ಅಂತಿಮಗತಿ ಶಾಸ್ತ್ರ

ಮಾನವನ ಸಾವಿನೊಂದಿಗೆ ಅವನ ಅಸ್ತಿತ್ವ ಪುರ್ಣವಾಗಿ ಅಳಿಸಿ ಹೋಗುತ್ತದೆಂದು ಮತಧರ್ಮಗಳಾಗಲಿ, ಅನೇಕ ದಾರ್ಶನಿಕರಾಗಲಿ ನಂಬುವುದಿಲ್ಲ.

ಸಾವಿನಿಂದ ಭೌತಿಕ ಶರೀರ ಅಳಿಯುವುದು ನಿಜ; ಆದರೆ ಜೀವ ಸಾವಿನಿಂದಾಚೆಗೂ ಉಳಿಯುತ್ತದೆಂಬುದು ಎಲ್ಲ ಧರ್ಮಗಳ ನಂಬಿಕೆಯಾಗಿದೆ. ಸಾವಿನಿಂದಾಚೆಗೆ ಜೀವಿಯ ಸ್ಥಿತಿ ಏನೆಂಬುದರ ವಿಚಾರದಲ್ಲಿ ನಡೆದಿರುವ ಚಿಂತನೆಯನ್ನು ಅಂತಿಮಗತಿ ಶಾಸ್ತ್ರದ ವಸ್ತುವೆಂದು ಕರೆಯಲಾಗಿದೆ. ಅಂತಿಮಗತಿಶಾಸ್ತ್ರಕ್ಕೆ ಆಧಾರರೂಪವಾದ ಅಂಶವೆಂದರೆ ಆತ್ಮ ಅಥವಾ ಚೇತನದ ಇರುವಿಕೆಯ ನಂಬಿಕೆ. ಚಾರ್ವಾಕರು ಇಲ್ಲವೆ ಆಧುನಿಕ ಲೌಕಿಕವಾದಿಗಳು ಆತ್ಮದ ಇರವನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಚೇತನವೆಂಬುದು ಭೌತಿಕ ತತ್ತ್ವಗಳ ಸಂಯೋಗದಿಂದ ಮತ್ತು ರಾಸಾಯನಿಕ ಅಂಶಗಳಿಂದ ಆದ ಒಂದು ಗುಣವಿಶೇಷ ಮಾತ್ರ. ಅವುಗಳಲ್ಲುಂಟಾಗುವ ವಿಷಮತೆಯಿಂದ ಈ ಚೇತನ ಇಲ್ಲದಾಗುತ್ತದೆ. ಅಂದಮೇಲೆ ಹುಟ್ಟು ಸಾವುಗಳೆಂಬುವು ಜಡತತ್ತ್ವವಾದ ಭೌತಿಕ ವಸ್ತುಗಳ ಅವಸ್ಥಾ ವಿಶೇಷವೇ ಹೊರತು ಮತ್ತೇನಲ್ಲ ಎಂದು ಅವರು ನಂಬುತ್ತಾರೆ. ಆದ್ದರಿಂದ ಅಂತಿಮಗತಿ ಶಾಸ್ತ್ರಕ್ಕೆ ಅವರ ಕೊಡುಗೆ ಬಹಳ ಕಡಿಮೆ. ಆತ್ಮವನ್ನು ನಂಬುವ ಮಿಕ್ಕೆಲ್ಲ ಧರ್ಮಗಳು ಮತ್ತು ದರ್ಶನಗಳು ಆತ್ಮ ಅವಿನಾಶಿಯೆಂದೂ ಭೌತಿಕವಸ್ತುವಿಗಿಂತ ಭಿನ್ನವಾದದ್ದೆಂದೂ ಒಪ್ಪುತ್ತಾರೆ. ಅಂದಮೇಲೆ ಶರೀರದ ನಾಶದೊಂದಿಗೆ ಆತ್ಮನಾಶವಾಗುವುದಿಲ್ಲ. ಆತ್ಮ ಶರೀರದಿಂದ ಬೇರ್ಪಟ್ಟ ಸ್ಥಿತಿಯನ್ನೇ ಮರಣ ಎಂದು ಕರೆಯುತ್ತಾರೆ. ಹಾಗಾದರೆ ಆತ್ಮದ ಮುಂದಿನ ಗತಿ ಏನು? ಅದರ ಮುಂದಿನ ಗತಿಯನ್ನು ನಿರ್ಣಯಿಸುವ ನಿಯಮವಾದರೂ ಏನು? ಅಂತಿಮಗತಿ ಶಾಸ್ತ್ರದಲ್ಲಿ ಮತ್ತೊಂದು ತತ್ತ್ವವೆಂದರೆ ವಿಧಿವಾದ ಅಥವಾ ಅದೃಷ್ಟದಲ್ಲಿ ಮಾನವನಿಗಿರುವ ನಂಬಿಕೆ. ವಿಶ್ವದ ವ್ಯಾಪಾರವನ್ನು ಅರಿಯಲು ಬೇಕಾಗುವ ವೈಜ್ಞಾನಿಕ ತತ್ತ್ವದ ಕಾರ್ಯಕಾರಣನಿಯಮವನ್ನು ಇಲ್ಲಿ ಬಳಸಲಾಗಿದೆ. ಕಾರಣವಿಲ್ಲದೆ ಕಾರ್ಯವಿಲ್ಲ. ಕಾರ್ಯ ಫಲವಾದರೆ ಕಾರಣವೇ ಅದರ ಬೀಜ. ಇದಕ್ಕೆ ಹೊಂದಿದಂತೆ ನೀತಿನಡತೆಗೆ ಸಂಬಂಧಪಟ್ಟ ಒಂದು ತತ್ತ್ವವಿದೆ. ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ನಮ್ಮ ಮುಂದಿನ ಬಾಳಿಗೆ ಬುತ್ತಿಯಾಗುತ್ತವೆ. ಪಾಪಪುಣ್ಯಗಳ ಒಟ್ಟು ಸಮೂಹವೇ ಕರ್ಮ. ಇಂದ್ರಿಯಕ್ಕೆ ಗೋಚರವಾಗದಂಥ ಒಂದು ನಿಯಮವಾದ್ದರಿಂದ ಇದು ಅದೃಷ್ಟವೂ ಹೌದು. ಇದರಲ್ಲಿ ಸಂಚಿತ, ಆಗಮ, ಪ್ರಾರಬ್ಧ ಮುಂತಾದ ಬಗೆಗಳುಂಟು. ಅಂತೂ ಇವುಗಳಿಂದಲೇ ಆತ್ಮದ ಅಂತಿಮಗತಿ ನಿರ್ಣಯವಾಗಬೇಕು. ಅಂತಿಮಗತಿಯ ವಿಚಾರದಲ್ಲಿ ಕೆಲವು ಪ್ರಮುಖ ಮತಧರ್ಮಗಳ ಅಭಿಪ್ರಾಯ ವೇನೆಂಬುದನ್ನು ಸ್ಥೂಲವಾಗಿ ತಿಳಿಯಬಹುದು. ಪುರಾತನ ಕ್ರೈಸ್ತಧರ್ಮದಂತೆ ಸತ್ತ ಬಳಿಕ ಮಾನವನ ಆತ್ಮ ದೇವದೂತರೊಂದಿಗೆ ಭಗವಂತನ ಎದುರುಹೋಗಿ ನಿಲ್ಲುತ್ತದೆ. ಅವನ ತಾತ್ಕಾಲಿಕ ತೀರ್ಪಿನಂತೆ ಸ್ವರ್ಗದ ತೋಟದಲ್ಲಿ ತನಗೆ ನಿಶ್ಚಿತಗೊಳಿಸಿದ ಜಾಗದಲ್ಲಿ ಅಂತಿಮ ತೀರ್ಮಾನದ ದಿನ ಅಥವಾ ಭಗವಂತನ ದಿನಕ್ಕಾಗಿ ಕಾದಿರುತ್ತದೆ. ಅಂತಿಮ ತೀರ್ಪಿನ ದಿನ ಬಂದಾಗ ಕೂಗಿದ ಕಹಳೆಯ ದನಿಗೆ ಇಂಥ ಎಲ್ಲ ಚೇತನಗಳು ಓಗೊಟ್ಟು ಭಗವಂತನ ಮುಂದೆ ತಮ್ಮ ತೀರ್ಪಿಗಾಗಿ ಕಾದು ನಿಲ್ಲುತ್ತವೆ. ಅವನ ತೀರ್ಪು ಆ ಚೇತನಗಳ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ಅವಲಂಬಿಸಿರುತ್ತದೆ. ಬಾಳಿನ ಗ್ರಂಥ (ಬುಕ್ ಆಫ್ ಲೈಫ್) ಎಂಬ ಪುಸ್ತಕದಲ್ಲಿಲ್ಲದವರು ಪಾಪಿಗಳೆಂದು ತೀರ್ಮಾನಿಸಿ ಅವರನ್ನು ಅಗ್ನಿಯ ಕೂಪಕ್ಕೆ ತಳ್ಳಲಾಗುತ್ತದೆ. ಅಂಥವರು ಮೃತ್ಯುವನ್ನು ಮತ್ತೊಮ್ಮೆ ಅನುಭವಿಸಬೇಕು. ಪುಣ್ಯಾತ್ಮರು ಪವಿತ್ರತಮವಾದ ಸ್ವರ್ಗವಾಸಿಗಳಾಗುತ್ತಾರೆ. ಈ ವಿಚಾರದಲ್ಲಿ ಮಹಮ್ಮದೀಯರ ಕಲ್ಪನೆಗೂ ಯೆಹೂದಿಗಳ, ಕ್ರೈಸ್ತ ಮತ್ತು ಪಾರಸಿಗಳ ಕಲ್ಪನೆಗೂ ಬಹುಮಟ್ಟಿಗೆ ಸಾಮ್ಯವಿದೆ. ಸತ್ತ ಮನುಷ್ಯನ ಗೋರಿಯ ಬಳಿಗೆ ಇಬ್ಬರು ದೇವದೂತರು ಬಂದು ಅವನ ಆತ್ಮಕ್ಕೆ ಇರುವ ಧಾರ್ಮಿಕಶ್ರದ್ಧೆಯನ್ನು ಪರೀಕ್ಷಿಸುತ್ತಾರೆ. ಶ್ರದ್ಧೆ ತೃಪ್ತಿಕರವಾಗಿ ಕಂಡಲ್ಲಿ ಅವನನ್ನು ಗೋರಿಯಲ್ಲಿ ಶಾಂತಿಯಿಂದ ಮಲಗಲು ಬಿಡುತ್ತಾರೆ. ಇಲ್ಲವಾದರೆ ಅವನನ್ನು ಸುತ್ತಿಗೆಯಿಂದ ಹೊಡೆದು ಹಿಂಸಿಸುತ್ತಾರೆ. ಅಂತಿಮತೀರ್ಪಿನ ದಿನಕ್ಕಾಗಿ ಆತ್ಮಗಳು ಕಾದಿರುತ್ತವೆ. ಭಗವಂತನಿಗೆ ಸರಿಕಂಡಾಗ ದೇವದೂತ ನಿರ್ಣಯದ ದಿನ ಬಂದಿತೆಂಬುದನ್ನು ಸೂಚಿಸುವ ಕಹಳೆಯನ್ನು ಊದುತ್ತಾನೆ. ಆ ಕೂಗನ್ನು ಅನುಸರಿಸಿ ಜಗತ್ತಿನಲ್ಲಿ ಒಂದು ಪ್ರಳಯವೇ ಆಗುತ್ತದೆ ಮತ್ತು ಬದುಕಿದ್ದ ಮಾನವರೆಲ್ಲರೂ ಸಾಯುತ್ತಾರೆ. ಕೊನೆಗೊಮ್ಮೆ ಕಹಳೆಯ ದನಿಯನ್ನು ಕೇಳಿ ಎಲ್ಲ ಆತ್ಮಗಳೂ ಪುನಶ್ಚೇತನಗೊಂಡು ತಮ್ಮ ಪಾಪಪುಣ್ಯಗಳ ವರದಿಯನ್ನೊಪ್ಪಿಸಲು ಸಿದ್ಧವಾಗುತ್ತವೆ. ಭಗವಂತನ ಸಿಂಹಾಸನದ ಎದುರು ಜೀವಿಗಳು ಮಾಡಿದ ಪಾಪಪುಣ್ಯಗಳ ತುಲನಾತ್ಮಕ ಪರೀಕ್ಷೆ ನಡೆಯುತ್ತದೆ. ಈ ತೀರ್ಪು ಸು. 