ಆರ್. ನಾಗೇಶ್

ಆರ್.

ನಾಗೇಶ್ (ಮಾರ್ಚ್ ೧೩, ೧೯೪೩ - ಸೆಪ್ಟೆಂಬರ್ ೧೮, ೨೦೧೦) ಆಧುನಿಕ ರಂಗಭೂಮಿಯ ನವದೃಷ್ಟಾರರಲ್ಲಿ ಪ್ರಮುಖಸಾಲಿನವರೆನಿಸಿದ್ದಾರೆ.

ಆರ್. ನಾಗೇಶ್
Bornಮಾರ್ಚ್ ೧೩, ೧೯೪೩
ಬೆಂಗಳೂರು ಸಮೀಪದ ರಾಮೋಹಳ್ಳಿ
Diedಸೆಪ್ಟೆಂಬರ್ ೧೮, ೨೦೧೦
Occupationರಂಗಭೂಮಿ ತಜ್ಞರು

ಜೀವನ

ಕರ್ನಾಟಕ ರಂಗಭೂಮಿಗೆ ಹೊಸ ದಾರಿಹಾಕಿಕೊಟ್ಟ ನವ್ಯದೃಷ್ಟಾರರಲ್ಲಿ ಆರ್ ನಾಗೇಶರ ಹೆಸರು ಪ್ರಮುಖವಾದದ್ದು. ರಂಗನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ ಹೀಗೆ ರಂಗಭೂಮಿಯ ಹಲವಾರು ಆಯಾಮಗಳಲ್ಲಿ ದುಡಿದ ಆರ್. ನಾಗೇಶ್ ಅವರು ರಾಮರಾಜ ಅರಸು - ಲಕ್ಷ್ಮೀದೇವಮ್ಮ ದಂಪತಿಗಳ ಮಗನಾಗಿ ಬೆಂಗಳೂರು ಸಮೀಪದ ರಾಮೋಹಳ್ಳಿಯಲ್ಲಿ ಮಾರ್ಚ್ ೧೩, ೧೯೪೩ರಲ್ಲಿ ಜನಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿ ಮೊದಲು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ನಂತರ, ತಮ್ಮ ಅಭಿರುಚಿಗೆ ತಕ್ಕಂತೆ ವಾರ್ತಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗೇಶ್ ಹಲವಾರು ವರ್ಷಗಳ ನಂತರ ಸ್ವಯಂ ನಿವೃತ್ತಿ ಪಡೆದರು.

ಕನ್ನಡವೆಂದರೆ ಪ್ರಾಣ

ಕನ್ನಡವೆಂದರೆ ಅವರಿಗೆ ಪಂಚಪ್ರಾಣ. ಕನ್ನಡ ಸೇನಾನಿ ಮ. ರಾಮಮೂರ್ತಿ ಆವರ ಜೊತೆ ಅವರು ಅನೇಕ ಹೋರಾಟಗಳಲ್ಲಿ ಪಾಲ್ಗೊಂಡವರು. ಕನ್ನಡ ಸಾಹಿತ್ಯ ಕಲಾ ಸಂಘದ ಸ್ಥಾಪಕರು. ಬಿ. ವಿ. ಕಾರಂತರು ಬೆಂಗಳೂರಿಗೆ ಬರಲು ಪ್ರಮುಖ ಕಾರಣಕರ್ತರಾಗಿದ್ದವರು ಆರ್. ನಾಗೇಶ್.

