲಿ ಎದುರಿಸಿದ ಪ್ರತಿಭಟನೆ ಮತ್ತು, ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇನ್ನೂ ನಿಷಿದ್ಧವಾಗಿರುವುದು ಭಾಗಶಃ ಇವುಗಳ ಫಲವಾಗಿ, ಅಂಬೇಡ್ಕರ್ ತಮ್ಮ ಯೋಜನೆಯನ್ನು ಬದಲಾಯಿಸಿದರು.
  • ತಮ್ಮ ಅನುಯಾಯಿಗಳ ಜೀವನಮಟ್ಟವನ್ನು ಹೆಚ್ಚಿಸಿ ಕೊಂಡು , ರಾಜಕೀಯ ಅಧಿಕಾರವನ್ನು ಗಳಿಸುವತ್ತ ಲಕ್ಷ್ಯವಿಡಬೇಕೆಂದು ಆದೇಶಿಸಿದರು.ಜೊತೆಗೆ, "ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅವರು ಬೇರೆಧರ್ಮಕ್ಕೆ ಮತಾಂತರಗೊಳ್ಳಬೇಕು"ಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜ ದಿಂದ,ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ವರ್ಷದಲ್ಲಿ ಅಂಬೇಡ್ಕರ್ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು:
  • ಅಂಬೇಡ್ಕರರನ್ನು ಮುಂಬಯಿಯ ಸರಕಾರೀ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಮಾಡಿಕೂಳ್ಳಲಾಯಿತು. ನಂತರ ಅಂಬೇಡ್ಕರರು ತಮ್ಮದೇ ಆದ ಸ್ವಂತ ಮನೆ ಮಾಡಿ, ೫೦,೦೦೦ಕ್ಕೂ ಹೆಚ್ಚಿನ ಪುಸ್ತಕಗಳ ಗ್ರಂಥಾಲಯವನ್ನು ಕಟ್ಟಿಕೊಂಡರು. ಇದೇ ವರ್ಷ ಅವರ ಪತ್ನಿ ರಮಾಬಾಯಿಯವರು ಮರಣ ಹೊಂದಿದರು. ೧೯೦೮ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ.

ಕೃತಿಗಳು

ಸಂಶೋಧನಾ ಪ್ರಬಂಧಗಳು

  1. ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ
  2. “ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ)

ಮೊಟ್ಟ ಮೊದಲ ಪ್ರಕಾಶಿತ ಕೃತಿ

  1. ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ
  2. ಡಾ ಬಿ ಆರ್ ಅಂಬೇಡ್ಕರ್ ರವರ ಲೇಖನಗಳು

ಅಂಬೇಡ್ಕರ್ ರವರ ಪ್ರಮುಖ ಕೃತಿಗಳು

  1. ಭಾರತದಲ್ಲಿ ಜಾತಿ ಪದ್ಧತಿ
  2. ಸ್ವತಂತ್ರ ಕಾರ್ಮಿಕ ವರ್ಗದ ಸಂವಿಧಾನಾತ್ಮಕ ನಿಯಮ
  3. ಕಾರ್ಮಿಕರು ಮತ್ತು ಸಂಸದೀಯ ಪ್ರಜಾಪ್ರಭುತ್ವ
  4. ಬುದ್ಧ ಮತ್ತು ಅವನ ದಮ್ಮ
  5. ಸಂಸದೀಯ ಪ್ರಜಾಪ್ರಭುತ್ವದ ಭವಿಷ್ಯ
  6. ಪ್ರಜಾಪ್ರಭುತ್ವದ ಯಶಸ್ವಿ ಅಂಶಗಳು
  7. ನನ್ನ ವೈಯಕ್ತಿಕ ತತ್ವಜ್ಞಾನ
  8. ಬುದ್ಧಿಸಂ ಅಂಡ್ ಕಮ್ಯುನಿಸಂ

ಇತರ ಬರಹಗಳು

  1. ಭಾರತದಲ್ಲಿಯ ಸಂಪ್ರದಾಯ1917
  2. ಭಾರತದಲ್ಲಿ ಸಣ್ಣಹಿದಾಬಾಲಿಗಳು ಮತ್ತು ಅದರ ಸಮಸ್ಯೆಗಳು1917
  3. ಹಣದ ಸಮಸ್ಯೆ1923
  4. ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಆರ್ಥಿಕ ವ್ಯವಸ್ಥೆಯ ಇತಿಹಾಸ1925
  5. ಜಾತಿಯ ವಿನಾಶ1936
  6. ಫೆಡರೇಷನ್ v/s ಫ್ರಿಡಂ 1939
  7. ಪಾಕಿಸ್ತಾನದ ಮೇಲಿನ ವಿಚಾರಗಳು1941
  8. ಗಾಂಧಿ ಮತ್ತು ಅಸ್ಪೃಶ್ಯತೆ ನಿವಾರಣೆ 1943
  9. ರಾನಡೆ ಗಾಂಧಿ ಮತ್ತು ಜಿನ್ನ 1943
  10. ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಏನು ಮಾಡಿದ್ದಾರೆ1945
  11. ಕಮ್ಯುನಲ್ ಡೆಡ್ ಲಾಕ್ ಅಂಡ್ ಎ ವೇ ಟು ಸಾಲ್ವ್ ಇಟ್ 1945
  12. ಪಾಕಿಸ್ತಾನ ಅಥವಾ ಭಾರತದ ವಿಭಜನೆ 1945
  13. ಶೂದ್ರರು ಯಾರು1946
  14. ಸ್ಟೇಟ್ ಅಂಡ್ ಮೈನರಿಟಿಸ್1947
  15. ಭಾರತದ ಹಣ ಮತ್ತು ಬ್ಯಾಂಕ್ ಇತಿಹಾಸ ಭಾಗ 1947
  16. ಅಸ್ಪೃಶ್ಯರು
  17. ಮಹಾರಾಷ್ಟ್ರದ ಒಂದು ಭಾಷವಾರು ರಾಜ್ಯ 1948
  18. ಹಿಂದುಮಹಿಳೆಯ ಏಳಿಗ್ಗೆ ಮತ್ತು ಪತನ 1950
  19. ಗೋಸಾಲ್ ಆಫ್ ಬುದ್ಧಿಜಂ 1952
  20. ಭಾಷಾವಾರು ರಾಜ್ಯಗಳ ಮೇಲಿನ ಒಂದು ಸಿದ್ಧಾಂತ 1955
  21. ಬುದ್ಧ ಮತ್ತು ಅವನ ದಮ್ಮ1957

ರಾಜಕೀಯ ಜೀವನ

  • ಮುಂದಿನ ಕೆಲವರ್ಷಗಳಲ್ಲಿ, ಅಂಬೇಡ್ಕರ್ ಸ್ವತಂತ್ರ್ತ ಕಾರ್ಮಿಕ ಪಕ್ಷ ( ಇಂಡಿಪೆಂಡೆಂಟ್ ಲೇಬರ್ ಪಾರ್ಟಿ) ಸ್ಥಾಪಿಸಿ, ೧೯೩೫ರ ಭಾರತ ಸರಕಾರದ ಕಾಯಿದೆಯ ಪ್ರಕಾರ ನಡೆಸಲ್ಪಟ್ಟ ಪ್ರಾಂತೀಯ ಚುನಾವಣೆಗಳಲ್ಲಿ ಭಾಗವಹಿಸಿದರು. ಈ ಚುನಾವಣೆಯಲ್ಲಿ ವಿಜಯಶಾಲಿಯಾದ ಅವರು, ಮುಂಬಯಿ ವಿಧಾನ ಸಭೆಯಲ್ಲಿ (ಲೆಜಿಸ್ಲೇಟಿವ್ ಕೌನ್ಸಿಲ್) ದೊಡ್ಡ ಭೂ ಹಿಡುವಳಿದಾರಿಕೆಯ ನಿಷೇಧ, ಕೈಗಾರಿಕಾ ಕಾರ್ಮಿಕರಿಗೆ ಮುಷ್ಕರದ ಹಕ್ಕು, ಜನಸಂಖ್ಯಾ ನಿಯಂತ್ರಣ ಜಾರಿ ಇತ್ಯಾದಿ ವಿಷಯಗಳ ಬಗ್ಗೆ ಒತ್ತಾಯಿಸಿ, ಮುಂಬಯಿ ರಾಜ್ಯದ (ಪ್ರೆಸಿಡೆನ್ಸಿ) ವಿವಿಧ ಕಡೆಗಳಲ್ಲಿ ಸಭೆ, ಸಮ್ಮೇಳನಗಳಲ್ಲಿ ಭಾಗವಹಿಸಿದರು.
  • ೧೯೩೯ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದಾಗ, ಅಂಬೇಡ್ಕರ್, ನಾಜಿ ತತ್ವಗಳು ಭಾರತೀಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹವುಗಳು ಎಂಬ ನಿಲುವನ್ನು ತೆಗೆದುಕೊಂಡರು. ಬ್ರಿಟಿಷ್ ಸರಕಾರವನ್ನು ಈ ಯುದ್ಧದಲ್ಲಿ ಬೆಂಬಲಿಸಬೇಕೆಂದು ಸಾರ್ವಜನಿಕರಿಗೆ ಕರೆ ಕೊಟ್ಟ ಅವರು, ಅಸ್ಪೃಶ್ಯರನ್ನು ಭಾರತೀಯ ಸೇನೆಯಲ್ಲಿ ಭರ್ತಿಯಾಗುವಂತೆ ಪ್ರೋತ್ಸಾಹಿಸಿದರು. ೧೯೪೧ರಲ್ಲಿ ಅಂಬೇಡ್ಕರರನ್ನು ರಕ್ಷಣಾ ಸಲಹಾ ಸಮಿತಿಗೆ ( ಡಿಫೆನ್ಸ್ ಅಡ್ವೈಸರೀ ಕಮಿಟಿ) ನೇಮಕ ಮಾಡಲಾಯಿತು.
  • ಮರು ವರ್ಷ ವೈಸರಾಯ್ ಎಕ್ಸಿಕ್ಯೂಟಿವ್ ಕೌನ್ಸಿಲ್ಲಿನ ಕಾರ್ಮಿಕ ಸದಸ್ಯ ಎಂದು ನೇಮಕವಾದ ಅವರು, ಈ ಹುದ್ದೆಯಲ್ಲಿ ಮುಂದಿನ ನಾಲ್ಕು ವರ್ಷ ಮುಂದುವರಿದರು. ಇದೇ ಅವಧಿಯಲ್ಲಿ ಅವರು ಸ್ವತಂತ್ರ ಕಾರ್ಮಿಕ ಪಕ್ಷವನ್ನು ಅಖಿಲ ಭಾರತ ಪರಿಶಿಷ್ಟ ಜಾತಿ ಒಕ್ಕೂಟವಾಗಿ ಬದಲಾಯಿಸಿದರು; ಪ್ರಜಾ ಶಿಕ್ಷಣ ಸಮಾಜವನ್ನು(ಪೀಪಲ್ಸ್ ಎಜುಕೇಶನ್ ಸೊಸೈಟಿ) ಸ್ಥಾಪಿಸಿದರು.
  • ಅತ್ಯಂತ ವಿವಾದವನ್ನು ಹುಟ್ಟು ಹಾಕಿದ ಅನೇಕ ಪುಸ್ತಕಗಳನ್ನೂ, ಬಿಡಿಹಾಳೆಗಳನ್ನೂ (ಪಾಂಪ್ಲೆಟ್ಸ್) ಪ್ರಕಾಶಿಸಿದರು. ಅವುಗಳಲ್ಲಿ ಕೆಲವು “ ಪಾಕಿಸ್ತಾನದ ಬಗ್ಗೆ ವಿಚಾರಗಳು “ (ಥಾಟ್ಸ್ ಆನ್ ಪಾಕಿಸ್ತಾನ್) , "ಕಾಂಗ್ರೆಸ್ ಹಾಗೂ ಗಾಂಧಿ ಅಸ್ಪೃಶ್ಯರಿಗೆ ಮಾಡಿದ್ದೇನು" ( ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಹ್ಯಾವ್ ಡನ್ ಟು ಅನ್ಟಚಬಲ್ಸ್) ಮತ್ತು “ ಶೂದ್ರರು ಯಾರಾಗಿದ್ದರು?”( ಹೂ ವರ್ ದ ಶೂದ್ರಾಸ್?) ಮುಖ್ಯವಾದುವು.

ಭಾರತದ ಸಂವಿಧಾನ ಶಿಲ್ಪಿ

  • ೧೯೪೭ರಲ್ಲಿ ಭಾರತ ಸ್ವತಂತ್ರವಾದ ಮೇಲೆ, ಈಗಾಗಲೇ ಸಂಸತ್ತು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ) ಸದಸ್ಯರಾಗಿದ್ದ ಅಂಬೇಡ್ಕರರನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನಿಸಿದರು. ಕೆಲ ವಾರಗಳ ನಂತರ ಸಂಸತ್ತು ಸಂವಿಧಾನವನ್ನು ತಯಾರು ಮಾಡುವ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಿತು. ಈ ಸಮಿತಿಯು ಅಂಬೇಡ್ಕರರನ್ನು ತನ್ನ ಅಧ್ಯಕ್ಷರನ್ನಾಗಿ ಚುನಾಯಿಸಿತು.
  • ಸಂವಿಧಾನದ ಕರಡನ್ನು ಸಿದ್ಧ ಮಾಡಲು, ಬಹುತೇಕ ಒಬ್ಬಂಟಿಯಾಗಿ, ಮುಂದಿನ ಎರಡು ವರ್ಷ ದುಡಿದ ಅಂಬೇಡ್ಕರ್, ಅನಾರೋಗ್ಯವಿದ್ದಾಗ್ಯೂ, ೧೯೪೮ರ ಮೊದಲಿನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಅದೇ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸಂವಿಧಾನದ ಹಸ್ತಪ್ರತಿ ಯನ್ನು ಬೆಳ್ಳಿತಟ್ಟೆಯಲ್ಲಿಟ್ಟು, ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಇಡೀ ರಾಷ್ಟೃಕ್ಕೆ ಅದನ್ನು ಲೋಕಾರ್ಪಣೆ ಮಾಡಿದರು.
  • ಸಂಸತ್ತಿನ ವ್ಯವಸ್ಥೆಯಲ್ಲಿ ಇದನ್ನು ಅವರು ಸಮರ್ಥವಾಗಿ ಮುಂದೊಯ್ದ ಪರಿಣಾಮವಾಗಿ, ಕೆಲವೇ ಕೆಲವು ತಿದ್ದುಪಡಿಗಳೊಂದಿಗೆ, ಇದು ಸಂಸತ್ತಿನ ಅಂಗೀಕಾರವನ್ನು ಪಡೆಯಿತು. ಅಂದಿನಿಂದ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯೆಂದೇ ಹೆಸರಾದರು. ೧೯೫೧ರಲ್ಲಿ ಅಂಬೇಡ್ಕರ್ ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡುವುದರೊಂದಿಗೆ ಅವರ ರಾಜಕೀಯ ಜೀವನಕ್ಕೆ ಬಹುತೇಕ ತೆರೆ ಬಿದ್ದಿತು.
  • ೧೯೫೨ರ ಮಹಾಚುನಾವಣೆಯಲ್ಲೇ ಆಗಲೀ, ಅದರ ಮರುವರ್ಷ ನಡೆದ ಮರುಚುನಾವಣೆಯಲ್ಲೇ ಆಗಲಿ, ಲೋಕಸಭೆಗೆ ಗೆದ್ದು ಬರಲು ವಿಫಲರಾದರು. ಆದರೆ ಮಾರ್ಚ್ ೧೯೫೨ರಲ್ಲಿ ಆಗಿನ ಮುಂಬಯಿ ರಾಜ್ಯದ ಹದಿನೇಳು ಚುನಾಯಿತ ಪ್ರತಿನಿಧಿಗಳಲ್ಲಿ ಒಬ್ಬರಾಗಿ ರಾಜ್ಯಸಭೆಯನ್ನು ಪ್ರವೇಶಿಸಿದರು. ಸರಕಾರದ ಮೇಲೆ ನಿಯಂತ್ರಣವಿಡಲು ಅವರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡರು.

ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ

  • ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ಹೇಗಿತ್ತು ಮತ್ತು ಅದರಿಂದ ಅವರು ಏನನ್ನು ನಿರೀಕ್ಷಿಸಿದ್ದರು ಅನ್ನುವುದರ ಬಗ್ಗೆ ಈ ಉಲ್ಲೇಖವು ಬಹಳಷ್ಟು ತಿಳಿಸುತ್ತದೆ. ಕ್ರಾಂತಿಕಾರಕ ಬದಲಾವಣೆಗಳನ್ನು ಕೇವಲ ಕ್ರಾಂತಿಯ ಮೂಲಕವೇ ತರಬಲ್ಲೆವು ಮತ್ತು ಕ್ರಾಂತಿ ಎಂದರೆ ರಕ್ತಪಾತ ಅನ್ನುವುದು ಸಾಮಾನ್ಯ ತಿಳಿವಳಿಕೆ. ಅಲ್ಲದೆ ಕ್ರಾಂತಿಗಳು ಮತ್ತು ಪ್ರಜಾಪ್ರಭುತ್ವಗಳು ಪರಸ್ಪರ ಹೊಂದಣಿಕೆಯಾಗಲಾರವು ಎಂಬ ಗುಪ್ತ ಗುಮಾನಿಯೊ ಇದೆ.
  • ಕ್ರಾಂತಿಯ ಬಗ್ಗೆಯ ಈ ಸಾಮಾನ್ಯ ಭಾವನೆಗಳು ತಾತ್ವಿಕವಾಗಿ ತಪ್ಪು ಎಂದು ಎತ್ತಿ ತೋರಿಸಬಹುದು. ಆ ವಿಷಯ ಬೇರೆ ಹಾಗೆಯೇ, ಪ್ರಜಾಪ್ರಭುತ್ವದ ಬಗ್ಗೆಯೂ ಕೆಲವು ಸಾಮಾನ್ಯ ಭಾವನೆಗಳಿವೆ. ಕ್ರಮಬದ್ದ ಚುನಾವಣೆ ಗಳು, ಅನೇಕ ರಾಜಕೀಯ ಪಕ್ಷಗಳು ಮತ್ತು ಪ್ರತಿ ವ್ಯಕ್ತಿಗೂ ಸಮಾನ ರಾಜಕೀಯ ಮೌಲ್ಯವನ್ನು ನೀಡುವ ಒಂದು ಪ್ರಾತಿನಿಧಿಕ ಸರ್ಕಾರದ ರೂಪ ಅದು ಎಂದು ಪರಿಗಣಿಸಲ್ಪಟ್ಟಿದೆ.
  • ಪ್ರಜಾಪ್ರಭುತ್ವದ ಎದ್ದು ಕಾಣುವ ಸ್ಥೂಲ ಸಂರಚನೆಯ ಮುಖ್ಯ ಶಿಲ್ಪಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿಗಣಿಸಲ್ಪಟ್ಟಿದ್ದರು. ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯ ವನ್ನಾಗಿ ಬದಲಾಯಿಸಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಗಳನ್ನು ಒಟ್ಟಿಗೆ ಸಾಧಿಸಬಲ್ಲದೆಂಬಂತೆ ಪ್ರಜಾಪ್ರಭುತ್ವವನ್ನು ಅವರು ಕಲ್ಪಿಸಿಕೊಂಡ್ಡಿದರು.
  • ಪ್ರಜಾಪ್ರಭುತ್ವವೆಂದರೆ ಸರ್ಕಾರದ ಒಂದು ರೂಪವೆಂದು ಅದು ಹುಟ್ಟಿದ ಪ್ರಾಚೀನತೆಯಿಂದ ಇಂದಿನ ಆಧುನಿಕತೆಯವರೆಗೂ ಕಲ್ಪಿಸಿಕೊಳ್ಳಲಾಗಿದೆ. ಆದರೆ ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವಾದರ ಭಾವನೆ ಎಂದು ಹೇಳಿದ್ದಾರೆ.
  • ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಸಮಾಜವನ್ನು ನಿರೀಕ್ಷಿಸುತ್ತದೆ. ರಾಜಕಾರಣಿಗಳು ಪ್ರಜಾಪ್ರಭುತ್ವವು ಮೂಲಭೂತವಾಗಿ ಸಮಾಜದ ಒಂದು ಸ್ವರೂಪ ಕೇವಲ ಸರ್ಕಾರದ ಮಾದರಿ ಅಲ್ಲ ಅನ್ನುವುದನ್ನು ಗ್ರಹಿಸಲಿಲ್ಲ. ಇದು ಎರಡು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು ಒಂದು ಮನೋಭಾವ, ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ.
  • ಎರಡನೆಯದು ಪೆಡಸಾದ ಸಾಮಾಜಿಕ ಅಡೆ-ತಡೆಗಳಿಂದ ಮುಕ್ತ ಸಮಾಜ.ಸಾಮಾಜಿಕ ಪ್ರಜಾಪ್ರಭುತ್ವ ಅನ್ನುವ ಪದ ಸಾಮಾನ್ಯವಾಗಿ ಆರ್ಥಿಕ ಸಂಸ್ಧೆಗಳು ಹಾಗೂ ಬಂಡವಾಳ ಕ್ರಮೇಣ ಸಮಾಜವಾದಕ್ಕೆ ಹೊರಳುತ್ತದೆಂಬ ಫೇಬಿಯನ್ ನಂಬಿಕೆ ಗಳನ್ನು ಒಳಗೊಂಡಿರುತ್ತದೆ. ಆದರೆ ಅಂಬೇಡ್ಕರ ಅವರ ಪ್ರ್ರಕಾರ ಅದು ಶ್ರೇಣೀಕೃತವಲ್ಲದ, ವಿಂಗಡಣೆ ಮತ್ತು ಪ್ರತ್ಯೇಕಗಳಿಲ್ಲದ ಸಮಾಜ. ಅದು ಭಾರತಿಯ ಸಮಾಜ ಮತ್ತು ಅದರ ಜಾತಿಗಳ ವ್ಯವಸ್ಥೆಗೆ ತೀಕ್ಷ್ಣವಾಗಿ ಅನ್ವಯಿಸುತ್ತದೆ.

