ಡಾ.
ರಾ, ಯ. ಧಾರವಾಡಕರ್ (ಜುಲೈ ೧೫, ೧೯೧೯ - ಏಪ್ರಿಲ್ ೧೨, ೧೯೯೧) ಕನ್ನಡ ಸಾಹಿತ್ಯ ಲೋಕದ ಮಹಾನ್ ವಿದ್ವಾಂಸರಲ್ಲೊಬ್ಬರು. ಭಾಷಾಶಾಸ್ತ್ರ, ಪತ್ರಿಕೋದ್ಯಮ, ಅರ್ಥಶಾಸ್ತ್ರ, ರಾಜಕಾರಣ, ಕನ್ನಡಭಾಷೆ, ಸಾಹಿತ್ಯದ ಕುರಿತಾಗಿ ಮಹತ್ವದ ಅಧ್ಯಯನ ಕೈಗೊಂಡವರೆಂದು ಅವರು ನಾಡಿನಲ್ಲಿ ಪ್ರಖ್ಯಾತರಾಗಿದ್ದಾರೆ.
ರಾ.ಯ. ಧಾರವಾಡಕರ್ | |
---|---|
ಜನನ | ಜುಲೈ ೧೫, ೧೯೧೯ ವಿಜಾಪುರ ಜಿಲ್ಲೆಯ ಬಾಗಲಕೋಟೆ |
ಮರಣ | ಏಪ್ರಿಲ್ ೧೨, ೧೯೯೧ |
ವೃತ್ತಿ | ಸಾಹಿತಿಗಳು, ಪ್ರಾಧ್ಯಾಪಕರು |
ವಿಷಯ | ಕನ್ನಡ ಸಾಹಿತ್ಯ |
ಬಾಳ ಸಂಗಾತಿ | ಭಾನುಮತಿ |
ಮಕ್ಕಳು | 5 |
ಕನ್ನಡ ಸಾಹಿತ್ಯ ಲೋಕದ ಮಹಾನ್ ವಿದ್ವಾಂಸರಾದ ಡಾ. ರಾ. ಯ. ಧಾರವಾಡಕರ್ ಅವರು ೧೯೧೯ರ ಜುಲೈ ೧೫ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿಸಿದರು. ಅವರ ತಂದೆ ಯಲಗುರ್ದರಾವ್ ಅವರು ವಕೀಲಿ ವೃತ್ತಿಯನ್ನು ಕೈಗೊಂಡಿದ್ದರು. ತಾಯಿ ಗಂಗಾಬಾಯಿಯವರು.
ಧಾರವಾಡಕರರ ಪ್ರಾರಂಭಿಕ ಶಾಲಾ ಶಿಕ್ಷಣ ಬಾಗಲಕೋಟೆಯಲ್ಲಿ ನೆರವೇರಿತು. ೧೯೩೬ರ ವರ್ಷದಲ್ಲಿ ಅವರು ಮುಂಬಯಿಯ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿಗೆ ಸೇರಿದ ಅವರು ೧೯೪೦ರ ವರ್ಷದಲ್ಲಿ ಪ್ರಥಮವರ್ಗದಲ್ಲಿ ಬಿ.ಎ. ಆನರ್ಸ್ ಕನ್ನಡ ಪದವಿಯನ್ನೂ, ೧೯೪೨ರ ವರ್ಷದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಐಚ್ಚಿಕ ವಿಷಯವಾದ ಇಂಗ್ಲಿಷಿನಲ್ಲಿ ಗಳಿಸಿದ ಉತ್ತಮ ಅಂಕಗಳಿಂದ ಅದೇ ಕಾಲೇಜಿನ ಫೆಲೊ ಆಗಿ ಆಯ್ಕೆಯಾಗಿ, ಇಂಗ್ಲಿಷ್ ಟ್ಯೂಟರ್ ಆಗಿಯೂ ಕೆಲಸಮಾಡಿದರು. ಕೆಲಕಾಲ ಮುಂಬಯಿಯ ಸೆಕ್ರಟರಿಯೆಟ್ನಲ್ಲಿ ರೇಷನಿಂಗ್ ಅಧಿಕಾರಿಯಾಗಿಯೂ ಅವರು ಕಾರ್ಯನಿರ್ವಹಿಸಿದರು.
