ಎಂದರೆ ಧರ್ಮಕ್ಕಾಗಿ ಪ್ರಾಣ ತೆತ್ತವರು (ಮಾರ್ಟರ್ಸ್).
ಇದು ಆ ಪದದ ಸಂಕುಚಿತಾರ್ಥ. ತಮ್ಮ ಧರ್ಮದ ಪರವಾಗಿ ಧೈರ್ಯವಾಗಿ ಕಷ್ಟಗಳನ್ನೂ ಹಿಂಸೆಯನ್ನೂ ಎದುರಿಸಿದವರು ಎಂಬುದು ಆ ಪದದ ವಿಶಾಲಾರ್ಥ. ಆಹುತಾತ್ಮರೆಂದೆನ್ನಿಸಿಕೊಳ್ಳಬಹುದಾದವರು ಕೊಲೆಗೆ ಈಡಾಗಬೇಕಾದುದಿಲ್ಲ. ಧರ್ಮದ ನಿಮಿತ್ತವಾಗಿ ಕಾರಾಗೃಹವಾಸ, ಕಶಾಪ್ರಹಾರ, ಮುಂತಾದ ಶಿಕ್ಷೆಗಳಿಗೆ ಒಳಪಟ್ಟವರೂ ಆಹುತಾತ್ಮರೆಂದೆನ್ನಿಸಿಕೊಳ್ಳಲು ಅರ್ಹರು.
ಒಂದು ಧ್ಯೇಯಕ್ಕಾಗಿ ಜೀವಿಸಿ ಶ್ರಮಿಸಿ, ವಿರೋಧಿಗಳು ಕೊಟ್ಟ ಎಲ್ಲ ಹಿಂಸೆಯನ್ನೂ ಸಹಿಸಿ, ಅದಕ್ಕಾಗಿಯೇ ಪ್ರಾಣಕೊಟ್ಟವರಲ್ಲಿ ಅತಿ ಹಿಂದಿನವನೆಂದರೆ ಸಾಕ್ರಟೀಸ್, ಅತಿ ನವೀನರೆಂದರೆ ಮಹಾತ್ಮಗಾಂಧಿ, ಮಾರ್ಟಿನ್ ಲೂಥರ್ ಕಿಂಗ್.
ಐಹಿಕ ಸುಖಗಳನ್ನು ತೊರೆದು, ಐಶ್ವರ್ಯ, ಅಧಿಕಾರಗಳಿಗೆ ಮರುಳಾಗದೆ ಸದಾ ದೇವರ ಸೇವೆಯಲ್ಲಿ ಧರ್ಮದ ಪ್ರಗತಿಗಾಗಿ ಜೀವವನ್ನು ಸವೆಸಿದವರನ್ನೂ ಆಹುತಾತ್ಮರೆಂದು ಕ್ರೈಸ್ತರು ಭಾವಿಸುತ್ತಾರೆ. ಆಹುತಾತ್ಮರನ್ನು ಧರ್ಮವೀರರೆಂದೂ ಹುತಾತ್ಮರೆಂದೂ ಕರೆಯುವ ವಾಡಿಕೆ ಸರಿಯಾದುದೆಂದು ಒಪ್ಪಬಹುದು. ಸಾಧು ಸಂತರೆಲ್ಲರೂ ಈ ವರ್ಗಕ್ಕೆ ಸೇರಿದವರು. ಕೈಸ್ತರು ಮೊದಮೊದಲಲ್ಲಿ ಸಾಧುಸಂತರನ್ನು ಆಹುತಾತ್ಮರ ಪಟ್ಟಿಯಲ್ಲಿ ಸೇರಿಸುತ್ತಿರಲಿಲ್ಲ. ಈ ಎಲ್ಲ ವರ್ಗದವರ ಹೆಸರುಗಳನ್ನು ಹೇಳಿ ವಿಶೇಷ ಪ್ರಾರ್ಥನೆಗಳ ಕಾಲದಲ್ಲಿ ಗೌರವಿಸುವ ಮತ್ತು ಅಂಥವರ ಸಮಾಧಿಗಳ ಮೇಲೆ ಅರ್ಘ್ಯ, ಪಾನೀಯ, ದೀಪಧೂಪ ಮುಂತಾದ ಅರ್ಪಣೆಗಳನ್ನು ಸಮರ್ಪಿಸುವ ಸಂಪ್ರದಾಯ ಕ್ರೈಸ್ತರಲ್ಲಿ ಪ್ರ.ಶ. 4ನೆಯ ಶತಮಾನದಿಂದ ಆಚಿನ ಕಾಲದಲ್ಲಿ ಪ್ರಚಾರದಲ್ಲಿತ್ತು. ಈ ಸಂಪ್ರದಾಯಕ್ಕೆ ಮುಖ್ಯವಾಗಿ ಸಿರಿಯದ ಚರ್ಚು ಪ್ರೇರಕವಾಗಿತ್ತು. ಆಮೇಲೆ ಈ ವಿಧವಾಗಿ ಸಂತರಿಗೆ ಮತ್ತು ಆಹುತಾತ್ಮರಿಗೆ ಭಕ್ತಿಪ್ರದರ್ಶಿಸುವುದು ಕ್ರೈಸ್ತಧರ್ಮ ವಿರುದ್ಧವೆಂಬ ಭಾವನೆ ಬೆಳೆದಂತೆಲ್ಲ ಅದು ಅನಾಗರಿಕ ಸಂಪ್ರದಾಯವೆಂಬ ಚಳವಳಿ ಪ್ರಾರಂಭವಾಯಿತು.
