ಸಾರಾ ಜೋಸೆಫ್ (ಜನನ:೧೦ನೇ ಫೆಬ್ರವರಿ ೧೯೪೬) ಒಬ್ಬ ಭಾರತೀಯ ಕಾದಂಬರಿಗಾರ್ತಿ ಮತ್ತು ಸಣ್ಣ ಕಥೆಗಾರ್ತಿ.
ಇವರು ಮಲಯಾಳಂ ಭಾಷೆಯಲ್ಲಿ ಬರೆಯುತ್ತಾರೆ . ಅವರು ತಮ್ಮ ಆಲಾಹಾಯುಡೆ ಪೆನ್ಮಕ್ಕಲ್ (ಡಾಟರ್ಸ್ ಆಫ್ ಗಾಡ್ ದಿ ಫಾದರ್) ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ವಯಲಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಕೇರಳದ ಸ್ತ್ರೀವಾದಿ ಚಳವಳಿಯ ನಾಯಕಿ ಮತ್ತು ಮಾನುಷಿ ಎಂಬ ಕಾರ್ಯಕರ್ತ ಸಂಘಟನೆಯ ಸಂಸ್ಥಾಪಕರಾಗಿದ್ದಾರೆ. ಅವರು ೨೦೧೪ ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು ಮತ್ತು ೨೦೧೪ ರ ಸಂಸತ್ ಚುನಾವಣೆಯಲ್ಲಿ ತ್ರಿಶೂರ್ನಿಂದ ಸ್ಪರ್ಧಿಸಿದರು.
ಸಾರಾ ಜೋಸೆಫ್ ಅವರು ಸಂಪ್ರದಾಯವಾದಿ ಕ್ರಿಶ್ಚಿಯನ್ ಕುಟುಂಬದಲ್ಲಿ ೧೯೪೬ ರಲ್ಲಿ ತ್ರಿಶೂರ್ ನಗರದ ಕುರಿಯಾಚಿರಾದಲ್ಲಿ ಲೂಯಿಸ್ ಮತ್ತು ಕೊಚುಮರಿಯಂ ಎಂಬವರಿಗೆ ಜನಿಸಿದರು. ಅವರು ತಮ್ಮ ೧೫ ನೇ ವಯಸ್ಸಿನಲ್ಲಿ, ಒಂಭತ್ತನೇ ತರಗತಿಯಲ್ಲಿದ್ದಾಗ ವಿವಾಹವಾದರು. ಅವರು ಶಿಕ್ಷಕರ ತರಬೇತಿಯನ್ನು ಪಡೆದು, ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ಖಾಸಗಿ ಅಭ್ಯರ್ಥಿಯಾಗಿ ಮಲಯಾಳಂನಲ್ಲಿ ಬಿ.ಎ ಮತ್ತು ಎಂ.ಎ ಪಡೆದರು. ಅವರು ಕೇರಳ ರಾಜ್ಯದ ಕಾಲೇಜು ಶಿಕ್ಷಣ ಸೇವೆಗೆ ಸೇರಿ ಪಟ್ಟಾಂಬಿಯ ಸಂಸ್ಕೃತ ಕಾಲೇಜಿನಲ್ಲಿ ಮಲಯಾಳಂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅವರು ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಪ್ರಸ್ತುತ ತ್ರಿಶೂರ್ ಜಿಲ್ಲೆಯ ಮುಲಂಕುನ್ನತುಕಾವುನಲ್ಲಿ ವಾಸಿಸುತ್ತಿದ್ದಾರೆ. ಅವರ ಮಗಳು ಸಂಗೀತಾ ಶ್ರೀನಿವಾಸನ್ ಕೂಡ ಒಬ್ಬ ಲೇಖಕಿ.
