ಎಮಿಲಿ ಎಲಿಜಬೆತ್ ಡಿಕಿನ್ಸನ್ (1830-1886).
ಅಮೆರಿಕದ ಪ್ರಸಿದ್ಧ ಕವಯಿತ್ರಿಗಳಲ್ಲಿ ಒಬ್ಬರು.
ವಕೀಲನೊಬ್ಬನ ಮಗಳಾದ ಈಕೆ ಹುಟ್ಟಿದ್ದು ಮ್ಯಾಸಚೂಸಿಟ್ಸ್ನ ಅಮಸ್ಟ್ನಲ್ಲಿ. ಇಲ್ಲಿಯೇ ಈಕೆ ತನ್ನ ಜೀವಿತದ ಬಹುಭಾಗವನ್ನು ಕಳೆದಳು. ಮೌಂಟ್ ಹೋಲ್ಯೋಕ್ ಫೀಮೇಲ್ ಸೆಮಿನರಿಯಲ್ಲಿ ಓದಿದ ಈಕೆ ಪ್ರೀತಿ ಮತ್ತು ಹಾಸ್ಯಮನೋಭಾವಗಳಿಗೆ ಪ್ರಸಿದ್ಧಳಾದಳು. ಚಿಕ್ಕವಳಾಗಿದ್ದಾಗಲೇ ಹಳ್ಳಿಯ ಸಮಾಜಕಾರ್ಯಗಳಲ್ಲಿ ಪ್ರಮುಖಪಾತ್ರ ವಹಿಸಿದಳು. 1854ರಲ್ಲಿ ಈಕೆಯ ತಂದೆಯ ಜೊತೆಯಲ್ಲಿ ವಾಷಿಂಗ್ಟನ್ಗೆ ಪ್ರಯಾಣ ಬೆಳೆಸುವಾಗ ಯುವಕ ಪಾದ್ರಿಯೊಬ್ಬನನ್ನು ಪ್ರೇಮಿಸಿ ಆತ ಮದುವೆಯಾದವನೆಂದು ತಿಳಿದಾಗ ಭಗ್ನಹೃದಯಿಯಾದಳು. ಅಲ್ಲಿಂದಾಚೆಗೆ ಏಕಾಂತಜೀವನವನ್ನು ನಡೆಸಿದಳು. ಮನೆಯ ಹೊಸ್ತಿಲನ್ನು ದಾಟದೆ ಅನೇಕ ವರ್ಷಗಳನ್ನು ಕಳೆದಳು. ಒಂದು ಸಾವಿರಕ್ಕಿಂತಲೂ ಹೆಚ್ಚು ಭಾವಗೀತೆಗಳನ್ನು ತುಂಡು ಕಾಗದದ ಮೇಲೆ ಅಥವಾ ಬಳಸಿದ ಲಕ್ಕೋಟೆಗಳ ಹಿಂದೆ ಬರೆದಿಟ್ಟಳು. ಈಕೆ ಬದುಕಿರುವಾಗ ಕೇವಲ ಎರಡು ಪದ್ಯಗಳು ಪ್ರಕಟವಾಗಿದ್ದವು. ಈಕೆಯ ಕಾಲಾನಂತರ ಈಕೆಯ ಸಹೋದರಿ ಲಾವಿನಿಯಾ ಈಕೆಯ ಕವನಗಳನ್ನು ಹುಡುಕಿ ಕಲೆಹಾಕಿ ಮೂರು ಸಂಪುಟಗಳಲ್ಲಿ ಪ್ರಕಟಿಸಿದಳು (1890, 1891, 1896). ಮುಂದಿನ ಸಂಪುಟಗಳನ್ನು ದಿ ಸಿಂಗಲ್ ಹೌಂಡ್ (1914), ಫರ್ದರ್ ಪೊಯೆಮ್ಸ್ (1929) ಎಂಬ ಹೆಸರಿನಲ್ಲಿ ಪ್ರಕಟವಾದವು. 1894ರಲ್ಲಿ ಈಕೆಯ ಪತ್ರಗಳನ್ನು ಪ್ರಕಟಿಸಲಾಯಿತು. 