ವೈಚಾರಿಕ ನಾಟಕಗಳ ಹರಿಕಾರ

೧೯೫೦-೬೦ರ ದಶಕದಲ್ಲಿ ಕೆ. ಗುಂಡಣ್ಣ, ಪರ್ವತವಾಣಿ, ಎ.ಎಸ್. ಮೂರ್ತಿ, ಕೈವಾರ ರಾಜಾರಾಯರ ನಗೆ ನಾಟಕಗಳು ಹೆಚ್ಚು ಪ್ರಚಲಿತವಿದ್ದ ಕಾಲ. ಅಂಥ ಸಂದರ್ಭದಲ್ಲಿ ವೈಚಾರಿಕ ನಾಟಕಗಳನ್ನು ರಂಗಕ್ಕೆ ತಂದವರಲ್ಲಿ ನಾಗೇಶ್ ಪ್ರಮುಖರು. ೧೯೬೯ರಲ್ಲಿ ಪ್ರೊ.ಬಿ.ಚಂದ್ರಶೇಖರ್‌ ನಿರ್ದೇಶನದಲ್ಲಿ ಸಿ. ಆರ್. ಸಿಂಹರ ಅಭಿನಯದಲ್ಲಿ ಗಿರೀಶ್‌ಕಾರ್ನಾಡ್‌ ಅವರ 'ತೊಘಲಕ್‌' ನಾಟಕ ಪ್ರದರ್ಶನ ಸಂಘಟಿಸಿದ ನಾಗೇಶ್‌ ಆ ಮೂಲಕ ಹಲವಾರು ಕಲಾವಿದರು, ತಂತ್ರಜ್ಞರು ಹವ್ಯಾಸಿ ರಂಗಭೂಮಿಗೆ ಪಾದಾರ್ಪಣೆ ಮಾಡಲು ಕಾರಣರಾದರು. ಈ ನಾಟಕ ಪ್ರದರ್ಶನದ ನಂತರ ಇಡೀ ರಂಗಭೂಮಿಯ ದಿಕ್ಕೇ ಬದಲಾಯಿತು. ಬಿ. ವಿ. ಕಾರಂತರ ನಿರ್ದೇಶನದಲ್ಲಿ ಅವರು ನಿರ್ಮಿಸಿದ ‘ಸ್ವರ್ಗಕ್ಕೆ ಮೂರೇ ಬಾಗಿಲು’ ಮತ್ತೊಂದು ವಿಶಿಷ್ಟ ಯಶಸ್ವೀ ಪ್ರದರ್ಶನವೆನಿಸಿತು. ೧೯೭೨ರಲ್ಲಿ ರವೀಂದ್ರ ಕಲಾಕ್ಷೇತ್ರದ ಹೊರಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಜತೆಗೂಡಿ ಬಿ.ವಿ.ಕಾರಂತರ ನಿರ್ದೇಶನದಲ್ಲಿ 'ದೊರೆ ಈಡಿಪಸ್‌', 'ಸಂಕ್ರಾಂತಿ', ಹಾಗೂ 'ಜೋಕುಮಾರಸ್ವಾಮಿ' ನಾಟಕ ಪ್ರದರ್ಶನ ಮಾಡಿದರು. ಇದು ರಂಗಭೂಮಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ಈ ಕಾರ್ಯಕ್ರಮದ ನಂತರ ರಂಗಸಂಪಂದ, ಬೆನಕ, ನಟರಂಗ, ಸಮುದಾಯ, ಕಲಾಗಂಗೋತ್ರಿ, ಕಾಲಾನಂತರದಲ್ಲಿ ಸ್ಪಂದನ ಮುಂತಾದ ಪ್ರಸಿದ್ಧ ತಂಡಗಳು ಸೃಷ್ಟಿಯಾದವು. ನೂರಾರು ಕಲಾವಿದರು ಬೆಳಕಿಗೆ ಬಂದರು. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಇದೊಂದು ಸ್ವರ್ಣಯುಗ.

