ಬೆಳಗಾವಿಯು ಕರ್ನಾಟಕದ ವಾಯುವ್ಯ ಭಾಗದಲ್ಲಿ ಇರುವ ನಗರ ಮತ್ತು ಜಿಲ್ಲೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಹಾಗು ಪ್ರಮುಖ ನಗರಗಳಲ್ಲೊಂದು. ಇಂಡಾಲ್ (ಭಾರತೀಯ ಅಲ್ಯೂಮಿನಿಯಮ್ ಕಂಪನಿ) ಬೆಳಗಾವಿಯಲ್ಲಿದೆ. ಇದಲ್ಲದೆ ಭಾರತೀಯ ಸೇನಾ ಪಡೆಗಳಿಗೆ ಸಂಬಂಧಪಟ್ಟ ಕೆಲವು ತರಬೇತಿ ಶಿಬಿರಗಳು ಮತ್ತು ಭಾರತೀಯ ವಾಯುಸೇನೆಯ ಒಂದು ವಿಮಾನ ನಿಲ್ದಾಣ ಬೆಳಗಾವಿಯಲ್ಲಿವೆ.
ಬೆಳಗಾವಿ ಬೆಳಗಾವಿ | |
---|---|
Government | |
• ಮೇಯರ್ | ಬಸಪ್ಪ ಚಿಕ್ಕಲದಿನ್ನಿ |
Population (2008) | |
• Total | ೧೧ ಲಕ್ಷ |
ಬೆಳಗಾವಿಯ ಪುರಾತನ ಹೆಸರು ವೇಣುಗ್ರಾಮ. ಆದರೆ ಈಗಿರುವ ಹೆಸರು ಬಂದದ್ದು "ಬೆಳ್ಳಗೆ+ಆವಿ" ಎಂದರೆ ಇಲ್ಲಿನ ವಾತಾವರಣದಲ್ಲಿ ಬೆಳಗಿನ ಜಾವ ಮಂಜು ಬೀಳುತ್ತಿರುತ್ತದೆ. ಅದರಿಂದ "ಬೆಳ್ಳಗಾವಿ" ಹೆಸರು ಬಂದಿದೆ. ಈ ಜಿಲ್ಲೆಯ ಅತಿ ಪ್ರಾಚೀನ ಸ್ಥಳ ಎಂದರೆ ಹಲಸಿ - ಉಪಲಬ್ಧವಾಗಿರುವ ತಾಮ್ರಶಾಸನಗಳ ಆಧಾರದ ಮೇಲೆ ಹಲಸಿ ಕೆಲವು ಕದಂಬ ವಂಶದ ಅರಸರ ರಾಜಧಾನಿಯಾಗಿದ್ದಿತೆಂದು ಊಹಿಸಲಾಗಿದೆ. ೬ ನೇ ಶತಮಾನದಿಂದ ಸುಮಾರು ಕ್ರಿ.ಶ. ೭೬೦ ರ ವರೆಗೆ ಈ ಸ್ಥಳ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದು, ನಂತರ ರಾಷ್ಟ್ರಕೂಟರ ನಿಯಂತ್ರಣಕ್ಕೆ ಸಾಗಿತು. ರಾಷ್ಟ್ರಕೂಟರ ಶಕ್ತಿ ಕಡಿಮೆಯಾದ ನಂತರ ರತ್ತ ವಂಶದ (೮೭೫ - ೧೨೫೦)ಕೈಯಲ್ಲಿದ್ದ ವೇಣುಗ್ರಾಮ, ೧೨೧೦ ರ ನಂತರ ರಾಜಧಾನಿಯಾಯಿತು. ೧೨೫೦ ರ ನಂತರ ದೇವಗಿರಿಯ ಯಾದವರು ಈ ಪ್ರದೇಶವನ್ನು ಸ್ವಲ್ಪ ಕಾಲ ಆಳಿದರು. ೧೩೨೦ ರಲ್ಲಿ ದೆಹಲಿಯ ಸುಲ್ತಾನೇಟ್ ಗಳ ಕೈಯಲ್ಲಿ ಯಾದವರು ಸೋಲನುಭವಿಸಿದ ನಂತರ ಸ್ವಲ್ಪ ಕಾಲ ದೆಹಲಿಯ ಆಡಳಿತದಲ್ಲಿ ಬೆಳಗಾವಿ ಜಿಲ್ಲೆ ಇತ್ತು. ಆದರೆ ಕೆಲವೇ ವರ್ಷಗಳ ನಂತರ ವಿಜಯನಗರ ಸಾಮ್ರಾಜ್ಯ ಈ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಬೆಳಗಾವಿ ಜಿಲ್ಲೆಯ ಉತ್ತರದ ಭಾಗಗಳು ೧೩೪೭ ರಲ್ಲಿ ಬಹಮನಿ ಸುಲ್ತಾನರ ಕೈ ಸೇರಿದವು. ೧೪೭೩ ರಲ್ಲಿ ಬೆಳಗಾವಿ ಪಟ್ಟಣ ಮತ್ತು ಜಿಲ್ಲೆಯ ಉಳಿದ ಭಾಗಗಳನ್ನು ಸಹ ಬಹಮನಿ ಸುಲ್ತಾನರು ಗೆದ್ದರು. ಬಿಜಾಪುರದ ಸುಲ್ತಾನರನ್ನು ಔರಂಗಜೇಬ್ ೧೬೮೬ ರಲ್ಲಿ ಸೋಲಿಸಿದ ಮೇಲೆ ಸ್ವಲ್ಪ ಕಾಲ ಬೆಳಗಾವಿ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೭೭೬ ರಲ್ಲಿ ಹೈದರ್ ಅಲಿ ಈ ಪ್ರದೇಶವನು ಗೆದ್ದರೂ ಬ್ರಿಟಿಷರ ಸಹಾಯದಿಂದ ಮರಾಠಾ ಪೇಶ್ವೆಗಳು ಈ ಪ್ರದೇಶವನ್ನು ಗೆದ್ದರು. ೧೮೧೮ ರಲ್ಲಿ ಬ್ರಿಟಿಷರ ಆಡಳಿತಕ್ಕೆ ಸಾಗಿದ ಬೆಳಗಾವಿ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ೧೮೩೬ ರಲ್ಲಿ ಈ ಜಿಲ್ಲೆಯನ್ನು ಎರಡು ಭಾಗವಾಗಿ ಮಾಡಿ ಉತ್ತರ ಭಾಗವನ್ನು ಬೆಳಗಾವಿ ಜಿಲ್ಲೆಯಾಗಿ ಮಾಡಲಾಯಿತು.೧೯೪೭ ರಲ್ಲೆ ಭಾರತ ಸ್ವಾಂತಂತ್ರ್ಯಪಡೆದ ನಂತರ ಬೆಳಗಾವಿ ಮುಂಬಯಿ ರಾಜ್ಯದ ಭಾಗವಯಿತು ಆದರೆ ೧೯೫೬ ರಲ್ಲಿ ನಡೆದ ರಾಜ್ಯಗಳ ಮರುವಿಂಗಡನಾ ಕಾಯ್ದೆಯ ಪ್ರಕಾರ ಬೆಳಗಾವಿಯನ್ನ ಆಗಿನ ಮೈಸೂರು ರಾಜ್ಯಕ್ಕೆ ಸೆರಿಸಲಾಯಿತು ನಂತರ ೧೯೭೨ ರಲ್ಲಿ ಮೈಸೂರು ಕರ್ನಾಟಕ ರಾಜ್ಯವಾದ ನಂತರ ಬೆಳಗಾವಿ ಕರ್ನಾಟಕದ ಭಾಗವಾಗಿ ಮುಂದುವರಿಯಿತು.
