ಕಾರ್ಕಳ ವೆಂಕಟ್ರಾಯ ಅನಂತ್ ಪೈ ರವರು (೧೭ ಸೆಪ್ಟೆಂಬರ್ ೧೯೨೯ -೨೪ ಫೆಬ್ರುವರಿ ೨೦೧೧) ಭಾರತದ ಅಥವಾ ವಿಶ್ವದ ಮಕ್ಕಳಿಗೆ ’ಅಂಕಲ್ ಪೈ’ ಯೆಂದೇ ಪ್ರಸಿದ್ದರಾಗಿದ್ದಾರೆ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ವ್ಯಂಗ್ಯ ಚಿತ್ರಗಳು ಅಷ್ಟೇನೂ ಹೆಸರುಮಾಡಿರದ ಕಾಲದಲ್ಲಿ 'ಅನಂತ ಪೈ'ರವರು ಮಕ್ಕಳ ಮನಸ್ಸಿಗೆ ನಾಟುವಂತೆ ಸೃಷ್ಟಿಸಿದ ಕಥಾಚಿತ್ರಗಳು, ಅವರ ಕಥೆಯನ್ನು ಹೇಳುವ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಮಕ್ಕಳ ಸುಶುಪ್ತ ಚೇತನವನ್ನು ಹುರಿಗೊಳಿಸಿ ಅತ್ಯಂತ ಕ್ಲಿಶ್ಟವಾದ ಪೌರಾಣಿಕ ಐತಿಹಾಸಿಕ ಕಥಾ ಸನ್ನಿವೇಷಗಳನ್ನು ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಹೇಳಿ ರಂಜಿಸಿದ ಕೀರ್ತಿ 'ಪೈ'ರವರಿಗೆ ಸಲ್ಲುತ್ತದೆ. 'ಅನಂತ್ ಪೈ' ಒಬ್ಬ ಸೃಜನಶೀಲ ಬರಹಗಾರರು. ಮಕ್ಕಳನ್ನು ಕಂಡರೆ ಅವರಿಗೆ ಅತೀವ ಪ್ರೀತಿ. ಸ್ವತಃ ಆವರಿಗೆ ಮಕ್ಕಳಿಲ್ಲದಿದ್ದರೂ ವಿಶ್ವದ ಮಕ್ಕಳಿಗಾಗಿ ಅವರು ರಚಿಸಿದ ಕಥಾಚಿತ್ರಗಳು ಅಪಾರ ; ಹಾಗೂ ಅನನ್ಯ. ಫೆಬ್ರವರಿ ೧೯ ರಂದು 'ಭಾರತದ ಮೊಟ್ಟಮೊದಲ ಕಾಮಿಕ್ಸ್ ಸಮಾವೇಶ'ದಲ್ಲಿ 'ಜೀವಮಾನದ ಸಾಧನೆ ಪ್ರಶಸ್ತಿ ' ಪಡೆದು ಸನ್ಮಾನಿಸಲ್ಪಟ್ಟರು.
ಅನಂತ ಪೈ | |
---|---|
Born | |
Died | 24 February 2011 | (aged 81)
Other names | ಅಂಕಲ್ ಪೈ |
Occupation | ವ್ಯಂಗ್ಯಚಿತ್ರ ಬರಹಗಾರ |
Website | ಅಧಿಕೃತ ಜಾಲತಾಣ |
'ಅಮರಚಿತ್ರ ಕಥೆಗಳ ಪುಸ್ತಕ'ಗಳಲ್ಲಿ 'ಪೈ'ರವರು ಹೆಣೆದಿರುವ 'ಪಂಚತಂತ್ರದ ಅದ್ಬುತ ಕಥೆಗಳು', 'ವಿಷ್ಣು ಶರ್ಮರ, ಜಾತಕ ಕಥೆ'ಗಳನ್ನುಆಧರಿಸಿವೆ. ಅದಲ್ಲದೆ, ಅಮರ ಚಿತ್ರ ಕಥಾ ಸಂಗ್ರಹ, ಧೀರ-ಶೂರ-ಯೋಧರ ಜೀವನ ಕಥೆಯ ಚಿತ್ರಗಳು, ಸಾಂಪ್ರದಾಯಿಕ, ಜನಪದೀಯ ಕೃತಿಗಳ ಸಂಗಮ. 'ಅಮರಚಿತ್ರ ಕಥೆಗಳ ಪುಸ್ತಕಗಳು' ವರ್ಷದಲ್ಲಿ ೩ ಮಿಲಿಯನ್ ಪ್ರತಿಗಳು ಮಾರಾಟವಾಗುತ್ತಿವೆ.
