ಆಹುತಾತ್ಮರು

ಎಂದರೆ ಧರ್ಮಕ್ಕಾಗಿ ಪ್ರಾಣ ತೆತ್ತವರು (ಮಾರ್ಟರ್ಸ್).

ಇದು ಆ ಪದದ ಸಂಕುಚಿತಾರ್ಥ. ತಮ್ಮ ಧರ್ಮದ ಪರವಾಗಿ ಧೈರ್ಯವಾಗಿ ಕಷ್ಟಗಳನ್ನೂ ಹಿಂಸೆಯನ್ನೂ ಎದುರಿಸಿದವರು ಎಂಬುದು ಆ ಪದದ ವಿಶಾಲಾರ್ಥ. ಆಹುತಾತ್ಮರೆಂದೆನ್ನಿಸಿಕೊಳ್ಳಬಹುದಾದವರು ಕೊಲೆಗೆ ಈಡಾಗಬೇಕಾದುದಿಲ್ಲ. ಧರ್ಮದ ನಿಮಿತ್ತವಾಗಿ ಕಾರಾಗೃಹವಾಸ, ಕಶಾಪ್ರಹಾರ, ಮುಂತಾದ ಶಿಕ್ಷೆಗಳಿಗೆ ಒಳಪಟ್ಟವರೂ ಆಹುತಾತ್ಮರೆಂದೆನ್ನಿಸಿಕೊಳ್ಳಲು ಅರ್ಹರು.

ಒಂದು ಧ್ಯೇಯಕ್ಕಾಗಿ ಜೀವಿಸಿ ಶ್ರಮಿಸಿ, ವಿರೋಧಿಗಳು ಕೊಟ್ಟ ಎಲ್ಲ ಹಿಂಸೆಯನ್ನೂ ಸಹಿಸಿ, ಅದಕ್ಕಾಗಿಯೇ ಪ್ರಾಣಕೊಟ್ಟವರಲ್ಲಿ ಅತಿ ಹಿಂದಿನವನೆಂದರೆ ಸಾಕ್ರಟೀಸ್, ಅತಿ ನವೀನರೆಂದರೆ ಮಹಾತ್ಮಗಾಂಧಿ, ಮಾರ್ಟಿನ್ ಲೂಥರ್ ಕಿಂಗ್.

ಕ್ರೈಸ್ತರಲ್ಲಿ

ಐಹಿಕ ಸುಖಗಳನ್ನು ತೊರೆದು, ಐಶ್ವರ್ಯ, ಅಧಿಕಾರಗಳಿಗೆ ಮರುಳಾಗದೆ ಸದಾ ದೇವರ ಸೇವೆಯಲ್ಲಿ ಧರ್ಮದ ಪ್ರಗತಿಗಾಗಿ ಜೀವವನ್ನು ಸವೆಸಿದವರನ್ನೂ ಆಹುತಾತ್ಮರೆಂದು ಕ್ರೈಸ್ತರು ಭಾವಿಸುತ್ತಾರೆ. ಆಹುತಾತ್ಮರನ್ನು ಧರ್ಮವೀರರೆಂದೂ ಹುತಾತ್ಮರೆಂದೂ ಕರೆಯುವ ವಾಡಿಕೆ ಸರಿಯಾದುದೆಂದು ಒಪ್ಪಬಹುದು. ಸಾಧು ಸಂತರೆಲ್ಲರೂ ಈ ವರ್ಗಕ್ಕೆ ಸೇರಿದವರು. ಕೈಸ್ತರು ಮೊದಮೊದಲಲ್ಲಿ ಸಾಧುಸಂತರನ್ನು ಆಹುತಾತ್ಮರ ಪಟ್ಟಿಯಲ್ಲಿ ಸೇರಿಸುತ್ತಿರಲಿಲ್ಲ. ಈ ಎಲ್ಲ ವರ್ಗದವರ ಹೆಸರುಗಳನ್ನು ಹೇಳಿ ವಿಶೇಷ ಪ್ರಾರ್ಥನೆಗಳ ಕಾಲದಲ್ಲಿ ಗೌರವಿಸುವ ಮತ್ತು ಅಂಥವರ ಸಮಾಧಿಗಳ ಮೇಲೆ ಅರ್ಘ್ಯ, ಪಾನೀಯ, ದೀಪಧೂಪ ಮುಂತಾದ ಅರ್ಪಣೆಗಳನ್ನು ಸಮರ್ಪಿಸುವ ಸಂಪ್ರದಾಯ ಕ್ರೈಸ್ತರಲ್ಲಿ ಪ್ರ.ಶ. 4ನೆಯ ಶತಮಾನದಿಂದ ಆಚಿನ ಕಾಲದಲ್ಲಿ ಪ್ರಚಾರದಲ್ಲಿತ್ತು. ಈ ಸಂಪ್ರದಾಯಕ್ಕೆ ಮುಖ್ಯವಾಗಿ ಸಿರಿಯದ ಚರ್ಚು ಪ್ರೇರಕವಾಗಿತ್ತು. ಆಮೇಲೆ ಈ ವಿಧವಾಗಿ ಸಂತರಿಗೆ ಮತ್ತು ಆಹುತಾತ್ಮರಿಗೆ ಭಕ್ತಿಪ್ರದರ್ಶಿಸುವುದು ಕ್ರೈಸ್ತಧರ್ಮ ವಿರುದ್ಧವೆಂಬ ಭಾವನೆ ಬೆಳೆದಂತೆಲ್ಲ ಅದು ಅನಾಗರಿಕ ಸಂಪ್ರದಾಯವೆಂಬ ಚಳವಳಿ ಪ್ರಾರಂಭವಾಯಿತು.

