ಎಂ.
ಎಸ್. ಪ್ರಭಾಕರ ಅವರು ತಮ್ಮ ಕಾವ್ಯನಾಮ "ಕಾಮರೂಪಿ" ಯಿಂದ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಪೂರ್ಣ ಹೆಸರು ಮೊಟ್ಣಹಳ್ಳಿ ಸೂರಪ್ಪ ಪ್ರಭಾಕರ (ಎಂ.ಎಸ್. ಪ್ರಭಾಕರ). ಇವರು ಹುಟ್ಟಿದ್ದು ೧೯೩೬ ನೇ ಇಸವಿಯಲ್ಲಿ.
ಎಂ. ಎಸ್. ಪ್ರಭಾಕರ | |
---|---|
ಜನನ | ೧೯೩೬ |
ವೃತ್ತಿ | ಲೇಖಕರು |
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯ |
ಪೌರತ್ವ | ಭಾರತೀಯ |
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದ ಇವರು ತಮ್ಮ ಪಿಎಚ್.ಡಿ. ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ೧೯೬೨ ರಿಂದ ೧೯೬೫ರವರೆಗೆ ಗೌಹಾತಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿದ್ದ ಇವರು, ೧೯೭೫ ರಿಂದ ೧೯೮೩ ರವರೆಗೆ `ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ` ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ನಂತರ `ದಿ ಹಿಂದೂ` ಪತ್ರಿಕೆಯಲ್ಲಿ ಈಶಾನ್ಯ ಭಾರತ ಹಾಗೂ ದಕ್ಷಿಣ ಆಫ್ರಿಕದ ವಿಶೇಷ ಬಾತ್ಮೀದಾರರಾಗಿ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತರಾದರು. ಪ್ರಸ್ತುತ ಕೋಲಾರದಲ್ಲಿ ನೆಲೆಸಿರುವ ಇವರು ,"ಕಾಮರೂಪಿ" ಬ್ಲಾಗ್ ಮೂಲಕ ತಮ್ಮ ಬರವಣಿಗೆ ಕೃಷಿ ಮಾಡುತ್ತಿದ್ದಾರೆ.
"ಕಾಮರೂಪಿಯವರು `ಏಲಿಯನೇಷನ್' ಎಂಬ ಮಾರ್ಕ್ಸ್ವಾದೀ ಪರಿಕಲ್ಪನೆಯಿಂದ ಪ್ರಭಾವಿತರಾಗಿ ವ್ಯಕ್ತಿವಿಶಿಷ್ಟತೆಗೆ ಒತ್ತುಕೊಡದ, ಮನೋವಿಶ್ಲೇಷಣೆಯನ್ನು ತ್ಯಜಿಸುವ ಹೊಸ ಬಗೆಯ ಕತೆ, ಕಾದಂಬರಿಗಳನ್ನು ಬರೆದರು. ಕಾಮರೂಪಿ ಎಂ.