ರಾಜಗೋಪಾಲಚಾರಿ (ಡಿಸೆಂಬರ್ ೧೮೭೮ - ಡಿಸೆಂಬರ ೨೫, ೧೯೭೨) ಅವರನ್ನು ಭಾರತದ ಜನತೆ ಪ್ರೀತಿಯಿಂದ ರಾಜಾಜಿ ಎಂದು ಕರೆದರು. ಸ್ವಾತಂತ್ರ ಚಳುವಳಿಯ ಪ್ರಮುಖರಲ್ಲಿ ಪ್ರಮುಖರಾದ ಇವರು ವೃತ್ತಿಯಿಂದ ವಕೀಲರಾಗಿದ್ದರು. ಅಲ್ಲದೆ ಗಾಂಧೀಜಿ ಯವರ ಆಪ್ತಮಿತ್ರರಾಗಿದ್ದರು. ಭಾರತದ ಎರಡನೆಯ ಗವರ್ನರ್ ಜನರಲ್ ಆಗಿ ಕಾರ್ಯನಿರ್ವಹಿಸಿದ ಇವರು ಸ್ಟೇಟ್ಸ್ ಮ್ಯಾನ್ ಮತ್ತು ಹಿಂದೂ - ದಿನಪತ್ರಿಕೆಗಳಿಗೆ ಲೇಖಕರಾಗಿದ್ದರು.
ಜವಹರಲಾಲ್ ನೆಹರೂ, ಸರ್ದಾರ ವಲ್ಲಭಭಾಯ್ ಪಟೇಲ್, ರಾಜೇಂದ್ರ ಪ್ರಸಾದ್ ಹಾಗೂ ಮೌಲಾನಾ ಅಬುಲ್ ಕಲಮ್ ಆಜಾದ್ ರೊಂದಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಕಾಂಗ್ರೆಸ್ಸಿನ ಅತ್ಯುಚ್ಚ ನಾಯಕಮಣಿಗಳ ಪಂಕ್ತಿಯಲ್ಲಿ ರಾಜಾಜಿಯವರ ಹೆಸರೂ ಕೇಳಿಬರುತ್ತಿತ್ತು. ಸೇಲಂ ನ ಈ ಪ್ರಚಂಡ ವಕೀಲರನ್ನು ಒಂದು ಕಾಲದಲ್ಲಿ ಮಹಾತ್ಮಾ ಗಾಂಧಿಯವರ ಉತ್ತರಾಧಿಕಾರಿ ಎಂದೂ ಪರಿಗಣಿಸಲಾಗುತ್ತಿತ್ತು.
ರಾಜಾಜಿ ಮಹಾತ್ಮ ಗಾ೦ಧಿಯವರ ಬೀಗರೂ ಹೌದು - ರಾಜಾಜಿಯವರ ಮಗಳನ್ನು ಗಾಂಧಿಯವರ ಮಗನಿಗೆ ಕೊಡಲಾಗಿತ್ತು. ಖ್ಯಾತ ಪತ್ರಕರ್ತ ರಾಜಮೋಹನ ಗಾಂಧಿ ಇವರಿಬ್ಬರ ಮೊಮ್ಮಗ. ಗಾಂಧಿಯವರ ಮರಣದವರೆಗೂ ಅವರ ನೆರಳಿನಲ್ಲೇ ಇದ್ದ ರಾಜಾಜಿ, ನೆಹರೂ ಮತ್ತು ಪಟೇಲರನ್ನು ಗಾಂಧಿಯವರ“ ತಲೆ, ಹೃದಯ ಮತ್ತು ಕೈಗಳು” ಎಂದೇ ಭಾವಿಸಲಾಗಿತ್ತು. ಇವರು ಮೂವರ ಸಂಬಂಧ ಪರಸ್ಪರ ಸಿಹಿ-ಕಹಿಯದಾಗಿದ್ದರೂ, ಗಾಂಧಿಯವರ ವ್ಯಕ್ತಿತ್ವ ಹಾಗೂ ಎದುರಿಗಿದ್ದ ಒಂದೇ ಗುರಿ ಇವರನ್ನು ಒಟ್ಟುಗೂಡಿಸಿತ್ತು. ಆದರೂ ಇವರಿಗೆ ಪರಸ್ಪರ ಬಗ್ಗೆ ಅಪಾರ ಗೌರವವಿತ್ತು.