ಜರತುಷ್ಟ್ರ ಧರ್ಮದವರಲ್ಲಿ

ಜರತುಷ್ಟ್ರ ಧರ್ಮದವರು ಧರ್ಮಕ್ಕಾಗಿ ಪ್ರಾಣತೆತ್ತವರನ್ನು ಮಾತ್ರ ಆಹುತಾತ್ಮರೆಂದು ಭಾವಿಸುತ್ತಾರೆ. ಅಷ್ಟೇ ಅಲ್ಲ, ಅವರಿಗೆ ಉಳಿದೆಲ್ಲ ಧರ್ಮದವರು ತೋರಿಸುವ ಭಕ್ತಿಗಿಂತ ವಿಶೇಷ ಭಕ್ತಿಯನ್ನು ತೋರಿಸುತ್ತಾರೆ. ಜರತುಷ್ಟ್ರ ಯಜ್ಞದಲ್ಲಿ ತೊಡಗಿದ್ದಾಗ ಪರಧರ್ಮೀಯರಿಂದ ಕೊಲೆಯಾದುದೇ ಈ ವೈಶಿಷ್ಟ್ಯಕ್ಕೆ ಕಾರಣ.

ಮುಸ್ಲಿಮರಲ್ಲಿ

ಆಹುತಾತ್ಮರ ವಿಚಾರವಾಗಿ ಮುಸ್ಲಿಮರ ಭಾವನೆ ಬೇರೆ. ಪರಧರ್ಮದವರೊಡನೆ ಧರ್ಮಯುದ್ಧದಲ್ಲಿ (ಜಿಹಾದ್) ಭಾಗವಹಿಸಿ ಮಡಿದವರನ್ನು ಮಾತ್ರ ಆಹುತಾತ್ಮರೆಂದು ಇವರು ಭಾವಿಸುತ್ತಾರೆ. ಆದ್ದರಿಂದ ಆಹುತಾತ್ಮಸೂಚಕವಾದ ಷಾಹಿದ್ ಎಂಬ ಅರಬ್ಬೀ ಮಾತಿನ ಅರ್ಥ ಇದೇ. ಹಿಂದೂಗಳೊಡನೆ ಹೋರಾಡಿದ ಪ್ರದೇಶಗಳನ್ನು ಗಂಜ್ಷಾಹಿದಾನ್ ಎಂದರೆ ಆಹುತಾತ್ಮರ ಭಂಡಾರಗಳೆಂದು ಕರೆದಿರುತ್ತಾರೆ. ಹಾಗೆಯೇ ರಜಪುತರು, ಸಿಖ್ಖರು ಕೂಡ ಮುಸ್ಲಿಮರೊಡನೆ ಯುದ್ಧದಲ್ಲಿ ಹೋರಾಡಿ ಸತ್ತವನನ್ನು ಆಹುತಾತ್ಮನೆಂದು ಪೂಜಿಸುತ್ತಾರೆ. ಮದುವಣಿಗ ಹಾಗೆ ಸತ್ತ ಧರ್ಮಾತ್ಮರ ಸಮಾಧಿಯ ಸುತ್ತ ಪ್ರದಕ್ಷಿಣೆ ಮಾಡಿದ ಹೊರತು ಮದುವೆಶಾಸ್ತ್ರ ಪೂರ್ಣವಾಗುವುದಿಲ್ಲ. ಹಿಂದೂಗಳಲ್ಲಿ ಮುಸ್ಲಿಮರಂತೆ ಧರ್ಮಸ್ಥಾಪನೆಗಾಗಿ ಯುದ್ಧಹೂಡುವುದು ತುಂಬ ಅಪೂರ್ವ. ಮುಸಲ್ಮಾನರು ಭಾರತಕ್ಕೆ ಬರುವ ಮುನ್ನ ಧರ್ಮಕ್ಕಾಗಿ ಯುದ್ಧಹೂಡಿದ ಯಾವೊಂದು ಪ್ರಸಂಗವೂ ಚರಿತ್ರೆಯಲ್ಲಿ ವರ್ಣಿತವಾಗಿಲ್ಲ. ಭಾರತಕ್ಕೆ ಮುಸ್ಲಿಮರು ಬಂದ ಅನಂತರ ದಶನಾಮಿ ಸಂಪ್ರದಾಯದ ಸಂತರು ಮತ್ತು ಸನ್ಯಾಸಿಗಳು ತಮ್ಮ ಧರ್ಮರಕ್ಷಣೆಗಾಗಿ ಹೋರಾಡಿದ ಪ್ರಸಂಗಗಳು ಅನೇಕವಿವೆ. ಸಿಪಾಯಿದಂಗೆಯ ಸಮಯದಲ್ಲೂ ದಶನಾಮಿ ಸಂನ್ಯಾಸಿಗಳು ಧರ್ಮಯುದ್ಧದಲ್ಲಿ ಪಾತ್ರವಹಿಸಿದರು. ಈ ಶತಮಾನದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾಮಿಶ್ರದ್ಧಾನಂದರು ಪ್ರಾಣ ಒಪ್ಪಿಸಿದ್ದು ಭಾರತೀಯರ ನೆನಪಿನಲ್ಲಿ ಚಿರವಾಗಿ ಉಳಿದಿದೆ.