ಎಸ್. ಪ್ರಭಾಕರರ ಕಾವ್ಯನಾಮವಷ್ಟೆ. ಪ್ರಾಚೀನ ಅಸ್ಸಾಂನ ಹೆಸರು ಕಾಮರೂಪ. ಇಂದು ಕೂಡ ಆ ರಾಜ್ಯದಲ್ಲಿ ಕಾಮರೂಪ ಎಂಬ ಜಿಲ್ಲೆಯೊಂದಿದೆ. ಸುದೀರ್ಘ ಕಾಲ ಅಸ್ಸಾಂನಲ್ಲಿದ್ದುದರಿಂದಲೋ ಏನೊ, ಪ್ರಭಾಕರರಿಗೆ ಆ ಹೆಸರು ಪ್ರಿಯವಾಗಿರಬೇಕು.ಪ್ರಭಾಕರರು ಬರೆದದ್ದು ಅತ್ಯಲ್ಪ. `ಒಂದು ತೊಲ ಪುನುಗು ಮತ್ತು ಇತರ ಕತೆಗಳು', ಕಿರು ಕಾದಂಬರಿಗಳಾದ `ಕುದುರೆ ಮೊಟ್ಟೆ' ಮತ್ತು `ಅಂಜಿಕಿನ್ಯಾತಕಯ್ಯೊ', ಇಷ್ಟೇ ಅವರ ಸಮಗ್ರ ಸಾಹಿತ್ಯ. ನನ್ನ ಮಟ್ಟಿಗೆ ನಾನು ಒಬ್ಬ ಆಕಸ್ಮಿಕ ಬರೆಹಗಾರ. ಇಂಗ್ಲಿಷ್ನಲ್ಲಿ ಹೇಳಿದರೆ ಆಕ್ಸಿಡೆಂಟಲ್ ರೈಟರ್. ಸ್ಕೂಲು ಕಾಲೇಜಿನಲ್ಲಿ ಓದುತ್ತಿದ್ದ ಕೋಲಾರದ ಒರಟು ದಿನಗಳಿಂದಲೇ ಓದುವ ಹವ್ಯಾಸ, ಅಭ್ಯಾಸ ಹಚ್ಚಿಕೊಂಡಿದ್ದರೂ, ಬರೆಯುವ ಅಭ್ಯಾಸ ಹಚ್ಚಿಕೊಳ್ಳಲಿಲ್ಲ. ನಾನು ಪುಸ್ತಕಗಳನ್ನು ಬರೆಯುತ್ತೇನೆ, ಆ ಪುಸ್ತಕಗಳು ಪ್ರಕಟಗೊಳ್ಳುತ್ತವೆ ಎಂತಲೂ ಎಂದೂ ಅಂದುಕೊಂಡಿರಲಿಲ್ಲ. ಬೆಂಗಳೂರಿನ ಸೆಂಟ್ರಲ್ ಕಾಲೆಜಿನಲ್ಲಿ ಇಂಗ್ಲಿಷ್ ಆನರ್ಸ್ ಓದುತ್ತಿದ್ದಾಗ ಸಣ್ಣಪುಟ್ಟ ರೀತಿಯಲ್ಲಿ ಬರೆಯಲು ಯತ್ನ ಮಾಡಿದ್ದರೂ ಆ ದಿನಗಳಲ್ಲಿ ಬರೆದ ಚೂರುಪಾರುಗಳೆಲ್ಲಾ ಅಣಕ, ಹುಡುಗಾಟ, ಬರಹಗಾರರಾಗಬೇಕೆಂದು ಹಂಬಲ ಹೊಂದಿದ್ದ ಗೆಳೆಯರಿಗೆ ಕಾಟ ಕೊಡುವ ವ್ಯಂಗ್ಯ ತುಂಟತನದ ಬರವಣಿಗೆಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ಅಣಕ, ವ್ಯಂಗ್ಯ, ಕೀಟಲೆ, ಗಾಂಭೀರ್ಯದ ಬಲೂನನ್ನು ಚುಚ್ಚುವ ಧಾರ್ಷ್ಟ್ಯ, ಇವೆಲ್ಲ ಅವರ ಮೂರು ಕೃತಿಗಳಲ್ಲಿ ತಕ್ಕಮಟ್ಟಿಗಿದ್ದರೂ ಅವು ಕನ್ನಡ ಕಥನ ಸಾಹಿತ್ಯಕ್ಕೆ ತಂದುಕೊಟ್ಟ ಹೊಸ ಸಂವೇದನೆ, ನಿರೂಪಣಾ ತಂತ್ರ, ಕಾಣ್ಕೆ ಮೊದಲಾದುವುಗಳಿಂದಾಗಿ ಮುಖ್ಯವಾಗುತ್ತವೆ". ಇದು ಕನ್ನಡ ಹಿರಿಯ ಕಥೆಗಾರ, ವಿಮರ್ಶಕ ಶ್ರೀ ಎಸ್.