ಸಾರಾ ಜೋಸೆಫ್ ಸಮಾಜ ಸೇವಾ ಕಾರ್ಯಕರ್ತೆ ಮತ್ತು ಸ್ತ್ರೀವಾದಿ ಚಳವಳಿಯ ನಾಯಕಿ. ಅವರು ೧೯೮೦ ರ ದಶಕದಲ್ಲಿ ಪಟ್ಟಾಂಬಿಯ ಸಂಸ್ಕೃತ ಕಾಲೇಜಿನಲ್ಲಿ ಮಾನುಷಿ ಎಂಬ ಮಹಿಳಾ ಸಂಘವನ್ನು ಸ್ಥಾಪಿಸಿದರು. ಈ ಕಾಲೇಜಿನಲ್ಲಿ ಅವರು ಮಲಯಾಳಂ ಮತ್ತು ಸಾಹಿತ್ಯವನ್ನು ಕಲಿಸಿದರು. ತಮ್ಮ ಸಂಘದೊಂದಿಗೆ ಸಮಾಜ ಘಾತುಕ ಚಟುವಟಿಕೆಗಳಾದ ಅತ್ಯಾಚಾರ, ವರದಕ್ಷಿಣೆ ಸಾವುಗಳು, ಕಳ್ಳಸಾಗಣೆ ಮತ್ತು ಲೈಂಗಿಕ ಗುಲಾಮಗಿರಿ ಸೇರಿದಂತೆ ಮಹಿಳೆಯರ ವಿರುದ್ಧದ ವ್ಯಾಪಕ ಅಪರಾಧಗಳಿಗೆ ಪ್ರತಿಕ್ರಿಯೆಯಾಗಿ ಅವರು ಹಲವಾರು ದಶಕಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದಾರೆ.
ಅವರು ಜನವರಿ ೨೦೧೪ ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು ಮತ್ತು ೨೦೧೪ ರ ಸಂಸತ್ ಚುನಾವಣೆಯಲ್ಲಿ ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಪಕ್ಷದಿಂದ ಕಣಕ್ಕಿಳಿದರು. ಆದರೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸಿ.ಎನ್. ಜಯದೇವನ್ ವಿರುದ್ಧ ಸೋತರು. .
ಸಾರಾರವರು ಪ್ರೌಢಶಾಲೆಯಲ್ಲಿದ್ದಾಗ ಅವರ ಸಾಹಿತ್ಯಿ ವೃತ್ತಿಜೀವನ ಪ್ರಾರಂಭವಾಯಿತು. ಅವರ ಹಲವು ಕವನಗಳು ಮಲಯಾಳಂ ವಾರಪತ್ರಿಕೆಗಳಲ್ಲಿ ಪ್ರಕಟಗೊಂಡವು. ಅವರು ಕವಿಗೋಷ್ಠಿಗಳಲ್ಲಿ ತಮ್ಮ ಕವಿತೆಗಳನ್ನು ವಾಚನ ಮಾಡುವಲ್ಲಿ ಉತ್ತಮವಾಗಿದ್ದರು. ಇದು ವೈಲೋಪ್ಪಿಲ್ಲಿ ಶ್ರೀಧರ ಮೆನನ್ ಮತ್ತು ಎಡಸ್ಸೆರಿ ಗೋವಿಂದನ್ ನಾಯರ್ ಅವರಂತಹ ಕವಿಗಳಿಂದ ಹೆಚ್ಚು ಮೆಚ್ಚುಗೆ ಪಡೆಯುವಂತೆ ಮಾಡಿತು.
ಅವರು ಆಲಹಾಯುಡೆ ಪೆನ್ಮಕ್ಕಲ್, ಮತ್ತತ್ತಿ, ಮತ್ತು ಒತ್ತಪ್ಪುಗಳನ್ನು ಒಳಗೊಂಡ ಕಾದಂಬರಿಗಳ ಟ್ರೈಲಾಜಿಯನ್ನು ಪ್ರಕಟಿಸಿದ್ದಾರೆ. ಒತ್ತಪ್ಪುವನ್ನು ವಲ್ಸನ್ ತಂಪು ಅವರು ಒತ್ತಪ್ಪು: ದಿ ಸೆಂಟ್ ಆಫ್ ದಿ ಅದರ್ ಸೈಡ್ ಎಂಬ ಶೀರ್ಷಿಕೆಯಡಿಯಲ್ಲಿ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಅವರ ಕಾದಂಬರಿ ಆಲಹಾಯುಡೆ ಪೆನ್ಮಕ್ಕಳು ಅವರಿಗೆ ಮೂರು ಪ್ರಮುಖ ಪ್ರಶಸ್ತಿಗಳನ್ನು ತಂದುಕೊಟ್ಟಿತು, ಅವೆಂದರೆ: ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ವಯಲಾರ್ ಪ್ರಶಸ್ತಿ . ಇದಕ್ಕೆ ಚೆರುಕಾಡ್ ಪ್ರಶಸ್ತಿಯೂ ಲಭಿಸಿದೆ.
