ಶ್ರೀ ರಾಮಚಂದ್ರ ಕುಲಕರ್ಣಿಯವರು ರಾವಬಹಾದ್ದೂರ ಎಂಬ ಹೆಸರಿನಲ್ಲಿ ಅನೇಕ ಕತೆ ಹಾಗು ಕಾದಂಬರಿಗಳನ್ನು ಬರೆದ ಕನ್ನಡ ಸಾಹಿತಿ.
ಇವರ ಗ್ರಾಮಾಯಣ ಕಾದಂಬರಿಯು ಕನ್ನಡದ ಹತ್ತು ಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಪರಿಗಣಿತವಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿರುವದಲ್ಲದೆ ಭಾರತದ ಎಲ್ಲ ಭಾಷೆಗಳಿಗೆ ಅನುವಾದವಾಗಿದೆ.
೧೯೧೦ ಸಪ್ಟಂಬರ೨೪ರಂದು ವಿಜಯಪುರ ಜಿಲ್ಲೆಯ ಜಮಖಂಡಿತಾಲೂಕಿನ ಹಿರೆಪಡಸಲಗಿಯಲ್ಲಿ ಜನಿಸಿದರು. ಇವರ ತಾಯಿ ಸುಭದ್ರಾಬಾಯಿ ; ತಂದೆ ಭೀಮರಾವ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದಿ, ೧೯೩೫ರಲ್ಲಿ ಬಿ.ಎ.ಪದವಿ ಗಳಿಸಿದರು. ಅನೇಕ ವರ್ಷ ಜಯಂತಿ ಮಾಸಪತ್ರಿಕೆಯನ್ನು ನಡೆಯಿಸಿದರು.ಕೆಲ ಕಾಲ ಖಾಸಗಿ ಬ್ಯಾಂಕುಗಳಲ್ಲಿ ಕೆಲಸ ಮಾಡಿದರು.ಸ್ವಾತಂತ್ರ್ಯ ಹೋರಾಟಗಾರ ಕೌಜಲಗಿ ಹನುಮಂತರಾಯರ ಪ್ರೇರಣೆಯಿಂದ ಚರಕಾ ಸಂಘ ಸೇರಿದರು. ೧೯೩೮ರಿಂದ ೧೯೪೬ರವರೆಗೆ ಚರಕಾ ಸಂಘದ ವ್ಯವಸ್ಥಾಪಕರಾಗಿದ್ದರು.ತನ್ನಂತರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಂಪಾದಕೀಯ ವಿಭಾಗಕ್ಕೆ ಸೇರಿಕೊಂಡರು. ಕರ್ನಾಟಕ ರಾಜ್ಯ ಪುನಾರಚನೆಯ ಮೊದಲು, ಆಗಿನ ಮುಂಬಯಿ ಪ್ರಾಂತದ ಮುಖ್ಯ ಮಂತ್ರಿಗಳಾಗಿದ್ದ ಮೊರಾರಜಿ ದೇಸಾಯಿ ಇವರ ವಿರುದ್ಧ ಇವರು ಬರೆದ ಖಾರವಾದ ಲೇಖನಗಳಿಂದಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಸರಕಾರೀ ಜಾಹೀರಾತುಗಳನ್ನು ನಿಲ್ಲಿಸಲಾಗಿತ್ತು. ಆದರೆ ಚುನಾವಣಾ ಪ್ರಚಾರ ಸಮಯದಲ್ಲಿ ತನ್ನ ತಪ್ಪಿನ ಅರಿವಾದ ಮೊರಾರಜಿಯವರು ಜಾಹೀರಾತುಗಳನ್ನು ಪುನರಾರಂಭಿಸಿದರು. ಬಾಂಗ್ಲಾದೇಶ ಉದಯವಾದ ಹೊಸತರಲ್ಲಿ ರಾವಬಹಾದ್ದೂರರು ಸಂಯುಕ್ತ ಕರ್ನಾಟಕದ ಪ್ರತಿನಿಧಿಯಾಗಿ ಅಲ್ಲಿಗೆ ತೆರಳಿ “ನಾನು ಕಂಡ ಬಂಗ್ಲಾದೇಶ” ಎನ್ನುವ ಪುಸ್ತಕ ಬರೆದರು.
೧೯೮೪ರ ಡಿಸೆಂಬರ್ ೩೧ರಂದು ನಿಧನ ಹೊಂದಿದರು.
This article uses material from the Wikipedia ಕನ್ನಡ article ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.