ಮೈಸೂರು ದಸರಾ ಜಂಬೂಸವಾರಿ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ.

ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಜನರು ಜಂಬೂಸವಾರಿ ವೀಕ್ಷಣೆಗಾಗಿ ಆಗಮಿಸುತ್ತಿದ್ದಾರೆ.

ಮೈಸೂರು ದಸರಾ ಜಂಬೂಸವಾರಿ
ಮೈಸೂರು ದಸರಾದ ಪ್ರಸಿದ್ಧ ಜಂಬೂಸವಾರಿ

ಇಡೀ ಮೈಸೂರು ನಗರವೇ ಸಿಂಗರಿಸಿಕೊಳ್ಳುತ್ತದೆ. ಜಂಬೂಸವಾರಿ ಸಾಗುವ ರಾಜಮಾರ್ಗ ಅಲ್ಲದೇ ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.

ಮೈಸೂರು ನಗರದ ಹೃದಯ ಭಾಗವಷ್ಟೇ ಅಲ್ಲದೇ, ಬಡಾವಣೆಗಳು, ಅಲ್ಲಿನ ಉದ್ಯಾನಗಳಿಗೂ ವಿಶೇಷ ರಂಗು ಬಂದಿದೆ. ಪಾರಂಪರಿಕ ಕಟ್ಟಡಗಳು, ಸರ್ಕಾರಿ ಕಟ್ಟಡಗಳು ಸುಣ್ಣ ಬಣ್ಣ ಬಳಿದುಕೊಂಡು ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿವೆ.

ಇತಿಹಾಸ

ಕ್ರಿ.ಶ. ೧೬೪೦ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಅವರಿಂದ ಆರಂಭವಾಗಯಿತು.ಮತ್ತು ಈಗ ಕೂಡ ಮುಂದುವರೆಯುತ್ತಿದೆ.

ಜಂಬೂಸವಾರಿ ಚಾಲನೆ

ಮದ್ಯಾಹ್ನ ಶುಭ ಕುಂಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿರುವ ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ. ೨೪ ಕುಶಾಲ ತೋಪುಗಳ ಗೌರವ. ನಂತರದಲ್ಲಿ ಅರಮನೆ ಒಳಾವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ. ಜಂಬೂಸವಾರಿ ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೆ ನಡೆಯುತ್ತದೆ.

ಅಂಬಾರಿ ಹೊತ್ತ ಬಲರಾಮನ ಜತೆ ಪೊಲೀಸ್ ಬ್ಯಾಂಡ್‌ನ ಆಕರ್ಷಕ ತಾಳವಾದ್ಯ, ಕಂಸಾಳೆ ಕುಣಿತದ ಮೈನವಿರೇಳಿಸುವ ದೃಶ್ಯ ಹಾಗೂ ಕಲಾತಂಡಗಳ ಮನಮೋಹಕ ನೃತ್ಯ,ಮನಮೋಹಕ ಸ್ತಬ್ಧ ಚಿತ್ರಗಳು, ದಸರಾ ಜಂಬೂಸವಾರಿ ಮೆರವಣಿಗೆ ಆಕರ್ಷಣೆ.

ಚಾಮುಂಡೇಶ್ವರಿ

ಅಂಬಾರಿ

೭೫೦ ಕೆಜಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಮೆರವಣಿಗೆಗೆ ಪ್ರಮುಖ ಆಕರ್ಷಣೆ.ರಸ್ತೆಯ ಇಕ್ಕೆಲಗಳಲ್ಲೂ ಪ್ರವಾಹದೋಪಾದಿ ಜನಸಾಗರದ ನಡುವೆ ತಾಯಿ ಚಾಮುಂಡೇಶ್ವರಿ ಅಂಬಾರಿಯನ್ನು ಹೊತ್ತ ಬಲರಾಮ ಆನೆ ಗಂಭೀರವದನನಾಗಿ ಹೆಜ್ಜೆಗಳನ್ನು ಇಡುತ್ತ ಸಾಗುತ್ತದೆ. ೨೪ ಕುಶಾಲ ತೋಪುಗಳ ಸದ್ದಿನ ಹಿನ್ನೆಲೆಯಲ್ಲಿ ಕೆ.ಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ ಮೂಲಕ ಬನ್ನಿಮಂಟಪದತ್ತ ಬಲರಾಮ ಚಿನ್ನದ ಅಂಬಾರಿ ಹೊತ್ತು ನಡೆವ ದೃಶ್ಯ ಮನಸೂರೆಗೊಳಿಸುತ್ತದೆ.

ಗಜಪಡೆ

ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಬಲರಾಮನ ನೇತೃತ್ವದಲ್ಲಿ ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ, ಶ್ರೀರಾಮ, ಅಭಿಮನ್ಯು, ಹರ್ಷ, ವಿಕ್ರಮ್, ಸರಳ, ಕಾಂತಿ ಸೇರಿ ಹನ್ನೆರಡು ಆನೆಗಳು ಪಾಲ್ಗೊಳ್ಳುತ್ತವೆ.

ಆನೆಗಳು ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಜೊತೆಗೆ ಜಂಬೂ ಸವಾರಿಯ ರೂವಾರಿಗಳೂ ಹೌದು. ಆನೆಗಳಿಲ್ಲದ ದಸರಾವನ್ನು ಊಹಿಸಲೂ ಸಾಧ್ಯವಿಲ್ಲ. ವಿವಿಧ ಆನೆ ಶಿಬಿರಗಳಿಂದ ಎರಡು ತಂಡವಾಗಿ ಆಗಮಿಸುವ ಗಜಪಡೆ, ಕಾಡಿನಿಂದ ನಗರ ಪ್ರವೇಶಿಸುತ್ತಿದ್ದಂತೆಯೇ ಮೈಸೂರಿಗೆ ದಸರಾ ಕಳೆ ಬಂದು ಬಿಡುತ್ತದೆ.

ಆನೆಗಳ ಭೋಜನ

ದಸರಾಕ್ಕೆ ಸುಮಾರು ಒಂದೂವರೆ ತಿಂಗಳಿರುವಾಗಲೇ ನಾಗರಹೊಳೆಯ ವೀರನಹೊಸಹಳ್ಳಿಯಿಂದ ಬಲರಾಮ ನೇತೃತ್ವದ ಆರು ಆನೆಗಳ ಮೊದಲ ತಂಡದ ಗಜಪಯಣ ಮೈಸೂರಿಗೆ ಆಗಮಿಸಿದರೆ, ಆ ನಂತರ ದಸರಾಕ್ಕೆ ಕೆಲವೇ ದಿನಗಳ ಅಂತರದಲ್ಲಿ ಉಳಿದ ಆರು ಆನೆಗಳ ಎರಡನೆಯ ತಂಡ ಬರುತ್ತದೆ. ಈ ಗಜಪಡೆಗೆ ಮೈಸೂರಿನ ಅರಮನೆ ಆವರಣದಲ್ಲಿ ದಿನನಿತ್ಯ ವಿವಿಧ ಬಗೆಯ ಭೂರೀ ಭೋಜನ. ಅದರಲ್ಲೂ ಜಂಬೂ ಸವಾರಿಯಲ್ಲಿ ೭೫೦ ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಬಲರಾಮನಿಗೆ ವಿಶೇಷ ಸತ್ಕಾರಗಳು ನಡೆಯುತ್ತವೆ. ಉದ್ದು. ಗೋಧಿ, ಕುಸುಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ, ಜೊತೆಗೆ ಬೆಣ್ಣೆ, ಭತ್ತ, ತೆಂಗಿನಕಾಯಿ, ಹಿಂಡಿ, ಕಬ್ಬು, ಬೆಲ್ಲ, ಉಚ್ಚೆಳ್ಳು ಮೊದಲಾದವುಗಳು ಐಟಂಗಳೂ ಇರುತ್ತವೆ. ಇದಲ್ಲದೆ, ಹಸಿರು ಮೇವುಗಳಾಗಿ ಆಲದ ಮರದ ಸೊಪ್ಪು, ಹುಲ್ಲನ್ನು ಆಗಾಗ್ಗೆ ನೀಡಲಾಗುತ್ತದೆ. ದಿನಕ್ಕೆರಡು ಬಾರಿ ಅರಮನೆ ಆವರಣದ ತೊಟ್ಟಿಯಲ್ಲಿ ಮಜ್ಜನದ ವೈಭೋಗ.

