ಸಿ.ಪಿ.
ಕೃಷ್ಣಕುಮಾರ್ (ಸಿ.ಪಿ.ಕೆ.) ಅಂದರೆ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡರ ಮಗ ಕೃಷ್ಣಕುಮಾರ್ ಅವರು ೧೯೩೯ ಎಪ್ರಿಲ್ ೮ ರಂದು ಜನಿಸಿದರು. ತಾಯಿ ಚಿಕ್ಕಮ್ಮ; ತಂದೆ ಪುಟ್ಟೇಗೌಡರು ಮೋಜಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಸಿ.ಪಿ.ಕೆ. ೯ ತಿಂಗಳ ಕೂಸಿದ್ದಾಗ ತಾಯಿ ತೀರಿಕೊಂಡರು.
ಸಿ. ಪಿ. ಕೃಷ್ಣಕುಮಾರ್ | |
---|---|
ಜನನ | ಏಪ್ರಿಲ್ ೮. ೧೯೩೯ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಚಿಕ್ಕನಾಯಕನ ಹಳ್ಳಿ |
ವೃತ್ತಿ | ಅಧ್ಯಾಪಕರು, ಸಂಶೋಧಕರು |
ವಿಷಯ | ಕನ್ನಡ ಸಾಹಿತ್ಯ |
ಸಿ.ಪಿ.ಕೆ.ಯವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ) ಪದವಿಯನ್ನು ಪಡೆದರು.೧೯೬೧ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು. ಅಲ್ಲದೆ ಭಾರತೀಯ ವಿದ್ಯಾ ಭವನದ ಸಂಸ್ಕೃತ ಕೋವಿದ ಪದವಿಯನ್ನು ಸಹ ಪಡೆದರು. ಅದೇ ವರ್ಷ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ೧೯೬೨ರಲ್ಲಿ ಸಿ.ಪಿ.ಕೆ.ಯವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. ೧೯೬೪ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು. ೧೯೬೭ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. ೧೯೬೯ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾದರು. ೧೯೭೪ರಲ್ಲಿ ಪಿ.ಎಚ್.ಡಿ. ಪಡೆದ ಬಳಿಕ ೧೯೮೦ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿಯೇ ಪ್ರಾಧ್ಯಾಪಕರಾದರು. ಆನಂತರ ಆ ಸಂಸ್ಥೆಯ ನಿರ್ದೇಶಕರೂ ಆದರು.
ಸಿ.ಪಿ.ಕೆ ಅವರು ನಿವೃತ್ತಿಯ ನಂತರವೂ ಹೊತ್ತ ಜವಾಬ್ದಾರಿಗಳು ಹಲವಾರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾಗಿ, ಮೈಸೂರು ವಿ.ವಿ.ದ ಪ್ರಸಾರಾಂಗದ ಗ್ರಂಥ ಪ್ರಕಟಣಾ ಸಮಿತಿ ಅಧ್ಯಕ್ಷರಾಗಿ, ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ, ಸಮಗ್ರವಚನ ಸಂಪುಟಗಳ ಸಂಪಾದಕ ಮಂಡಲಿ, ರಾಜ್ಯ ಗ್ರಂಥಾಲಯ ಇಲಾಖೆಯ ಗ್ರಂಥ ಖರೀದಿ ಅಯ್ಕೆ ಸಮಿತಿ, ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಮುಂತಾದವುಗಳಲ್ಲೂ ತಮ್ಮ ಅತ್ಯಮೂಲ್ಯ ಸಲಹೆ, ಸಹಕಾರಗಳನ್ನು ನೀಡಿದ್ದಾರೆ.
ಸಿ. ಪಿ. ಕೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ವಿಚಾರ ಸಂಕಿರಣಗಳಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗೆಯಲ್ಲಿ ನಡೆದ ಅಖಿಲ ಭಾರತ 49ನೆಯ ಕನ್ನಡ ಸಮ್ಮೇಳನದ ಭಾಷಾಂತರ ಗೋಷ್ಠಿಯ ಅಧ್ಯಕ್ಷತೆ, 1971ರಲ್ಲಿ ನಾಗಮಂಡಲದಲ್ಲಿ ನಡೆದ ಜಾನಪದ ಸಮ್ಮೇಳನದ ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ, ಟಿ. ನರಸೀಪುರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1994ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, 1994ರಲ್ಲಿ ಲಕ್ನೋದಲ್ಲಿ ನಡೆದ ಗಣರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಕೆ, 2011ರಲ್ಲಿ ಗಂಗಾವತಿಯಲ್ಲಿ ನಡೆದ 78ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ – ಹೀಗೆ ಹಲವಾರು ಗೌರವಗಳು ಪ್ರೊ. ಸಿ.ಪಿ. ಕೃಷ್ಣಕುಮಾರ್ ಅವರಿಗೆ ಸಂದಿವೆ.
ಸಿ.ಪಿ.ಕೆ ಅವರ ಸಾಹಿತ್ಯದ ಬಹುಮುಖ ಕೊಡುಗೆಗಳಿಗಾಗಿ ಸಂದ ಪ್ರಶಸ್ತಿಗಳು ಹಲವಾರು. ‘ವಚನ ವಿಲೋಕನ’ ಕೃತಿಗೆ ಬಸವ ವೇದಿಕೆಯು ‘ಬಸವ ಸಾಹಿತ್ಯಶ್ರೀ’ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಚಿತ್ರದುರ್ಗದ ಬೃಹನ್ಮಠದ ‘ವಿದ್ವತ್ ಶಿರೋಮಣಿ’ ಪ್ರಶಸ್ತಿ, ಮುಕ್ತಕ ಅಕಾಡಮಿಯಿಂದ ‘ಹನಿಗವನ ಹರಿಕಾರ’, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ಎಚ್.ಎಲ್. ನಾಗೇಗೌಡ ‘ಜಾನಪದ ತಜ್ಞ’ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಎಸ್.ವಿ.ಪಿ. ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ಇನ್ನೂ ಮುಂತಾದ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಪ್ರೊ. ಸಿ.ಪಿ. ಕೃಷ್ಣಕುಮಾರ್ ಅವರಿಗೆ ಅಭಿಮಾನಿಗಳು ಅರ್ಪಿಸಿರುವ ಗೌರವ ಗ್ರಂಥ ‘ಸಾರ್ಥಕ’.
This article uses material from the Wikipedia ಕನ್ನಡ article ಸಿ.ಪಿ. ಕೃಷ್ಣಕುಮಾರ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.