1955ರಲ್ಲಿ ಟಿ.ಎಚ್.ಜಾನ್ಸನ್ ಈಕೆಯ ಕವನಗಳನ್ನು ಸಂಪಾದಿಸಿ, ಪ್ರಕಟಿಸಿದ. ಈಕೆಯ ಕವನಗಳ ಮುಖ್ಯ ವಿಷಯ: ದೇವರು, ಸಾವು, ಪ್ರೇಮ ಮತ್ತು ನಿಸರ್ಗ. ಈ ಬಗೆಗೆ ಇವಳ ಮನೋಧರ್ಮ ಹೊಸತೆನಿಸುವಷ್ಟು ಭಿನ್ನವಾದರೂ ದೇವರನ್ನು ಚೋರ, ಬ್ಯಾಂಕರ್, ತಂದೆ ಎಂದು ಸಂಬೋಧಿಸುತ್ತಾಳೆ. ಮೃದುವಾದ ಅಥವಾ ಚುಚ್ಚುವ ಕಟಕಿಯನ್ನು ಈಕೆಯ ಕವನಗಳಲ್ಲಿ ಧಾರಾಳವಾಗಿ ಕಾಣಬಹುದು.
ಸಾಂಪ್ರದಾಯಿಕ ಲ್ಯಾಟಿನ್ ಮತ್ತು ಒರಟಾದ ಆಂಗ್ಲೋ ಸಾಕ್ಸನ್ ಸಂಯುಕ್ತ ಭಾಷಾ ಪ್ರಯೋಗವನ್ನು ಎಮಿಲಿ ಡಿಕಿನ್ಸನ್ಳ (1830-1886) ಕಾವ್ಯದಲ್ಲಿ ಕಾಣಬಹುದು. 19ನೇ ಶತಮಾನದ ಅಮೇರಿಕಾದ ಮೇರು ಕವಯತ್ರಿ ಎಮಿಲಿ ಡಿಕಿನ್ಸನ್ ಸಾಹಿತ್ಯ ಪ್ರಪಂಚಕ್ಕೆ ತನ್ನನ್ನು ತಾನು ಅನಾವರಣ ಮಾಡಿಕೊಂಡ ರೀತಿ ಸಾಹಿತ್ಯ ಪ್ರೇಮಿಗಳಿಗೆ ಒಂದು ಅಚ್ಚರಿ. ಅಮೇರಿಕಾದ ಚಿಕ್ಕ ಪಟ್ಟಣ ಅಮ್ಹರೆಸ್ಟ ನಲ್ಲಿ ಹುಟ್ಟಿತನ್ನ ಮೂವತ್ತನೇ ವಯಸ್ಸಿಗೆ ಲೌಕಿಕ ಸುಖಭೋಗಗಳನ್ನು ತ್ಯಜಿಸಿ ಏಕಾಂತ ಬದುಕನ್ನು ಆಯ್ಕೆ ಮಾಡಿಕೊಂಡು, ಒಬ್ಬ ಸನ್ಯಾಸಿನಿಯಂತೆ ಬದುಕನ್ನು ನೋಡಿದ್ದರ ಫಲವಾಗಿ ಪಡೆದ ಜೀವನಾನುಭವವನ್ನು 1775 ಕವನಗಳ ಮೂಲಕ ಕಾವ್ಯಲೋಕಕ್ಕೆ ಅರ್ಪಣೆ ಮಾಡಿರುತ್ತಾಳೆ. ಎಮಿಲಿಯ ಕಾವ್ಯದಲ್ಲಿ ಹುಟ್ಟು-ಸಾವು, ಪ್ರೀತಿ ಮತ್ತು ಪ್ರಕೃತಿಯಿಂದ ಆಯ್ದ ರೂಪಕಗಳು ಮತ್ತೆ ಮತ್ತೆ ಕಾಣಸಿಗುತ್ತವೆ. ನಮ್ರ-ವಿನಮ್ರ, ಭಯ-ಧೈರ್ಯ, ಕೌಟುಂಬಿಕ-ಜಾಗತಿಕ ಭಾವನೆಗಳು ಸೂಕ್ತವಾಗಿ ಸಂಸ್ಕಾರಗೊಂಡಿವೆ.