ಸಾಮಾಜಿಕ ಪ್ರಜಾಪ್ರಭುತ್ವ

ಅದು ಮೇಲ್ನೋಟಕ್ಕೆ ಫೇಬಿಯನ್ ಕಲ್ಪನೆಯ "ಸಾಮಾಜಿಕ ಪ್ರಜಾಪ್ರಭುತ್ವ"ದೊಂದಿಗೆ ಅನೇಕ ಅಂಶಗಳನ್ನು ಹಂಚಿಕೊಂಡಿದೆ.ಸಹಕಾರ ಮತ್ತು ಸಮುದಾಯ (ಭ್ರಾತೃತ್ವವನ್ನು ಸೂಚಿಸುತ್ತದೆ). ಸಮಾನತೆ (ಅವಕಾಶ ಮತ್ತು ಗಳಿಕೆಗಳೆರಡರಲ್ಲೂ) ಮತ್ತು ಸ್ವಾತಂತ್ರ್ಯ-ಹೀಗೆ. ಆದರ ಜೊತೆಗೆ ಅವರು ಸಂಪನ್ಮೂಲಗಳ ಹಂಚಿಕೆಯಲ್ಲಿ ವ್ಯಕ್ತಿಗಳ ಸಮಾನ ಮೌಲ್ಯವನ್ನು ವಿವರಿಸುವ 'ಆರ್ಥಿಕ ಪ್ರಜಾಪ್ರಭುತ್ವ' ಅನ್ನುವ ಪದವನ್ನು ಬಳಸಿದ್ದಾರೆ. ಹೀಗೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವವು ಮೂರು ಭಾಗಗಳನ್ನು ಹೊಂದಿದೆ:

  1. ಔಪಚಾರಿಕ ಪ್ರಜಾಪ್ರಭುತ್ವವಾಗಿ ರಾಜಕೀಯ ಪ್ರಜಾಪ್ರಭುತ್ವ,
  2. ಸಾಮಾಜಿಕ ಸಮಾನತೆಗೆ ಅನ್ವಯಿಸುವ ಸಾಮಾಜಿಕ ಪ್ರಜಾಪ್ರಭುತ್ವ, ಮತ್ತು
  3. ಸಮಾಜವಾದಿ ಆರ್ಥಿಕತೆಯುಳ್ಳ ಆರ್ಥಿಕ ಪ್ರಜಾಪ್ರಭುತ್ವ. ಇವು ಮೂರು ತಮ್ಮ ಆದರ್ಶ ಸಮಾಜದ ಸ್ವರೂಪವಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಗಳೊಂದಿಗೆ ಸಮೀಕೃತಗೊಳ್ಳುತ್ತವೆ.

ಕರಡು ಸಮಿತಿಯ ಅಧ್ಯಕ್ಷರಾಗಿ

ಬಿ.ಆರ್.ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರು

  • 1946ರಲ್ಲಿ, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ ಖಚಿತವಾದ ಮೇಲೆ ನರಸಿಂಗ ರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ರಾಯರು (ಬಿ.ಎನ್.ರಾವ್) ಸರಕಾರ ಕೇಳಿ ಕೊಂಡಂತೆ ಸಂವಿಧಾನದ ಕರಡು ಸಿದ್ಧ ಪಡಿಸಿದರು.
  • ಇದರಲ್ಲಿ ಒಟ್ಟು 243 ವಿಧಿಗಳೂ 13 ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟು ಕೊಂಡು ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು. ಬಿ.ಎನ್.ರಾವ್ ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು; ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ 315 ವಿಧಿಗಳೂ 8 ಅನುಚ್ಛೇದಗಳೂ ಇದ್ದವು.
  • ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ 395ಕ್ಕೇರಿತು. ತನ್ನ ಈ ಕರ್ತವ್ಯವನ್ನು ರಾಯರು ಒಂದೇ ಒಂದು ರುಪಾಯಿ ವೇತನ ಅಥವಾ ಸಂಭಾವನೆ ಪಡೆಯದೆ ಉಚಿತವಾಗಿ ನಡೆಸಿ ಕೊಟ್ಟರು ಎನ್ನುವುದು ಇನ್ನೊಂದು ಮಹತ್ವದ ಅಂಶ.

