ವೆಂಗಿನಾಡು - ಪಶ್ಚಿಮ ಗೋದಾವರಿಯ ಎಲ್ಲೋರದ ಉತ್ತರಕ್ಕಿರುವ ಪೆದ್ದ ವೇಗಿ ಪ್ರದೇಶವೆಂದು ಇತಿಹಾಸಕಾರರ ಅಭಿಪ್ರಾಯವಾಗಿದೆ.
ಹರಿಷೇಣ ಕೃಷ್ಣಾ ಮತ್ತು ಗೋದಾವರಿ ನಡುವೆ ಇರುವ ಪ್ರದೇಶ ವೆಂಗಿ ಎಂದು ಕರೆದಿದ್ದಾನೆ. ಯುವಾನ್ ಚಾಂಗ್ (ಹ್ಯೂಯನ್ ತ್ಸಾಂಗ್)ನು ಪಿಂಗ್.ಕಿ.ಲೇ.ಯನ್ನು ವೆಂಗಿಪುರವೆಂದು ಕರೆದಿದ್ದಾನೆ. ಇದನ್ನು ಪಲ್ಲವ ಶಾಸನಗಳಲ್ಲಿ ವೆಂಗಿರಾಷ್ಟ್ರ ಎಂದೂ ಕರೆಯಲಾಗಿದೆ. ವೆಂಗಿ ಎಂಬ ಹೆಸರು ನಿರ್ದಿಷ್ಟ ಅರ್ಥದಲ್ಲಿ ರಾಜಧಾನಿಗೂ ವಿಶಾಲಾರ್ಥದಲ್ಲಿ ಒಂದು ರಾಷ್ಟ್ರ, ದೇಶ, ಮಂಡಲಕ್ಕೂ ಅನ್ವಯಿಸುತ್ತಿದ್ದಂತೆ ಕಾಣುತ್ತದೆ. ಗೋದಾವರಿ ಮತ್ತು ಕೃಷ್ಣಾನದಿಗಳ ನಡುವೆ ಇರುವ ಪ್ರದೇಶಕ್ಕೆ ಮಾತ್ರ ವೆಂಗಿಯೆಂದೂ ಗೋದಾವರಿಯಿಂದ ಕಳಿಂಗದವರೆಗಿರುವ ಪ್ರದೇಶಕ್ಕೆ ಆಂಧ್ರವೆಂದೂ ಕರೆಯುತ್ತಿದ್ದರೆಂದು ವ್ಯಕ್ತವಾಗುತ್ತದೆ. ವೆಂಗಿ ಅತಿ ಪ್ರಾಚೀನ ಕಾಲದಿಂದಲೂ ದೇಶ-ವಿದೇಶಗಳೊಡನೆ ವಾಣಿಜ್ಯ-ವ್ಯಾಪಾರ ಮೊದಲಾದ ಸಂಪರ್ಕ ವಿಟ್ಟುಕೊಂಡು, ಸಂಸ್ಕøತಿಯ ಬೆಳೆವಣಿಗೆಯಲ್ಲಿಯೂ ಮಹತ್ತರ ಪಾತ್ರವಹಿಸಿದೆ. ಲೆಂಡಲೂರು, ಪೆದ್ದ ಮತ್ತು ಚಿನ್ನವೆಂಗಿಯ ಸುತ್ತಲೂ ಅನೇಕ ಐತಿಹಾಸಿಕ ಸ್ಮಾರಕಗಳಿವೆ.
ವೆಂಗಿಯನ್ನು ಸಾತವಾಹನರ ಸಾಮಂತ ಅರಸನಾದ ಸಾಲಂಕಾಯನ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ವಿಜಯದೇವ ವರ್ಮ ವೆಂಗಿಯಲ್ಲಿ ಅಧಿಕಾರ ಸ್ಥಾಪಿಸಿದ. ಅವನ ಅನಂತರ ಸಮುದ್ರಗುಪ್ತನ ಸಮಕಾಲೀನನಾದ ಹಸ್ತಿವರ್ಮ ಮೊದಲಾದವರು ಆಳಿದ ತರುವಾಯ ವಿಜಯ ಸ್ಕಂದನ ಆಳಿಕೆಯಲ್ಲಿ ಪಲ್ಲವರಿಂದ ಸೋಲಿಸಲ್ಪಟ್ಟರು. ಅನಂತರ ಪಲ್ಲವರಿಂದ ವಿಷ್ಣುಕುಂಡಿ ವಂಶಜರು ವೆಂಗಿಯ ಸ್ವಾತಂತ್ರ್ಯ ಪಡೆದು 5ನೆಯ ಶತಮಾನದ ಆದಿ ಭಾಗದವರೆಗೂ ಲೆಂಡಲೂರನ್ನು ರಾಜಧಾನಿಯ ನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ ವಿಷಯ ಅನೇಕ ಶಾಸನಗಳಿಂದ ತಿಳಿಯುತ್ತದೆ. ಇವರು ವೆಂಗಿಯನ್ನು 150 ವರ್ಷಗಳವರೆಗೂ ಆಳಿದರು. ಚಳುಕ್ಯರ ಎರಡನೆಯ ಪುಲಕೇಶಿ ವಿಷ್ಣುಕುಂಡಿ 4ನೆಯ ಮಾಧವನನ್ನು ಸೋಲಿಸಿ ವೆಂಗಿ ರಾಜ್ಯವನ್ನು ವಶಪಡಿಸಿಕೊಂಡು ಅಲ್ಲಿ ತನ್ನ ತಮ್ಮ ಕುಬ್ಜವಿಷ್ಣುವರ್ಧನನನ್ನು ನೇಮಿಸಿದ.
