ಅನುಪಮಾ ನಿರಂಜನ (ಮೇ ೧೭, ೧೯೩೪ - ಫೆಬ್ರುವರಿ ೧೫, ೧೯೯೧) ಅವರು ಕನ್ನಡ ನಾಡಿನಲ್ಲಿ ಪ್ರಸಿದ್ಧ ಬರಹಗಾರ್ತಿ ಯಾಗಿ, ವೈದ್ಯರಾಗಿ ಜನಾನುರಾಗಿಗಳಾಗಿ ಅಪಾರವಾದ ಹೆಸರು, ಪ್ರಸಿದ್ಧಿ ಪಡೆದು ಅನುಪಮ ಬಾಳ್ವೆ ನಡೆಸಿದವರು.
ಅನುಪಮಾ ನಿರಂಜನ ಅವರು ೧೯೩೪ರ ಮೇ ೧೭ರಂದು ತೀರ್ಥಹಳ್ಳಿಯಲ್ಲಿ ಜನಿಸಿದರು. ಅನುಪಮಾ ಅವರಿಗೆ ತಂದೆ-ತಾಯಿ ಕೊಟ್ಟ ಹೆಸರು ವೆಂಕಟಲಕ್ಷ್ಮಿ. ವೃತ್ತಿಯಿಂದ ಅವರು ವೈದ್ಯರು. ಕುಟುಂಬದವರ ವಿರೋಧವನ್ನು ಎದುರಿಸಿ, ಕನ್ನಡದ ಮತ್ತೊಬ್ಬ ಪ್ರಮುಖ ಸಾಹಿತಿ ನಿರಂಜನ (ಕುಳಕುಂದ ಶಿವರಾವ್) ಅವರನ್ನು ಅಂತರ್ಜಾತೀಯ ವಿವಾಹವಾಗಿ ಸಮಾಜಕ್ಕೆ ಆದರ್ಶವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು - ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಜೊತೆಜೊತೆಗೇ ಅವರು ಕನ್ನಡದಲ್ಲಿ ಸಾಹಿತ್ಯರಚನೆಯನ್ನೂ ಮಾಡಿದರು. ಅವರೊಬ್ಬ ಜನಪ್ರಿಯ ಲೇಖಕಿ. ಅವರ ಕಾದಂಬರಿಗಳು ಜನಪ್ರಿಯ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಹರಿದು ಬಂದವು. ಕಡೆಯ ದಿನಗಳಲ್ಲಿ ಅನುಪಮಾ ನಿರಂಜನ ಅವರು ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದರೂ, ತಮ್ಮ ಜೀವಿತದ ಕೊನೆಯವರೆಗೆ ಸಾಹಿತ್ಯ ಸೇವೆಯನ್ನು ನಿಲ್ಲಿಸಲಿಲ್ಲ.
ಸಾಹಿತ್ಯ ಸೇವೆ
ವೃತ್ತಿಯಲ್ಲಿ ವೈದ್ಯರಾದ ಅನುಪಮಾ ಅವರು ಕನ್ನಡ ಕಾದಂಬರಿ ಕ್ಷೇತ್ರವು ತನ್ನ ಆಳ ಅಗಲಗಳನ್ನು ವಿಸ್ತರಿಸಿಕೊಂಡು ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಆ ಕ್ಷೇತ್ರಕ್ಕೆ ಕಾಲಿಟ್ಟರು. ಒಬ್ಬ ಒಳ್ಳೆಯ ವೈದ್ಯರಾಗುವುದರ ಜೊತೆಗೆ ಗಟ್ಟಿ ಸಾಹಿತಿಯಾಗಿ ಬೆಳೆದು ನಿಂತರು. ಕುಳಕುಂದ ಶಿವರಾಯ ರೆಂದೇ ಚಿರಪರಿಚಿತರಾಗಿದ್ದ ನಿರಂಜನ ಅವರೊಂದಿಗೆ ನಡೆದ ವಿವಾಹ, ಅವರಿಗೆ ಲೇಖಕಿಯಾಗಿ ತಮ್ಮ ಗುರಿಯನ್ನು ಸಾಧಿಸುವಲ್ಲಿ ಮತ್ತಷ್ಟು ಸಹಕಾರಿಯಾಯಿತು. ಡಾ.ಅನುಪಮಾ ನಿರಂಜನ ಅವರು ಬುದ್ದಿವಿಕಾಸಕ್ಕೆ ಪ್ರೇರಕವಾಗಬಲ್ಲ ವಿಚಾರ ಸಾಹಿತ್ಯದ ಜೊತೆಗೆ ವೈದ್ಯಕೀಯ ಗ್ರಂಥಗಳನ್ನು ಸಹ ರಚಿಸಿದರು.
ಪ್ರಗತಿಶೀಲರ ಪ್ರಗತಿಪರ ಧೋರಣೆ, ಬಂಡಾಯ ಮನೋಭಾವ, ನವ್ಯರ ಆತ್ಮಶೋಧನೆ ಮತ್ತು ಕಲಾತ್ಮಕತೆ ಹೀಗೆ ವಿವಿಧ ಸಾಹಿತ್ಯಕ ಮನೋಧರ್ಮಗಳು ಡಾ.ಅನುಪಮಾ ನಿರಂಜನರ ಕಾದಂಬರಿಗಳಲ್ಲಿ ಮೇಳೈಸಿವೆ. ಪ್ರಗತಿಶೀಲ, ನವ್ಯ, ನವ್ಯೋತ್ತರಕ್ಕೆ ಪರಿಚಯವಿಲ್ಲದ ವೈದ್ಯಕೀಯ ಕ್ಷೇತ್ಯದ ಅನುಭವಗಳು, ಮನೋವೈಜ್ಞಾನಿಕ ವಿಶ್ಲೇಷಣೆಗಳು ಸಹಾ ಇವರ ಬರವಣಿಗೆಗಳಲ್ಲಿ ವಿಜೃಂಬಿಸುವುದರಿಂದ ಡಾ.ಅನುಪಮಾರವರು ಎಲ್ಲ ಕಾಲದ ಲೇಖಕರ ನಡುವೆಯೂ ಪ್ರಮುಖರಾಗಿ ಗಮನ ಸೆಳೆಯುತ್ತಾರೆ. ಅನುಪಮಾ ಅವರ ಕಾದಂಬರಿಗಳಲ್ಲಿ ಕಾಣುವ ವಸ್ತುನಿಷ್ಟತೆ, ಮನೋವೈಜ್ಞಾನಿಕ ವಿಶ್ಲೇಷಣೆ, ವೈಚಾರಿಕತೆ, ಬಂಡಾಯ ಪ್ರವೃತ್ತಿ, ಮಾನವೀಯ ಸಂಭಂಧಗಳ ನಿರೂಪಣೆ ಇವೆಲ್ಲಾ ಕಾದಂಬರಿ ಕ್ಷೇತ್ರಕ್ಕೆ ಹೊಸ ಮಜಲುಗಳನ್ನು ಕೊಟ್ಟಿವೆ.
ಈ ಎಲ್ಲಾ ಹಿನ್ನೆಲೆಗಳಲ್ಲಿ ಡಾ.ಅನುಪಮಾ ಅವರು ಕನ್ನಡದಲ್ಲಿ ವಿಶಿಷ್ಟ ಲೇಖಕಿಯಾಗಿ ನಿಲ್ಲುತ್ತಾರೆ. ಅನುಪಮ ಅವರು ಸಾಹಿತ್ಯದ ವಿವಿಧ ಪ್ರಕಾರಗಳಾದ- ಕಾದಂಬರಿ, ಕಥಾಸಂಕಲನ, ವೈದ್ಯಕೀಯ ಕೃತಿ, ಪ್ರವಾಸಸಾಹಿತ್ಯ, ಆತ್ಮಕಥೆ, ಅನುವಾದ, ನಾಟಕ, ಶಿಶುಸಾಹಿತ್ಯ ಮೊದಲಾದುವುಗಳಲ್ಲಿ ಸಾಹಿತ್ಯ ರಚಿಸಿ ಜನಪ್ರಿಯರಾಗಿದ್ದಾರೆ. ಅವರು ಸುಧಾ ವಾರಪತ್ರಿಕೆಯಲ್ಲಿ ಬರೆದಿದ್ದ ಒಂದು ಲೇಖನ "ಸಾವು ಒಳಗೆ ಬರಬಹುದೇ ? ಎಂದಾಗ ತಡಿ, ಸ್ವಲ್ಪ ಕೆಲಸವಿದೆ ಎಂದೆ!" ಎಂಬುದು ಬಹಳಷ್ಟು ಓದುಗರ ಮನವನ್ನು ಆರ್ದ್ರವಾಗಿಸಿತು.
ಕೃತಿಗಳು
ಇವರು ಕಾದಂಬರಿ, ವೈದ್ಯಕೀಯ ಪುಸ್ತಕಗಳು ಸೇರಿದಂತ ಹಲವಾರು ವಿಷಯಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರ ಹಲವಾರು ಕಥೆ ಹಾಗೂ ಕಾದಂಬರಿಗಳು ಭಾರತೀಯ ಇತರ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಅನೇಕ ಕೃತಿಗಳನ್ನು ಮೈಸೂರಿನ ಡಿ.ವಿ.ಕೆ. ಮೂರ್ತಿ ಪ್ರಕಟಿಸಿದ್ದಾರೆ.
