ಜಿ.ಎಚ್.ಕೃಂಬಿಗಲ್,(ಗುಸ್ಟಾವ್ ಹರ್ಮನ್ ಕೃಂಬಿಗಲ್, (೧೮೬೫-೧೯೫೬), ಬೆಂಗಳೂರಿನಲ್ಲಿರುವ ಲಾಲ್ ಬಾಗ್ ಸಸ್ಯೋದ್ಯಾನದ ಕ್ಯುರೇಟರ್ ಆಗಿ ಸೇವೆಸಲ್ಲಿಸಿದ್ದರು.
ಮೈಸೂರು, ಬರೋಡ, ಮೊದಲಾದ ನಗರಗಳಲ್ಲೂ ಉದ್ಯಾನವನಗಳನ್ನು ಸ್ಥಾಪಿಸಿದ ಕೀರ್ತಿಗೆಪಾತ್ರರಾಗಿದ್ದಾರೆ.
ಜಿ.ಎಚ್.ಕೃಂಬಿಗಲ್, ಜರ್ಮನಿಯ ’ಡ್ರೆಸ್ಡೇನ್,’ ಪ್ರಾಂತ್ಯದ”ಲೋಹ್ಮನ್’ ನಲ್ಲಿ ತಮ್ಮ ಪ್ರಾರಂಭಿಕ ಶಿಕ್ಷಣವನ್ನು”ವಿಲ್ಸ್ ಡ್ರಫ್’ ಮತ್ತು”ಡ್ರೆಸ್ಡೇನ್’ ನಲ್ಲಿ ಪೂರೈಸಿ, ನಂತರ, ತೋಟಗಾರಿಕೆ ಮತ್ತು ಲ್ಯಾಂಡ್ ಸ್ಕೇಪ್ ವಾಸ್ತುಶಿಲ್ಪದಲ್ಲಿ, ವಿಶೇಷ ಪರಿಣತಿ ಗಳಿಸಿದರು. ಆರಂಭದಲ್ಲಿ ಜರ್ಮನಿ ದೇಶದ ಹಲವೆಡೆ ಯಲ್ಲಿ ವಿವಿಧ ತೋಟಗಾರಿಕೆ ಕೆಲಸದಲ್ಲಿ ನಿರತರಾಗಿದ್ದು, ಅನಂತರ ಲಂಡನ್ನಿನ "ಕ್ಯೂ," ಸಸ್ಯೋದ್ಯಾನಕ್ಕೆ ಸೇರಿದರು. ಅಲ್ಲಿ ೫ ವರ್ಷಗಳವರೆಗೆ ಕಾರ್ಯ ವಿರ್ವಹಿಸಿದರು. ಜಿ.ಎಚ್.ಕೃಂಬಿಗಲ್ ಬರೆದಿರುವ ಪುಸ್ತಕದಲ್ಲಿ ಉದ್ಯಾನದಲ್ಲಿರುವ ಹಲವು ಜಾತಿ ಮತ್ತು ಪ್ರಭೇದಗಳ ಗಿಡಮರಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಲಾಲ್ ಬಾಗ್ ಉದ್ಯಾನವನದ ಪಕ್ಕದಲ್ಲಿ ರಾಷ್ಟ್ರೀಯ ವಿದ್ಯಾಶಾಲೆಯ ಮುಂದೆ ಸಾಗುವ ರಸ್ತೆಗೆ ಕೃಂಬಿಗಲ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಇವರ ಕಾರ್ಯತತ್ಪರತೆ ಮತ್ತು ಅಪಾರ ಜ್ಞಾನದಿಂದ ಪ್ರಭಾವಿತರಾದ, ಆಗಿನ ಬರೋಡಾ ಸಂಸ್ಥಾನದ ಮಹಾರಾಜರು, ಅವರನ್ನು ಬರೋಡಾ ರಾಜ್ಯದ ಸಸ್ಯೋದ್ಯಾನ ದ 'ಕ್ಯೂರೇಟರ್,' ಆಗಿ ನೇಮಿಸಿದರು. ಬರೋಡಾದಲ್ಲಿ ಅನೇಕ ವರ್ಷಗಳ ಅಮೂಲ್ಯ ಸೇವೆ ಸಲ್ಲಿಸಿ, ಅನೇಕ ಸುಂದರ ಉದ್ಯಾನವನಗಳನ್ನು ನಿರ್ಮಿಸಿ, ಕೀರ್ತಿ ಪಡೆದರು. ಇಡೀ ದೇಶದ ಗಮನವನ್ನು ಸೆಳೆದರು.
