ಪ್ರೀತಿ ಗೀತಿ ಇತ್ಯಾದಿ ೨೦೧೪ರಲ್ಲಿ ಬಿಡುಗಡೆಯಾಗಲಿರುವ ಕನ್ನಡ ಚಲನಚಿತ್ರ.
ಚಿತ್ರದ ಕಥೆಯನ್ನು ನಿರ್ದೇಶಕ ಯೋಗರಾಜ್ ಭಟ್ ಬರೆದಿದ್ದು, ನಿರ್ದೇಶನವನ್ನು ವೀರೇಂದ್ರರವರು ಮಾಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ಟರವರ ಗರಡಿಯಲ್ಲಿ ಪಳಗಿದವರಲ್ಲಿ ವೀರೇಂದ್ರ ಕೂಡ ಒಬ್ಬರು. ಚಿತ್ರದಲ್ಲಿ ಮೊದಲಬಾರಿಗೆ ಗೋವಿಂದಾಯ ನಮಃ ಚಿತ್ರದ ನಿರ್ದೇಶಕ ಪವನ ಒಡೆಯರ್ ನಾಯಕರಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಸಂಗೀತಾ ಭಟ್ ಕಾಣಿಸಿಕೊಳ್ಳುತ್ತಿದ್ದು, ರಂಗಾಯಣ ರಘು, ವಿನಯಾ ಪ್ರಕಾಶ್, ಜಾದವ್, ಸುದರ್ಶನ್ ರಂಗಪ್ರಸಾದ್, ನಭ ನಟೇಶ್, ರಾಜೇಶ್ ಭಗ್ನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೀತಿ ಗೀತಿ ಇತ್ಯಾದಿ | |
---|---|
ಪ್ರೀತಿ ಗೀತಿ ಇತ್ಯಾದಿ | |
ನಿರ್ದೇಶನ | ವೀರೇಂದ್ರ |
ನಿರ್ಮಾಪಕ | ವಿಜಯಕುಮಾರ್ ಮಂಗ್ಸುಳೆ |
ಚಿತ್ರಕಥೆ | ಯೋಗರಾಜ್ ಭಟ್, ವೀರೇಂದ್ರ ಮತ್ತು ತಂಡ |
ಕಥೆ | ಯೋಗರಾಜ್ ಭಟ್ |
ಸಂಭಾಷಣೆ | ವೀರೇಂದ್ರ |
ಪಾತ್ರವರ್ಗ | ಪವನ್ ಒಡೆಯರ್ ಸಂಗೀತಾ ಭಟ್ ರಂಗಾಯಣ ರಘು, ವಿನಯಾ ಪ್ರಕಾಶ್, ಜಾದವ್, ಸುದರ್ಶನ್ ರಂಗಪ್ರಸಾದ್, ನಭ ನಟೇಶ್, ರಾಜೇಶ್ ಭಗ್ನ |
ಸಂಗೀತ | ವೀರ್ ಸಮರ್ಥ್ |
ಛಾಯಾಗ್ರಹಣ | ಭಾಸ್ಕರ್ ವಿ. ರೆಡ್ಡಿ |
ಸಂಕಲನ | ಸುರೇಶ್ ಎಸ್.ಎ. |
ಬಿಡುಗಡೆಯಾಗಿದ್ದು | ೨೦೧೪ |
ನೃತ್ಯ | ಮುರಳಿ |
ಸಾಹಸ | ವಿನೋದ್ |
ಚಿತ್ರ ನಿರ್ಮಾಣ ಸಂಸ್ಥೆ | ಫ್ಯಾಂಟಸಿ ಸ್ಕ್ರೀನ್ಸ್ ಎಂಟರ್ಟೈನರ್ಸ್ ಪ್ರೈ.ಲಿ. |
ಸಾಹಿತ್ಯ | ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ವೀರೇಂದ್ರ |
ಹಿನ್ನೆಲೆ ಗಾಯನ | ಸೋನು ನಿಗಮ್, ಅಪೂರ್ವ ಶ್ರೀಧರ್, ಚೇತನ್ ಗಂಧರ್ವ, ರಾಹುಲ್ ನಂಬಿಯಾರ್, ಟಿಪ್ಪು |
ಪ್ರೀತಿ ಗೀತಿ ಇತ್ಯಾದಿ ಚಿತ್ರದ ಮುಖ್ಯಪಾತ್ರಧಾರಿ ಪವನ ಒಡೆಯರ್ ನಿರ್ದೇಶಕ ಯೋಗರಾಜ್ ಭಟ್ ತಂಡದದಿಂದ ಬಂದವರು. ಪವನ್ ಈಗಾಗಲೇ ಕೋಮಲ್ ಕುಮಾರ್ ಅಭಿನಯದ ಗೋವಿಂದಾಯ ನಮಃ ಚಿತ್ರವನ್ನು ನಿರ್ದೇಶಿಸಿ, ಆ ಚಿತ್ರದ "ಪ್ಯಾರ್ಗೆ ಆಗ್ಬಿಟೈತೆ" ಹಾಡಿನ ಮೂಲಕ ಸಂಚಲನ ಸೃಷ್ಟಿಸಿದವರು ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಗೋವಿಂದಾಯ ನಮಃ ಚಿತ್ರದ ತೆಲುಗು ಅವತರಣಿಕೆ “ಪೋಟುಗಾಡು” ನಿರ್ದೇಶಿಸಿ ಎಲ್ಲದರಲ್ಲೂ ಯಶಸ್ಸು ಕಂಡ ನಿರ್ದೇಶಕ. ಪವನ ಒಡೆಯರ್ ಮೂಲತಃ ನಾಟಕದ ಕುಟುಂಬದವರು. ಪವನ್ ಅವರ ತಾತ "ಜಮಖಂಡಿ ಗಜಾನನ ನಾಟಕ ಮಂಡಳಿ" ಯ ಸಂಸ್ಥಾಪಕರು. ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ಹುಟ್ಟಿ ಬೆಳೆದು ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಸಿನಿಮಾರಂಗಕ್ಕೆ ಬರುವ ಮುನ್ನ ನಾಟಕಗಳಲ್ಲಿ ಅಭಿನಯಿಸಿದ, ಕಾಲೇಜು ದಿನಗಳಲ್ಲಿ ವೇದಿಕೆಗಳಲ್ಲಿ ನೃತ್ಯದ ಮೂಲಕ ಗಮನ ಸೆಳೆದಿದ್ದವರು. ಈ ಮೊದಲು ಪವನ್ ತಮ್ಮ ನಿರ್ದೇಶನದಲ್ಲಿ ತಾವೇ ಅಭಿನಯಿಸುವ ಇಚ್ಚೆ ವ್ಯಕ್ತಪಡಿಸಿ "ನಟರಾಜ ಸರ್ವೀಸ್" ಎಂಬ ಶೀರ್ಷಿಕೆಯನ್ನು ಸುದ್ಧಿಮಾಧ್ಯಮಗಳಿಗೆ ಹೇಳಿಕೊಂಡಿದ್ದರು, ಕಾರಣಾಂತರಗಳಿಂದ ಆ ಚಿತ್ರವನ್ನು ಮುಂದೂಡಿ "ಗೂಗ್ಲಿ" ಚಿತ್ರವನ್ನು ನಿರ್ದೇಶಿಸಿ ಸಧ್ಯ ಪ್ರೀತಿ ಗೀತಿ ಇತ್ಯಾದಿಗೆ ಬಣ್ಣ ಹಚ್ಚಿದ್ದಾರೆ.
ಪ್ರೀತಿ ಗೀತಿ ಇತ್ಯಾದಿ ಚಿತ್ರದ ನಿರ್ದೇಶಕ ವೀರೇಂದ್ರ ಯೋಗರಾಜ್ ಭಟ್ಟರ ಗಾಳಿಪಟ, ಮನಸಾರೆ, ಪಂಚರಂಗಿ, ಮತ್ತು ಡ್ರಾಮಾ ಚಿತ್ರಗಳಿಗೆ, ದುನಿಯಾ ಸೂರಿ ಅವರ ಜಂಗ್ಲೀ, ಲೂಸಿಯಾ ಪವನ್ ಕುಮಾರ್ ಅವರ ಲೈಫು ಇಷ್ಟೇನೆ, ಗಡ್ಡ ವಿಜಿ ಅವರ ದ್ಯಾವ್ರೇ ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿ ಪ್ರೀತಿ ಗೀತಿ ಇತ್ಯಾದಿ ಮೂಲಕ ಈಗ ಸ್ವತಂತ್ರ ನಿರ್ದೇಶಕನಾಗುತ್ತಿದ್ದಾರೆ.