ಇತರ ಧರ್ಮಗಳಲ್ಲಿ

ಧರ್ಮದ ವಿಚಾರದಲ್ಲಿನ ಭಿನ್ನಾಭಿಪ್ರಾಯಗಳನ್ನು ಭಿನ್ನಸಂಪ್ರದಾಯಗಳನ್ನು ಗೌರವದಿಂದ, ಸಹನೆಯಿಂದ ಕಾಣುವುದು ತುಂಬ ಹಿಂದಿನ ಕಾಲದಿಂದ ನಡೆದುಕೊಂಡು ಬಂದಿರುವ ಸದ್ಭಾವನೆ. ಬೌದ್ಧರು, ಜೈನರು, ವೈದಿಕರು ಒಂದು ಸಮಯದವರು ಇನ್ನೊಂದು ಸಮಯದವರ ಮೇಲೆ ವಾಗ್ಯುದ್ಧ ನಡೆಸಿದ ಪ್ರಸಂಗಗಳು ಉಲ್ಲೇಖಿತವಾಗಿವೆಯೇ ವಿನಾ ಒಂದು ಸಮಯದವರು ಪರಸಮಯದವರ ಮೇಲೆ ಎರಗಿ ಕೊಂದದ್ದು ಉಲ್ಲೇಖಿತವಾಗಿಲ್ಲವೆಂದು ಎನ್ಸೈಕ್ಲೋಪೀಡಿಯಾ ಆಫ್ ರಿಲಿಜನ್ ಅಂಡ್ ಎಥಿಕ್ಸ್ನಲ್ಲಿ ಸೇಂಟ್ಸ್ ಅಂಡ್ ಮಾರ್ಟರ್ಸ್ ಎಂಬ ಲೇಖನವನ್ನು ಬರೆದಿರುವ ಇ.ಜೆ. ಥಾಮಸ್ ಸ್ಪಷ್ಟಪಡಿಸಿದ್ದಾನೆ. ಆದರೆ ಬೌದ್ಧ ಜಾತಕಕಥೆಗಳಲ್ಲಿ (ಜಾತಕ 313) ಬೋಧಿಸತ್ತ್ವ ಧರ್ಮವನ್ನು ಬೋಧಿಸಿದ್ದಕ್ಕಾಗಿ ಅವನನ್ನು ದೊರೆ ಸಿಗಿದು ಹಾಕಿಸಿದನೆಂದು ವರ್ಣಿತವಾಗಿದೆ. ಬುದ್ಧ, ಮಹಾವೀರರು, ವೈದಿಕಧರ್ಮಕ್ಕೆ ಪ್ರತಿಯಾಗಿ ಬೋಧಿಸಿದರೂ ವೈದಿಕರು ಯಾರೂ ಅವರನ್ನು ಕೊಲ್ಲಲು ಪ್ರಯತ್ನಿಸಲಿಲ್ಲ. ಅವರು ಒಂದೆರಡು ಸಲ ಅಪಾಯಕ್ಕೆ ಗುರಿಯಾದದ್ದು ತಮ್ಮ ಶಿಷ್ಯರಿಂದಲೇ. ಬುದ್ಧನೂ ಮಹಾವೀರನೂ ಎಂಬತ್ತರ ಮುಪ್ಪಿನವರೆಗೆ ಬದುಕಿ ನಿರ್ವಾಣ ಹೊಂದಿದ್ದು ಭಾರತದ ಸಹನಾನೀತಿಗೆ ದೃಷ್ಟಾಂತಗಳು.

