ಯಶವಂತ ಚಿತ್ತಾಲ - ಕನ್ನಡದ ಖ್ಯಾತ ಕತೆಗಾರ ಮತ್ತು ಕಾದಂಬರಿಕಾರ.
ಅರವತ್ತಾರು ಕಥೆಗಳನ್ನು ಬರೆದಿರುವ ಚಿತ್ತಾಲರರು, ಉತ್ತರ ಕನ್ನಡದ ಚಿಕ್ಕ ಗ್ರಾಮ ಹನೇಹಳ್ಳಿಯ ಕಡೆಯವರು. ಪಾಲಿಮರ್ ಟೆಕ್ನೊಲಜಿ ಓದಿ ಮುಂಬಯಿ ಹೋಗಿ ಅಲ್ಲೇ ನೆಲೆಸಿದರು.
ಯಶವಂತ ಚಿತ್ತಾಲ | |
---|---|
ಜನನ | ಆಗಸ್ಟ್ ೩, ೧೯೨೮ ಹನೇಹಳ್ಳಿ, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ |
ಮರಣ | ಮಾರ್ಚ್ ೨೨, ೨೦೧೪ ಮುಂಬಯಿ, ಮಹಾರಾಷ್ಟ್ರ |
ವೃತ್ತಿ | ರಸಾಯನ ತಂತ್ರಜ್ಞ, ಲೇಖಕ |
ರಾಷ್ಟ್ರೀಯತೆ | ಭಾರತೀಯ |
ಕಾಲ | (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ) |
ಪ್ರಕಾರ/ಶೈಲಿ | ಕಥೆ, ಕಾದಂಬರಿ |
ಪ್ರಭಾವಗಳು
|
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ 'ಹನೇಹಳ್ಳಿ'ಯಲ್ಲಿ ಜನನ. ಈ ಪುಟ್ಟ ಹಳ್ಳಿ ಚಿತ್ತಾಲರ ಅಂತರಂಗದ ಒಂದು ಅವಿಭಾಜ್ಯ ಅಂಗವಾಗಿ ಇದೆ. ಅದು ಅವರ ಜೀವನ ಮೌಲ್ಯಗಳನ್ನು ಸಾಣೆಹಿಡಿಯುತ್ತಾ ಹೋಗುತ್ತದೆ. ಚಿತ್ತಾಲರ ತಂದೆ ವಿಠೋಬ. ತಾಯಿ, ರುಕ್ಮಿಣಿ, ದಂಪತಿಗಳ ೭ ಮಕ್ಕಳಲ್ಲಿ ಐದನೆಯವರು ಯಶವಂತರು. ಮನೆ ಭಾಷೆ ಕೊಂಕಣೀ-ಮರಾಠಿ. ಪ್ರಾರಂಭಿಕ ಶಿಕ್ಷಣ, ಹನೇಹಳ್ಳಿ, ಕುಮಟ, ಧಾರವಾಡ, ಮುಂಬಯಿ ಮುಂತಾದ ಕಡೆಗಳಲ್ಲಿ. ಉಚ್ಚ ಶಿಕ್ಷಣ ಅಮೆರಿಕದ ನ್ಯೂಜರ್ಸಿಯಲ್ಲಿ ಪಡೆದಿದ್ದರು. ಕವಿ ಗಂಗಾಧರ ಚಿತ್ತಾಲರು ಇವರ ಅಣ್ಣ. ಶಾಂತಿನಾಥ ದೇಸಾಯಿಯವರು ಮತ್ತು ಗೌರೀಶ ಕಾಯ್ಕಿಣಿಯವರು ಚಿತ್ತಾಲರ ಮೇಲೆ ದಟ್ಟವಾದ ಪ್ರಭಾವ ಬೀರಿದ್ದರು. ಚಿತ್ರಕಲೆಯನ್ನು ಕಲಿಯುವ ಗೀಳು, ಬಾಲ್ಯದಲ್ಲೇ ಅಂತರಾಳದಲ್ಲಿ ಹುದುಗಿತ್ತು.
ಅವರು ಮುಂಬಯಿಗೆ ಬಂದು, "ಕಲಾನಿಕೇತನ" ಎಂಬ ಶಾಲೆಗೆ ಸಂಜೆ-ತರಗತಿಗೆ ಸೇರಿದರು. ಎಮ್. ಎನ್. ರಾಯ್ ಅವರ ವಿಚಾರಧಾರೆಗಳಿಗೆ ಸ್ಪಂದಿಸಿ, ರ್ಯಾಡಿಕಲ್ ಡೆಮೊಕ್ರಾಟಿಕ್ ಪಕ್ಷದ ಸದಸ್ಯರಾದರು. ನವಮಾನವತಾವಾದಿ ಮಾರ್ಕ್ಸ್, ಎರಿಕ್ ಪ್ರಾಂ, ಎಡಿಂಗ್ ಟನ್, ಹಕ್ಸ್ಲಿ, ಫ್ರಾಯ್ಡ್, ಎಡ್ಲರ್, ಮುಂತಾದ ಹಲವು ಧೀಮಂತರ ವಿಚಾರಧಾರೆಗಳಿಗೆ ತಮ್ಮ ಮನಸ್ಸನ್ನು ತೆರೆದಿಟ್ಟರು. ಪ್ಲಾಸ್ಟಿಕ್-ತಂತ್ರಜ್ಞಾನದಲ್ಲಿ, ಶಿಕ್ಷಣ- ಪ್ರಶಿಕ್ಷಣಗಳನ್ನು ಪಡೆದು, "ಬೇಕ್ಲೈಟ್ ಹೈಲಂ" ಎಂಬ ಸಂಸ್ಥೆಯಲ್ಲಿ ನೌಕರಿಗೆ ಸೇರಿಕೊಂಡರು. ೩೦ ವರ್ಷಕ್ಕೂ ಮೀರಿ ಸಲ್ಲಿಸಿದ ಸೇವೆಯಿಂದ, ಆಧುನಿಕ ಜಗತ್ತಿನ ಸ್ವರೂಪವನ್ನೆ ನಿಯಂತ್ರಿಸುವ, ಬಂಡವಾಳಶಾಹೀ, ಕೈಗಾರಿಕಾ ಜಗತ್ತಿನ ನಿಕಟ-ಪರಿಚಯವನ್ನು ಮಾಡಿಕೊಂಡರು. ಉದ್ಯೋಗದ ಪರಿಸರದಲ್ಲೂ, ವೈಯಕ್ತಿಕ ಜೀವನದಲ್ಲೂ, ಆದ ದುರಂತಗಳೂ, ಬಿಕ್ಕಟ್ಟುಗಳೂ, ಅವರ ಬರವಣಿಗೆಯ ಗ್ರಾಸಗಳಾದವು. ಅವೆಲ್ಲವನ್ನೂ ಮೆಟ್ಟಿ, ತಮ್ಮ ಜೀವನಶ್ರದ್ಧೆಯ ಸೋಪಾನದ ಮೇಲೆ ನಿಂತು, ಆತ್ಮವಿಶ್ವಾಸದಿಂದ ಮುನ್ನುಗ್ಗಿದರು. ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ, ತಮ್ಮ ಕಥೆ-ಕಾದಂಬರಿಗಳಲ್ಲಿ ಅದರ ವಿಶಿಷ್ಟರೂಪಗಳ ಅನನ್ಯ ಬರವಣಿಗೆಯನ್ನು ನೀಡಿದ್ದಾರೆ.
'ಬೊಮ್ಮಿಯ ಹುಲ್ಲು ಹೊರೆ' ೧೯೪೯ರಲ್ಲಿ ಬರೆದ ಅವರ ಮೊತ್ತ ಮೊದಲ ಕಥೆ. ೧೯೫೭ರಲ್ಲಿ ಮೈತಳೆದ, "ಸಂದರ್ಶನ" ಕಥಾಸಂಕಲನದಿಂದ ಹಿಡಿದು, ೧೯೯೦ರಲ್ಲಿ ಹೊರಬಂದ "ಪುರುಷೋತ್ತಮ"ದವರೆಗೆ, ಚಿತ್ತಾಲರು ಬರೆದ, ವಿವಿಧ ಕೃತಿಗಳನ್ನು ಪರಿಶೀಲಿಸಿದರೆ, ಆ ಬರವಣಿಗೆಯ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಅವರ ಜನ್ಮಭೂಮಿ, 'ಹನೇಹಳ್ಳಿ,' ಅವರ ಹಲವಾರು ಬರಹಗಳ ಕೇಂದ್ರಬಿಂದು. ಬಾಲ್ಯದ ಭೂತಕಾಲವನ್ನು, ವರ್ತಮಾನದ ಸಂಕೀರ್ಣ ಬದುಕಿನೊಂದಿಗೆ ಹೋಲಿಸಿ, ಅದನ್ನು ಇಡೀ ಮನುಕುಲದಲ್ಲಿ ಸಂಭವಿಸಿರುವ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ, ಪರಿವರ್ತಿಸುತ್ತಾರೆ ; ಅವರ ಪ್ರಶಸ್ತಿ ವಿಜೇತ ಕಾದಂಬರಿ, "ಪುರುಷೋತ್ತಮ" ದಲ್ಲಿ, ನಾಯಕನ ಸಿದ್ಧಿಯ ಚರಮ-ಕ್ಷಣಗಳೆಂದರೆ, ಅವನ ಹನೇಹಳ್ಳಿಗೆ ಮತ್ತೆ ಜೀವತುಂಬಿ-ತುಳುಕಾಡುವುದೇ ಆಗಿದೆ.
ಅವರು ಏಕೆ ಬರೆಯುತ್ತಾರೆ ಎನ್ನುವ ಬಗ್ಗೆ ಕೊಟ್ಟಿರುವ ನಿರೂಪಣೆ ಅನನ್ಯವಾಗಿದೆ. " ಒಟ್ಟಿನಲ್ಲಿ ನಾನು ಬರೆಯುತ್ತಿದ್ದದ್ದು, ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು, ಉಳಿದವರಿಂದ ಬರೆಯಲು ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ, ಜೀವಂತ ಸಂಬಂಧಗಳನ್ನು ಹುಟ್ಟಿಸಲು. ಉಳಿದವರನ್ನು ತಿದ್ದುವುದಕ್ಕಲ್ಲ- ಆ ಯೋಗ್ಯತೆಯಾಗಲೀ ಅಧಿಕಾರವಾಗಲೀ ನನಗಿಲ್ಲ."
ಶ್ರೀ ಯಶವಂತ ಚಿತ್ತಾಲರು ೨೦೧೪ ರ ಮಾರ್ಚ್ ೨೨, ಶನಿವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಅಂತ್ಯ ಸಂಸ್ಕಾರವು ೨೩, ಭಾನುವಾರದಂದು, ಮುಂಬೈನ ಶಿವಾಜಿ ಪಾರ್ಕ್ ನ, ವಿದ್ಯುತ್ ಚಿತಾಗಾರದಲ್ಲಿ ಅವರ ಹಿರಿಯ ಮಗ 'ರವೀಂದ್ರ'ನಿಂದ ನೆರೆವೇರಿಸಲ್ಪಟ್ಟಿತು.
This article uses material from the Wikipedia ಕನ್ನಡ article ಯಶವಂತ ಚಿತ್ತಾಲ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.