ಮೈಸೂರು ಸಂಸ್ಥಾನದ ಮಹಾರಾಜ, ಶ್ರೀ ಕೃಷ್ಣರಾಜ ಒಡೆಯರ್ ರವರು, ಬರೋಡಾ ಮಹಾರಾಜರ ಒಪ್ಪಿಗೆ ಪಡೆದು ಕೃಂಬಿಗಲ್ ರನ್ನು ೧೯೦೮ ರಲ್ಲಿ, ಮೈಸೂರಿಗೆ ಆಹ್ವಾನಿಸಿ ದರು. ೧೯೩೨ ರವರೆಗೆ ಅವರು ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಕೃಂಬಿಗಲ್, ಲಾಲ್ ಬಾಗಿನ 'ಕ್ಯೂರೇಟರ್,' ಅಗಿ ಹುದ್ದೆಗೆ ನೇಮಕಗೊಂಡು ಮೈಸೂರು ಸಂಸ್ಥಾನಕ್ಕೆ ಪಾದಾರ್ಪಣೆ ಮಾಡಿದ ನಂತರ ಅವರು ಮಾಡಿದ ಸಾಧನೆಗಳು ಅಪೂರ್ವವಾದವುಗಳು. ಮೈಸೂರು, ಮತ್ತು ಬೆಂಗಳೂರಿನಲ್ಲಿ ಅನೇಕ ಸುಂದರ ಉದ್ಯಾನವನಗಳನ್ನು ವಿನ್ಯಾಸಗೊಳಿಸಿದರು.
೧೯೩೪ ರ ಸಮಯದಲ್ಲಿ ಕೆಮ್ಮಣ್ಣುಗುಂಡಿ ಗಿರಿಧಾಮದ ಸ್ಥಾಪನೆ, ಯಶಸ್ವಿಯಾಗಿ ಪೂರೈಸಿದರು. ನಂದಿ ಬೆಟ್ಟದ ಗಿರಿಧಾಮವನ್ನು ಸುಂದರಗೊಳಿಸಿದರು. ೧೯೩೦ ರ ದಶಕದಲ್ಲಿ ಕಾವೇರಿನದಿಗೆ ಅಡ್ಡವಾಗಿ ಕಟ್ಟಲಾದ ಕನ್ನಂಬಾಡಿಕಟ್ಟೆಯ ಕೆಳಗಿನ ಹರವಿನಲ್ಲಿ ಕಣ್ಮನ ಸೆಳೆಯುವ, ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುವ, ಉದ್ಯಾನವನಗಳ ರಾಣಿ, ಎಂದೆನಿಸುವ ವಿಶ್ವವಿಖ್ಯಾತ ಬೃಂದಾವನ, ವನವನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿವ ಕಾರ್ಯ, ಅವರ ತಲೆಯಲ್ಲಿ ಶಿಖರ ಪ್ರಾಯವಾಗಿತ್ತು.