ಬೆಳಗಾವಿ ಜಿಲ್ಲೆಯಲ್ಲಿರುವ ಕಿತ್ತೂರು ಚಾರಿತ್ರಿಕವಾಗಿ ಪ್ರಸಿದ್ಧ. ಕಿತ್ತೂರು ರಾಣಿ ಚೆನ್ನಮ್ಮ ಚರಿತ್ರೆಯಲ್ಲಿ ಸಾಹಸ ಮತ್ತು ಧೈರ್ಯದ ಪ್ರತೀಕವಾಗಿದ್ದಾಳೆ. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಬೆಳಗಾವಿಯ ಇನ್ನೊಬ್ಬ ಪ್ರಸಿದ್ಧ ವ್ಯಕ್ತಿಯೆಂದರೆ ಸಂಗೊಳ್ಳಿ ರಾಯಣ್ಣ.
ಸ್ವಾಂತಂತ್ರ್ಯ ಪೂರ್ವ ಭಾರತದ ಇತಿಹಾಸದಲ್ಲು ಬೆಳಗಾವಿ ತನ್ನದೇ ಆದ ಪಾತ್ರವನ್ನ ಹೊಂದಿತ್ತು. ಡಿಸೆಂಬರ್ ೧೯೨೪ ರಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ೩೯ ನೇ ಭಾರತೀಯ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು.
ಬೆಳಗಾವಿ ನಗರ ಸಮುದ್ರ ಮಟ್ಟದಿಂದ ೨೫೦೦ ಅಡಿ (೭೬೨ ಮೀ)ಎತ್ತರದಲ್ಲಿದೆ. ರಾಜಧಾನಿ ಬೆಂಗಳೂರಿನಿಂದ ೫೦೨ ಕಿಮೀ ದೂರದಲ್ಲಿ ವಾಯುವ್ಯ ದಿಕ್ಕಿನಲ್ಲಿ ನೆಲೆಸಿದ್ದು ಇತರ ನೆರೆ ರಾಜಧಾನಿಗಳಾದ ಮುಂಬಯಿನಿಂದ ದಕ್ಷಿಣಕ್ಕೆ ಸುಮಾರು ೫೦೦ ಕಿಮೀ ಹೈದರಾಬಾದನಿಂದ ಪಶ್ಚಿಮಕ್ಕೆ ೫೧೫ ಕಿಮೀ ಹಾಗು ಗೋವಾ ರಾಜಧಾನಿ ಪಣಜಿಯಿಂದ ೧೫೯ ಕಿಮೀ ದೂರದಲ್ಲಿದೆ. ಸಹ್ಯಾದ್ರಿಯ ಮಡಿಲಲ್ಲಿ ಹಾಗು ಸಮೀಪದ ಅರಬ್ಬೀ ಸಮುದ್ರದಿಂದ ಕೇವಲ ೧೦೦ ಕಿಮೀ ಗಳಷ್ಟು ದೂರದಲ್ಲಿ ನೆಲೆಸಿರುವ ಒಂದು ಸುಂದರ ನಗರ.
ಪ್ರತಿಕೂಲ ಹವಾಮಾನ, ಉತ್ತಮ ಮಳೆ, ಸಮೀಪದ ದಟ್ಟವಾದ ಅರಣ್ಯ ಜಿಲ್ಲೆಯ ಪ್ರಮುಖ ಲಕ್ಷಣಗಳು. ಕ್ಕೃಷ್ಣ, ಘಟ್ಟಪ್ರಭೆ, ಮಲಪ್ರಭ, ಮಾರ್ಖಂಡೇಯ, ಹಿರಣ್ಯಕೇಶಿ, ದೂದಗಂಗೆ-ವೇದಗಂಗೆ ಜಿಲ್ಲೆಯ ಪ್ರಮುಖ ನದಿಗಳು. ರಾಕಸಕೊಪ್ಪ ಜಲಾಶಯ,ಹಿಡಕಲ್ ಜಲಾಶಯ ಹಾಗು ನವಿಲುತೀರ್ಥ ಜಲಾಶಯಗಳು ಜಿಲ್ಲೆಗೆ ಒಳಪಟ್ಟಿವೆ.