ಜಂಬೂ ಸವಾರಿ ತಾಲೀಮ

ಜಂಬೂ ಸವಾರಿಯಲ್ಲಿ ಯಾವುದೇ ಅಡೆತಡೆಗೆ ಬಗ್ಗದೆ ಮುನ್ನಡೆಯಲು ಸಿದ್ಧವಾಗಿರಲು ಬಲರಾಮನಿಗೆ ಸುಮಾರು ೭೫೦ ಕೆ.ಜಿ. ತೂಕದ ಮರದ ಅಂಬಾರಿಯನ್ನು, ಉಳಿದ ಆನೆಗಳಿಗೆ ಮರಳಿನ ಮೂಟೆಯನ್ನು ಕಟ್ಟಿ ದಿನಕ್ಕೊಮ್ಮೆ ಅರಮನೆಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಬನ್ನಿ ಮಂಟಪದವರೆಗೆ ಕಡ್ಡಾಯ ಮಾರ್ಚ್‌ಫಾಸ್ಟ್ ನಡೆಯುತ್ತದೆ. ಈ ಗಜಪಡೆಯ ಉಸ್ತುವಾರಿಗೆ ಮಾವುತರು, ಕಾವಡಿಗರು ಇರುವುದರೊಂದಿಗೆ ಪಶುವೈದ್ಯಾಧಿಕಾರಿಗಳಿಂದ ಆಗಾಗ್ಗೆ ತಪಾಸಣೆಯೂ ನಡೆಯುತ್ತಿರುತ್ತದೆ. ಈ ಗಜಪಡೆಯನ್ನು ಜತನದಿಂದ ನೋಡಿಕೊಳ್ಳಲು ಮಾವುತರ ಕುಟುಂಬಗಳಿಗೆ ಅರಮನೆಯ ಆವರಣದಲ್ಲಿಯೇ ಶೆಡ್ ಹಾಕಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತದೆ.

ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ದಿನನಿತ್ಯ ಕಠಿಣ ತಾಲೀಮು ನಡೆಸಿ ದಸರಾ ದಿನದಂದು ಕಣ್ಣು ಕುಕ್ಕಿಸುವಂತಹ ವೇಷಭೂಷಣಗಳಿಂದ ಕಂಗೊಳಿಸುತ್ತಾ ಗಾಂಭೀರ್ಯದ ಹೆಜ್ಜೆಯನ್ನಿಡುತ್ತಾ ಮೆರವಣಿಗೆಯಲ್ಲಿ ಸಾಗುವ ಗಜಪಡೆಗಳ ಬಗ್ಗೆ ತಿಳಿಯುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ.

ವಿಶೇಷ ಅಲಂಕಾರ

ಹೊರುವ ಆನೆ ಬಲರಾಮ ಮೊದಲೇ ಗಂಭೀರ. ಮೆರವಣಿಗೆಯಲ್ಲಂತೂ ರಾಜಗಂಭೀರ. ಸತತ ೧೩ನೇ ಬಾರಿ ಅಂಬಾರಿ ಹೊತ್ತು ಸಾಗಿದ ೫೨ ವರ್ಷದ ಬಲರಾಮನನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಪ್ರತಿ ವರ್ಷದ ಮೆರುಗಿನ ಜೊತೆಗೆ ಈ ಬಾರಿ ವಿಶೇಷವಾಗಿ ಅವನ ನಾಲ್ಕೂ ಕಾಲಿಗೆ ಪಂಚಲೋಹದ ಕಾಲಂದಿಗೆ ತೊಡಿಸಲಾಗಿತ್ತು. ಅವನ ಕೊಂಬಿನ ತುದಿಗೆ ಪ್ರತಿ ವರ್ಷ ಓಲಾಡುವಂತೆ ಹಾಕುತ್ತಿದ್ದ ಹೂವಿನ ಹಾರದ ಬದಲು ಈ ಬಾರಿ ಮುತ್ತಿನ ಸರವನ್ನು ತೊಡಿಸಲಾಗಿತ್ತು. ದಂತದ ತುದಿಗೆ ಸಿಂಗೋಟಿ, ಕತ್ತಿಗೆ ಮಾವಿನ ಸರ, ಗಂಟೆ ಸರ, ಕಿವಿಗೆ ಚಾಮರ, ಪಂಚಲೋಹದ ಅಂಕುಶಗಳಿಂದ ಆತ ಭೂಷಿತನಾಗಿದ್ದ.

