ವಿಷ್ಣು ನಾಯ್ಕ ಇವರು ಉತ್ತರ ಕನ್ನಡ ಜಿಲ್ಲೆಯ ಸಾಹಿತಿ, ಪ್ರಕಾಶಕ, ರಂಗಕರ್ಮಿ ಹಾಗು ಸಾಹಿತ್ಯಕ ಸಂಘಟನಾಕಾರರು.
ವಿಷ್ಣು ನಾಯ್ಕರ ಜನನ ೧೯೪೪ ಜುಲೈ ೧ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲ ಎನ್ನುವ ಗ್ರಾಮದಲ್ಲಿ ಆಯಿತು. ಇವರ ತಾಯಿ ಬುದವಂತಿ; ತಂದೆ ನಾಗಪ್ಪ. ನಿರಕ್ಷರಿ ಬಡ ತಂದೆ ತಾಯಿಗಳ ಆರು ಮಕ್ಕಳಲ್ಲಿ ಮೂರನೆಯವರಾದ ವಿಷ್ಣು ನಾಯ್ಕರ ಪ್ರಾಥಮಿಕ ಶಿಕ್ಷಣ ಅಂಬಾರಕೊಡ್ಲ ಹಾಗು ಅಂಕೋಲಾದಲ್ಲಿ ಜರುಗಿತು. ಮಾಧ್ಯಮಿಕ ಶಿಕ್ಷಣವನ್ನು ಅಂಕೋಲಾದಲ್ಲಿ ಪೂರ್ಣಗೊಳಿಸಿದ ವಿಷ್ಣು ನಾಯ್ಕರು ಪದವಿಗಾಗಿ ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ, ಆ ಬಳಿಕ ಕುಮಟಾದ ಡಾ. ಎ.ವಿ.ಬಾಳಿಗಾ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಕನ್ನಡ ಜಾನಪದ ಸಾಹಿತ್ಯವನ್ನು ಪ್ರಧಾನ ವಿಷಯವನ್ನಾಗಿರಿಸಿಕೊಂಡು ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು.
ವಿಷ್ಣು ನಾಯ್ಕರು ಡಾ| ದಿನಕರ ದೇಸಾಯಿಯವರು ಸ್ಥಾಪಿಸಿದ ಕೆನರಾ ವೆಲ್ಫೇರ್ ಟ್ರಸ್ಟಿನ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಉಪನ್ಯಾಸಕರಾಗಿ ಹಾಗು ಪ್ರಾಚಾರ್ಯರಾಗಿ ೪೩ ವರ್ಷಗಳ ಸೇವೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೆ ರಂಗಭೂಮಿಯ ಮೇಲೆ ನಟನಾಗಿ ಹಾಗು ನಾಟಕಕಾರರಾಗಿ ವಿಷ್ಣು ನಾಯ್ಕ ಪ್ರವೇಶಿಸಿದ್ದಾರೆ. ೧೯೬೩ರಿಂದ ವರ್ಷಕ್ಕೊಂದರಂತೆ ಹೊಸ ನಾಟಕ ಬರೆದು, ನಿರ್ದೇಶಿಸಿದ್ದಾರೆ. ಅಲ್ಲದೆ ಕನ್ನಡದ ಪ್ರಸಿದ್ಧ ನಾಟಕಕಾರರೆಲ್ಲರ ನಾಟಕಗಳಲ್ಲಿ ನಟನಾಗಿ ಅಥವಾ ನಿರ್ದೇಶಕನಾಗಿ ಭಾಗವಹಿಸಿದ್ದಾರೆ. ಸಾಮಾಜಿಕ ವ್ಯಸನಗಳ ಬಗೆಗೆ ಬೀದಿ ನಾಟಕಗಳನ್ನು ಆಡಿದ್ದಾರೆ. ರಾಘವೇಂದ್ರ ರಂಗಸಂಗ' ಎನ್ನುವ ಕಲಾತಂಡವನ್ನು ಕಟ್ಟಿ ರಂಗನಾಟಕಗಳನ್ನು, ಬೀದಿನಾಟಕಗಳನ್ನು ಆಡಿಸುತ್ತಿದ್ದಾರೆ.
೧೯೬೦ರಿಂದ ೧೯೯೦ರ ಅವಧಿಯಲ್ಲಿ ಯಕ್ಷಗಾನ ರಂಗನಟರಾಗಿ ಹಾಗು ತಾಳಮದ್ದಲೆಯ ಅರ್ಥಧಾರಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲೆಲ್ಲ ಪ್ರದರ್ಶನ ನೀಡಿದ್ದಾರೆ.
