ಭೂಮಿಯನ್ನು ಉಳುಮೆಮಾಡಿ, ಸಸ್ಯಗಳನ್ನು ಪೋಷಿಸಿ ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗಗಳನ್ನು ಪಡೆಯುವುದೇ 'ವ್ಯವಸಾಯ'ವಾಗಿದೆ. ವ್ಯಾವಸಾಯವು ಪಶುಪಾಲನೆ, ಕೋಳಿಸಾಕಣೆ, ರೇಷ್ಮೆ ಕೃಷಿ ಮತ್ತು ಜೀನುಸಾಕಣೆಗಳನ್ನು ಒಳಗೊಂಡಿದೆ. ಇದು ಮಾನವನಿಗೆ ಅಗತ್ಯವಾದ ಆಹಾರ ಧಾನ್ಯಗಳನ್ನು ಪೂರೈಸುವುದಲ್ಲದೆ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುವುದು. "ಭಾರತದ ಆಹಾರದ ವ್ಯವಸ್ಥೆಯಲ್ಲಿ ವ್ಯಾವಸಾಯವು ಪ್ರಮುಖ ಪಾತ್ರ ವಹಿಸಿದೆ."
ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಬೇಸಾಯ ಪದ್ಧತಿಗಳು ರೂಢಿಯಲ್ಲಿವೆ. ವ್ಯವಸಾಯದ ಮುಖ್ಯ ಲಕ್ಷಣಗಳಾದ ಭೂಬಳಕೆ, ಬೆಳೆಸುವ ಬೆಳೆಗಳು, ತಳಿ, ಇಳುವರಿ, ಬಳಸುವ ಕೃಷಿ ಉಪಕರಣಗಳು ಮತ್ತು ಗೊಬ್ಬರಗಳ ಬಳಕೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಭೂಸ್ವರೂಪ, ವಾಯುಗುಣ, ಮಳೆ ಹಂಚಿಕೆ, ಮಣ್ಣಿನ ವಿಧಗಳು ಮಾರುಕಟ್ಟೆ ತಾಂತ್ರಿಕತೆ, ಬಂಡವಾಳ ಹೂಡಿಕೆ, ಕಾರ್ಮಿಕರ ಲಭ್ಯತೆ ಮುಂತಾದವು.
ಭಾರತದಲ್ಲಿ ರೂಢಿಯಲ್ಲಿರುವ ಪ್ರಮುಖ ವ್ಯವಸಾಯದ ವಿಧಾನಗಳು
೧. ಪ್ರಾಚೀನಕಾಲದ ಜೀವನಾಧಾರ ಬೇಸಾಯ
೨. ವಾಣಿಜ್ಯ ಬೇಸಾಯ
೩. ಮಿಶ್ರ ಬೇಸಾಯ
೪. ತೋಟಗಾರಿಕೆ
ಜೀವನಾಧಾರ ಬೇಸಾಯ:
ಜನರು ತಮ್ಮ ಗೃಹ ಬಳಕೆಗಾಗಿ ಮಾತ್ರ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವುದಕ್ಕೆ 'ಜೀವನಾಧಾರ ಬೇಸಾಯ' ಎನ್ನುತ್ತಾರೆ. ಈ ಬೇಸಾಯ ಪದ್ಧತಿಯು ಈಶಾನ್ಯ ಭಾರತ, ಒರ್ರಿಸ್ಸಾ ಮತ್ತು ಮಧ್ಯಪ್ರದೇಶದ ಬೆಟ್ಟಗಳಲ್ಲಿ ರೂಢಿಯಲ್ಲಿದೆ. ಈ ಪದ್ಧತಿಯ ಲಕ್ಷಣಗಳೆಂದರೆ ಚಿಕ್ಕ ಪ್ರಮಾಣದ ಭೂ ಹಿಡುವಳಿ, ಪುರಾತನ ಹಾಗೂ ಸರಳ ಕೃಷಿ ಉಪಕರಣಗಳ ಬಳಕೆ, ಅವೈಜ್ಞಾನಿಕ ಕೃಷಿ ವಿಧಾನ ಮುಂತಾದವು. ಇದರಲ್ಲಿ ಎರಡು ವಿಧಗಳಿವೆ
ವರ್ಗಾವಣೆ ಬೇಸಾಯ:
ವರ್ಗಾವಣೆ ಬೇಸಾಯ ಪದ್ಧತಿ ಎಂದರೆ ಅರಣ್ಯದ ಕೆಲವು ಭಾಗಗಳಲ್ಲಿ ಮರಗಳನ್ನು ಕಡಿದು, ಅಲ್ಲಿ ವಿಸ್ತರಿಸಿ ಬೇಸಾಯ ಮಾಡುವುದು. ಹಲವು ವರ್ಷಗಳ ಬೇಸಾಯದ ನಂತರ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಬೇಸಾಯಗಾರರು ಇತರ ಪ್ರದೇಶಗಳಿಗೆ ವಲಸೆ ಹೋಗುವರು. ಈ ಬೇಸಾಯದಿಂದ ಮಣ್ಣಿನ ಸವಕಳಿ ಉಂಟಾಗಿ ಕಡಿಮೆ ಇಳುವರಿ ಕೊಡುತ್ತದೆ. ಈ ಬಗೆಯ ಬೇಸಾಯವನ್ನು ಕರ್ನಾಟಕದಲ್ಲಿ 'ಕುಮರಿ', ಅಸ್ಸಾಂನಲ್ಲಿ 'ಜೂಮ್', ಕೇರಳದಲ್ಲಿ 'ಪೊನಂ' ಮತ್ತು ಆಂಧ್ರಪ್ರದೇಶದಲ್ಲಿ 'ಪೋಡು' ಎಂದು ಕರೆಯುತ್ತಾರೆ.
ಸ್ಥಿರ ಬೇಸಾಯ
ಸ್ಥಿರ ಬೇಸಾಯ ಪದ್ಧತಿಯಲ್ಲಿ ಜನರು ಅನುಕೂಲಕರವಾದ ಪ್ರದೇಶಗಳಲ್ಲಿ ಸ್ಥಿರವಾಗಿ ನೆಲೆಸಿ ವ್ಯವಸಾಯವನ್ನು ಮಾಡುತ್ತಾರೆ. ಆದರೆ ವ್ಯವಸಾಯದ ವಿಧಾನ, ಬಳಸುವ ಬೀಜ ಇವು ಸಾಂಪ್ರದಾಯಿಕವಾಗಿರುತ್ತವೆ. ಕೃಷಿ ಉತ್ಪಾದನೆಯನ್ನು ರೈತರು ತಮ್ಮ ಮನೆಯ ಉಪಯೋಗಕ್ಕಾಗಿ ಬಳಸಿಕೊಂಡು ಉಳಿದ ಹೆಚ್ಚಿನ ಉತ್ಪಾದನೆಯನ್ನು ತಮಗೆ ಬೇಕಾದ ಇತರ ವಸ್ತುಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದರು. ಈಗ ಮಾರಾಟ ಮಾಡುತ್ತಾರೆ.
ವಾಣಿಜ್ಯ ಬೇಸಾಯ
ವ್ಯಾಪಾರದ ಉದ್ದೇಶದಿಂದ ಬೆಳೆಗಳ ಉತ್ಪಾದನೆ ಹಾಗು ಪ್ರಾಣಿಗಳ ಸಾಕಣೆಯನ್ನು ವಾಣಿಜ್ಯ ಬೇಸಾಯವೆಂದು ಕರೆಯುವರು.ಈ ಪದ್ಧತಿಯಲ್ಲಿ ವಿಸ್ತಾರವಾಗಿರುವ ಕೃಷಿ ಭೂಮಿಯು ಒಂದೇ ಬೆಳೆಯ ಉತ್ಪಾದನೆಗೆ ಬಳಕೆಯಾಗುವುದು.ಈ ಬೆಲೆಯ ಉತ್ಪಾದನೆಗೆ ಭೂಸ್ವರೂಪ, ಮಣ್ಣು, ನೀರು, ವಾಯುಗುಣಗಳು ಹೆಚ್ಚು ಸೂಕ್ತವಾಗಿರುತ್ತವೆ. ಯಂತ್ರೋಪಕರಣ, ರಸಗೊಬ್ಬರ, ಸುಧಾರಿತ ಬೀಜ, ಕೀಟ ನಶಕಗಳನ್ನು ಯಥೇಚ್ಛವಾಗಿ ಬಳಸುವರು. ಹತ್ತಿ, ಎಣ್ಣೆ ಕಾಳುಗಳು, ತಂಬಾಕು, ಮೆಣಸಿನಕಾಯಿ ಮತ್ತು ಕಬ್ಬು ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ.