೧೯೭೦ರ ದಶಕ ವೈಚಾರಿಕ ನಾಟಕಗಳ ಸುಗ್ಗಿಕಾಲ. ೧೯೭೨ರಲ್ಲಿ ಜೆ. ಲೋಕೇಶ್, ಆನಂದ್, ಹರಿಕೃಷ್ಣರೊಡಗೆ ‘ರಂಗ ಸಂಪದ’; ೧೯೮೪ರಲ್ಲಿ ಮಾಲತಿರಾವ್ ಅವರೊಡನೆ ‘ಸೂತ್ರಧಾರ’; ೧೯೮೯ರಲ್ಲಿ ಎಲ್. ಕೃಷ್ಣಪ್ಪ, ಮಾನು, ಹುಲಿವಾನ ಗಂಗಾಧರಯ್ಯ ಅವರೊಡನೆ ಜನ ನಾಟ್ಯಮಂಡಲಿ ಹೀಗೆ ಹಲವಾರು ನಾಟ್ಯ ಸಂಸ್ಥೆಗಳೊಡನೆ ನಾಗೇಶ್ ಒಡನಾಟದಲ್ಲಿದ್ದರು. ಶ್ರೀರಂಗ, ಲಂಕೇಶ್, ಕಾರ್ನಾಡ್, ಚಂದ್ರಶೇಖರ ಪಾಟೀಲ, ಕಂಬಾರರ ನಾಟಕಗಳನ್ನು ರಂಗಕ್ಕೆ ತಂದುದೇ ಅಲ್ಲದೆ ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ, ಕಾರಂತರ ಕಾದಂಬರಿಗಳಿಗೆ ರಂಗ ರೂಪಕೊಟ್ಟವರು ಆರ್ ನಾಗೇಶ್. ಹೀಗೆ ಕಥೆಯಾಧಾರಿತ ನಾಟಕಗಳಿಗೆ ಹೊಸ ಪ್ರೇಕ್ಷಕ ವರ್ಗ ಹುಟ್ಟಲು ಕಾರಣಕರ್ತರೂ ಆದರು. ನೀ ಕೊಡೆ ನಾ ಬಿಡೆ, ಕುಬಿ ಮತ್ತು ಇಯಾಲ, ತಾಮ್ರ ಪತ್ರದಲ್ಲಿ ನೀಡಿದ ಮನೋಜ್ಞ ಅಭಿನಯ; ಪ್ರಸನ್ನರ ನಿರ್ದೇಶನದ ಗೆಲಿಲಿಯೋ, ಕದಡಿದ ನೀರು, ವೈಕುಂಠರಾಜುರವರ ಸನ್ನಿವೇಶ ನಾಟಕಗಳಿಗೆ ಬೆಳಕಿನ ವಿನ್ಯಾಸ; ಅಸಂಗತ ನಾಟಕಗಳಿಗೆ ರಚಿಸಿದ ರಂಗಸಜ್ಜಿಕೆ; ಚೋಮ, ತಬರನ ಕಥೆ, ಯಯಾತಿ, ಕೃಷ್ಣೇಗೌಡನ ಆನೆ, ಮುಂತಾದವುಗಳಿಗೆ ಮಹತ್ವದ ನಿರ್ದೇಶನ, ಹಲವಾರು ತಂಡಗಳನ್ನು ಸೇರಿಸಿ ಬಿ. ಚಂದ್ರಶೇಖರ್ ನಿರ್ದೇಶನದ ತುಘಲಕ್ ಇವೇ ಮುಂತಾದುವು ಆರ್ ನಾಗೇಶರ ವಿಭಿನ್ನ ವೈಶಿಷ್ಟ್ಯಪೂರ್ಣ ಸಾಧನೆಗಳು.

ರಂಗವಿಹಂಗಮ ಮತ್ತು ಸೂತ್ರಧಾರ

ರಂಗಭೂಮಿಯ ಕುರಿತು ದೂರದರ್ಶನಕ್ಕಾಗಿ ನಾಗೇಶ್ ‘ರಂಗವಿಹಂಗಮ’ ಸಾಕ್ಷಚಿತ್ರ ತಯಾರಿಸಿದ್ದರು. ರಂಗಭೂಮಿ ಮಾಸಿಕ ಪತ್ರಿಕೆ ‘ಸೂತ್ರಧಾರ’ ಹೊರತಂದ ಕೀರ್ತಿಯೂ ಆರ್‌.ನಾಗೇಶ್‌ ಅವರಿಗೆ ಸಲ್ಲುತ್ತದೆ.

ಪ್ರಶಸ್ತಿ ಗೌರವಗಳು

ಕರ್ನಾಟಕ ನಾಟಕ ಅಕಾಡಮಿ, ಕೆಂಪೇಗೌಡ, ಆರ್ಯಭಟ, ರಾಜ್ಯೋತ್ಸವ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಆರ್ ನಾಗೇಶರನ್ನು ಅರಸಿ ಬಂದವು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷತೆ

೨೦೦೩-೦೬ನೇ ಸಾಲಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ನಾಗೇಶ್‌ ಸೇವೆ ಸಲ್ಲಿಸಿದ್ದರು. ಜಿಲ್ಲೆಯ ನಾಟಕ ತಂಡಗಳಿಗೆ ನೀಡಿದ ಪ್ರಾತಿನಿಧ್ಯ, ತಿಂಗಳ ಬೆಳಕಲ್ಲಿ ರಂಗದ ಬೆರಗು-ದಾವಣಗೆರೆಯಲ್ಲಿ ಪ್ರತಿ ತಿಂಗಳ ವಿಶಿಷ್ಟ ನಾಟಕ ಪ್ರದರ್ಶನ ಮುಂತಾದವು ಅವರ ಮನೋಜ್ಞ ಕಾರ್ಯಸಾಧನೆಗಳಾಗಿವೆ.