ಕಾನೂನು ಸಚಿವರು

  • ಸ್ವಾತಂತ್ರ್ಯದ ಸಂದರ್ಭದಲ್ಲಿ ನೆಹರೂ ಅವರಿಂದ ಕಾನೂನು ಸಚಿವರಾಗಲು ಆಹ್ವಾನ ಪಡೆದ ಅಂಬೇಡ್ಕರ್ ಅವರು, ಭಾರತದ ಸಂವಿಧಾನ ರೂಪಿಸುವ ಜವಾಬ್ಧಾರಿಯನ್ನು ಹೊತ್ತು ಅಪಾರವಾದ ಶ್ರಮವಹಿಸಿ ದೇಶಕ್ಕೆ ಸಂವಿಧಾನವನ್ನು ಕಟ್ಟಿಕೊಟ್ಟರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ.
  • ಇಡೀ ವಿಶ್ವದಲ್ಲಿ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥವಾಗಿವೆ ಎಂಬ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ. ರಾಜಕೀಯ ಪ್ರಜಾಪ್ರಭುತ್ವವು ಬಹುಮತವನ್ನು ತಿರುಚಿ ಬದಲಾಯಿಸಲು ಸಾಧ್ಯವಿಲ್ಲದಂತೆ ಸಮಾಜದ ಆರ್ಥಿಕ ಚೌಕಟ್ಟನ್ನು ಸಂವಿಧಾನದೊಳಗೆ ಭದ್ರವಾಗಿ ಅಳವಡಿಸಬೇಕೆಂದು ಅವರು ಬಯಸಿದ್ದರು.
  • 'ಲಿಬರಿಸಂ'ನಲ್ಲಿ ಇಂತ ಹೊಳಹುಗಳು ಅಪರೂಪ. ಅಂಬೇಡ್ಕರ ಅವರು ಮೂಲಭೂತವಾಗಿ ಒಬ್ಬ ಲಿಬರಲ್ (ಉದಾರವಾದಿ) ಆಗಿದ್ದರೂ, 'ಲಿಬರಿಸಂ'ನ ಚೌಕಟ್ಟನ್ನು ಎಂದಿನಂತೆ ಅನಾಯಾಸವಾಗಿ ಮೀರಿದ್ದರು. ಖಾಸಗಿ ಉದ್ದಿಮೆಯ ಮೇಲೆ ಆಧರಿಸಿದ ಆರ್ಥಿಕ ವ್ಯವಸ್ಥೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ದವಾದದ್ದು ಎಂದು ಅವರು ಸ್ಪಷ್ಟವಾಗಿ ತಿಳಿದಿದ್ದರು. ಖಾಸಗಿ ಉದ್ದಿಮೆಯು ಅದರ ಮೂಲದಲ್ಲಿ ಸಂಪತ್ತು ಮತ್ತು ತನ್ಮೂಲಕ ಅಧಿಕಾರವನ್ನು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಿಸುತ್ತದೆ.
  • ಇದು ಅನಿವಾರ್ಯವಾಗಿ ಬದುಕಿರಲು ದುಡಿಯಲೇಬೇಕಾದ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ. ಮಾಲಿಕ ತಪ್ಪು ಮಾಡಿದ್ದರೂ ಕೆಲಸಗಾರ ಪ್ರಶ್ನಿಸಲಾಗದು. ಪ್ರಶ್ನಿಸಿದರೆ ಅವನು ತನ್ನ ಕೆಲಸ ಕಳೆದುಕೊಳ್ಳಬಹುದು!ಅವರು ಹೇಳುತ್ತಾರೆ: "ಖಾಸಗಿ ಉದ್ದಿಮೆ ಮತ್ತು ವ್ಯೆಯಕ್ತಿಕ ಲಾಭಗಳಿಕೆಯನ್ನು ಆಧರಿಸುವ ಸಾಮಾಜಿಕ ಅರ್ಥವ್ಯವಸ್ಥೆಯನ್ನು ಅಭ್ಯಾಸ ಮಾಡುವ ಯಾರಾದರೂ ಇದು ಹೇಗೆ ಪ್ರಜಾಪ್ರಭುತ್ವದ ಮೂಲಾಧಾರವಾದ 'ವ್ಯಕ್ತಿಗಳ ಹಕ್ಕು'ಗಳನ್ನು ಕಿತ್ತುಕೊಳ್ಳದಿದ್ದರೂ ಬಹಳ ಮಟ್ಟಿಗೆ ಮೊಟಕು ಗೊಳಿಸುತ್ತದೆ ಅನ್ನುವುದನ್ನು ಮನಗಾಣುವರು.
  • ಜೀವನೋಪಾಯಕ್ಕಾಗಿ ಎಷ್ಟ್ಟು ಜನ ತಮ್ಮ ಹಕ್ಕುಗಳನ್ನು ಬಿಟ್ಟುಕೊಡ ಬೇಕಾಗುವುದು? ಎಷ್ಟ್ಟು ಜನ ಖಾಸಗಿ ಮಾಲೀಕರಿಂದ ಆಳಿಸಿಕೊಳ್ಳಲು ಸಿದ್ದರಾಗಬೇಕು?"ಆದ್ದರಿಂದ ಪ್ರಜಾಪ್ರಭುತ್ವವನ್ನು ಸಹಕಾರಗೊಳಿಸಲು ಉತ್ಪಾದನೆಯ ಸಾಧನಗಳು ಸಮಾಜದ ಒಡೆತನದಲ್ಲಿ ಇರಬೇಕೆಂದು ಅವರು ಬಯಸಿದರು. ಸಂವಿಧಾನ ರಚನಾಸಭೆ ಯಲ್ಲಿ ಜವಹರಲಾಲ್ ನೆಹರುರ ಅವರು ಮಂಡಿಸಿದ್ದರು.
  • ಸಂವಿಧಾನದ ಉದ್ದೇಶನವನ್ನು ಕುರಿತು ಠರಾವಿನ ಬಗ್ಗೆ ಮಾತನಾಡುತ್ತ ೧೭ ಡಿಸೆಂಬರ್ ೧೯೪೬ರಲ್ಲಿ ಅವರು, ಠರಾವಿ ನಲ್ಲಿ ಪ್ರಸ್ತಾಪಿಸಿದ್ದಂತೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಖಾತ್ರಿಗೊಳಿಸಲು ಆರ್ಥಿಕ ವ್ಯವಸ್ಥೆಯಾಗಿರಬೇಕು ಎಂದು ಹೇಳಿದ್ದರು.ಆರ್ಥಿಕ ವ್ಯವಸ್ಥೆ ಸಮಾಜವಾದಿ ಆರ್ಥಿಕ ವ್ಯವಸ್ಥೆಯಾಗದ ಹೊರತು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸುವಲ್ಲಿ ನಂಬಿಕೆ ಇಟ್ಟ ಯಾವುದೇ ಮುಂದಿನ ಸರ್ಕಾರಕ್ಕೆ ಇದು ಹೇಗೆ ಸಾಧ್ಯ ಅನ್ನುವುದು ನನಗೆ ಅರ್ಥವಾಗದು. ವಾಸ್ತವವಾಗಿ ಸಂವಿಧಾನ ರಚನಾಸಭೆಯನ್ನು ತಾವು ರೂಪುಗೊಳಿಸಿದ್ದ 'ರಾಷ್ಟ್ರವೇ ನಿಯಂತ್ರಿಸುವ ಸಮಾಜವಾದ' ವ್ಯವಸ್ಥೆಗೆ ಅವರು ದನಿ ಕೊಡುತ್ತಿದ್ದರು.
  • ಸಮಾಜವಾದಿ ಚೌಕಟ್ಟು ಆಥಿಕ ವ್ಯವಸ್ಥೆಯು 'ಸಂವಿಧಾನದ ಒಂದು ಭಾಗ'ವಾಗಿರಬೇಕೆಂದು ಅವರ ಪ್ರಸ್ತಾವನೆ ಇತ್ತು. ಮೂಲ ಮತ್ತು ಪ್ರಮುಖ ಉದ್ದಿಮೆಗಳ ಒಡೆತನ ಮತ್ತು ನಿರ್ವಹಣೆ ರಾಷ್ಟ್ರ್ದದ (ಸರ್ಕಾರದ )ಕೈಯಲ್ಲಿರಬೇಕು; ವಿಮೆಯು ರಾಷ್ಟ್ರ್ದದ ಏಕಸ್ವಾಮ್ಯದಲ್ಲಿರಬೇಕು; ಪ್ರತಿಯೊಬ್ಬ ವಯಸ್ಕನಿಗೂ ಅದು (ವಿಮಾಪಾಲಿಸಿ) ಕಡ್ಡಾಯವಾಗಿದ್ದು ಅವನ ವೇತನಕ್ಕೆ ಅನುಗುಣವಾಗಿ ಇರತಕ್ಕದ್ದು.
  • ಕೃಷಿಯು ರಾಷ್ಟ್ರೀಕೃತ ಉದ್ದಿಮೆಯಾಗಿರಬೇಕು. ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ಇಂತಹ ಉದ್ದಿಮೆ ವಿಮೆ ಮತ್ತು ಕೃಷಿ ಭೂಮಿಯನ್ನು ರಾಷ್ಟ್ರ್ದ(ಸರ್ಕಾರ)ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಡಿಬೆಂಚರುಗಳ ಮೂಲಕ ಪರಿಹಾರ ನೀಡಿ ರಾಷ್ಟ್ರ್ದ(ಸರ್ಕಾರ), ಅವುಗಳಲ್ಲಿ ನಿರ್ಣಾಯಕ ಹಕ್ಕುಗಳನ್ನು ಪಡೆದುಕೊಳ್ಳಬೇಕು.
  • ಕೃಷಿಯನ್ನು ಸಾಮೂಹಿಕ ಉದ್ದಿಮೆಯಾಗಿ ಸಂಘಟಿಸಬೇಕು; ಸರ್ಕಾರ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಒಂದೇ ಪ್ರಮಾಣದ ಫಾರ್ಮಗಳನ್ನಾಗಿ ವಿಂಗಡಿಸಿ ಜಾತಿ ಜನಾಂಗಗಳ ಭೇದವಿಲ್ಲದಂತೆ ಹಳ್ಳಿಗರಿಗೆ ಗುತ್ತಿಗೆ ಮೇಲೆ ಸಾಮೂಹಿಕ ಕೃಷಿಗಾಗಿ ಬಿಟ್ಟುಕೊಡಬೇಕು, ತಾನು ಒದಗಿಸುವ ಭೂಮಿಗೆ ಬಾಡಿಗೆ, ಕೃಷಿ ಸಲಕರಣೆಗಳು, ಒಳಸುರಿ ಮತ್ತು ಸಾಲಕ್ಕೆ ಪ್ರತಿಯಾಗಿ ಅವರು ಸರ್ಕಾರಕ್ಕೆ ಹಣ ಪಾವತಿ ಮಾಡತಕ್ಕದ್ದು- ಹೀಗಿತ್ತು ಅವರ ಪ್ರಸ್ತಾವನೆ.
  • ತಮ್ಮ 'ರಾಷ್ಟ್ರಗಳನ್ನು ಮತ್ತು ಅಲ್ಪಸಂಖಾತರು' ಅನ್ನುವ ಪುಸ್ತಕದಲ್ಲಿ ಅವರು ಈ ಬಗ್ಗೆ ಈ ವ್ಯವಸ್ಥೆಯ ಬಗ್ಗೆ ಇನ್ನಷ್ಟು ವಿಷಾದವಾಗಿ ಹೇಳಿದ್ದಾರೆ. ಸಂವಿಧಾನದ ಕಾರ್ಯದ ನಿರ್ವಹಣೆಯ ೬೦ ವರ್ಷಗಳ ಲೆಕ್ಕ ತೆಗೆದರೆ ಈ ನಿರ್ದೆಶಕ ತತ್ವಗಳನ್ನು ನಿರ್ಭಯವಾಗಿ ತುಳಿದು ಆಡಳಿತದ ನೀತಿ ನಿರೂಪಣೆ ಮಾಡಿರುವುದನ್ನು ಕಾಣುತ್ತೇವೆ. ಉದಾಹರಣೆಗೆ: ಜಾಗತೀಕರಣಕ್ಕೆ ಸಂಬಂಧಿಸಿದ ಇಡೀ ನೀತಿ ನಿರೂಪಣೆಯು ಸಂಪೂರ್ಣವಾಗಿ ಈ ನಿರ್ದೇಶಕ ತತ್ವಗಳ ಉಲ್ಲಂಘನೆ ಎಂದು ಪರಿಗಣಿಸಬಹುದು.

