ಸಚೀಂದ್ರನಾಥ್ ಸಾನ್ಯಾಲ್ ಓರ್ವ ಭಾರತೀಯ ಕ್ರಾಂತಿಕಾರಿ (೩ ಏಪ್ರಿಲ್ ೧೮೯೩ — ೭ ಫೆಬ್ರವರಿ ೧೯೪೨).
ಇವರು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ (HRA) )ನ ಸ್ಥಾಪಕರು.೧೯೨೮ರ ನಂತರ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್, ಹಿಂದೂಸ್ತಾನ್ ಸಮಾಜವಾದಿ ರಿಪಬ್ಲಿಕನ್ ಅಸೋಸಿಯೇಶನ್ ಎಂದು ಮರುನಾಮಕರಣಗೋಡಿತು. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಶಸ್ತ್ರ ಪ್ರತಿರೋಧ ತೋರಿದವರಲ್ಲಿ ಪ್ರಮುಖ ವ್ಯಕ್ತಿ ಇವರಾಗಿದ್ದಾರೆ. ಆ ಸಮಯದ ಯುವ ಕ್ರಾಂತಿಕಾರಿಗಳಾದ ಚಂದ್ರಶೇಖರ ಆಜಾದ್ ಮತ್ತು ಭಗತ್ ಸಿಂಗ್ ರಂತಹ ಹಲವರಿಗೆ ಮಾರ್ಗದರ್ಶಕರಾಗಿದ್ದರು ಎಂದು ಪರಿಗಣಿಸಲಾಗಿದೆ
ಸಚೀಂದ್ರನಾಥ್ ಸಾನ್ಯಾಲ್ | |
---|---|
Born | 3 April 1893 ವಾರಣಾಸಿ, ಸಂಯುಕ್ತ ಪ್ರಾಂತ್ಯ, ಬ್ರಿಟೀಷ್ ಭಾರತ |
Died | 7 February 1942 (aged 48) ಗೋರಖಪುರ,ಸಂಯುಕ್ತ ಪ್ರಾಂತ್ಯ, ಬ್ರಿಟೀಷ್ ಭಾರತ |
Organization(s) | ಆನುಶೀಲನ ಸಮೀತಿ, ಗದರ್ ಪಾರ್ಟಿ, ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ , ಹಿಂದೂಸ್ತಾನ್ ಸಮಾಜವಾದಿ ರಿಪಬ್ಲಿಕನ್ ಅಸೋಸಿಯೇಶನ್, |
Movement | ಭಾರತೀಯ ಸಶಸ್ತ್ರ ಕ್ರಾಂತಿಕಾರಿ ಚಳುವಳಿ |
Spouse | ಪ್ರತಿಭಾ ಸಾನ್ಯಾಲ್ |
ಬಂಗಾಳಿ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಸಚೀಂದ್ರನಾಥ್ ಸಾನ್ಯಾಲ್ ಅವರ ತಂದೆ ಹರಿನಾಥ ಸಾನ್ಯಾಲ್ ಹಾಗೂ ತಾಯಿ ಖೇರೋಡ್ ವಾಸಿನಿ ದೇವಿ. ಅವರು ಬ್ರೀಟಿಷ್ ಭಾರತದ ಸಂಯುಕ್ತ ಪ್ರಾಂತ್ಯಕ್ಕೆ ಸೇರಿದ್ದ ಬನಾರಸ್ನಲ್ಲಿ ೩ ಏಪ್ರಿಲ್ ೧೯೮೩ರಂದು ಜನಿಸಿದರು.
ಪ್ರತಿಭಾ ಸಾನ್ಯಾಲ್ ಇವರ ಪತ್ನಿಯಾಗಿದ್ದು, ಓರ್ವ ಪುತ್ರನನ್ನು ಹೊಂದಿದ್ದರು.
