ಸ್ತ್ರೀ ೨೦೧೮ರ ಒಂದು ಹಿಂದಿ ಹಾಸ್ಯ ಹಾಗೂ ಭಯಪ್ರಧಾನ ಚಲನಚಿತ್ರ.
ಈ ಚಿತ್ರವನ್ನು ಅಮರ ಕೌಶಿಕ್ ನಿರ್ದೇಶಿಸಿದ್ದಾರೆ, ರಾಜ್ ನಿಡಿಮೋರು ಹಾಗೂ ಕೃಷ್ಣ ಡಿ.ಕೆ. ಬರೆದಿದ್ದಾರೆ. ಸ್ತ್ರೀ ಚಿತ್ರದ ಕಥೆಯು ಬೆಂಗಳೂರು ನಗರದ ಕಲ್ಪಿತ ಕಥೆ ನಾಳೆ ಬಾ ವನ್ನು ಆಧರಿಸಿದೆ. ಈ ಚಿತ್ರ ರಾತ್ರಿಯ ವೇಳೆ ಜನರ ಮನೆಗಳ ಬಾಗಿಲುಗಳನ್ನು ತಟ್ಟುವ ಒಂದು ದೆವ್ವದ ಬಗ್ಗೆ ಆಗಿದೆ. ಮುಖ್ಯಪಾತ್ರಗಳಲ್ಲಿ ರಾಜ್ಕುಮಾರ್ ರಾವ್ ಹಾಗೂ ಶ್ರದ್ದಾ ಕಪೂರ್ ನಟಿಸಿದ್ದಾರೆ. ಪಂಕಜ್ ತ್ರಿಪಾಠಿ, ಅಪಾರ್ಶಕ್ತಿ ಖುರಾನಾ ಹಾಗೂ ಅಭಿಷೇಕ್ ಬ್ಯಾನರ್ಜಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ತ್ರೀ ೩೧ ಆಗಸ್ಟ್ ೨೦೧೮ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ಮತ್ತು ಚಿತ್ರದ ಕೌಶಲ/ಜಾಣ್ಮೆಯನ್ನು ಹೊಗಳಲಾಯಿತು, ಆದರೆ ಚಿತ್ರದ ಅವಧಿ ಬಗ್ಗೆ ಸ್ವಲ್ಪ ಟೀಕೆ ಪಡೆಯಿತು. ₹23–24 ಕೋಟಿಯಲ್ಲಿ ನಿರ್ಮಾಣವಾಗಿದ್ದ ಇದು, ₹180 ಕೋಟಿಗಿಂತ ಹೆಚ್ಚು ಒಟ್ಟು ಮೊತ್ತದ ಹಣವನ್ನು ಗಳಿಸಿತು. ೬೪ನೇ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಮತ್ತು ಅತ್ಯುತ್ತಮ ಪೋಷಕ ನಟ ಸೇರಿದಂತೆ, ಸ್ತ್ರೀ ಹತ್ತು ನಾಮನಿರ್ದೇಶನಗಳನ್ನು ಪಡೆಯಿತು. ಕೌಶಿಕ್ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಗೆದ್ದುಕೊಂಡರು. ಸ್ಟ್ರೀ 2 ಮುಂದುವರಿದ ಭಾಗವು ಅಭಿವೃದ್ಧಿಯಲ್ಲಿದೆ, ಪೂರ್ವಭಾವಿಯಾಗಿ ನಿಖರವಾಗಿ 6 ವರ್ಷಗಳ ನಂತರ ಆಗಸ್ಟ್ 31, 2024 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇದರ ಕಥಾವಸ್ತು ರಾತ್ರಿಯ ವೇಳೆ ಒಂಟಿಯಾಗಿರುವ ಪುರುಷರ ಮೇಲೆ ದಾಳಿ ಮಾಡಿ, ಕೇವಲ ಅವರ ಬಟ್ಟೆಗಳನ್ನು ಹಿಂದೆ ಬಿಡುವ ಹೆಣ್ಣು ದೆವ್ವದ ಬಗ್ಗೆ ಇರುವ ಭಾರತೀಯ ಜಾನಪದ ಕಥೆಯನ್ನು ಆಧರಿಸಿದೆ. ಚಂದೇರಿ ಎಂಬ ಹೆಸರಿನ ಪಟ್ಟಣದ ನಿವಾಸಿಗಳು "ಸ್ತ್ರೀ" ಎಂದು ಕರೆಯಲ್ಪಡುವ ಒಬ್ಬ ಸಿಟ್ಟಿರುವ ಮಹಿಳೆಯ ಆತ್ಮವನ್ನು ನಂಬಿರುತ್ತಾರೆ. ಇವಳು ಪ್ರತಿ ವರ್ಷದ ಒಂದು ಹಬ್ಬದ ನಾಲ್ಕು ದಿನಗಳಂದು ಗಂಡಸರನ್ನು ಹಿಂಬಾಲಿಸಿ ಎತ್ತಿಕೊಂಡು ಹೋಗುತ್ತಿರುತ್ತಾಳೆ, ಮತ್ತು ಅನೇಕರು ಕಣ್ಮರೆಯಾಗುವಂತೆ ಮಾಡುತ್ತಿರುತ್ತಾಳೆ. ನಿವಾಸಿಗಳನ್ನು ರಕ್ಷಿಸಲು, "ಹೇ ಸ್ತ್ರೀ, ನಾಳೆ ಬಾ" ಎಂದು ಎಲ್ಲ ಮನೆಗಳ ಪ್ರವೇಶದ ಮೇಲೆ ಬಾವಲಿಯ ರಕ್ತದಿಂದ ಬರೆದಿರಲಾಗುತ್ತದೆ. ಹಬ್ಬದ ದಿನಗಳಂದು ಗಂಡಸರು ರಾತ್ರಿ ೧೦ ರ ನಂತರ ಏಕಾಂತವಾಗಿ ಓಡಾಡಬಾರದೆಂದು, ಮತ್ತು ಸುರಕ್ಷತೆಗಾಗಿ ಗುಂಪುಗಳಲ್ಲಿ ಓಡಾಡಬೇಕೆಂದು ಸಲಹೆ ನೀಡಲಾಗಿರುತ್ತದೆ. ತಮ್ಮ ಸ್ವಂತದ ಸುರಕ್ಷತೆಗಾಗಿ ಇದೇ ರೀತಿಯ ಸೂಚನೆಗಳನ್ನು ಅನುಸರಿಸಬೇಕೆಂದು ಮಹಿಳೆಯರಿಗೆ ಸೂಚನೆ ನೀಡಲಾಗಿರುತ್ತದೆ.
ಚಂದೇರಿಯಲ್ಲಿನ ಒಬ್ಬ ಹೆಂಗಸರ ದರ್ಜಿ ವಿಕ್ಕಿಯು (ರಾಜ್ಕುಮಾರ್ ರಾವ್) ಕೇವಲ ವಾರ್ಷಿಕ ದುರ್ಗಾ ಪೂಜಾ ಋತುವಿನಲ್ಲಿ ಕಾಣಿಸುವ ಒಬ್ಬ ನಗರದ ಹಾಗೂ ನಿಗೂಢ ಹುಡುಗಿಯನ್ನು (ಶ್ರದ್ಧಾ ಕಪೂರ್) ಪ್ರೀತಿಸತೊಡಗುತ್ತಾನೆ. ಅವಳು ಆಗಾಗ್ಗೆ ಕಣ್ಮರೆಯಾಗುವುದು, ಅವಳ ಖರೀದಿ ಪಟ್ಟಿಯು ಮಾಟ ಮಂತ್ರದ ವಸ್ತುಗಳನ್ನು ಒಳಗೊಂಡಿರುವುದು ಮತ್ತು ಅವಳು ಬೇರೇಯವರಾರ ಕಣ್ಣಿಗೂ ಕಾಣಿಸದಿರುವ ಸಂಗತಿಯು ಅವನ ಸ್ನೇಹಿತರಿಗೆ ಅನುಮಾನ ಬರುವಂತೆ ಮಾಡುತ್ತದೆ, ಮತ್ತು ಅವಳು ಸ್ತ್ರೀ ಆಗಿರಬಹುದು ಎಂದು ನಂಬಲು ಆರಂಭಿಸುತ್ತಾರೆ. ತನ್ನ ಒಬ್ಬ ಸ್ನೇಹಿತ ಜಾನಾನನ್ನು ಸ್ತ್ರೀ ಅಪಹರಿಸಿದಾಗ, ಅವನನ್ನು ಉಳಿಸಲು ವಿಕ್ಕಿ ಆ ಕಥೆಯನ್ನು ಸಂಶೋಧಿಸತೊಡಗುತ್ತಾನೆ. ಅವನು ಒಬ್ಬ ಅಧಿಸಾಮಾನ್ಯ ತಜ್ಞನ ಒಡೆತನದಲ್ಲಿರುವ ಗ್ರಂಥಾಲಯದಲ್ಲಿ ಒಂದು