ಮಿಶ್ರ ಬೇಸಾಯ
ಕೃಷಿ ಬೆಳೆಗಳ ಬೇಸಾಯದ ಜೊತೆಗೆ ಪಶುಪಾಲನೆ, ಹೈನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ, ರೇಷ್ಮೆ ಕೃಷಿ ಮುಂತಾದವು ಮಿಶ್ರ ಬೇಸಾಯ ಪದ್ಧತಿಗಳಾಗಿವೆ. ಭಾರತದ ಅನೇಕ ಕಡೆಗಳಲ್ಲಿ ಈ ಬೇಸಾಯ ಪದ್ಧತಿ ರೂಢಿಯಲ್ಲಿದೆ.ಈ ಪದ್ಧತಿಯ ಪ್ರಮುಖ ಗುಣಲಕ್ಷಣಗಳೆಂದರೆ ೧. ಈ ವ್ಯವಸಾಯದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುವುದು ೨. ವೈಜ್ಞಾನಿಕ ಕೃಷಿ ವಿಧಾನಗಳನ್ನು ಅನುಸರಿಸಲಾಗುವುದು. ೩. ಇದಕ್ಕೆ ಸಾಕಷ್ಟು ಬಂಡವಾಳ ಅಗತ್ಯ.
ತೋಟಗಾರಿಕೆ ಬೇಸಾಯ:
ಭಾರತದ ಮುಖ್ಯ ಬೇಸಾಯ ಪದ್ಧತಿಗಳಲ್ಲಿ ತೋಟಗಾರಿಕೆ ಬೇಸಾಯವು ಒಂದಾಗಿದೆ. ಕಾಫಿ, ಚಹಾ, ರಬ್ಬರ್ ಹಾಗೂ ಸಾಂಬಾರ್ ಪದಾರ್ಥಗಳು, ತೆಂಗು, ಅಡಿಕೆ, ವೀಳ್ಯದೆಲೆ ಮುಂತಾದವು ತೋಟಗಾರಿಕೆ ಬೆಳೆಗಲ್ಲಿ ಮುಖ್ಯವಾದುವು. ಒಂದೇ ಬೆಳೆಯನ್ನು ವಿಸ್ತಾರವಾದ ತೋಟದಲ್ಲಿ ಬೆಳೆಯಲಾಗುವುದು. ಭಾರತದಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಈ ಬೇಸಾಯ ಪದ್ಧತಿಯು ರೂಢಿಯಲ್ಲಿದೆ. ಇದರಿಂದ ವಿದೇಶಿ ವಿನಿಮಯದ ಗಳಿಕೆಯೂ ಆಗುತ್ತದೆ.
ಭಾರತದಲ್ಲಿ ವ್ಯವಸಾಯದ ಅಭಿವೃದ್ಧಿ
ಕೃಷಿ ವಿಜ್ಞಾನದಲ್ಲಿ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕೃಷಿಗೆ ನೀಡಿದ ಅತ್ಯುತ್ತಮ ಕೊಡುಗೆ ಮತ್ತು ಭಾರತವನ್ನು ಆಹಾರ ಸಾರ್ವಭೌಮ ರಾಷ್ಟ್ರವನ್ನಾಗಿ ಮಾಡಿದ್ದಕ್ಕಾಗಿ 2013 ರಲ್ಲಿ ಎನ್ಡಿಟಿವಿ ಅವರಿಗೆ 'ಭಾರತದ 25 ಜೀವಂತ ದಂತಕಥೆ'( 25 living legend of India) ಎಂದು ಪ್ರಶಸ್ತಿ ನೀಡಿತು.