ಬೌದ್ಧ ಧರ್ಮಕ್ಕೆ ಮತಾಂತರ

  • ಕೊನೆಯವರೆಗೂ ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸುತ್ತಿದ್ದರೂ , ಅಂಬೇಡ್ಕರರ ಶಕ್ತಿ ೧೯೫೨ರ ನಂತರ ಬೇರೆಯೇ ವಿಷಯಗಳಲ್ಲಿ ಹೆಚ್ಚು ಹೆಚ್ಚು ವ್ಯಯವಾಗತೊಡಗಿತು. ೧೯೩೫ರ ದಲಿತ ಸಮ್ಮೇಳನದಲ್ಲಿ (ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್), “ನಾನೊಬ್ಬ ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿಯೇ ಸಾಯಲಾರೆ” ಎಂದು ಘೋಷಿಸಿ, ಅಸ್ಪೃಶ್ಯರನ್ನು ಹಿಂದುವೆಂದು ಒಪ್ಪಿಕೊಂಡಿರದ ಹಿಂದೂಸಮಾಜಕ್ಕೆ/ಹಿಂದೂಸ್ತಾನಕ್ಕೆ ಆಘಾತ ಉಂಟು ಮಾಡಿದರು.
  • ಅಂಬೇಡ್ಕರ್, ಆಗಿನಿಂದಲೇ ಮತಾಂತರದ ಬಗ್ಗೆ ಗಂಭೀರ ಚಿಂತನೆ ನಡೆಸಿ, ಅಸ್ಪೃಶ್ಯರಿಗೆ ಹಿಂದೂಧರ್ಮ ದಲ್ಲಿ ಏಳಿಗೆಯಿಲ್ಲವಾದ್ದರಿಂದ ಮತಾಂತರ ಅನಿವಾರ್ಯ, ಹಾಗೂ ಬೌದ್ಧಧರ್ಮ ಮತಾಂತರಕ್ಕೆ ಅತ್ಯಂತ ಸೂಕ್ತವಾದದ್ದು ಎಂಬ ನಿರ್ಣಯಕ್ಕೆ ಬಂದರು.ಕೊಲಂಬೋದ ಯಂಗ್ ಮೆನ್ಸ್ ಬುದ್ಧಿಸ್ಟ್ ಅಸೋಸಿಯೇಷನ್ ಸಂಸ್ಥೆಯ ಆಹ್ವಾನದ ಮೇಲೆ ೧೯೫೦ರಲ್ಲಿ ಶ್ರೀಲಂಕಾ ಪ್ರಯಾಣ ಬೆಳೆಸಿದರು.
  • ಅಲ್ಲಿನ ಕ್ಯಾಂಡಿಯಲ್ಲಿ ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಭಾಷಣ ಮಾಡಿದ ಅಂಬೇಡ್ಕರ್, ಶ್ರೀಲಂಕಾದ ಅಸ್ಪೃಶ್ಯರಿಗೆ ಬೌದ್ಧಧರ್ಮವನ್ನು ಆಲಂಗಿಸಲು ಕರೆಕೊಟ್ಟರು. ಪುರಾತನ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನಗಳು ಕಡಿಮೆಯಾಗಲು ಗೌತಮ ಬುದ್ಧನೇ ಕಾರಣ ಎಂಬ ಆರೋಪಕ್ಕೆ ಪ್ರತಿಯಾಗಿ, ಬುದ್ಧನನ್ನು ಸಮರ್ಥಿಸಿ ೧೯೫೧ರಲ್ಲಿ ಲೇಖನವನ್ನು ಬರೆದರು.
  • ಅದೇ ವರ್ಷ, “ಬೌದ್ಧ ಉಪಾಸನಾ ಪಥ” ಎಂಬ ಹೆಸರಿನ ಬೌದ್ಧ ಧರ್ಮೀಯ ಗದ್ಯದ ಸಂಕಲನವನ್ನು ಹೊರತಂದರು. ೧೯೫೪ರಲ್ಲಿ ಅಂಬೇಡ್ಕರ್ ಬರ್ಮಾ ದೇಶವನ್ನು ಎರಡು ಬಾರಿ ಸಂದರ್ಶಿಸಿದರು. ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಮೂರನೆಯ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಎರಡನೆಯ ಬಾರಿ ಭೇಟಿ ಮಾಡಿದರು.
  • ಭಾರತೀಯ ಬೌದ್ಧ ಮಹಾಸಭಾವನ್ನು (ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ) ಸ್ಥಾಪಿಸಿ, ಪುಣೆಯ ಸಮೀಪದ ದೇಹು ರೋಡ್ ನ ದೇವಾಲಯವೊಂದರಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ೧೯೫೪ರ ಡಿಸೆಂಬರ್ ೨೫ರಂದು ಪ್ರತಿಷ್ಠಾಪಿಸಿದರು. ಆ ಸಂದರ್ಭದಲ್ಲಿ ನೆರೆದಿದ್ದ ಸಹಸ್ರಾರು ಅಸ್ಪೃಶ್ಯ ಜನಾಂಗದ ಸಭಿಕರೆದುರಿನಲ್ಲಿ ಬೌದ್ಧ ಧರ್ಮವನ್ನು ಭಾರತದ ಎಲ್ಲೆಡೆ ಹರಡುವುದಕ್ಕೆ ತನ್ನ ಉಳಿದ ಜೀವನವನ್ನು ಮೀಸಲಾಗಿಡುವುದಾಗಿ ಘೋಷಿಸಿದರು.
  • ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಬೌದ್ಧ ಧರ್ಮದ ಸಾರಸಂಗ್ರಹವನ್ನು ಬರೆದು ಪ್ರಕಟಿಸುವುದಾಗಿಯೂ ಅವರು ಈ ಸಭೆಯಲ್ಲಿ ನಿರ್ಣಯಿಸಿದರು. ಅದರ ಪ್ರಕಾರವೇ “ಬುದ್ಧ ಮತ್ತು ಅವರ ಧಮ್ಮ” (ಬುದ್ಧ ಅಂಡ್ ಹಿಸ್ ಧಮ್ಮ ) ಎಂಬ ಕೃತಿಯನ್ನು ಫೆಬ್ರುವರಿ ೧೯೫೬ರಲ್ಲಿ ಪೂರ್ಣಗೊಳಿಸಿದರು. ಇದಾದ ಸ್ವಲ್ಪ ಕಾಲದಲ್ಲಿಯೇ, ತಾವು ಅದೇ ವರ್ಷದ ಅಕ್ಟೋಬರಿನಲ್ಲಿ ಮತಾಂತರ ಗೊಳ್ಳುವುದಾಗಿ ಪ್ರಕಟಿಸಿದರು.
  • ನಾಗಪುರದಲ್ಲಿ ಈ ಕಾರ್ಯಕ್ರಮಕ್ಕೆ ವ್ಯವಸ್ಥೆಯಾಯಿತು. ೧೯೫೬ರ ಅಕ್ಟೋಬರ್ ೧೪ರಂದು, ಬುದ್ಧ ಭಿಕ್ಷುವಿನಿಂದ ಸಾಂಪ್ರದಾಯಿಕ ದೀಕ್ಷೆ ಸ್ವೀಕರಿಸಿದ ಅಂಬೇಡ್ಕರ್, ತಮ್ಮ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳ ನ್ನೊಳಗೊಂಡ ೩,೮೦,೦೦೦ ಜನಸಮೂಹಕ್ಕೆ ತಾವೇ ದೀಕ್ಷೆ ಕೊಟ್ಟರು. ನಾಗಪುರ ಹಾಗೂ ಚಂದಾದಲ್ಲಿ ಇನ್ನೂ ಕೆಲವು ಇಂಥಾ ಮತಾಂತರ ಸಮಾರಂಭಗಳನ್ನು ನೆರವೇರಿಸಿ ಅಂಬೇಡ್ಕರ್ ದಿಲ್ಲಿಗೆ ಮರಳಿದರು.
  • ಕೆಲ ವಾರಗಳ ನಂತರ ನೇಪಾಳಕ್ಕೆ ತೆರಳಿ, ಅಲ್ಲಿ ವಿಶ್ವ ಬೌದ್ಧ ಸಮಾವೇಶದ ನಾಲ್ಕನೆಯ ಸಮ್ಮೇಳನದಲ್ಲಿ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಎಂಬ ವಿಷಯವಾಗಿ ಭಾಷಣ ಮಾಡಿದರು. ದಿಲ್ಲಿಗೆ ಮರಳುವಾಗ ದಾರಿಯಲ್ಲಿ ಬನಾರಸ್ ಹಾಗು ಬುದ್ಧ ಮೋಕ್ಷ ಪ್ರಾಪ್ತಿಹೊಂದಿದ ಕುಶೀನರ ಎಂಬಲ್ಲಿ ನಿಂತು ಭಾಷಣಗಳನ್ನು ಮಾಡಿದರು. ದಿಲ್ಲಿಗೆ ವಾಪಸಾದ ಮೇಲೆ ಅನೇಕ ಬೌದ್ಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
  • ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿ, ತಮ್ಮ ಕೃತಿ “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್” ಪುಸ್ತಕದ ಕೊನೆಯ ಅಧ್ಯಾಯವನ್ನು ಬರೆದು ಮುಗಿಸಿದರು.೧೯೫೬ಡಿಸೆಂಬರ್ ೦೬ನೆಯ ತಾರೀಖು ಅಂಬೇಡ್ಕರ್ ಇಹಲೋಕ ವ್ಯಾಪಾರ ಮುಗಿಸಿದರು. ಅಂಬೇಡ್ಕರ್ ಬೌದ್ಧರಾದ ಮೇಲೆ, ಕೇವಲ ಏಳು ವಾರ ಮಾತ್ರ ಬದುಕಿದ್ದರು.
  • ಆ ಅಲ್ಪ ಕಾಲಾವಧಿಯಲ್ಲಿ ಬೌದ್ಧಧರ್ಮದ ಪ್ರಚಾರಕ್ಕಾಗಿ ಅವರು ಮಾಡಿದಷ್ಟು ಕಾರ್ಯವನ್ನು, ಅಶೋಕನನ್ನು ಬಿಟ್ಟರೆ, ಬಹುಶ: ಬೇರ್ಯಾರೂ ಮಾಡಿಲ್ಲ.ಅವರ ಮರಣದ ಹೊತ್ತಿಗಾಗಲೇ ಏಳೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮತಾಂತರಗೊಂಡಿದ್ದರಷ್ಟೇ ಅಲ್ಲ, ಈ ಮಹಾನ್ ನಾಯಕನ ಹಠಾತ್ ನಿಧನದಿಂದ ಅನುಯಾಯಿಗಳಲ್ಲಿ ಅನಿಶ್ಚಿತತೆ ಮತ್ತು ಗೊಂದಲ ಉಂಟಾದರೂ ಸಹ, ಅವರ ಮರಣದ ಕೆಲ ತಿಂಗಳುಗಳಲ್ಲಿ ಇನ್ನೂ ಅನೇಕ ಲಕ್ಷ ಜನ ಬೌದ್ಧಮತೀಯರಾದರು.
  • ಅಂಬೇಡ್ಕರರ ಮಹಾಕೃತಿ ಎಂದು ಪರಿಗಣಿಸಲಾದ “ಬುದ್ಧ ಅಂಡ್ ಹಿಸ್ ಧಮ್ಮ” ವನ್ನು, ಅವರು ತೀರಿ ಕೊಂಡ ಸುಮಾರು ಒಂದು ವರ್ಷದ ನಂತರ , ೧೯೫೭ ನವೆಂಬರ್ ನಲ್ಲಿ ಜನ ಶಿಕ್ಷಣ ಸಮಾಜದ ವತಿಯಿಂದ ಪ್ರಕಟಿಸಲಾಯಿತು.