Tags:

ಆಹುತಾತ್ಮರು ಕ್ರೈಸ್ತರಲ್ಲಿಆಹುತಾತ್ಮರು ಜರತುಷ್ಟ್ರ ಧರ್ಮದವರಲ್ಲಿಆಹುತಾತ್ಮರು ಮುಸ್ಲಿಮರಲ್ಲಿಆಹುತಾತ್ಮರು ಇತರ ಧರ್ಮಗಳಲ್ಲಿಆಹುತಾತ್ಮರುಧರ್ಮ

🔥 Trending searches on Wiki ಕನ್ನಡ:

ಶ್ರೀನಿವಾಸ ರಾಮಾನುಜನ್ಪಂಜಾಬಿನ ಇತಿಹಾಸಮೊದಲನೇ ಅಮೋಘವರ್ಷಏಲಕ್ಕಿತಾಳೀಕೋಟೆಯ ಯುದ್ಧಸಾರಾ ಅಬೂಬಕ್ಕರ್ದೆಹಲಿ ಸುಲ್ತಾನರುವಿಮರ್ಶೆಉದ್ಯಮಿಕೈಗಾರಿಕೆಗಳ ಸ್ಥಾನೀಕರಣದ್ಯುತಿಸಂಶ್ಲೇಷಣೆಬಾದಾಮಿ ಶಾಸನಗಣರಾಜ್ಯಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಭಗವದ್ಗೀತೆಮದುವೆಕೆ. ಎಸ್. ನಿಸಾರ್ ಅಹಮದ್ನರ್ಮದಾ ನದಿಹೆರೊಡೋಟಸ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಚಲನಶಕ್ತಿಕೇಂದ್ರ ಲೋಕ ಸೇವಾ ಆಯೋಗಕರ್ಮಧಾರಯ ಸಮಾಸವಿದ್ಯುತ್ ಮಂಡಲಗಳುಸಲಗ (ಚಲನಚಿತ್ರ)ಯೋನಿಬಿದಿರುತಂತ್ರಜ್ಞಾನಗೋವಿಂದ III (ರಾಷ್ಟ್ರಕೂಟ)ಚಂದನಾ ಅನಂತಕೃಷ್ಣಆದೇಶ ಸಂಧಿಜಲ ಮಾಲಿನ್ಯಕಂಪ್ಯೂಟರ್ಭಾರತೀಯ ರಿಸರ್ವ್ ಬ್ಯಾಂಕ್ಯಣ್ ಸಂಧಿನೈಸರ್ಗಿಕ ಸಂಪನ್ಮೂಲಅರವಿಂದ್ ಕೇಜ್ರಿವಾಲ್ಭಾರತದ ಮಾನವ ಹಕ್ಕುಗಳುಕಾಂತಾರ (ಚಲನಚಿತ್ರ)ನರೇಂದ್ರ ಮೋದಿಭಾಷೆಚಾಲುಕ್ಯಕಾರ್ಲ್ ಮಾರ್ಕ್ಸ್ತೇಜಸ್ವಿನಿ ಗೌಡಚಾಮುಂಡರಾಯರಜನೀಕಾಂತ್ಗುಪ್ತ ಸಾಮ್ರಾಜ್ಯಬೇಡಿಕೆಕನ್ನಡ ಕಾವ್ಯಗೂಬೆವಾಣಿಜ್ಯೋದ್ಯಮದೂರದರ್ಶನಮಾವಂಜಿರಾಷ್ಟ್ರೀಯ ಶಿಕ್ಷಣ ನೀತಿಗುರುಲಿಂಗ ಕಾಪಸೆಹೆಣ್ಣು ಬ್ರೂಣ ಹತ್ಯೆಎರಡನೇ ಮಹಾಯುದ್ಧಮಹಾವೀರಕನ್ನಡ ಸಾಹಿತ್ಯ ಪರಿಷತ್ತುಮಾನವ ಸಂಪನ್ಮೂಲ ನಿರ್ವಹಣೆಕರ್ನಾಟಕ ವಿಧಾನ ಸಭೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಪೃಥ್ವಿರಾಜ್ ಚೌಹಾಣ್ಕೊಡಗುಧರ್ಮಸ್ಥಳಸರ್ಪ ಸುತ್ತುಐಹೊಳೆಕನ್ನಡ ಛಂದಸ್ಸುಮಾಧ್ಯಮವಿದ್ಯುತ್ ಪ್ರವಾಹಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಕಬೀರ್ಸೋನಾರ್ಜಾಹೀರಾತುರಾಷ್ಟ್ರೀಯತೆಶಿರಾಸಾವಯವ ಬೇಸಾಯಲೋಹಾಭ🡆 More