ನೆಹರೂ ತಮ್ಮ ಆತ್ಮಕಥೆಯಲ್ಲಿ ರಾಜಾಜಿಯವರ “ಪ್ರಖರ ಬುಧ್ಧಿಮತ್ತೆ, ನಿಸ್ಸ್ವಾರ್ಥ ಮನೋಭಾವ ಹಾಗೂ ಅವರ ಪ್ರಚಂಡ ವಿಮರ್ಶಾಶಕ್ತಿ ಇವೆಲ್ಲವೂ ನಮ್ಮ ಗುರಿ ಸಾಧಿಸುವೆಡೆಯಲ್ಲಿ ದೊಡ್ಡ ಆಸ್ತಿಯಾಗಿತ್ತು” ಎಂದು ಬರೆಯುತ್ತಾರೆ.
1940ರ ದಶಕದಲ್ಲಿಯೇ ಭಾರತ ವಿಭಜಿತವಾಗುವ ಸಂಭವವನ್ನು ಮುಂಗಂಡ ಕಾಂಗ್ರೆಸ್ ನಾಯಕರುಗಳಲ್ಲಿ ರಾಜಾಜಿ ಒಬ್ಬರಾಗಿದ್ದರು. ಅಷ್ಟೇ ಅಲ್ಲ, ಹಾಗೆ ಅಸ್ತಿತ್ವಕ್ಕೆ ತರಲ್ಪಟ್ಟ ಪಾಕಿಸ್ತಾನವು ಇಪ್ಪತ್ತೈದು ವರ್ಷಗಳಲ್ಲಿಯೇ ಮತ್ತೊಮ್ಮೆ ಹೋಳಾಗುತ್ತದೆ ಎಂದೂ ಭವಿಷ್ಯ ನುಡಿದಿದ್ದರು! ರಾಜಾಜಿ ತಮ್ಮ ರಾಜಕೀಯ ನೀತಿಗಳ ಉಗ್ರ ಸಮರ್ಥಕರಾಗಿದ್ದು, ಅವುಗಳ ಸಮರ್ಥನೆಯಲ್ಲಿ, ತಮ್ಮ ನಿಕಟವರ್ತಿಗಳೊಂದಿಗೂ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಹಿಂಜರೆಯುತ್ತಿರಲಿಲ್ಲ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷ್ ಸೆರೆವಾಸದ ರುಚಿ ಉಂಡ ರಾಜಾಜಿ ನಂತರ 1946ರಲ್ಲಿ ರಾಜ್ಯಪಾಲರ ಮಂಡಳಿಯ ಸದಸ್ಯರಾದರು. ಸ್ವಾತಂತ್ರ್ಯ ಪಡೆದ ನಂತರ, 1948ರಲ್ಲಿ ಮೌಂಟ್ ಬ್ಯಾಟನ್ನ ರ ಜಾಗದಲ್ಲಿ ಗವರ್ನರ್ ಜನರಲ್ ಎಂದು ನೇಮಕ ವಾಗಿ (ಆ ಹುದ್ದೆಯನ್ನಲಂಕರಿಸಿದ ಏಕೈಕ ಭಾರತೀಯ). 1950, ಜನವರಿ 26ರಂದು ಭಾರತ ಗಣರಾಜ್ಯವಾಗುವವರೆಗೂ ಅದೇ ಹುದ್ದೆಯಲ್ಲಿ ಮುಂದುವರೆದರು.
ಆ ನಂತರ ಗವರ್ನರ್ ಜನರಲ್ ಹುದ್ದೆಯ ಜಾಗದಲ್ಲಿ, ರಾಷ್ಟ್ರಪತಿಗಳ ಹುದ್ದೆ ಬಂದು ರಾಜೇಂದ್ರ ಪ್ರಸಾದರು ಮೊದಲನೇ ರಾಷ್ಟ್ರಪತಿಗಳಾಗಿ ನೇಮಕವಾದರು.
ನೆಹರೂ ಮಂತ್ರಿಮಂಡಳದಲ್ಲಿ ಖಾತಾರಹಿತ ಮಂತ್ರಿಯಾಗಿ ನೇಮಕಗೊಂಡ ರಾಜಾಜಿ, ಪಟೇಲರ ನಿಧನದ ನಂತರ, ಗೃಹ ಮಂತ್ರಿಗಳಾದರು. 1952ರಿಂದ 1954ರವರೆಗೆ ಅವರು ಆಗಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಸರ್ಕಾರಿ ಪದವಿಗಳಿಂದ ಹೊರಬಂದ ಅವರು , ಭಾರತದ ಅತ್ಯುಚ್ಚ ಗೌರವ “ಭಾರತ ರತ್ನ” ವನ್ನು ಪಡೆದವರಲ್ಲಿ ಒಬ್ಬರಾದರು.