1000 ವರ್ಷದಿಂದ 50,000 ವರ್ಷಗಳವರೆಗೂ ನಡೆಯುತ್ತದಂತೆ. ಕೊನೆಗೆ ಎಲ್ಲ ಜೀವಗಳೂ ಸಿರಾತ್ ಎಂಬ ಸೇತುವೆಯ ಮೂಲಕ ನರಕವನ್ನು ದಾಟಿ ಸ್ವರ್ಗವನ್ನು ಪ್ರವೇಶಿಸಬೇಕು. ಇವರು ದಾಟುವ ಸೇತುವೆ ಕೂದಲಿಗಿಂತ ಸೂಕ್ಷ್ಮವೂ ಕತ್ತಿಯ ಅಲಗಿಗಿಂತ ಹರಿತವೂ ಆಗಿರುತ್ತದೆ. ಪುಣ್ಯಶಾಲಿಗಳು ಮಾತ್ರ ಸುರಕ್ಷಿತವಾಗಿ ದಾಟಬಲ್ಲರು. ಪಾಪಾತ್ಮರು ಸೇತುವೆ ಕುಸಿದು ನರಕದಲ್ಲಿ ಬೀಳುತ್ತಾರೆ. ಕರ್ಮ ಮತ್ತು ಪುನರ್ಜನ್ಮದಲ್ಲಿನ ನಂಬಿಕೆ ಭಾರತೀಯ ಮತಗಳಿಗೆ ವಿಶಿಷ್ಟವಾದದ್ದು. ಬೌದ್ಧರು ಇತರ ಭಾರತೀಯರಂತೆ ಪರಮದೈವವನ್ನು ನಂಬದಿದ್ದರೂ ಕರ್ಮ ಮತ್ತು ಪುನರ್ಜನ್ಮಗಳನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಪಾಪಪುಣ್ಯಗಳನ್ನು ನಿರ್ಧರಿಸಿ ತಕ್ಕ ಫಲವನ್ನು ಕೊಡಲು ಬೌದ್ಧರ ಪ್ರಕಾರ ಈಶ್ವರನ ಅಗತ್ಯವಿಲ್ಲ. ಅದನ್ನು ಅವರವರ ಕರ್ಮವೇ ನಿರ್ಧರಿಸುತ್ತದೆ. ಜೀವರು ಅವರವರ ಕರ್ಮಕ್ಕೆ ತಕ್ಕಂತೆ ಉನ್ನತವಾದ ಇಲ್ಲವೆ ಕೀಳಾದ ಜೀವನವನ್ನು ಪಡೆಯುತ್ತಾರೆ. ಮಾನವನ ಕರ್ಮದ ಫಲವೆಲ್ಲವೂ ಸೇರಿ ಐದು ರೀತಿಯ ಸ್ಕಂದಗಳ ರೂಪದಲ್ಲಿ ಅವರ ಮುಂದಿನ ಜನ್ಮವೆಂಥದೆಂಬುದನ್ನು ನಿರ್ಣಯಿಸಲು ಶಕ್ತವಾಗುತ್ತವೆ. ಬೌದ್ಧಧರ್ಮದಲ್ಲಿಯೂ ಸ್ವರ್ಗ, ಮತರ್್ಯ ಮತ್ತು ಪಾತಾಳಗಳ ಕಲ್ಪನೆಯುಂಟು. ಪಾಪಕ್ಕೆ ಪ್ರಾಯಶ್ಚಿತ್ತವಾಗಿ ನರಕದ ನೋವನ್ನೂ ಪುಣ್ಯದ ಫಲವಾಗಿ ಸ್ವರ್ಗದ ಸುಖವನ್ನೂ ಜೀವಿ ಅನುಭವಿಸುತ್ತಾನೆ. ಆದರೆ ಬೌದ್ಧಧರ್ಮದಲ್ಲಿ ಬಾಳಿನ ಪರಮಪುರುಷಾರ್ಥವಾದ ಜೀವನ್ಮುಕ್ತಿ ಸ್ವರ್ಗಕ್ಕಿಂತಲೂ ಅತೀತವಾದದ್ದು. ಜೀವನ್ಮುಕ್ತಿ ದಶೆಯೇ ಬೌದ್ಧರ ನಿರ್ವಾಣ. ಹಿಂದೂ ಧರ್ಮದಲ್ಲಿ ಕರ್ಮ ಅಥವಾ ಅದೃಷ್ಟಕ್ಕೆ ಪ್ರಮುಖ ಸ್ಥಾನವಿದೆ. ಮಾನವ ಅರಿತೋ ಅರಿಯದೆಯೋ ಎಸಗುವ ಅನೇಕ ತಪ್ಪುಗಳಿಗೆ ಸೂಕ್ತವಾದ ವಿಧಿವತ್ತಾದ ಪರಿಹಾರಗಳೂ ಇವೆ. ಆದರೂ ಬಾಳನ್ನೆಲ್ಲ ನಿಯಂತ್ರಿಸುವ ಒಂದು ವ್ಯಾಪಕತತ್ತ್ವವನ್ನು ವಿಧಿ ಎಂದು ಕರೆಯಲಾಗಿದೆ. ಹಿಂದೂ ಧರ್ಮದಲ್ಲಿ ಅಂತ್ಯೇಷ್ಟಿ ಅಂದರೆ ಸತ್ತಾಗ ಆಚರಿಸಬೇಕಾದ ವೈದಿಕಕರ್ಮಗಳನ್ನು ಬಹಳ ವಿವರವಾಗಿ ಅಥರ್ವವೇದ ಶತಪಥಬ್ರಾಹ್ಮಣ ಮುಂತಾದ ಗ್ರಂಥಗಳಲ್ಲಿ ಹೇಳಲಾಗಿದೆ. ಮೃತ್ಯುವಿನ ಅಧಿದೇವತೆ ಅಥವಾ ಧರ್ಮದ ದೇವತೆ ಎನಿಸಿದ ಯಮ ಮಾನವನ ಪಾಪಪುಣ್ಯಗಳ ವಿಚಾರದಲ್ಲಿ ತೀರ್ಮಾನಿಸತಕ್ಕವ. ಋಗ್ವೇದದಲ್ಲಿ ಯಮ ಧರ್ಮದ ದೇವತೆಯಾಗಿ ಕಂಡುಬಂದರೂ ಅವನು ಭಯಂಕರರೂಪಿಯೂ ನರಕದ ಅಧಿಪತಿಯೂ ಎನಿಸಿದಂತೆ ವಿವರಗಳಿವೆ. ಅಥರ್ವವೇದದಲ್ಲಿ ಅವನು ಧರ್ಮಾಧರ್ಮಗಳನ್ನು ನಿರ್ಣಯಿಸುವ ಅಧಿದೇವತೆ ಎಂಬ ಮಾತುಗಳಿವೆ. ಸತ್ತಮೇಲೆ ಆತ್ಮ ಅನುಭವಿಸುವ ಸುಖದುಃಖಗಳ ವಿಚಾರದಲ್ಲಿ ಸಾಧಾರಣವಾಗಿ ಪ್ರಚಾರದಲ್ಲಿರುವ ಅನೇಕ ಅಭಿಪ್ರಾಯಗಳು ಶತಪಥಬ್ರಾಹ್ಮಣದಿಂದ ಬಂದಂತೆ ಕಾಣುತ್ತವೆ. ಅಶರೀರಿ ಆತ್ಮ ಬೆಂಕಿಯ ಬೇಗೆಗೆ ಸಿಕ್ಕುತ್ತದೆ. ಪುಣ್ಯಶಾಲಿಯಾದರೆ ಅದನ್ನು ಸುಲಭವಾಗಿ ಸಹಿಸುತ್ತದೆ. ಇಲ್ಲವಾದರೆ ದಾರುಣವಾದ ನೋವನ್ನು ಅನುಭವಿಸಬೇಕಾಗುತ್ತದೆ. ಇದಾದಮೇಲೆ ಪುಣ್ಯವಂತರು ಸ್ವರ್ಗಾರೋಹಿಗಳಾಗುತ್ತಾರೆ. ಪಾಪಿಗಳು ನರಕಕ್ಕೆ ಬೀಳುತ್ತಾರೆ. ಹೀಗೆ ಯಮಧರ್ಮ ಅವರವರ ಪಾಪಪುಣ್ಯಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸಿ ಅದನ್ನು ಅನುಭವಿಸುವಂತೆ ನೋಡಿಕೊಳ್ಳುತ್ತಾನೆ. ಆದರೆ ಹಿಂದೂ ಧರ್ಮ ಆತ್ಮನಿಗೆ ಇದೇ ಕೊನೆಯ ಗತಿ ಎಂದು ಹೇಳಿಲ್ಲ. ಸ್ವರ್ಗದ ಸುಖವಾಗಲೀ, ನರಕದ ಯಾತನೆಯಾಗಲೀ ಶಾಶ್ವತವಲ್ಲ. ಪಾಪಪುಣ್ಯಗಳು ಕ್ಷೀಣವಾದರೆ ಪುನಃ ಪುನಃ ಮತರ್್ಯಲೋಕಕ್ಕೆ ಆಗಮಿಸಲೇಬೇಕು. ಈ ಪುನರ್ಜನ್ಮವನ್ನು ಮೀರಿ ಜೀವ ನಿತ್ಯ ಮುಕ್ತವಾಗಬೇಕಾದರೆ ಶೈವರ ಪ್ರಕಾರ ಶಿವನ, ವೈಷ್ಣವರ ಪ್ರಕಾರ ವಿಷ್ಣುವಿನ ಅನುಗ್ರಹ ಪಡೆಯಬೇಕು. ಇದು ಸಾವಿನ ಆಚಿನ ಮುಕ್ತಿದಶೆ. ಶಂಕರಾಚಾರ್ಯರ ಪ್ರಕಾರ ಪರಮಮುಕ್ತಿಯೆಂದರೆ ಬ್ರಹ್ಮನ ಸಾನ್ನಿಧ್ಯದಲ್ಲಿ ಬ್ರಹ್ಮನಲ್ಲಿ ಐಕ್ಯವಾಗುವುದು. ಈ ಮುಕ್ತಿ ಇಹಲೋಕದಲ್ಲಿ ಜೀವಂತವಾಗಿರುವಾಗಲೇ ಪಡೆಯಬಹುದಾದ ಪರಮಗತಿ. ಹೀಗೆ ವಿವಿಧ ಧರ್ಮಗಳು ತಮ್ಮ ಧಾರ್ಮಿಕ ನಂಬಿಕೆ ಮತ್ತು ತತ್ತ್ವದರ್ಶನಕ್ಕೆ ಹೊಂದಿದಂತೆ ಸಾವಿನಿಂದಾಚೆಗೆ ಮಾನವನ ಅಂತಿಮ ಗತಿ ಏನು ಎಂಬ ಬಗ್ಗೆ ಯೋಚಿಸಿವೆ. ಅಷ್ಟೇ ಏಕೆ, ಅದಕ್ಕನುಗುಣವಾಗಿಯೇ ಶವಸಂಸ್ಕಾರಗಳ ವಿಧಾನಗಳೂ ಏರ್ಪಟ್ಟಿವೆ. ಸತ್ತವನನ್ನು ಸಮಾಧಿ ಮಾಡುವ ಕ್ರಮ, ಇಲ್ಲವೆ ಚಿತೆಯಲ್ಲಿ ಸುಡುವ ವಿಧಾನಗಳು ಧಾರ್ಮಿಕಶ್ರದ್ಧೆಗೆ ಅನುಗುಣವಾಗಿ ರೂಢಿಗೆ ಬಂದಿವೆ. ಮಾನವನ ಅಂತಿಮಗತಿ ಏನು ಎಂದು ಚಿಂತಿಸಿದ ಹಾಗೆಯೇ ಈ ಜಗತ್ತಿನ ಅಂತಿಮಗತಿ ಏನು ಎಂಬ ವಿಚಾರದಲ್ಲಿಯೂ ತಮ್ಮ ದೃಷ್ಟಿ ಹರಿಸಿದ್ದಾರೆ. ವಿಶ್ವದ ಕಾಲವನ್ನು ಯುಗಯುಗಗಳ ಮಾನದಲ್ಲಿ ಅಳೆದು ಕಲ್ಪಿಸಿದ್ದಾರೆ. ಅಂತೂ ಕೊನೆಗೊಮ್ಮೆ ಜಗತ್ತಿನ ಲಯವೂ ಅನಿವಾರ್ಯವೆಂಬುದು ಎಲ್ಲ ಧರ್ಮಗಳ ಒಮ್ಮತ.

