ಆಲ್ಫ್ರೆಡ್ ಮಹಾಶಯ(849 – 26 ಒಕ್ಟೊಬರ್ 899) ವೆಸೆಕ್ಸಿನ ರಾಜ.
ಪ್ರಾಚೀನ ಗ್ರೇಟ್ ಬ್ರಿಟನ್ನಿನ ಇತಿಹಾಸದಲ್ಲಿ ಪ್ರಸಿದ್ಧನಾದವ. ಅಥೆಲ್ವುಲ್ಫ ರಾಜನ ಐದನೆಯ ಮಗ. ತನ್ನ ಹಿರಿಯ ನಾಲ್ಕು ಜನ ಸಹೋದರರು 858-871ರವರೆಗೆ ಒಬ್ಬರಾದ ಮೇಲೊಬ್ಬರಂತೆ ಕ್ರಮವಾಗಿ ರಾಜ್ಯವಾಳಿ ಅಕಾಲಮರಣಕೀಡಾದುದರಿಂದ ಆಲ್ಫ್ರೆಡ್ 871ರಲ್ಲಿ ಸಿಂಹಾಸನಕ್ಕೆ ಬಂದ. ಅಂದಿನ ಅತಿಮುಖ್ಯವಾದ ರಾಜಕೀಯ ಘಟನೆಯೆಂದರೆ ಕೊಳ್ಳೆ ಹೊಡೆಯಲು ದಂಡೆತ್ತಿ ಬಂದ ಡೇನರನ್ನು ಸೋಲಿಸಿದುದು. ಬಾಲ್ಯದಿಂದಲೂ ಆಲ್ಫ್ರೆಡನಿಗೆ ಡೇನರೆ ಹಾವಳಿ ಮನದಟ್ಟಾಗಿತ್ತು. ಪಟ್ಟಕ್ಕೆ ಕೂಡಲೆ ಈತ ಡೇನರ ದಾಳಿಯಿಂದ ದೇಶವನ್ನು ಪಾರುಮಾಡಲು ಸಿದ್ಧನಾದ. ಬಲವಾದ ನೌಕಾದಳವನ್ನು ಕಟ್ಟಿದ. ಸೈನ್ಯವನ್ನು ವಿಸ್ತರಿಸಿ, ಸುಧಾರಣೆಗಳನ್ನು ಜಾರಿಗೆ ತಂದ. ಅನೇಕ ಸಾರಿ ಡೇನರನ್ನು ಸೋಲಿಸಿ ಓಡಿಸಿದ. ಕೊನೆಗೆ 876ರಲ್ಲಿ ಸಂಪುರ್ಣವಾಗಿ ಶರಣಾಗತನಾದ ಡೇನಿಷ್ ರಾಜ ಗುತ್ರಮ್ನಿಗೆ ಕ್ರೈಸ್ತಮತ ದೀಕ್ಷೆಯನ್ನು ಕೊಡಿಸಿ ಮುಂದೆ ಎಂದೂ ದಂಡೆತ್ತಿ ಬರದಂತೆ ಷರತ್ತನ್ನು ವಿಧಿಸಿ ಲಾಡನ್ ಪ್ರದೇಶದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿದ. ಹೀಗೆ ಆಂಗ್ಲೋಸಾಕ್ಸನ್ ಪ್ರದೇಶವನ್ನು ಡೇನರ ಆಕ್ರಮಣದಿಂದ ಪಾರುಮಾಡಿದ.