ವೈವಿದ್ಯತೆಗಳಲ್ಲಿ ಏಕತೆಯನ್ನು ಹೊಂದಿರುವ ಭಾರತದಂತೆ ಬೆಳಗಾವಿ ಕೂಡ ಹಲವು ಭಾಷಿಕರ ಹಾಗೂ ಹಲವು ಧರ್ಮೀಯರ ನೆಲೆಬೀಡು. ಕನ್ನಡ (ಆಡಳಿತ ಭಾಷೆ), ಹಿಂದಿ(ಕೇವಲ ನಗರದಲ್ಲಿ), ಮರಾಠಿ(ಕೇವಲ ನಗರದಲ್ಲಿ) ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಶೇಷತೆ.ಇಲ್ಲಿನ ಇನ್ನೊಂದು ವಿಶೇಷವೆಂದರೆ ಜಾನಪದ ಕಲೆ. ಇಲ್ಲಿನ ಜನರು ವಿವಿಧ ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಜಾನಪದ ಕಲೆಗಳಾದ ಲಾವಣಿ ಪದ, ರಿವಾಯಿತ ಜಾನಪದ, ಬೀಸುಕಲ್ಲಿನ ಪದ, ಹಂತಿ ಪದ, ಇತ್ಯಾದಿ. ಈ ರೀತಿಯಾಗಿ ವಿವಿಧತೆಯಲ್ಲಿ ಏಕತೆಯನ್ನು ಜನರು ಹೊಂದಿದ್ದಾರೆ.
ಬೆಳಗಾವಿ ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ. ತರಕಾರಿ, ಮೀನು, ಪೀಠೊಪಕರಣಗಳು, ಮರದ ದಿಮ್ಮೆಗಳು ಹಾಗು ಖನಿಜ ಅದಿರುಗಳಿಗೆ ಉತ್ತಮ ಮಾರುಕಟ್ಟೆ. ಬಾಕ್ಸೈಟ ಅದಿರು ಹೇರಳವಾಗಿ ದೊರುಕುವುದರಿಂದ ಬೆಳಗಾವಿಯಲ್ಲಿ ಅಲ್ಯುಮಿನಿಯಂ ಉತ್ಪಾದನಾ ಕೈಗಾರಿಕೆಯೊಂದು (Hindalco Industries)ಭಾರಿ ಪ್ರಮಾಣದ ಅಲ್ಯುಮಿನಿಯಂ ಉತ್ಪಾದಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಮೀಪದ ದೇಶನೂರ ಎಂಬಲ್ಲಿ ಯುರೇನಿಯಂ ಅದಿರು ಕೂಡ ದೊರೆತಿದೆ. ರಾಜಧಾನಿ ಬೆಂಗಳೂರಿನಂತೆ ಇಲ್ಲಿಯೂ ಐಟಿ ಉದ್ಯಮ (I T Industry) ಬೆಳೆಯುತ್ತಿದೆ. ಮೂಲತಹ ಬೆಳಗಾವಿಯಲ್ಲೆ ಆರಂಭಗೊಂಡು ವಿಶ್ವದಾದ್ಯಂತ ಸೇವೆ ಸಲ್ಲಿಸುತ್ತಿರುವ ಹಲವಾರು ಕಂಪನಿಗಳು ಇಲ್ಲಿವೆ ಹಾಗೂ ಬೆಳಗಾವಿಯಿಂದ ೬೦ ಕಿ.ಮಿ. ದೂರವಿರುವ ಗೋಕಾಕ್ ಫಾಲ್ಸ್ ದಲ್ಲಿ ಸುಮಾರು ೧೪೦ ವರುಶಗಳ ಹಳೆಯದಾದ್ದ ಜವಳಿ ಗಿರಣಿ ಇದೆ ಹಾಗೂ ಇಲ್ಲಿ ಪಾಂಡವರು ಕಟ್ಟಿದ್ದಾರೆ ಎಂದು ನಂಬಲಪಡುವ ಶ್ರೀ ತಡಸಲ ಮಹಾಲಿಂಗೇಶ್ವರ ದೇವಸ್ಥಾನ ಇದೆ.