ಚಿತ್ರದ ನಾಯಕಿ ಸಂಗೀತ ಭಟ್ ಕೇರಳದ "ಕಾಸರಗೋಡು" ಮೂಲದವರು. ಮಂಗಳೂರಿನಲ್ಲಿ ಓದಿ, ಫ್ಯಾಶನ್ ಲೋಕಕ್ಕೆ ಕಾಲಿಟ್ಟು ಮಾಡೆಲಿಂಗ್ ನಲ್ಲಿ ಹೆಸರು ಮಾಡಿ ಕಿರುತೆರೆ ಧಾರಾವಾಹಿಗಳ ಮೂಲಕ ಅಭಿನಯ ಜಗತ್ತಿಗೆ ಕಾಲಿಟ್ಟರು. ಭಾರತಿ ವಿಷ್ಣುವರ್ಧನ್ ಅಭಿನಯಿಸಿದ್ದ "ಭಾಗ್ಯವಂತರು" ಧಾರವಾಹಿ ಮೂಲಕ ಸಂಗೀತಾ ಭಟ್ ಪ್ರತಿಭೆ ಬೆಳಕಿಗೆ ಬಂದದ್ದು. ಮಾಮೂ ಟೀ ಅಂಗಡಿ ಚಿತ್ರದ ಮೂಲಕ ಚಿತ್ರಜಗತ್ತಿಗೆ ಕಾಲಿಟ್ಟ ಸಂಗೀತಾ ಭಟ್ ಗೆ ಪ್ರೀತಿ ಗೀತಿ ಇತ್ಯಾದಿ ಎರಡನೇ ಚಿತ್ರ.
ನಿರ್ಮಾಪಕ "ವಿಜಯಕುಮಾರ್ ಮಂಗ್ಸುಳೆ" ಮೂಲತಃ ಬೆಳಗಾವಿಯ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರು. ಕಾಲೇಜು ದಿನಗಳಲ್ಲಿ ಚಿತ್ರನಿರ್ದೇಶಕನಾಗಬೇಕೆಂದು ಕಂಡ ಕನಸು ಕೈಗೂಡದೆ ಕಟ್ಟಡ ನಿರ್ಮಾಣ, ಬಟ್ಟೆ ಉದ್ಯಮ, ಒಳಾಂಗಣ ವಿನ್ಯಾಸ, ಕೋ-ಆಪರೇಟಿವ್ ಬ್ಯಾಂಕ್ ಇತ್ಯಾದಿ ಉದ್ಯಮಗಳಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡ ನಂತರ ೨೦೧೨ ರಿಂದ ಚಿತ್ರನಿರ್ಮಾಣಕ್ಕಿಳಿಯಲು ಕಾದಿದ್ದು, ಯೋಗರಾಜ್ ಭಟ್ಟರ ಜೊತೆ ಕೈ ಸೇರಿಸಿ ಪ್ರೀತಿ ಗೀತಿ ಇತ್ಯಾದಿ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದರು.
ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈಗಾಗಲೇ ಹಲವು ಉತ್ತಮ ಹಾಡುಗಳನ್ನು ಕೊಟ್ಟು ಹೆಸರು ಮಾಡಿದವರು. ಅವರ ಸಂಗೀತ ನಿರ್ದೇಶನದ ಕಾರಂಜಿ ಚಿತ್ರದ ಹಾಡುಗಳು ಬಹಳ ಹೆಸರು ಮಾಡಿದ್ದವು. ಇತ್ತೀಚೆಗೆ ತೆರೆಕಂಡು ವಿಮರ್ಶಕರ ಮೆಚ್ಚುಗೆ ಗಳಿಸಿದ್ ದ್ಯಾವ್ರೆ ಚಿತ್ರದ ಹಾಡುಗಳು ಕೂಡ ಕೇಳುಗರಿಗೆ ಇಷ್ಟವಾಗಿದ್ದವು.