ಜರತುಷ್ಟ್ರ ಧರ್ಮದವರು ಧರ್ಮಕ್ಕಾಗಿ ಪ್ರಾಣತೆತ್ತವರನ್ನು ಮಾತ್ರ ಆಹುತಾತ್ಮರೆಂದು ಭಾವಿಸುತ್ತಾರೆ. ಅಷ್ಟೇ ಅಲ್ಲ, ಅವರಿಗೆ ಉಳಿದೆಲ್ಲ ಧರ್ಮದವರು ತೋರಿಸುವ ಭಕ್ತಿಗಿಂತ ವಿಶೇಷ ಭಕ್ತಿಯನ್ನು ತೋರಿಸುತ್ತಾರೆ. ಜರತುಷ್ಟ್ರ ಯಜ್ಞದಲ್ಲಿ ತೊಡಗಿದ್ದಾಗ ಪರಧರ್ಮೀಯರಿಂದ ಕೊಲೆಯಾದುದೇ ಈ ವೈಶಿಷ್ಟ್ಯಕ್ಕೆ ಕಾರಣ.
ಆಹುತಾತ್ಮರ ವಿಚಾರವಾಗಿ ಮುಸ್ಲಿಮರ ಭಾವನೆ ಬೇರೆ. ಪರಧರ್ಮದವರೊಡನೆ ಧರ್ಮಯುದ್ಧದಲ್ಲಿ (ಜಿಹಾದ್) ಭಾಗವಹಿಸಿ ಮಡಿದವರನ್ನು ಮಾತ್ರ ಆಹುತಾತ್ಮರೆಂದು ಇವರು ಭಾವಿಸುತ್ತಾರೆ. ಆದ್ದರಿಂದ ಆಹುತಾತ್ಮಸೂಚಕವಾದ ಷಾಹಿದ್ ಎಂಬ ಅರಬ್ಬೀ ಮಾತಿನ ಅರ್ಥ ಇದೇ. ಹಿಂದೂಗಳೊಡನೆ ಹೋರಾಡಿದ ಪ್ರದೇಶಗಳನ್ನು ಗಂಜ್ಷಾಹಿದಾನ್ ಎಂದರೆ ಆಹುತಾತ್ಮರ ಭಂಡಾರಗಳೆಂದು ಕರೆದಿರುತ್ತಾರೆ. ಹಾಗೆಯೇ ರಜಪುತರು, ಸಿಖ್ಖರು ಕೂಡ ಮುಸ್ಲಿಮರೊಡನೆ ಯುದ್ಧದಲ್ಲಿ ಹೋರಾಡಿ ಸತ್ತವನನ್ನು ಆಹುತಾತ್ಮನೆಂದು ಪೂಜಿಸುತ್ತಾರೆ. ಮದುವಣಿಗ ಹಾಗೆ ಸತ್ತ ಧರ್ಮಾತ್ಮರ ಸಮಾಧಿಯ ಸುತ್ತ ಪ್ರದಕ್ಷಿಣೆ ಮಾಡಿದ ಹೊರತು ಮದುವೆಶಾಸ್ತ್ರ ಪೂರ್ಣವಾಗುವುದಿಲ್ಲ. ಹಿಂದೂಗಳಲ್ಲಿ ಮುಸ್ಲಿಮರಂತೆ ಧರ್ಮಸ್ಥಾಪನೆಗಾಗಿ ಯುದ್ಧಹೂಡುವುದು ತುಂಬ ಅಪೂರ್ವ. ಮುಸಲ್ಮಾನರು ಭಾರತಕ್ಕೆ ಬರುವ ಮುನ್ನ ಧರ್ಮಕ್ಕಾಗಿ ಯುದ್ಧಹೂಡಿದ ಯಾವೊಂದು ಪ್ರಸಂಗವೂ ಚರಿತ್ರೆಯಲ್ಲಿ ವರ್ಣಿತವಾಗಿಲ್ಲ. ಭಾರತಕ್ಕೆ ಮುಸ್ಲಿಮರು ಬಂದ ಅನಂತರ ದಶನಾಮಿ ಸಂಪ್ರದಾಯದ ಸಂತರು ಮತ್ತು ಸನ್ಯಾಸಿಗಳು ತಮ್ಮ ಧರ್ಮರಕ್ಷಣೆಗಾಗಿ ಹೋರಾಡಿದ ಪ್ರಸಂಗಗಳು ಅನೇಕವಿವೆ. ಸಿಪಾಯಿದಂಗೆಯ ಸಮಯದಲ್ಲೂ ದಶನಾಮಿ ಸಂನ್ಯಾಸಿಗಳು ಧರ್ಮಯುದ್ಧದಲ್ಲಿ ಪಾತ್ರವಹಿಸಿದರು. ಈ ಶತಮಾನದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾಮಿಶ್ರದ್ಧಾನಂದರು ಪ್ರಾಣ ಒಪ್ಪಿಸಿದ್ದು ಭಾರತೀಯರ ನೆನಪಿನಲ್ಲಿ ಚಿರವಾಗಿ ಉಳಿದಿದೆ.