ಬೌದ್ಧಧರ್ಮಕ್ಕೆ ಸೇರುವಾಗ ಮಾಡಿದ ಪ್ರತಿಜ್ಞೆ

  • ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಕೈಗೊಂಡ ಪ್ರಮಾಣ ಹೀಗಿತ್ತು:
  • ‘ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ ಮತ್ತು ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುತ್ತೇನೆ’.
  • ‘ಕೊಲ್ಲುವುದಿಲ್ಲ, ಕದಿಯುವುದಿಲ್ಲ, ತಪ್ಪಾದ ಲೈಂಗಿಕ ವರ್ತನೆ ತೋರುವುದಿಲ್ಲ, ಮದ್ಯ ಕುಡಿಯುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬ ಪಂಚಶೀಲ ತತ್ವಗಳನ್ನು ಅನುಸರಿಸುತ್ತೇನೆ’.
  • ‘ಜ್ಞಾನ, ಸಹಾನುಭೂತಿ ಮತ್ತು ಕರ್ತವ್ಯದ ಮೂರು ಪ್ರಮುಖ ತತ್ವಗಳ ಆಧಾರದಲ್ಲಿ ನೆಲೆಯಾಗಿರುವ ಬೌದ್ಧ ಧರ್ಮ ಮಾತ್ರ ನಿಜವಾದ ಧರ್ಮ ಎಂದು ನಾನು ನಂಬಿದ್ದೇನೆ. ಹಾಗಾಗಿಯೇ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಹೊಸ ಹುಟ್ಟು ಪಡೆದುಕೊಂಡಿದ್ದೇನೆ’.

ಸ್ಮಾರಕ

  • ಅಂಬೇಡ್ಕರ್ ದಿಲ್ಲಿಗೆ ವಸತಿ ಬದಲಾಯಿಸಿದ ಮೇಲೆ , ಬಹಳಷ್ಟು ಕಾಲ ಜೀವಿಸಿದ ಹಾಗೂ ಕೊನೆಯುಸಿರೆಳೆದ 26, ಆಲಿಪುರ ರಸ್ತೆಯ ಮನೆಯನ್ನು ಅಂಬೇಡ್ಕರ್ ಸ್ಮಾರಕವಾಗಿ ಕಾದಿಡಲಾಗಿದೆ ( ಪೂರ್ಣ ವಿಳಾಸ: 26,ಆಲಿಪುರ ರಸ್ತೆ, ಐಪಿ ಕಾಲೇಜಿನ ಹತ್ತಿರ, ಸಿವಿಲ್ ಲೈನ್ಸ್, ನವದೆಹಲಿ- 110 054).
  • ದಲಿತ ಸಂಘಟನೆಗಳು ಈ ಸ್ಮಾರಕಕ್ಕಾಗಿ ಸಾಕಷ್ಟು ಹೋರಾಟ ಮಾಡಿದ ಮೇಲೆ, ಸರಕಾರ ಈ ಮನೆಯನ್ನು ಅದರ ಮಾಲೀಕರಾದ ಜಿಂದಾಲ್ ಮನೆತನದವರಿಂದ ಪಡೆದುಕೊಂಡು ಸ್ಮಾರಕವನ್ನಾಗಿ ಪರಿವರ್ತಿಸಿತು.ಅವರ ಜನ್ಮದಿನವನ್ನು ಅಂಬೇಡ್ಕರ್ ಜಯಂತಿ ಎಂದು ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತಿದೆ.
  • ಅವರ ಅನೇಕ ಅಭಿಮಾನಿಗಳು ಆದರದಿಂದ ಅವರನ್ನು “ಬಾಬಾಸಾಹೇಬ್” ಎಂದು ಸಂಬೋಧಿಸುತ್ತಾರೆ. ಅಂಬೇಡ್ಕರರ ಅನುಯಾಯಿಗಳು ಅವರ ಹೆಸರಿಂದ “ಜಯಭೀಮ” ಎಂದು ಪರಸ್ಪರ ಅಭಿವಾದಿಸುವುದುಂಟು. ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರ “ಭಾರತ ರತ್ನ” ವನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು.