ಪುಸ್ತಕವನ್ನು ಕಂಡುಹಿಡಿಯುತ್ತಾನೆ. ವಿಕ್ಕಿ, ಅವನ ಸ್ನೇಹಿತ ಬಿಟ್ಟು ಮತ್ತು ಗ್ರಂಥಪಾಲಕ ರುದ್ರ ಜಾನಾನನ್ನು ಕಂಡುಹಿಡಿಯಲು ಸ್ತ್ರೀಯ ಕೋಟೆಗೆ ಭೇಟಿನೀಡುತ್ತಾರೆ. ಸ್ತ್ರೀಯು ಬಿಟ್ಟು ಹಾಗೂ ರುದ್ರನನ್ನು ಓಡಿಸಿಬಿಡುತ್ತಾಳೆ ಮತ್ತು ವಿಕ್ಕಿಯ ಮೇಲೆ ದಾಳಿ ಮಾಡುತ್ತಾಳೆ ಆದರೆ ನಿಗೂಢ ಹುಡುಗಿಯು ಅವಳನ್ನು ಓಡಿಸುತ್ತಾಳೆ. ತನಗೆ ಹತ್ತಿರವಿದ್ದವನನ್ನು ಕಳೆದುಕೊಂಡ ಮೇಲೆ ಕಳೆದ ಕೆಲವು ವರ್ಷಗಳಿಂದ ತಾನು ಸ್ತ್ರೀಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದೇನೆ ಮತ್ತು ಹಾಗಾಗಿ ಹಬ್ಬದ ಋತುವಿನಲ್ಲಿ ಬರುತ್ತೇನೆಂದು ಅವಳು ಅವರಿಗೆ ಹೇಳುತ್ತಾಳೆ. ಜಾನಾ ಸಿಗುತ್ತಾನೆ, ಆದರೆ ಅವನು ವಿಚಿತ್ರವಾಗಿ ವರ್ತಿಸಲು ಆರಂಭಿಸುತ್ತಾನೆ. ಸ್ತ್ರೀಯ ನಿಯಂತ್ರಣದಲ್ಲಿ ಜಾನಾ ಎಲ್ಲರ ಮನೆಗಳ ಹೊರಗಿದ್ದ ರಕ್ಷಣಾ ಪದಗುಚ್ಛದಿಂದ "ನಾಳೆ" ಶಬ್ದವನ್ನು ಅಳಿಸಿದಾಗ "ಹೇ ಸ್ತ್ರೀ, ಬಾ" ಎಂದು ಆಹ್ವಾನವಾಗಿ ಉಳಿದ ನಂತರ ಮತ್ತಷ್ಟು ಗಂಡಸರು ಕಣ್ಮರೆಯಾಗುತ್ತಾರೆ.
ವಿಕ್ಕಿ ಮತ್ತು ಆ ಹುಡುಗಿಯು ಪುಸ್ತಕದ ಲೇಖಕನನ್ನು ಭೇಟಿಯಾಗುತ್ತಾರೆ. ಸ್ತ್ರೀ ಪಟ್ಟಣದಲ್ಲಿನ ಪ್ರತಿಯೊಬ್ಬ ಪುರುಷನು ಬಯಸಿದ ಒಬ್ಬ ಸೂಳೆಯಾಗಿದ್ದಳು ಎಂದು ಅವನು ಹೇಳುತ್ತಾನೆ. ಆದರೆ ಅವಳನ್ನು ನಿಜವಾಗಿ ಪ್ರೀತಿಸುವ ಪುರುಷ ಅವಳಿಗೆ ಸಿಗುತ್ತಾನೆ. ಅವರಿಬ್ಬರೂ ಮದುವೆಯಾಗಲು ನಿರ್ಧರಿಸುತ್ತಾರೆ. ಮದುವೆಯಾಗುವ ರಾತ್ರಿಯ ಸ್ವಲ್ಪ ಮೊದಲು, ಮಹಿಳೆಯರನ್ನು ಕೀಳಾಗಿ ಕಾಣುವ ಮತ್ತು ಸೂಳೆಯರು ಮದುವೆಯಾಗಬಾರದೆಂದು ಅಭಿಪ್ರಾಯಪಡುವ ಕೆಲವರು ಸ್ತ್ರೀ ಮತ್ತು ಅವಳ ಗಂಡನನ್ನು ಕೊಲ್ಲುತ್ತಾರೆ. ಅಂದಿನಿಂದ ಅವಳು ತನ್ನ ನಿಜವಾದ ಪ್ರೀತಿಗಾಗಿ ಹುಡುಕುತ್ತಿರುವಳು. ಅವನು ಅವರಿಗೆ ಸಂರಕ್ಷಕನತ್ತ ತೋರಿಸುವ ಭವಿಷ್ಯವಾಣಿಯನ್ನು