ಅಲ್ಲದೆ, ಚಿನ್ನದ ರೇಕುಗಳಿರುವ ಮಿರಿಮಿರಿ ಮಿಂಚುವ ವರ್ಣರಂಜಿತ ಚಿತ್ರಗಳು ಇರುವ ಜೂಲಾ ಬಲರಾಮನ ಬೆನ್ನನ್ನು ಹರಡಿಕೊಂಡಿತ್ತು.

ಕೊರಳು ಮತ್ತು ಬೆನ್ನಿನ ಮೇಲಿಂದ ಎರಡೂ ಕಡೆ ಜೋತು ಬಿದ್ದು ತೂಗಾಡುವ ಉದ್ದದ ಸರಪಳಿಗೆ ಕಟ್ಟಿದ ಸಾಲುಸಾಲು ಗಂಟೆಗಳ ಕಿಣಿಕಿಣಿ ನಾದ, ಸೊಂಡಿಲ ಮೇಲಿನ ವಿಶಾಲವಾದ ಹಣೆಯನ್ನು ಮುಚ್ಚಿದ ಉಬ್ಬಿದ ಗುಬ್ಬಿಗಳಿರುವ ಚಿನ್ನದ ಬಣ್ಣದ ಪಟ್ಟಿ, ಕಣ್ಣಿನ ಸುತ್ತ, ಕೆನ್ನೆ, ಕಿವಿ, ಸೊಂಡಿಲು, ಬಾಲದಲ್ಲೂ ಚಿತ್ತಾರ ಬಿಡಿಸಿಕೊಂಡು ಮೇಳೈಸಿದ ಬಲರಾಮ ಆಕರ್ಷಕವಾಗಿ ಕಾಣುತ್ತಿತ್ತು.

ಬಲರಾಮ

ಚಿನ್ನದ ಅಂಬಾರಿ ಹೊತ್ತು ಮುನ್ನಡೆಯುವ ಬಲರಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದು, ಈಗ ೫೨ ವರ್ಷ. ಸೌಮ್ಯ ಸ್ವಭಾವದ ಈತ ೨.೭೦ ಮೀಟರ್ ಎತ್ತರ ಇದ್ದಾನೆ. ಹದಿನಾರು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಕಳೆದ ಹನ್ನೆರಡು ವರ್ಷದಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದಾನೆ. ಬಲರಾಮನನ್ನು ೧೯೮೭ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.

ಅರ್ಜುನ

ಕಳೆದ ೯ ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನನಿಗೆ ಈಗ ೪೯ ವರ್ಷ. ಈತನ ಎತ್ತರ ೨.೬೫ ಮೀಟರ್. ೧೯೬೯ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಮೂಲಕ ಸೆರೆಹಿಡಿದಿದ್ದು, ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತ ಅನುಭವವಿದೆ. ಪ್ರಸ್ತುತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಆನೆ ಶಿಬಿರದಿಂದ ಈತ ಬಂದಿದ್ದಾನೆ.

ಮೇರಿ

೫೪ ವರ್ಷದ ಹೆಣ್ಣಾನೆ ಮೇರಿ ೨.೧೧ ಮೀಟರ್ ಎತ್ತರವಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವನ್ಯಜೀವಿ ವಲಯದ ಸುಂಕದಕಟ್ಟೆ ಆನೆ ಶಿಬಿರದಿಂದ ಬಂದಿದೆ. ಇದನ್ನು ೧೯೭೭ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಇದುವರೆಗೆ ೯ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದೆ.

ಗಜೇಂದ್ರ

ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆಶಿಬಿರದಿಂದ ಬಂದಿರುವ ಗಜೇಂದ್ರನಿಗೆ ಈಗ ೫೫ ವರ್ಷ. ೨.೮೦ ಮೀಟರ್ ಎತ್ತರವಿದ್ದಾನೆ. ಈತನನ್ನು ೧೯೮೭ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿತ್ತು. ಮಹಾರಾಜರ ಅರಮನೆಯ ಪೂಜೆಯ ವಿಧಿ ವಿಧಾನಗಳಲ್ಲಿ ಭಾಗವಹಿಸುವ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸುತ್ತಿರುವ ಗಜೇಂದ್ರನಿಗೆ ೧೪ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಅನುಭವವಿದೆ.

ಕವಿತಾ

ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ೧೯೭೭ರಲ್ಲಿ ಕವಿತಾಳನ್ನು ಖೆಡ್ಡದಲ್ಲಿ ಸೆರೆಹಿಡಿಯಲಾಗಿದ್ದು, ಈಕೆಗೆ ಈಗ ೬೯ ವರ್ಷ. ಸುಮಾರು ೨.೩೫ ಮೀಟರ್ ಎತ್ತರವಿರುವ ಕವಿತಾ, ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿದ್ದಾಳೆ. ೫ ಬಾರಿ ದಸರಾದಲ್ಲಿ ಪಾಲ್ಗೊಂಡ ಅನುಭವವಿದೆ.

ವರಲಕ್ಷ್ಮಿ

ಈ ಆನೆಯನ್ನು ೧೯೭೭ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುಂಕದಕಟ್ಟೆ ಆನೆಶಿಬಿರದಿಂದ ಬಂದಿದೆ. ೭ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ಶ್ರೀರಾಮ

ಇದರ ಅಂದಾಜು ವಯಸ್ಸು ೫೩. ಎತ್ತರ ೨.೬೫ ಮೀಟರ್. ೧೯೬೯ರಲ್ಲಿ ಕೊಡಗು ಜಿಲ್ಲೆಯ ತಿತಿಮತಿ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಮೂಲಕ ಸೆರೆ ಹಿಡಿಯಲಾಗಿತ್ತು. ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿರುವ ಶ್ರೀರಾಮ ಕಳೆದ ೧೩ ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಪಟ್ಟದ ಆನೆಯ ಜೊತೆ ಅರಮನೆಯಲ್ಲಿ ಪೂಜಾ ಕಾರ್ಯದಲ್ಲಿ ಭಾಗವಹಿಸುತ್ತಿದೆ.

ಅಭಿಮನ್ಯು

ಇದರ ವಯಸ್ಸು ೪೪. ಎತ್ತರ ೨.೬೬ ಮೀಟರ್. ಕಾಡಾನೆಯನ್ನು ಹಿಡಿದು ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನೈಪುಣ್ಯತೆ ಪಡೆದಿರುವ ಅಭಿಮನ್ಯು ಎಂತಹ ಬಲಿಷ್ಠ ಆನೆಯನ್ನು ಕೂಡ ಎದುರಿಸಿ ಹಿಡಿತದಲ್ಲಿಡುವ ಸಾಮರ್ಥ್ಯ ಹೊಂದಿದೆ. ಇದನ್ನು ೧೯೭೭ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆಹಿಡಿಯಲಾಗಿತ್ತು. ೧೨ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಅಭಿಮನ್ಯು, ಅರಮನೆ ವಾದ್ಯ ಸಂಗೀತದ ಗಾಡಿ ಎಳೆಯುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂರ್ಕಲ್ ಆನೆ ಶಿಬಿರದಿಂದ ಬಂದಿದೆ. ಪ್ರಸ್ತುತ ಅಭಿಮನ್ಯು ಜಂಬೂಸವಾರಿಯ ಅಂಬಾರಿ ಹೊರುವ ಆನೆ.

ಹರ್ಷ

ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಬಂದಿರುವ ಹರ್ಷನ ವಯಸ್ಸು ೪೪. ಎತ್ತರ೨.೫೭ ಮೀಟರ್. ಇದನ್ನು ೧೯೯೦ಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಹನ್ನೊಂದನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ವಿಕ್ರಮ್

ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಬಂದಿರುವ ವಿಕ್ರಮ್‌ಗೆ ೩೮ ವರ್ಷ. ಇದನ್ನು ೧೯೯೦ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿತ್ತು. ಇದು 9ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.

ಸರಳಾ

ಕಳೆದ ಆರು ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ೬೯ ವರ್ಷದ ಸರಳಾಳನ್ನು ೧೯೭೭ರಲ್ಲಿ ಕಾಕನಕೋಟೆ ಅರಣ್ಯಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆ ಹಿಡಿಯಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುಂಕದಕಟ್ಟೆ ಆನೆಶಿಬಿರದಿಂದ ಬಂದಿದೆ.