ಭಾರತೀಯ ನೀರಾವರಿ ಮೂಲಸೌಕರ್ಯವು ನದಿಗಳಿಂದ ಬರುವ ಪ್ರಮುಖ ಮತ್ತು ಸಣ್ಣ ಕಾಲುವೆಗಳ ಜಾಲ, ಅಂತರ್ಜಲ ಬಾವಿ ಆಧಾರಿತ ವ್ಯವಸ್ಥೆಗಳು, ಟ್ಯಾಂಕ್ಗಳು ಮತ್ತು ಕೃಷಿ ಚಟುವಟಿಕೆಗಳಿಗಾಗಿ ಇತರ ಮಳೆನೀರು ಕೊಯ್ಲು ಯೋಜನೆಗಳನ್ನು ಒಳಗೊಂಡಿದೆ. ಇವುಗಳಲ್ಲಿ, ಅಂತರ್ಜಲ ವ್ಯವಸ್ಥೆಯು ದೊಡ್ಡದಾಗಿದೆ. ಭಾರತದಲ್ಲಿ 160 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ, ಸುಮಾರು 39 ದಶಲಕ್ಷ ಹೆಕ್ಟೇರ್ ಅನ್ನು ಅಂತರ್ಜಲ ಬಾವಿಗಳಿಂದ ಮತ್ತು ಹೆಚ್ಚುವರಿಯಾಗಿ 22 ದಶಲಕ್ಷ ಹೆಕ್ಟೇರ್ಗಳನ್ನು ನೀರಾವರಿ ಕಾಲುವೆಗಳಿಂದ ನೀರಾವರಿ ಮಾಡಬಹುದು. 2010 ರಲ್ಲಿ, ಭಾರತದಲ್ಲಿ ಕೇವಲ 35% ಕೃಷಿ ಭೂಮಿಯನ್ನು ಮಾತ್ರ ವಿಶ್ವಾಸಾರ್ಹವಾಗಿ ನೀರಾವರಿ ಮಾಡಲಾಯಿತು. ಭಾರತದಲ್ಲಿ ಸುಮಾರು 2/3 ನೇ ಕೃಷಿ ಭೂಮಿಯು ಮಳೆಗಾಲವನ್ನು ಅವಲಂಬಿಸಿದೆ. ಕಳೆದ 50 ವರ್ಷಗಳಲ್ಲಿ ನೀರಾವರಿ ಮೂಲಸೌಕರ್ಯದಲ್ಲಿನ ಸುಧಾರಣೆಗಳು ಭಾರತಕ್ಕೆ ಆಹಾರ ಸುರಕ್ಷತೆಯನ್ನು ಸುಧಾರಿಸಲು, ಮಾನ್ಸೂನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಗ್ರಾಮೀಣ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡಿದೆ. ನೀರಾವರಿ ಯೋಜನೆಗಳಿಗೆ ಬಳಸುವ ಅಣೆಕಟ್ಟುಗಳು ಬೆಳೆಯುತ್ತಿರುವ ಗ್ರಾಮೀಣ ಜನಸಂಖ್ಯೆಗೆ ಕುಡಿಯುವ ನೀರನ್ನು ಒದಗಿಸಲು, ಪ್ರವಾಹವನ್ನು ನಿಯಂತ್ರಿಸಲು ಮತ್ತು ಕೃಷಿಗೆ ಬರ-ಸಂಬಂಧಿತ ಹಾನಿಯನ್ನು ತಡೆಯಲು ಸಹಾಯ ಮಾಡಿದೆ. ಆದಾಗ್ಯೂ, ಉಚಿತ ವಿದ್ಯುತ್ ಮತ್ತು ಕಬ್ಬು ಮತ್ತು ಭತ್ತದಂತಹ ನೀರಿನ ತೀವ್ರ ಬೆಳೆಗಳಿಗೆ ಆಕರ್ಷಕ ಕನಿಷ್ಠ ಬೆಂಬಲ ಬೆಲೆ ನೀಡಿಕೆ, ಅಂತರ್ಜಲ ಗಣಿಗಾರಿಕೆಯನ್ನು ಪ್ರೋತ್ಸಾಹಿಸಿದೆ, ಇದು ಅಂತರ್ಜಲ ಕ್ಷೀಣತೆ ಮತ್ತು ನೀರಿನ ಗುಣಮಟ್ಟಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ ಕೃಷಿಗೆ ಲಭ್ಯವಿರುವ 60% ಕ್ಕಿಂತ ಹೆಚ್ಚು ನೀರನ್ನು ಅಕ್ಕಿ ಮತ್ತು ಸಕ್ಕರೆಯ ಉತ್ಪಾದನೆ ಕೃಷಿಗಳು ಸೇವಿಸುವುದು, ಎಂದು 2019 ರಲ್ಲಿ ಸುದ್ದಿ ವರದಿಯೊಂದು ಹೇಳಿದೆ, ಎರಡು ಬೆಳೆಗಳು 24% ಕೃಷಿ ಪ್ರದೇಶವನ್ನು ಆಕ್ರಮಿಸಿಕೊಂಡಿವೆ.