ಸಾವನ್ನು ವಿಶ್ಲೇಷಿಸುವ ಈಕೆಯ ಜನಪ್ರಿಯ ಪದ್ಯ ‘ರಥ' (ಅhಚಿಡಿioಣ) ಈ ಪದ್ಯದಲ್ಲಿ ಸಾವಿನ ಪರಿಕಲ್ಪನೆ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ.ಇಲ್ಲಿ ಸಾವೂ ಒಂದು ಪಾತ್ರ. ಸಾಮಾನ್ಯವಾಗಿ ‘ಸಾವು' ಎಲ್ಲರಲ್ಲಿ ಭೀತಿ ಮತ್ತು ತಲ್ಲಣಗಳನ್ನು ಉಂಟುಮಾಡುತ್ತದೆ. ಈ ಪದವು ನಿಷ್ಕ್ರೀಯತೆಯ ಸಂಕೇತವಾಗಿದೆ. ಜಡತೆಯೆಂಬುದು ಸಾವು ಮತ್ತು ಚಲನಶೀಲತೆಯೆಂಬುದು ಬದುಕು ಎಂದು ನಾವು ತಿಳಿದಿರುತ್ತೇವೆ. ಆದುದರಿಂದ ಯಾವ ವ್ಯಕ್ತಿಯೂ ಜಡವಾಗಲು ಬಯಸುವುದಿಲ್ಲ. ಸದಾ ಬದುಕಬೇಕೆಂಬುದು ಮಾನವ ಸಹಜ ಹಂಬಲವಾಗಿದೆ. ಕ್ರಮೇಣ ಈ ಹಂಬಲವು ವ್ಯಾಮೋಹವಾಗಿ ಪರಿಣಮಿಸಿದೆ. ಈ ಅದಮ್ಯ ಒತ್ತಾಸೆಯನ್ನು ಪೂರೈಸಿಯೇ ತೀರುತ್ತೇನೆ ಎಂಬ ಭ್ರಮೆಯಲ್ಲಿ ಮನುಷ್ಯನಿದ್ದಾನೆ. ಹುಟ್ಟು ಸಕಜ; ಸಾವು ಖಚಿತವೆಂಬ ನಿಸರ್ಗ ಸತ್ಯವನ್ನು ಒಪ್ಪುವುದಿಲ್ಲ. ಯಾರೂ ಬಯಸದ, ಪ್ರೀತಿಸದ, ಆರಾಧಿಸದ ವಿಷಯವೆಂದರೆ ‘ಸಾವು' ಮಾತ್ರ. ಇದು ಅಪ್ರಿಯವಾದುದು. ಆದರೂ ಇದು ಬದುಕಿನ ಸಹಜ ಪ್ರಕ್ರಿಯೆಯಾಗಿದೆ. ಪ್ರಕೃತಿ ಸಹಜವಾದ ಈ ಕ್ರಿಯೆಯನ್ನು ಅಸಹಜಗೊಳಿಸಲು ಹಾಗು ಜಯಿಸಲು ವಿಶೇಷವಾಗಿ ಆಧುನಿಕ ಮನುಷ್ಯನು ಸದಾ ಪ್ರಯತ್ನಿಸುತ್ತಿರುತ್ತಾನೆ. ಸಾವನ್ನು ಗೆಲ್ಲಲು ತನ್ನೆಲ್ಲಾ ಜ್ಞಾನ, ಬುದ್ಧಿಶಕ್ತಿ, ಅಧಿಕಾರ ಮತ್ತು ಸಂಪತ್ತನ್ನು ಬಳಸಿ ಸಾವನ್ನು ಮೆಟ್ಟಿ ಅದರ ಅಧಿಪತಿಯಾಗಲು ಚಿಂತನೆ ಮಾಡುತ್ತಾನೆ. ಮಾನವನ ಸಹಜ ಪ್ರವೃತ್ತಿಯಾದ ಸಾವನ್ನು ಎಮಿಲಿಡಿಕಿನ್ಸನ್ ತನ್ನ ಪದ್ಯ ‘ರಥ' ದಲ್ಲಿ ವಿಭಿನ್ನ ನೆಲೆಯಲ್ಲಿ ವಿಶಿಷ್ಟವಾಗಿ ರಚಿಸಿದ್ದಾಳೆ. ಈ ಕವಿತೆಯು “ಃeಛಿಚಿuse I ಛಿouಟಜ ಟಿoಣ sಣoಠಿ ಜಿoಡಿ ಜeಚಿಣh.... ಊe ಞiಟಿಜಟಥಿ sಣoಠಿಠಿeಜ ಜಿoಡಿ me.... ಎಂಬುದಾಗಿ ಪ್ರಾರಂಭವಾಗುತ್ತದೆ. ಕವಿತೆಯ ಆರಂಭದಲ್ಲಿಯೇ ಸಾವಿಗೆ ವ್ಯಕ್ತಿತ್ವವನ್ನು ಆರೋಪಿಸಿ ತನ್ನ ವ್ಯವಹಾರವನ್ನು ಉಲ್ಲೇಖಿಸುತ್ತಾಳೆ. ಕವಯತ್ರಿಯು ಸಾವನ್ನು ತಡೆಯುವುದುಲ್ಲ. ಏಕೆಂದರೆ ಸಾವು ಸಭ್ಯತೆಯಿಂದ ರಥವನ್ನು ತನಗಾಗಿ, ತನ್ನ ಸಹಪ್ರಯಾಣಕ್ಕಾಗಿ ನಿಲ್ಲಿಸಿದನೆಂದು ಆಕೆ ನಂಬಿದ್ದಾಳೆ. ಇಲ್ಲಿ ಸಾವು ವ್ಯಕ್ತಿರೂಪಕವಾಗಿದೆ. ಈ ವ್ಯಕ್ತಿಯು ರಥದ ಸಾರಥಿಯಂತೆ ರಥಾರೂಢನಾಗಿ ಕವಯತ್ರಿಯ ಮನೆಯ ಮಾರ್ಗವಾಗಿ ಆಗಮಿಸುವಾಗ ನಾಗರೀಕನಂತೆ ಸಭ್ಯವಾಗಿ ವರ್ತಿಸುತ್ತಾನೆ ಅನ್ನುವ ಅವಳ ಭಾವ, ಅತೀಂದ್ರಯಕಾಲ್ಪನಿಕ ಕಾವ್ಯಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಸಾಮಾನ್ಯವಾಗಿ ಸಾವಿನ-ರಥಾರೂಡ ಸಾರಥಿಯು ರೌಧ್ರತೆಯಿಂದಲೂ, ಕ್ರೂರತೆಯಿಂದಲೂ, ಧರ್ಪದಿಂದಲೂ, ಜಾಗ್ರತೆಯಿಂದಲೂ ಹಾಗು ಗಾಂಭೀರ್ಯದಿಂದಲೂ ಇರುವನೆಂಬ ನಂಬಿಕೆ ನಮ್ಮದು. ಆದರೆ 'ರಥ' ಪದ್ಯದಲ್ಲಿ ಸಾವು ಒಬ್ಬ ಯುವರಾಜಕುಮಾರ, ಪ್ರೇಮಿ. ಸಾವಿನ ಪ್ರಿಯತಮೆಯಾಗಿ ಅನನ್ಯತೆಯ ಹೊಸದಿಗಂತದ ಕಡೆ ತನ್ನ ಮಹಾಯಾನವನ್ನು ಆನಂದದಿಂದ ಎಮಿಲಿ ಆರಂಭಿಸುತ್ತಾಳೆ. ಸಾವನ್ನೇ ಆಲಂಗಿಸಿ ಸಾವಿನೊಂದಿಗೆ ಪ್ರೀತಿಯ ಅನಂತವನ್ನು ಕಾಣುವ ಸಂಭ್ರಮಕ್ಕೆ ಅನುಭೂತಿಯಾಗುತ್ತಾಳೆ. ಸಾವಿನ ಅನಂತ ಮಹಾ ಮನೆಗೆ ಈ ಅಮರ ಪ್ರೇಮಿಗಳು ಚಲಿಸುವಾಗ ಕವಯತ್ರಿಯ ನಲ್ಲನು ಯಾವುದೇ ಆತುರವಿಲ್ಲದೆ, ಪ್ರಸನ್ನನಂತಿದ್ದು ನಾಗರೀಕನಂತೆ ವರ್ತಿಸಿದನೆಂಬುದನ್ನು ಅನುಭಾವಿಸುತ್ತಾಳೆ. ಇಹಲೋಕದ ತನ್ನೆಲ್ಲಾ ಒತ್ತಾಸೆಗಳನ್ನು / ಆಕರ್ಷಣೆಗಳನ್ನು ಬದಿಗೊತ್ತಿ ಬಯಲಾಗಿ ಮಿತ ವಿಶ್ರಾಂತವನ್ನು ಮರೆತು ಅಮಿತವಾದ ಚಿರಶಾಂತಿಯ ಅದೃಶ್ಯ ವೃತ್ತದತ್ತ ಮುನ್ನೆಡೆಯುತ್ತಾಳೆ. ನಲ್ಲನ ವಿನಮ್ರತೆಗೆ, ವಿವೇಕಕ್ಕೆ ಮನಸೋತು ಮಣಿದಯ ತನ್ನನ್ನು ತಾನು ಮರೆಯುತ್ತಾಳೆ.
ತನ್ನ ಬಹುಪಾಲು ಖಾಸಗಿ ಜೀವನವನ್ನು ಏಕಾಂಗಿಯಾಗಿ ಕಳೆದ ಎಮಿಲಿ ಡಿಕಿನ್ಸನ್ ಸಾಮಾಜಿಕ ಜೀವನದಿಂದ ಹೊರಗುಳಿಸಿದ್ದವಳು. ಆದರೆ ಸಾವಿನ ಜೊತೆಯಲ್ಲಿ ತನ್ನ ಸಹಪ್ರಯಾಣದ ಮಾರ್ಗದಲ್ಲಿ ಬಹು ದಿನಗಳ ನಂತರ, ತನ್ನ ಬಾಲ್ಯದ ತುಣುಕುಗಳನ್ನು, ತಾನು ಕಂಡ ಶಾಲಾಮಕ್ಕಳ ನಲಿದಾಟಗಳನ್ನು, ಹೊಲಗದ್ದೆಗಳಲ್ಲಿ ಮೇಯುವ ಹಸುಗಳ ಹಿಂಡನ್ನು ನೋಡುತ್ತಾ ನಲ್ಲನೊಡನೆ ಸೂರ್ಯಾಸ್ತವನ್ನು ದಾಟಿ ಸಾವಿನ ಮನೆಯನ್ನು ತಲುಪುತ್ತಾಳೆ. ಸೃಷ್ಟಿಯಲ್ಲಿ ವಾಸ್ತವವಾಗಿ ಯಾವೊಬ್ಬ ವ್ಯಕ್ತಿಯೂ ಸಾವಿನ ಮನೆಯ ಅನುಭವವನ್ನು ಕಂಡು ಅರಿತ ಸಾಕ್ಷಿಗಳಿಲ್ಲ. ಕೆ.ಎಸ್. ನರಸಿಂಹಸ್ವಾಮಿಯವರು ಚಿತ್ರಿಸಿರುವ, "ಆದರವಿರದ, ಛಾವಣಿಕಾಣದ, ಕದವಿರದ ತಿರುಗಿಬಾರದ, ಆದಿಯಿರದ ಆ ಕಡೆ ಮನೆಗೆ....."