ಇದಲ್ಲದೆ ‘ಚಂದನ’ ಟೀ.ವಿ.ಯಲ್ಲಿ ಪ್ರಸಾರವಾದ ‘ಅಮೃತ ಸಿಂಚನ’ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ದಿನಕರ ದೇಸಾಯಿಯವರ ಜನಸೇವಕ ವಾರಪತ್ರಿಕೆಗಾಗಿ, ಕೆ.ಎಚ್.ಪಾಟೀಲರ ವಿಶಾಲ ಕರ್ನಾಟಕ ಪತ್ರಿಕೆಗಾಗಿ, ಶಿರಸಿಯ ಪತ್ರಿಕೆ ಮುನ್ನಡೆಗಾಗಿ, ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮುಂಗಾರು ದೈನಿಕಕ್ಕಾಗಿ ವಿಷ್ಣು ನಾಯಕರು ವರದಿಗಾರರಾಗಿ ದುಡಿದಿದ್ದಾರೆ. ಕರಾವಳಿ ಮುಂಜಾವು ಹಾಗು ಕರಾವಳಿ ಸುಪ್ರಭಾತ ಪತ್ರಿಕೆಗಳಿಗೆ ಅಂಕಣಕಾರನಾಗಿ ಸೇವೆ ಸಲ್ಲಿಸಿದ್ದಾರೆ. ಸಕಾಲಿಕ ವಾರಪತ್ರಿಕೆಯ ಸಂಪಾದಕರಾಗಿ ಮೂರು ವರ್ಷ ನಡೆಸಿದ್ದಾರೆ.
ವಿಷ್ಣು ನಾಯ್ಕರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿಗೈದಿದ್ದಾರೆ.
ವಿಷ್ಣು ನಾಯ್ಕರು ೧೯೭೩ರಲ್ಲಿ ರಾಘವೇಂದ್ರ ಪ್ರಕಾಶನವನ್ನು ಪ್ರಾರಂಭಿಸಿದರು. ಈ ಪ್ರಕಾಶನದಿಂದ ಇಲ್ಲಿಯವರೆಗೆ (ನವಂಬರ ೨೦೦೬ರವರೆಗೆ) ೧೬೬ ವೈವಿಧ್ಯಮಯ ಪುಸ್ತಕಗಳು ಪ್ರಕಟಗೊಂಡಿವೆ. ಪ್ರತಿವರ್ಷ ಇದೇ ಪ್ರಕಾಶನದ ಆಶ್ರಯದಲ್ಲಿ ಸಾಹಿತ್ಯಗೋಷ್ಠಿಗಳು, ಕಮ್ಮಟಗಳು, ಸ್ಪರ್ಧೆಗಳು ಮೊದಲಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ವಿಷ್ಣು ನಾಯ್ಕರು ೧೯೫೭ರಿಂದ ೧೯೭೧ರವರೆಗೆ ದಿನಕರ ದೇಸಾಯಿಯವರ ನೇತೃತ್ವದಲ್ಲಿ ನಡೆದ ರೈತ ಆಂದೋಲನದಲ್ಲಿ ಭಾಗವಹಿಸಿದ್ದಾರೆ. ೧೯೬೨ರಲ್ಲಿ ಸಮಾಜವಾದಿ ಯುವಕ ಸಂಘವನ್ನು ಸ್ಥಾಪಿಸಿ ಹೋರಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಕರ್ನಾಟಕ ಸಂಘದ ಕಾರ್ಯಸಮಿತಿಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಡಾ| ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿಯಾಗಿ ದುಡಿದಿದ್ದಾರೆ. ನಿರಂತರ ಕಲಿಕೆ ಕಾರ್ಯಕ್ರಮದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ೧೯೯೮ರಿಂದ ೨೦೦೧ರವರೆಗೆ ಬೆಂಗಳೂರಿನಲ್ಲಿಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ೨೦೦೫ರಲ್ಲಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣಾ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಪ್ರಾಧಿಕಾರದ ಉತ್ತರ ಕನ್ನಡ ಜಿಲ್ಲಾ ಸಮಿತಿ ಸದಸ್ಯಸದಸ್ಯರೂ, ರಾಜ್ಯಮಟ್ಟದ ಉನ್ನತ ಆಯ್ಕೆ ಸಮಿತಿಯ ಸದಸ್ಯರೂ ಆಗಿದ್ದಾರೆ. ಇನ್ನೂ ಹತ್ತು ಹಲವು ಸಾರ್ವಜನಿಕ ಸಂಘಟನೆಗಳ ಸ್ಥಾಪಕರೂ, ಸಕ್ರಿಯ ಸದಸ್ಯರೂ ಆಗಿದ್ದಾರೆ.
ವಿಷ್ಣು ನಾಯ್ಕರಿಗೆ ಸಂದ ಪ್ರಶಸ್ತಿಗಳು ಅನೇಕ.
ಶ್ರೀಮತಿ ಕವಿತಾ ಇವರು ವಿಷ್ಣು ನಾಯ್ಕರವರ ಪತ್ನಿ. ಭಾರತಿ ಮತ್ತು ಅಮಿತಾ ಇವರ ಪುತ್ರಿಯರು.
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು; ಮನುಷ್ಯ ಜನ್ಮದ ಸದ್ಬಳಕೆ ಇದು ವಿಷ್ಣು ನಾಯ್ಕರ ಬದುಕಿನ ಶ್ರದ್ಧೆ.
This article uses material from the Wikipedia ಕನ್ನಡ article ವಿಷ್ಣು ನಾಯ್ಕ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.