Tags:

ಧರ್ಮಭಾರತೀಯಸ್ವರ್ಗ

🔥 Trending searches on Wiki ಕನ್ನಡ:

ದಿಕ್ಕುಚಾಮರಾಜನಗರವಿಜಯವಾಣಿವಿಷ್ಣುವರ್ಧನ್ (ನಟ)ಲಗೋರಿಭೂಕಂಪಹೆಚ್.ಡಿ.ದೇವೇಗೌಡತುಂಗಭದ್ರ ನದಿನಗರನದಿಗೀತಾ (ನಟಿ)ಮಡಿಕೇರಿನಚಿಕೇತಅಸ್ಪೃಶ್ಯತೆಭರತನಾಟ್ಯವಚನ ಸಾಹಿತ್ಯಟೊಮೇಟೊಭಾರತದಲ್ಲಿ ಮೀಸಲಾತಿಸೈಯ್ಯದ್ ಅಹಮದ್ ಖಾನ್ವೇದವ್ಯಾಸಮಾರೀಚಡ್ರಾಮಾ (ಚಲನಚಿತ್ರ)ಪು. ತಿ. ನರಸಿಂಹಾಚಾರ್ಅ.ನ.ಕೃಷ್ಣರಾಯಸ್ವರಾಜ್ಯತಾಪಮಾನದಯಾನಂದ ಸರಸ್ವತಿಸಮುಚ್ಚಯ ಪದಗಳುಭಾರತದ ಚುನಾವಣಾ ಆಯೋಗನರೇಂದ್ರ ಮೋದಿಜೀವನಮುದ್ದಣಜೋಗಿ (ಚಲನಚಿತ್ರ)ಎಕರೆಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ರಾಶಿಶಾತವಾಹನರುಅಯೋಧ್ಯೆವ್ಯವಸಾಯಚಿತ್ರದುರ್ಗ ಜಿಲ್ಲೆಕಳಸಅರ್ಥಶಾಸ್ತ್ರನಿರುದ್ಯೋಗಆಮ್ಲಗಳು ಮತ್ತು ಪ್ರತ್ಯಾಮ್ಲಗಳುಕರ್ನಾಟಕದ ಕಲೆ ಮತ್ತು ಸಂಸ್ಕೃತಿರವಿಕೆಶಾಸನಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಬ್ಲಾಗ್ಮೈಸೂರುಭಾರತದ ಸಂವಿಧಾನ ರಚನಾ ಸಭೆವೀರಗಾಸೆವಿನಾಯಕ ಕೃಷ್ಣ ಗೋಕಾಕಭಗತ್ ಸಿಂಗ್ಸಂವಹನಕೃಷ್ಣಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಉತ್ತರ ಕನ್ನಡಮಂಜುಳಕಾರ್ಮಿಕರ ದಿನಾಚರಣೆಮಹಮದ್ ಬಿನ್ ತುಘಲಕ್ರಾಹುಲ್ ಗಾಂಧಿಹೊನ್ನಾವರಶಾಲೆನಿಯತಕಾಲಿಕಕ್ರಿಯಾಪದವಚನಕಾರರ ಅಂಕಿತ ನಾಮಗಳುಲೋಪಸಂಧಿಓಂ ನಮಃ ಶಿವಾಯಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾಷೆಭಾರತದ ಆರ್ಥಿಕ ವ್ಯವಸ್ಥೆಬಿ. ಶ್ರೀರಾಮುಲುಉಪೇಂದ್ರ (ಚಲನಚಿತ್ರ)🡆 More