ಹಾ. ಮಾ. ನಾಯಕ ಅವರು ಕನ್ನಡದ ಖ್ಯಾತ ಕವಿ, ಅಂಕಣಕಾರ, ಭಾಷಾಶಾಸ್ತ್ರಜ್ಞ ಮತ್ತು ಜಾನಪದ ವಿದ್ವಾಂಸ. ಹಾಮಾನಾ ಎಂದೇ ಪ್ರಸಿದ್ಧರಾಗಿದ್ದ ಹಾ. ಮಾ. ನಾಯಕರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ಅಂಕಣ ಬರಹಗಳನ್ನು ಮುನ್ನೆಲೆಗೆ ತಂದವರಲ್ಲಿ ನಾಯಕರೂ ಒಬ್ಬರು. "ಕನ್ನಡ ತನ್ನ ಮೊದಲ ಪ್ರೀತಿ; ಎರಡನೆಯ ಪ್ರೀತಿಯೂ ಅದೇ" ಎಂದು ಹೇಳುತ್ತ ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಬದುಕು ಸವೆಸಿದ ಹೋರಾಟಗಾರ.
೧೯೩೧ರ ಸೆಪ್ಟೆಂಬರ್ ೧೨ರಂದು (ಸರಕಾರಿ ದಾಖಲೆಗಳಲ್ಲಿ ಫ಼ೆಬ್ರುವರಿ ೫) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದ ಹಾಮಾನಾ ಹುಟ್ಟು ಹೆಸರು ಮಾನಪ್ಪ. ಇವರ ತಂದೆ ಶ್ರೀನಿವಾಸ ನಾಯಕ, ತಾಯಿ ಎನ್. ಡಿ. ರುಕ್ಮಿಣಿಯಮ್ಮ.
ಮೇ ೧೦, ೧೯೫೫ರಂದು ಬಿ. ಎಸ್. ಯಶೋದಮ್ಮರವರೊಡನೆ ಮದುವೆಗಯಾಗಿ, ಜುಲೈ ೧೭, ೧೯೫೬ರಂದು ಮಗಳು ಕವಿತಾರವರ ಜನನವಾಯಿತು.
ವ್ಯಾಸಂಗ - ವೃತ್ತಿ
ಆಗುಂಬೆ ಹತ್ತಿರದ ನಾಲೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮೇಗರವಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣ, ನಂತರ ತೀರ್ಥಹಳ್ಳಿಯಲ್ಲಿ ಪ್ರೌಢಶಾಲೆ ಮುಗಿಸಿ, ಶಿವಮೊಗ್ಗದಲ್ಲಿ ಇಂಟರ್ ಮುಗಿಸಿದರು. ಮೈಸೂರು ಮಹರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಗಳಿಸಿದರು. ೧೯೫೬ರಲ್ಲಿ ಎಂ. ಎ. ಅಧ್ಯಯನಕ್ಕಾಗಿ ಮೈಸೂರು ವಿವಿ ವಿದ್ಯಾರ್ಥಿವೇತನ ದೊರೆಯಿತು.
ನಂತರ ತುಮಕೂರು ಪ್ರಥಮ ದರ್ಜೆ ಕಾಲೇಜು(೧೯೫೫-೧೯೫೭), ಶಿವಮೊಗ್ಗ ಸಹ್ಯಾದ್ರಿ ಕಾಲೇಜುಗಳಲ್ಲಿ (೧೯೫೮-೧೯೬೦) ಕನ್ನಡ ಅಧ್ಯಾಪಕರಾಗಿದ್ದು, ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸೇರಿದರು.
ಮೈಸೂರು ವಿಶ್ವವಿದ್ಯಾನಿಲಯದ ವ್ಯಾಸಂಗ ವೇತನ ಪಡೆದು, ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದಲ್ಲಿ ಚಿನ್ನದ ಪದಕದೊಂದಿಗೆ ೧೯೮೫ರಲ್ಲಿ, ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಫುಲ್ಬ್ರೈಟ್ ವಿದ್ಯಾರ್ಥಿ ವೇತನ ಪಡೆದು, ೧೯೬೨ರಲ್ಲಿ ಅಮೆರಿಕಾಕ್ಕೆ ತೆರಳಿದರು. "ಕನ್ನಡ ಸಾಹಿತ್ಯಿಕ ಮತ್ತು ಆಡು ಭಾಷೆ" ಎಂಬ ಮಹಾ ಪ್ರಬಂಧವನ್ನು ಸಾದರ ಪಡಿಸಿ, ಅಮೆರಿಕಾದ ಇಂಡಿಯಾನಾ ವಿಶ್ವವಿದ್ಯಾಲಯದಿಂದ ೧೯೬೪ರಲ್ಲಿ ಡಾಕ್ಟರೇಟ್ ಪಡೆದಿದ್ದರು.