ಮುಂದೆ ಧಾರವಾಡಕರರು ೧೯೪೪ರಲ್ಲಿ ಅದೇ ತಾನೆ ಪ್ರಾರಂಭವಾಗಿದ್ದ ಧಾರವಾಡದ ಕೆ. ಇ. ಬೋರ್ಡ್ ಕಾಲೇಜಿನಲ್ಲಿ (ಇಂದಿನ ಜೆ.ಎಸ್.ಎಸ್ ಕಾಲೇಜು) ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಅಸಿಸ್ಟೆಂಟ್ ಪ್ರೊಫೆಸರೆಂದು ನೇಮಕಗೊಂಡರು. ಬಿ.ಎಂ.ಶ್ರೀ.ಯವರು ಪ್ರಿನ್ಸಿಪಾಲರಾಗಿದ್ದು ಅವರ ಮರಣಾನಂತರ ತಮ್ಮ ೨೭ನೆಯ ವಯಸ್ಸಿನಲ್ಲಿಯೇ ತಾತ್ಕಾಲಿಕ ಪ್ರಿನ್ಸಿಪಾಲರೆಂದು ನೇಮಕಗೊಂಡವರು ಖಾಯಂ ಪ್ರಿನ್ಸಿಪಾಲರಾಗಿ ಸುಮಾರು ಕಾಲು ಶತಮಾನಗಳ ಕಾಲ ಕಾಲೇಜಿನ ಅಭಿವೃದ್ಧಿಗಾಗಿ ದುಡಿದರು. ಕಾಲೇಜಿಗೊಂದು ಭದ್ರ ಬುನಾದಿ ಹಾಕಿ, ದಕ್ಷ ಆಡಳಿತದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದರು. ೧೯೬೪ರಲ್ಲಿ ಫುಲ್ಬ್ರೈಟ್ ಸ್ಕಾಲರ್ ಶಿಪ್ ಪಡೆದು ಅಮೆರಿಕಾವನ್ನು ಸಂದರ್ಶಿಸಿ ಬಂದ ಧಾರವಾಡಕರರು ಕಡೆಯವರೆಗೂ ನಾಡು-ನುಡಿಗಾಗಿ ಅಪಾರವಾಗಿ ಶ್ರಮಿಸಿದರು. ೧೯೭೩ರಲ್ಲಿ ಅವರಿಗೆ ಪಿಎಚ್.ಡಿ. ತಂದು ಕೊಟ್ಟ ಪ್ರೌಢ ಪ್ರಬಂಧ ‘ಹೊಸಗನ್ನಡ ಉದಯಕಾಲ’.
ಹಲವಾರು ಗ್ರಂಥಗಳನ್ನು ರಚಿಸಿದ್ದ ಧಾರವಾಡಕರರು ಪತ್ರಿಕೋದ್ಯಮಕ್ಕಾಗಿ ನೀಡಿದ ಕೃತಿಗಳೆಂದರೆ ಪತ್ರಿಕಾ ವ್ಯವಸಾಯ (೧೯೪೮), ಮತ್ತು ಕರ್ನಾಟಕದಲ್ಲಿ ವೃತ್ತ ಪತ್ರಿಕೆಗಳು (೧೯೪೯). ನಂತರ ಪ್ರಕಟವಾದದ್ದು ಸಾಹಿತ್ಯ ಸಮೀಕ್ಷೆ. ೧೯೫೦ರಲ್ಲಿ ಪ್ರಕಟವಾದ ‘ಕನ್ನಡ ಭಾಷಾ ಶಾಸ್ತ್ರ’ವು ಕನ್ನಡ ಭಾಷೆಯ ಉಗಮ, ವಿಕಾಸ, ವ್ಯಾಕರಣ ವಿಚಾರ, ಭಾಷೆಯ ವೈಶಿಷ್ಟ್ಯಗಳನ್ನೂ ಸೊಗಸಾಗಿ ನಿರೂಪಿಸಿರುವ ಗ್ರಂಥವೆನಿಸಿದೆ. ಇದಕ್ಕೆ ದೇವರಾಜ ಬಹದ್ದೂರ್ ಬಹುಮಾನವೂ ಸಂದಿತು. ಧಾರವಾಡಕರ್ ಅವರಿಗೆ ಹೆಚ್ಚು ಹೆಸರು ತಂದು ಕೊಟ್ಟ ಕ್ಷೇತ್ರವೆಂದರೆ ಪ್ರಬಂಧ ಕ್ಷೇತ್ರ. ಧೂಮ್ರವಲಯಗಳು, ತೂರಿದ ಚಿಂತನೆಗಳು, ನವಿಲುಗರಿ ಮತ್ತು ಸೂರ್ಯಪಾನ ಎಂಬ ಅವರ ನಾಲ್ಕು ಪ್ರಬಂಧ ಸಂಕಲನಗಳು ಪ್ರಕಟಗೊಂಡಿವೆ.
ಕತೆಗಾರರಾಗಿಯೂ ಹೆಸರು ಗಳಿಸಿರುವ ಧಾರವಾಡಕರರು ಏಳು ಜನ ನಿಗ್ರೋ ಕತೆಗಾರರ ಕತೆಗಳನ್ನಾರಿಸಿಕೊಂಡು ಕನ್ನಡಕ್ಕೆ ರೂಪಾಂತರಿಸಿ ‘ತೆರೆಯ ಹಿಂದೆ’ ಅಮೆರಿಕನ್ ನಿಗ್ರೋ ಕಥೆಗಳು ಮತ್ತು ಸಾಗರೋತ್ತರ ಕಥೆಗಳು ಎಂಬ ಸಂಕಲನಗಳನ್ನು ತಂದು ಹೊಸ ಮಾದರಿಯ ಕತೆಗಳನ್ನು ಓದುಗರಿಗೆ ನೀಡಿದ್ದಾರೆ. ತಮ್ಮ ಅಮೆರಿಕಾ ಪ್ರವಾಸಾನುಭವವನ್ನೂ ನಿರೂಪಿಸುವ ಕೃತಿ ‘ನಾ ಕಂಡ ಅಮರಿಕೆ’ ಕೃತಿಗೆ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನೂ ಪಡೆದಿದ್ದಾರೆ. ಇದಲ್ಲದೆ ವ್ಯಕ್ತಿ ಪರಿಚಯಗಳಾದ ವೆಂಕಟರಂಗೋಕಟ್ಟಿ, ಶ್ರೀನಮನ, ಡಾ. ನಂದಿಮಠರ ನೆನಪು, ರೊದ್ದ ಶ್ರೀನಿವಾಸರಾಯರು, ಕಾವ್ಯಾನಂದ, ಪುಣೇಕರ ಮುಂತಾದ ಕೃತಿಗಳನ್ನೂ ರಚಿಸಿದ್ದಾರೆ.
ಧಾರವಾಡಕರರು ಶಾಂತ ಕವಿಗಳ ಮೂರು ಕೀರ್ತನೆಗಳಾದ ವಿದ್ಯಾರಣ್ಯ ವಿಜಯ, ರಾವಣ-ವೇದವತಿ ಮತ್ತು ಶ್ರೀಕೃಷ್ಣ ದಾನಾಮೃತಗಳನ್ನೂ ಬೆಳಕಿಗೆ ತಂದಿದ್ದಾರೆ.
ಧಾರವಾಡಕರರು ರಚಿಸಿದ ಇತರ ಕೃತಿಗಳೆಂದರೆ ನಮ್ಮ ದೇಶದ ಯೋಜನೆಗಳು, ದೇವರು-ಧರ್ಮ ಮತ್ತು ಇಂಗ್ಲಿಷಿನಲ್ಲಿ , ದಿ ಗೋಲ್ಡನ್ ಜರ್ಸಿ, ಶ್ರೀಗಂಧ, ದಿ ಲಿಂಗರಿಂಗ್ ಮುಂತಾದವು.
ಧಾರವಾಡಕರರು ಇತರರೊಂದಿಗೆ ಕೂಡಿ ಲೋಕಮಾನ್ಯ ತಿಲಕರು, ವಿಜಯದುಂದುಭಿ, ಭೀಷ್ಮಪರ್ವಸಂಗ್ರಹ, ಕರ್ಮಯೋಗಿ ಹಾಗೂ ಗಾಂಧಿಸಾಹಿತ್ಯದ ಸುಮಾರು ೩೦ ಕೃತಿಗಳನ್ನೂ ಸಂಪಾದಿಸಿದ್ದಾರೆ.
ದೇವರಾಜ ಬಹದ್ದೂರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯಮ ಅಕಾಡೆಮಿ ಪ್ರಶಸ್ತಿಗಳಲ್ಲದೆ, ಸಾರಸ್ವತ ಲೋಕದಲ್ಲಿ ವಿಶಿಷ್ಟರೀತಿಯಲ್ಲಿ ದುಡಿದ ರಾ.ಯ. ಧಾರವಾಡಕರ್ ಅವರಿಗೆ ಮೈಸೂರು ಸರಕಾರದಿಂದ ಸಾರ್ವಜನಿಕ ಸೇವಾ ಪ್ರಶಸ್ತಿ, ಮೂರು ಸಾವಿರ ಮಠದ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಜೊತೆಗೆ ಅಭಿಮಾನಿಗಳು ೧೯೯೦ರಲ್ಲಿ ಅರ್ಪಿಸಿದ ಬೃಹತ್ ಗ್ರಂಥ ‘ಪ್ರಬಂಧ ಪ್ರಪಂಚ’.
ಕನ್ನಡ ಸಾರಸ್ವತ ಲೋಕದಲ್ಲಿ ‘ರಾಯ’ರೆಂದೇ ಕರೆಸಿಕೊಂಡಿದ್ದ ಧಾರವಾಡಕರರು ೧೯೯೧ರ ಏಪ್ರಿಲ್ ೧೨ರಂದು ಈ ಲೋಕವನ್ನಗಲಿದರು.
This article uses material from the Wikipedia ಕನ್ನಡ article ರಾ. ಯ. ಧಾರವಾಡಕರ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.