ಧರ್ಮದ ವಿಚಾರದಲ್ಲಿನ ಭಿನ್ನಾಭಿಪ್ರಾಯಗಳನ್ನು ಭಿನ್ನಸಂಪ್ರದಾಯಗಳನ್ನು ಗೌರವದಿಂದ, ಸಹನೆಯಿಂದ ಕಾಣುವುದು ತುಂಬ ಹಿಂದಿನ ಕಾಲದಿಂದ ನಡೆದುಕೊಂಡು ಬಂದಿರುವ ಸದ್ಭಾವನೆ. ಬೌದ್ಧರು, ಜೈನರು, ವೈದಿಕರು ಒಂದು ಸಮಯದವರು ಇನ್ನೊಂದು ಸಮಯದವರ ಮೇಲೆ ವಾಗ್ಯುದ್ಧ ನಡೆಸಿದ ಪ್ರಸಂಗಗಳು ಉಲ್ಲೇಖಿತವಾಗಿವೆಯೇ ವಿನಾ ಒಂದು ಸಮಯದವರು ಪರಸಮಯದವರ ಮೇಲೆ ಎರಗಿ ಕೊಂದದ್ದು ಉಲ್ಲೇಖಿತವಾಗಿಲ್ಲವೆಂದು ಎನ್ಸೈಕ್ಲೋಪೀಡಿಯಾ ಆಫ್ ರಿಲಿಜನ್ ಅಂಡ್ ಎಥಿಕ್ಸ್ನಲ್ಲಿ ಸೇಂಟ್ಸ್ ಅಂಡ್ ಮಾರ್ಟರ್ಸ್ ಎಂಬ ಲೇಖನವನ್ನು ಬರೆದಿರುವ ಇ.ಜೆ. ಥಾಮಸ್ ಸ್ಪಷ್ಟಪಡಿಸಿದ್ದಾನೆ. ಆದರೆ ಬೌದ್ಧ ಜಾತಕಕಥೆಗಳಲ್ಲಿ (ಜಾತಕ 313) ಬೋಧಿಸತ್ತ್ವ ಧರ್ಮವನ್ನು ಬೋಧಿಸಿದ್ದಕ್ಕಾಗಿ ಅವನನ್ನು ದೊರೆ ಸಿಗಿದು ಹಾಕಿಸಿದನೆಂದು ವರ್ಣಿತವಾಗಿದೆ. ಬುದ್ಧ, ಮಹಾವೀರರು, ವೈದಿಕಧರ್ಮಕ್ಕೆ ಪ್ರತಿಯಾಗಿ ಬೋಧಿಸಿದರೂ ವೈದಿಕರು ಯಾರೂ ಅವರನ್ನು ಕೊಲ್ಲಲು ಪ್ರಯತ್ನಿಸಲಿಲ್ಲ. ಅವರು ಒಂದೆರಡು ಸಲ ಅಪಾಯಕ್ಕೆ ಗುರಿಯಾದದ್ದು ತಮ್ಮ ಶಿಷ್ಯರಿಂದಲೇ. ಬುದ್ಧನೂ ಮಹಾವೀರನೂ ಎಂಬತ್ತರ ಮುಪ್ಪಿನವರೆಗೆ ಬದುಕಿ ನಿರ್ವಾಣ ಹೊಂದಿದ್ದು ಭಾರತದ ಸಹನಾನೀತಿಗೆ ದೃಷ್ಟಾಂತಗಳು.
This article uses material from the Wikipedia ಕನ್ನಡ article ಆಹುತಾತ್ಮರು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.