ವಿದಾಯ

೨೦೧೦ ಸೆಪ್ಟಂಬರ್ ೧೮ರಂದು ಆರ್ ನಾಗೇಶರ ನಿರ್ದೇಶನದ ಪೂರ್ಣಚಂದ್ರ ತೇಜಸ್ವಿಯರ ‘ಕೃಷ್ಣೇಗೌಡನ ಆನೆ’ ಕಥೆಯ ಪ್ರಸಿದ್ಧ ನಾಟಕರೂಪವು ತನ್ನ ನೂರನೆಯ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಕಾಣುತ್ತಿತ್ತು. ಅದಕ್ಕೆ ಆರ್. ನಾಗೇಶರು ಅದು ಹೇಗೆತಾನೇ ಗೈರು ಹಾಜರು ಎಂದು ಮಿತ್ರರು ಅಚ್ಚರಿಪಡುತ್ತಿದ್ದರು. ಈ ಮಹಾನ್ ರಂಗಯಾತ್ರಿ ಇತ್ತಕಡೆ ಈ ಭೂಲೋಕವೆಂಬ ರಂಗಯಾತ್ರೆಯಿಂದ ಹೊರಕ್ಕೆ ತಮ್ಮ ಯಾತ್ರೆಯನ್ನು ಪ್ರಾರಂಭಿಸಿಬಿಟ್ಟಿದ್ದರು. ನಾಡು ಅವರನ್ನು ನಾಯಕ ತಾರೆಯರಂತೆ ಮೆರೆಸಲಿಲ್ಲ ನಿಜ. ಆದರೆ ಅವರು ಈ ನಾಡಿನ ಕಲಾರಂಗದಲ್ಲಿ ಅಘೋಷಿತ ನಿತ್ಯತಾರೆಯಾಗಿ ಮಿನುಗುವಂತಹ ಶ್ರೇಷ್ಠರು. ಈ ನಮ್ಮ ಕರ್ನಾಟಕದಲ್ಲಿ ರಂಗಯಾತ್ರಿಯಾಗಿ ಹಾದುಹೋದ ಈ ಕ್ರಿಯಾಶೀಲ ಆರ್ ನಾಗೇಶ್ ರಂಗರಸಿಕರಮನಗಳಲ್ಲಿ ಚಿರವಿರಾಜಮಾನರು.

ಮಾಹಿತಿ ಆಧಾರ

ಉದಯವಾಣಿ, ಕಣಜ ಮತ್ತು ದಿ ಹಿಂದೂ ಮುಂತಾದೆಡೆಗಳಲ್ಲಿ ದೊರೆತ ಮಾಹಿತಿಗಳು

Tags:

ಆರ್. ನಾಗೇಶ್ ಜೀವನಆರ್. ನಾಗೇಶ್ ಕನ್ನಡವೆಂದರೆ ಪ್ರಾಣಆರ್. ನಾಗೇಶ್ ವೈಚಾರಿಕ ನಾಟಕಗಳ ಹರಿಕಾರಆರ್. ನಾಗೇಶ್ ರಂಗವಿಹಂಗಮ ಮತ್ತು ಸೂತ್ರಧಾರಆರ್. ನಾಗೇಶ್ ಪ್ರಶಸ್ತಿ ಗೌರವಗಳುಆರ್. ನಾಗೇಶ್ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷತೆಆರ್. ನಾಗೇಶ್ ವಿದಾಯಆರ್. ನಾಗೇಶ್ ಮಾಹಿತಿ ಆಧಾರಆರ್. ನಾಗೇಶ್ಮಾರ್ಚ್ ೧೩ಸೆಪ್ಟೆಂಬರ್ ೧೮೧೯೪೩೨೦೧೦

🔥 Trending searches on Wiki ಕನ್ನಡ:

