ಡಾ.
ಎ.ಎನ್.ಮೂರ್ತಿ ರಾವ್ (ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರು) (ಜೂನ್ ೧೬, ೧೯೦೦ - ೨೪ ಆಗಸ್ಟ್, ೨೦೦೩)- ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಶತಾಯುಷಿಯಾಗಿ ಮೂರು ಶತಮಾನಗಳಲ್ಲಿ ( ೧೯,೨೦,೨೧ನೆಯ ಶತಮಾನಗಳು) ಬದುಕಿದ ವ್ಯಕ್ತಿ.
ಎ.ಎನ್.ಮೂರ್ತಿರಾವ್ | |
---|---|
ಚಿತ್ರ | [[File:|200px]] |
ಜನನದ ದಿನಾಂಕ | ೧೬ ಜೂನ್ 1900 |
ಹುಟ್ಟಿದ ಸ್ಥಳ | ಮಂಡ್ಯ ಜಿಲ್ಲೆ |
ಸಾವಿನ ದಿನಾಂಕ | ೨೩ ಆಗಸ್ಟ್ 2003 |
ವೃತ್ತಿ | ಲೇಖಕ |
ರಾಷ್ಟ್ರೀಯತೆ | ಭಾರತ, ಬ್ರಿಟಿಷ್ ರಾಜ್ |
ಮಾತನಾಡುವ ಅಥವಾ ಬರೆಯುವ ಭಾಷೆಗಳು | ಕನ್ನಡ |
ಪೌರತ್ವ | ಭಾರತ, ಬ್ರಿಟಿಷ್ ರಾಜ್ |
ದೊರೆತ ಪ್ರಶಸ್ತಿ | ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಲಿಂಗ | ಪುರುಷ |
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು ಅವರ ಜನ್ಮಸ್ಥಳ. ತಂದೆ ಎ.ಸುಬ್ಬರಾವ್ ತಾಯಿ ಪುಟ್ಟಮ್ಮ, ಹೆಂಡತಿ ಜಯಲಕ್ಷ್ಮಿ. ಮಕ್ಕಳು: ಎ.ಎನ್. ಸುಬ್ಬರಾಮಯ್ಯ, ಎ.ಎನ್. ನಾಗರಾಜ್ ಮತ್ತು ಎ.ಎನ್ ರಾಮಚಂದ್ರರಾವ್,.
ಪರಿಪಕ್ವತೆ ಎನ್ನುವ ಮಾತು ಲಕ್ಷ ಜನರಲ್ಲಿ ಒಬ್ಬರಿಗೆ ಸಾರ್ಥಕವಾಗಿ ಅನ್ವಯಿಸಬಹುದೇನೋ! ಅಂತಹ ಒಬ್ಬರು ಡಾಕ್ಟರ್ ಎ.ಎನ್.ಮೂರ್ತಿರಾಯರು. ಒಂದು ನೂರು ವರ್ಷಕ್ಕೆ ಕಾಲಿಟ್ಟಿರುವ ಅವರ ವಯಸ್ಸು ಕಾಣುವುದು ಅವರ ಬಿಳಿ ಕೂದಲಿನಲ್ಲಿ ಅವರ ವಿದ್ವತ್ತಿನಲ್ಲಿ, ಅವರ ಪರಿಪಕ್ವತೆ ಯಲ್ಲಿ. ಆದರೆ ನಡಿಗೆಯ ವೇಗದಲ್ಲಿ, ಜೀವನ ಶ್ರದ್ದೆಯಲ್ಲಿ, ಪುಸ್ತಕಗಳನ್ನು ಓದುವ ಉತ್ಸಾಹದಲ್ಲಿ ಅವರು ಇನ್ನು ಐವತ್ತು ವರ್ಷ ಚಿಕ್ಕವರು. ಇವತ್ತಿಗು ಬೆಳಗಾಗಿ ೫ ಗಂಟೆಗೆ ೫ ಮೈಲಿ ಸುತ್ತಾಟಕ್ಕೆ ಸಿದ್ಧರೆ. ಒಳ್ಲೆಯ ಸಂಗೀತ ಕಛೇರಿ ಇದೆ ಎಂದರೆ ಬೆಂಗಳೂರಿನಿಂದ ಮೈಸೂರಿಗೆ ಹೋಗುವವರೆ. ‘ಒಂದು ಒಳ್ಳೆಯ ಪುಸ್ತಕ ಓದಿದೆ’ ಅದನ್ನು ಪಡೆದು ಓದುವವರೆ, ನದಿಯಲ್ಲಿ ಸಾದ್ಯವಾದಷ್ಟು ದೂರ ನಡೆದು ಹೋಗಿ ಸ್ನಾನ ಮಾಡುವವರೆ. ಇತರರನ್ನು ತಮನ್ನೂ ಹಾಸ್ಯ ಮಾಡಿಕೊಳ್ಳುತ್ತ ಗಂಟೆಗಟ್ಟಲೆ ಕಳೆಯುವವರು. ಆ ಹಾಸ್ಯದಲ್ಲಿ ಕುಚೇಷ್ಟೆ ಇಲ್ಲ, ಹಗುರ ಮಾತಿಲ್ಲ. ಅವರ ಪರಿಪಕ್ವತೆ ಅವರ ಸಾಹಿತ್ಯದಲ್ಲಿ, ನಿತ್ಯಜೀವನದಲ್ಲಿ, ಇತರೊಡನೆ ನಡೆದುಕೊಳ್ಳುವ ರೀತಿಯಲ್ಲಿ ಕಾಣುತ್ತದೆ. ಜೀವನದ ಗಂಭೀರ ಅನುಭವಗಳು, ಸಾಮಾನ್ಯ ಅನುಭವಗಳು ಇವುಗಳಿಗೆ ಅವರು ತೋರಿಸುವ ಪ್ರತಿಕ್ರಿಯೆಯಲ್ಲಿ ಕಾಣುತ್ತದೆ. ಅವರು ಮೊದಲು ಪ್ರಸಿದ್ದರಾದದ್ದು ‘ಆಷಾಢಭೂತಿ’ ನಾಟಕದಿಂದ. ‘ಹಗಲು ಕನಸುಗಳು’, ‘ಅಲೆಯುವ ಮನ’ ಪ್ರಬಂಧ ಸಂಗ್ರಹಗಳಿಂದ ‘ಷೇಕ್ಸ್ ಪಿಯರ್’ ಪುಸ್ತಕದಿಂದ. ಪ್ರಾಯಶಃ ಅವರು ಸರ್ಕಾರಿ ಕೆಲಸದಿಂದ ನಿವೃತ್ತರಾಗುವ ಮೊದಲು ಬರೆದದ್ದಕ್ಕಿಂತ ಅನಂತರ ಬರೆದದ್ದೆ ಹೆಚ್ಚು. ‘ಹಗಲು ಕನಸುಗಳು’ ಪ್ರಕಟವಾದಾಗ ಅವರಿಗೆ ೩೭ ವರ್ಷ. ಅಲ್ಲಿಂದ ಪ್ರಾರಂಭವಾಗಿ ಅವರು ಇತ್ತೀಚೆಗೆ ಬರೆದ ‘ದೇವರು’ ಪುಸ್ತಕದವರೆಗೆ ಕಾಣುವುದು ಹೃದಯ ಬುದ್ಧಿಗಳೆರಡರ ಸಮತೋಲನ ಸಾಧಿಸಿದ ಪ್ರಕಾಶ ಮಾನವ ಮನಸ್ಸು. ಕಠಿಣ ವಾಸ್ತವಿಕತೆ, ಕ್ರಿಯಾಶಕ್ತಿಗಳ ಅಗತ್ಯವನ್ನು ಗುರುತಿಸುತ್ತಲೆ ಕನಸುಗಳ ಅಗತ್ಯವನ್ನು ಅರಿಯಬಲ್ಲ, ಬಾಳಿನ ದುಃಖ, ಅನ್ಯಾಯ, ರಹಸ್ಯಗಳ ಅರಿವಿರುವ, ಸುತ್ತಲಿನ ಮನುಷ್ಯರ ದೌರ್ಬಲ್ಯ, ಸಣ್ಣತನ, ಮಿತಿಗಳನ್ನು ಕಾಣಬಲ್ಲ, ಈ ಮಣ್ಣಿನ ದೇಹದಲ್ಲಿ ಎಂತಹ ಹಿರಿಮೆ ಬೆಳಗುತ್ತದೆ ಎಂದು ಕೃತಜ್ಞತೆಯಿಂದ ಸಂತೋಷಪಡಬಲ್ಲ ಮನಸ್ಸು. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ನಡೆದ ಒಂದು ಘಟನೆಯನ್ನು ಅಂದು ಅವರ ಜೊತೆಗಿದ್ದವರು ಹೇಳುತ್ತಾರೆ. ಆವತ್ತು ಮೈಸೂರಿನಲ್ಲಿ ಹಿರಿಯ ವಿದ್ವಾಂಸರೊಬ್ಬರು ಡಾಕ್ಟರ್ ರಾಮನಾಥನ್ ಅವರದು ಎಂದು ಕಾಣುತ್ತದೆ. ಸಂಗೀತ ಕಛೇರಿ, ಮೂರ್ತಿರಾಯರು ಸಂಗೀತಕ್ಕೆ ಹೋಗಿದ್ದರು. ಅವರಿಗೆ ಪ್ರಶಸ್ತಿ ಬಂದ ಸುದ್ದಿ ಆಗ ತಾನೆ ಪ್ರಕಟವಾಯಿತು. ಅವರ ಅಭಿಮಾನಿಗಳೊಬ್ಬರು ಆ ವಿಷಯ ಪ್ರಸ್ತಾಪಿಸಿದಾಗ ಮೂರ್ತಿರಾಯರು ಹೇಳಿದರು, “ಈ ದಿವ್ಯ ಸಂಗೀತ ಕಿವಿಯನ್ನು ತುಂಬಿರಬೇಕಾದರೆ ಆ ಮಾತು ಯಾಕೆ, ಬಿಡಿ”. ಮೂರ್ತಿರಾಯರು ಡಾ.ರಾಧಕೃಷ್ಣನ್ ಅವರ ಶಿಷ್ಯರು. ಅವರನ್ನು ಕುರಿತು ಒಂದೆಡೆ ಬರೆಯುತ್ತಾರೆ. “ಅವರ ಪಾಂಡಿತ್ಯ ಸದಾ ಅವರ ಹೆಕ್ಕತ್ತಿನ ಮೇಲೆ ಕುಳಿತಿರುವಂಥಾದಲ್ಲ, ಅದು ಅವರ ತೊತ್ತು, ಕರೆದಾಗ ಮಾತ್ರ ಬರುವಂಥದು”. ಇದೇ ಮಾತನ್ನು ರಾಯರಿಗೂ ಅನ್ವಯಿಸಿ ಹೇಳಬಹುದು. ಇಂಗ್ಲಿಷ್, ಕನ್ನಡ, ಭಾಷೆಗಳನ್ನೂ ಸಾಹಿತ್ಯವನ್ನೂ ಅಂಗೈಯ ನೆಲ್ಲಿಕಾಯಿ ಮಾಡಿಕೊಂಡಿರುವವರು. ಫ್ರೆಂಚ್ ಭಾಷೆ ಬಲ್ಲವರು. ಕಾಲೇಜಿನಲ್ಲಿ ತತ್ವಶಾಸ್ತವನ್ನು ಅಭ್ಯಾಸ ಮಾಡಿ ಇಂದಿನವರೆಗೂ ಪಾಶ್ಚಾತ್ಯ ಭಾರತೀಯ ತತ್ವಶಾಸ್ತ್ರಗಳಲ್ಲಿ ಜೀವಂತ ಆಸಕ್ತಿ ಉಳಿಸಿಕೊಂಡಿರುವವರು. ಉಪನಿಷತ್ತು, ವೇದ, ರಾಮಾಯಣ, ಮಹಾಭಾರತ ಅವು ಧರ್ಮ ಗ್ರಂಥಗಳೆಂಬ ದೃಷ್ಠಿಯಿಂದಲ್ಲ, ಮನುಷ್ಯನ ಪ್ರತಿಭೆ ಸೃಷ್ಟಿಸಿರುವ ಮೇರುಕೃತಿಗಳೆಂದು ಅಭ್ಯಾಸ ಮಾಡಿದ್ದಾರೆ. ವಿಜ್ಞಾನ, ಅರ್ಥಶಾಸ್ತ್ರ, ಸಮಾಜ ವಿಜ್ಞಾನ ಮೊದಲಾದವುಗಳಲ್ಲಿ ಆಸಕ್ತಿಯನ್ನು ಉಳಿಸಿಕೊಂಡು ಪುಸ್ತಕಗಳನ್ನೂ ಇಂದೂ ಓದುತ್ತಾರೆ. ಅವರಿಂದು ಬಾಹ್ಯವಾಗಿ ನಮ್ಮೊಡನಿಲ್ಲವಾದರೂ, ಅವರ ಸಾಹಿತ್ಯ ವೈಚಾರಿಕ ವಿಮರ್ಶೆ, ತಾತ್ವ್ತಿಕದೃಷ್ಠಿಕೋನದ ಮೂಲಕ ಸದಾ ಜೀವಂತವಾಗಿರುತ್ತಾರೆ.
ಪ್ರಬಂಧಗಳ ಮೂಲಕ ಇವರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ೧೯೩೭ರಲ್ಲಿ ಇವರ ಮೊದಲ ಕೃತಿ ಹೂವುಗಳು(ಪ್ರಬಂಧ ಸಂಕಲನ) ಪ್ರಕಟವಾಯಿತು. ಎಂಟು ಪ್ರಬಂಧಗಳ ಬಿಡಿ ಲೇಖನಗಳನ್ನು ಈ ಸಂಕಲನವು ಒಳಗೊಂಡಿದೆ. ದೇವರು ಎಂಬ ವೈಚಾರಿಕ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ ಮತ್ತು ಆಂಗ್ಲ ಭಾಷೆಗೆ ತರ್ಜುಮೆಯಾಗಿ ಪ್ರಸಿದ್ಧವಾಗಿದೆ.
This article uses material from the Wikipedia ಕನ್ನಡ article ಎ.ಎನ್.ಮೂರ್ತಿರಾವ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.