ಅವರ ತಂದೆ, ವೆಂಕಟ್ರಾಯ ಮತ್ತು ತಾಯಿ ಸುಶೀಲಾ ಪೈ. ಈ ಕೊಂಕಣಿ ಭಾಷೆಯನ್ನು ಮಾತಾಡುವ ದಂಪತಿಗಳ ಮಗನಾಗಿ ಅವರು, ೧೯೨೯ ರ ಸೆಪ್ಟೆಂಬರ್, ೧೭ ರಂದು ಕಾರ್ಕಳದಲ್ಲಿ ಜನಿಸಿದರು. ಅವ್ರು ಇನ್ನೂ ಎರಡುವರ್ಷದ ಮಗುವಾಗಿರುವಾಗಲೇ ತಂದೆತಾಯಿಗಳು ಮೃತರಾದರು. ಸಂಬಂಧಿಕರ ಸಹಕಾರದಿಂದ ಅನಂತ್ ರವರು ಬಾಲ್ಯಾವಸ್ಥೆಯನ್ನು ಕಳೆದರು. ಅವರು ತಮ್ಮ ೧೨ ನೆಯ ವಯಸ್ಸಿನಲ್ಲಿ ಬೊಂಬಾಯಿಗೆ ಬಂದರು. ಅಲ್ಲಿ ಬೊಂಬಾಯಿನ ಉಪನಗರವಾದ ಮಾಹಿಮ್ ನ 'ಓರಿಯೆಂಟಲ್ ಶಾಲೆ'ಯಲ್ಲಿ ಶಿಕ್ಷಣವನ್ನು ಪಡೆದರು. ಮುಂದೆ, ಮುಂಬಯಿ 'ವಿಶ್ವವಿದ್ಯಾಲಯದ ಕೆಮಿಕಲ್ ಟೆಕ್ನೋಲಜಿ ವಿಭಾಗ'ದಲ್ಲಿ ಎರಡು ಪದವಿಗಳನ್ನು ಗಳಿಸಿದರು.
ಬಾಲ್ಯದಿಂದಲೇ ಚಿತ್ರಗಳನ್ನು ಸಮರ್ಪಕವಾಗಿ ಬರೆಯುತ್ತಿದ್ದ ಅನಂತ್ ರವರು, ಆ ಕಲೆಯನ್ನು ಚೆನ್ನಾಗಿ ಬೆಳೆಸಿಕೊಳ್ಳಲು ಅವರ ಬಂಧುವರ್ಗದವರು, ಸಹಾಯಮಾಡಿದರು. ಮುಂದೆ ಅವರು ಬೊಂಬಾಯಿನ ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆಯ ಪುಸ್ತಕ ವಿಭಾಗದಲ್ಲಿ ಕೆಲಸಮಾಡುತ್ತಿದ್ದರು. 'ಇಂದ್ರ ಜಾಲ ಕಾಮಿಕ್ಸ್' ನಲ್ಲಿ ಕೆಲಸಮಾಡುತ್ತಿರುವಾಗ, ಒಂದು ಕ್ವಿಝ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಸನ್ನಿವೇಶ ಒದಗಿತು. ಭಾರತದ ಮಕ್ಕಳು, ಗ್ರೀಕ್, ರೋಮನ್ ದೇವಿ-ದೇವತೆಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದು, ನಮ್ಮದೇಶದ ರಾಮಾಯಣ, ಮಹಾಭಾರತ ಮುಂತಾದ ಮಹಾಕಾವ್ಯಗಳ ಬಗ್ಗೆ ತಿಳುವಳಿಕೆ ಇಲ್ಲದ್ದನ್ನು ಮನಗಂಡರು. ಈ ಸಂಗತಿ ಅವರಿಗೆ ಬೇಸರತಂದಿದ್ದಲ್ಲದೆ ಈ ಜಾಡಿನಲ್ಲಿ ತಾವು ಕೆಲಸಮಾಡಿ ನಮ್ಮ ಮಕ್ಕಳ ಮನಸ್ಸಿನಲ್ಲಿ ಪುರಾಣಗಳ ಬಗ್ಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ದಿಕ್ಕಿನಲ್ಲಿ ತಮ್ಮ ಚಿತ್ರಕಥೆಗಳನ್ನು ಹೆಣೆಯಲು ಹೆಣಗಿ ಯಶಸ್ವಿಯಾದರು.