ಅಂಬೇಡ್ಕರ್ ಅವರ ಕೊನೆಯ ಸಂದೇಶ

  • ಬಾಬಾಸಾಹೇಬರ ಕೊನೆಯ ಈ ಸಂದೇಶವನ್ನು ಓದುತ್ತಿದ್ದರೆ, ಮಗನೋರ್ವನಿಗೆ ತಂದೆಯು ತನ್ನ ಅಂತಿಮ ದಿನಗಳಲ್ಲಿ "ಮಗ ನೋಡಪ್ಪ ನಾನು ಕಷ್ಟಪಟ್ಟು ಇಷ್ಟೆಲ್ಲಾ ಮಾಡಿದ್ದೇನೆ. ಇನ್ನು ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಿನ್ನ ಜವಾಬ್ದಾರಿ" ಎಂದು ಹೇಳುವಾಗ ಯಾವ ಪರಿಯ ದುಖಃ ಒತ್ತರಿಸಿಬರುತ್ತದೆಯೋ, ಆದ್ರ್ರ ಭಾವನೆ ಉಕ್ಕಿ ಹರಿಯುತ್ತದೆಯೋ ಅಂತಹ ಭಾವ ಉಂಟಾಗುತ್ತದೆ.
  • ನಿಜ, ಕೋಟ್ಯಂತರ ದಲಿತರ ಆಯುಷ್ಯದ ಒಂದೊಂದು ಕ್ಷಣವನ್ನು ನೀಡಿ ಅಂಬೇಡ್ಕರರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಅದು ಸಾದ್ಯವಿಲ್ಲವಲ್ಲ! ಈ ನಿಟ್ಟಿನಲ್ಲಿ ಉಳಿದಿರುವುದು ಅವರ ಆ ಅಮರ ಸಂದೇಶ ಮಾತ್ರ. ಅಂದಹಾಗೆ ಬಾಬಾಸಾಹೇಬರ ಆ ಸಂದೇಶ ವನ್ನು ಅವರ ಆಪ್ತ ಕಾರ್ಯದರ್ಶಿ ಸರ್ ನಾನಕ್ ಚಂದ್ ರತ್ತು ತಮ್ಮ"Last few years of Dr. Ambedkar" ಕೃತಿಯಲ್ಲಿ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ.
  • ಬಹುಶಃ ಅಂತಹ ದಾಖಲೆ ಬರೀ ದಲಿತ ಸಮುದಾಯವೊಂದಕ್ಕೆ ಅಲ್ಲ ಈ ಪ್ರಪಂಚದ ಪ್ರತಿಯೊಂದು ಶೋಷಿತ ವರ್ಗಕ್ಕೆ ವಿಮೋಚಕನೊಬ್ಬನು ತೋರುವ ದಿವ್ಯ ಮಾರ್ಗದಂತೆ ಕಾಣುತ್ತದೆ. ಅದು 1956 ಜುಲೈ 31ರ ಮಂಗಳವಾರದ ಒಂದು ದಿನ. ಸಮಯ ಸಂಜೆ 5-30. ತಮ್ಮ ಆಪ್ತ ಕಾರ್ಯದರ್ಶಿ ರತ್ತುರವರಿಗೆ ಕೆಲವು ಪತ್ರಗಳನ್ನು dictate ಮಾಡಿದ ಬಾಬಾಸಾಹೇಬರು ಇದ್ದಕಿದ್ದಂತೆ upset ಆದರು!
  • ಕೆಲಹೊತ್ತು ಏನನ್ನು ಮಾತನಾಡದ ಅಂಬೇಡ್ಕರರ ಈ ವರ್ತನೆ ಕಾರ್ಯದರ್ಶಿ ರತ್ತುವರಿಗೆ ಗಾಭರಿಯುಂಟುಮಾಡಿತು. ತಕ್ಷಣ ಎಚ್ಚೆತ್ತುಕೊಂಡ ರತ್ತುರವರು ಅಂಬೇಡ್ಕರರ ತಲೆಯನ್ನು ನೇವರಿಸುತ್ತಾ ಕಾಲನ್ನು ಒತ್ತುತ್ತಾ ಅವರ ಹಾಸಿಗೆಯ ಒಂದು ಕಡೆ ಬಂದು ಸ್ಟೂಲ್‍ನ ಮೇಲೆ ಕುಳಿತುಕೊಂಡರು. ಹಾಗೆಯೇ ಭಯದಿಂದ ನಡುಗುತ್ತಾ ಅಂಬೇಡ್ಕರರನ್ನು "ಸರ್, ಕ್ಷಮಿಸಿ ನನಗೆ ಸತ್ಯ ತಿಳಿಯಬೇಕು. ಈಚಿನ ದಿನಗಳಲ್ಲಿ ನೀವು ತುಂಬಾ ದುಖಿಃತರಾಗಿರುತ್ತೀರಿ, ಖಿನ್ನರಾಗಿರುತ್ತೀರಿ, ಅಳುತ್ತಿರುತ್ತೀರಿ. ಯಾಕೆ ಹೀಗೆ?" ಎಂದು ಕೇಳಿಯೇ ಬಿಟ್ಟರು!
  • ರತ್ತುರವರ ಈ ಗಾಭರಿ ಅಂಬೇಡ್ಕರರಿಗೆ ಅರ್ಥವಾಗಿತ್ತು. ಸಾವರಿಸಿಕೊಂಡ ಅವರು ಆ ದಿನ ತಮ್ಮ ಆ ದುಖಃಕ್ಕೆ ಕಾರಣ ಮತ್ತು ಆ ಕಣ್ಣಿರಿನ ಹಿಂದಿನ ಸತ್ಯವನ್ನು ಬಿಚ್ಚಿಟ್ಟರು. ಅಂಬೇಡ್ಕರರ ಆ ನೋವಿನ ನುಡಿಗಳನ್ನು ಗೌರವದಿಂದ ದಾಖಲಿಸುವು ದಾದರೆ "ನನ್ನ ದುಖಃಕ್ಕೆ ಕಾರಣ, ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ. ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವಿತದಲ್ಲಿ ನನ್ನ ಜೀವನದ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು.
  • ಏಕೆಂದರೆ ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಅಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ. ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ.
  • ಅದೂ ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತ ಮತ್ತು ನಿರಾಶನಾಗಿದ್ದೇನೆ" ಎನ್ನುತ್ತಾ ಅಂಬೇಡ್ಕರರು ತಮ್ಮ ದುಖಃದ ಮೊದಲ ಪುಟವನ್ನು ಬಿಚ್ಚಿಟ್ಟರು. ಮುಂದುವರಿದು ಅವರು "ಹಾಗೆ ಹೇಳುವುದಾರೆ ನಾನು ಇದುವರೆವಿಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತಿದ್ದಾರೆ.
  • ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ. ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲ್ಲಿ ಅವರು ಅಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲ್ಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಅವರಲ್ಲಿ ಯಾರೂ ಕೂಡ ಸಮುದಾಯದ ಸೇವೆಯನ್ನು ಮಾಡಲು ಮುಂದೆ ಬರುತ್ತಿಲ್ಲ.
  • ಒಟ್ಟಾರೆ ಅವರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ" ಎಂದು ಮೀಸಲಾತಿಯ ಲಾಭ ಪಡೆದು ನೌಕರಿಗಿಟ್ಟಿಸಿ ಸ್ವಾರ್ಥಿಗಳಾಗಿರುವ ತನ್ನ ಸಮುದಾಯಾದ ಸರ್ಕಾರಿ ನೌಕರರ ಬಗ್ಗೆ ಅಂಬೇಡ್ಕರರು ಅಂದು ಹೇಳಿದರು. ಮುಂದುವರಿದು ಅವರು"ಆ ಕಾರಣಕ್ಕಾಗಿ ಇನ್ನು ಮುಂದೆ ನಾನು ಹಳ್ಳಿಗಳಲ್ಲಿನ ಶೋಷಣೆಯನ್ನು ಇನ್ನೂ ಅನುಭವಿಸುತ್ತಿರುವ, ಆರ್ಥಿಕ ದುಸ್ಥಿತಿಯಲ್ಲಿ ಇನ್ನು ಹಾಗೆಯೇ ಇರುವ ನನ್ನ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನ ಹರಿಸಬೇಕೆಂದಿದ್ದೇನೆ.
  • ಆದರೆ? ನನಗಿರುವುದು? ಇನ್ನು ಕೆಲವೇ ದಿನಗಳು!" ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಮುಂದುವರಿದು ಅವರು "ನನ್ನ ಎಲ್ಲಾ ಕೃತಿಗಳನ್ನು ನನ್ನ ಜೀವಿತದ ಅವಧಿಯಲ್ಲೇ ಪ್ರಕಟಿಸಬೇಕೆಂದು ಬಯಸಿದ್ದೆ. "ಬುದ್ಧ ಮತ್ತು ಕಾರ್ಲ್‍ಮಾಕ್ರ್ಸ", "ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ" ಮತ್ತು "ಹಿಂದೂ ಧರ್ಮದ ಒಗಟುಗಳು" ಎಂಬ ಆ ನನ್ನ ಮಹೋನ್ನತ ಕೃತಿಗಳನ್ನು ಇನ್ನೂ ಪ್ರಕಟಗೊಂಡಿಲ್ಲ.
  • ಅಲ್ಲದೆ ಸದ್ಯಕ್ಕೆ ಅವುಗಳನ್ನು ಹೊರತರುವುದು ನನ್ನ ಕೈಯಲ್ಲಿ ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆ ಕೂಡ ನನ್ನನ್ನು ಕಾಡುತ್ತಿದೆ. ನನ್ನ ನಂತರವಾದರೂ ಅವುಗಳು ಪ್ರಕಟಗೊಳ್ಳಬಹುದೆಂದು ಕೊಂಡರೆ ಅಂತಹ ಸಾಧ್ಯತೆ ಕೂಡ ನನಗೆ ಕಾಣುತ್ತಿಲ್ಲ. ನನ್ನ ಚಿಂತೆಗೆ ಇದೂ ಕೂಡ ಪ್ರಮುಖ ಕಾರಣ" ಎಂದು ತಮ್ಮ ಕೃತಿಗಳು ಪ್ರಕಟವಾಗದ್ದರ ಬಗ್ಗೆ ಬಾಬಾಸಾಹೇಬರು ನೋವು ತೋಡಿಕೊಳ್ಳುತ್ತಾರೆ.
  • ನಿಜ, ನಂತರದ ಒಂದೆರಡು ದಶಕದ ನಂತರ ಅವರ ಕೃತಿಗಳು ಸರ್ಕಾರದ ವತಿಯಿಂದ ಪ್ರಕಟಗೊಂಡಿರಬಹುದು. ಆದರೆ ಅಂಬೇಡ್ಕರರು ಬದುಕಿದ್ದಾಗಲೇ ಅವು ಪ್ರಕಟಗೊಂಡಿದ್ದರೆ? ಅಂಬೇಡ್ಕರ್ ಎಂಬ "ಅಪ್ರತಿಮ ಲೇಖಕನಿಗೆ" ಅದರಿಂದ ಸಂಪೂರ್ಣ ಆನಂದ ಸಿಗುತ್ತಿತ್ತು.
  • ಆದರೆ? ಮುಂದುವರಿದು ತಮ್ಮ ಚಳುವಳಿಯ ಭವಿಷ್ಯದ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸುವ ಅವರು "ನನ್ನ ನಂತರ, ನನ್ನ ಜೀವತದ ಅವಧಿಯಲ್ಲೇ ಶೋಷಿತ ಸಮುದಾಯದ ಮಧ್ಯೆದಿಂದ ಬರುವವರೊಬ್ಬರು ನನ್ನ ಈ ಚಳುವಳಿಯನ್ನು ಮುನ್ನಡೆಸುವರೆಂದು ನಾನು ಬಯಸಿದ್ದೆ. ಆದರೆ ಈ ಸಂಧರ್ಭದಲ್ಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ!
  • ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಿಗೆ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಅಧಮ್ಯ ಆಸೆ ನನಗೆ ಇನ್ನೂ ಇದೆ.
  • ಆದರೆ? ಪೂರ್ವಾಗ್ರಹಪೀಡಿತ, ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ? ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಧಪಟ್ಟಂತೆ ಯಾರಾದರೊಬ್ಬರು ತಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ.
  • ಹೀಗೇ ಆದರೆ ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ!" ಎಂದು ಅಂಬೇಡ್ಕರರು ನಿಟ್ಟುಸಿರು ಬಿಡುತ್ತಾರೆ. ಹೌದು, ಕಾಶ್ಮೀರಕ್ಕೆ ಸಂಬಂಧಿಸಿದಂತೆ, ಹಿಂದೂ ಕಾನೂನು ಸಂಹಿತೆಗೆ ಸಂಬಂದಿಸಿದಂತೆ ಅಂದಿನ ಪ್ರದಾನಿ ನೆಹರುರವರ ನಿಲುವಿನ ಬಗ್ಗೆ ಅಂಬೇಡ್ಕರರಿಗೆ ಅಸಮಾಧಾನವಿತ್ತು. ಹಾಗೆಯೇ ತಮ್ಮ ದೂರದೃಷ್ಟಿಯ ನಿಲುವನ್ನು ಒಪ್ಪದ ಈ ದೇಶದ ಜಾತೀಯ ಮನಸ್ಸುಗಳ ಬಗ್ಗೆಯೂ ಅಂಬೇಡ್ಕರರಿಗೆ ಅಷ್ಟೇ ಅಕ್ರೋಶವಿತ್ತು.
  • ಮುಂದುವರಿದು ಅವರು "ಅದೇನೇ ಇರಲಿ ನನ್ನ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದರೂ ನಾನು ಅನೇಕ ಉತ್ತಮ, ಮೆಚ್ಚುವಂತಹ ಕಾರ್ಯಗಳನ್ನು ಮಾಡಿದ್ದೇನೆ. ಹಾಗೆಯೇ ನಾನು ಸಾಯುವವರೆಗೂ ಅಂತಹ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ" ಎನ್ನುತ್ತಾ ಇದ್ದಕ್ಕಿದ್ದಂತೆ ಗದ್ಗದಿತರಾಗುತ್ತಾರೆ. ಕಣ್ಣಾಲಿಗಳು ನೀರು ತುಂಬಿಕೊಳ್ಳುತ್ತವೆ. ಆ ಕ್ಷಣ ಬಾಬಾಸಾಹೇಬರು ಅಕ್ಷರಶಃ ಗಳಗಳನೆ ಅಳುತ್ತಾರೆ. ಹಾಗೆ ಅಳುತ್ತಾ ಸಹಾಯಕ ನಾನಕ್ ಚಂದ್ ರತ್ತುರತ್ತ ಒಮ್ಮೆ ನೊಡುತ್ತಾರೆ.
  • ಸಹಜವಾಗಿ ರತ್ತುರವರು ಕೂಡ ಆ ಕ್ಷಣದಲ್ಲಿ ಬಾಬಾಸಾಹೇಬರ ದುಖಃದಲ್ಲಿ ಸಹಪಾಠಿಯಾಗಿರುತ್ತಾರೆ! ಬಾಬಾಸಾಹೇಬರಿಗೆ ಏನನ್ನಿಸಿತೋ? ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ನೋಡುತ್ತಾ ಸ್ವಲ್ಪ ಸಾವರಿಸಕೊಂಡು ರತ್ತುರವನ್ನು ಸಮಾಧಾನಿಸುತ್ತಾ ಮೆಲ್ಲಗೆ ಹೇಳುತ್ತಾರೆ "ಧೈರ್ಯ ತಂದುಕೋ ರತ್ತು. ಎದೆಗುಂದಬೇಡ. ಎಂದಾದರೊಂದುದಿನ ಈ ಜೀವನ ಕೊನೆಗೊಳ್ಳಲೇಬೇಕು!"
  • "ಜೀವನ.... ಕೊನೆ...." ಬಾಬಾಸಾಹೇಬರ ಈ ಮಾತುಕೇಳುತ್ತಲೆ ರತ್ತು ಅಘಾತಕ್ಕೊಳಗಾದರು. ಅವರ ಈ ಮಾತಿನ ಅರ್ಥವಾದರೂ ಏನು ಎಂದು ಗಾಭರಿಗೊಂಡರು. ಆ ಕ್ಷಣ ಏನು ಮಾಡಬೇಕೆಂದು ರತ್ತುರವರಿಗೆ ತೋಚದೆ ಇರುವಾಗ ಬಾಬಾಸಾಹೇಬರೇ ತಮ್ಮ ಕಣ್ಣ ನೀರು ವರೆಸಿಕೊಂಡು ಕೈಯನ್ನು ಸ್ವಲ್ಪ ಮೇಲೆ ಎತ್ತಿ ಹೀಗೆ ಹೇಳುತ್ತಾರೆ.
  • "ನಾನಕ್ ಚಂದ್, ನನ್ನ ಜನರಿಗೆ ಹೇಳು, ನಾನು ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ.
  • ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು. ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು.
  • ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ‘ಇದನ್ನು ನೀನು ಅವರಿಗೆ ಹೇಳು...', ‘ಹೋಗು... ಅವರಿಗೆ ಹೇಳು...', ‘ಹೋಗು... ಅವರಿಗೆ ಹೇಳು..." ಎನ್ನುತ್ತಾ ಅಂಬೇಡ್ಕರರು ‘ನಿದ್ರೆಗೆ ಹೊರಳುತ್ತಾರೆ.