೧೯೭೦ ರಿಂದ ಈಚೆ ಬೆಳಗಾವಿಯಲ್ಲಿ ಉದ್ಯಮಗಳ ಬೆಳವಣಿಗೆಯಾಯಿತು. ಮಶಿನ್ ಟೂಲ್ಸ (machine tools), ಹೈಡ್ರೊಲಿಕ್ hydrolic)ಉತ್ಪನ್ನಗಳು [೧] Archived 2010-05-05 ವೇಬ್ಯಾಕ್ ಮೆಷಿನ್ ನಲ್ಲಿ., ಕಾಸ್ಟಿಂಗ (casting)[೨] Archived 2009-09-17 ವೇಬ್ಯಾಕ್ ಮೆಷಿನ್ ನಲ್ಲಿ. [೩] ಫೊರ್ಜಿಂಗನಂತಹ (forging)[೪] Archived 2009-09-17 ವೇಬ್ಯಾಕ್ ಮೆಷಿನ್ ನಲ್ಲಿ. ನೂರಾರು ಉದ್ಯಮಗಳು ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ವಾಹನ ಉದ್ಯಮದ ಬಿಡಿಭಾಗಗಳು(Automotive Manufacturing), ಮುಖ್ಯವಾಗಿ ಕ್ರ್ಯಾಂಕ್ ಶಾಪ್ಟ (Crank-shaft)ನಂತಹ ವಸ್ತುಗಳ ತಯಾರಿಕಾ ಉದ್ಯಮಗಳು ಇಲ್ಲಿ ಕೇಂದ್ರೀಕೃತವಾಗಿವೆ . ಇತ್ತೀಚಿಗಷ್ಟೆ ಬೆಳಗಾವಿಯಲ್ಲಿ ವೈಮಾನಿಕ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಹೊಸ ಉದ್ಯಮವೊಂದು (Quest engineering)[೫] Archived 2010-01-07 ವೇಬ್ಯಾಕ್ ಮೆಷಿನ್ ನಲ್ಲಿ. [೬][ಶಾಶ್ವತವಾಗಿ ಮಡಿದ ಕೊಂಡಿ] ಕಾರ್ಯಾರಂಭ ಮಾಡಿದೆ. ಈ ಉದ್ಯಮ ವೈಮಾಣಿಕ ತಂತ್ರಜ್ನಾನಕ್ಕೆ ಸಂಬಂಧಪಟ್ಟಂತೆ ನಮ್ಮ ದೇಶದಲ್ಲೆ ಮೊದಲು ಸ್ಥಾಪನೆಯಾದ ಉದ್ಯಮ ಎನ್ನಲಾಗಿದೆ. ಇದಲ್ಲದೆ ರವಿವಾರ ಪೇಟೆಯಂತಹ ಇತರ ಮಾರುಕಟ್ಟೆಗಳು ಗ್ರಹೋಪಯೊಗಿ ವಸ್ತುಗಳಿಗೆ ಉತ್ತಮ ವ್ಯಾಪಾರ ಕಲ್ಪಿಸಿವೆ.