ಹೀಗೆ ಮೈಸೂರು ಸಂಸ್ಥಾನದಲ್ಲಿ ಅಸಂಖ್ಯಾತ ಸುಂದರ ಉದ್ಯಾನವನಗಳನ್ನು ಸ್ಥಾಪಿಸಿದ್ದರಿಂದ ಇವೆಲ್ಲದರ ನಿರ್ವಹಣೆಗೆಗಾಗಿ, "ಸರ್ಕಾರಿ ತೋಟಗಳ ಇಲಾಖೆ," ಎಂಬ ಪ್ರತ್ಯೇಕ ಇಲಾಖೆಯನ್ನು ಸರ್ಕಾರವು ರೂಪಿಸಿ, ಅದರ ನಿರ್ವಹಣೆಯ ಕಾರ್ಯವನ್ನು ಕೃಂಬಿಗಲ್ಲರಿಗೆ ಒಪ್ಪಿಸಿತು. ಕೃಂಬಿಗಲ್, ಸೂಪರಿಂಟೆಂಡೆಂಟ್ ಆಗಿ ನೇಮಿಸಲ್ಪಟ್ಟ ಅವರು, ಅಲ್ಲಿಂದ ಮುಂದೆ, ನಿರ್ದೇಶಕರಾದರು. ತಮ್ಮ ಸಮರ್ಪಣಾ ಮನೋಭಾವದಿಂದ, ಅಪಾರ ಪರಿಶ್ರಮದಿಂದ, ಮಾಡಿದ ಸಾಧನೆಗಳು ಅವರನ್ನು ಆತ್ಯುನ್ನತ ಮಟ್ಟಕ್ಕೇರಿಸಿದವು. ಹಿಂದೆ ಕ್ಯಾಮರಾನ್ ಹುಟ್ಟು ಹಾಕಿದ ಸಸ್ಯಗಳನ್ನು ಆಮದು ಮಾಡಿಕೊಂಡು ಪರಿಚಯಯಿಸುವ ಪ್ರಕ್ರಿಯೆಯನ್ನು ಮುಂದುವರಿಸಿದರು. ನೂರಾರು ಹೊಸ ಪ್ರಭೇದ ಮತ್ತು ತಳಿಗಳನ್ನು ಲಾಲ್ ಬಾಗ್ ಸಸ್ಯೋ ದ್ಯಾನಕ್ಕೆ ಕೊಟ್ಟು, ನಾಡಿನ ಕೃಷಿಕರಿಗೆ ಪರಿಚಯಿಸಿದರು. ವಿಶ್ವದ ಎಲ್ಲಾ ಪ್ರಮುಖ ಸಸ್ಯೋದ್ಯಾನಗಳ ಜೊತೆ ವ್ಯವಹರಿಸಿ, ನೂರಾರು ವಿದೇಶದ ಸಸ್ಯಗಳನ್ನು ಲಾಲ್ ಬಾಗ್ ಸಸ್ಯೋದ್ಯಾನಕ್ಕೆ ತರಿಸಿ, ನೆಟ್ಟಿದ್ದರಿಂದ ಲಾಲ್ ಬಾಗ್ ನ, ಸಸ್ಯಸಂಪತ್ತು ಹಿಂದೆಂದಿಗಿಂತಲೂ ಗಣನೀಯವಾಗಿ ವಿಸ್ತೃತಗೊಂಡಿತು.
೧೯೧೨ ರಲ್ಲಿ, ಕೃಂಬಿಗಲ್ ಬೆಂಗಳೂರಿನಲ್ಲಿ 'ಮೈಸೂರು ಉದ್ಯಾನ ಕಲಾ ಸಂಘ," ವೆಂಬ ಹವ್ಯಾಸಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಅದರ ಮೂಲಕ ಲಾಲ್ ಬಾಗ್ ನಲ್ಲಿ ಸುಂದರ ಫಲ ಪುಷ್ಪ ಪ್ರದರ್ಶನ ಗಳನ್ನು ಎರ್ಪಡಿಸುತ್ತಿದ್ದ ಪರಂಪರೆಯನ್ನು ಮತ್ತಷ್ಟು ಪ್ರೋತ್ಸಾಹಿಸಿದರು. ಮೈಸೂರು ರಾಜ್ಯದಲ್ಲಿ ಹಣ್ಣು, ತರಕಾರಿ, ಪುಷ್ಪಗಳ ಬೇಸಾಯವನ್ನು ವಾಣಿಜ್ಯ ಪ್ರಮಾಣದಲ್ಲಿ ಬೆಳೆಸಲು ಬಹುವಾಗಿ ಶ್ರಮಿಸಿದರು. "ತೋಟಗಾರಿಕೆ ತರಬೇತಿಶಾಲೆ,"ಯನ್ನು ಸ್ಥಾಪಿಸಿ, ರೈತರಮಕ್ಕಳಿಗೆ ತೋಟಗಾರಿಕೆಯಲ್ಲಿ ತರಬೇತಿನೀಡುವ ಪರಿಕ್ರಮವನ್ನು ಪ್ರಾರಂಭಿಸಿದರು. ವಾಣಿಜ್ಯ ಬೆಳೆಗಳ ಬೇಸಾಯವನು ಕ್ರಮಬದ್ಧಗೊಳಿಸಲು ಲಾಲ್ ಬಾಗ್ ನಲ್ಲಿ "ಬ್ಯೂರೋ ಆಫ್ ಎಕನಾಮಿಕ್ ಪ್ಲಾಂಟ್ಸ್," ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಅನೇಕ ವಾಣಿಜ್ಯ ಬೆಳೆಗಳ ವಿಸ್ತರಣೆಗೆ ಶ್ರಮಿಸಿದರು. "ರೋಮ್ ಬ್ಯೂಟಿ ," ಸೇಬಿನ ಬೇಸಾಯ ಅತ್ಯಂತ ಉನ್ನತ ಮಟ್ಟಕ್ಕೇರಿದ್ದು ಕೃಂಬಿಗಲ್ಲರ ಪ್ರಯತ್ನದಿಂದ.