ಸ್ವತಂತ್ರ ಪಕ್ಷ ಸ್ಥಾಪನೆ
ಕಾಂಗ್ರೆಸ್ ಸಕ್ರಿಯ ರಾಜಕೀಯದಿಂದ ನಿವೃತ್ತರಾದ ಮೇಲೆ ರಾಜಾಜಿ, ನೆಹರೂ ಹಾಗೂ ಕಾಂಗ್ರೆಸ್ಸಿನ ಕಟು ಟೀಕಾಕಾರರಾದರು. 1950ರ ದಶಕದಲ್ಲಿ ಸ್ವತಂತ್ರ ಪಕ್ಷ ಸ್ಥಾಪಕರಲ್ಲಿ ಒಬ್ಬರಾದ ಅವರು, ನೆಹರೂರ ಸಮಾಜವಾದೀ ಧೋರಣೆಯು ಜನಪ್ರಿಯವಾಗಿದ್ದರೂ, ಲೈಸೆನ್ಸ್ ಪರ್ಮಿಟ್ ರಾಜ್ಯವನ್ನೂ ಹಾಗೂ ಅದರಿಂದ ಉಂಟಾಗುವ ಭ್ರಷ್ಟಾಚಾರ ಹಾಗೂ ದೇಶದ ಪ್ರಗತಿಯ ಧಕ್ಕೆಯನ್ನೂ ವಿರೋಧಿಸಿದರು.
ತಮ್ಮ ಪತ್ರಿಕೆ ಸ್ವರಾಜ್ಯದಲ್ಲಿ ಅವರು ಹೀಗೆ ಬರೆಯುತ್ತಾರೆ: " ಕೈಗಾರಿಕಾ ರಂಗದಲ್ಲಿ ಪೈಪೋಟಿಯನ್ನು ಪ್ರೋತ್ಸಾಹಿಸುವುದೂ, ಹೆಚ್ಚಿನ ಉತ್ಪತ್ತಿಗೆ ಕುಮ್ಮಕ್ಕು ಕೊಡುವುದೂ ಸರ್ಕಾರಿ ಹಾಗೂ ಖಾಸಗೀ ಹಿತಾಸಕ್ತಿಗಳೆರಡಕ್ಕೂ ಒಳ್ಳೆಯದು. ಸರ್ಕಾರಿ ಅಧಿಕಾರಿಗಳಿಗೂ, ಮಂತ್ರಿಗಳಿಗೂ ಪರವಾನಗಿಗಳಿಗಾಗಿ ಡೊಗ್ಗು ಸಲಾಮು ಹೊಡೆಯುವ ಅಗತ್ಯವಿರದ, ಪ್ರತಿಭೆ ಹಾಗೂ ಪರಿಶ್ರಮದಿಂದ ಕೆಲಸ ಮಾಡುವ, ಹಾಗೂ ಈ ಪ್ರಯತ್ನಗಳ ಫಲಾಫಲಗಳ ನಿಷ್ಕರ್ಷೆ ಭಾರತ ಹಾಗೂ ಭಾರತದ ಹೊರಗಿನ ಮುಕ್ತ ಮಾರುಕಟ್ಟೆಯಲ್ಲಿ ಆಗುವಂಥಾ ವಾತಾವರಣದ ಭಾರತ ನನಗೆ ಬೇಕಾಗಿದೆ. ಸರಕಾರಿ ಕಾರುಭಾರಿನ ಅದಕ್ಷತೆಗಳು ಹೋಗಿ ಖಾಸಗೀ ಒಡೆತನದ ಪೈಪೋಟಿಯ ಆರ್ಥಿಕ ಪಧ್ಧತಿ ನನಗೆ ಬೇಕು. ಭ್ರಷ್ಟ ಲೈಸೆನ್ಸ್ ಪರ್ಮಿಟ್ ರಾಜ್ಯ ನಿರ್ಮೂಲವಾಗಬೇಕು. ಸರಕಾರಿ ಕಾನೂನುಗಳು, ನೀತಿಗಳನ್ನು ಜಾರಿಗೆ ತರುವ ಹೊಣೆಹೊತ್ತ ಅಧಿಕಾರಿಗಳು ಆಡಳಿತ ಪಕ್ಷದ ನಾಯಕರ ಒತ್ತಡಗಳಿಂದ ಹೊರಬಂದು, ತಮ್ಮ ಮೊದಲಿನ ನಿರ್ಭೀತ ನಡವಳಿಕೆಗಳಿಗೆ ಮರಳಬೇಕಾಗಿದೆ. ಎಲ್ಲಾ ನಾಗರೀಕರಿಗೂ ಸಮಾನ ಅವಕಾಶಗಳು ಸಿಗಬೇಕಾಗಿದೆ. ಲೈಸೆನ್ಸ್ ಪರ್ಮಿಟ್ ರಾಜ್ಯ ಖಾಸಗೀ ಏಕಸ್ವಾಮ್ಯಗಳನ್ನು ಸೃಷ್ಟಿಸಕೂಡದು. ದೊಡ್ಡ ಕೈಗಾರಿಕೆಗಳ ಹಣಸಂಪತ್ತು ರಾಜಕೀಯಕ್ಕೆ ಪ್ರವೇಶ ಮಾಡಕೂಡದು. ಭಾರತದಲ್ಲಿ ಜನರ ನಡವಳಿಕೆಗಳು ಧರ್ಮದಿಂದ ಪ್ರಭಾವಿತವಾಗಬೇಕೇ ವಿನಹ ದುರಾಸೆಯಿಂದ ಅಲ್ಲ”.