ಕಾಂತಿ

ಗಜಪಡೆಗಳಿಗೆಲ್ಲಾ ಹಿರಿಯಜ್ಜಿಯಾಗಿರುವ ಕಾಂತಿಗೆ ಈಗ ೭೧ ವರ್ಷ. ೨.೧೦ ಮೀಟರ್ ಎತ್ತರವಿರುವ ಇದು ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿದೆ. ೧೯೬೮ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಖೆಡ್ಡಾದಲ್ಲಿ ಸೆರೆಹಿಡಿಯಲಾಯಿತು. ಇದುವರೆಗೆ ೧೬ ಬಾರಿ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದೆ

ರಂಜಿಸಿದ ಸಾಂಸ್ಕೃತಿಕ ಹಬ್ಬ

ಈ ಮೆರವಣಿಗೆಯಲ್ಲಿ ೭೦ ಕ್ಕೂ ಹೆಚ್ಚಿನ ಕಲಾ ತಂಡಗಳು ೩೨ ಸ್ತಬ್ಧಚಿತ್ರಗಳು, ಅರಮನೆ ಆನೆ, ಕುದುರೆ, ಸಾರೋಟ್‌, ಅಶ್ವಾರೋಹಿದಳ ಭಾಗವಹಿಸಲಿವೆ. ರಾಜ್ಯದ ಮೂಲೆ, ಮೂಲೆಗಳಿಂದ ೭೨ ಜನಪದ ಕಲಾ ತಂಡಗಳು ಮೆರವಣಿ ಗೆಯಲ್ಲಿ ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸಿದವು. ದಮಾಮಿ ನೃತ್ಯ, ಸಂಬಾಳ ವಾದನ, ಕುದುರೆ ಕುಣಿತ, ಡೊಳ್ಳು ಕುಣಿತ, ಬೇಡರ ಕುಣಿತ, ಹುಲಿ ವೇಷ, ಗಾರುಡಿ ಗೊಂಬೆ, ಪೂಜಾ ಕುಣಿತ, ಡೊಳ್ಳು ಕುಣಿತ ಹೀಗೆ ವೈವಿಧ್ಯಮಯ ಜನಪದ ಕಲಾತಂಡಗಳು ಸೇರಿದಂತೆ ಸಾವಿರಕ್ಕೂ ಮಿಕ್ಕಿ ಜನಪದ ಕಲಾವಿದರು ಪ್ರೇಕ್ಷಕರ ಕಣ್ಮನ ತಣಿಸಿದರು. ಜೊತೆ ಫಿರಂಗಿ ಗಾಡಿ ವಿಶೇಷವಾಗಿ ಗಮನ ಸೆಳೆದವು.

ಪಂಜಿನ ಕವಾಯಿತು

ಬನ್ನಿ ಮಂಟಪದಲ್ಲಿ ಸಂಜೆ ರಾಜ್ಯಪಾಲರಿಂದ ಅವರು ಕವಾಯಿತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಇಲ್ಲಿ ಅಶ್ವಾರೋಹಿ ದಳದಿಂದ ಟೆಂಟ್‌ ಪೆಗ್ಗಿಂಗ್‌, ಮೋಟಾರ್‌ ಸೈಕಲ್‌ ಚಮತ್ಕಾರ, ಲೇಸರ್‌ ಶೋ, ಕರ್ನಾಟಕ ಪೊಲಿಸರ ಪಂಜಿನ ಕವಾಯಿತು ನಡೆಯುತ್ತದೆ.

ಮಳೆರಾಯ

ಪ್ರತಿ ವರ್ಷದಂತೆ ಈ ಬಾರಿ ಸಹ ಜಂಬೂ ಸವಾರಿಗೆ ಮಳೆಯ ಆತಂಕವಿದೆ. ದಸರಾ ಮಹೋತ್ಸವ ಹಲವು ಕಾರ್ಯಕ್ರಮಗಳಿಗೆ ಮಳೆರಾಯನು ಅಡ್ಡಿಮಾಡಿದ್ದನು. ಜಂಬೂಸವಾರಿಗೂ ಮಳೆರಾಯನ ಆಗಮನ.

ಉಲ್ಲೇಖ

[೧] [೨] Archived 2010-10-22 ವೇಬ್ಯಾಕ್ ಮೆಷಿನ್ ನಲ್ಲಿ. [೩]

Tags:

ಮೈಸೂರು ದಸರಾ ಜಂಬೂಸವಾರಿ ಇತಿಹಾಸಮೈಸೂರು ದಸರಾ ಜಂಬೂಸವಾರಿ ಜಂಬೂಸವಾರಿ ಚಾಲನೆಮೈಸೂರು ದಸರಾ ಜಂಬೂಸವಾರಿ ವಿಶೇಷ ಅಲಂಕಾರಮೈಸೂರು ದಸರಾ ಜಂಬೂಸವಾರಿ ರಂಜಿಸಿದ ಸಾಂಸ್ಕೃತಿಕ ಹಬ್ಬಮೈಸೂರು ದಸರಾ ಜಂಬೂಸವಾರಿ ಪಂಜಿನ ಕವಾಯಿತುಮೈಸೂರು ದಸರಾ ಜಂಬೂಸವಾರಿ ಮಳೆರಾಯಮೈಸೂರು ದಸರಾ ಜಂಬೂಸವಾರಿ ಉಲ್ಲೇಖಮೈಸೂರು ದಸರಾ ಜಂಬೂಸವಾರಿ

🔥 Trending searches on Wiki ಕನ್ನಡ:

ಬೆಳವಲವಿಷ್ಣುವರ್ಧನ್ (ನಟ)ರಾಮಾಯಣಭಾರತದ ಪ್ರಧಾನ ಮಂತ್ರಿಪಂಚ ವಾರ್ಷಿಕ ಯೋಜನೆಗಳುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಅಲೆಕ್ಸಾಂಡರ್ಅಥರ್ವವೇದದೇವದಾಸಿಈಡನ್ ಗಾರ್ಡನ್ಸ್ಕುವೆಂಪುಗ್ರಾಹಕರ ಸಂರಕ್ಷಣೆಇನ್ಸ್ಟಾಗ್ರಾಮ್ಉತ್ತರ ಕನ್ನಡಓಂ ನಮಃ ಶಿವಾಯಭಾರತದಲ್ಲಿ ಕೃಷಿಹಣ್ಣುಕರ್ನಾಟಕದ ಸಂಸ್ಕೃತಿಅಡಿಕೆಜಯಮಾಲಾಕನ್ನಡ ಪತ್ರಿಕೆಗಳುಏಲಕ್ಕಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಆರೋಗ್ಯಭಾರತದ ಸ್ವಾತಂತ್ರ್ಯ ದಿನಾಚರಣೆಮೋಕ್ಷಗುಂಡಂ ವಿಶ್ವೇಶ್ವರಯ್ಯಕೋಲಾರಬೇಲೂರುಕೊರೋನಾವೈರಸ್ಎಚ್.ಎಸ್.ಶಿವಪ್ರಕಾಶ್ಭಾರತೀಯ ಭೂಸೇನೆಸಂಯುಕ್ತ ಕರ್ನಾಟಕಕನ್ನಡ ವ್ಯಾಕರಣಶ್ರೀಜನ್ನಕರಗಆದಿ ಶಂಕರತುಮಕೂರುಕಾಫಿವಶೀಕರಣ ಶಕ್ತಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಸಿಗ್ಮಂಡ್‌ ಫ್ರಾಯ್ಡ್‌ಅಶೋಕನ ಶಾಸನಗಳುಮಂಡಲ ಹಾವುಕೇಂದ್ರಾಡಳಿತ ಪ್ರದೇಶಗಳುಮೈಸೂರು ಸಂಸ್ಥಾನಲಾವಣಿಶಾರುಖ್ ಖಾನ್ (ಹಿಂದಿ ನಟ)ವಿಜ್ಞಾನರಾಜ್ಯಸಭೆಗಳಗನಾಥಆಂಧ್ರ ಪ್ರದೇಶಭಾರತೀಯ ಜನತಾ ಪಕ್ಷಋಗ್ವೇದಮಲೈ ಮಹದೇಶ್ವರ ಬೆಟ್ಟಹಾಕಿಮದುವೆದರ್ಶನ್ ತೂಗುದೀಪ್ಗೋವಿಂದ III (ರಾಷ್ಟ್ರಕೂಟ)ಕೆಮ್ಮುತಲಕಾಡುಸಮಾಜಶಾಸ್ತ್ರಬನವಾಸಿಯು.ಆರ್.ಅನಂತಮೂರ್ತಿಗದಗಬೌದ್ಧ ಧರ್ಮಗ್ರಹಕುಂಡಲಿವಿಜಯನಗರಭೌಗೋಳಿಕ ಲಕ್ಷಣಗಳುರೈತಮಧ್ವಾಚಾರ್ಯಅಯ್ಯಪ್ಪಋತುಜೀವಕೋಶಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತದ ರಾಷ್ಟ್ರಗೀತೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಇಲಿಕಲಬುರಗಿ🡆 More