ಅಮೆರಿಕಾದಿಂದ ಮರಳಿ, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು (೧೯೬೯-೧೯೮೪). ೧೯೮೪ರಿಂದ ೧೯೮೭ರ ವರೆಗೆ ಗುಲ್ಬರ್ಗಾ ವಿವಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿದರು. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಹಿಂತಿರುಗಿದರು.
ಸಾಹಿತ್ಯ
ಪ್ರಬಂಧಗಳು ಮತ್ತು ಕಥಾಸಂಕಲನ
ನಮ್ಮ ಮನೆಯ ದೀಪ (೧೯೫೬) - ಲಲಿತ ಪ್ರಬಂಧಗಳ ಸಂಕಲನ
ಬಾಳ್ನೋಟಗಳು (೧೯೫೦) - ೧೫ ಕಿರುಗತೆಗಳು
ಹಾವು ಮತ್ತು ಹೆಣ್ಣು (೧೯೬೬) - ಸ್ವಂತ ಮತ್ತು ಅನುವಾದಿತ ಒಟ್ಟೂ ೧೧ ಕತೆಗಳು (ಬೊಂಬಾಯಿ ಬಳೆ, ಹೆಣ್ಣು ಹೃದಯ, ಆಶಾವಾದಿ)
ಜಾನಪದ ಸ್ವರೂಪ (೧೯೭೧)
ಬೆಳ್ಳಿ ಕರ್ನಾಟಕ (೧೯೮೧)
ಸಂಕೀರ್ಣ (೧೯೬೬)
ಸಂಗ್ರಹ (೧೯೭೬)
ಸಂಚಯ (೧೯೬೯) - ೧೩ ಲೇಖನಗಳು
ಸಂದರ್ಭ (೧೯೭೮) - ಭಾಷಣಗಳ ಸಂಕಲನ
ಸಂವಾದ (೧೯೭೨) - ೧೨ ಬರಹಗಳು - ಲೇಖನ, ಅನುವಾದ ಮತ್ತು ಭಾಷಣಗಳ ಸಂಕಲನ
ಸಪ್ತಕ (೧೯೮೯) - ೭ ಲೇಖನಗಳು - ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಪೂರಕ ನೆಲೆ
ಸಮೀಕ್ಷೆ (೧೯೬೭) - ವಿಮರ್ಶಾ ಲೇಖನಗಳ ಸಂಗ್ರಹಣ
ಸಿಂಗಾರ (೧೯೮೧) - ೧೨ ಲೇಖನಗಳು - ಮುನ್ನುಡಿಗಳ ಸಂಕಲನ
ಸೃಜನ (೧೯೮೧) - ೧೩ ಪ್ರಬಂಧಗಳು
ಸ್ತವನ (೧೯೮೦) - ೧೭ ವ್ಯಕ್ತಿ ಚಿತ್ರಗಳು
ಸ್ಮರಣ (೧೯೮೧) - ವ್ಯಕ್ತಿ ಚಿತ್ರಣ
ಸಿವುಡು (೧೯೯೧) - ೧೫ ಲೇಖನಗಳು ("ಅರವತ್ತರ ಅರಲು" ಕೃತಿಮಾಲೆ)
ಸಂಭ್ರಮ (೧೯೯೧) - ೧೫ ಮುನ್ನುಡಿಗಳು ("ಅರವತ್ತರ ಅರಲು" ಕೃತಿಮಾಲೆ)
ಸೊಡರು (೧೯೯೧) - ೧೪ ವ್ಯಕ್ತಿಚಿತ್ರ, ಸಾಂಧರ್ಬಿಕ ಭಾಷಣ ಮತ್ತು ಸಂಸ್ಮರಣ ಗ್ರಂಥಗಳ ಲೇಖನ ("ಅರವತ್ತರ ಅರಲು" ಕೃತಿಮಾಲೆ)
ಸಿಂಚನ (೧೯೯೧) - ೧೫ ಲೇಖನಗಳು ("ಅರವತ್ತರ ಅರಲು" ಕೃತಿಮಾಲೆ)
ಕನ್ನಡ ಮನಸ್ಸು (೧೯೯೧) - ೧೬ ಲೇಖನಗಳು ("ಅರವತ್ತರ ಅರಲು" ಕೃತಿಮಾಲೆ)
This article uses material from the Wikipedia ಕನ್ನಡ article ಹಾ.ಮಾ.ನಾಯಕ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.