ಅವರು ರಾಮಾಯಣ ಕಥಕಲ್ ಎಂಬ ರಾಮಾಯಣದ ಪುನರಾವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಈ ಕೃತಿಯ ಇಂಗ್ಲಿಷ್ ಅನುವಾದವನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಮುದ್ರಣಾಲಯ ಪ್ರಕಟಿಸಿದೆ.
೨೦೧೧ ರಲ್ಲಿ, ಅವರು ತಮ್ಮ ಪಾಪತರ ಎಂಬ ಸಣ್ಣ ಕಥೆಗಳ ಸಂಗ್ರಹಕ್ಕಾಗಿ ಮುತ್ತತು ವರ್ಕಿ ಪ್ರಶಸ್ತಿಯನ್ನು ಪಡೆದರು. ಅವರ ಸಣ್ಣ ಕಥೆಗಳ ಸಂಗ್ರಹ ಇಂಗ್ಲಿಷ್ಗೆ ಅನುವಾದಗೊಂಡು, ದಿ ಮ್ಯಾಸ್ಕುಲಿನ್ ಆಫ್ ವರ್ಜಿನ್ ೨೦೧೨ ರಲ್ಲಿ ಬಿಡುಗಡೆಯಾಯಿತು. ಈ ಬಿಡುಗಡೆಯಲ್ಲಿ ಅವರ ಕಥೆ ಪಾಪತರವೂ ಸೇರಿತ್ತು. ಇದು ಕೆ.ಸಚ್ಚಿದಾನಂದನ್ ಅವರು "ಪೆನ್ನೆಝುತ್ತು" ಎಂಬ ಪದವನ್ನು ರಚಿಸಲು ಕಾರಣವಾಗಿತ್ತು. ಇದನ್ನು ದಿ ಹಿಂದೂ "ಬರವಣಿಗೆಯು ಸ್ತ್ರೀವಾದಿ ಪರಿಕಲ್ಪನೆಯಾಗಿದೆ, ಇದರಲ್ಲಿ ಲೇಖಕರು ಸ್ತ್ರೀ ಗುರುತಿನ ರಚನೆಗಳನ್ನು ಬಳಸುತ್ತಾರೆ" ಎಂದು ವ್ಯಾಖ್ಯಾನಿಸಿದೆ.
ಅವರು ೨೦೧೧ ರಲ್ಲಿ ಅವರ ಊರು ಕಾವಲ್ ಕಾದಂಬರಿಗಾಗಿ ಮೊದಲ ಓ.ವಿ.ವಿಜಯನ್ ಸಾಹಿತ್ಯ ಪುರಸ್ಕಾರವನ್ನು ಪಡೆದಿದ್ದಾರೆ. ೨೦೧೨ ರಲ್ಲಿ ಅವರು ಪದ್ಮಪ್ರಭ ಸಾಹಿತ್ಯ ಪ್ರಶಸ್ತಿಯನ್ನು ಪಡೆದರು.
೧೦ ಅಕ್ಟೋಬರ್ ೨೦೧೫ ರಂದು, ಜೋಸೆಫ್ ಅವರು ತಮ್ಮ ೨೦೦೩ ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿ, ಬರಹಗಾರರ ಪ್ರತಿಭಟನೆಗೆ ಸೇರಿಕೊಂಡರು.
This article uses material from the Wikipedia ಕನ್ನಡ article ಸಾರಾ ಜೋಸೆಫ್ (ಲೇಖಕಿ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.