ಛಾಯಾಗ್ರಾಹಕ ಭಾಸ್ಕರ್ ವಿ. ರೆಡ್ಡಿ ಅವರು ಕನ್ನಡದ ಹೆಸರಾಂತ ಛಾಯಾಗ್ರಾಹಕರಾದ ಕೃಷ್ಣ, ಸಂತೋಷ್ ರೈ ಪಾತಾಜೆ ಅಲ್ಲದೆ ತಮಿಳಿನ ದ್ವಾರಾಕಾನಾಥ್, ತ್ಯಾಗರಾಜನ್ ಜೊತೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದವರು. ಹವ್ಯಾಸಿ ಪಕ್ಷಿ ಛಾಯಾಗ್ರಾಹಕ.
ಸಂಕಲನಕಾರ ಸುರೇಶ್ ಎಸ್.ಎ. ಅವರು ತಮಿಳಿನ ಖ್ಯಾತ ಸಂಕಲನಕಾರ ಆಂಟನಿ ಅವರ ಬಳಿ ಸಹಾಯಕ ಸಂಕಲನಕಾರರಾಗಿ ಕೆಲಸ ಮಾಡಿದವರು. ಕನ್ನಡದಲ್ಲಿ ಪವನ್ ಕುಮಾರ್ ಅವರ ಲೈಫು ಇಷ್ಟೇನೆ, ಲೂಸಿಯಾ, ಯೋಗರಾಜ್ ಭಟ್ಟರ ಡ್ರಾಮಾ, ಗಡ್ಡ ವಿಜಿ ಅವರ ದ್ಯಾವ್ರೆ ಚಿತ್ರಗಳಲ್ಲದೇ ಇನ್ನು ಹಲವು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿದವರು.
45 ದಿನಗಳಲ್ಲಿ ಚಿತ್ರೀಕರಣವಾಗಿದ್ದು ಮೈಸೂರು, ತೀರ್ಥಹಳ್ಳಿ, ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಆಗಿದೆ. ಚಿತ್ರ ೨೦೧೪ರ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲವಾರ ತೆರೆಗೆ ಬರುವ ಸಾಧ್ಯತೆಗಳಿದೆ.
ಕ್ರಮ ಸಂಖ್ಯೆ | ಸಾಹಿತ್ಯ | ಹಾಡು | ಗಾಯಕರು |
---|---|---|---|
೧ | ಏನೆಲ್ಲಾ ಆಗುವುದು | ಯೋಗರಾಜ್ ಭಟ್ | ಸೋನು ನಿಗಮ್ |
೨ | ಪ್ರೀತಿ ಗೀತಿ ಬಂದರೇನೇ | ವೀರೇಂದ್ರ | ಅಪೂರ್ವ ಶ್ರೀಧರ್ |
೩ | ಮಾತಿಲ್ಲದೇ ಮರೆಯಾದರೂ | ಜಯಂತ್ ಕಾಯ್ಕಿಣಿ | ಚೇತನ್ ಗಂಧರ್ವ |
೪ | ಎಳೆದು ಬಿಟ್ಟ ಬಾಣದಂತೆ | ಯೋಗರಾಜ್ ಭಟ್ | ರಾಹುಲ್ ನಂಬಿಯಾರ್ |
೫ | ಏನೆಲ್ಲಾ ಆಗುವುದು | ಯೋಗರಾಜ್ ಭಟ್ | ಅಪೂರ್ವ ಶ್ರೀಧರ್ |
೬ | ತಿರುಬೋಕಿ ಟಕಟಕ | ಯೋಗರಾಜ್ ಭಟ್ | ಟಿಪ್ಪು |
This article uses material from the Wikipedia ಕನ್ನಡ article ಪ್ರೀತಿ ಗೀತಿ ಇತ್ಯಾದಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.