ಬೆಳಗಾವಿ ಕರ್ನಾಟಕದ ಒಂದು ಪ್ರಮುಖ ವಿದ್ಯಾ ಕೇಂದ್ರ. ೮ ಅಭಿಯಾಂತ್ರಿಕ ಕಾಲೇಜುಗಳು(engineering colleges),೫ ವೈದ್ಯಕೀಯ ಮಹಾವಿದ್ಯಾಲಯಗಳು , ಕೆಲವು ದಂತ ವಿದ್ಯಾಲಯಗಳು ಸೇರಿದಂತೆ ಹಲವಾರು ವಿದ್ಯಾಸಂಸ್ಥೆಗಳು ಇಲ್ಲಿವೆ. ಇಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕರ್ನಾಟಕದ ಅತೀ ದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ, ಸುಮಾರು ೧೪೦ ಕ್ಕೂ ಅಧಿಕ ತಾಂತ್ರಿಕ ವಿದ್ಯಾಲಯಗಳು ಈ ವಿಶ್ವವಿದ್ಯಾಲಯದ ಅಧೀನದೊಳಗೆ ಕಾರ್ಯನಿರ್ವಹಿಸುತ್ತವೆ ಅಲ್ಲದೇ ಸ್ನಾತಕೋತ್ತರ ವಿಭಾಗದಲ್ಲಿ M-Tech,MCA ನಂತಹ ಪದವಿಗಳು ಕೂಡ ವಿ.ತಾ.ವಿ ಅಧೀನದಲ್ಲಿವೆ. ಇದಲ್ಲದೆ ಅದೇ ರೀತಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿದೆ. ಇದರ ಬೆಳಗಾವಿ ಬಾಗಲಕೋಟೆ , ವಿಜಾಪುರ ಪದವಿ ಕಾಲೇಜುಗಳು ಇದರ ಅಧೀನದಲ್ಲಿವೆ . ಇತರೆ ಪದವಿ ಕಾಲೇಜುಗಳು,ಪಾಲಿಟೆಕ್ನಿಕ್ ವಿದ್ಯಾಲಯಗಳು, ಕಾನೂನು ಮಹಾವಿದ್ಯಾಲಯಗಳು ಕೂಡ ಇಲ್ಲಿವೆ. ಕೆ ಎಲ್ ಇ , ಕೆ ಎಲ್ ಎಸ್, ಗೋಮಟೇಶ , ಭರತೇಶ ಹಾಗು ಮರಾಠ ಮಂಡಳದಂತಹ ಹಲವಾರು ವಿದ್ಯಾಸಂಸ್ಥೆಗಳು ಸಾಕಷ್ಟು ಶೈಕ್ಷಣಿಕ ವಿದ್ಯಲಯಗಳನ್ನು ನಡೆಸುತ್ತಿವೆ. ಈ ಜಿಲ್ಲೆಯಲ್ಲಿ ಒಟ್ಟಾರೆ ತಾಂತ್ರಿಕ ಕ್ಷೇತ್ರಕ್ಕೆ ಸಂಭಂಧಿಸಿದಂತೆ ೯ ಪಾಲಿಟೆಕ್ನಿಕ್, ೫ ಇಂಜಿನೀಯರಿಂಗ್ ಮಹಾವಿದ್ಯಾಲ್ಯಗಳನ್ನು ಹೊಂದಿದೆ. ಹಾಗೂ ಅನೇಕ ವೈದ್ಯಕೀಯ, ದಂತವೈದ್ಯಕೀಯ, ಅನೇಕ ತಾಂತ್ರಿಕ ಮಹಾವಿದ್ಯಾಲಗಳನ್ನು ಹೊಂದಿದೆ.