ಸಾನ್ಯಾಲ್, ೧೯೧೩ರಲ್ಲಿ ಪಾಟ್ನಾದಲ್ಲಿ ಅನುಶಿಲನ ಸಮಿತಿಯ ಶಾಖೆಯನ್ನು ಸ್ಥಾಪಿಸಿದರು.೧೯೧೨ರಲ್ಲಿ ನಡೆದ ದೆಹಲಿ ಪಿತೂರಿಯಲ್ಲಿ ರಾಸ್ ಬಿಹಾರಿ ಬೋಸ್ನೊಂದಿಗೆ ಪ್ರಮುಖ ಪಾತ್ರ ವಹಿಸಿದರು. ಈ ಪಿತೂರಿಯ ಪ್ರಕಾರ ಆಗಿನ ವೈಸ್ರಾಯ್ ಹಾರ್ಡಿಂಜ್ ಅವರು ಬಂಗಾಳ ವಿಭಜನೆಯ ನಂತರ ಹೊಸದಾಗಿ ಘೋಷಣೆಗೊಂಡ ರಾಜಧಾನಿ ದೆಹಲಿಯನ್ನು ಪ್ರವೇಶಿಸುತ್ತಿದ್ದಾಗ ದಾಳಿ ನಡೆಸಿದರು.ಈ ದಾಳಿಯಲ್ಲಿ ಲಾರ್ಡ್ ಹಾರ್ಡಿಂಜ್ ತೀವ್ರವಾಗಿ ಗಾಯಗೊಂಡರು. ಭಾರತೀಖಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮುಖ್ಯವಾಗಿ ದಾಖಲಾಗಿರುವ ಗದರ್ ಪಿತೂರಿಯ ಯೋಜನೆಯಲ್ಲಿ ಕೂಡ ಇವರೂ ಕೂಡ ಪ್ರಮುಖ ಪಾಲುದಾರರು. ಈ ವಿಚಾರ ಫೆಬ್ರವರಿ ೧೯೧೫ರಲ್ಲಿ ಬಹಿರಂಗಗೊಂಡ ಬಳಿಕ ಅವರು ಭೂಗತರಾದರು.ಇವರ ಸಹವರ್ತಿ ರಾಸ್ ಬಿಹಾರಿ ಬೋಸ್ ಜಪಾನ್ಗೆ ಪರಾರಿಯಾದ ಬಳಿಕ ಸಾನ್ಯಾಲ್ ಅವರನ್ನು ಭಾರತದ ಕ್ರಾಂತಿಕಾರಿ ಚಳವಳಿಯ ಅತ್ಯಂತ ಹಿರಿಯ ನಾಯಕ ಎಂದು ಪರಿಗಣಿಸಲಾಗಿದೆ. ಬಳಿಕ ಗದರ್ ಪಿತೂರಿಯಲ್ಲಿ ಭಾಗಿಯಾದ ಆರೋಪದಲ್ಲಿ ಬ್ರಿಟೀಶ್ ಸರ್ಕಾರ ಸಚೀಂದ್ರನಾಥ್ ಸಾನ್ಯಾಲ್ ರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇರುವ ಸೆಲ್ಯೂಲಾರ್ ಜೈಲಿನಲ್ಲಿ ಬಂಧಿಸಿ ಇಡಲಾಯಿತು. ಅವಧಿಗೆ ಮುನ್ನವೇ ಬಿಡುಗಡೆಯಾದ ಇವರು ೧೯೨೨ರಲ್ಲಿ ಸೆಲ್ಯೂಲಾರ್ ಜೈಲಿನ ತನ್ನ ಅನುಭವಗಳನ್ನು "ಬಂಧೀ ಜೀವನ್" ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಬಿಡುಗಡೆಗೊಂಡ ಬಳಿಕವೂ ಸಾನ್ಯಾಲ್ ಅವರು ಬ್ರಿಟೀಶ್ ಸರ್ಕಾರ ವಿರುದ್ದದ ಹೋರಾಟಗಳಲ್ಲಿ ತೊಡಗಿದ್ದರಿಂದ ಸರ್ಕಾರವು ಬನಾರಸಿನಲ್ಲಿ ಇರುವ ಇವರ ಪೂರ್ವಜರ ಮನೆಯಲ್ಲಿ ಗೃಹ ಬಂಧನದಲ್ಲಿ ಇಟ್ಟಿತು. ೧೯೨೨ರಲ್ಲಿ ಅಸಹಕಾರ ಚಳುವಳಿಯ ಅಂತ್ಯದ ನಂತರ ಸಾನ್ಯಾಲ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಇತರ ಕೆಲವು ಕ್ರಾಂತಿಕಾರಿಗಳು ಸ್ವತಂತ್ರ ಭಾರತವನ್ನು ಬಯಸಿದ್ದರು ಮತ್ತು ತಮ್ಮ ಗುರಿಯನ್ನು ಸಾಧಿಸಲು ಬಲವನ್ನು ಬಳಸಲು ಸಿದ್ಧರಾಗಿದ್ದರು. ಸಾನ್ಯಾಲ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ ಇಬ್ಬರೂ ಸೇರಿ ಅಕ್ಟೋಬರ್ ೧೯೨೪ ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ ಅನ್ನು ಸ್ಥಾಪಿಸಿದರು. ೧೯೨೫ರ ಜನವರಿ ೧ರಂದು ಉತ್ತರ ಭಾರತದ ದೊಡ್ಡ ನಗರಗಳಲ್ಲಿ ವಿತರಿಸಲಾದ ಕ್ರಾಂತಿಕಾರಿ ಎಂಬ ಶೀರ್ಷಿಕೆಯ ಹಿಂದೂಸ್ತಾನ್ ರಿಪಬ್ಲಿಕನ್ ನ ಅಸೋಸಿಯೇಶನ್ ಪ್ರಣಾಳಿಕೆಯನ್ನು ಸಚೀಂದ್ರನಾಥ್ ಸಾನ್ಯಾಲ್ ಅವರೇ ರಚಿಸಿದ್ದರು.