೧೯೬೭ ರಲ್ಲಿ, ಮೊಟ್ಟಮೊದಲು ಅನಂತ ಪೈ ಹೊರತಂದ ಚಿತ್ರಕಥಾ ಸಂಗ್ರಹವೆಂದರೆ 'ಅಮರಚಿತ್ರಕಥಾ'. ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಬರಹವಿದ್ದ ಈ ಪ್ರತಿಗಳು ಕಾಲಾಂತರದಲ್ಲಿ ಭಾರತದ ಹಲವು ಭಾಷೆಗಳಲ್ಲಿ, ನಂತರ ವಿಶ್ವ ಪ್ರಮುಖ ಭಾಷೆಗಳಲ್ಲಿ ಬರಲಾರಂಭಿಸಿದವು. ತೆನಾಲಿರಾಮನ ಚಿತ್ರದ ಜೊತೆ ತೆನಾಲಿ ರಾಮಕೃಷ್ಣ ನ ಕಥೆ ಓದಿದ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಅಚ್ಚೊತ್ತಿರುವ ವ್ಯಕ್ತಿತ್ವ ಅನನ್ಯವಾದದ್ದು. ಬೇರೆ ಪಾತ್ರಗಳಾದ ಸಾವಿತ್ರಿ, ನಳ ದಮಯಂತಿ, ವಸಂತಸೇನೆ-ಉದಯನ, ರಾಮ, ಪರಶುರಾಮ, ಶ್ರವಣಕುಮಾರ, ಶಿಶುಪಾಲ, ಜರಾಸಂಧ, ಶಕುಂತಲೆ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಎಲ್ಲ ಒಂದೊಂದು ಕಲ್ಪನೆಯನ್ನು ಉಳಿಸಿಹೋಗಿದ್ದಾರೆ.
ಸನ್. ೧೯೬೫ ರಲ್ಲೇ, 'ಐ.ಬಿ.ಎಚ್'ನ, ಬೆಂಗಳೂರು ಶಾಖಾ ಪ್ರಭಾರಿ,ಜಿ. ಕೆ. ಅನಂತರಾಮ್ ರವರಿಂದ 'ಅಮರಚಿತ್ರಕಥಾ' ಎಂಬ ಹೆಸರಿನಲ್ಲಿ ಕನ್ನಡ ಕಥಾ ಸಂಗ್ರಹ, ಪ್ರಥಮವಾಗಿ ಶುರುವಾಯಿತು. ಇದು 'ಅಂಕಲ್ ಪೈ' ರವರಿಗಿಂತ ಮೊದಲೇ ಸ್ಥಾಪಿಸಲ್ಪಟ್ಟಿತ್ತು, ಎನ್ನುವ ವಿಷಯ ಔಟ್ ಲುಕ್ ಪತ್ರಿಕೆ ಯಲ್ಲಿ ದಾಖಲಾಗಿದೆ. ಇಂಗ್ಲೀಷ್ ಕಾಮಿಕ್ಸ್ ಪುಸ್ತಕಗಳು ಹಾಗೂ ಹಲವು ವಿಧದ ಕೇವಲ ಇಂಗ್ಲೀಷ್ ಲೇಖಕರ ಪುಸ್ತಕಗಳನ್ನು ಮಾರಿ-ಮಾರಿ ಬೇಸತ್ತಿದ್ದ ಅನಂತರಾಮ್, ಕನ್ನಡ ಭಾಷೆಯಲ್ಲಿ ಭಾರತದ ಅಮೂಲ್ಯ ಹಾಗೂ ವಿಪುಲವಾಗಿ ಲಭ್ಯವಿರುವ, ಇತಿಹಾಸ, ಪುರಾಣ, ಮಹಾಕಾವ್ಯಗಳ ಕಥಾ-ಪ್ರಸಂಗಗಳನ್ನು ಏಕೆ ನಮ್ಮ ಭಾರತೀಯ ಮಕ್ಕಳಿಗೆ ಪರಿಚಯಿಸಬಾರದು ಎನ್ನುವ ಮಹದಾಂಕ್ಷೆಯನ್ನು ಹೃದಯದಲ್ಲಿ ಹೊಂದಿದ್ದು, ಅವಕಾಶಗಳಿಗಾಗಿ ಕಾದಿದ್ದರು. ಶಿವರಾಮಕಾರಂತರಂತಹ ಬರಹಗಾರ, ಮೇಧಾವಿಯ ಜೊತೆಗೂಡಿ, ಸನ್ ೧೯೬೫ ರಲ್ಲಿ ಅಮರಚಿತ್ರಕಥಾ ಎಂಬ ಚಿತ್ರಕಥಾ ಗುಚ್ಛವನ್ನು ಹೊರತಂದರು. ಕಾಲಾಂತರದಲ್ಲಿ 'ಐ.ಬಿ.ಎಚ್'. ನ ಮಾಲೀಕರಾಗಿದ್ದ ಮಿರ್ಚಂದಾನಿಯವರು ಮಕ್ಕಳ ಕಥೆಗಳ ವಲಯದಲ್ಲಿನ ಅಪಾರ ಬೇಡಿಕೆ ಹಾಗೂ ಸಾಧ್ಯತೆಗಳನ್ನು ಅರಿತು, ಆ ಕ್ಷೇತ್ರವನ್ನು ವಿಸ್ತರಿಸಲು, ಅನಂತ ಪೈ ರವರನ್ನು ಆಹ್ವಾನಿಸಿದರು. ಮುಂದೆ 'ದೈತ್ಯ ಪ್ರತಿಭೆ'ಯ 'ಅನಂತ ಪೈ'ರವರು, ಚಿತ್ರಕಥೆಗಳನ್ನು ಸೊಗಸಾಗಿ ಹೆಣೆದು, ಮಕ್ಕಳಿಗೆ ಹೃದಯಂಗಮವಾಗಿ ಪ್ರಸ್ತುತಪಡಿಸಿ ಮನರಂಜಿಸಿ ಪ್ರಸಿದ್ಧಪಡಿಸಿದ ಮಹಾನ್ ಕಾರ್ಯಗಳೆಲ್ಲಾ ಇತಿಹಾಸವಾಯಿತು.
ಭಾರತದಲ್ಲಿ 'ಟೆಲಿವಿಶನ್' ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ, ಪಟ್ಟಣಗಳಲ್ಲಿ, 'ಫ್ಯಾಂಟಮ್','ಸೂಪರ್ ಮ್ಯಾನ್', 'ಆರ್ಚಿ', ಮೊದಲಾದ ಇಂಗ್ಲೀಷ್ ಚಿತ್ರಕಥೆಗಳ ಪುಸ್ತಕಗಳು ಜನಪ್ರಿಯವಾಗಿದ್ದವು. ಭಾರತೀಯ ಭಾಷೆಗಳಲ್ಲಿ ಉತ್ತಮ ಮಟ್ಟದ ಕಥಾಚಿತ್ರಪುಸ್ತಕಗಳು ಹೆಚ್ಚಿಗೆ ಬಂದಿರಲಿಲ್ಲ. ಆ ಸಮಯದಲ್ಲಿ 'ಪೈ'ರವರ ದೂರಾಲೋಚನೆ, ಸಮಯಪ್ರಜ್ಞೆಯ ಜೊತೆಗೆ, ಸ್ವಾರಸ್ಯವಾದ ನಿರೂಪಣೆ, ಮತ್ತು ತಕ್ಕ ಚಿತ್ರಗಳ ಅಳವಡಿಕೆ ಕ್ರಮಗಳಿಂದ ಭಾರತದ ಪುರಾಣಗಳು ಮತ್ತು ಇತಿಹಾಸದಿಂದ ಆಯ್ದು ಸಿದ್ಧಪಡಿಸಿದ ಸುಂದರ ಕಥಾ ಪ್ರಸಂಗಗಳು ಒಮ್ಮೆಲೇ ಮಕ್ಕಳ ಆಸಕ್ತಿಯನ್ನು ಕೆರಳಿಸಿ ಜನಪ್ರಿಯವಾದವು.