ಕಾದಂಬರಿಗಳು
ಡಾ.ಅನುಪಮಾ ಅವರ ಕಾದಂಬರಿಗಳಲ್ಲಿ ‘ಮಾಧವಿ’ಯಂತಹ ಪೌರಾಣಿಕ ಕಾದಂಬರಿಯನ್ನು ಹೊರತುಪಡಿಸಿದರೆ, ಉಳಿದ ಬಹುತೇಕ ಕಾದಂಬರಿಗಳಲ್ಲಿ ಸಾಮಾಜಿಕ ವಸ್ತುವೇ ಪ್ರಧಾನವಾಗಿದೆ.
ಅನಂತಗೀತ
ಶ್ವೇತಾಂಬರಿ
ಹಿಮದ ಹೂ
ಆಳ
ದಿಟ್ಟೆ
ಸಂಕೋಲೆಯೊಳಗಿಂದ
ನೂಲು ನೇಯ್ದ ಚಿತ್ರ
ಘೋಷ
ಹೃದಯವಲ್ಲಭ
ಆಕಾಶಗಂಗೆ
ಸಸ್ಯ ಶ್ಯಾಮಲಾ
ಋಣ
ಮೂಡಣ ಪಡುವಣ
ಚಿತ್ತ ಮೋಹನ
ಕಣಿವೆಗೆ ಬಂತು ಬೇಸಿಗೆ
ಪರೀಕ್ಷೆ
ನಟಿ
ಮಾಧವಿ
ಕೊಳಚೆ ಕೊಂಪೆಯ ದನಿಗಳು
ಎಳೆ
ಸೇವೆ
ಮುಕ್ತಿಚಿತ್ರ
ಮೂಲಮುಖಿ
ಸ್ನೇಹ ಪಲ್ಲವಿ
ಋಣಮುಕ್ತಳು (ಈ ಕಾದಂಬರಿ ಕಣಗಾಲ್ ಪುಟ್ಟಣ್ಣನವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿಬಂತು.)
ಕಥಾ ಸಂಕಲನಗಳು
ಕಣ್ಮಣಿ
ರೂವಾರಿಯ ಲಕ್ಷ್ಮಿ
ನೀರಿಗೆ ನೈದಿಲೆ ಶೃಂಗಾರ
ಏಳುಸುತ್ತಿನ ಮಲ್ಲಿಗೆ
ಹೃದಯ ಸಮುದ್ರ
ಗಿರಿಧಾಮ
ಒಡಲು
ಪುಷ್ಪಕ
ಒಂದು ಗಿಣಿಯ ಕಥೆ
ಶಿಶುಸಾಹಿತ್ಯ
ದಿನಕ್ಕೊಂದು ಕಥೆ - 12 ಸಂಪುಟಗಳು: ೩೬೫ ಕಥೆಗಳು. ‘ದಿನಕ್ಕೊಂದು ಕಥೆ’ ಎಂಬ ಕಥಾಮಾಲಿಕೆ ಶಿಶುಸಾಹಿತ್ಯಕ್ಕೆ ಅನುಪಮಾ ಅವರ ಅನುಪಮ ಕೊಡುಗೆಯಾಗಿದೆ. ದಿನಕ್ಕೊಂದು ಕಥೆ ಕನ್ನಡದಲ್ಲಿ ಪುರಾಣ ಕಥೆಗಳನ್ನು, ಇತರ ದೇಶಗಳ ಕಥೆಗಳನ್ನು, ಜಾನಪದ ಕಥೆಗಳನ್ನು ಒಟ್ಟುಗೂಡಿಸಿ ಸರಳವಾಗಿ ಹೆಣೆಯಲಾದ ಸಂಪುಟಗಳ ಮಾಲಿಕೆ. ವರ್ಷವಿಡೀ ದಿನಕ್ಕೊಂದು ಕಥೆಯಂತೆ ಓದಿಕೊಂಡು ಹೋಗಬಲ್ಲಂತೆ 365 ಕಥೆಗಳಿವೆ.
"ಹೇಗೂ ನೂರಾರು ಕಥೆ ಬರೀತೀರಿ. ಮುನ್ನೂರ ಅರವತ್ತೈದೇ ಬರೆದ್ಬಿಡಿ. ದಿನಕ್ಕೊಂದು ಕಥೆಯಾಗ್ತದೆ" ಎಂದರು ಪತಿ ಶ್ರೀ ನಿರಂಜನ, ಈ ರೀತಿ 'ದಿನಕ್ಕೊಂದು ಕಥೆ'ಯ ಉದಯವಾಯಿತು” ಎಂದು ಈ ಕತೆಗಳಲ್ಲಿನ ಮುನ್ನುಡಿಯಲ್ಲಿ ಡಾ. ಅನುಪಮ ನಿರಂಜನ ಬರೆದಿದ್ದಾರೆ.