ಇಸ್ವಿ ೧೯೧೬ ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು ವಿಶ್ವದಾದ್ಯಂತ ಹಲವಾರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ.ನವಂಬರ ೧೩,೧೯೧೬ ರಲ್ಲಿ ಕೆ ಎಲ್ ಇ ಸಂಸ್ಥೆ ಇಂದಿನ ಗಿಲಗಂಚಿ ಅರಟಾಳ ಪ್ರೌಢಶಾಲೆ ಹಾಗು ಪದವಿಪೂರ್ವ ಕಾಲೇಜ (G A High school) ನ್ನು ಆರಂಭಿಸಿತು.ಇದೇ ರೀತಿ ೧೯೩೩ ರ ಜೂನ್ ನಲ್ಲಿ ಲಿಂಗರಾಜ ಕಾಲೇಜ್, ೧೯೪೭ರಲ್ಲಿ ಹುಬ್ಬಳ್ಳಿಯ ಬಿ,ವಿ ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯ, ೧೯೬೩ ರಲ್ಲಿ ಬೆಳಗಾವಿಯ ಜವಾಹರ ಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಹಾಗು ಹಾವೇರಿಯ ಜಿ,ಎಚ್ ಕಾಲೇಜ್ ಆರಂಭವಾದವು. ೧೯೮೪ ರಿಂದ ಈಚೆಗೆ ವೈದ್ಯಕೀಯ,ದಂತ ವೈದ್ಯಕೀಯ,ಮಾಹಿತಿ ತಂತ್ರಜ್ಞಾನ,ಕಂಪ್ಯೂಟರ ತಂತ್ರಜ್ಞಾನ,ಹೊಟೆಲ್ ಮ್ಯಾನೇಜಮೆಂಟ,ಬ್ಯುಸಿನೆಸ್ ಮ್ಯಾನೇಜಮೆಂಟ,ಪ್ಯಾಶನ್ ಡಿಸೈನಿಂಗ,ಕೃಷಿ ವಿದ್ಯಾಲಯಗಳು ಹಾಗೂ ಇತರ ಎಲ್ಲಾ ಶೈಕ್ಷಣಿಕ ಕ್ಷೇತ್ರಗಳಿಗೂ ವಿಸ್ತಾರವಾಗಿ ಇಂದು ಶ್ರೀ ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ೨೦೦ ಕ್ಕಿಂತಲೂ ಹೆಚ್ಚಿನ ಶೈಕ್ಷಣಿಕ ವಿದ್ಯಾಲಯಗಳನ್ನು ಒಳಗೊಂಡಿದೆ.
ಇದು ಕರ್ನಾಟಕ ಸರಕಾರದಿಂದ ನಡೆಸಲ್ಪಡುತ್ತಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಇಲ್ಲಿ ಅನೇಕ ತಾಂತ್ರಿಕ ಕಲೆಗಳನ್ನು ಹೇಳಿಕೊಡಲಾಗುತ್ತದೆ. ಕಮರ್ಷಿಯಲ್ ಪ್ರಾಕ್ಟೀಸ್, ಸಿವ್ಹಿಲ್, ಆಟೋಮೋಬೈಲ್, ಮೆಕ್ಯಾನಿಕಲ್, ವಿದ್ಯುತ್ ಮತ್ತು ವಿದ್ಯುನ್ಮಾನ್, ವಿದ್ಯುನ್ಮಾನ್ ಮತ್ತು ಸಂವಹಣೆ ವಿಭಾಗಗಳನ್ನು ಹೊಂದಿದೆ. ಇದು ಅತ್ಯುತ್ತಮ ಸಿಬ್ಬಂದಿಯನ್ನು ಹೊಂದಿರುವುದರಿಂದ ಸಹಜವಾಗಿಯೇ ಹೆಸರುವಾಸಿಯಾಗಿದೆ. ಬಿ.ಇ. ಲ್ಯಾಟರಲ್ ಎಂಟ್ರಿಗೆ ನಡೆಯುವ ಸಿ.ಇ.ಟಿ. ಯಲ್ಲಿ ಪ್ರತಿ ವರ್ಷವು ರಾಜ್ಯಕ್ಕೆ ಪ್ರಥಮ ಸ್ಥಾನ ಹೊಂದಿರುವುದು ಇದರ ಹೆಗ್ಗಳಿಕೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಮುಖ್ಯ ಭಾಷೆಗಳು ಕನ್ನಡ, ಮತ್ತು ಮಹಾರಾಷ್ಟ್ರದ ಸಾಮೀಪ್ಯದಿಂದಾಗಿ ಮರಾಠಿ, ಈ ಎರಡು ಭಾಷೆಗಳಲ್ಲದೆ ಸಾಮಾನ್ಯವಾಗಿ ಹಿಂದಿ ಹಾಗು ಕೊಂಕಣಿ ಭಾಷೆಗಳು ಕೂಡ ಇಲ್ಲಿ ಮಾತನಾಡಲ್ಪಡುತ್ತವೆ .
This article uses material from the Wikipedia ಕನ್ನಡ article ಬೆಳಗಾವಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.