ವಿಷ್ಣುಕುಂಡಿವಂಶಜರು ವಿಷ್ಣುವರ್ಧನನ ಕಾಲದಿಂದಲೇ ಬೇರೆಯವರ ಅಧೀನಕ್ಕೆ ಒಳಪಟ್ಟು ವೆಂಗಿ ರಾಜ್ಯವನ್ನು ಆಳುತ್ತಿದ್ದರೆಂದು ನೀಲಕಂಠ ಶಾಸ್ತ್ರೀಯವರು ಅಭಿಪ್ರಾಯಪಟ್ಟಿದ್ದಾರೆ. ಇವನ ವಂಶದವರೇ ಆದ ಪೂರ್ವ ಚಾಳುಕ್ಯರು 5 ಶತಮಾನಗಳವರೆಗೆ ವೆಂಗಿರಾಜ್ಯದಲ್ಲಿ ಆಳಿಕೆ ನಡೆಸಿದರು. ರಾಷ್ಟ್ರಕೂಟರ ಮೂರನೆಯ ಗೋವಿಂದ ವೆಂಗಿ ರಾಜ್ಯವನ್ನು ಪಡೆಯಲು ಪ್ರಯತ್ನಿಸಿದ. ಆದರೆ ವಿಜಯಾದಿತ್ಯ ಇವನ ಮೇಲೆ ಯುದ್ಧಮಾಡಿ ತನ್ನ ಪ್ರದೇಶವನ್ನು ಉಳಿಸಿಕೊಂಡ. ರಾಷ್ಟ್ರಕೂಟ ಮತ್ತು ಪೂರ್ವ ಚಾಳುಕ್ಯರ ನಡುವಿನ ಕದನದಲ್ಲಿ ಶತ್ರುಗಳು ಮತ್ತು ದಂಗೆಕೋರರು ವೆಂಗಿಯನ್ನು ಸುಟ್ಟು ನಾಶಮಾಡಿದರು. ಅನಂತರ ಅಮ್ಮರಾಜ ಎಲ್ಲರನ್ನೂ ಸೋಲಿಸಿ ವೆಂಗಿಪುರವನ್ನು ತ್ಯಜಿಸಿ ರಾಜಮಹೇಂದ್ರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡನೆಂದು ಕೆಲವರು ಅಭಿಪ್ರಾಯಪಟ್ಟಿ ದ್ದಾರೆ. ಆದರೆ ಇದಕ್ಕೆ ಸಾಕಷ್ಟು ಆಧಾರವಿಲ್ಲ. ಆದರೂ ವೆಂಗಿ ಎಂಬ ಹೆಸರು ರಾಜ್ಯದ ಹೆಸರಾಗಿ ಶಾಶ್ವತವಾಗಿ ಉಳಿದಿದೆ. ಇಂದು ವೆಂಗಿಪುರ ಹಾಳಾಗಿದ್ದು ಅದರ ಅವಶೇಷಗಳನ್ನು ಕಾಣಬಹುದಾಗಿದೆ. ಪ್ರಾಚೀನದಲ್ಲಿ ವೆಂಗಿ ಇದ್ದ ಸ್ಥಳದಲ್ಲಿ ಲೆಂಡಲೂರು, ಚಿನ್ನವೇಗಿ, ಪೆದ್ದವೇಗಿ ಮೊದಲಾದ ಹಳ್ಳಿಗಳಿವೆ.
10ನೆಯ ಶತಮಾನದ ವೇಳೆಗೆ ಚೋಳರ ಒಂದನೆಯ ರಾಜರಾಜ ಬಾದಾಮಿ ಚಳುಕ್ಯರನ್ನು ಸದೆಬಡಿದು ಶಕ್ತಿವರ್ಮನನ್ನು ವೆಂಗಿಯ ಅರಸನನ್ನಾಗಿ ಮಾಡಿದ. ಅನಂತರ ರಾಜರಾಜನ ಮಗ ರಾಜೇಂದ್ರ ವೆಂಗಿಮಂಡಲವನ್ನು ಆಕ್ರಮಿಸಿಕೊಂಡ. 13ನೆಯ ಶತಮಾನದ ವೇಳೆಗೆ ಕಾಕತೀಯರು ವೆಂಗಿಯನ್ನು ವಶಪಡಿಸಿಕೊಂಡ ಸ್ವಲ್ಪಸಮಯದಲ್ಲೇ ರೆಡ್ಡಿ ಮನೆತನದ ಆಳಿಕೆಗೆ ಒಳಗಾಯಿತು. 1454ರ ವೇಳೆಗೆ ಕಳಿಂಗ ಅಥವಾ ಒರಿಸ್ಸದ ಗಜಪತಿ ಅರಸರು ರಾಜ್ಯ ವಿಸ್ತರಿಸಿ, ಕೊಂಡವೀಡು, ವೆಂಗಿಯೂ ಸೇರಿದಂತೆ ಗೋದಾವರಿ ಪ್ರಾಂತ ಗಜಪತಿಯ ಆಳಿಕೆಗೆ ಬಂದಂತೆ ಕಾಣುತ್ತದೆ.
This article uses material from the Wikipedia ಕನ್ನಡ article ವೆಂಗಿನಾಡು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.