ವೈದ್ಯಕೀಯ ಕೃತಿಗಳು
ದಾಂಪತ್ಯ ದೀಪಿಕೆ
ವಧುವಿಗೆ ಕಿವಿಮಾತು
ಕೇಳು ಕಿಶೋರಿ
ತಾಯಿ-ಮಗು
ಸ್ತ್ರೀಸ್ವಾಸ್ಠ್ಯ ಸಂಹಿತೆ
ಕೆಂಪಮ್ಮನ ಮಗು
ಆರೋಗ್ಯಭಾಗ್ಯಕ್ಕೆ ವ್ಯಾಯಾಮ
ಶುಭಕಾಮನೆ
ಆಹಾರದಿಂದ ಆರೋಗ್ಯ
ಕ್ಯಾನ್ಸರ್ ಜಗತ್ತು
ಆರೋಗ್ಯ ದರ್ಶನ
ಶಿಶುವೈದ್ಯ ದೀಪಿಕೆ
ಒತ್ತಡದ ಬೇನೆಗಳು
'ಕೇಳು ಕಿಶೋರಿ', 'ದಾಂಪತ್ಯ ದೀಪಿಕೆ' ಹಾಗೂ 'ತಾಯಿ ಮಗು' ಕೃತಿಗಳು ಅನೇಕ ಮುದ್ರಣಗಳನ್ನು ಕಂಡು ಜನಪ್ರಿಯವಾಗಿವೆ.
ಪ್ರವಾಸಸಾಹಿತ್ಯ
ಸ್ನೇಹ ಯಾತ್ರೆ
ಅಂಗೈಯಲ್ಲಿ ಯುರೊ ಅಮೆರಿಕ
ಆತ್ಮಕತೆ
ನೆನಪು : ಸಿಹಿ-ಕಹಿ
ಬರಹಗಾರ್ತಿಯ ಬದುಕು
ನಾಟಕ
ಕಲ್ಲೋಲ
ಅನುವಾದ
ಲೊಲ್ಲ್ಜ್ ಇಝ್ಬ್
ಮಹಿಳೆ, ದಾಂಪತ್ಯಕತೆ-ವಿಜ್ಞಾನ
ದಾಂಪತ್ಯ ದೀಪಿಕೆ
ವಧುವಿಗೆ ಕಿವಿಮಾತು
ವನಿತಾವಾಣಿ
ಶುಭಕಾಮನೆ
ಮಾನಿನಿ
ಪ್ರಶಸ್ತಿ ಗೌರವಗಳು
ಸಾಹಿತ್ಯ ಅಕಾಡೆಮಿ ಪುರಸ್ಕಾರ
ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ
ಕಾಸರಗೋಡು ಮಹಿಳಾ ಸಮ್ಮೇಳನದ ಅಧ್ಯಕ್ಷತೆ
ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
ವಿದಾಯ
ಸಾಹಿತ್ಯಕವಾಗಿ, ವೃತ್ತಿಪೂರ್ವಕವಾಗಿ ಮತ್ತು ಸಾಮಾಜಿಕವಾಗಿ ಮಹತ್ವದ ಸಾಧನೆಗಳನ್ನು ಮಾಡಿದ ಡಾ. ಅನುಪಮಾ ನಿರಂಜನ ಅವರು ಫೆಬ್ರುವರಿ ೧೫, ೧೯೯೧ರ ವರ್ಷದಲ್ಲಿ ನಿಧನರಾದರು. ಸಹೃದಯ ಮನೋಭಾವ, ಶ್ರೇಷ್ಠ ಮಾನವೀಯಗುಣ, ಹಲವು ಪ್ರತಿಭೆಗಳ ಸಂಗಮ ರಾದ ಡಾ. ಅನುಪಮಾ ನಿರಂಜನ ಅವರ ನೆನಪು ಶಾಶ್ವತವಾದದ್ದು. ಸಾವು ಕಣ್ಮುಂದೆ ಇದ್ದರೂ ಧೃತಿಗೆಡದೆ ಅವರು ಬದುಕಿದ ಪರಿ ಅನನ್ಯ, ಸ್ಮರಣೀಯವಾದುದಾಗಿದೆ.
ಉಲ್ಲೇಖಗಳು
This article uses material from the Wikipedia ಕನ್ನಡ article ಅನುಪಮಾ ನಿರಂಜನ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.