ಕತೆ ಪುಸ್ತಕ ಓದುವ ಗೀಳನ್ನು ಕೇವಲ ಮಕ್ಕಳಿಗಲ್ಲದೆ ವಯಸ್ಕರಿಗೂ ಅಭ್ಯಾಸ ಮಾಡಿಸಿದ ಹಿರಿಮೆ 'ಅಂಕಲ್ ಪೈ'ರವರದು ಈ ಬೆಳವಣಿಗೆಯಿಂದ ಸ್ಪೂರ್ಥಿಪಡೆದ ಪೈರವರು, ಸನ್, ೧೯೮೦ ರಲ್ಲಿ ಟಿಂಕಲ್ ಎಂಬ 'ವ್ಯಂಗ್ಯ ಚಿತ್ರಪುಸ್ತಕ'ವನ್ನು ಮಾರುಕಟ್ಟೆಗೆ ತಂದರು. ಇದು ಮಕ್ಕಳು ದೊಡ್ಡವರೆನ್ನದೆ, ಮನೆಮಂದಿಗೆಲ್ಲ ಪ್ರಿಯವಾದ ಪತ್ರಿಕೆಯಾಗಿ ಪ್ರತಿಯೊಬ್ಬರ ಮನೆಯ 'ದೀವಾನ್ ಖಾನೆಯ ಶೋಭೆ'ಯಾಗಿ ಪರಿಣಮಿಸಿತು. ಈ ಎರಡು ಪುಸ್ತಕ ಸರಣಿಗಳು ಭಾರತೀಯ ಇತಿಹಸದಲ್ಲಿ ಪ್ರಥಮಬಾರಿ ದಾಖಲೆಯನ್ನು ಸೃಷ್ಟಿಸಿದವು. ೨೦ ಭಾಷೆಗಳಲ್ಲಿ ಪ್ರಕಟವಾದ ೪೪೦ ಶೀರ್ಶಿಕೆಗಳನ್ನು ಹೊಂದಿದ ೮.೬ ಮಿಲಿಯನ್ ಪ್ರತಿಗಳನ್ನು ಕೊಂಡು ಓದುತ್ತಿರುವುದನ್ನು ಊಹಿಸುವುದು ಕಷ್ಟವಾಗಿದೆ.'ಟಿಂಕಲ್' ಪತ್ರಿಕೆಯಲ್ಲಿ, Letters to Uncle Pai, ಯೆಂಬ 'ಶಿರೋನಾಮ'ದಡಿಯಲ್ಲಿ ಮಕ್ಕಳ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನು ಹೇಳುವ ಪರಿ ಅನನ್ಯವಾಗಿತ್ತು, ಮತ್ತು ಅದು ಆ ಪತ್ರಿಕೆಯ ಜನಪ್ರಿಯತೆಗೆ ಸಾಕ್ಷಿ ಸಹಿತ.
'ಸಮೀರ್ ಪಟೇಲ್' ರ ಸ್ವಾಮಿತ್ವದಲ್ಲಿ 'ಅನಂತ ಪೈ'ರವರು, ಕಥೆಗಾರರಾಗಿ ಕೆಲಸಮಾಡುತ್ತಿದ್ದರು. ಈಗ 'ಅಮರಚಿತ್ರಕಥ' ಮತ್ತಿತರ ಕಥಾಚಿತ್ರದ ಬ್ರಾಂಡ್ ಸಂಗ್ರಹಗಳು, ಎ.ಸಿ.ಕೆ ಮೀಡಿಯಾದಲ್ಲಿ, 'ಡಿಜಿಟಲ್ ಅವತಾರ'ವನ್ನು ಪಡೆದಿವೆ. 'ರಾಮಾಯಣ', 'ಮಹಾಭಾರತ',ಮತ್ತು 'ಮದರ್ ತೆರೇಸ' ರಂತಹ ವ್ಯಕ್ತಿಸಂಗ್ರಹಗಳು ಲಭ್ಯ.
೮೧ ವರ್ಷದ ಹರೆಯದ,'ಅಂಕಲ್ ಪೈ'ರವರು, ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲೆ ಮೆಟ್ಟಿಲಿನಿಂದ ಕೆಳಗೆ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸನ್, ೨೦೧೧ ರ ಫೆಬ್ರವರಿ ತಿಂಗಳ, ೨೪ ರ ಗುರುವಾರ, ಸಾಯಂಕಾಲ ೫ ಗಂಟೆಗೆ, 'ಹೃದಯ ಸ್ತಂಭನ'ದಿಂದ ಮರಣಿಸಿದರು. ಮೃತರು, ಪ್ರೀತಿಯ ಪತ್ನಿ ಲಲಿತ, ಹಾಗೂ ಅಪಾರ ಬಂಧುವರ್ಗ ಮತ್ತು ಅವರ ಕಾಮಿಕ್ ಪುಸ್ತಕಗಳನ್ನು ಪ್ರತಿತಿಂಗಳೂ ಕಾದಿದ್ದು ಪ್ರೀತಿಯಿಂದ ಓದುವ, ವಿಶ್ವದ ಅಸಂಖ್ಯ ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
This article uses material from the Wikipedia ಕನ್ನಡ article ಅನಂತ ಪೈ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.