ಧೀರನೂ ದೇಶವತ್ಸಲನೂ ದೂರದೃಷ್ಟಿಯುಳ್ಳವನೂ ಆದ ಆಲ್ಫ್ರೆಡ್ ದೊರೆ ತನ್ನ ಆರ್ಥಿಕ ಸುಧಾರಣೆಗಳಿಂದ ಪ್ರಜೆಗಳ ಮೇಲ್ಮೆಯನ್ನು ಸಾಧಿಸಿದ. ಕಾನೂನುಗಳನ್ನು ಕ್ರೋಢೀಕರಿಸಿ ವ್ಯವಸ್ಥಿತವಾದ ನ್ಯಾಯನಿಬಂಧನೆಯನ್ನು ಜಾರಿಗೆ ತಂದ. ಪ್ರಜೆಗಳ ವಿದ್ಯಾಭ್ಯಾಸಕ್ಕೆ ವಿಶೇಷ ಗಮನಕೊಟ್ಟ. ಶ್ರೀಮಂತರ ಹಾಗೂ ಸಾಮಾನ್ಯರ ಮಕ್ಕಳು ಕಲಿಯಲನುಕೂಲ ವಾಗುವಂತೆ ಶಾಲೆಗಳನ್ನು ಸ್ಥಾಪಿಸಿದ. ಲ್ಯಾಟಿನ್ ಭಾಷೆಯಲ್ಲಿದ್ದ ಮುಖ್ಯ ಗ್ರಂಥಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಲು ವಿದ್ವಾಂಸರನ್ನು ನಿಯೋಜಿಸಿದ. ಅಸರ್ ಎಂಬ ವಿದ್ವಾಂಸ ಈತನ ಆಸ್ಥಾನದಲ್ಲಿ ಪ್ರಮುಖನಾದವ. ಈತ ಆಲ್ಫ್ರೆಡ್ನಿಗೆ ಮಹಾಶಯನ ಜೀವನಚರಿತ್ರೆಯನ್ನು ವಿಶದವಾಗಿ ಬರೆದಿದ್ದಾನೆ. ಆಲ್ಪ್ರೆಡ್ನಿಗೆ ಸಂಗೀತದಲ್ಲಿ ವಿಶೇಷವಾದ ಅಭಿರುಚಿಯಿತ್ತು. ಜಾನಪದ ಸಾಹಿತ್ಯವನ್ನು ಕಲೆಹಾಕಿ ಅವುಗಳ ಬೆಳೆವಣಿಗೆಗೆ ಪ್ರೋತ್ಸಾಹಕೊಟ್ಟ. ದೈವ ಭಕ್ತನಾದ ಆಲ್ಫ್ರೆಡ್ ಮತೀಯ ನಂಬಿಕೆಗಳನ್ನು ಸುಧಾರಿಸಿದ. ಇಂಗ್ಲೆಂಡಿನ ಪ್ರಾಚೀನ ಇತಿಹಾಸವನ್ನು (ಆಂಗ್ಲೋ ಸ್ಯಾಕ್ಸನ್ ಕ್ರಾನಿಕಲ್) ರಚಿಸಲು ವಿದ್ವಾಂಸರನ್ನು ನಿಯೋಜಿಸಿದ. ಶತಮಾನಗಳು ಕಳೆದಂತೆಲ್ಲ ಈ ದೇಶಭಕ್ತನ ಹೆಸರು ಜನಮನದಲ್ಲಿ ಶಾಶ್ವತವಾಗಿ ಉಳಿಯಿತು. ಈತನ ಬಹುಮುಖ ಸೇವೆಯಿಂದ ಉಪಕೃತವಾದ ರಾಷ್ಟ್ರ ಈತನನ್ನು ರಾಷ್ಟ್ರಸಂಸ್ಥಾಪಕನೆಂದು ಪರಿಗಣಿಸಿತು. ಇಂಗ್ರೆಂಡಿನ ಚರಿತ್ರೆಯಲ್ಲಿ ಈತ ಆಲ್ಫ್ರೆಡ್ ಮಹಾಶಯ ಎಂದು ಪ್ರಸಿದ್ಧಿ ಪಡೆದಿದ್ದಾನೆ. ಇವನ ವಿಚಾರದಲ್ಲಿ ಪ್ರಚಲಿತವಾಗಿರುವ ಅನೇಕ ಆಖ್ಯಾನಕಗಳು ಇವನ ಪ್ರಜಾವಾತ್ಸಲ್ಯವನ್ನೂ ದಕ್ಷತೆಯನ್ನೂ ವಿದ್ಯಾಪಕ್ಷಪಾತವನ್ನೂ ವರ್ಣಿಸುತ್ತವೆ. ವಿದ್ವಾಂಸರ ನೆರವನ್ನು ಪಡೆದು ಲ್ಯಾಟಿನ್ ಭಾಷೆಯಿಂದ ಮತ, ಚರಿತ್ರೆ, ಭೂಗೋಳ ಮತ್ತು