ವಸುಂಧರಾ ಭೂಪತಿಯವರು ವೈದ್ಯೆ ಹಾಗೂ ಲೇಖಕಿ.
ಇವರು ಕರ್ನಾಟಕದ ರಾಯಚೂರಿನಲ್ಲಿ ೧೯೬೨ರ ಜೂನ್ ೦೫ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ, ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಪ್ರೀತಿ ಸಪ್ತಪರ್ಣ, ರೆಕ್ಕೆ ಮೂಡಿದರೆ? ಮುಂತಾದ ಕಥಾ ಸಂಕಲನಗಳನ್ನು ಬರೆದಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು. ಅವರು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಆಂಗ್ಲ ಭಾಷೆಯಲ್ಲಿ ೨೦೦೯ರಲ್ಲಿ 'ಮೆಡಿಸಿನಲ್ ಪ್ಲಾಂಟ್ಸ್ ಇನ್ ಯುವರ್ ಯಾರ್ಡ್' ಹಾಗೂ ೨೦೧೦ರಲ್ಲಿ ಹಿಂದಿ ಭಾಷೆಯಲ್ಲಿ ಅಪ್ನಾ ಸ್ವಾಸ್ತ್ ಅಪ್ನೆ ಹಾತ್ ಎಂಬ ಕೃತಿಯನ್ನು ರಚಿಸಿದ್ದಾರೆ. ೨೦೧೨ರಲ್ಲಿ ಮಹಿಳೆ ಮತ್ತು ವೈಜ್ಞಾನಿಕ ಅರಿವು ಮತ್ತು ೨೦೧೪ರಲ್ಲಿ ಮಹಿಳೆ ಮತ್ತು ಮೌಢ್ಯ ಎಂಬ ವಿಚಾರ ಸಾಹಿತ್ಯಗಳು ಪ್ರಕಟಗೊಂಡಿದೆ. ಸಂಕ್ರಾಂತಿ ಮತ್ತು ಜೀವ ಸರಪಳಿಯ ಗೂಡು ಇವರ ಕಥಾ ಸಂಕಲನಗಳು. ೨೦೧೨ರಲ್ಲಿ ವಿಜ್ಞಾನಮಯಿ ಎಂಬ ನಾಟಕ ಹಾಗೂ ೨೦೧೩ರಲ್ಲಿ ನವವಿದಧ ನಾಟಕಗಳು ಪ್ರಕಟಗೊಂಡಿದೆ. ̧ಸುಶ್ರುತ, ಚರಕ, ಯಲ್ಲಪ್ರಗಡ ಸುಬ್ಬರಾವ್, ಪಂಡಿತ್ ತಾರನಾಥ್, ಕೊಡಗಿನ ಗೌರಮ್ಮ, ಹಾಗೂ ಸಿ ವಿ ರಾಮನ್ ಅವರ ಜೀವನ ಚರಿತ್ರೆಗಳನ್ನು ೨೦೧೫ರಲ್ಲಿ ಪ್ರಕಟಿಸಲಾಗಿದೆ. ವಿಜಯವಾಣಿಯಲ್ಲಿ ಅಂಕಣಕಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಆಕಾಶವಾಣಿಯಲ್ಲಿ ಆರೋಗ್ಯ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ೧೫೦ಕ್ಕೂ ಹೆಚ್ಚಿನ ಫೋನ್-ಇನ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರು ಆಕಾಶವಾನಿ ಕೇಂದ್ರದಿಂದ ಸಂದರ್ಶನ ಹಾಗೂ ವೈದ್ಯಲೇಖಕರ ಜೀವನ ಸಾಧನೆ ಕುರಿತು ರೇಡಿಯೋ ಸಂದರ್ಶನ ನಡೆಸಿದ್ದಾರೆ. ಎಫ್ ಎಮ್ ರೇಡಿಯೋದಲ್ಲಿ ಸಂಜೀವಿನಿ, ಹೆಲ್ತ್ ಟಿಪ್, ಲಂಚ್ ಬಾಕ್ಸ್ ಮುಂತಾದ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ದೂರದರ್ಶನ ಹಾಗೂ ಈ ಟಿವಿ, ಉದಯ, ಚಂದನ, ಕಸ್ತೂರಿ ಟಿವಿಗಳಲ್ಲಿ ಓ ಸಖಿ, ಹಲೋ ಡಾಕ್ಟರ್, ಫೋನ್- ಇನ್ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಮಂದಾಕಿನಿ ಮತ್ತು ಕಾಡ ಹಾದಿಯ ಹೂವುಗಳು ಚಲನಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.
ಕರ್ನಾಟಕದಾದ್ಯಂತ ಹಲವಾರು ಸಂಘ- ಸಂಸ್ಥೆಗಳ ಮೂಲಕ ಸಾರ್ವಜನಿಕ ಉಪನ್ಯಾಸಗಳು ಹಾಗೂ ಚರ್ಚೆಗಳ ಮುಖಾಂತರ ಜನರಿಗೆ ಆರೋಗ್ಯ ಮಾಹಿತಿ ಸಂಹವನವನ್ನು ನಡೆಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ಗುಲ್ಬರ್ಗಾ, ರಾಯಚೂರು ಹಾಗೂ ಬಳ್ಳಾರಿಯಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ರೋಗಿಗಳಿಗೆ ಆರೋಗ್ಯ ತಿಳುವಳಿಕೆ ನೀಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
This article uses material from the Wikipedia ಕನ್ನಡ article ವಸುಂಧರಾ ಭೂಪತಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.