ಈ ಪ್ರೇಮಿಗಳು ಸಾಗುತ್ತಾರೆ. ಅನುಭಾವಿ ಕವಯತ್ರಿ ಎಮಿಲಿಗೆ ಈ ಸಾವಿನ ಮನೆಯಲ್ಲಿ ಭೂಲೋಕದಲ್ಲಿದ್ದಂತೆ ಕಾಲಚಕ್ರದ ಚಲನವಲನವಿಲ್ಲದೆ ಶತಮಾನಗಳು ಕ್ರಮಿಸಿದರೂ ಒಂದೇ ದಿನ ಕಳೆದಂತೆ ಭಾಸವಾಗುತ್ತದೆ. ಮರಣೋತ್ತರ ಸ್ಥಿತಿಗೆ ಸಹಜವೆಂಬಂತೆ ಕುದುರೆಗಳು ಆದಿ ಅಂತ್ಯಗಳಿಲ್ಲದ ದಿಕ್ಕಿಗೆ ನೋಡುತ್ತಲೇ ಇವೆ ಎಂದು ಸಂಶಯದೊಂದಿಗೆ ಈ ಸಾವಿನ ಪದ್ಯ ಕೊನೆಗೊಳ್ಳುತ್ತದೆ,
ಪದ್ಯವು ಸಾವಿಗೆ ಜೀವಕಳೆಯನ್ನು ತುಂಬಿ, ಒಬ್ಬ ವ್ಯಕ್ತಿಯನ್ನಾಗಿ ಚಿತ್ರಿಸಿ ಆತನನ್ನು ಒಲಿಸಿ ವರಿಸಿರುವುದನ್ನು ತಿಳಿಸುತ್ತದೆ. ಸಾವೇ ನೋವು ಎಂದು ಪರಿಭಾವಿಸಲಾಗಿರುವ ಮಾನವ ಪ್ರಪಂಚದಲ್ಲಿ ಎಮಿಲಿ ಡಿಕಿನ್ಸನ್ ಸಾವನ್ನು ಅನುಭಾವಿಸಿರುವುದು ಒಂದು ವಿಭಿನ್ನ ಪ್ರಯತ್ನವಾಗಿದೆ. ಸಾಕ್ರೆಟಿಸ್ ಮತ್ತು ಯೇಸುಕ್ರಿಸ್ತ ನಂತಹವರು ಸಾವನ್ನು ಸಂತೋಷವಾಗಿ ಅನುಭವಿಸಿದರು ಎಂಬುದನ್ನು ಚರಿತ್ರೆಯ ಪುಟಗಳು ಕಂಡಿವೆ. ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನನ್ನನೇ ತನ್ನ ಪತಿಯನ್ನಾಗಿ ಆರಾಧಿಸುವ ಮೂಲಕ ಐಕ್ಯವಾದಂತೆ ಎಮಿಲಿಡಿಕಿನ್ಸನ್ ಸಾವಿನೊಂದಿಗೆ ನಡೆಸಿರುವ ಅನುಸಂದಾನ ಈ ಪದ್ಯದಲ್ಲಿ ಸೊಗಸಾಗಿ ಮೂಡಿದೆ.
This article uses material from the Wikipedia ಕನ್ನಡ article ಎಮಿಲಿ ಡಿಕಿನ್ಸನ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.