"ತೋಟಗಾರಿಕೆ," ಎಂಬ ಪದದ ವಿಸ್ತರಣೆ ಮಾಡಿದರು. ಅಡಿಕೆ, ತೆಂಗು, ಬಾಳೆಗಳಲ್ಲದೆ ಇನ್ನೂ ಹಲವಾರು ಬೆಳೆಗಳನ್ನು ವಾಣಿಜ್ಯರೂಪದಲ್ಲಿ ಬೆಳೆದು, ರೈತರು ತಮ್ಮ ಆದಾಯವನ್ನು ಹೆಚ್ಚಿಸಲು ಇದು ಅನುಕೂಲವಾಯಿತು. ನಿವೃತ್ತಿಯ ನಂತರವೂ ಮೈಸೂರು ಸರ್ಕಾರದ 'ಭೂದೃಶ್ಯ ಸಲಹೆಗಾರರು,'ಎಂದು ಸೇವೆ ಸಲ್ಲಿಸುತ್ತಾ ತಮ್ಮ ಕೊನೆಯುಸಿರಿ ರುವವರೆಗೂ, ಮೈಸೂರು ರಾಜ್ಯಕ್ಕೆ ಸೇವೆಸಲ್ಲಿಸಿದರು. ಅವರು ೧೯೫೬ ರಲ್ಲಿ ಬೆಂಗಳೂರಿನಲ್ಲಿ ಕಾಲವಶರಾದರು. ಹುಟ್ಟಿನಿಂದ ಪರಕೀಯರಾದರೂ, ಭಾರತವನ್ನೇ ತಮ್ಮ ತಾಯ್ನಾಡೆಂಬಂತೆ ಪ್ರೀತಿಸಿ, ಅವಿಸ್ಮರಣೀಯರೀತಿಯಲ್ಲಿ ಸಮರ್ಪಣಾ ಮನೋಭಾವದಿಂದ, ಈ ನಾಡಿನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ತೋಟಾಗಾರಿಕೆ ಕ್ಷೇತ್ರದಲ್ಲಿ ಮರೆಯಲಾಗದ ಹಲವು ಮೈಲಿಕಲ್ಲುಗಳನ್ನು ಸ್ಥಾಪಿಸಿದರು. ತೋಟಗಾರಿಕೆಯ ವಿವಿಧ ಮಾರ್ಗಗಳನ್ನು, ಸಾಮಾನ್ಯರಿಗೂ ತಿಳಿಯುವಂತೆ ತೋರಿಸಿಕೊಟ್ಟರು. ಅವರ ಸೇವೆಯನ್ನು ಗುರುತಿಸಿ, ಬೆಂಗಳೂರು ಮಹಾಪಾಲಿಕೆ, ಲಾಲ್ ಬಾಗಿನ ಪಕ್ಕದ ರಸ್ತೆಯ ಹೆಸರನ್ನು "ಕೃಂಬಿಗಲ್ ರಸ್ತೆ," ಎಂದು ನಾಮಕರಣ ಮಾಡಿದರು.
'ರೋಮ್ ಬ್ಯೂಟಿ,' ಒಂದು ಅತ್ಯುತ್ತಮ 'ಸೇಬಿನ ಹಣ್ಣಿನ,' ಜಾತಿ.
ಬೆಂಗಳೂರಿನ ನಗರಸಭೆಯ ಕಟ್ಟಡವನ್ನಲ್ಲದೆ, ಎಮ್.ಎನ್.ಕೃಷ್ಣರಾವ್ ಉದ್ಯಾನದ ಮಧ್ಯದಲ್ಲಿರುವ ಕಟ್ಟಡದ ನಿರ್ಮಾಣ ಹಾಗೂ ಅನೇಕ ಕಟ್ಟಡವನ್ನು ಅವರೇ ವಿನ್ಯಾಸಮಾಡಿದರು.
This article uses material from the Wikipedia ಕನ್ನಡ article ಜಿ. ಎಚ್ . ಕೃಂಬಿಗಲ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.