ಪ್ರಶಸ್ತಿ, ಗೌರವ

  1. ಕರಡು ಸಮಿತಿಯ ಅದ್ಯಕ್ಷರಾಗಿದ್ದ ಅಂಬೇಡ್ಕರ ಅವರು ಸಹಜವಾಗಿ 'ಸಂವಿಧಾನ ಶಿಲ್ಪಿ' ಎನಿಸಿದರು.
  2. ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರ “ಭಾರತ ರತ್ನ” ವನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು.
  3. ಸಂಸತ್ತು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ) ಸದಸ್ಯರಾಗಿ
  4. ಅಂಬೇಡ್ಕರರನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನಿಸಿದರು.
  5. ೧೯೫೨ ಜೂನ್ ೧೫ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು.
  6. ೧೯೫೩, ಜನವರಿ ೧೨ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.
  7. ೨೦೧೫- ವಿಶ್ವರತ್ನ ಪ್ರಶಸ್ತಿ-ಕೊಲಂಬಿಯ ವಿಶ್ವವಿದ್ಯಾನಿಲಯದಿಂದ (ಮರಣೋತ್ತರ)

ಅಂಬೇಡ್ಕರ್ ಅವರ ಪತ್ನಿಯ ವಿಚಾರ

  • ‘ಹೃದಯ ಸೌಜನ್ಯ, ಪರಿಶುದ್ಧ ಶೀಲ ಮತ್ತು ನಮಗೆ ಯಾವುದೇ ಹಿತಚಿಂತಕರು ಇಲ್ಲದಿದ್ದ ಆ ದಿನಗಳಲ್ಲಿ ನಮ್ಮ ಪಾಲಿಗೆ ಬಂದಿದ್ದ ಬಡತನ ಮತ್ತು ಸಂಕಷ್ಟಗಳಲ್ಲಿ ಶಾಂತಚಿತ್ತದಿಂದ ಮನಃಪೂರ್ವಕವಾಗಿ ನನ್ನನ್ನು ಸಂತೈಸುತ್ತ ಸಹಕರಿಸಿದ ರಮಾಗೆ ಈ ಕೃತಿ ಅರ್ಪಿತ’-ಡಾ. ಬಿ.ಆರ್.ಅಂಬೇಡ್ಕರ್ ತಮ್ಮ ‘Thoughts on Pakistan’ ಪುಸ್ತಕವನ್ನು ಮಡದಿ ರಮಾಬಾಯಿ ಅವರಿಗೆ ಅರ್ಪಿಸಿ ಬರೆದ ಮಾತುಗಳಿವು.

ಬಾಹ್ಯ ಸಂಪರ್ಕಗಳು

References

Tags:

ಬಿ. ಆರ್. ಅಂಬೇಡ್ಕರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಬಿ. ಆರ್. ಅಂಬೇಡ್ಕರ್ ವಿದ್ಯಾಭ್ಯಾಸಬಿ. ಆರ್. ಅಂಬೇಡ್ಕರ್ ವೃತ್ತಿ ಜೀವನಬಿ. ಆರ್. ಅಂಬೇಡ್ಕರ್ ಅಸ್ಪೃಶ್ಯತೆಯ ವಿರುದ್ದ ಹೋರಾಟಬಿ. ಆರ್. ಅಂಬೇಡ್ಕರ್ ಕೃತಿಗಳುಬಿ. ಆರ್. ಅಂಬೇಡ್ಕರ್ ರಾಜಕೀಯ ಜೀವನಬಿ. ಆರ್. ಅಂಬೇಡ್ಕರ್ ಭಾರತದ ಸಂವಿಧಾನ ಶಿಲ್ಪಿಬಿ. ಆರ್. ಅಂಬೇಡ್ಕರ್ ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆಬಿ. ಆರ್. ಅಂಬೇಡ್ಕರ್ ಸಾಮಾಜಿಕ ಪ್ರಜಾಪ್ರಭುತ್ವಬಿ. ಆರ್. ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರಾಗಿಬಿ. ಆರ್. ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಬಿ. ಆರ್. ಅಂಬೇಡ್ಕರ್ ಬೌದ್ಧಧರ್ಮಕ್ಕೆ ಸೇರುವಾಗ ಮಾಡಿದ ಪ್ರತಿಜ್ಞೆಬಿ. ಆರ್. ಅಂಬೇಡ್ಕರ್ ಸ್ಮಾರಕಬಿ. ಆರ್. ಅಂಬೇಡ್ಕರ್ ಅಂಬೇಡ್ಕರ್ ಅವರ ಕೊನೆಯ ಸಂದೇಶಬಿ. ಆರ್. ಅಂಬೇಡ್ಕರ್ ಪ್ರಶಸ್ತಿ, ಗೌರವಬಿ. ಆರ್. ಅಂಬೇಡ್ಕರ್ ಬಾಹ್ಯ ಸಂಪರ್ಕಗಳುಬಿ. ಆರ್. ಅಂಬೇಡ್ಕರ್ Further readingಬಿ. ಆರ್. ಅಂಬೇಡ್ಕರ್ಏಪ್ರಿಲ್ ೧೪ಡಿಸೆಂಬರ್ ೬ಭಾರತದ ಸಂವಿಧಾನ೧೮೯೧೧೯೫೬

🔥 Trending searches on Wiki ಕನ್ನಡ:

ಕನ್ನಡ ರಾಜ್ಯೋತ್ಸವರಾಘವಾಂಕದ್ವಿರುಕ್ತಿಭಾರತದ ಸಂಯುಕ್ತ ಪದ್ಧತಿಮೊಲಪ್ರಬಂಧ ರಚನೆಕನ್ನಡಿಗಮೈಸೂರು ದಸರಾಒಡ್ಡರು / ಭೋವಿ ಜನಾಂಗಕಂದಬಳ್ಳಾರಿಪತ್ರಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಗೌತಮಿಪುತ್ರ ಶಾತಕರ್ಣಿಭಾರತದಲ್ಲಿ ಕೃಷಿವಿನೋಬಾ ಭಾವೆಆಲದ ಮರಬಿಲ್ವಪತ್ರೆ ಮರಕರ್ನಾಟಕ ರತ್ನದೇಶಗಳ ವಿಸ್ತೀರ್ಣ ಪಟ್ಟಿರಾವಣಭಾರತದ ಭೌಗೋಳಿಕತೆಜೆಕ್ ಗಣರಾಜ್ಯಕನ್ನಡ ಗುಣಿತಾಕ್ಷರಗಳುಮಹಾತ್ಮ ಗಾಂಧಿಸಂಧಿವಿರೂಪಾಕ್ಷ ದೇವಾಲಯಆಗಮ ಸಂಧಿಹಂಪೆಮಾವುಸಪೋಟಲೋಪಸಂಧಿಭಯೋತ್ಪಾದನೆಶಕ್ತಿವ್ಯಕ್ತಿತ್ವ ವಿಕಸನಬಡತನಭಾರತೀಯ ಸಂವಿಧಾನದ ತಿದ್ದುಪಡಿಹಳೇಬೀಡುರಾಜ್‌ಕುಮಾರ್ನೀತಿ ಆಯೋಗಗ್ರಾಹಕರ ಸಂರಕ್ಷಣೆರಾಸಾಯನಿಕ ಗೊಬ್ಬರತಿಂಥಿಣಿ ಮೌನೇಶ್ವರಗಾಂಧಿ ಜಯಂತಿಭಾರತದ ರಾಷ್ಟ್ರಗೀತೆಭೂತಾರಾಧನೆವಿಮರ್ಶೆಕನ್ನಡ ಅಭಿವೃದ್ಧಿ ಪ್ರಾಧಿಕಾರಶ್ರವಣಬೆಳಗೊಳಉಡವೇದಛತ್ರಪತಿ ಶಿವಾಜಿಕರ್ನಾಟಕದಲ್ಲಿ ಪಂಚಾಯತ್ ರಾಜ್ನ್ಯುಮೋನಿಯಸಾಮಾಜಿಕ ಸಮಸ್ಯೆಗಳುರಾಜಕೀಯ ವಿಜ್ಞಾನಕನ್ನಡ ಛಂದಸ್ಸುಮೆಕ್ಕೆ ಜೋಳಕರ್ನಾಟಕ ಹೈ ಕೋರ್ಟ್ಕರ್ಬೂಜದೇವರ ದಾಸಿಮಯ್ಯಏಕಲವ್ಯಕೃಷ್ಣದೇವರಾಯಆಮ್ಲಜನಕಅಮೃತಧಾರೆ (ಕನ್ನಡ ಧಾರಾವಾಹಿ)ಅಂತರ್ಜಲಗಂಗಾವತಿಹಟ್ಟಿ ಚಿನ್ನದ ಗಣಿಸ್ವಚ್ಛ ಭಾರತ ಅಭಿಯಾನಶೈಕ್ಷಣಿಕ ಮನೋವಿಜ್ಞಾನಪವರ್ (ಚಲನಚಿತ್ರ)ಭಾರತದ ಆರ್ಥಿಕ ವ್ಯವಸ್ಥೆಹಲಸುವಾಲಿಬಾಲ್ತಾಳಗುಂದ ಶಾಸನತಾಳೀಕೋಟೆಯ ಯುದ್ಧಡಾ ಬ್ರೋಮೂಲಭೂತ ಕರ್ತವ್ಯಗಳುಕಥೆ🡆 More