ರಾಜಾಜಿ ಈ ಮಾತನ್ನು ಹೇಳಿದ ಅನೇಕ ದಶಕಗಳ ನಂತರ, 1950ರ ದಶಕದಲ್ಲಿ ಹಾಕಲಾಗಿದ್ದ ಆಡಳಿತಾತ್ಮಕ ಕಟ್ಟುಪಾಡುಗಳನ್ನು ಹಂತ ಹಂತವಾಗಿ ಸಡಿಲಗೊಳಿಸಲಾಗುತ್ತಿದೆ. ಭಾರತದ ಆರ್ಥಿಕ ಪರಿಸ್ಥಿತಿಯು ದಾಪುಗಾಲಿನಿಂದ ಸುಧಾರಣೆಯಾಗುತ್ತಿದ್ದು, ಬೆಳವಣಿಗೆಯ ಗತಿ ಪ್ರಪಂಚ ದಲ್ಲಿಯೇ ಅತಿ ಹೆಚ್ಚಿನ ಗತಿಗಳಲ್ಲೊಂದಾಗಿದೆ. ಈ ಎಲ್ಲ ವಿದ್ಯಮಾನಗಳ ದೆಸೆಯಿಂದ, ಅನೇಕರು ರಾಜಾಜಿ ಮತ್ತು ಸ್ವತಂತ್ರ ಪಕ್ಷದ ಆಗಿನ ನಿಲುವುಗಳನ್ನು ಪುನಃ ಪರಿಶೀಲನೆ ಮಾಡುತ್ತಿದ್ದಾರೆ.
ಧರ್ಮ, ಸಾಹಿತ್ಯ ಮತ್ತು ಕಾವ್ಯ
ರಾಜಾಜಿ ತನ್ನ ಸ್ವಂತ ಲೇಖನಗಳೊಂದಿಗೇ, ಅನೇಕ ಮುಖ್ಯ ಭಾರತೀಯ ಹಾಗೂ ಹಿಂದೂ ಧಾರ್ಮಿಕ ಕೃತಿಗಳ ಆಂಗ್ಲ ಭಾಷೆಯ ಭಾಷಾಂತರವನ್ನೂ ಮಾಡಿದ್ದಾರೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಶಂಕರಾಚಾರ್ಯರ ಭಜಗೋವಿಂದಂ ಇವುಗಳ ಭಾಷಾಂತರಗಳು ಇಂದಿಗೂ ಬಳಕೆಯಲ್ಲಿವೆ. ಅವರು ರಾಮಾಯಣವನ್ನು ತಮಿಳಿಗೂ ತರ್ಜುಮೆ ಮಾಡಿದರು.