ತತ್ತ್ವಶಾಸ್ತ್ರಗಳಿಗೆ ಸಂಬಂಧಪಟ್ಟ ಕೃತಿಗಳನ್ನು ಆಲ್ಫ್ರೆಡ್ ಪಶ್ಚಿಮ ಸ್ಯಾಕ್ಸನ್ ಭಾಷೆಗೆ ಅನುವಾದಿಸಿದ. ಆರೊಸಿಯಸ್ನ ಚರಿತ್ರೆ ಮತ್ತು ಭೂವಿವರಣೆ, ಬೀಡ್ನ ಧಾರ್ಮಿಕ ಚರಿತ್ರೆ, ಮಧ್ಯಯುಗದ ಅತಿಜನಪ್ರಿಯ ಕೃತಿ ಬೊತಿಯಿಸ್ನ ತತ್ತ್ವಜ್ಞಾನದ ಸಂತೈಕೆಗಳು ಮತ್ತು ಪೋಪ್ ಗ್ರಿಗರಿಯ ಕ್ಯೊರ ಪ್ಯಾಸ್ಟೊರಾಲಿಸ್-ಇವು ಅನುವಾದಿತ ಕೃತಿಗಳಲ್ಲಿ ಮುಖ್ಯವಾದುವು. ತತ್ತ್ವಜ್ಞಾನದ ಸಂತೈಕಗಳಲ್ಲಿನ ಅನುವಾದ ಮೂಲದ ಅಭಿನವ ಪ್ಲೇಟೋನಿಕ್ ತತ್ತ್ವಗಳಿಗಿಂತ ಕ್ರೈಸ್ತಧರ್ಮಕ್ಕೆ ಹೆಚ್ಚು ಅನುಗುಣವಾಗಿದೆ. ಇದರಲ್ಲಿ ಅಲ್ಲಲ್ಲಿ ದೋಷಗಳಿದ್ದರೂ ಭಾವನೆಗಳ ಘನತೆಯಲ್ಲಿ ಮೂಲಕ್ಕೆ ತಕ್ಕ ಯೋಗ್ಯತೆಯನ್ನು ಪಡೆದಿದೆ. ತನ್ನ ದೇಶ ಯೂರೋಪಿನ ನಾಗರಿಕತೆಗೆ ಸಮೀಪವಾಗಿ ಉಳಿಯುವುದರ ಅಗತ್ಯವನ್ನು ಆಲ್ಫ್ರೆಡ್ ಕಂಡುಕೊಂಡ. ಇವನ ಕೃತಿಗಳು ಆದರ್ಶ ಜನತೆಗೆ ಜ್ಞಾನದಾಹವನ್ನೂ ವಿದ್ವತ್ತು ಮತ್ತು ಸಂಸ್ಕೃತಿಗಳಲ್ಲಿ ಗೌರವವನ್ನೂ ಕಲಿಸಿಕೊಟ್ಟುವು. ಆಲ್ಫ್ರೆಡ್ನೇ ಇಂಗ್ಲಿಷ್ ಗದ್ಯದ ಜನಕ. ದೇಶಭಾಷೆಯನ್ನು ಬಳಸಿ, ಇಂಗ್ಲಿಷ್ ಸ್ವತಂತ್ರವಾಗಿ ಬೆಳೆಯಲು ದಾರಿಮಾಡಿಕೊಟ್ಟಿವೆ. ಇವನಿಂದ ಪ್ರೇರಿತವಾದ ಕೃತಿಗಳಲ್ಲಿ ಆಂಗ್ಲೋ ಸ್ಯಾಕ್ಸನ್ ಕ್ರಾನಿಕಲ್ ಆಂಗ್ಲೋ-ಸ್ಯಾಕ್ಸನ್-ಕ್ರಾನಿಕಲ್ ಮುಖ್ಯವಾದುದು. “ಇಂಗ್ಲೆಡಿನಲ್ಲಿ ವಿದ್ವತ್ತು ಸತ್ತಿದ್ದುದನ್ನು ಕಂಡ, ಅದನ್ನು ಬದುಕಿಸಿದ. ಶಿಕ್ಷಣವನ್ನು ಅಲಕ್ಷ್ಯ ಮಾಡಿದುದನ್ನು ಕಂಡ, ಅದಕ್ಕೆ ಮತ್ತೆ ಚೇತನವನ್ನಿತ್ತ” ಎಂಬೀ ಮಾತುಗಳು 1877ರಲ್ಲಿ ಇವನಿಗಾಗಿ ಸ್ಥಾಪಿಸಿದ ಸ್ಮಾರಕ ಶಿಲೆಯ ಮೇಲಿನ ವಾಕ್ಯಗಳಾಗಿವೆ.
This article uses material from the Wikipedia ಕನ್ನಡ article ಆಲ್ಫ್ರೆಡ್ ಮಹಾಶಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.