ಕಾಕೋರಿ ಪಿತೂರಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಸಾನ್ಯಾಲ್ ಜೈಲುವಾಸ ಅನುಭವಿಸಿದರು. ಬಳಿಕ ಆಗಸ್ಟ್ ೧೯೩೭ರಲ್ಲಿ ನೈನಿ ಸೆಂಟ್ರಲ್ ಜೈಲಿನಿಂದ ಪೋರ್ಟ್ ಬ್ಲೇರ್ನ ಸೆಲ್ಯುಲಾರ್ ಜೈಲಿಗೆ ಕಳುಹಿಸಲ್ಪಟ್ಟರು,. ಹೀಗೆ ಸಚೀಂದ್ರನಾಥ್ ಸಾನ್ಯಾಲ್ ಎರಡು ಬಾರಿ ಪೋರ್ಟ್ ಬ್ಲೇರ್ನ ಸೆಲ್ಯುಲಾರ್ ಜೈಲಿಗೆ ಕಳುಹಿಸಲ್ಪಟ್ಟ ಕೆಲವೇ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದರು.
ಸಾಕಷ್ಟು ಪ್ರಸಿದ್ದಿ ಪಡೆದ ಸಾನ್ಯಾಲ್ ಮತ್ತು ಮಹಾತ್ಮ ಗಾಂಧಿಯವರ ಮಧ್ಯೆ ನಡೆದ ಲೇಖನ ರೂಪದ ಚರ್ಚೆ ೧೯೨೦ ಮತ್ತು ೧೯೨೪ರ ನಡುವೆ ಯಂಗ್ ಇಂಡಿಯಾದಲ್ಲಿ ಪ್ರಕಟವಾಯಿತು. . ಸಾನ್ಯಾಲ್, ಗಾಂಧಿಯವರ ಮಂದಗಾಮಿ ವಿಧಾನದ ವಿರುದ್ಧ ವಾದಿಸಿದ್ದರು. ಸಾನ್ಯಾಲ್ ಅವರು ತನ್ನ ಧೃಢವಾದ ಹಿಂದೂ ನಂಬಿಕೆಗಳಿಗೆ ಹೆಸರುವಾಸಿಯಾಗಿದ್ದರು, ಆದರೆ ಅವರ ಹೆಚ್ಚಿನ ಅನುಯಾಯಿಗಳು ಮಾರ್ಕ್ಸ್ ವಾದಿಗಳಾಗಿದ್ದರು ಮತ್ತು ಧರ್ಮಗಳನ್ನು ವಿರೋಧಿಸುತ್ತಿದ್ದವರಾಗಿದ್ದರು. ಭಗತ್ ಸಿಂಗ್ ಅವರು ಸಾನ್ಯಾಲ್ ಅವರ ನಂಬಿಕೆಗಳನ್ನು "ನಾನೇಕೆ ನಾಸ್ತಿಕ" ಎಂಬ ತಮ್ಮ ಪುಸ್ತಕದಲ್ಲಿ ಚರ್ಚಿಸಿದ್ದಾರೆ. ಜೋಗೇಶ್ ಚಂದ್ರ ಚಟರ್ಜಿ, ಸಾನ್ಯಾಲ್ ಅವರ ನಿಕಟ ಸಹವರ್ತಿಯಾಗಿದ್ದರು. ಮಹಾತ್ಮ ಗಾಂಧಿಯವರ ಅಹಿಂಸಾವಾದನ್ನು ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದ ಮೌಲಾನಾ ಶೌಕತ್ ಅಲಿ ಬಂದೂಕುಗಳನ್ನು ಪೂರೈಸಿದ್ದರು. ಇನ್ನೊಬ್ಬ ಪ್ರಮುಖ ಕಾಂಗ್ರೆಸ್ಸಿಗ, ಕೃಷ್ಣಕಾಂತ್ ಮಾಳವೀಯ ಕೂಡ ಅವರಿಗೆ ಆಯುಧಗಳನ್ನು ಪೂರೈಸಿದ್ದರು.
ದ್ವಿತೀಯ ಬಾರಿಗೆ ಸೆಲ್ಯೂಲಾರ್ ಜೈಲಿನಲ್ಲಿ ಬಂಧಿಯಾಗಿದ್ದ ಸಮಯದಲ್ಲಿ ಸಾನ್ಯಾಲ್ ತೀವ್ರತರವಾದ ಕ್ಷಯ ರೋಗಕ್ಕೆ ತುತ್ತಾದರು. ಅನಾರೋಗ್ಯದ ಕಾರಣ ಇವರನ್ನು ಗೋರಖಪುರ ಜೈಲಿಗೆ ಸ್ಥಳಾಂತರಿಸಲಾಯಿತು. ೧೯೪೨, ಫೆಬ್ರವರಿ ೭ರಂದು ಗೋರಖಪುರದ ಜೈಲಿನಲ್ಲಿಯೇ ಅನಾರೋಗ್ಯದ ಕಾರಣ ಮರಣ ಹೋಂದಿದರು. ಇವರ ವಾರಣಾಸಿಯ ಆಸ್ತಿಯನ್ನು ಬ್ರಿಟೀಷ್ ಸರ್ಕಾರವು ವಶಪಡಿಸಿಕೊಂಡಿತು.
This article uses material from the Wikipedia ಕನ್ನಡ article ಸಚೀಂದ್ರನಾಥ ಸಾನ್ಯಾಲ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.