ಉತ್ಪಾದನೆ
2011 ರ ಹೊತ್ತಿಗೆ, ಭಾರತವು ದೊಡ್ಡ ಮತ್ತು ವೈವಿಧ್ಯಮಯ ಕೃಷಿ ಕ್ಷೇತ್ರವನ್ನು ಹೊಂದಿದ್ದು, ಅದರ ಪಾಲು ಸರಾಸರಿ ಜಿಡಿಪಿಯಲ್ಲಿ ಸುಮಾರು 16% ಮತ್ತು ರಫ್ತು ಗಳಿಕೆಯ 10% ನಷ್ಟಿದೆ. ಭಾರತದ ಕೃಷಿಯೋಗ್ಯ ಭೂಪ್ರದೇಶ 159.7 ಮಿಲಿಯನ್ ಹೆಕ್ಟೇರ್ (394.6 ಮಿಲಿಯನ್ ಎಕರೆ) ಯುನೈಟೆಡ್ ಸ್ಟೇಟ್ಸ್ ನಂತರ ವಿಶ್ವದ ಎರಡನೇ ಅತಿದೊಡ್ಡ ಪ್ರದೇಶವಾಗಿದೆ.ಇದರ ಒಟ್ಟು ನೀರಾವರಿ ಬೆಳೆ ಪ್ರದೇಶ 82.6 ದಶಲಕ್ಷ ಹೆಕ್ಟೇರ್ (215.6 ದಶಲಕ್ಷ ಎಕರೆ) ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಗೋಧಿ, ಅಕ್ಕಿ, ಬೇಳೆಕಾಳುಗಳು, ಹತ್ತಿ, ಕಡಲೆಕಾಯಿ, ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಅನೇಕ ಬೆಳೆಗಳ ಜಾಗತಿಕ ಉತ್ಪಾದಕರಲ್ಲಿ ಭಾರತ ಅಗ್ರ ಮೂರು ಸ್ಥಾನದಲ್ಲಿದೆ. ವಿಶ್ವಾದ್ಯಂತ, 2011 ರ ಹೊತ್ತಿಗೆ, ಭಾರತವು ಎಮ್ಮೆ ಮತ್ತು ದನಗಳ ಅತಿದೊಡ್ಡ ಹಿಂಡುಗಳನ್ನು ಹೊಂದಿತ್ತು, ಅತಿದೊಡ್ಡ ಹಾಲು ಉತ್ಪಾದಕವಾಗಿದೆ ಮತ್ತು ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಕೋಳಿ ಉದ್ಯಮಗಳಲ್ಲಿ ಒಂದಾಗಿದೆ. "FAO-STAT: ಉತ್ಪಾದನೆ-ಬೆಳೆಗಳು, 2010 ಡೇಟಾ". ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ. 2011. 14 ಜನವರಿ 2013 ರಂದು ಮೂಲದಿಂದ ಸಂಗ್ರಹಿಸಲಾಗಿದೆ-
This article uses material from the Wikipedia ಕನ್ನಡ article ವ್ಯವಸಾಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.