ಎಸ್.ಜಿ.ಸಿದ್ದರಾಮಯ್ಯಬೆಳಗಾವಿಮೈಸೂರು ರಾಜ್ಯದ್ವಿರುಕ್ತಿಹಲ್ಮಿಡಿ ಶಾಸನಬೀಚಿಕಲೆಕನ್ನಡದಲ್ಲಿ ಸಣ್ಣ ಕಥೆಗಳುಹೊಸಗನ್ನಡಚನ್ನಬಸವೇಶ್ವರಎರಡನೇ ಎಲಿಜಬೆಥ್ಗಣಜಿಲೆಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುನ್ಯೂಟನ್‍ನ ಚಲನೆಯ ನಿಯಮಗಳುಅಕ್ಷಾಂಶಬಾದಾಮಿ ಶಾಸನಮಾನವ ಸಂಪನ್ಮೂಲ ನಿರ್ವಹಣೆನೀರಿನ ಸಂರಕ್ಷಣೆಕನ್ಯಾಕುಮಾರಿಅ. ರಾ. ಮಿತ್ರಸಂವಿಧಾನಬಸವೇಶ್ವರರಚಿತಾ ರಾಮ್ಸತೀಶ ಕುಲಕರ್ಣಿಭಾರತೀಯ ರೈಲ್ವೆದಾಸ ಸಾಹಿತ್ಯತೆರಿಗೆಜಯಂತ ಕಾಯ್ಕಿಣಿಬೆಳವಡಿ ಮಲ್ಲಮ್ಮಉತ್ತರ ಕನ್ನಡರಾಮ ಮನೋಹರ ಲೋಹಿಯಾಕಾಂತಾರ (ಚಲನಚಿತ್ರ)ವಾಣಿಜ್ಯ(ವ್ಯಾಪಾರ)ನಾಗಚಂದ್ರತಾಜ್ ಮಹಲ್ವೇದಮೈಸೂರು ದಸರಾಪಾಟೀಲ ಪುಟ್ಟಪ್ಪಭಾರತದಲ್ಲಿನ ಜಾತಿ ಪದ್ದತಿಚದುರಂಗ (ಆಟ)ಭೌಗೋಳಿಕ ಲಕ್ಷಣಗಳುಕೆಳದಿಯ ಚೆನ್ನಮ್ಮವ್ಯಾಪಾರವಿಮರ್ಶೆರಾಮಾಯಣಶ್ರವಣಬೆಳಗೊಳಖೊಖೊದಯಾನಂದ ಸರಸ್ವತಿದಲಿತವಿಷ್ಣುಶರ್ಮಕೊರೋನಾವೈರಸ್ ಕಾಯಿಲೆ ೨೦೧೯ರಾಯಚೂರು ಜಿಲ್ಲೆತಾಳಗುಂದ ಶಾಸನಆಗಮ ಸಂಧಿದೂರದರ್ಶನಮೊದಲನೆಯ ಕೆಂಪೇಗೌಡಭಾರತದಲ್ಲಿನ ಚುನಾವಣೆಗಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮುಟ್ಟುಶಿರ್ಡಿ ಸಾಯಿ ಬಾಬಾಕಪ್ಪೆಚಿಪ್ಪುಕರ್ನಾಟಕ ಹೈ ಕೋರ್ಟ್ಕನ್ನಡ ಸಾಹಿತ್ಯ ಪ್ರಕಾರಗಳುಅಕ್ಬರ್ರತ್ನತ್ರಯರುಮಾದಿಗಬಿ.ಎಸ್. ಯಡಿಯೂರಪ್ಪಬಾಲಕಾರ್ಮಿಕಪುಷ್ಕರ್ ಜಾತ್ರೆಭಾರತೀಯ ಸಶಸ್ತ್ರ ಪಡೆಛತ್ರಪತಿ ಶಿವಾಜಿಬಂಡಾಯ ಸಾಹಿತ್ಯಸರ್ವೆಪಲ್ಲಿ ರಾಧಾಕೃಷ್ಣನ್ಭಾರತೀಯ ಸಂವಿಧಾನದ ತಿದ್ದುಪಡಿಪರಿಸರ ವ್ಯವಸ್ಥೆಧರ್ಮಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಸೂಳೆಕೆರೆ (ಶಾಂತಿ ಸಾಗರ)🡆 More