ಕರ್ನಾಟಕ ಸಂಗೀತದ ದೊಡ್ಡ ಪ್ರತಿಭೆ, ಎಂ.ಎಸ್ ಸುಬ್ಬುಲಕ್ಷ್ಮಿ ರಾಜಾಜಿಯವರ ಕೆಲವು ಕವಿತೆಗಳನ್ನು ಸಂಗೀತಕ್ಕೆ ಅಳವಡಿಸಿ ಅನೇಕ ಮುಖ್ಯ ಕಾರ್ಯಕ್ರಮಗಳಲ್ಲಿ, ಕುರೈ ಒನ್ರುಮ್ ಇಲ್ಲೈ (ಭಗವಂತಾ, ನನಗಿನ್ನೇನೂ ಅಪೇಕ್ಷೆ ಉಳಿದಿಲ್ಲ....) ಎಂಬ ಅರೆ-ಶಾಸ್ತ್ರೀಯ ಮಟ್ಟಿನಲ್ಲಿ ರಾಜಾಜಿ ಬರೆದ ಹಾಡು ಬಹಳ ಜನಪ್ರಿಯವಾಗಿದೆ. ಇದರ ಒಂದು ಹೃದಯಸ್ಪರ್ಶಿ ಆವೃತ್ತಿಯನ್ನು ಎಂ.ಎಸ್ ಸುಬ್ಬುಲಕ್ಷ್ಮಿ ಹಾಡಿದ್ದಾರೆ. ರಾಜಾಜಿ ಬರೆದ "Here under this Uniting Roof" ಸ್ತುತಿಯನ್ನು 1966ರಲ್ಲಿ ಎಂ.ಎಸ್ ಸುಬ್ಬುಲಕ್ಷ್ಮಿಸಂಯುಕ್ತ ರಾಷ್ಡ್ರ ಸಂಘದಲ್ಲಿ ಹಾಡಿದ್ದರು.
ರಾಜಾಜಿಯವರನ್ನು ಬಹಳಷ್ಟು ಜನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ರಂಗಗಳಲ್ಲಿ ಆಳವಾದ, ಸ್ವಂತಿಕೆಯ ಚಿಂತಕರೆಂದು ಪರಿಗಣಿಸುತ್ತಾರೆ. ರಾಜಾಜಿಯವರ ವಿದ್ಯಾರ್ಥಿ ಜೀವನದಲ್ಲಿ ನಡೆಯಿತೆನ್ನಲಾದ ಒಂದು ಘಟನೆ ಜನಪ್ರಿಯವಾಗಿದೆ. ಒಮ್ಮೆ ಸ್ವಾಮಿ ವಿವೇಕಾನಂದರು ಅವರ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದರಂತೆ. ಅಲ್ಲಿ ಗೋಡೆಯ ಮೇಲಿನ ವಿಷ್ಣುವಿನ ಚಿತ್ರ ನೋಡಿ, ವಿದ್ಯಾರ್ಥಿಗಳಿಗೆ ವಿಷ್ಣುವಿನ ಎಲ್ಲಾ ಚಿತ್ರಗಳಲ್ಲೂ ಮೈ ಬಣ್ಣ ನೀಲಿ ಏಕಿರುತ್ತದೆ? ಎಂದು ಕೇಳಿದರಂತೆ. ವಿಷ್ಣು ನೀಲಿ ಆಕಾಶದಂತೆ, ನೀಲ ಸಮುದ್ರದಂತೆ ಅನಂತ. ಆದ್ದರಿಂದಲೇ ಅವನ ಮೈ ಬಣ್ಣ ನೀಲಿ ಎಂದು ರಾಜಾಜಿ ಉತ್ತರ ಕೊಟ್ಟರಂತೆ. ವಿವೇಕಾನಂದರು ಈ ಉತ್ತರ ಕೇಳಿ ಬಹಳ ಸಂತೋಷ ಪಟ್ಟರಂತೆ.
ಸುಮಾರು ಎಂಟು ದಶಕಗಳನ್ನು ಸಾರ್ವಜನಿಕ ಜೀವನದಲ್ಲಿ ಸವೆಸಿದ ರಾಜಾಜಿಯವರ ಕೊಡುಗೆಯನ್ನು ಅರಿಯಲು ಗಾಂಧೀಜಿ ಅವರನ್ನು “ನನ್ನ ಅಂತಃಪ್ರಜ್ಞೆಯ ರಕ್ಷಕ " ಎಂದು ಬಣ್ಣಿಸಿದ ರೀತಿ ಸಾಕು. ತೊಂಭತ್ತು ದಾಟಿದ್ದ ರಾಜಾಜಿ , ಲಘು ಅಸ್ವಸ್ಥತೆಯ ನಂತರ, ಡಿಸೆಂಬರ್ 25, 1972ರಂದು ತೀರಿಕೊಂಡರು.
This article uses material from the Wikipedia ಕನ್ನಡ article ಸಿ. ರಾಜಗೋಪಾಲಚಾರಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.