ಹೇಳುತ್ತಾನೆ. ಸಂರಕ್ಷಕನ ಬಗ್ಗೆ ಇರುವ ಭವಿಷ್ಯವಾಣಿಯಲ್ಲಿ ಹೇಳಲಾದ ಎಲ್ಲ ಗುಣಗಳು ವಿಕ್ಕಿಯಲ್ಲಿವೆ ಎಂದು ತೋರುತ್ತದೆ. ವಿಕ್ಕಿ, ಅವನ ಸ್ನೇಹಿತರು ಮತ್ತು ಆ ಹುಡುಗಿ ಸ್ತ್ರೀಯನ್ನು ನಾಶಮಾಡಲು ಒಂದು ಜಾಲವನ್ನು ಒಡ್ಡುತ್ತಾರೆ. ಆದರೆ ಸ್ತ್ರೀ ಕೇವಲ ಪ್ರೀತಿ ಹಾಗೂ ಗೌರವವನ್ನು ಬಯಸುತ್ತಾಳೆ ಎಂದು ವಿಕ್ಕಿ ಅರಿತುಕೊಳ್ಳುತ್ತಾನೆ. ಅವಳನ್ನು ಕೊಲ್ಲುವ ಬದಲು, ಅವನು ಕೇವಲ ಅವಳ ಶಕ್ತಿಗಳ ಮೂಲವಾದ ಅವಳ ಉದ್ದನೆಯ ಜಡೆಯನ್ನು ಕತ್ತರಿಸಬೇಕು ಮತ್ತು ಅದರಿಂದ ಅವಳು ಶಕ್ತಿಹೀನಳಾಗುವಳು ಎಂದು ಆ ನಿಗೂಢ ಹುಡುಗಿಯು ಸಲಹೆ ನೀಡುತ್ತಾಳೆ. ಅವನು ಹಾಗೆಯೇ ಮಾಡುತ್ತಾನೆ, ಮತ್ತು ಸ್ತ್ರೀ ಕಣ್ಮರೆಯಾಗುತ್ತಾಳೆ. ಮರುದಿನ ವಿಕ್ಕಿಯ ನಿಗೂಢ ಗೆಳತಿಯು ಪಟ್ಟಣವನ್ನು ಬಿಡುತ್ತಾಳೆ ಮತ್ತು ಅವಳ ಹೆಸರನ್ನು ಕೇಳದೆಯೇ ವಿಕ್ಕಿ ಅವಳಿಗೆ ವಿದಾಯ ಹೇಳುತ್ತಾನೆ. ಬಸ್ನಲ್ಲಿ, ಆ ಹುಡುಗಿಯು ಸ್ತ್ರೀಯ ಜಡೆಯನ್ನು ತನ್ನ ಕೂದಲಿನೊಂದಿಗೆ ವಿಲೀನಗೊಳಿಸುತ್ತಾಳೆ. ನಂತರ ಅವಳು ಬಸ್ನಿಂದ ಕಣ್ಮರೆಯಾಗುತ್ತಾಳೆ. ಅವಳು ತಾನೇ ಒಬ್ಬ ಮಾಟಗಾತಿಯಾಗಿದ್ದು ಸ್ತ್ರೀಯ ಜಡೆಯಲ್ಲಿರುವ ಶಕ್ತಿಗಳಿಗಾಗಿ ಬೆನ್ನಟ್ಟಿದ್ದಳು ಎಂದು ಇದರಿಂದ ವ್ಯಕ್ತವಾಗುತ್ತದೆ.
ಸ್ತ್ರೀ ಮರುವರ್ಷ ಮತ್ತೆ ಚಂದೇರಿಗೆ ಭೇಟಿನೀಡುತ್ತಾಳೆ ಮತ್ತು ಪಟ್ಟಣದ ಪ್ರವೇಶದ್ವಾರದಲ್ಲಿ ಸ್ತ್ರೀಗೆ ಜನರನ್ನು ರಕ್ಷಿಸು ಎಂಬ ಸಂದೇಶ ನೀಡಲು "ಹೇ ಸ್ತ್ರೀ, ನಮ್ಮನ್ನು ರಕ್ಷಿಸು" ಎಂಬ ಹೊಸ ಪದಗುಚ್ಛವಿರುವ ತನ್ನ ಪ್ರತಿಮೆಯನ್ನು ನೋಡುತ್ತಾಳೆ ಮತ್ತು ಹಾಗಾಗಿ ಆ ಪ್ರತಿಮೆಯ ಮುಂದೆ ನಿಲ್ಲುತ್ತಾಳೆ.
This article uses material from the Wikipedia ಕನ್ನಡ article ಸ್ತ್ರೀ (ಚಲನಚಿತ್ರ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.