ದಿವಾಕರ ಕಾಮರೂಪಿಯವರ ಬಗ್ಗೆ ಹೇಳಿರುವ ಮಾತುಗಳು. `ಕಾಮರೂಪಿ ಅವರ ಪುಸ್ತಕದಲ್ಲಿ ಪ್ರಾಮಾಣಿಕತೆ ಶೇ 80ರಷ್ಟು ಇದೆ. ಇಲ್ಲಿರುವ ಪ್ರತಿ ವಾಕ್ಯ ಕಲಾಕೃತಿಯಂತೆ ಇದೆ. ಇಲ್ಲಿನ ವಿಷಯ ಹಾಗೂ ಭಾಷೆ ಅದ್ಭುತವಾಗಿದೆ. ಕಡಿಮೆ ಬರೆಯುವವರು ಚೆನ್ನಾಗಿ ಬರೆಯುತ್ತಾರೆ. ಕೆಲವು ಪ್ರಾಧ್ಯಾಪಕರು ೧೫೦-೧೬೦ ಪುಸ್ತಕಗಳನ್ನು ಬರೆಯುತ್ತಾರೆ. ಈ ಪುಸ್ತಕಗಳ ಪ್ರಮಾಣ ಅದ್ಭುತವಾದುದು. ಆದರೆ, ಈ ಪುಸ್ತಕಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡುತ್ತದೆ. ಕಾಮರೂಪಿ ಅವರು ಕಡಿಮೆ ಬರೆದ ಕಾರಣ ಅವರ ಕೃತಿಗಳೆಲ್ಲ ಚೆನ್ನಾಗಿವೆ`. ಇದು ಹಿರಿಯ ಇತಿಹಾಸಕಾರ ಶ್ರೀ ಷ.ಶೆಟ್ಟರ್ ಅವರ ಮಾತುಗಳು. ಕನ್ನಡದ ಮತ್ತೊಬ್ಬ ವಿಮರ್ಶಕರಾದ ಶ್ರೀ ರಹಮತ್ ತರೀಕೆರೆ ಅವರು ಕಾಮರೂಪಿಯವರ ಬಗ್ಗೆ ಹೀಗೆ ಅಭಿಪ್ರಾಯ ಪಡುತ್ತಾರೆ. `ಕಾಮರೂಪಿ ಬರಹಗಳಲ್ಲಿ ತಾಜಾತನ ಇದೆ. ಅವರ ಜೀವನದೃಷ್ಟಿ ಮತ್ತೆ ಮತ್ತೆ ಹುಡುಕುವುದು ಹಾಗೂ ಪ್ರಯಾಣ. ಕಿಲಾಡಿತನ ಹಾಗೂ ಜಗಳಗಂಟತನ ಅವರ ಬರಹದ ವೈಶಿಷ್ಟ್ಯ. ಮಾತುಕತೆಗಳ ಮೂಲಕವೇ ಅವರು ಕಥೆಗಳನ್ನು ಬೆಳೆಸುತ್ತಾರೆ. ವ್ಯಂಗ್ಯ ಹಾಗೂ ತಮಾಷೆಯ ಮೂಲಕವೇ ಜೀವನವನ್ನು ನೋಡುವ ದೃಷ್ಟಿಕೋನದಿಂದ ಈ ಬರಹಕ್ಕೆ ವಿಶೇಷ ಶಕ್ತಿ ತಂದುಕೊಟ್ಟಿದೆ. ಕಾಮರೂಪಿ ಅವರು ಬರಹದ ಮೂಲಕ ವ್ಯಕ್ತಿಯ ಕೃತ್ರಿಮತೆ, ಆಷಾಢಭೂತಿತನ ವಿರುದ್ಧ ಯಾವಾಗಲೂ ದಾಳಿ ಮಾಡುತ್ತಾರೆ. ಅವರ ಬರಹಗಳಲ್ಲಿ ಐಡೆಂಟಿಟಿಗಾಗಿ ಹುಡುಕಾಟವನ್ನು ಕಾಣಬಹುದು'.
This article uses material from the Wikipedia ಕನ್ನಡ article ಎಂ. ಎಸ್. ಪ್ರಭಾಕರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.